ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್, ಶ್ರೀಸಂಸ್ಥಾನಗೋಕರ್ಣ - ಶ್ರೀರಾಮಚಂದ್ರಾಪುರಮಠ
ಅನಂತ ಕಾಲದಿಂದ ಬೆಳಕಿನ ರಾಶಿಯೇ ಆದ ಸೂರ್ಯನ ಸುತ್ತ ಸುತ್ತುತ್ತಿರುವ, ಭೂಮಂಡಲ, ಗ್ರಹಮಂಡಲ..
ಸಾವನ್ನೂ ಲೆಕ್ಕಿಸದೆ, ದೀಪವನ್ನು ಕಂಡೊಡನೆ ಧಾವಿಸುವ ಪತಂಗ..
ನೆರಳಿನಲ್ಲಿ ನೆಟ್ಟರೂ, ಬೆಳಕಿನೆಡೆ, ಬಿಸಿಲಿನೆಡೆ ಬಾಗುವ – ಸಾಗುವ ಗಿಡಬಳ್ಳಿಗಳು..
ಕಾಡಿನಲ್ಲಿ ರಾತ್ರಿ ಬೇಟೆಗಾರನ ಹಣೆಯ (Torch)ವಿದ್ಯುದ್ದೀಪಕ್ಕೆ ಕಣ್ಣು ಕೊಡುವ ಮೃಗಗಳು…
ಬೆಳಗಿನ ಹೊತ್ತು ಬೆಳಕು ಬಿಸಿಲುಗಳು ತನ್ನ ಮೇಲೆ ಬಿದ್ದೊಡನೆ, ತಾನಾಗಿ ತೆರೆದುಕೊಳ್ಳುವ ಕಣ್ಣುಗಳು..
ಸೂರ್ಯನ ಮುಖನೋಡಿದೊಡನೆ ಅರಳುವ ಕಮಲ..
ಪೂರ್ವದಿಂದ ಪಶ್ಚಿಮದವರೆಗೆ ನೇಸರ ಸಾಗಿದಂತೆಯೇ ಆ ಕಡೆಯೇ ಮುಖ ತಿರುಗಿಸುವ, ಅನವರತ ಸೂರ್ಯನನ್ನು ದಿಟ್ಟಿಸುತ್ತಲೇ ಇರುವ ಸೂರ್ಯಕಾಂತಿ..
ಜೀವಲೋಕಕ್ಕೆ ಅದೇಕೆ ಈ ಬಗೆಯ ಬೆಳಕಿನ ಸೆಳೆತ..!?
ಏಕೆಂದರೆ..
ಈ ಜಗದ ಮೂಲ – ಬೆಳಕು.
ಪ್ರತಿಯೊಂದು ಜೀವದ ಮೂಲವೇ ಬೆಳಕು.
ಜೀವಿ ತನ್ನನ್ನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸಲಾರ.
ತಾನು ಎಂದರೆ ಬೆಳಕೇ ತಾನೇ . .!
ಒಳಗೆಲ್ಲೋ ಕಳೆದು ಹೋದ ನಾನೆಂಬ ಬೆಳಕನ್ನು ಜೀವಲೋಕ ಹೊರಗೆ ಹುಡುಕುವ ಪರಿ ಇದು!!
ಹೊರಜಗದಲ್ಲಿ ಕಾಣ ಸಿಗುವ ಬೆಳಕುಗಳೆಲ್ಲ ನಮ್ಮೊಳಗೆ ಸ್ವತಃ ಬೆಳಗುವ ’ನಾನೆಂ’ಬ ಬೆಳಕಿನ ಪ್ರತಿಬಿಂಬಗಳು..
ಮರೆತು ಹೋದ – ಮರೆಯಾದ ಆತ್ಮ ಜ್ಯೋತಿಯನ್ನು ನೆನಪಿಸಲು ಎಲ್ಲೆಲ್ಲೂ ಭಗವಂತನಿಟ್ಟ ಸ್ಮಾರಿಕೆಗಳು..!
ಬೆಳಕಿನ ಮೇಲಣ ಪ್ರೀತಿಯೇ ಭಾ-ರತಿ. (ಭಾ – ಬೆಳಕು, ರತಿ- ಅದರಲ್ಲಿ ಆಸಕ್ತಿ, ಆನಂದ)
ಬೆಳಕನ್ನು ಪ್ರೀತಿಸುವವರು ಭಾ-ರತರು.
ಅಂತವರ ನಾಡು ಭಾರತ!
ಉತ್ತಿಷ್ಠತ | ಮಾ ಸ್ವಪ್ತ ||
ಅಗ್ನಿಮಿಚ್ಛಧ್ವಂ ಭಾರತಾಃ ||
(ಭಾರತರೇ! ಎದ್ದೇಳಿ! ನಿದ್ರಿಸಬೇಡಿ!
ನಿಮ್ಮೊಳಗೆ ಸದಾ ಬೆಳಗುವ ಅಗ್ನಿಯನ್ನು ಗುರುತಿಸಿ ಬಯಸಿ - ಋಷಿ ವಾಣಿ)
ಭಾರತೀಯರು ’ಭಾರತ’ರಾದರೆ…
ವಿಶ್ವವೇ ಭಾರತವಾದೀತು!!
ಭಾರತೀಯರು ಬೆಳಕನ್ನು ಮರೆತರೆ…?
ಭಾರತ… ಭೀ-ರತವಾದೀತು! (ಭೀ ಅಂದರೆ ಭಯ ಎಂದರ್ಥ)
ನಿತ್ಯ ದೀಪೋತ್ಸವದ ಈ ಕಾರ್ತಿಕ ಮಾಸ ಬೆಳಕನ್ನು ಪ್ರೀತಿಸಲು ಆರಂಬಿಸುವುದಕ್ಕೆ ಶುಭ ಸಮಯವಲ್ಲವೇ…?
|| ತಮಸೋಮಾ ಜ್ಯೋತಿರ್ಗಮಯ ||
Pingback: ಹರಸುವವರ ಹಾರೈಕೆಯ ‘ಹರೇ ರಾಮ’ ….! « Oppanna : ಒಪ್ಪಣ್ಣನ ಒಪ್ಪಂಗೊ