|| ಹರೇ ರಾಮ ||
ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..
ಆಮೇಲೆ ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..
ಎಲ್ಲೆಡೆ ಎದ್ದು ಕಾಣುವ ತಥ್ಯವಿದು..
ಮನದಲ್ಲಿ ಮೊದಲು ಮೂಡಿದ ಭಾವಗಳಲ್ಲವೇ ಮತ್ತೆ ಮುಖದಲ್ಲಿ ಮಾತಾಗಿ ವ್ಯಕ್ತವಾಗುವುದು..!?
ಮಹಾಮಾನವರ ಮಸ್ತಿಷ್ಕದ ಮನೆಯಲ್ಲಿ ಮೂಡಿಬರುವ ಯೋಜನೆಗಳಲ್ಲವೆ,
ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿ ಬರುವುದು..!?
ಕದನಗಳು ಮೊದಲಾಗುವುದು ಮನಸಿನಲ್ಲಿ ..
ಪತನಗಳು ಮೊದಲಾಗುವುದು ಮನಸಿನಲ್ಲಿ..
ವಿಜಯ-ಪರಾಭವಗಳು ಮೊದಲಾಗುವುದು ಮನಸಿನಲ್ಲಿ ..
ಹುಟ್ಟುವುದೆಲ್ಲವೂ ಮೊದಲು ಒಳಗೇ ಹುಟ್ಟಬೇಕು..
ಸಾಯುವುದೆಲ್ಲವೂ ಮೊದಲು ಒಳಗೇ ಸಾಯಬೆಕು..
ಇದು ಸೃಷ್ಟಿಯ ನಿಯಮ..
ಪ್ರಾಣಿಗಳು ಅಮ್ಮನ ಒಳಗೆ ಗರ್ಭವಾಗಿ ಮೊದಲು ಹುಟ್ಟುತ್ತವೆ,
ಜಗತ್ತಿಗೆ ಪ್ರಸವದ ಮೂಲಕ ಪ್ರಕಟವಾಗುತ್ತವೆ..
ಪಕ್ಷಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನ್ಮ ತಾಳುತ್ತವೆ..
ಅಮ್ಮನ ಹೊಟ್ಟೆಯೊಳಗೆ – ಅದರೊಳಗಿನ ಮೊಟ್ಟೆಯೊಳಗೆ ಜನ್ಮ ತಾಳುತ್ತವೆ..!
ಸಾವಂತೂ ಸದ್ದಿಲ್ಲದಂತೆ ಮೊದಲೊಳಸೇರಿ..
ಗೆದ್ದಲಿನಂತೆ ಕೆಲಸವನ್ನು ಮಾಡಿ, ಮತ್ತೆ ಸುದ್ದಿಯಾಗುತ್ತದೆ..!
ಹೆಚ್ಚು ಮಾತೇಕೆ..?
ವಿಶ್ವ ಸೃಷ್ಟಿಯೇ ಹೀಗೆ..
ಈಶ್ವರನ ಅಂತರಂಗದಲ್ಲಿ ಮಹಾಸಂಕಲ್ಪ ರೂಪದಲ್ಲಿ ಜಗವು ಮೊದಲು ಸೃಷ್ಟಿಯಾಯಿತು..
ಆಮೇಲೆ ತಾನೇ ಬಹಿರಂಗದಲ್ಲಿ ವಿಶ್ವರೂಪವಾಗಿ ಪ್ರಕಟವಾದದ್ದು..?
ಈ ಸನ್ನಿವೇಶದಲ್ಲಿ ಪೂಜ್ಯ. ರಾಮಭದ್ರಾಚಾರ್ಯರು ಕೊಡುತ್ತಿದ್ದ ಉದಾಹರಣೆಯೊಂದು ನೆನಪಾಗುತ್ತದೆ..
ಕೆ.ಆರ್.ಎಸ್.ಕಟ್ಟಿದ್ದು ವಿಶ್ವೇಶ್ವರಯ್ಯನವರೆಂದು ಜಗತ್ತೇ ಹೇಳುತ್ತದೆ.
ನಿಜವಾಗಿಯೂ ಆ ಕೆಲಸ ಮಾಡಿದ್ದು ಸಾಮಾನ್ಯ ಕೂಲಿಕಾರರು- ಮೇಸ್ತ್ರಿಗಳಲ್ಲವೇ.?
ವಿಶ್ವೇಶ್ವರಯ್ಯನವರೇನು ಕಲ್ಲು-ಮಣ್ಣುಗಳನ್ನು ಹೊತ್ತಿದ್ದುಂಟೇ..?
ಗಾರೆ ಕಲಸಿ ಮೆತ್ತಿದ್ದುಂಟೇ…?
ನಿಜ, ವಿಶ್ವೇಶ್ವರಯ್ಯನವರು ಜಲ್ಲಿಕಲ್ಲುಗಳನ್ನು ಮುಟ್ಟದಿರಬಹುದು..
ಆದರೆ, ಕೆ.ಆರ್.ಎಸ್.ಮೊದಲು ನಿರ್ಮಾಣವಾದದ್ದು ಅವರ ಬುದ್ದಿ-ಹೃದಯಗಳಲ್ಲಿ..!
ಅವರ ಕಲ್ಪನೆ-ಯೋಜನೆಗಳಿಗೆ ಬಹಿರಂಗದಲ್ಲಿ ಆಕಾರ ಕೊಟ್ಟವರು ಕಾರ್ಮಿಕರು-ಮೇಸ್ತ್ರಿಗಳು..
ವಿಶ್ವೇಶ್ವರಯ್ಯನವರ ಯೋಜನೆಯಿಲ್ಲದಿದ್ದರೆ ಕೂಲಿಕಾರರು- ಮೇಸ್ತ್ರಿಗಳು ಕಟ್ಟುವುದಾದರೂ ಏನನ್ನು..?
ಕಾರ್ಮಿಕರು ಇಲ್ಲದಿದ್ದರೆ ವಿಶ್ವೇಶ್ವರಯ್ಯನವರು ಯೋಜನೆಯನ್ನಿಟ್ಟುಕೊಂಡು ಮಾಡುವುದಾದರೂ ಏನನ್ನು..?
ಒಳ-ಹೊರಗಳು ಸೇರಿಯೇ ಬದುಕು ಪೂರ್ಣ..!
ಹಾಗೆ ನೋಡಿದರೆ ಜೀವನಕ್ಕೆ ಎರಡೇ ಅಂಗಗಳು..!
ಅಂತರಂಗವೊಂದು.. ಬಹಿರಂಗವಿನ್ನೊಂದು..
ಒಂದಿಲ್ಲದೆ ಇನ್ನೊಂದು ಪೂರ್ಣವಲ್ಲ.
ಬಹಿರಂಗವಿಲ್ಲದ ಅಂತರಂಗ.. ದೇಹವಿಲ್ಲದ ಜೀವದಂತೆ..ಪ್ರೇತ..!
ಅಂತರಂಗವಿಲ್ಲದ ಬಹಿರಂಗ ಜೀವವಿಲ್ಲದ ದೇಹದಂತೆ..ಶವ..!
ಈಗ ರಾಮಾಯಣಕ್ಕೆ ಬನ್ನಿ..
ಅಂತರಂಗ-ಬಹಿರಂಗಗಳ ಅನ್ಯೋನ್ಯಾಶ್ರಯದ ಆಟವನ್ನು ಇಲ್ಲಿಯೂ ನೋಡಿ…
ಶಬ್ಧಗಳು ಅನುಭವದಲ್ಲಿ ಪರ್ಯವಸಾನವಾಗಬೇಕು..
ಅನುಭವಗಳು ಪುನಃ ಶಬ್ದರೂಪವನ್ನು ತಾಳಬೇಕು..
ರಾಮನ ಕುರಿತು ಕೇಳಿದ್ದು ಅನುಭವಕ್ಕೆ ಬಂದರೆ ಆತ್ಮೋದ್ಧಾರ..
ರಾಮನ ಅನುಭವ ಶಬ್ದಗಳ ರೂಪದಲ್ಲಿ ಅಭಿವ್ಯಕ್ತಗೊಂಡರೆ ಅದು ಲೋಕೋದ್ಧಾರ..
ಮನದ ಮನೆಯೊಳಗೆ ಮೌನದಲ್ಲಿ – ತನ್ಮಯತೆಯಲ್ಲಿ ಕುಳಿತು ವಾಲ್ಮೀಕಿಗಳು ನಾರದರಿಂದ ಸಂಕ್ಷೇಪವಾಗಿ ಕೇಳಿದ್ದನ್ನು ಬಹು ವಿಸ್ತಾರವಾಗಿ ನೋಡಿದರು..
ಬಳಿಕ ಬ್ರಹ್ಮನಾಣತಿಯಂತೆ ರಾಮಾಯಣದರ್ಶನದ ಅನುಭೂತಿಗೆ ಶಬ್ದಗಳ ರೂಪವನ್ನು ನೀಡಿದರು..
ಅಬ್ಬಾ..!
ಅದೆಂಥಾ ವಿಸ್ತಾರ..!
ಒಂದೊಂದು ಶ್ಲೋಕದಲ್ಲಿ ಮೂವತ್ತೆರಡು ಅಕ್ಷರಗಳು..
ಅಂತಹ ಶ್ಲೋಕಗಳು ಇಪ್ಪತ್ತನಾಲ್ಕು ಸಾವಿರ…!
ಒಂದೊಂದು ಅಧ್ಯಾಯದಲ್ಲಿ ಅದೆಷ್ಟೋ ಶ್ಲೋಕಗಳು..
ಅಂತಹ ಅಧ್ಯಾಯಗಳು ಐದುನೂರು..!
ಒಂದೊಂದು ಕಾಂಡದಲ್ಲಿ ಅದೆಷ್ಟೋ ಅಧ್ಯಾಯಗಳು..
ಅಂತಹ ಕಾಂಡಗಳು ಏಳು..!
ಈ ಮೇರುಕೃತಿ ಯಾವುದೇ ಲಿಪಿಯ ಸಹಾಯವಿಲ್ಲದೆ ಮುನಿಯ ಮನದಲ್ಲಿಯೇ ರಚಿತವಾಯಿತೆಂದರೆ ಆ ಮೇಧಾಶಕ್ತಿ ಅದೆಂಥದ್ದಿರಬೇಕು..!
ಇಲ್ಲಿಗೆ ರಾಮಾಯಣಾವತಾರದ ಅಂತರಂಗದ ಭಾಗ ಮುಗಿದಿತ್ತು..
ಬಹಿರಂಗದ ಭಾಗವಿನ್ನಷ್ಟೇ ಪ್ರಾರಂಭವಾಗಬೇಕಿತ್ತು…!
ಸತ್ಯದ ಅನ್ವೇಷಣೆ ಮುಗಿದಿತ್ತು..
ಸೇತುವಿನ ಅನ್ವೇಷಣೆ ಆರಂಭವಾಗಿತ್ತು..!
ಇತ್ತ ವಾಲ್ಮೀಕಿಗಳ ಮನದಲ್ಲಿ ರಾಮಾಯಣದ ರಚನೆಯಾಗಿತ್ತು..
ಅತ್ತ ಲೋಕಕ್ಕೆ ಅದರ ಅಗತ್ಯವೂ ಅಗಾಧವಾಗಿತ್ತು..!
ಇನ್ನುಳಿದ ಪ್ರಶ್ನೆ- ನಡುವೆ ಸೇತುವಾಗುವವರು ಯಾರು..?
ದೇವರನ್ನು ಲೋಕಕ್ಕೆ ತೋರಲು ದ್ವಾರವೊಂದು ಬೇಕಾಗುತ್ತದೆ..
ಕೌಸಲ್ಯೆಯ ಒಡಲಲ್ಲಿ ಅವತರಿಸಿದ ರಾಮನು ಲೋಕಕ್ಕೆ ಪ್ರಕಟಗೊಳ್ಳಲು ಅಯೋಧ್ಯೆಯು ದ್ವಾರವಾಯಿತು..
ವಾಲ್ಮೀಕಿಯ ಮನದಲ್ಲಿ ಅವತರಿಸಿದ ರಾಮನ ಶಬ್ದರೂಪವು – ರಾಮಾಯಣವು ವಿಶ್ವ ಮುಖಕ್ಕೆ ಪ್ರಕಟಗೊಳ್ಳಲು ದ್ವಾರವಾವುದು..?
ಅನುಭವವು ಅಕ್ಷರವಾಗಿತ್ತು..ಅಕ್ಷರಕ್ಕೊಂದು ಧ್ವನಿ ಬೇಕಿತ್ತು..!
ದೇವರ ಹೆಜ್ಜೆಗಳನ್ನು ಲೋಕಕ್ಕೆ ತೋರಬಲ್ಲ ದಿವ್ಯಧ್ವನಿಗಾಗಿ ವಾಲ್ಮೀಕಿಗಳ ಹುಡುಕಾಟ ನಡೆದಿತ್ತು..!
ಥಿಯರಿ (Theory) ಮತ್ತು ಪ್ರಾಕ್ಟಿಕಲ್ (Practical) ಎಂಬ ಎರಡು ಶಬ್ದಗಳು ಲೋಕದಲ್ಲಿ ಬಹಳವಾಗಿ ಬಳಕೆಯಲ್ಲಿವೆ..
ಥಿಯರಿ ಎಂಬುದು ಅಂತರಂಗದ ಕಾರ್ಯವಾದರೆ, ಪ್ರಾಕ್ಟಿಕಲ್ ಬಹಿರಂಗ ಕ್ಷೇತ್ರಕ್ಕೆ ಸಂಬಂಧಿಸಿದ್ದು..
ರಾಮಾಯಣವೆಂಬುದು ಥಿಯರಿಗೆ ಸೀಮಿತವಲ್ಲ..
ಅದೊಂದು ಪ್ರಯೋಗಕಾವ್ಯ..
ಪ್ರಯೋಗವೆಂದ ಮೇಲೆ ಪರಿಣಾಮವಿರಲೇಬೇಕಲ್ಲವೇ..?
ಸರಿಯಾಗಿ ಪ್ರಯೋಗಿಸಲ್ಪಟ್ಟಾಗ ಜೀವಗಳ ಮೇಲೆ ಅತ್ಯಂತ ಶುಭವಾದ ಪರಿಣಾಮವನ್ನು ಬೀರಬಲ್ಲ ಕಾವ್ಯವದು..!
ಬದುಕಿನಲ್ಲಿ ‘ರಾಮ’ಗುಣಗಳನ್ನು ತುಂಬಬಲ್ಲ,’ರಾವಣ’ದೋಷಗಳನ್ನು ನಿವಾರಿಸಬಲ್ಲ ಶಬ್ದಾರ್ಥರಸಗಳ ತ್ರಿವೇಣೀಸಂಗಮವದು..!
ರಾಮಾಯಣದ ವಿಷಯ-ವಿನ್ಯಾಸದಲ್ಲಿ ವಿಜ್ಞಾನವಿದೆ..
ಅಕ್ಷರಜೋಡಣೆಯಲ್ಲಿ ವಿಜ್ಞಾನವಿದೆ..
ಉಚ್ಚಾರಣ ಪ್ರಕಾರದಲ್ಲಿ ವಿಜ್ಞಾನವಿದೆ..
ರಾಗ-ತಾಳಗಳ ಸಂಯೋಜನೆ-ಪ್ರಸ್ತುತಿಯಲ್ಲಿ ವಿಜ್ಞಾನವಿದೆ..!
ಮರ್ಮವರಿತು ಪ್ರಯೋಗಿಸಲ್ಪಟ್ಟಾಗ ದಾನವತೆಯಿಂದ ಮಾನವತೆಗೆ..
ಮಾನವತೆಯಿಂದ ಮಾಧವತೆಗೆ ಏರಿಸಬಲ್ಲ ಜೀವನ ಪರಿವರ್ತನೆಯ ಮಹಾಕಾವ್ಯವದು..!
ಕೇವಲ ಟೈಂಪಾಸ್ ಕಾವ್ಯವಲ್ಲ..!
ಯಾವ ಸ್ಥಿತಿಯಲ್ಲಿ (wave length) ರಾಮನು ಬದುಕನ್ನನುಭವಿಸಿದನೋ,
ಆ ಸ್ಥಿತಿ (wave length) ವಾಲ್ಮೀಕಿಗಳಲ್ಲುಂಟಾದಾಗ ತಾನೆ ಅವರಿಗೂ ರಾಮಾಯಣ ದರ್ಶನವಾಯಿತು ..!
ಅದನ್ನು ಲೋಕಮುಖಕ್ಕೆ ಪ್ರಸ್ತುತಪಡಿಸಲು, ಆ ಸ್ಥಿತಿಯನ್ನು (wave length) ತಲುಪಿ ಹಾಡುವವರೇ ಬೇಕಲ್ಲವೇ..?
ಆದರೆ.. ಅಂಥವರೆಲ್ಲಿ. . .? ಎಲ್ಲಿ . . ? ಎಲ್ಲಿ . . ?
ರಾಮಭಾವವನ್ನು ರಾಮನಾದದಲ್ಲಿ, ರಾಮರಾಗದಲ್ಲಿ, ರಾಮತಾಳದಲ್ಲಿ ಹೊರಗೆ ತರಬಲ್ಲ ಕುಶಲರೆಲ್ಲಿ..?
ಅದೋ..ಬಂದರು..ಬಂದರು..
ವಂದಿಸಿಕೊಂಡರು..
ಭಾವ-ರಾಗ-ತಾಳ ಕುಶಲರು…
ಕುಶ-ಲವರು..!
{ಚಿತ್ರಕೃಪೆ: ಅಂತರ್ಜಾಲ }
July 22, 2010 at 6:42 AM
ಹರೇರಾಮ ಗುರುಗಳೇ..
{ ಮೊದಲು ನಿರ್ಮಾಣವಾದದ್ದು ಅವರ ಬುದ್ದಿ-ಹೃದಯಗಳಲ್ಲಿ..! }
ಎಲ್ಲಾ ಯೋಜನೆ, ಯೋಚನೆಗಳೂ ಮೊದಲು ಮನದಾಳದಲ್ಲಿ ಸಿದ್ಧಗೊಳ್ಳುತ್ತವೆ, ತದನಂತರ ಕಾರ್ಯರೂಪದಲ್ಲಿ ಸಿದ್ಧಗೊಳ್ಳುತ್ತದೆಯೆಂಬುದನ್ನು ಸುಂದರ ಬ್ಲಾಗ್ ನೊಂದಿಗೆ ತೋರಿಸಿಕೊಟ್ಟಿರಿ.
ವಾಲ್ಮೀಕಿಯ ಧೀಶಕ್ತಿ ಬಹಳ ದೊಡ್ಡದು. ಬೃಹತ್ ರಾಮಾಯಣವನ್ನು, ಅದರ ಸೂಕ್ಷ್ಮತೆಯನ್ನು ಮನದಲ್ಲೇ ಮನನಮಾಡಿ, ಸಿದ್ಧಪಡಿಸಿ ತದನಂತರ ಹೊರಜಗತ್ತಿಗೆ ಹರಿಯಬಿಟ್ಟವರು. ಮಹಾಕವಿ ವಾಲ್ಮೀಕಿ!
ಈ ಸುಂದರ ಬರವಣಿಗೆಯನ್ನು ಮೊದಲೇ ಮನದಾಳದಲ್ಲಿ ರಚಿಸಿ, ಅನುಭವಿಸಿ, ನಮಗಾಗಿ ಇಲ್ಲಿ ಹರಿಯಬಿಟ್ಟ ಗುರುಚರಣಗಳಿಗಿದೋ…ವಂದನೆ..
~
ಹರೇರಾಮ
July 22, 2010 at 7:41 AM
ಬಣ್ಣಿಲಸದಳ
ಗುರುಗಳೇ, ಬಾಕ್ಸಿ೦ಗಲ್ಲಿ ಸತತ ಹೊಡೆತಗಳನ್ನು ತಿ೦ದು ಬಿದ್ದ ಕಥೆಯಾಗಿದೆ… ಸಧ್ಯಕ್ಕೆ ಅ೦ತರ೦ಗದಲ್ಲಿ ಥಿಯರಿ ನಡೆಯುತ್ತಿದೆಯೇನೊ, ಬಹಿರ೦ಗದಲ್ಲಿ ಏಳುವುದು ಯಾವಾಗಲೊ
.
ರಾಮಚ೦ದ್ರಾಪುರ ಮಠಕ್ಕೆ, ಕುಶ-ಲವರ೦ತ ಅನೇಕ ಭಕ್ತಗುರುಗಳಿಗೆ, ವಾಲ್ಮಿಕಿಗೆ, ರಾಮನಿಗೆ, ನಾರಾಯಣನಿಗೆ ಮೂರು ಕೂಡಿ ನೂರು ಪ್ರಣಾಮಗಳು.
July 22, 2010 at 7:46 AM
ಲ್ಯಾಪಟಾಪಿಗೆ, ಅ೦ತರ್ಜಾಲಕ್ಕೆ, ಕನ್ನಡಕ್ಕೆ, ಹಾರ್ಡವೇರ್ ಸಾಫ಼್ಟವೇರಗೆ, ಅ೦ತರ೦ಗ ಬಹಿರ೦ಗಕ್ಕೆ, ಹರೇರಾಮಕ್ಕೆ, ಶಿಷ್ಯವೃ೦ದದವರಿಗೆ, ರಾಮಚ೦ದ್ರಾಪುರ ಮಠಕ್ಕೆ, ಆದಿ ಶ೦ಕರಾಚಾರ್ಯರಿಗೆ, ಅಶೋಕೆ ಗೋಕರ್ಣಕ್ಕೆ, ಹರನಿಗೆ, ಈ ಕಾಲದೇಶಕ್ಕೆ, ಕುಶ-ಲವರ೦ತ ಅನೇಕ ಭಕ್ತಗುರುಗಳಿಗೆ, ವಾಲ್ಮಿಕಿಗೆ, ಸೃಷ್ಟಿಗೆ, ರಾಮನಿಗೆ, ನರ ನಾರಾಯಣ ತತ್ವಕ್ಕೆ, ನಾರಾಯಣನಿಗೆ ಪ್ರಣಾಮಗಳು…
—ಇನ್ನೂ ಉದ್ದ ಬೆಳೆಸಬಹುದೊ?
July 22, 2010 at 2:12 PM
!!!!!!!!!!!
July 23, 2010 at 8:13 AM
ಗುರುಗಳೇ ಇನ್ನು ಏಳುವುದಕ್ಕೆ ಆಗಿಲ್ಲ, ಗುರುಗಳೇ ಏಳಿಸಬೇಕಷ್ಟೆ
.
ಹೆಚ್ಚು ಬರೆಯುವ & ಓದುವ
http://hareraama.in/members/rnarayana
.
July 22, 2010 at 8:38 AM
ಹರೇ ರಾಮ
ಅದ್ಬುತ. ಹೌದು ಎಲ್ಲ ಯೋಚನೆ ಗಳು ಎಲ್ಲ ಯೋಜನೆ ಗಳು ಸಾಕಾರಗೊಳ್ಳುವುದು ಅಲ್ಲಿ – ಶ್ರೀ ಸಂಸ್ಥಾನದ ಅಂತರಂಗದಲ್ಲಿ. ನಮಗೆಲ್ಲ ಹೊರಗೆ ಅದನ್ನು execute ಮಾಡುವ ಯೋಗ ಸಿಗಲಿ ಎಂಬ ಪ್ರಾರ್ಥನೆಯೊಂದಿಗೆ , ನಮಸ್ಕಾರಗಳೊಂದಿಗೆ, ಪ್ರಸನ್ನ.
July 22, 2010 at 1:33 PM
Hareraam,
Manadalli rama banda mele thane manege bharuvudu?
Manadalli Beti adamele thane manege beti
Manathubisida mele thane Mane thumbisi Kolluuvudi
Mana thumbuvudu thane muKya amelella thane thanaguvudu
Hare raam
July 22, 2010 at 3:55 PM
ಏನು ಬರಿಯಬೇಕೆಂದು ತೋಚಿತ್ತಿಲ್ಲ. ಅಷ್ಟು ಮಂತ್ರಮುಗ್ಧಳಾಗಿದ್ದೇನೆ. ಅದ್ಭುತ.
July 22, 2010 at 3:56 PM
ಹರೇ ರಾಮ.. ‘ಕಾವ್ಯ ಕನ್ನಿಕೆಗಾಗಿ ವರಕಂಠದ ಅನ್ವೇಷಣೆ ‘ ಅದ್ಭುತ !!!! ಮಹಾಕವಿಯ ಮನದ ಕಾವ್ಯಕನ್ನಿಕೆಯನ್ನು ಬಹಿರಂಗ ಜಗತ್ತಿಗೆ ತರಲು ಬೇಕಾದ ವರಕಂಠ !!!! ಲೋಕಕ್ಕೆ ಹಿಂದೆ.., ಇಂದು.., ನಾಳೆ ಅಗತ್ಯವಿರುವ ಈ ಮಹಾಕಾವ್ಯದ ಅಮೃತ ಧಾರೆಯನ್ನು ಮಹಾನ್ ಋಷಿ ವಾಲ್ಮಿಕಿಯಿಂದ ಪಡೆದು.., ನಮ್ಮ ಅಂತರಂಗ ತಿಮಿರವನ್ನು ಕಳೆದು ಜ್ಞಾನ ಜ್ಯೋತಿ ಬೆಳಗುವ ಗುರುಮುಖೇನ ನಮ್ಮ ಅಂತರಂಗದಲ್ಲಿರುವ ‘ರಾವಣ ‘ದೋಷ ನಿವಾರಿಸಿ ‘ರಾಮ’ ಗುಣಗಳನ್ನು ತುಂಬಿಕೊಂಡು ಆತ್ಮೋದ್ಧಾರ ಪಡೆದು ಕೃತಾರ್ಥರಾಗುವ ಸುಸಮಯ… ಉತ್ತರ ಭಾರತದಲ್ಲಿ ಮನೆಗಳಲ್ಲಿ ಏನಾದರೂ ಸಮಸ್ಯೆ ಬಂದರೆ ಅದರ ಪರಿಹಾರಕ್ಕಾಗಿ ವಾಲ್ಮೀಕಿ ರಾಮಾಯಣದ ಮೊರೆ ಹೋಗುತ್ತಾರಂತೆ.. ದೇವರ ಎದುರು ವಾಲ್ಮೀಕಿ ರಾಮಾಯಣದ ಅಕಸ್ಮಾತ್ತಾಗಿ ತೆರೆದ ಯಾವುದಾದರೊಂದು ಪುಟದ, ಯಾವುದಾದರೊಂದು ಶ್ಲೋಕದಲ್ಲಿ ಉತ್ತರ ಸಿಗುತ್ತದೆಂದು ಅವರ ನಂಬಿಕೆ!!! ಆಗಿರಬಹುದಲ್ಲವೇ ಸಂಸ್ಥಾನ..?
ವಾಲ್ಮೀಕಿ ರಾಮಾಯಣ ಧಾರೆ ನಿಮ್ಮಿಂದ ಬಂದು ನಮ್ಮ ಬಾಳು ಬೆಳಗಲಿ ಎಂದು ಕಣ್ಣು, ಮನಸ್ಸು ತೆರೆದು ಕಾದಿರುವೆವು ಗುರುಗಳೇ… ಹರೇ ರಾಮ….
July 27, 2010 at 9:44 PM
ನಾವೂ ಅದಕ್ಕಾಗಿ ಕಾದಿರುವೆವು….
July 22, 2010 at 6:49 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು,
” ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..
ಆಮೇಲೆ ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..
ಎಲ್ಲೆಡೆ ಎದ್ದು ಕಾಣುವ ತಥ್ಯವಿದು.. ”
ಎಷ್ಟು ಸತ್ಯ.. ಇದನ್ನು ಪುಷ್ಟೀಕರಿಸುವ ಉದಾಹರಣೆಯೊಂದು ಇವತ್ತು ನನ್ನ ಅನುಭವಕ್ಕೆ ಬಂತು.
ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕೆಂದು ಹಲವು ದಿನಗಳಿಂದ ಕನಸು ಕಾಣುತ್ತಿದ್ದೆ. ಆದರೆ ಕುಂಭಕರ್ಣ ಏಳಲು ಬಿಡುತ್ತಿರಲಿಲ್ಲ. ಇವತ್ತು ೪.೩೦ ಗೆ ಸರಿಯಾಗಿ ಎಚ್ಚರವಾಯಿತು. ಕುಂಭಕರ್ಣನ ಪ್ರೇರಣೆಯಿಂದ ಮತ್ತೆ ಮಲಗಿದೆ. ಮತ್ತೆ ೬ ಘಂಟೆಗೆ ಎದ್ದು ದಿನಚರಿ ಪ್ರಾರಂಭಿಸಿದೆ. ಹರೇರಾಮ.ಇನ್ ನಲ್ಲಿ ಲೇಖನಗಳನ್ನು ಓದುತ್ತಿದ್ದೆ. ಏನಾಶ್ಚರ್ಯ… “ಮತ್ತೆ ಮತ್ತೆ ಬಂದೆ……ತಂದೇ….! ನೀ ಅಮೃತ ತಂದೆ…!” ಲೇಖನ ಕಣ್ಣಿಗೆ ಬಿತ್ತು. ಓದಿ ಕಣ್ಣಲ್ಲಿ ನೀರು ಬಂತು. ಅಮೃತ ವೇಳೆಯಲ್ಲಿ ನಿತ್ಯ ಜೀವನವನ್ನು ಪ್ರಾರಂಭಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂಬ ದೃಢ ಸಂಕಲ್ಪವನ್ನು ಮಾಡಿದ್ದೇನೆ. ಅನುಗ್ರಹಿಸಿ ತಂದೆ. ಮನ್ನಿಸಿ ಅನುಗ್ರಹಿಸಿ ದಾರಿ ತೋರಿ ಮುನ್ನಡೆಸಿ.
July 27, 2010 at 9:44 PM
ಲೇಖನಿಯು ಸಾರ್ಥಕವಾಗುವುದಿಲ್ಲಿ..!
April 3, 2011 at 1:32 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು….
ಪ್ರಾರ್ಥಿಸುವವನು ನೀನೆ…… ಅನುಗ್ರಹಿಸುವವನು ನೀನೆ….. ಏನಿದು ಲೀಲಾನಾಟಕ…… ಆಟಕನು,ನೋಟಕನು, ಸೂತ್ರಧಾರನು ಎಲ್ಲವೂ ನೀನೆ….
July 23, 2010 at 9:38 AM
ಗುರುಗಳ ಸಾಹಿತ್ಯದ ಲಾಲಿತ್ಯ ಅಪೂರ್ವವಾದುದು.
ಬಳಸಿದ ಪ್ರತಿ ವಾಕ್ಯದ ಪದನಿಧಿ ಅತ್ಯಮೂಲ್ಯವಾದುದು.
ಇದರ ಫಲಶೃತಿಯಂತೂ ಅತಿಶಯವಾದುದು.
ಬರೆದದ್ದೆಲ್ಲವೂ ಆಪ್ತವಾಗಲು ಕಾರಣ
ಅದರೊಳಗಿನ ಹೂರಣ!
ಗುರುಗಳ ನಗುಮೊಗ
ಉತ್ಸಾಹದ ಒರತೆ!
ನಮಗಿನ್ನೆಂದಿಗೂ ಇಲ್ಲ
ಪ್ರೋತ್ಸಾಹದ ಕೊರತೆ.
ಶ್ರೀಗಳ ಅಂತರಂಗದ ಸಂದೇಶವನ್ನು
ವಿಶ್ವರಂಗಕ್ಕೆ ಸಾರೋಣ.
ಗುರುದ್ವಾರದ ಮೂಲಕ
ಹರಿದ್ವಾರವನ್ನು ಸೇರೋಣ.
-ಸುಮನದಿಂದ ನಮನಗಳು-
July 23, 2010 at 10:55 AM
Beautiful
July 23, 2010 at 4:02 PM
superb
July 27, 2010 at 9:41 PM
ಅದೆಷ್ಟು ಸುಂದರವಾದ ಪ್ರತಿಕ್ರಿಯೆ..!
ಇದರೊಳಗಿನ ಅನೇಕ ವಿಷಯಗಳು ಈ ಪ್ರತಿಕ್ರಿಯೆಗೂ ಸಲ್ಲುತ್ತವೆ..!
July 23, 2010 at 4:05 PM
ಅದ್ಭುತ. ಪ್ರೇಮಲತಕ್ಕ, ನಿಂಗೊ ಸುಮುಖಲ್ಲಿ ಬರೆಯಕ್ಕು.
July 23, 2010 at 7:47 PM
ಮನದೊಳಗೆ ಹಲವಾರು ಯೋಚನೆಗಳು ಅಲೆ ಅಲೆಯಾಗಿ ಬರುವಾಗ ಯಾವುದು ಒಳ್ಳೆದು ಯಾವುದು ಕೆಟ್ಟದೆಂಬ ನಿರ್ಧರಿಸಲು ಅಲ್ಲೊಬ್ಬ ಗುರುವಿನ ಅಗತ್ಯ. ಶ್ರೀ ಶೀ ಗಳ ಮನನವೊಂದೇ ಅದಕ್ಕೆ ಸುಗಮ ದಾರಿ.
ಬರೆಯಬೇಕೆಂಬ ತುಡಿತ. ಹಲವಾರು ವಿಚಾರಗಳು. ಯಾವುದೂ ಲೇಖನಿಯಿಂದ ಹರಿಯಲೊಲ್ಲದು. ಇದು ನಮ್ಮ ಪರಿ.
ಏಳು ಕಾಂಡಗಳ ಮಹಾ ಕಾವ್ಯ ವಾಲ್ಮೀಕಿ ಮಹರ್ಷಿಗಳಿಂದ, ಅಲ್ಲಿಯೂ ಮನದಲ್ಲಿ ತುಂಬಿದ ವಿಚಾರ ಧಾರೆ, ಹರಿಯ ಬಿಟ್ಟ ಮೇಧಾ ಶಕ್ತಿ, ಅದ್ಭುತ.
ಶ್ರೀ ಶ್ರೀ ಗಳ ಮನದಲ್ಲಿ, ಶಿಷ್ಯ ಕೋಟಿಗೆ ಉಣಬಡಿಸುವ ಅಂತರಂಗದ ನಿರ್ಧಾರ, ಬಾಹ್ಯ ರೂಪವಾಗಿ ಹೊರ ಹೊಮ್ಮುತ್ತಿದೆ.
ಕೇಳುವ ನಾವೇ ಧನ್ಯರು.
ಹರೇ ರಾಮ
July 23, 2010 at 11:43 PM
ಆರಾಧ್ಯ ದೈವ ಶ್ರೀರಾಮ ಹಾಗೂ ಶ್ರೀ ಗುರುಚರಣಗಳಿಗೆ ವಂದನೆಗಳು.
ರಾಮಾಯಣ ಜಗತ್ತಿನ ಅತ್ಯುತ್ತಮ ಕಾವ್ಯಗಳಲ್ಲೊಂದು.ಭರತಖಂಡ ಮಾತ್ರವಲ್ಲದೆ ಪೂರ್ವದ್ವೀಪಗಳಲ್ಲೂ ಮನೆಮಾತಾಗಿ ಉಳಿದ ಈ ಮಹಾಕಾವ್ಯ ಕೇವಲ ಪುರಾಣವೆನಿಸದೆ ಇತಿಹಾಸ ಎನಿಸಿಕೊಂಡಿದೆ.’ಹೀಗಿತ್ತು’ಎಂಬುದೇ ಇತಿಹಾಸವಂತೆ.
ಪ್ರಬಲ ಇಂಧನವೊಂದರ ಸಂಗ್ರಹದ ಬಳಿ ಕಿಡಿ ಸಂಚರಿಸಿದರೆ ಸಿಡಿದು ಅಪಾರ ಶಕ್ತಿ,ಬೆಳಕು,ಶಬ್ದಗಳು ಹೊರಟು ದೂರ ದೂರದ ತನಕ ಹರಡುವುದನ್ನು ಕಂಡಿದ್ದೇವೆ.ತನ್ನನ್ನೇ ಮರೆತು,ತನ್ನ ಸುತ್ತ ಹುತ್ತ ಬೆಳೆದುದನ್ನು ಲೆಕ್ಕಿಸದೆ ದೀರ್ಘಕಾಲ ರಾಮನಾಮ ಸ್ಮರಣೆ,ರಾಮಧ್ಯಾನಗಳಿಂದ ವಾಲ್ಮೀಕಿ ಮಹರ್ಷಿಗಳಲ್ಲಿ ಸಂಚಯಗೊಂಡ ಕ್ರತು ಶಕ್ತಿ,ಬೇಡನೊಬ್ಬ ಕ್ರೌಂಚ ಮಿಥುನಗಳಲ್ಲೊಂದನ್ನು ಬಾಣದಿಂದ ಹೊಡೆದುರುಳಿಸಿದಾಗ ತನ್ನ ಸಂಗಾತಿಯನ್ನು ಕಳೆದುಕೊಂಡ ಪಕ್ಷಿಯ ಚೀರಾಟ ಎಬ್ಬಿಸಿದ ತಳಮಳ ಶ್ಲೋಕರೂಪದ ಶಾಪ ಅವರ ಬಾಯಿಂದ ಹೊರಬರುವಂತೆ ಮಾಡಿ,ನಾರದ ಮಹರ್ಷಿ ಹಾಗೂ ಬ್ರಹ್ಮರ ಪ್ರೋತ್ಸಾಹದಿಂದ ಕಾವ್ಯರೂಪ ಪಡೆಯಿತು.ಗುರುಗಳ ಕೃತಿಯನ್ನು ಹಾಡಲು ಕುಶ-ಲವರಂಥಹ ಶಿಷ್ಯರಿಗಿಂತ ಬೇರಾರು ಇರಲು ಸಾಧ್ಯ? ತಂದೆ-ತಾಯಿಗಳ ಗುಣಗಾನಕ್ಕೆ ಮಕ್ಕಳಾಗಿ,ಗುರುವಿನ ಕೃತಿಯನ್ನು ಬೆಳಕಿಗೆ ತಂದ ಶಿಷ್ಯರಾಗಿ ಬೆಳಗಿದ ಕುಶ-ಲವರು ವಾಲ್ಮೀಕಿಗೆ ಸಾಕುಮಕ್ಕಳೂ,ಶಿಷ್ಯರೂ ಆಗಿ ಬೆಳಗಿದವರು.
ವಂದನೆಗಳೊಂದಿಗೆ ಅಭಿನಂದನೆಗಳು….
July 24, 2010 at 9:09 AM
ಹಾಲ್ಗಡಲ ವಿಹಾರಿ ಹರಿ….
ಹರಿಯೆ, ನ್ನಿನ್ನ೦ತರ೦ಗದ ತರ೦ಗಗಳು ಅಡೆತಡೆ ಇಲ್ಲದೆ ನನ್ನ೦ತರಗದೊಳು ಹರಿಯುವ೦ತೆ ಹರಸೊ..
ಅ೦ತರ೦ಗ ಪರಮಾತ್ಮನ ನರ್ತನವ ಬಹಿರ೦ಗ ಸೃಷ್ಟಿಯೊಳು ತೋರ್ಪಡಿಸಲು ಬಣ್ಣಿಸಲಸದಳ ಸೌ೦ದರ್ಯ ಸಾಧನಗಳು ನಮಗೆ..
ಮನದ ಪರದೆ ಶುಭ್ರವಿದ್ದರೆ, ಪರಮಾತ್ಮನ ಅ೦ತರ೦ಗದ ಸಹಜ ಸತತ ಸ್ವರ್ಣ ವರ್ಣ ಸುವರ್ಣ ಚಿತ್ರಗಳು ಪರದೆಯ ಮೇಲೆ..
ಬಹು-ಬಹಿರ೦ಗವೇ ಬೇಡವೆನಿಸಿ, ಸದಾ ಅ೦ತರಬಹಿರ೦ಗದಲೇ ಮುಳುಗುವ ಸೆಳೆತ, ಮಧುವ ಮಧುಮತಿಯರ ಮತ್ತನ್ನು ಮರೆಸುವ ಪರಮಾತ್ಮನ ಮುತ್ತಿನ ಸ್ಪರ್ಶದ ಮತ್ತು..
ನಮ್ಮ೦ತರಗದೊಳು ಮಬ್ಬು ಮಬ್ಬು ಮಸುಕು ಮಸುಕು ಎಳೆ ಎಳೆ ಪದರ ಪದರ ಧೂಳು ಧೂಳು…
ಚೊಕ್ಕ ಮಾಡಿದರೆ, ಅ೦ತರ೦ಗ ಬಹಿರ೦ಗವೆರಡರ ಅದ್ವೈತ. ಅದ್ವೈತವಾದ ಮೇಲೆ ಮತ್ತೇನಿದೆ.
ಮತ್ತೇಕೆ ಆನ೦ದದ ಹುಡುಕಾಟ ಹಾಲ್ಗಡಲ ವಿಹಾರಿ ಹರಿಯ ಸ೦ಗವಾದ ಮೇಲೆ.
ಪ್ರಲಯವಾದ ಮೇಲೆ ಅದು ಶಿವನ ಸ೦ಗವಲ್ಲವೆ, ಶಿವನ೦ಗವಲ್ಲವೆ, ಶಿವತತ್ವದೊಡನೆ ಪ್ರಣಯವಲ್ಲವೆ, ಶಿವನಲ್ಲವೆ
July 24, 2010 at 9:24 AM
“ಈ ಪರಿ ನೋಡುವುದೇ…ಪರಿವಾರವ..?” ಲೇಖನಕ್ಕೆ, ಮಧು ಅವರು ಬರೆದ ಈ ಕೆಳಗಿನ ಕಾಮೆ೦ಟ್ ಭಾಗದ ಅಕ್ಷರ ಅಕ್ಷರ ಪರಿಚಯ ನಮಗಾಗುತ್ತಿದೆ. ಹೌದು, ಅ೦ತರ೦ಗದ ಮಾತು ಬ೦ದಿರಬೇಕಾದರೆ, ಏನು ಮಾತಾಡುವುದು. ಖಾಲಿಯಾದ ಮೇಲೆ ಪೂರ್ಣವಾದ ಮೇಲೆ ಬಹಿರ೦ಗ ಕೆಲಸವೇನು? ಮಧು ದೊಡ್ಡೆರಿಯವರು ಹಾಗು ಇನ್ನೂ ಹಲವಾರರ ಕಥೆ ಇದೆ ಆಗಿದೆ ಎನ್ನಿಸುತ್ತದೆ. ಆದರೂ, ತಲೆಯ ಮೇಲೆ ನೀರು ಹಾಕಿಕೊ೦ಡು, ಬಹಿರ೦ಗದೊಳು ಏನಾದರು ಬರಸುವ ಬರೆಸುವ ಪ್ರಯತ್ನ ಮಾಡುವ.
[ http://hareraama.in/blog/ee-pari-noduvude-parivarava/
“ನಿನ್ನೆಯೇ ಈ ಲೇಖನ ಓದಿದ್ದೆ… ಪ್ರತಿಯಾಗಿ ಎನಾದರೂ ಬರೆಯಬೇಕೆನ್ನಿಸಿತ್ತು… ಆದರೆ.. ಇಲ್ಲಿಯವರೆಗೂ ಪರಿಸ್ಥಿತಿ ಹೇಗಿತ್ತೆಂದರೆ…
ಕುಡುಕರು ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಕುಡಿಸಿದರೆ ಹೆಚ್ಚು ಮಾತನಾಡುತ್ತಾರಂತೆ.
ಅದಕ್ಕಿಂತ ಸ್ವಲ್ಪ ಜಾಸ್ತಿ ’ಹಾಕಿಸಿ’ದರೆ ಆಮೇಲೆ ಬರಿ ತೊದಲು..ಬಡಬಡಿಕೆ
ಇನ್ನೂ ಜಾಸ್ತಿಯಾಯಿತೋ… ಮಾತಿಲ್ಲ, ಕತೆಯಿಲ್ಲ. ಬರಿ ಉಧ್ಗಾರಗಳಷ್ಟೆ!
ಅವರದೇ ಭಾಷೆಯಲ್ಲಿ ಹೇಳುವುದಾದರೆ ‘ಅವರು FLAT’!
(ನೈಚ್ಯೋಪಮೆಗಾಗಿ ಕ್ಷಮೆ ಇರಲಿ)
ಇಷ್ಟು ದಿನಗಳ ಬ್ಲಾಗ್ ಎಂಬ ಅಮೃತ ನಮ್ಮ ಸಾಮರ್ಥ್ಯಕ್ಕಿಂತ ಜಾಸ್ತಿಯೇ ಇದ್ದರೂ ಅಲ್ಪ ಸ್ವಲ್ಪ ತೊದಲು ಹಾಗೂ ಹೀಗೂ ಹೊರಡುತ್ತಿತ್ತು.
ಆದರೆ ಈ ಬ್ಲಾಗಿಗೆ ಮಾತ್ರ…NO COMMENTS! ಪೂರಾ ಪೂರಾ FLATTT…
ಪ್ರತಿಮಾತಿಲ್ಲ… ಹೃತ್ಕೋಣೆಯಲಿ ದಿವ್ಯಗಾನ.. ಗಾಢ ಮೌನ!”
]
July 24, 2010 at 3:46 PM
“ಪ್ರತಿಮಾತಿಲ್ಲ… ಹೃತ್ಕೋಣೆಯಲಿ ದಿವ್ಯಗಾನ.. ಗಾಢ ಮೌನ!”
ಅಷ್ಟೆ!
July 25, 2010 at 7:00 PM
ಪೂರ್ಣ ನ್ಯಾಸ ಜ್ಞಾನ ವ್ಯಾಸ – ಪೂರ್ಣಿಮೆಯ ತು೦ಬು ಬೆಳದಿ೦ಗಳ ಕಿರಣ ಧಾರೆಯಲಿ ಮಿ೦ದು ಕಾ೦ತಿಗೊಳ್ಳಲು ತವಕಿಸುತಿರುವ ಜ್ಞಾನಾ೦ಕಾ೦ಕ್ಷಿಗಳಾರ್.. ಕಿರಣದ್ವಾರದ ಬಳಿ ನಿ೦ದು ಕುಣಿ ಕುಣಿದ ನಲಿಯಚ್ಚಿಸುವ ಕುಮಾರ-ಕುಮಾರಿಯರದಾರ್..
ನಿತ್ಯ ಉರಿಯನೆ ಉಗುಳುತ್ತ ಸುಡುವವ, ಚ೦ದ್ರನೊಡನೊ೦ದಾಗಿ ತ೦ಪು ತ೦ಪಾಗಿ ಕ೦ಪು ಕಸ್ತೂರಿ ಕಿರಣಗಳ ಎರಚುವ ಸೂರ್ಯನಿಗೆ ನಾರಾಯಣ ನೀಡಿದ ಪಾಠವ ಅರಿಯಲು ಗುರುವನು ಅರಸುತ್ತಾ ಅಲೆಯುತಿರುವ ಶಿಷ್ಯರಾರ್..
.
ವ್ಯಾಸರ ಅ೦ತರದೃಷ್ಟಿಯ ಸೆಲೆಯಿ೦ದ ಬಹು ಜೀವಿಗೆ ಪ್ರಾಣ, ಬಹು ಪ್ರಾಣಿಗೆ ಜೀವ..
ಬತ್ತದ ಸೆಲೆಯ ಕೊಳದಲು ಹುಣ್ಣಿಮೆಯ ಪ್ರತಿಬಿ೦ಬ ಮೂಡಿರಲು ಚುಕ್ಕಿಯೊಡ ಸರಸವಾಡುತ್ತ ಚಿತ್ತಾರ ಬಿಡಿಸಿ ಸೆಲೆಯಲಿ ತೇಲ್ಬಿಟ್ಟು ಚ೦ದ್ರಮನಿಗೆ ದಿಕ್ಕು ತಪ್ಪಿಸಿ ಗುರುನೆರಳೊಲು ನಿ೦ದು ನಗುವ ಜ್ಞಾನರಸಿಕ ಶಿಷ್ಯನ ಕ೦ಡು ತ೦ಗಾಳಿ ತಾ ಸೃಷ್ಟಿಯ ಮಗಳೆ೦ದು ಬೀಗುತ್ತ ತನಗರಿವಿಲ್ಲದೆ ತೇಲಿಸಿರುವ ಅಲೆಯ ರಭಸದೊಳು ಕಣ್ಮನ ಮುಚ್ಚಿ ನಿರ್ಮಲನಾದ ವ್ಯಾಸ ಹುಣ್ಣಿಮೆಯೊಳು..
.
ಸಾಗರದಲೆಗಳು ಪೌರ್ಣಮಿಯ೦ದು ನಿನ್ನನ್ನು ಸೇರಲು ಮೇಲೇರುತ್ತಿವೆ, ನೀ ಕಾಣುತಿಹೆ.. ನಡುವಲ್ಲಿ ನಾ ಎರಡೂ ಕೈಗಳ ಮೇಲೆತ್ತಿರುವೆ, ನೀ ಎನ್ನ ಕಾಣಲೊಲ್ಲೆ..
ಪರಮಾತ್ಮ ದಯೆತೋರೊ, ಗುರುವಾಗೊ, ಕೈ ನೀಡೊ.
July 27, 2010 at 9:39 PM
ಭಾವಪೂರ….!
July 26, 2010 at 12:23 PM
practical ತುಂಬಾ ಮುಖ್ಯ..ಜೊತೆಗೇ theory ಕೂಡ. ಎಲ್ಲ ವಿಚಾರದಲ್ಲೂ, ಎಲ್ಲ fieldಲ್ಲೂ ಇದು ಸರಿಯೆನಿಸುತ್ತೆ 🙂
July 26, 2010 at 1:39 PM
ಹರೇರಾಮ
ಈ ಮೇರುಕೃತಿ ಯಾವುದೇ ಲಿಪಿಯ ಸಹಾಯವಿಲ್ಲದೆ ಮುನಿಯ ಮನದಲ್ಲಿಯೇ ರಚಿತವಾಯಿತೆಂದರೆ ಆ ಮೇಧಾಶಕ್ತಿ
ಅದೆಂಥದ್ದಿರಬೇಕು..!
ಆ ಮೇಧಾ ಶಕ್ತಿಗೆ ಪ್ರಣಾಮಗಳು ,
ರಾಮಾಯಣ ಓದುವಾಗ ,ಕೇಳುವಾಗ ಇರುವ ಮನಸ್ತಿತಿ ,ಆಮೇಲೆ ದೂರವಾಗುತ್ತದೆ
wave length ಯಾವಾಗಲೂ ಕಾಪಾಡಿಕೊಳ್ಳುವ ಬಗೆ ಹೇಗೆ ?
July 27, 2010 at 9:37 PM
ಶ್ರವಣವು ಮನನದಲ್ಲಿ, ಮನನವು ನಿಧಿಧ್ಯಾಸನದಲ್ಲಿ ಪರ್ಯವಸಾನಗೊಂಡರೆ ಅದು ಸಾಧ್ಯ..!
ತುಂಬು ಪ್ರೀತಿಯಿಂದ ಕೇಳಿದ್ದು ತಾನಾಗಿಯೇ ಮನನವಾಗುವುದು…
ಚೆನ್ನಾಗಿ ಮನವಾದದ್ದು ತಾನಾಗಿ ಧ್ಯಾನವಾಗಿ ಪರಿವರ್ತನೆಯಾಗುವುದು…
ಅದಾದ ಮೇಲೆ ಮತ್ತೇನಿದೆ..?
ಯಾವುದಕ್ಕೂ ‘ಪ್ರೀತಿ’ ಬೇಕು….
July 26, 2010 at 2:23 PM
ಹರೇರಾಮ.. ರಾಮಾಯಣದ ಬಗ್ಗೆ ಹಲವಾರು ಪುಸ್ತಕಳಿವೆ, ಆದರಲ್ಲಿ ಅರ್ಥ,ಸ್ವಲ್ಪ ಮಟ್ಟಿಗೆ ಭಾವ ಇರುವುದು. ಆದರೆ ಸಂಸ್ಥಾನದ ನಿರೂಪಣೆ ಅದೆಷ್ಟು ಭಾವಪೂರ್ಣ!!!!!ಮನಸ್ಸು ಮೌನವನ್ನು ಬಯಸುತ್ತದೆ..
July 27, 2010 at 9:38 PM
ಶಮನವೆಂದರೆ ಅದುವೇ..!
July 27, 2010 at 9:43 PM
ಪದಗಳಿಲ್ಲ ಲತಾ…!
July 30, 2010 at 1:00 PM
||Hareraama||
I had received Shribharathi guruvani during last chaturmasa, which reads
” Every sinful act of violence is sown and grown in d minds of men before they execute them. We have to nip them at this stage-Shri Samstana”.
Are there any similarities? Please guide.
August 2, 2010 at 12:05 AM
Samsthana antharangadalli Kavi ;bhahirangadalli Guru;
Raghavanollu Valmikiyo? Valmikiyollu Raghavano?
Olla Hora elli? Eradu onde Advaitha….
Harerama
August 2, 2010 at 1:46 PM
ರಾಮಾಯಣವೆಂಬ ಸುಂದರ ಕಾವ್ಯಕನ್ಯೆಯ ಸ್ವಯಂವರಕ್ಕೆ ಬಾರದಿರುವನೇ ವರ ಸಿರಿಕಂಠ ಕುಶಲದಿ.
ರಾಮನ ಕಥೆಯನ್ನು ರಾಮನೇ ಹಾಡಿದರೆ!!!!!…………….. ಅದೇ ಅಲ್ಲವೇ ಆದದ್ದು……….
ಆತ್ಮಾವೈ ಪುತ್ರನಾಮಾಸಿ!!!
ಅಜಾಯಮಾನೋ ಬಹುದಾ ವಿಜಾಯತೇ………..
July 5, 2013 at 7:07 PM
ಹರೇರಾಮ.
“ಮಹಾಮಾನವರ ಮಸ್ತಿಷ್ಕದಲ್ಲಿ ಮೂಡಿಬರುವ ಯೋಜನೆಗಳಲ್ಲವೇ ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿಬರುವುದು!?”
ಮಹಾಸ್ವಾಮಿಗಳ ಮಸ್ತಿಷ್ಕದಲ್ಲಿ ಮೂಡಿಬರುವ ಯೋಜನೆಗಳನ್ನು (ಎಲ್ಲ ವಿಭಾಗಗಳೊಡಗೂಡಿ) ಕಾರ್ಯರೂಪಕ್ಕೆ ತರುವುದೀಗ ನಮ್ಮ (ಯೋಜನಾ ವಿಭಾಗದ) ಗುರಿಯಾಗಬೇಕಿದೆ. ……ಕೈ ಹಿಡಿದು ನಡೆಸೆನ್ನನು.
ಕಾರ್ಯದರ್ಶಿ – ಯೋಜನ.
July 5, 2013 at 8:43 PM
ಸಾಗೋಣ ಜೊತೆಯಾಗಿ………ಬೆಳಕಿನೆಡೆಗೆ…
July 6, 2013 at 10:52 PM
ಪ್ರಭೂ..
ಗುರುಗಳನ್ನು E-ಮಠದಲ್ಲಿ ಮತ್ತೆ ಕಂಡು ತುಂಬ ಖುಶಿಯಾಯಿತು ಃ)