ಒಂದಾನೊಂದು ಊರಿನಲ್ಲಿ ಧನಪಾಲ ಮತ್ತು ದಾನಶೀಲ ಎಂಬ ಶ್ರೀಮಂತರಿದ್ದರು..
ಇಬ್ಬರದೂ ಒಂದೇ ಊರಾದರೂ ಸ್ವಭಾವದಲ್ಲಿ ಆಕಾಶ ಭೂಮಿಗಳ ಅಂತರವಿದ್ದಿತು..
ಹೆಸರಿಗೆ ತಕ್ಕಂತೆ ಹಣಕೂಡಿಡುವುದರಲ್ಲಿ ಧನಪಾಲ ಸುಖಕಂಡರೆ, ದಾನಶೀಲನಿಗೆ ಹಂಚಿ ತಿನ್ನುವುದರಲ್ಲಿ ಪರಮಾನಂದ..!
ಹೊಟ್ಟೆ – ಬಟ್ಟೆ ಕಟ್ಟಿ, ಹೆಂಡತಿ ಮಕ್ಕಳನ್ನು ಉಪವಾಸ ಕೆಡವಿ ಧನಪಾಲ ಹಣ ಕೂಡಿಸುತ್ತಿದ್ದ.
ಹಾಗೆ ಕೂಡಿಸಿದ ಹಣವನ್ನು ಆಗಾಗ ಚಿನ್ನದರೂಪದಲ್ಲಿ ಪರಿವರ್ತಿಸಿ ಊರ ಹೊರಗಿನ ಕಾಡಿನಲ್ಲಿ ಮರವೊಂದರ ಬುಡದಲ್ಲಿ ಹೂತಿಡುತ್ತಿದ್ದ..
ಹೀಗೆ ಹೂತಿಟ್ಟ ಹಣವನ್ನುಆಗಾಗ ನೋಡಿ ಸಂತೋಷಪಡುವುದು ಅವನಿಗೆ ಅಭ್ಯಾಸವಾಗಿತ್ತು..
ಅತ್ತ ದಾನಶೀಲನಿಗಾದರೋ “ಉಣ್ಣು, ಉಡು, ಕೊಡು” ಎನ್ನುವುದೇ ಜೀವನ ಮಂತ್ರವಾಗಿತ್ತು..
ಸಮಯ ಸರಿಯಿತು..
ಧನಪಾಲನಲ್ಲಿ ಧನರಾಶಿಯೇ ಕೂಡಿತು..!
ದಾನಶೀಲನ ಸಂಪತ್ತೆಲ್ಲವೂ ಕರಗಿ ಹೋಯಿತು..!
ಒಂದು ದಿನ…ಮಳೆಸುರಿಸಿ ಬರಿದಾಗುವ ಮೋಡದಂತೆ,
ತನ್ನದೆಂಬುದೆಲ್ಲವನ್ನೂ ವಿತರಿಸಿ, ವಿನಿಯೋಗಿಸಿ, ಕೈ ಬರಿದಾದಾಗ, ನೀಡಲೇನೂ ಉಳಿಯದಾಗ.. ದಾನಶೀಲನಿಗೆ ಬದುಕು ನಿರರ್ಥಕವೆನಿಸಿತು..
ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತು..
ಊರ ಹೊರಗಿನ ಕಾಡಿನೆಡೆಗೆ ಹೆಜ್ಜೆಹಾಕಿದ..
ಮರವೊಂದನ್ನು ಏರಿ, ಕೊಂಬೆಗೆ ಹಗ್ಗ ಬಿಗಿದು, ಕೊರಳಲ್ಲಿ ಕುಣಿಕೆಯನ್ನು ಧರಿಸಿ, ಜೀವನವಿಡೀ ನಂಬಿದ ಸತ್ಯವನ್ನು ನೆನೆಯುತ್ತಾ ಧುಮುಕಿದ..
ಏನಾಶ್ಚರ್ಯ..!!
ಗೋಣು ಮುರಿಯುವುದರ ಬದಲು ನೇಣಿನ ಕೊಂಬೆಯೇ ಮುರಿಯಿತು..!!!
ಮರದಿಂದ ಧರೆಗುರುಳುತ್ತಿದ್ದಂತೆಯೇ ಇನ್ನೊಂದು ಆಶ್ಚರ್ಯ ಕಾದಿತ್ತು..!
ಆತ ಬಿದ್ದ ಸ್ಥಳ ಟೊಳ್ಳಾಗಿತ್ತು..!
ಒಳಗೆ ನಿಧಿಯಿತ್ತು..!
ಧನಪಾಲನ ನಿಧಿಯದು..!!!
ಜೀವ – ಜಗದ ಮಿತ್ರನಾಗಿ ಬದುಕುವವನನ್ನು ಬದುಕು ಬದುಕೆಂದು ಬ್ರಹ್ಮಾಂಡವೇ ಹರಸುತ್ತದೆ..
ದಾನ ಶೀಲ ಸಾವಿಗೆಂದು ಆರಿಸಿಕೊಂಡ ಮರ ಅಮರನಾಗೆಂದು ಹರಸಿದರೆ..
ಬಿದ್ದ ನೆಲ ಬದುಕಿನಲ್ಲಿ ಆತ ಮತ್ತೊಮ್ಮೆ ಎದ್ದು ನಿಲ್ಲಲು ಆಶೀರ್ವದಿಸಿತು..!
ಆತನ ಪಾಲಿಗೆ ಮಸಣವಾಗಬೇಕಿದ್ದ ಧರೆ – ವಸುಂಧರೆಯಾಯಿತು…!!
ವಿತರಣೆಗಾಗಿ ಶ್ರೀಮನ್ನಾರಾಯಣನೇ ಅನುಗ್ರಹಿಸಿದ ಲಕ್ಷ್ಮಿ ಇದು ಎಂಬ ಭಾವದಲ್ಲಿ ಸಂಪತ್ತಿನೊಡನೆ ದಾನಶೀಲ ಮರಳಿದ ಮೇಲೆ….
ಎಂದಿನಂತೆ ತಾನು ಹೂತಿಟ್ಟ ಹಣವನ್ನು ನೋಡಿ ಸಂತೋಷಪಡಲು ಬಂದ ಧನಪಾಲನನ್ನು ಶೂನ್ಯ ಸ್ವಾಗತಿಸಿತು..!!
ಲಕ್ಷ್ಮಿ ಕೈ ಬಿಟ್ಟು ಹೋಗಿದ್ದಳು..!
ನೇಣುಹಗ್ಗ ಕೈಬೀಸಿ ಕರೆಯುತ್ತಿತ್ತು..!!
ಧನಪಾಲನ ಎದೆ ಬಿರಿಯಿತು..!!
ಬದುಕು ಬೇಡವೆನಿಸಿತು..!
ದಾನ ಶೀಲ ಬಿಟ್ಟುಹೋದ ನೇಣುಹಗ್ಗದಿಂದಲೇ ಅದೇ ಮರದ ಇನ್ನೊಂದು ಕೊಂಬೆಗೆ ನೇಣು ಹಾಕಿಕೊಂಡನಾತ..!
ವಿಧಿ ಅದೆಷ್ಟು ವಿಚಿತ್ರವೋ..?
ಈ ಬಾರಿ ಕೊಂಬೆ ಮುರಿಯಲೇ ಇಲ್ಲ……!!!!!
ರಾಮಬಾಣ: ಸಂಪತ್ತು ಹರಿದರೆ ಬೆಳೆಯುತ್ತದೆ – ನಿಂತರೆ ಕೊಳೆಯುತ್ತದೆ..
ವಿವರಣೆ ಈಗ ನಿಮ್ಮಿಂದ, ಮುಂದಿನವಾರ ನಮ್ಮಿಂದ…!
January 24, 2010 at 12:50 PM
ಧರ್ಮೋ ರಕ್ಷತಿ ರಕ್ಷಿತಃ…. ಸರಿಯಲ್ವಾ ಸಂಸ್ಥಾನ..
January 24, 2010 at 10:35 PM
ಆವ ಋಣಕೋಸುಗವೊ, ಆರ ಹಿತಕೋಸುಗವೊ |
ಆವಾವ ಕಾರಣಕೊ, ಆವ ಯೋಜನೆಗೋ ||
ನೋವ ನೀ೦ ಪಡುವುದೇ ದೈವೇಚ್ಛೆಯಾಗಿರದೆ? |
ದೈವ ಕುರುಡೆನ್ನದಿರು – ಮ೦ಕುತಿಮ್ಮ ||
January 24, 2010 at 11:08 PM
ಗುರುಗಳೇ, ಕಗ್ಗಕ್ಕೆ ವ್ಯಾಖ್ಯಾನ ಬರೆಯಬೇಕೆ೦ದು, ಉದ್ದಾ೦ಡ ನಮಸ್ಕಾರಗಳೊ೦ದಿಗೆ ಕೇಳಿಕೊಳ್ಳುತ್ತಿದೇವೆ.
January 24, 2010 at 11:09 PM
ಮ೦ಕುತಿಮ್ಮನ ಕಗ್ಗ ಎ೦ದರೆ –
– ಸೃಷ್ಟಿಯೇ ಗುರುವಾದ೦ತೆ, ಮಾಯೆಯೆ ಪುರುಷನ ಪಾಠ ಮಾಡಿದ೦ತೆ, ಸೌ೦ದರ್ಯವೋ ಸೌ೦ದರ್ಯ.
– ಸ್ನೇಹದ೦ತೆ, ಪ್ರೀತಿಯ೦ತೆ, ಪ್ರೇಮದ೦ತೆ, ನಿರ್ಭಯವೋ ನಿರ್ಭಯ.
– ಗೆಳತಿಯ೦ತೆ, ಸು೦ದರ ಸ೦ಜೆಯ೦ತೆ, ಸಹಜ ಸ್ನೇಹದ೦ತೆ, ತ೦ಗಾಳಿಯೋ ತ೦ಗಾಳಿ.
.
.
– ದುರ್ಗೆಯ೦ತೆ, ಲಲಿತೆಯ೦ತೆ, ಕನ್ಯಾಕುಮಾರಿಯ೦ತೆ, ಕೊ೦ಡಾಟವೋ ಕೊ೦ಡಾಟ.
.
– ಜ್ಞಾನ ಲೋಕದ ಅ೦ತಃಪುರ ಗೀತೆಗಳ೦ತೆ, ಬೆಸುಗೆಯೋ ಬೆಸುಗೆ.
.
ಕನ್ನಡದ ತಾಯಿ ಭುವನೇಶ್ವರಿಯ ಐಶ್ವರ್ಯ ಆಗಾಧ
January 26, 2010 at 8:38 AM
ಮ೦ಕುತಿಮ್ಮನ ಕಗ್ಗ ಎ೦ದರೆ –
– ಸೃಷ್ಟಿಯೇ ಗುರುವಾದ೦ತೆ, ಮಾಯೆಯೆ ಪುರುಷನ ಪಾಠ ಮಾಡಿದ೦ತೆ, ಅತೀವ ಸೌ೦ದರ್ಯ.
– ಸ್ನೇಹದ೦ತೆ, ಪ್ರೀತಿಯ೦ತೆ, ಪ್ರೇಮದ೦ತೆ, ಕಾಳಜಿಯ೦ತೆ, ನಿರ್ಭಯ ಲೋಕ.
– ಗೆಳತಿಯ೦ತೆ, ಸು೦ದರ ಸ೦ಜೆಯ೦ತೆ, ಸಹಜ ಸ್ನೇಹದ೦ತೆ, ತ೦ಪು ತ೦ಗಾಳಿ.
– ದುರ್ಗೆಯ೦ತೆ, ಲಲಿತೆಯ೦ತೆ, ಕನ್ಯಾಕುಮಾರಿಯ೦ತೆ, ಪ್ರಿಯ ಸ೦ಬ೦ಧ.
– ಜ್ಞಾನ ಸಾಮ್ರಾಜ್ಯದ ಅ೦ತಃಪುರ ಗೀತೆಗಳ೦ತೆ, ಬಿಡದ ಬೆಸುಗೆ. ಅತೀವ ಸೆಳೆತ
January 24, 2010 at 11:19 PM
Samsthana Hare Rama
Is it correct on part of Dhanasheela to take somebody’s else money? Infact indirectly he becomes responsible for Dhanapala’s death. Pl. explain if Dhanasheela has followed the path of Dharma.
January 25, 2010 at 8:23 AM
ಯಾವ ವಿಷಯದಲ್ಲೇ ಆಗಲಿ, ದುರಹಂಕಾರ ಎಂಬುದು ಸರ್ವನಾಶಕ್ಕೆ ಮೂಲ ಕಾರಣವಾಗುತ್ತದೆ ಎಂಬ ಅತ್ಯುಪಯುಕ್ತ ನೀತಿ ಪಾಠ ನಮಗಿಲ್ಲಿ ದೊರೆಯುತ್ತದೆ. ಹಣಕಾಸು, ಸಿರಿ-ಸಂಪತ್ತು ಎಂಬುದೆಲ್ಲ ಇಂದು ನಮಗೆ ಒಲಿದಿರಬಹುದು ಆದರೆ, ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ….. ಎಂಬ ಸುಭಾಷಿತದ ಸಾರ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಹರೇ ರಾಮ
January 25, 2010 at 11:48 AM
ಹೌದು, ಎಲ್ಲೋ ಮಾಡಿದ ಸಣ್ಣ ದಾನ, ಕಷ್ಟ ಕಾಲದಲ್ಲಿ ಇನ್ನೆಲ್ಲಿಂದಲೋ ಆದರೂ ಆಗಲಿ, ಬಂದು ಸೇರುತ್ತದೆ ಎನ್ನುವುದು ನಿಜ!! ಆದರೆ, ಬದುಕನ್ನು ಪ್ರೀತಿಸುವುದು ಅಂದರೆ ಅದರೊಳಗಿನ ಎಲ್ಲವನ್ನೂ ಅಲ್ಲವೇ?? ಪ್ರೀತಿ ಇದ್ದಲ್ಲಿ ದಾನ ಎಂಬ ಮಾತು ಸರಿ ಅಲ್ಲವೇನೋ??!!! ನಾವು ಪ್ರೀತಿಸುವಂತೆ ನಮ್ಮನ್ನು ಪ್ರೀತಿಸುವವರೂ ಇದ್ದೆ ಇರುತ್ತಾರೆ, ಇರಲೇ ಬೇಕು ಅಲ್ಲವೇ??!!!ಅದಕ್ಕೆ ಯಾವುದೇ ಬಂಧನ ಇರಬೇಕಾಗಿಲ್ಲ ಅಲ್ಲವೇ ಗುರುವರ್ಯಾ…??!!! ನಾವು ಪ್ರೀತಿಯಿಂದ ಮಾಡುವ ಸೇವೆ ನಮಗೆ ಸಂತೋಷವನ್ನೇ ತರುವಾಗ ಅದು ದಾನ ಹೇಗಾಗುತ್ತದೆ??!!! ಅಥವಾ ದಾನವೂ ಕೂಡಾ ಬಿತ್ತಿದ ಬೀಜದಂತೆಯೇ…??!!! ಒಹ್, ಇದೆಲ್ಲಾ ಬಹಳ ಗೋಜಲಾಗಿದೆ!!!!! ಹರೇ ರಾಮ…
January 25, 2010 at 12:15 PM
ಹರೇ ರಾಮ, ಪ್ರಣಾಮಾಃ |
ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀಃ || ಎಂದು ಹೇಳ್ತ್ವಲಿ , ಗುರುಗಳೇ !
January 25, 2010 at 12:23 PM
ಎಷ್ಟು ನೀನುಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ! ಮಿಕ್ಕುದೆಲ್ಲ ಕಸ.
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? ಮಂಕುತಿಮ್ಮ.
ಈ ಮೇಲಿನ ಸಾಲುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಂಪತ್ತು ನಿಂತ ನೀರು ಆಗೋದಿಲ್ಲ, ಅಲ್ಲದ ಗುರುಗಳೆ?
January 25, 2010 at 1:09 PM
ಪರಮಾಶ್ಚರ್ಯ ಗುರುಗಳೇ, ನಿನ್ನೆ ಇಡೀ ಗುರುಗಳ busy schedule ನೋಡಿದ್ದೆ ಅದೆಷ್ಟೊತ್ತಿಗೆ ಬರೆದ್ರೀ ಗುರುಗಳೆ ?
January 25, 2010 at 1:23 PM
ಗುರುದೇವಾ……..ಎಲ್ಲೋರಿಗು ಒ೦ದೇ ಚುಚ್ಚು ಮದ್ದು ಕೊಟ್ಟಿದಿ…ಇದು powerfull dose ,,,injection ಚುಚ್ಚಿಸಿಕೊ೦ಡ ಹಾ೦ಗೆ ಆತು….
ಕೊಟ್ಟದ್ದು ತನಗೆ , ಬಚ್ಚಿಟ್ಟದ್ದು ಪರರಿಗೆ…ಈ ಗಾದೆ ಮಾತಿನ ಅರ್ಥ ಈ ಕತೆ ಓದಿ ಗೊ೦ತಾತು…
ಆದರು ಕೆಲವರು ಕೆಲವೊಮ್ಮೆ ಕೈ ನೀಡಿ ಕೊಡಲು ಹಿ೦ದೆ ಮು೦ದೆ ನೋಡುದು ಯಾಕೆ? ಇನ್ನು ಕೆಲವರು ದುಡ್ಡು ಕೂಡಿಡುದು ನೋಡಿರೆ ಅವು ಮು೦ದಿನ ಜನ್ಮಕ್ಕು ಒಟ್ಟಿಗೆ ತೆಕ್ಕೊ೦ಡು ಹೋಪ ಅ೦ದಾಜಿದ್ದು ಕಾಣೆಕು…ಹಾ೦ಗಿರುತ್ತವು…ಅಲ್ಲದಾ…..
January 25, 2010 at 4:18 PM
ವಿಪದೋ ನೈವ ವಿಪದಃ ಸಂಪದೋ ನೈವ ಸಂಪದಃ
ವಿಪದ್ವಿಸ್ಮರಣಂ ವಿಷ್ಣೋಃ ಸಂಪನ್ನಾರಾಯಣಸ್ಮೃತಿಃ
January 25, 2010 at 5:32 PM
ಗುರುವೇ, ಕೆಲವು ಬಾರಿ ನಂಬಿ ಹರಿಸಿದ ದಾನ ಚಿಲುಮೆಯನ್ನೇ ಬತ್ತಿಸುವುದಲ್ಲ!!! ಅಪಾತ್ರ ಎಂದು ಅರಿವಾಗುವ ಮೊದಲೇ ದಾನಿಯ ಬದುಕು ನರಕವಾಗಿರುತ್ತದೆ!!!! ಅದಕ್ಕೇನು ಪರಿಹಾರ..???!!!
January 26, 2010 at 7:51 AM
೧. “ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ.. ದಾಸನಾಗಿ ಧನಕ್ಕೆ ನಿನೆ೦ದು ಬಾಳಬೇಡ..”
೨. ಅವರೆಷ್ಟು ಧನವ೦ತರ್, ಇವರೆಷ್ಟು ಬಲವ೦ತರ್ |
ಅವರೆಷ್ಟು ಯಶವ೦ತರ್ ಎನುವ ಕರುಬಿನಲಿ ||
ಭವಿಕ ನಿನಗೆಷ್ಟಿಹುದೊ ಮರೆತು ನೀ೦ ಕೊರಗುವುದು |
ಶಿವನಿಗೆ ಕೃತಜ್ಞತೆಯೆ? – ಮ೦ಕುತಿಮ್ಮ ||
೩. ಧನಪಾಲನ೦ತೆ ಸರ್ವವನ್ನು ಕೂಡಿಡುವುದು ಸರಿಯಲ್ಲ, ದಾನಶೀಲನ೦ತೆ ಸರ್ವವನ್ನು ಖಾಲಿ ಮಾಡುವುದು ತರವಲ್ಲ.
೪. ಧನಪಾಲನ೦ತವರು ಸಾಯುವ ತನಕ ಭೂಮಿಗೆ ಭಾರವಾಗಿರುತ್ತಾರೆ. ದಾನಶೀಲನ೦ತವರು ಸಾಯುವಾಗ ಭೂಮಿಗೆ ಭಾರವಾಗುತ್ತದೆ.
೫. ವಿಶ್ವಕ್ಕೆ ಸಹಾಯ ಮಾಡುವವನಿಗೆ, ವಿಶ್ವವೇ ಸಹಾಯ ಮಾಡುತ್ತದೆ. ತನಗೆ ಮಾತ್ರ ಸಹಾಯ ಮಾಡಿಕೊ೦ಡವನು ಕೊನೆಗೆ ಸಾವಿನಲ್ಲೂ ತಾನೆ ಸಹಾಯ ಮಾಡಿಕೊಳ್ಳಬೇಕಾದೀತು.
೬. ದಾನಶೀಲನ೦ತವರು ಕೊಟ್ಟು ಗಳಿಸುವುದು ನಿತ್ಯ ಆನ೦ದವನ್ನು, ಧನಪಾಲನ೦ತವರು ಕೂಡಿಟ್ಟು ಗಳಿಸುವುದು ನಿತ್ಯ ಆತ೦ಕವನ್ನು.
೭. ದಾನ ಕೊಡುವಿಕೆಯಲ್ಲು, ಧನ ಕೂಡುವಿಕೆಯಲ್ಲು, ಕಾರಣ ಸರಿ ಇಲ್ಲದಿದ್ದರೆ ಎರಡೂ ನಿರರ್ಥಕ. (ಹುಚ್ಚು ಹೆಚ್ಚಾದರೆ, ಇಬ್ಬರಿಗೂ ಒಟ್ಟಿಗೆ ಗು೦ಡಿ ತೋಡಬೇಕಾದೀತು..)
೮. ದಾನವು ಒ೦ದು ವ್ಯಾಪಾರವೆ. ದೊಡ್ಡ ಹೂಡಿಕೆಯೆ.
೯. ಧನವೂ ಇರಲಿ, ಜೊತೆಗೆ ದಾನವು ಇರಲಿ. ಧರ್ಮ ಅರ್ಥ ಕಾಮ ಮೋಕ್ಷ – ನಾಲ್ಕು ಇರಲಿ.
೧೦. ನಿಷ್ಕಾಮ ಮನಸ್ಸಿನ ದಾನ ಮತ್ತು ಸೇವೆ, ಸೂರ್ಯನಿಗೆ ಸಮಾನ (ಜಟಾಯುವನ್ನೂ ನೆನಪಿಸಕೊಳ್ಳಬಹುದು).
January 28, 2010 at 12:41 PM
ದಾನವೂ ಒಂದು ಹೂಡಿಕೆ ಹೌದಲ್ಲವೇ!!!ಕೂಡಿಟ್ಟ ಪಾತ್ರೆ ತೂತಾದರೆ ಕೂಡಿಟ್ಟದ್ದು ನಿರರ್ಥಕ, ಆದರೆ, ದಾನ ಅಪಾತ್ರ ಆದರೆ, ಆಗುವುದು ಅನರ್ಥ…!!!!
January 26, 2010 at 1:14 PM
ಹರೇರಾಮ
ಇಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ,ಎಂಬ ನಾಣ್ಣುಡಿ ಸತ್ಯ ಅಲ್ಲವಾ? ಸಂಸ್ಟಾನ”ದಾನವೇ ಧರ್ಮದ ಮೂಲ,
January 26, 2010 at 10:27 PM
ಹರೇ ರಾಮ|
” ಉಳ್ಳಲ್ಲಿ ಉಣದವನ, ಉಳ್ಳಲ್ಲಿ ಉಡದವನ,
ಉಳ್ಳಲ್ಲಿ ದಾನ ಕೊಡದವನ ಸಂಪತ್ತು ಕಳ್ಳಗೆ ನೃಪಗೆ” ಎಂಬ ಸರ್ವಜ್ಞನ ವಚನ ನೆನಪಾಯಿತು.
January 27, 2010 at 7:42 AM
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |
ಮಿಗೆ ನೀನು ಬೇಡಿಕೊಳೊ – ಮ೦ಕುತಿಮ್ಮ ||
January 27, 2010 at 10:32 PM
“”ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ” ಎನ್ನುವ ಮಾತು ಸರ್ವಕಾಲಿಕ ಸತ್ಯ.
ಸ೦ಪತ್ತಿನ ವ್ಯಾಮೋಹ ಅನಾದಿ ಕಾಲದಿ೦ದಲೂ ಮನುಷ್ಯನನ್ನು ಆವರಿಸಿಕೊ೦ಡಿದೆ. ಬಹುಶಃ ರಾಮಯಣ ಕಾಲದಲ್ಲಿ ಇದು ಅಷ್ಟಾಗಿ ಕಾಣದಿದ್ದರೂ ದ್ವಾಪರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪರೀಕ್ಷಿತನನ್ನು ತಕ್ಷಕನಿ೦ದ ಉಳಿಸಲು ಹೋಗುತ್ತಿದ್ದ ಬ್ರಾಹ್ಮಣ “ಕಶ್ಯಪ” ಸ್ವಯ೦ ತಕ್ಷಕನಿ೦ದಲೇ ಸ೦ಪತ್ತನ್ನು “ಲ೦ಚ” ರೂಪದಲ್ಲಿ ಪಡೆದು, ಪರೀಕ್ಷಿತನ ಮೃತ್ಯುವಿಗೆ ಕಾರಣನಾಗುತ್ತಾನೆ.
“ಹಣವೇ ನಿನ್ನಯ ಗುಣವ ಎಷ್ಟೆ೦ದು ವರ್ಣಿಸಲಿ” ಎ೦ದು ೧೩ನೆಯ ಶತಮಾನದ ವ್ಯಾಸ ತೀರ್ಥರು ಹಣದ ಮಹೆಮೆಯ ಬಗ್ಗೆ ವ್ಯ೦ಗವಾಗಿ ಹೇಳುತ್ತಾ “ಸಿರಿ ಹಯವದನನ ಸ್ಮರಣೆ ಮರೆಸುವೆ” ಎನ್ನುತ್ತಾರೆ.
ಅರ್ಥಶಾಸ್ತ್ರಜ್ಞನೊಬ್ಬ ಹಣ ಎ೦ದರೇನು? ಎನ್ನುವುದನ್ನು ವಿವರಿಸುತ್ತಾ “MONEY IS WHAT MONEY DOES” ಎನ್ನುತ್ತಾನೆ. ಎಲ್ಲವನ್ನೂ ಮಾಡಿಸುವ ಶಕ್ತಿ ಹಣಕ್ಕಿದೆ – ಅದೇ ಹಣ ಎ೦ದು ಅವನ ಅ೦ಬೋಣ. ಹಾಗಾಗಿ ಸಾಮನ್ಯ ಮನುಷ್ಯ ಅದರ ಹಿ೦ದೆ ಬೀಳುತ್ತಾನೆ.
ಸ೦ಪತ್ತಿನ ಬಗ್ಗೆ ಹೇಳುವಾಗ ಅದನ್ನು ಹೇಗೆ ಸ೦ಗ್ರಹಿಸಿದ ಮತ್ತು ವಿನಿಯೋಗಿಸಿದ ಎನ್ನುವುದರ ಕಡೆ ಗಮನ ಕೊಡಬೇಕು.
೧) ಸ೦ಗ್ರಹ
೨) ವಿನಿಯೋಗ
೧) ಸ೦ಗ್ರಹವು ನ್ಯಾಯಯುತ, ಧರ್ಮಯುತವಾಗಿರಬೇಕು.
೨) ವಿನಿಯೋಗವು ದುರ್ವಿನಿಯೋಗವಾಗಬಾರದು. ಸದ್ವಿನಿಯೋಗವಾಗಬೇಕು.
೩) ಸ೦ಗ್ರಹಿಸಿದ ಹಣವನ್ನು ಬರಿಯ ಕೂಡಿಟ್ಟರೆ ಅದು ಕಟ್ಟೆ ಕಟ್ಟಿ ನಿಲ್ಲಿಸಿದ ನೀರಿನ೦ತೆ ನಾರುತ್ತದೆ. ಅದೇ ಸದ್ವಿನಿಯೋಗವಾದರೆ ಗ೦ಗೆಯ೦ತೆ ಪವಿತ್ರಳಾಗಿ, ಮಹಾಲಕ್ಷಿಯ೦ತೆ ಕಾಪಾಡುತ್ತದೆ.
೪) ದುರ್ವಿನಿಯೋಗವಾದರೆ ಇಹದಲ್ಲೂ, ಪರದಲ್ಲೂ ಕಾಡುತ್ತದೆ.
೫) ಚೋರತನದಿ೦ದ ಸ೦ಗ್ರಹಿಸಿದ್ದು ಅನೈತಿಕವಾಗುತ್ತದೆ – ಅದನ್ನು ಸದ್ವಿನಿಯೋಗ ಮಾಡಿದರೂ ಫಲವಿಲ್ಲ.
ಸದ್ವಿನಿಯೋಗ ಮಾಡುವವರಿಗೆ ಲಕ್ಷಿ ತಾನಾಗಿ ಒಲಿದಾಳು. “ವಿದ್ಯಾರಣ್ಯರಿಗೆ” ಲಕ್ಷಿ ಒಲಿದ೦ತೆ: ಆಕೆಯ ಸಹಾಯದಿ೦ದ ವಿದ್ಯಾರಣ್ಯರು ಒ೦ದು ದೊಡ್ಡ ಸಾಮ್ರಾಜ್ಯವನ್ನೆ ಕಟ್ಟಿದರು. ಧರ್ಮವನ್ನು ಕಾಪಾಡಿದರು.
ನಾನು ನೋಡಿದ ಹಾಗೆ, ಮನುಷ್ಯನಲಿ ಅದರಲ್ಲೂ ವ್ಯಾಪಾರಿ ವರ್ಗದಲ್ಲಿ ಹಣ ಸ೦ಗ್ರಹದ ಬಗ್ಗೆ “ಪಾಪ ಪ್ರಜ್ಞೆ” ಕಾಡುತ್ತಿರುತ್ತದೆ. ಅದಕ್ಕಾಗಿ ದಿನಾಲೂ, ತಮ್ಮ ದಿನದ ಲಾಭದಲ್ಲಿ ಒ೦ದ೦ಶವನ್ನು “ದೇವರ ದುಡ್ಡು” ಎ೦ದು ತೆಗೆದಿರಿಸುತ್ತಾರೆ – ಅಥವಾ – ಗೋವಿಗಾಗಿ ಎ೦ದು ಬದಿಗಿರಿಸುತ್ತಾರೆ.
ಇನ್ನು ಎಷ್ಟೊ ಮ೦ದಿ ತಾವು ಸ೦ಗ್ರಹಿಸಿಟ್ಟ ಹಣದ ಒ೦ದ೦ಶವನ್ನು ದೇವಸ್ಥಾನ ಹು೦ಡಿಗೋ, ತಮ್ಮ ಗುರುಗಳ ಚರಣಕಮಲಗಳಿಗೋ ಅರ್ಪಿಸಿ ಕೃತಾರ್ಥರಾದೆವೆ೦ದು, ತಮ್ಮ ಪಾಪ ಪ್ರಜ್ಞೆಯಿ೦ದ ಹೊರಬರಲು ಯತ್ನಿಸುತ್ತಾರೆ.
ಆದರೆ ಹಣವಿಲ್ಲದೆ ಇ೦ದಿನ ಕಾಲದಲ್ಲಿ ಬದುಕಲು ಸಾಧ್ಯವೇ? ಇಲ್ಲ. ವಿದ್ಯೆ ಕಲಿಯಲು, ಶಾಲೆಗೆ ಸೇರಿಸಲು ಅಗಾಧವಾದ ಹಣಬೇಕು. ವಿದ್ಯಾದೇವತೆಯ ಮು೦ದೆಯೇ ಅನ್ಯಾಯ, ಅನ್ನು ಆಕೆಯ ವೀಣೆಯ ನಾದ ಯಾರಿಗೆ ಕೇಳಿಸೀತು?
ಲಕ್ಷಿಯಿಲ್ಲದೆ “ನಾರಾಯಣ”ನಿಲ್ಲ, ಆದರೆ “ನಾರಾಯಣ”ನನ್ನೆ (ದೇವರನ್ನೇ) ಮರೆತರೆ ಲಕ್ಷಿ ಮುನಿಸದಿದ್ದಾಳೇ?
.
.
ಜೆಡ್ಡು ರಾಮಚ೦ದ್ರ ಭಟ್ಟ.
January 28, 2010 at 9:51 AM
ಹರೇರಾಮ,,,ಗುರುದೇವಾ..ದಾನ ಮಾಡಬೇಕಾದರೂ ಸ೦ಪತ್ತು ಕೂಡಿಟ್ಟದ್ದು ಬೇಕಲ್ಲ??
ಉಳ್ಳವರು ಶಿವಾಲಯವ ಮಾಡುವರು…ಇಲ್ಲದವರು??
ಉಳ್ಳವರಿಗೆ ಮಣೆ ಇಡುವುದು ಎಲ್ಲಾಕಡೆ ಕಾಣುತ್ತಲ್ಲ???ಹಣ ಹೆಸರು ಪ್ರತಿಷ್ಟೆ ಇದು ಇದ್ದವರಿಗೆ ಸ್ಮ್ಸಮಾಜ , ಸ೦ಘ ಸ೦ಸ್ಥೆ ಗಳು ಗುರ್ರುತಿಸುದು,,ಪ್ರಶಸ್ತ್ಥಿ ಸಮ್ಮಾನ ಮರ್ಯಾದೆ ಕೊಡುವುದು ಕಾಣುತ್ತದಲ್ಲ??ಜನರು ಇದೇ ಆದರ್ಷ ಎ೦ದು ಅನುಕರಣೆ ಮಾಡುವರಲ್ಲ?
ಆಪಧ್ಧನ ಎ೦ದು ಸ್ವಲ್ಪ ಹಣ ಕೂದಿಡುವುದು ಹಿ೦ದಿನಿ೦ದ ಬ೦ದ ಪದ್ದತಿ ಎ೦ದು ತಿಳಿದಿರುವೆ..ಎಲ್ಲ ಕೊಟ್ಟು ಬರಿಕೈ ದಾಸನಾದರೆ ಈಗಿನ ಕಾಲದಲ್ಲಿ ಬೌದ್ಕಬಹುದೆ?
January 28, 2010 at 4:15 PM
->ರಾಮಬಾಣ: ಸಂಪತ್ತು ಹರಿದರೆ ಬೆಳೆಯುತ್ತದೆ – ನಿಂತರೆ ಕೊಳೆಯುತ್ತದೆ
ಹಾಗೆಯೇ
ಸಂಪತ್ತು ಇರದೇ ಇದ್ದರೆ ನಾಯಿಗಿಂತ ಕಡೆಯಗುತ್ತದೆ ಜೀವನ ……
ಪ್ರಪಂಚದಲ್ಲಿ ಹಣ ಇದ್ದವರಿಗೆ ಸಿಗುವ ಬೆಲೆ ಇಲ್ಲದವರಿಗೆ ಬೇರೆ ಏನೇ ಇದ್ದರು ಜನ ಬೆಲೆ “ಕೊಡೋದೇ” ಇಲ್ಲ(ನನ್ನ ಅನುಭವ)
ಬುದ್ದಿ ಇದ್ದು ಸಮಯ ಕೊಡದೆ/ದುಡಿಯದೆ … ಇರುವ ಹಣವನ್ನು ದಾನ ಮಾಡುತ್ತ ಹೋದರೆ ಮೂರ್ಖತನವಾಗುತ್ತದೆ
February 1, 2010 at 8:03 AM
ಸಂತರು – ಕಲಾವಿದರನ್ನು ನಾವೇಕೆ ಆದರಿಸುತ್ತೇವೆ . . ?
ಎಲ್ಲಿಂದ ನಮ್ಮೆಡೆಗೆ ಆನಂದ ಹರಿದು ಬರುವುದೋ, ನಮ್ಮ ದುಃಖ ಕರಗುವುದೊ ಅಲ್ಲಿಗೆ ಸಲ್ಲುವುದು ಗೌರವ . . . !
February 1, 2010 at 12:15 PM
ಆದರೆ ಸಂತರನ್ನ ನನ್ನಂತೆ ಸಾಮಾನ್ಯರು ಅಂತ ಪರಿಗಣಿಸಲು… “ಆಗುವುದೇ ಇಲ್ಲ”…
ಅದರ ಒಂದು ಹಂತದವರೆಗೆ ಕಲಾವಿದರನ್ನು ಕೂಡ ಹಾಗೆಯೇ…….
ಇಂದು ಪರಿತೋಷಗಳನ್ನ ಪಡೆದು ಕಲಾ ಸಾಮ್ರಾಜ್ಯ ….etc … ಎನಿಸಿದವರು ಮುಂದೊಂದು ದಿನ ಕೈ ಬರಿದಾಗಿ
ಕಲಾಸೇವೆಯನ್ನು ಮಾಡಲು ಶಕ್ತಿ ಕಳೆದುಕೊಂಡಾಗ …ಯಾರೊಬ್ಬರು ಅಲ್ಲಿ ಹೋಗುವುದಿಲ್ಲ ,
ನಮ್ಮ ಮುಂದೆ ಸಾಕಸ್ಟು ಉದಾಹರಣೆಗಳಿವೆ ……
ಹೌದು, ಸತ್ಪಾತ್ರರಿಗೆ ದಾನ ತುಂಬಾ ಕುಶಿ ಅನ್ನಿಸುತ್ತದೆ ಎಂಬುದು ಸತ್ಯದ ಮಾತು ….
ಹಣ-ಪ್ರೀತಿ ಎರಡು ಹಂಚಿದಸ್ಟು ಹೆಚ್ಚುತ್ತದೆ ……
ಸದಾ ನಿಮ್ಮ ಆಶಿರ್ವಾದದೊಂದಿಗೆ ನಮ್ಮೆಲ್ಲರಲ್ಲಿ ಸದಾ ಇರಲಿ ಅಂತ ಬೇಡುವೆ
January 29, 2010 at 11:19 PM
ಬೆಲೆ ಎನ್ನುವುದನ್ನು ಜನ ಕೊಡುವುದಲ್ಲ :ನಾವು ಗಳಿಸಿಕೊಳ್ಳುವುದು …ಹಾಗೆಯೇ…. ಹಣ ಚಲಾವಣೆ ಗೊಂಡಾಗ ಮಾತ್ರ ಅದರ ಮೌಲ್ಯ ಉಳಿಯುತ್ತದೆ … ಅಪ್ಪ ಹಾಕಿದ ಆಲದಮರದಲ್ಲಿ ಜೋತು ಬೀಳದೆ …ನಮ್ಮ ಸ್ವ ಸಾಮರ್ಥ್ಯ ದಿಂದ ದುಡಿದು ,ಗಳಿಸಿದ್ದರಲ್ಲಿ ಸ್ವಲ್ಪ ಉಳಿಸಿ ….ಉಳಿಸಿದ್ದರಲ್ಲಿ ಸ್ವಲ್ಪ ದಾನ (ಸೇವೆ )ಮಾಡಿ ..ಆಗ ಜೀವನ ಕ್ಕೆ ಹೊಸ ಆಯಾಮ ದೊರಕುತ್ತದೆ …
June 30, 2011 at 6:37 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಸಂಪತ್ತು ಹರಿದರೆ ಬೆಳೆಯುತ್ತದೆ… ನಿಂತರೆ ಕೊಳೆಯುತ್ತದೆ…”