ನಮ್ಮವರೆನಿಸಿಕೊಂಡೂ ನಮ್ಮವರಾಗದವರಿದ್ದಾರೆ!
ಹುಟ್ಟು ಭಾರತದಲ್ಲಿ; ಬದುಕು ಭಾರತದಲ್ಲಿ; ಅಶನ-ವಸನ-ವಿದ್ಯೆ-ವೈಭವಗಳು ಭಾರತದಿಂದ; ಸತ್ತರೆ ಸಕಲ ಸರಕಾರಿ ಗೌರವಗಳ ಜೊತೆಗೆ ಸುಡುವುದು/ಹೂಳುವುದೂ ಭಾರತದ ಮಣ್ಣಿನಲ್ಲಿಯೇ; ಆದರೆ ನಿಷ್ಠೆ ಮಾತ್ರ ಭಾರತದ ಶತ್ರುಗಳಿಗೆ!
ಇಂಥವರು ಈ ದೇಶದಲ್ಲಿ ಮೊದಲೂ ಇದ್ದರು; ಈಗಲೂ ಇದ್ದಾರೆ!
ನಮ್ಮವರಲ್ಲದೆಯೂ ನಮ್ಮವರಿಗಿಂತ ಹೆಚ್ಚು ನಮ್ಮವರಾದವರಿದ್ದಾರೆ. ದೇಹವಿತ್ತ ದೇಶವಾವುದೋ, ಮೊದಲು ಮಾತನಾಡಿದ, ತೊದಲು ಮಾತನಾಡಿದ ಮಾತೃಭಾಷೆ ಯಾವುದೋ, ಜನಿಸಿದ ಜನಾಂಗವಾವುದೋ, ಆದರೆ ಆದರ್ಶದ ಸೆಳೆತಕ್ಕೆ ಒಳಗಾಗಿ ಈ ದೇಶಕ್ಕೆ ಬಂದು, ಇಲ್ಲಿಯ ಜನರೊಂದಿಗೆ ಒಡನಾಡಿ, ಈ ನೆಲದ ಆತ್ಮಾಭಿಮಾನಕ್ಕಾಗಿ ಹೋರಾಡಿ, ಇಲ್ಲಿಯ ದುಃಖಿತರ-ದುರ್ಬಲರ ಸೇವೆಗೆ ಜೀವ ತೇಯ್ದು, ಕೊನೆಗೆ ಭಾರತವಾಸಿಗಳ ಬಾಳನ್ನು ಬೆಳಗುವ ಬತ್ತಿಯಾಗಿ ತಮ್ಮ ಬದುಕನ್ನೇ ಉರಿಸಿದವರಿದ್ದಾರೆ! ಇಂಥವರ ಪಂಕ್ತಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಭಗಿನಿ ನಿವೇದಿತಾ ಎಲ್ಲೋ ಜನಿಸಿದರೂ, ಹೆಸರಿಗೆ ತಕ್ಕಂತೆ ದೇವರಿಗೂ, ದೇವರ ದೇಶವಾದ ಭಾರತಕ್ಕೂ ನಿವೇದನೆಗೊಂಡ ದಿವ್ಯಾತ್ಮಸುಮ.
ಭಾರತಕ್ಕೆ ಅನನ್ಯ ಸೇವೆಗೈದ ಆಕೆ ತಾನು ಜನಿಸಿದ ದೇಶಕ್ಕೆ ದ್ರೋಹವೇನೂ ಬಗೆಯಲಿಲ್ಲ. ಒಂದೆಡೆ ಒಳಿತು ಮಾಡಬೇಕೆಂದರೆ ಇನ್ನೊಂದೆಡೆ ಕೆಡುಕು ಮಾಡಬೇಕೆಂದೇನೂ ಇಲ್ಲ!
ಹಾಗೆ ನೋಡಿದರೆ ನಿವೇದಿತಾ ಎಂದೂ ಪರಕೀಯಳಾಗಿರಲಿಲ್ಲ! ಏಕೆಂದರೆ ಸನಾತನ ಧರ್ಮಕ್ಕೆ ಯಾರೂ ಪರಕೀಯರಲ್ಲ! ಧರೆಯ ಸಕಲ ಜೀವಗಳ ಸಹಜ ಧರ್ಮವಿದು; ಮಾನವಮಾತ್ರರ ಮೂಲಧರ್ಮವಿದು! ಆದುದರಿಂದಲೇ ಆಕೆಯ ಗುರುವಾದ ವೀರಸನ್ಯಾಸಿ ವಿವೇಕಾನಂದರು ಆಕೆಯನ್ನು ಸನಾತನ ಧರ್ಮದ ಪವಿತ್ರ ಪರಿಧಿಯಲ್ಲಿ ಪ್ರವೇಶಗೊಳಿಸುವಾಗ ಮತಾಂತರದ ಪ್ರಕ್ರಿಯೆಯನ್ನು ನಡೆಸಲಿಲ್ಲ!
ಇಸ್ಲಾಮಿಗೆ ಮತಾಂತರಗೊಳ್ಳಲು ಆ ಮತದಲ್ಲಿ ವಿಧಿಗಳಿವೆ; ಕ್ರೈಸ್ತಮತಕ್ಕೆ ಮತಾಂತರಗೊಳ್ಳಲು ಅಲ್ಲಿ ವಿಧಿಗಳಿವೆ; ಬೌದ್ಧ-ಜೈನಮತಗಳಲ್ಲಿ ಮತಾಂತರದ ವಿಧಿವಿಧಾನಗಳಿವೆ; ಆದರೆ ಸನಾತನ ಧರ್ಮದಲ್ಲಿ / ಪುರಾತನ ಭಾರತದಲ್ಲಿ ಮಾತ್ರ ಹಾಗೊಂದು ವಿಧಾನವೇ ಇರಲಿಲ್ಲ!
ಏಕಿಲ್ಲ?
ಏಕೆಂದರೆ ಸನಾತನ ಧರ್ಮಕ್ಕೆ ಮರಳಲು ಅದಾವುದರ ಅಗತ್ಯವೇ ಇಲ್ಲ! ಧರ್ಮವನ್ನು ಅರಿತುಕೊಂಡು, ಹಾಗೆ ಬದುಕಲು ಆರಂಭಿಸಿದರಾಯಿತು! ಮನೆಗೆ ಮರಳಲು ವಿಧಿವಿಧಾನಗಳು ಬೇಕಿಲ್ಲ; ಇನ್ಯಾರದೋ ಮನೆಗೆ ಹೋದರೆ ಸ್ವಾಗತ-ಸತ್ಕಾರ-ಪರಿಚಯ-ಕುಶಲಪ್ರಶ್ನೆಗಳ ಕ್ರಮಗಳಿವೆ. ಇನ್ಯಾರ ಮನೆಗೆ ಹೋದರೂ “ಏನು ಬಂದೆ? ಏನಾಗಬೇಕಿತ್ತು?” ಎಂಬ ಪ್ರಶ್ನೆಗಳು ಬರುತ್ತವೆ; ಆದರೆ ಮನೆಗೆ ಬಂದಾಗ ಮಾತ್ರ ಎಂದೂ ಈ ಪ್ರಶ್ನೆಗಳೂ ಬರುವುದಿಲ್ಲ, ಸ್ವಾಗತ ಸತ್ಕಾರ ಮೊದಲಾದ ಕ್ರಮಗಳೂ ಇಲ್ಲ. ಏಕೆಂದರೆ ಅದು ಮನೆ; ಅದು ಸಹಜತೆ.
ಸನಾತನ ಧರ್ಮವೊಂದೇ ಧರ್ಮ; ಮತ್ತೆಲ್ಲವೂ ಮತಗಳು. ಮತವೆಂದರೆ ಅಭಿಮತ; ಆಯಾ ಮತಗಳ ಪ್ರವರ್ತಕರ ಅಭಿಮತವದು. ಧರ್ಮವೆಂದರೆ ಸಹಜತೆ. ಅದು ಯಾರೋ ಒಬ್ಬರ ಅಭಿಪ್ರಾಯವಲ್ಲ; ಆದೇಶವಲ್ಲ; ಯಾವುದೋ ಒಂದು ಗುಂಪಿನ ಪರಸ್ಪರ ಒಡಂಬಡಿಕೆಯಲ್ಲ; ಅದು ಬೇರೆ ಬೇರೆ ಕಾಲ-ದೇಶಗಳಲ್ಲಿ ಉದಿಸಿದ ಮಹಾಮನೀಷಿಗಳು ಕಂಡುಕೊಂಡ, ನಿಸರ್ಗಕ್ಕೆ ಅತ್ಯಂತ ಹತ್ತಿರವಿರುವ, ಪರಮೋತ್ಕೃಷ್ಟವಾದ ಜೀವನವಿಧಾನ.
ಅಗ್ನಿಗೆ ಉರಿಯುವುದು ಧರ್ಮ; ನೀರಿಗೆ ಹರಿಯುವುದು ಧರ್ಮ; ಸೂರ್ಯನಿಗೆ ಬೆಳಗುವುದು ಧರ್ಮ; ಗಾಳಿಗೆ ಬೀಸುವುದು ಧರ್ಮ; ಹಾಗೆಯೇ ಮಾನವನಿಗೂ ಅವನ ಸಹಜತೆಯೇ ಧರ್ಮ; ತನ್ನ ಮೂಲಸ್ವರೂಪ-ಸ್ವಭಾವಗಳಲ್ಲಿ ನೆಲೆ ನಿಲ್ಲುವುದು ಧರ್ಮ; ಆನಂದವು ಅವನ ಮೂಲಸ್ವರೂಪ; ಅದನ್ನು ತನ್ನ ಸುತ್ತ ಚೆಲ್ಲುವುದೇ ಅವನ ಮೂಲಸ್ವಭಾವ; ಆನಂದ ತುಂಬಿ, ಆನಂದ ಚೆಲ್ಲಿ, ಬದುಕಲು ಮಾಧ್ಯಮವಾಗುವ, ಮಾನವತೆಯ ಪರಿಪೂರ್ಣತೆಯ ಸ್ಥಿತಿ ಧರ್ಮ; ಆ ಸ್ಥಿತಿಯನ್ನು ಗಳಿಸಿಕೊಳ್ಳಲು ಸಾಧನವಾಗುವ ಜೀವನವಿಧಾನವೇ ಧರ್ಮ.
ಮಾನವನು ತನ್ನ ಸಹಜತೆಗೆ ಮರಳಲು ಸಾಧನವಾಗುವ ಜೀವನವಿಧಾನವನ್ನು ಭಾರತದ ಅನೇಕ ಮನೀಷಿಗಳು ಕಂಡುಕೊಂಡರು; ಕಾಲ ಸರಿದಂತೆ ಸರಿದಂತೆ ಅದು ಸತ್ಯವೆಂಬುದು ಖಚಿತವಾಯಿತು. ಏಕೆಂದರೆ ಭಾರತವರ್ಷದ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಕಾಲಘಟ್ಟಗಳಲ್ಲಿ, ಬೇರೆ ಬೇರೆ ಜನಾಂಗ-ವಯಸ್ಸು-ಲಿಂಗ-ಅಂತಸ್ತು-ಸ್ವಭಾವಗಳಿಗೆ ಸೇರಿದ ಸಾಧಕರು ಸಾಧನೆಯ ಉತ್ತುಂಗ ಶೃಂಗವನ್ನೇರಿ ಕಂಡುಕೊಂಡ ಜೀವನವಿಧಾನವು ಒಂದೇ ಆಗಿತ್ತು, ಮತ್ತು ಅದೇ ಆಗಿತ್ತು! ಸನಾತನ ಧರ್ಮವು ಸತ್ಯ ಎಂಬುದಕ್ಕೆ ಇದಕ್ಕಿಂತ ಬೇರೆ ಪ್ರಮಾಣವೇ ಬೇಡ. ಅದು ಒಂದು ವ್ಯಕ್ತಿಯ ಅಭಿಮತದ ಮೇಲೆ, ಯಾವುದೋ ಒಂದು ಗ್ರಂಥದ ಮೇಲೆ ನಿಂತಿಲ್ಲ. ಹಲವರು ಹಲವು ಕಾಲದಲ್ಲಿ ಸಾಧಿಸಿ, ಸಂಧಿಸಿದ ಒಂದೇ ಸತ್ಯವದು!
ಒಂದು ವಿಷಯದಲ್ಲಿ ನಿಷ್ಕರ್ಷೆಗೆ ಬರಲು ವಿಜ್ಞಾನವು ಅನುಸರಿಸುವ ವಿಧಾನವಾದರೂ ಇದುವೇ ಅಲ್ಲವೇ? ಹಲವಾರು ಬಾರಿ ಪರಾಮರ್ಶೆಗೆ ಒಳಪಡಿಸಿದಾಗ ಅದೇ ಫಲಿತಾಂಶವೇ ಬಂದರೆ ವಿಜ್ಞಾನವು ಅದನ್ನು ಸತ್ಯವೆಂದು ನಂಬುತ್ತದೆ. ಸನಾತನ ಧರ್ಮದ ನಿಶ್ಚಯಗಳೆಲ್ಲವೂ ಬಂದಿರುವುದು ಇದೇ ರೀತಿಯಲ್ಲಿಯೇ. ಅಂದ ಮೇಲೆ ಸನಾತನ ಧರ್ಮವು ವೈಜ್ಞಾನಿಕ ಪದ್ಧತಿಗಳಿಂದ ಸಿದ್ಧವಾದ ಜೀವನವಿಧಾನವೆಂಬುದು ನಿಶ್ಚಯವಲ್ಲವೇ? ಅಸಂಖ್ಯ ಚೇತನರ ಅನಂತ ತಪಸ್ಯೆ-ಅನ್ವೇಷಣೆಗಳ ಫಲವಾದ ಈ ಬೆಳಕಿನ ಸಂಸ್ಕೃತಿಯು ಎಲ್ಲರಿಗೂ ಲಭ್ಯವಾಗಬೇಡವೇ!?
ಹಾಗೆ ಮನೆಗೆ ಮರಳಿದ ಮಗಳು ನಿವೇದಿತಾ. ಆಕೆಯೆಂದೂ ಪರಕೀಯಳಲ್ಲ. ಏಕೆಂದರೆ ಸನಾತನ ಧರ್ಮಕ್ಕೆ ಯಾರೂ ಪರಕೀಯರಲ್ಲ! ಮಾನವರು ಮಾತ್ರವಲ್ಲ, ಪ್ರಾಣಿ-ಪಕ್ಷಿಗಳು, ತರು-ಲತೆ-ಗುಲ್ಮಗಳು, ಕ್ರಿಮಿ-ಕೀಟಗಳು, ಹೆಚ್ಚೇನು- ಜಡವಸ್ತುಗಳೂ ಸನಾತನ ಧರ್ಮದ ಛತ್ರಚ್ಛಾಯೆಗೆ ಒಳಪಟ್ಟಿವೆ. ಸಮಸ್ತ ಸೃಷ್ಟಿಯೇ ಸನಾತನ ಧರ್ಮದ ಅಂಗಳ! ಆದುದರಿಂದಲೇ ಸನಾತನ ಧರ್ಮದಲ್ಲಿ ಬದುಕಲು ಸರ್ವರಿಗೂ ಹಕ್ಕಿದೆ! ಸೂರ್ಯನ ಬೆಳಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ನೀರಿನ ತಂಪಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ಭೂಮಿಯ ಬದುಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ ಅವರೆಲ್ಲರಿಗೂ ಸನಾತನ ಸಂಸ್ಕೃತಿಯಲ್ಲಿ ಹಕ್ಕಿದೆ. ಉದಾಹರಣೆಯಾಗಿ ಬಂದವಳು ಭಾರತೀಯರೆಲ್ಲರ ಭಗಿನಿ ನಿವೇದಿತಾ!
“ಒಡಹುಟ್ಟಿದ ಅಣ್ಣನಾದರೇನು, ಧರ್ಮದ್ರೋಹಿಯಾದ ಮೇಲೆ ಅವನು ಶತ್ರುವೇ; ಶತ್ರುವಾಗಿ ದೇಶವನ್ನು ಮುತ್ತಿದರೇನು, ಧರ್ಮಾತ್ಮನಾದ ರಾಮನು ಜೀವಬಂಧುವೇ” ಎಂದ ವಿಭೀಷಣನ ಕಣ್ಣಲ್ಲಿ ನೋಡಿದರೆ ನಿಜಕ್ಕೂ ನಿವೇದಿತೆ ಭಗಿನಿಯೆನಿಸುತ್ತಾಳೆ!!
~*~*~
ಸೂ:
- ಈ 2017 ಇಸವಿಯು ಸೋದರಿ ನಿವೇದಿತಾಳ 150ನೇ ವರ್ಧಂತಿ. ಲೋಕ~ಲೇಖದ ಈ 40ನೇ ಬರೆಹದಲ್ಲಿ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಸೋದರಿ ನಿವೇದಿತಾಳ ಬಗ್ಗೆ ಸಕಾಲಿಕ ಲೇಖನಾಮೃತ.
September 18, 2017 at 10:07 AM
ನಿವೇದಿತಾ ಭಾರತದಲ್ಲಿ ಕಂಡದ್ದು ನಮಗೂ ಕಾಣಲಿ !
September 18, 2017 at 2:01 PM
Hare Raama
September 18, 2017 at 4:53 PM
ಬಹಳ ವಿಷಯಗಳನ್ನೂ ಮನಮುಟ್ಟಿಸಿದ್ದೀರಿ.ಧನ್ಯವಾದಗಳು.
September 18, 2017 at 8:47 PM
ನಿವೇದಿತಾ ಅವರ ಜೀವನಧರ್ಮ ವಿಶ್ಲೇಷಣೆಯು ಮನತಟ್ಟುತ್ತದೆ. ಮನದಟ್ಟಾಗುತ್ತದೆ
September 18, 2017 at 10:00 PM
ಸನಾತನತೆಗೆ ನಿವೇದಿತಳಾದವಳ ಕುರಿತಾದ ಹೃದ್ಯ ಬರಹ…!
September 18, 2017 at 10:23 PM
ಇಂಥಾ ದೃಷ್ಟಿಕೋನದಿಂದ ನೋಡಲು ಜಗದ್ಗುರುಗಳಿಗೆ ಮಾತ್ರ ಸಾಧ್ಯ.
October 22, 2017 at 7:11 AM
ಅತ್ಯದ್ಭುತ ಅತ್ಯದ್ಭುತ ಅತ್ಯದ್ಭುತ.. ಇಡೀ ಲೇಖನ.
.
“ಅಸಂಖ್ಯ ಚೇತನರ ಅನಂತ ತಪಸ್ಯೆ-ಅನ್ವೇಷಣೆಗಳ ಫಲವಾದ ಈ ಬೆಳಕಿನ ಸಂಸ್ಕೃತಿಯು ಎಲ್ಲರಿಗೂ ಲಭ್ಯವಾಗಬೇಡವೇ!?”
.
ಶ್ರೀ ಗುರುಭ್ಯೋ ನಮಃ