|| ಹರೇರಾಮ ||
ಬರೆಯಲೆಣಿಸಿದರೆ ಬರವು ಒಳಗಿದ್ದ ಭಾವಗಳು..
ಬರಹದಲೆಂದೂ ಪೂರ್ಣತೆ ಬಾರದು ಮನದಿಂಗಿತಕೆ…
ಬರೆಯುವವನ ಭಾವವೊಂದು…
ಓದುಗನ ಭಾವವಿನ್ನೊಂದು….
ಈ ಎರಡೂ ಭಾವಗಳ ಮಿಲನವಾದಲ್ಲಿ ಬರಹಕೊಂದು ಅರ್ಥ…
ಬಯಸುವೆನು ನಾ ನಿಮ್ಮೊಳಗಿಳಿಯಲು ಅಕ್ಷರರೂಪದಿ…
ತೆರೆದುಕೊಳ್ಳಿ ನಿಮ್ಮಂತರಂಗವನು ತುಸುವೇ..
ಕರೆದುಕೊಳ್ಳಿರೀ ನಿಮ್ಮವನ ನಾ ನಿಮ್ಮೆಡೆಗೆ ಬರುವೆ..
ಗುರುವಿನ ಸಂಪರ್ಕ ಬೇಕೆಂದಾಗ ಸಿಗದು..!
ಅದೇ ಗುರುವೇ ಬಯಸಿದರೆ…?
ಬೇಡವೆಂದರೂ ತಪ್ಪದು..!
ಹುಟ್ಟಿದಂದಿನಿಂದ ಸುಮಾರು ಇಪ್ಪತ್ತೇಳು ವರ್ಷಗಳ ಕಾಲ ಮಠದ ಸಂಪರ್ಕವಿಲ್ಲದೇ ಬೆಳೆದವನು ನಾನು..!
ಹಾಗಂತ ಮಠವನ್ನು ದೂರುವವನಾಗಿರಲಿಲ್ಲ..
ಅಪ್ಪ ಮೊದಲಿನಿಂದಲೂ ಗುರುವಿನ ಸಂಪರ್ಕವಿದ್ದವರು..
ಮುಕ್ತರಾಗುವ ಮೊದಲು ದೊಡ್ಡ ಗುರುಗಳು ತೀರ್ಥಹಳ್ಳಿಯಲ್ಲಿ ಮೊಕ್ಕಾಂ ಮಾಡಿದ್ದಾಗ ಅಪ್ಪನ ಜೊತೆ ಮೀಟಿಂಗಿಗೆ ಹೋಗಿದ್ದೆ..
ಅದೇ ಮೊದಲು ನಮ್ಮ ಗುರುಗಳನ್ನು ಪ್ರತ್ಯಕ್ಷ ನೋಡಿದ್ದು…!
ಎದುರು ನಿಲ್ಲಲೂ ಹೆದರಿಕೆ…
ಇವ ಯಾರು?..ಕೇಳಿದ ನೆನಪು ನಂಗೆ..
ಹೀಗೆ ಪ್ರಾರಂಭವಾಯಿತು ಗುರುಮಠದ ಪರಿಚಯ..!
ಪರಿಚಯವಾದದ್ದು ದೊಡ್ಡ ಗುರುಗಳ ಗಂಭೀರ ಮೊಗ..
ಅಲ್ಲಿಯೂ ಮಠ ಎಂದರೆ ಒಂದು ರೀತಿಯ ಹೆದರಿಕೆ..!
ಸಂಪ್ರದಾಯಗಳಾವುದೂ ಗೊತ್ತಿಲ್ಲ…
ಆದರೂ ಸೆಳೆತ ಶುರುವಾದದ್ದು ಮಾತ್ರ ಸತ್ಯವೇ…!
ದೇವರಲ್ಲಿ ಎಷ್ಟೇ ನಂಬಿಕೆಯಿದ್ದರೂ ನಮಗೆ ಏನೋ ಕೊರತೆ ಇದ್ದೇ ಇರುತ್ತದೆ…!
ಏಕೆಂದರೆ ಆ ದೇವರನ್ನು ಪ್ರತ್ಯಕ್ಷ ನೋಡಲು ಸಾಧ್ಯವಿಲ್ಲವಲ್ಲ…!
ನೆನೆದರೆ ಕೂಡಲೇ ಎದುರಿಗೆ ಬರಬೇಕು ದೇವರು, ಹಾಗಿದ್ದರೆ ಮಾತ್ರ ನಾವು ತೃಪ್ತರು..!
ಹಾಗಾದರೆ ಕಾಣದ ದೇವರ ಬಳಿಗೆ ತಲುಪಲು ಒಂದು ಮಾರ್ಗ ಬೇಕು..
ಯಾವುದದು…?
ಯೋಚಿಸಿದಾಗ ಕಾಣುವುದು ಕಣ್ಣೆದುರಿಗೆ “ಗುರುವೊಬ್ಬನೇ“..
ಹೌದು ಅವನೊಬ್ಬನೇ ಮಾರ್ಗದರ್ಶಕ…
ದಿನೇ ದಿನೇ ಮನಸ್ಸಿನಲ್ಲಿ ಈ ವಿಷಯ ಗಟ್ಟಿಯಾಗತೊಡಗಿತು..
ಯಾವುದಾದರೂ ಧರ್ಮಸಂಕಟಕ್ಕೊಳಗಾದರೆ, ಇದೋ ಪರಿಹಾರ ಇಲ್ಲಿದೆ ಎನ್ನುವ ಸಮಾಧಾನ ಮನಸ್ಸಿಗೆ ನಿಲುಕಲಾರಂಭಿಸಿತು..!
ಗುರು ಎಂಬ ಶಬ್ದ ಮಹಿಮೆಯೆ ಹಾಗೆಯೇನೋ…
‘ನಂಬಿಕೆ’ ಎನ್ನುವುದಕ್ಕೊಂದು ಪರ್ಯಾಯ ಪದವೆಂದರೆ… ಅದು ’ಗುರು’ವೇ….!!
‘ಗುರುತತ್ವವನು ಪಡೆದವನಿಗೆ ಬೇರಾವ ತತ್ವವೂ ಬೇಡವೇನೋ..’!
ದೊಡ್ದ ಗುರುಗಳು ಬ್ರಹ್ಮಲೀನರಾದ ನಂತರ ಎಂದು ನಮ್ಮ ಈಗಿನ ಸಂಸ್ಥಾನದ ಪೀಠಾರೋಹಣವಾಯಿತೋ,
ಮಠ ಎಲ್ಲರನ್ನೂ ಸೆಳೆಯಲಾರಂಭಿಸಿತು…
ಮಠದ ಕಾರ್ಯಗಳಲ್ಲಿ ಸಕ್ರಿಯರಾದವರಲ್ಲಿ ನಾನೂ ಒಬ್ಬನಾದೆ..!
೨೦೦೧ರಲ್ಲಿ ಪ್ರಥಮ ಬಾರಿಗೆ ಗುರುವಿನ ಆಗಮನ ನಮ್ಮ ಮನೆಗಾಯಿತು..
ಸಂಭ್ರಮದ ಕಾರ್ಯಕ್ರಮವಾಯಿತು..ಮನಸು ಗುರುವನ್ನು ಬಯಸಲಾರಂಭಿಸಿತು..!
ಗುರುವಿನ ಗುರುತ್ವಾಕರ್ಷಣೆ ಬಲವಾಗತೊಡಗಿತ್ತು…
ಚಾತುರ್ಮಾಸ್ಯದ ಸಮಯದಲ್ಲಿ ಮಠಕ್ಕೆ ಹೋಗುತ್ತಿದ್ದೆ..
೮-೧೦ ದಿನವಿದ್ದು ಸೇವೆ ಸಲ್ಲಿಸಿ ಮನೆಗೆ ಬರುತ್ತಿದ್ದೆ..
ಅಲ್ಲಿದ್ದ ಸಮಯದ ಆನಂದ ಹಿಂದಕ್ಕೆ ಬಂದ ಮೇಲೆ ಹುಡುಕಾಡಬೇಕಾಗಿತ್ತು..
ಏನೋ ತಳಮಳ, ಏನೋ ಕಳೆದುಕೊಂಡ ಭಾವ ಉಕ್ಕುತ್ತಿತ್ತು ಮನದಲ್ಲಿ..
ಪುನಃ ೨೦೦೪ ರಲ್ಲಿ ನನ್ನೊಡೆಯನ ಆಗಮನ ನಮ್ಮ ಮನೆಗೆ..!!
ಈ ಬಾರಿ ಬಯಸಿತ್ತು ಗುರುವನ್ನು ನನ್ನ ಮನ..ಸಂಪೂರ್ಣ ಶರಣಾಗಿತ್ತು..
ಗುರುವಿನ ಸ್ವಾಗತದಲ್ಲೇ ತೊಡಗಿಸಿಕೊಂಡೆ..
ಅಂತರಂಗಕ್ಕೆ ಅಂತರಂಗವೇ ಶಬ್ಧರೂಪದಲ್ಲಿ ಹೊರಬಂದಿತು..
“ಬಂದೆಯಾ ಓ ತಂದೇ“…
ತುಂಬಿದ ಹೃದಯ ಹೊರಹರಿದು ಕರೆದಿದ್ದು ಹೀಗೆ ಗುರುವನ್ನು..
ಯಾರು ನುಡಿಸಿದರು ಹೀಗೆ ? ಹೇಗೆ ಹೊರಬಂತು..?
ಊಹುಂ, ಗೊತ್ತಿಲ್ಲ..
ಆದರೆ, ಅಂದಿನ ಆ ಕ್ಷಣದ ಕರುಣಾದೃಷ್ಟಿ ಇಂದಿಗೂ ಮರೆಯಲಾರೆ..
ಅಂದಿನ ಮೊಕ್ಕಾಮನ್ನೂ ಮರೆಯಲಾರೆ..
ಮಗನಾಗಿ ಸ್ವೀಕರಿಸಿದರು..ನನ್ನಂತರಂಗದ ಬೇಗುದಿಯನ್ನು ಕೇಳಿದರು..
ನನಗರಿಯದಲೆ ನನ್ನೊಳಗಿಳಿದರು….!
ಬಂಧುಗಳೇ,ನಮ್ಮ ಗುರುವೇ ಹಾಗೆ…!
ಒಂದು ಬಾರಿ ನಮ್ಮೊಳಗಿಳಿದರೆ ಗುರು ಮತ್ತೆಂದೂ ಹೊರಬರುವುದೇ ಇಲ್ಲ..!
ಯಾರ ಸಮಸ್ಯೆಗಳನ್ನು ಕೇಳುವಾಗಲೂ ಆತುರವಿಲ್ಲ..ಬೇಸರವಿಲ್ಲ..
ಏನೋ ತಪ್ಪು ಮಾಡಿ ನಮ್ಮ ಹತ್ತಿರ ಬಂದಿದ್ದೀಯೆ ಎಂದು ಯಾರಿಗೂ ಹೇಳುತ್ತಿರಲಿಲ್ಲ..!
ನೀನು ಇದನ್ನ ಮಾಡಬಾರದು, ಹೀಗೇ ಮಾಡಬೇಕು ಎನ್ನುವ ಒತ್ತಾಯವನ್ನೂ ಮಾಡುತ್ತಿರಲಿಲ್ಲ..
ಇದು ನಮ್ಮ ಆಜ್ಞೆ ಎಂಬಂತೆ ಎಂದೂ ಭಾರ ಹೇರುತ್ತಿರಲಿಲ್ಲ..!
ಬದಲಾಗಿ , ಆ ಸಮಸ್ಯೆ ನಮ್ಮನ್ನು ಹೇಗೆ ಸುತ್ತಿಕೊಂಡಿದೆ, ಅದರಿಂದ ಹೊರಬರುವ ಪರಿಯೆಂತು..ಇದೆಲ್ಲಾ ನಮಗೇ ಅರ್ಥವಾಗಬೇಕು, ನಾನು ಮಾಡಿದ್ದು ತಪ್ಪು, ಆದ್ದರಿಂದ ಸರಿಯಾಗಬೇಕಾದುದು ನಾನೇ ಎಂಬ ಭಾವ ನಮ್ಮಲ್ಲಿ ಮೂಡಬೇಕು ಹಾಗೆ ಸಮಸ್ಯೆಗಳನ್ನು ಬಿಚ್ಚಿಡುತ್ತಿದ್ದರು..!
ಆದ್ದರಿಂದಲೇ ಇರಬೇಕು; ನನ್ನ ಗುರುವಿನ ಬಳಿಸಾರಿದವರೆಂದೂ ಹಿಂದಿರುಗಲಾರರು..!
ಕಾಲ ಕಳೆಯಿತು..ಮಠ ಸೆಳೆಯಿತು…
೨೦೦೬ ರ ರಾಮಸತ್ರದ ಸಮಯದಲ್ಲಿ ಹೊಸನಗರಕ್ಕೆ ಬಂದವನನ್ನು ನನ್ನ ದೇವರು ತಿರುಗಿ ಕಳುಹಿಸಲಿಲ್ಲ.!
ಭಾನ್ಕುಳಿ ಮಠದಲ್ಲಿ ಶ್ರೀಸವಾರಿ ಪರಿವಾರದಲ್ಲಿ ಒಬ್ಬನಾಗಿಹೋದೆ…!
ಅಂದು ಮೇ ೨-೨೦೦೬..
ವೈಶಾಖ ಶುದ್ಧ ಪಂಚಮಿ, ಮಂಗಳವಾರ..ವ್ಯಯ ನಾಮ ಸಂವತ್ಸರ..
ನಿಮಗೆ ಗೊತ್ತೇ..ಗುರು ಪರಿವಾರವನ್ನು ನೋಡಿಕೊಳ್ಳುವ ರೀತಿ..?
ತಿಳಿದುಕೊಳ್ಳಿ ಗೊತ್ತಿರದಿದ್ದರೆ….
‘ಮರಿಯಾನೆಯನ್ನು ಗುಂಪಿನ ನಡುವೆಯಿಟ್ಟುಕೊಂಡು ರಕ್ಷಿಸುವ ಗಜರಾಜನಂತೆ’ ..
ಪರಿವಾರದೊಳಗಿಟ್ಟು, ‘ನಿನಗೇನು ಕಷ್ಟ ಬಂದರೂ ನಾವಿದ್ದೇವೆ’ ಎಂಬ ಮಾತುಗಳು ನಮ್ಮನ್ನು ಗಟ್ಟಿಯಾಗಿಸುತ್ತವೆ..!
ಪರಿವಾರವನ್ನು ಇಷ್ಟೆಲ್ಲಾ ಪ್ರೀತಿಸುವ ಒಬ್ಬ ಗುರು ಇನ್ನೆಲ್ಲಿ ಸಿಕ್ಕಿಯಾನು…?
ನಮಗೆ ಏನೇ ಸಂಕಟ ಕಾಲಗಳು ಬಂದರೂ ಆ ಗುರುಸಾನ್ನಿಧ್ಯ ನಮಗಿದ್ದರೆ ಸಾಕು…
ಓ ನನ್ನ ಬಂಧುಗಳೇ….
ಗುರುವಿನ ಕರುಣೆಯಿರುವುದೇ ಇಲ್ಲಿ..
ಒಬ್ಬನನ್ನು ಉದ್ಧರಿಸಬೇಕಾದರೆ, ಪ್ರಾರಂಭದಲ್ಲಿ ಎಚ್ಚರಿಕೆ ರೂಪದಲ್ಲಿ ಪ್ರಕಟವಾಗುತ್ತಾನೆ..
ನಂತರ ಮಾತುಗಳ ಮೂಲಕ ಮಲಗಿದ್ದ-ದಾರಿತಪ್ಪಿದ್ದ ಮನವನ್ನು ಎಬ್ಬಿಸಲು ಪ್ರಯತ್ನಿಸುತ್ತಾನೆ..
ಕೊನೆಯ ಹಂತವಾಗಿ ತನ್ನ ಬಳಿಗೇ ಕರೆಸಿಕೊಳ್ಳುತ್ತಾನೆ..!
ಇದರರ್ಥ, ಇನ್ನು ಹೊರಗೆ ರಕ್ಷಣೆ ಸಾಧ್ಯವೇ ಇಲ್ಲ ಎಂಬುದೇ…!!
ಇಷ್ಟು ಸಾಲದೆ ನಮ್ಮಂಥ ಪಾಮರರಿಗೆ..?
ಇನ್ನೊಂದೆರಡು ವಿಷಯಗಳನ್ನೂ ಹೇಳಬೇಕೆನ್ನಿಸುತ್ತಿದೆ ನನಗೆ..
ಬೆಂಗಳೂರಿನಲ್ಲಿ ಮುಕ್ಕಾಂ ಇದ್ದ ಸಮಯದಲ್ಲಿ ಪ್ರತಿದಿನವೂ ಪುಟ್ಟ ಹೆಜ್ಜೆಗಳನ್ನಿಡುತ್ತಾ ಶಬ್ಧವಾಗದಂತೆ ಬಂದು ದೇವರಿಗೆ ನಮಸ್ಕರಿಸಿ ಹೋಗುವ ಒಂದು ಮಗುವಿನ ರೂಪವನ್ನು ಕಾಣುತ್ತಿದ್ದೆ..
ಮುಂದೆ ಅದೇ ಮಗುವಿನ ರೂಪ ನನ್ನ ಪಾಲಿಗೆ ತಂಗಿಯಾಗಿ ದೊರಕಿತು..!
ಜೀವಿಗಳಿಗೆ ಸಾಂತ್ವನ ಹೇಳಲೆಂದೇ ಕೆಲವು ಜೀವವನ್ನು ಸೃಷ್ಟಿಸಿರುತ್ತಾನೇನೋ ದೇವರು..!
ಮುದುಡಿದ ಮನಸ್ಸಿಗೆ ವೈದ್ಯೆಯಾದಳು..
ತಂಗಿಯಾಗಿ ಪ್ರೀತಿಯುಣಿಸಿದಳು…
ತಾಯಿಯಾಗಿ ವಾತ್ಸಲ್ಯದಿಂದ ಆರೈಕೆ ಮಾಡಿದಳು…
ದೇವತೆಯಾಗಿ ನನ್ನನ್ನು ಪ್ರತಿಕ್ಷಣವೂ ಕಾಯ್ದಳು..
ಎಲ್ಲಕ್ಕಿಂತ ಮಿಗಿಲಾಗಿ..
ಗುರುವಾಗಿ ಎಲ್ಲಿಯೂ ನನಗರಿವಾಗದಂತೆ ನನ್ನನ್ನು ಮೃದುವಾಗಿ ತಿದ್ದಿದಳು…!!
ಬದುಕೇ ಹಾಗೆ..
ಗುರು ಯಾರಿಗೆ ಯಾವಾಗ ಎಲ್ಲಿ ಹೇಗೆ ಯಾರಿಂದ ತಿಳುವಳಿಕೆ ಮೂಡಿಸುತ್ತಾನೋ ಗೊತ್ತಾಗುವುದಿಲ್ಲ..
ಗುರುಸಂಕಲ್ಪವೇನಿರುತ್ತದೋ ಗೊತ್ತಿಲ್ಲ..
ತಾನು ಹೇಳಬೇಕಾದ ಮತ್ತಷ್ಟು ವಿಷಯಗಳನ್ನು ಇನ್ನಾರ ಮುಖಾಂತರವೋ ಹೇಳಿಸಿರುತ್ತಾನೆ..!
ಏಕೆಂದರೆ, ಗುರುವಿನಲ್ಲಿ ನನ್ನನ್ನು ಹೇಗೆ ತೆರೆದುಕೊಳ್ಳುತ್ತಿದ್ದೆನೋ..ಹಾಗೇ ಇಲ್ಲಿಯೂ ಕೂಡ..!
ಅಲ್ಲೇನು ಸಾಂತ್ವನ ಸಿಗುತ್ತಿತ್ತೋ, ಅದೇ ಇಲ್ಲೂ ಸಹ…!
ಒಟ್ಟಾರೆ ನನ್ನೊಡೆಯನನ್ನು ನಾನು ತಿಳಿದುಕೊಂಡದ್ದು ಹೀಗೆ..
ಅವನು ಸರ್ವಾಂತರ್ಯಾಮಿ..
ನಾವು ಶುದ್ಧ ಮನಸಿನಿಂದ ಬೇಡಿದ್ದನ್ನು ಕ್ಷಣಮಾತ್ರದಲ್ಲಿ ಕೊಡಬಲ್ಲ..
ಅದಕ್ಕೆ ನಾನೇ ಸಾಕ್ಷಿ..
ಇಂದಿಗೂ…ನನ್ನ ಪಾಲಿಗೆ ಗುರುದೇವನ ನಂತರದಲ್ಲಿ ಅಪ್ಪ-ಅಮ್ಮನ ಜೊತೆಯಲ್ಲಿ ಪುಟ್ಟದೇವತೆಯಾಗಿ ಮೆರೆಯುತ್ತಿರುವವಳು ಪುಟ್ಟ ತಂಗಿ..
ಅದಕ್ಕೇ ಹೇಳುವುದು “ಗುರುವನ್ನು ನಂಬಿ, ಮತ್ತೆ ಹರನೂ ಬೇಡವಾಗುತ್ತದೆ..!
ಯಾಕೇಂದ್ರೆ ಎಲ್ಲವೂ ಅವನೇ…!!!
ಇನ್ನು ಗುರುವಿನ ಪರಿವಾರ..
ಅವರಲ್ಲಿ ನಾನೂ ಒಬ್ಬನಾದೆ…
ಅಂತರಂಗದ ಸೇವೆ ಸಲ್ಲಿಸುವ ಭಾಗ್ಯವೂ ದೊರೆಯಿತು..!
ಈಗಲೂ ನನಗನ್ನಿಸುವುದು ನನ್ನ ಬದುಕಿನ ರಕ್ಷಣೆಗಾಗಿಯೇ ಹೀಗೆ ಅಂತರಂಗದ ಸೇವೆಯಲ್ಲಿ ತೋಡಗಿಸಿದರೆನೋ ಎಂಬುದಾಗಿ..
ಪರಿವಾರದಲ್ಲಿ ನಾನು ಕಲಿತಿದ್ದು ಬಹಳ..
ಒಳಗಿನ ಸೇವೆಗೆ ಬರುವ ಮೊದಲು ಅಲ್ಲಿದ್ದಿದ್ದು ನನ್ನ ಪ್ರೀತಿಯ ‘ಮಧ್ಯಸ್ಥ’…
ನಿಜ ಹೇಳಲೇ..? ಇಂದಿಗೂ ಅವನನ್ನು ಕಂಡರೆ ಹೆದರಿಕೆ ನನಗೆ..
ಆ ಹೆದರಿಕೆಯಲ್ಲಿ ಭಯವಿಲ್ಲ ಪ್ರೀತಿಯಿದೆ…!
ಅವನೆಂದೂ ಈ ಕೆಲಸ ಹೀಗೇ ಮಾಡು, ಹೀಗೇ ಇರಬೇಕು, ಊಹುಂ ಯಾವ ಮಾತುಗಳನ್ನೂ ಹೇಳಲಿಲ್ಲ..!
ಅವನ ಕಾರ್ಯತತ್ಪರತೆಯೇ ನನಗೆಲ್ಲವನ್ನೂ ಕಲಿಸಿತು..!
ಯಾವುದನ್ನೂ ಹೇಳದೆಯೇ ಎಲ್ಲವನ್ನೂ ಕಲಿಸಿದ..
ನಾನು ಕಲಿತಿದ್ದನ್ನು ಮೌನವಾಗಿಯೇ ತಿದ್ದಿದ..
ನಾನು ಅವನೊಡನೆ ಜಗಳ ಆಡಿದ್ದು ನೆನಪಿಲ್ಲ..ಸಿಟ್ಟು ಮಾಡಿದ್ದೇನೆ,ಮಾತು ಬಿಟ್ಟು ಕೂತಿದ್ದುಂಟು..!
ಎಲ್ಲವೂ ಪ್ರೀತಿಯಿಂದಲೇ..
ಇಂದು ನಾನು ಪರಿವಾರದಲ್ಲಿ ಈ ಸ್ಥಿತಿಯಲ್ಲಿರಲು ಕಾರಣ ಅವನೇ…!
ಇದು ಗುರುಪ್ರಸಾದವೇ ಅಲ್ಲವೇ…!!
ಇನ್ನು ಹಿರಿಯರಾದ ಸ್ವಾಮಿಯಣ್ಣ, ರಮೇಶಣ್ಣ, ಅನಂತಣ್ಣ,..
ನಲ್ಮೆಯ ಹೆಗ್ಗಾರಳ್ಳಿ..
ಕಿರಿಯರಾದ ಮಂಜುನಾಥ ಹೆಬ್ಬಾರ, ಪ್ರೀತಿಯ ವಿಗ್ಗು..(ಗುರುದರ್ಶನದ ಕೊಂಡಿ)..
ರಜನೀಶ…ಹೀಗೆ ಪ್ರತಿಯೊಬ್ಬರೂ ನನ್ನ ಪಾಲಿಗೆ ಪಾಠ ಕಲಿಸಿದ ಗುರುಗಳೇ..
ಇವರೆಲ್ಲರ ನಡುವೆ..ನನ್ನ ಅತ್ಯಂತ ಪ್ರೀತಿಯ ‘ಮಡಿ ರಾಘು’..
ಯಾಕೋ ಕೆಲವರನ್ನು ನೋಡಿದರೆ ಆತ್ಮೀಯತೆ ಜಾಸ್ತಿ..
ಅಷ್ಟೇ ಅಲ್ಲ ಯಾವುದೋ ಬಂಧ…
ಈ ರಾಘು ಅದೇಕೋ ತುಂಬಾ ತುಂಬಾ ತುಂಬಾ ಹತ್ತಿರದವನು ನನಗೆ..
ಎಲ್ಲವೂ ಗುರುಮಹಿಮೆ..!
ಎಲ್ಲವೂ ಗುರುವಿನಿಂದಲೇ..ಎಲ್ಲವೂ ಅವನೇ..!
ಸಂಕಟದಲ್ಲಿ ಮುಳುಗಿದ್ದವರನ್ನು ಮೇಲಕ್ಕೆತ್ತಿ, ‘ಮಗನೇ, ನೋಡು ಇಲ್ಲಿದೆ ನೀನು ಕಲಿಯಬೇಕಾದ ವಿಷಯಗಳು ಬಾ’
ಎಂದು ದಾರಿ ತೋರುವ ಆ ನನ್ನ ತಂದೆಗೆ ಎಷ್ಟು ಸಲ್ಲಿಸಿದರೂ ಮುಗಿಯದು ನನ್ನ ಸೇವೆ..!
ಈಗ ಹೇಳಿ..
ಹರ ಮುನಿದರೂ ಗುರು ಕಾಯ್ವನೆಂಬುದು ಬರಿದೇ ಗಾದೆಯ ಮಾತೇ..?
ಗಾದೆಯೆಂಬುದು ಎಂದೂ ಸುಳ್ಳಲ್ಲ..
ಒಬ್ಬ ವ್ಯಕ್ತಿ ತನ್ನ ಬದುಕಿನ ಆಸೆಯನ್ನು ತಾನೇ ಕೈಬಿಟ್ಟು ಕಬ್ಬಿಣದ ಪಂಜರದಲ್ಲಿ ಕೊನೆಯ ಕ್ಷಣಗಳನ್ನು ಎಣಿಸುತ್ತಿರುವಾಗ..
ತಾನೇ ಬಂದು ಆ ಜೀವವನ್ನು ರಕ್ಷಿಸುವವನು ಗುರುವಲ್ಲದೇ ಮತ್ತಾರು..?
ಇನ್ನೊಂದು ಸ್ವಲ್ಪ ಬರೆಯಲೇ ..?
ಓ ನನ್ನವರೇ…
ಗುರುವನ್ನೆಂದಿಗೂ ನಿಷ್ಕರುಣಿಯಾಗಿ ನೋಡಬೇಡಿ…
ಗುರುವನ್ನೆಂದಿಗೂ ಬಯಕೆಗಳಿಂದ ನೋಡಬೇಡಿ…
ಗುರುವನ್ನೆಂದಿಗೂ ಆಸೆಯಿಂದ ನೋಡಬೇಡಿ..
ಗುರುವನ್ನೆಂದಿಗೂ ಕ್ರೂರ ದೃಷ್ಟಿಯಿಂದ ನೋಡಬೇಡಿ…
ಗುರುವನ್ನೆಂದಿಗೂ ದ್ವೇಷಭಾವದಿಂದ ನೋಡಬೇಡಿ…
ನೋಡಬೇಕೆಂದಿದ್ದರೆ….
ಓ ನನ್ನ ಬಂಧುಗಳೇ…
ಗುರುವನ್ನೊಮ್ಮೆ ಅಂತರಂಗದಿಂದ ನೋಡಿ …
ಸಾಕು…ಮತ್ತೇನೂ ಮಾಡಬೇಡಿ..
ನಿಮ್ಮ ಜನ್ಮ ಸಾರ್ಥಕ..
ಆಮೇಲೆ ಅವನೇ ನಿಮ್ಮನ್ನು ನೋಡುತ್ತಾನೆ..!
ಮನದಾಳದಲ್ಲಿ ಒಂದು ಪುಟ್ಟ ಜಾಗದಲ್ಲಿ ಹುದುಗುತ್ತಾನೆ..
ಮುಗಿಯಿತು ಮತ್ತೆಂದೂ ಅವನು ಹೊರಬರನು…
ನಿಮ್ಮ ಆಗು-ಹೋಗುಗಳಿಗೆಲ್ಲಾ ಮಾರ್ಗದರ್ಶಕನಾಗುತ್ತಾನೆ..!
ನಾವೇನಾದರೂ ದೇವರನ್ನು ಕರೆದರೆ..
ನೆನಪಿಡಿ ಎಂದೆಂದೂ….
ನಮ್ಮ ಕರೆಗೆ ಓಗೊಡುವ ಮೊದಲ ಸ್ವರವೇ ನಮ್ಮ ಗುರುವಿನದು…!!
ಬನ್ನಿರೆಲ್ಲ..
ನಾವೆಲ್ಲರೂ ನಮ್ಮೆಲ್ಲರ ಜಗವನೇ ಪಸರಿಸಿರುವ..
ಕರುಣಾಂತರಂಗದ ಈ ಬೆಳದಿಂಗಳ ಜಾಲದಲ್ಲಿ ಸಿಲುಕಿಕೊಳ್ಳೋಣವೇ…?
ಅದರ ಫಲವನ್ನನುಭವಿಸೋಣವೇ…?
ಒಂದು ಮಾತು ..
ಕಷ್ಟ ಕಳೆದು ನೆಮ್ಮದಿ ಸಿಕ್ಕಿದಾಗ ಭಕ್ತರ ಮೊಗವರಳಿದಾಗ..
ಅದರ ಪ್ರತಿರೂಪ ಕಾಣುವುದು ನನ್ನ ಗುರುವಿನ ಮೊಗದಲ್ಲಿ…!!
ಈ ಅನುಭವವನ್ನು ಯಾರಾದರೂ ಪಡೆದಿದ್ದರೆ ಅವರೇ ಧನ್ಯರು…
ನಾನಂತೂ ಚೂರು-ಪಾರು…!
ಇಷ್ಟು ಸಾಕೇನೋ…?
ಬರಹವೆಂದಿಗೂ ಮುಗಿಯದು..
ಅಂತರಂಗವೆಂದಿಗೂ ಪೂರ್ಣ ಹೊರಹರಿಯದು..
ಎಷ್ಟು ಸಾಧ್ಯವೋ ಅಷ್ಟೇ ಹೊರಬರುವುದು…
ಉಳಿದಿದ್ದೆಲ್ಲವೂ ಪ್ರಾರಂಭದಲ್ಲೇ ಹೇಳಿದಂತೆ…
ಮೌನಗೌರಿ ನನ್ನ ತಂಗಿ ಹೇಳಿದ ಮಾತುಗಳ ನೆನಪು..
‘ನಮ್ಮ ಮನಸ್ಸಿನ ಭಾವನೆಗಳನ್ನು ಒಂದು ಹಂತದವರೆಗೆ ಮಾತ್ರ ಹೊರಹಾಕಬಹುದು..
ಉಳಿದಂತೆ ಭಾವವೇ ಹೇಳಬೇಕಾದುದನ್ನ ಹೇಳುತ್ತೆ..
ಅದನ್ನು ಅರ್ಥ ಮಾಡಿಕೊಳ್ಳಬೇಕು..
ಹಾಗೆಯೇ ಆಗುವುದು ಅದು…’
ಧನ್ಯ ನಾನು, ಓ ವಾತ್ಸಲ್ಯಮಯೀ, ಈ ಮಾತು ನೀ ಹೇಳಿದಾಗಿನಿಂದಲೇ ನನ್ನೊಳಗಿದ್ದ ಇದೆಲ್ಲಾ ಭಾವಗಳು ಹೊರಬರಲು ತವಕಿಸಿದ್ದು…!
ಗುರುವಿನಂತರಂಗವೇನೋ ಬಲ್ಲವರಾರು….?
ಎಲ್ಲವೂ ಅವನೇ…!
ಯಾಕೋ ಅಪೂರ್ಣವಾದಂತೆನಿಸುತ್ತಿದೆ..
ಮೊಗೆದಷ್ಟೂ ಮುಗಿಯದ ಕಣಜ ಗುರುವೆಂದರೆ…
ಬರೆದಷ್ಟೂ ನಿಲುಕದ ವಿಸ್ತಾರ ಗುರುವೆಂದರೆ…
ಕರುಣೆಯ ಮೂರ್ತರೂಪ ಗುರುವೆಂದರೆ…
ಭಗವಂತನ ಸಾಕ್ಷಾತ್ಕಾರವೇ ಗುರುವೆಂದರೆ..
ಇನ್ನು ಮುಗಿಸಲೇ..
ತಡವಾಯಿತು ನಿಮಗೆ ಹೋಗಿಬನ್ನಿ….
ಆದರೆ ನೆನಪಿರಲಿ ನಿಮಗೆ…
ಗುರು ಶಾಶ್ವತ…
ಗುರುವೆಂದಿಗೂ ಶಾಶ್ವತ…
ಅಲ್ಲ…ಗುರುವೇ ಎಂದಿಗೂ ಶಾಶ್ವತ…
|| ಹರೇರಾಮ ||
ಶ್ರೀಹರ್ಷ ಜೋಯ್ಸ್ ರ ಕುಟುಂಬದ ಶ್ರೀಮಠದೊಂದಿಗಿನ ಮಧುರ ನೆನಪುಗಳು.
ಪರಿಚಯ:
ಕೃಷಿಕ ಶ್ರೀ ರಾಮಮೂರ್ತಿ ಜೋಯ್ಸ್ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರನಾಗಿ 06-11-1967ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಕೊಂಡಿಬೈಲಿನಲ್ಲಿ ಜನಿಸಿದರು. ಶ್ರೀಯುತರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉತ್ತಮೇಶ್ವರದಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕೊಪ್ಪದಲ್ಲಿ ಪಡೆದಿರುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀಶ್ರೀಗಳ ಶ್ರೀಪರಿವಾರದಲ್ಲಿ ಸೇವೆಸಲ್ಲಿಸುತ್ತಿದ್ದು ಶ್ರೀಗುರು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರು ಆಶೀರ್ವಾದ ಸದಾ ಇರಲೆಂದು ಹಾರೈಕೆ.
November 30, 2010 at 3:08 PM
ಹರೇರಾಮ್,
ಗುರು ವೆ೦ದರೆ ಗುರುತರವಾದ-ವಸ್ತು–ವ್ಯಕ್ತಿ–ಶಕ್ತಿ–ಅವ್ಯಕ್ತಿ
ಗುರು ವೆ೦ದರ ಗುರುತರವಾದ-ಗುರುತ್ವ-ಆಕರ್ಷಣೆ-ವಿಚಲಿತಗೊಳಲಾಗದ ಗುರಿ
ಗುರು ವೆ೦ದರೆ ವರ್ಣಿಸಲಾಗದ ಅನುಬವಿಸುವ-ಅನುಬವಿಸುತ್ತಾಇರುವ ಅನುಬವ-ಅನುಬಾವ
ಗುರುವನ್ನು ಗುರುತಿಸಿ ನಮಗೆಲ್ಲಾತಿಳಿಸಿ ಹರ್ಷ ಗೊಳಿಸಿದೆಯ ಣ್ಣ
ಗುರುಬ್ಯೋನಮಃ
December 1, 2010 at 9:48 PM
ಅವರವರ ಮನಸ್ಸಿನೊಳಗೆ “ಗುರು” ತತ್ವ ಸೇರಿದರೆ ಉಳಿದವರಲ್ಲೂ ಅವರು ಗುರುವನ್ನೇ ಕಾಣುತ್ತಾರೆ..
ಇಷ್ಟಕ್ಕೂ ಗುರುವನ್ನು ಗುರುತಿಸಲು ನಮ್ಮಿಂದ ಸುಲಭವೇ..?
November 30, 2010 at 3:46 PM
ಹರ್ಷಣ್ಣ, ತುಂಬಾ ಭಾವಪೊರ್ಣ ಬರಹ. ಮನಸ್ಸಿಗೆ ಖುಷಿಯಾಯ್ತು. ಆ ಗುರುವಿನ ಸೇವೆಯ ಭಾಗ್ಯ ಸಿಕ್ಕಿರುವ ನೀವೇ ಧನ್ಯರು.
December 1, 2010 at 9:37 PM
ನೀವೆಲ್ಲರೂ ಹೂವುಗಳಾದರೆ…..
ನಾನೊಂದು ನಾರು…..!
November 30, 2010 at 11:14 PM
“…ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ…”
ಗ್ರಂಥಸ್ತವಾದನ್ನು… ಆದುವುದು ಸುಲಭ. ( ಥಿಯಟಿಕಲ್)
ಮನನ ಮಾಡಿ,ಅರ್ಥೈಸಿ ,ಪ್ರಾಮಣಿಕವಾಗಿ ಸೇವಿಸುವ .. (ಪ್ರಾಕ್ಟಿಕಲ್)
ಅನುಭವಿಸುವ ನೀವೆಲ್ಲರೂ ಧನ್ಯರು…ಪೂರ್ವ ಪುಣ್ಯ ಸಂಪನ್ನರು,
ಧನ್ಯ ಶ್ರೀ ಗುರು ಪರಿವಾರ ಹರ್ಷಣ್ಣ……ಓದಿ ಹರ್ಷವಾಯಿತಣ್ಣ.
December 1, 2010 at 9:36 PM
ನೀವೂ ನಾವೂ ಎಲ್ಲರೂ ಗುರುಪರಿವಾರವೇ ಗೋಪಾಲಣ್ಣಾ…
ಪಾಲು ಮಾಡದಿರಿ ನಿಮ್ಮಿಂದ ನಮ್ಮನು….!
December 1, 2010 at 6:55 AM
ನಾನು ನಾನು ನಾನು ಎ೦ಬ ಮ೦ತ್ರ, ಅದಕ್ಕಾಗಿ ಮಾಡುವ ತ೦ತ್ರಗಳಿ೦ದ ಪ್ರಯೋಜನವೇನು.
ಅನ೦ತನನ್ನು ಅರಸಿ ಹೊರಟ ನಡಿಗೆ, ಗುರು ತೋರಿದನು ಒ೦ದು ದೀಪವ, ಇರಿಸೆ೦ದನು ಹೆಜ್ಜೆಯ, ದೂರದಲ್ಲಿ ಕಾಣುತ್ತಿದ್ದ ದೀಪ ಹತ್ತಿರವಾಯಿತು, ನೋಡಿದರೆ ನಾ ನಿ೦ತೆ ಇದ್ದೇನೆ ನಾ ಎ೦ದು ನಡೆದದ್ದಿಲ್ಲ, ನೋಡಿದರೆ ನನ್ನೊಳಗೇ ದೀಪವಿದೆ, ಗುರುವೆ೦ಬ ದೀಪದ ಬೆಳಕಲ್ಲಿ, ನನ್ನೊಳ ಪ್ರಕಾಶಮಯ ದೀಪದ ದ್ವೀಪ ದರ್ಶನ.. ಸ೦ಸಾರವೆ೦ಬ ಸಣ್ಣ ಸಾಗರವ ದಾಟುತ್ತಿರುವಾಗ ನಿಷ್ಕ್ರಿಯನಾಗಿ ಕೂರುವ ಬದಲು, ಗುರುಅ೦ಬಿಗ ತೋರಿಸುತ್ತಿರುವ ದೇದಿಪ್ಯಮಾನವಾಗಿ ಕಾಣುತ್ತಿರುವ ಕಾರ್ತಿಕ ದೀಪಗಳ ದ್ವೀಪವ ಸವಿಯುತ್ತ ಸಾಗುವ, ಸಾಗರ ದಾಟುವ, ದ್ವೀಪದ ತುತ್ತತುದಿಯಲ್ಲಿ ನಿಲ್ಲುವ, ದೀಪವಾಗುವ..
.
.
ಶ್ರೀ ಗುರುಭ್ಯೋ ನಮಃ
December 1, 2010 at 6:56 AM
“ಜಗದಗಲ ಮುಗಿಲಗಲ..” – ವಚನ
ಶರಣು ಶರಣೈ ಶರಣರಿಗೆ,
ಹಲವು ಹುಟ್ಟುಗಳ ದಾಟಿ
ಹಲವು ಗುಟ್ಟುಗಳ ದಾಟಿ
ಹಲವು ಜನ್ಮಗಳ ದಾಟಿ
ಹಲವು ಸಾವುಗಳ ದಾಟಿ
ಹಲವು ನೋಟ ಆಟ ಓಟ ಮಾಟಗಳ ದಾಟಿ ಹೋದಾಗ ಸಿಗುವುದೇನು ಶಾ೦ತಿ ಚಿರಶಾ೦ತಿ, ಅದರಿ೦ದ ಜಗದಗಲಕ್ಕೂ ಮುಗಿಲಗಲಕ್ಕೂ ಕಾ೦ತಿ…
ಭಾರತ ಸೂರ್ಯಕಾ೦ತಿ ದೇಶ, ಮುಗಿಲು ತು೦ಬಿಕೊ೦ಡಾಗ, ನಾವು ಹೀರಿದ ಸೂರ್ಯಕಾ೦ತಿಯಿ೦ದ ಮುಗಿಲನ್ನು ಕರಗಿಸಿ ನೀರಾಗಿಸಬೇಕು??
.
ಶ್ರೀ ಗುರುಭ್ಯೋ ನಮಃ
December 1, 2010 at 3:06 PM
Hare Raama
Sammuka Baredaddu Harshanna anta kandagale…manassu aralittu. HARE RAAMA Harshanna….pratikriyisalu shabdagale tochuttilla.. astu adbhutavagi barediddiri… danyanade oodi nimma e barahavanna.
December 1, 2010 at 9:57 PM
ಮನದಾಳದ ಮಾತಿಗೆ ಶಬ್ಧಗಳು ಬೇಡ ..
ಭಾವವೇ ಸಾಕು..
ಧನ್ಯ ನಾ…
December 1, 2010 at 3:21 PM
ಹಿತವಾದ ಹರ್ಷೋದ್ಗಾರ!
December 1, 2010 at 9:59 PM
“ಗುರು” ಕಾರಣವೀ “ಹರ್ಷ”ನುದ್ಗಾರಕೆ…!
December 1, 2010 at 6:23 PM
Hare Raama,Harsha,
adeshtu kavyamayavada bareha. Antharalada bhavagalannodi kannalli bhavabindugalu kalethu nadiyagi hariyitu. Guruvannendigu nishkaruneyagi nodabedi…hagu Guruvannomme antharangadinda nodi…ee sandeshada vakyagalannu ella kade baresi hakabeku.Harsha,ninondu maguvinanthe ninna prithi nishkalmasha vyakthitva nanage tumba ishta.Ninu kotta title hage bhavavannu ellarallu beresi kudisibittiruve.Namma GURU ASHIRVADA sada ninagirali.
December 1, 2010 at 9:31 PM
ಗೀತಕ್ಕಾ….
ಎಲ್ಲವೂ ಅವನೇ …
ಅವನದೇ ಎಲ್ಲವೂ…
ಅಂತರಂಗದೊಳಿದ್ದು ಬರೆಸಿದವನವನೇ…!
ಓದಿ ನನ್ನನ್ನು ಒಳಕರಕೊಂಡವನೂ ಅವನೇ…!!
ನಿಮ್ಮಗಳ ರೂಪದಲ್ಲಿ….
ನಿಜ ತಾನೇ…?
December 1, 2010 at 9:53 PM
ಪ್ರೇಮಕ್ಕಾ…
ನೀನಿದನ್ನು ಓದಿದ್ದೂ ಅಂತರಂಗದಿಂದಲೇ ಅಲ್ಲವೇ…
ನಾ ಓದಿದ್ದೂ ನಿನ್ನ ಭಾವಗಳನಲ್ಲಿಂದಲೇ..!
ಧನ್ಯ ಪ್ರೇಮಕ್ಕಾ..
December 1, 2010 at 10:38 PM
‘ಶ್ರೀ’ಹರ್ಷದನಾವರಣ…
December 1, 2010 at 10:59 PM
ಮಧುರ ನುಡಿ…!
December 2, 2010 at 9:33 AM
ಹರೇ ರಾಮ
ಮನದ೦ಗಳದಲ್ಲಿ ನೆಟ್ಟ ಪುಟ್ಟ್ಸ ಸಸಿ ಚಿಗುರೊಡೆದು ಮೊಗ್ಗಾಗಿ ಮಮತೆಯ ಮ೦ಜಿನಲ್ಲಿ ನೆನೆದು
ಬಿರಿದು ಹೂವಾಗಿ ಬ೦ದ೦ತಿದೆ ಇ-ಬರಹ
December 4, 2010 at 6:56 AM
ಸತ್ಯ ನಂದಜಕ್ಕಾ…
December 3, 2010 at 7:00 AM
Like shifting of gears, different gears are there in this article. Different experiences, thoughts, views, messages, others are there.
.
Shri Gurubhyo Namaha
December 3, 2010 at 7:04 AM
ಶ್ರೀ ಶ್ರೀಹರ್ಷ.. ಶ್ರೀ-ಹರ್ಷ,
ಗುರುಗಳು ತಮ್ಮ ಲೇಖನಿ… ಚಿತ್ರಗುಪ್ತ.. ಎ೦ದೆಲ್ಲ ಹೇಳಿದ್ದಾರೆ ಶ್ರೀಹರ್ಷರ ಬಗ್ಗೆ.. ಧನ್ಯ..
ಗುರುಗಳಿ೦ದ ಮೊದಲು ಸ್ಪುರಿಸುವ ಭಾವಗಳನ್ನು ಕಣ್ಣಾರೆ ಕಾಣುವ ನೀವು ಧನ್ಯ..
.
ನಿಮ್ಮ ಲೇಖನ ಮುಗಿದ ಹಾಗೆ ಕಾಣುತ್ತಿಲ್ಲ, ದಯವಿಟ್ಟು ಮು೦ದುವರಿಸಿ, ಭಾಗ-ಎರಡು ಬರೆಯರಿ..
.
ಶ್ರೀ ಗುರುಭ್ಯೋ ನಮಃ
December 3, 2010 at 10:52 PM
ಗುರುಚಿತ್ತದಲಿ ತನ್ನ ಶಿಷ್ಯರ ಬಗೆಗಿರುವ ಪ್ರೀತಿ-ವಾತ್ಸಲ್ಯ ಅಂಥದು..
ಅದಕ್ಕೇ ಅದು ಎಂದೂ ಮುರಿಯದ ಬಂಧ….!
December 3, 2010 at 9:10 AM
ಹರ್ಷಣ್ಣ,ನಿಜಕ್ಕೂ ಭಾವಾರ್ಥಪೂರ್ಣ ಸಮ್ಮುಖ.
‘ಶ್ರೀ’ ಸಾನಿಧ್ಯದ ‘ಹರ್ಷ’ ಅಂತರಂಗದ ನಿಧಿ.
ಅಡೆ ತಡೆಗಳಿಲ್ಲದಿದ್ದರೆ ಭಾವದ ಹರಿವು ನಿರಂತರವಲ್ಲವೇ, ಏಕೆಂದರೆ ಮೂಲವೆಂದೂ ಬತ್ತದು!!
‘ಶ್ರೀಮುಖ’ ದಿಂದುಯಿಸುವ ನಿರ್ವಾಜ್ಯ ವಾತ್ಸಲ್ಯ, ಸಮ್ಮುಖದಲ್ಲಿ ಅದ್ಭುತವಾಗಿ ಅನಾವರಣಗೊಂಡಿದೆ.
December 3, 2010 at 10:58 PM
ಮೂಲ ಹೇಗೆ ಬತ್ತುವುದು ಅಶ್ವಿನೀ…
ಅಡೆತಡೆಗಳನ್ನು ಮೀರಿದ ಶಕ್ತಿಯಲ್ಲವೇ ನಮ್ಮನ್ನು ನಡೆಸುತ್ತಿರುವುದು..!
ಆ ಮಹಾಸಾಗರದಲ್ಲಿ ನಮ್ಮನ್ನೂ ಸೇರಿಸಿಕೊಂಡರೆ ಬದುಕು ಸಾರ್ಥಕ ಅಲ್ವಾ..?
December 4, 2010 at 12:10 PM
ನಿತ್ಯ ಸತ್ಯ ನುಡಿ !!
December 3, 2010 at 3:43 PM
ಹರ್ಷಣ್ಣ.., ಎಂತಾ ಚೆಂದ ಬರೆದಿದ್ದೀರಿ..!!! ನಿಮ್ಮ ಬರಹದಲ್ಲಿ ನಿಮ್ಮ ಭಾವಗಳು ನಮ್ಮೊಳಗೇ ಬೆರೆತವು.
ಧನ್ಯರು ನೀವು ಮತ್ತೆ ಪರಿವಾರದ ಅಣ್ಣಂದಿರು. ಗುರು ಸೇವೆಯನ್ನು ಕಾರ್ಯ ರೂಪದಲ್ಲಿ ಮಾಡುತ್ತಿರುವವರು.
ನಿಮ್ಮ ಗುರು ಸೇವೆಯನ್ನು ನೋಡಿ ನಾವು ಧನ್ಯರಾಗುತ್ತೇವೆ.
ನಿಜ ಹರ್ಷಣ್ಣ, ಗುರುವಿನ ಗುರುತ್ವಾಕರ್ಷಣೆ ಬಲವಾಗಿ ನಾವು ಕೂಡಾ ಗುರುವಿನ ಸುತ್ತ ಸುತ್ತುತ್ತಿರುವಂತೆ ಭಾಸವಾಗುತ್ತಾ ಇದೆ.
ಗುರುಗಳ ಬಗೆಗೆ ಇರುವ ನಿಮ್ಮ ಅಭಿಮಾನ, ಶ್ರದ್ಧೆಯನ್ನು ಮನಕ್ಕೆ ಇಳಿಯುವಂತೆ ಬರೆದಿದ್ದೀರಿ. ನಮ್ಮೆಲ್ಲರಿಂದ ಹೆಚ್ಚು ಸಂಸ್ಥಾನವನ್ನು ಬಲ್ಲವರಲ್ಲವೇ ನೀವು?
ರಾಘವೇಂದ್ರ ನಾರಾಯಣರು ಹೇಳಿದ ಹಾಗೆ ಸಂಸ್ಥಾನ ನಿಮ್ಮನ್ನೇ ಲೇಖನಿಯಾನ್ನಾಗಿಸಿದ್ದಾರೆ. ಸೌಭಾಗ್ಯವಲ್ಲವೇ ಅದು?
ಗುರುಗಳ ಬಗೆಗೆ ಎಲ್ಲರಿಗೂ ಇರಬೇಕಾದ ಶ್ರದ್ಧೆಯನ್ನು ನಿಮ್ಮ ಪ್ರೀತಿಯ ಮಾತುಗಳಲ್ಲಿ ಹೇಳಿ ಎಚ್ಚರಿಸಿದ್ದೀರಿ. ಧನ್ಯವಾದಗಳು ಹರ್ಷಣ್ಣ.
ಸತ್ಯ ಹೌದಲ್ಲವೇ ಭಕ್ತರ ಕಷ್ಟ ಗುರು ಅನುಗ್ರಹದಿಂದ ಕಳೆದಾಗ, ಮರೆಯಾದಾಗ ಆ ಮಾತೃಹೃದಯಿ ಎಷ್ಟು ಸಂತಸ ಪಡಬಹುದಲ್ಲವೇ!!!
ಆ ದೇವರ ನಗುವನ್ನು, ಸಂತೋಷವನ್ನು ಕಾಣುವ ಭಾಗ್ಯ ಎಲ್ಲ ಭಕ್ತರಿಗೂ ಸಿಕ್ಕಲಿ..
ಎಲ್ಲರ ಕಷ್ಟಗಳು ದೂರವಾಗಿ ಗುರು ಸೇವೆಯಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗಲಿ ..
ಹರ್ಷಣ್ಣ, ನಿಮಗೆ ಗುರುಗಳೊಂದಿಗೆ ಇದ್ದುಗೊಂಡು ಗುರು ಸೇವೆ ಮಾಡುವ ಭಾಗ್ಯ ಇನ್ನಷ್ಟು ದೊರೆಯಲಿ..
ನಿಮ್ಮ ಸೇವೆಯ ಪರಿಯನ್ನು ನೋಡಿ ಧನ್ಯರಾಗುವ ಭಾಗ್ಯ ನಮಗಿರಲಿ..
ಇನ್ನೂ ಬರಲಿ ನಿಮ್ಮ ಭಾವಗಳು ನಿಮ್ಮೊಳಗಿಂದ.. ನಾವೂ ಆ ಭಾವ ಗಂಗೆಯಲ್ಲಿ ಮುಳುಗೇಳುತ್ತೇವೆ…
ಧನ್ಯವಾದ ನಿಮಗೆ ನಿಮ್ಮ ಭಾವ ಲಹರಿಯನ್ನು ನಮ್ಮೆಡೆಗೆ ಹರಿಸಿದ್ದಕ್ಕೆ..
ಹರೇರಾಮ.
December 4, 2010 at 6:58 AM
ಗುರುಸೇವೆ ಮಾಡುವಾಗ ಧನ್ಯತಾ ಭಾವ ತುಂಬಿಕೊಂಡರೆ ಸಾಕು..
ಮತ್ತೆಂದೂ ಸೇವಾಭಾವ ಮರೆಯಾಗದು ಮನಸ್ಸಿನಿಂದ…
December 3, 2010 at 3:57 PM
ಹರೆ ರಾಮ ಪ್ರಿಯ ಗುರು ಬ೦ಧು ಹರ್ಷ…
ಮನಸ್ವೀ ಬರೆದಿರುವೆ… ಮನ ಮುಟ್ಟಿದೆ..
ಅಭಿನ೦ದನೆಗಳು.
ಮೋಹನ ಭಾಸ್ಕರ ಹೆಗಡೆ.
December 3, 2010 at 11:01 PM
ಮೋಹನಣ್ಣಾ… ನಿನ್ನಂಥ ಹಿರಿಯರ ಆಶೀರ್ವಾದ…..
December 3, 2010 at 4:12 PM
wonderful presentation and writing harshanna….
December 3, 2010 at 11:03 PM
ನಿಜವಾಗಲೂ ಹೌದಾ ವೇಣೂ…?
December 5, 2010 at 7:45 PM
Harsha
Oodi manasu thumbiddu maathu bathille
sharadakka
December 6, 2010 at 7:35 AM
ಮಾತೃ ಹೃದಯವಲ್ಲವೇ ಅದು….ಅದಕ್ಕೇ…
December 5, 2010 at 9:55 PM
ಹರೇರಾಮ,
ಹರ್ಷಣ್ಣಾ , ನಿಮ್ಮ ಬರವಣಿಗೆ ಓದಿದಾಗ “ಗುರುಮಾತೃಪಿತಾ ಗುರುಬಂಧುಸಖಾ ತೆರೆಚರಣೋಮೆ ಮೇರೆ ಕೋಟಿಪ್ರಣಾಮ್…………” ಈ ಸಾಲುಗಳು ನೆನಪಾಯಿತು. “ಗುರು” ಶಬ್ಧದ ವಿರಾಟರೂಪದ ದರ್ಶನವಾದಂತಾಯಿತು.
ಧನ್ಯವಾದಗಳು.
December 6, 2010 at 7:48 AM
ನಿಜ…ಎಲ್ಲವೂ ಅವನೇ…
ನಾವು ರಾಮನಿಗೆ ಗುರುವಿನ ಮೂಲಕ ಪ್ರಾರ್ಥನೆ, ಹರಕೆ ಮಾಡಿಕೊಳ್ಳುತ್ತೇವೆ ಅಲ್ಲವೇ..?
ಅಲ್ಲಿ ನಮಗೆ ರಾಮದೇವರು ಕಾಣುವುದು ಗುರುವಿನಲ್ಲಿ…!
ದ್ವಾರ ಅವನೇ ಅಲ್ಲವೇ ರಾಮನನ್ನು ತಲುಪಲು…?
ಅದಕ್ಕೇ ಗುರುವನ್ನು ನಂಬಿದರೆ ದೇವರೂ ನೆನಪಾಗಲಾರ…!
ಏಕೆಂದರೆ….
ಗುರುವೇ ದೇವರು…..ಈ ನಂಬಿಕೆಯಿದ್ದರೆ ಸಾಕು…
December 6, 2010 at 12:05 PM
ಹರ್ಷನ ಹರ್ಷದ ಆಪ್ತ ಅಭಿವ್ಯಕ್ತಿ…
December 8, 2010 at 12:51 PM
॥ಹರೇ ರಾಮ॥
ಈ ಲೇಖನವನ್ನು ಓದಿದ ಮೇಲೆ , ಈ ಗುರುವನ್ನು ನೋಡಿದ ನಾನಷ್ಟು ಧನ್ಯ ಅನಿಸ್ತು. ಜೀವನದ ಪ್ರತಿ ಗಳಿಗೆಯಲ್ಲೂ ಆ ತಂದೆಯ ಬಳಿ ನಿಂತು ಅವರ ಸೇವೆ ಮಾಡುವ ನೀನದೆಷ್ಟು ಧನ್ಯ ಹರ್ಷಣ್ಣ……….
ಅಂತರಂಗದಲ್ಲಿ ಗುರುವನ್ನು ಮನದುಂಬಿ ನೆನೆದು ಈ ಲೇಖನವನ್ನು ಒದಿದವರೆಲ್ಲರೂ ಧನ್ಯರೇ……………………
॥ವಂದೇ ಗೋ ಮಾತರಂ॥
December 8, 2010 at 9:04 PM
ಮನದಲಿ ಮೂಡಿದರೆ ಧನ್ಯತಾಭಾವ…
ಮರೆಯಾಗದು ಎಂದಿಗೂ ಸೇವಾಮನೋಭಾವ..!
December 8, 2010 at 3:21 PM
Guruvina kaarunya aritavarigallave adara bele tiliyalu saadhya….baraha super…no words to say harshanna…..!!!!!!
December 8, 2010 at 9:06 PM
ಗುರುವಿಚ್ಚೆಯಿಂ ನಡೆಯುವುದೆಲ್ಲವೂ….!
December 9, 2010 at 7:40 PM
ಹರೇರಾಮ
ಬಲ್ಲವರೇ ಬಲ್ಲರು ಬೆಲ್ಲದ ಸವಿಯ ಎನ್ನುವಂತೆ, ಗುರು ಸೇವೆಯನ್ನ,ಮತ್ತು ಗುರುವಿನ ಬಾವ ಪೂರ್ಣ ಆದರ್ಶತೆಯನ್ನ ಹರ್ಷಚಿತ್ತದಿಂದ ಬಿತ್ತರಿಸಿರುವುದು ಉಳಿದವರಿಗೂ ಸನ್ಮಂಗಲವನ್ನುಂಟು ಮಾಡಲಿ ಹಾಗೂ ಹರ್ಷನ ಕುಟುಂಬವು ಸದಾ ಕಾಲ ರಾಮಾನುಗ್ರಹ,ಗುರುವಿನ ರಕ್ಷೆಯಿಂದ ಕೂಡಿರಲಿ.ನೆಮ್ಮದಿಯ ಜೀವನ ನಿರಂತರ ಸಾಗುವಂತೆ ಕರುಣಿಸಲಿ. ನಿನ್ನ ಪ್ರೀತಿಯ ರಾಘು……….
December 9, 2010 at 10:30 PM
ರಂಜನೀಯ ರಾಘೂ….!!
ಗುರುವಿನೊಡನಿದ್ದರೆ ಸಕಲರಿಗೂ ಮಂಗಳವೇ…!
ಓ ರಾಘವಾ..
December 10, 2010 at 8:27 PM
hareraama
ಹರ್ಷನ ಹರ್ಷ ಚರಿತ್ರೆ…
ಹರ್ಷವದನಾ………….. ಸದಾ ಹ್ರದಯವಂತನಾಗಿರುವಂತೆ ಕಾಲವೂ ಅನುಕೂಲವಾಗಿರಲಿ ಎಂದು ಹಾರೈಸುವೆ….
December 11, 2010 at 2:00 PM
ಅಭಾವ – ನಿರ್ಭಾವ ಜಗತ್ತಿನಲ್ಲಿ ಮಧುರ – ಸುಮಧುರ ಭಾವನೆಗಳ ಸಂಗಮ…..ಅಭಾವ – ನಿರ್ಭಾವ ಜಗತ್ತಿನಲ್ಲಿ ಮಧುರ – ಸುಮಧುರ ಭಾವನೆಗಳ ಸಂಗಮ…..
December 11, 2010 at 4:14 PM
ಜಗತ್ತಿನಲ್ಲೆಂದೂ ಅಭಾವ-ನಿರ್ಭಾವಗಳಿರುವುದಿಲ್ಲ ಗೆಳೆಯಾ…
ಎಲ್ಲವೂ ನಮ್ಮೊಳಗೇ….!!
September 2, 2012 at 11:36 AM
Harshanna,
Anavaratha Shri Guru sanidha dalliruva neene DHANYA; Tumbu manassininda seve sallisuttiruva parivarave DHANYA!!!
||Hare Raama||
September 3, 2012 at 9:23 PM
Tumba hrudayasparshi anubhava…..
January 23, 2014 at 10:42 AM
ಭಾವಪೂರ್ಣ ಬರಹ!! ಸಂಪೂರ್ಣ ಶರಣಾಗತಿ ಭಾವ….ಗುರು ಕರುಣಾಸಾಗರದಲ್ಲಿ ಮಿಂದ ಸಂತೃಪ್ತ ಭಾವ ನಿಮ್ಮ ಅಭಿವ್ಯಕ್ತಿಯಲ್ಲಿ ..!!! ನಿಮ್ಮ ಭಾವಗಳನ್ನು ಓದುತ್ತಿದ್ದಂತೆ ನಮ್ಮಲ್ಲಿನ್ನೂ ನಿಮ್ಮಂತೆ ಸಂಪೂರ್ಣ ಶರಣಾಗತಿ ಭಾವ ಬಂದಿಲ್ಲವೇನೋ ಎಂಬ ತಳಮಳ … ಹೃದಯ ತುಂಬಿ ಬಂತು. ಗುರುವಿನ ಸೇವೆಯ ಭಾಗ್ಯ ಸಿಕ್ಕಿರುವ ನಿಮ್ಮೊಂದಿಗೆ ನಾವೂ ಧನ್ಯರು ಹರ್ಷಣ್ಣ !!!