||ಹರೇರಾಮ||
ರಾತ್ರಿಯನ್ನು ಹದಿನೈದು ಭಾಗ ಮಾಡಿದರೆ ಹದಿನಾಲ್ಕನೆಯ ಭಾಗಕ್ಕೆ ಬ್ರಾಹ್ಮೀಮುಹೂರ್ತವೆಂದು ಹೆಸರು…
ಈಶ್ವರನ ಸಮಯವದು….!!!
ಅಮೃತವೇಳೆಯದು…..!!!
ನೀನೆಷ್ಟು ದಿನ ಬದುಕುವೆಯೋ ಅಷ್ಟು ಸಂಖ್ಯೆಯ ಅಮೃತ ಕಲಶಗಳನ್ನು ಈಶ್ವರನು ನಿನಗೆಂದೇ ತೆಗೆದಿರಿಸಿದ್ದಾನೆ…!!
ಆ ಸಮಯದಲ್ಲಿ ತನ್ನ ಮಕ್ಕಳಿಗೆಲ್ಲ ಅಮೃತವನ್ನು ಹಂಚಬೇಕೆನ್ನುವ ಸಂಪ್ರೀತಿಯಿಂದ ಅಮೃತಕಲಶದೊಡನೆ ಈಶ್ವರನು ನಿನ್ನೆಡೆಗೆ ಬರುತ್ತಾನೆ….!!!
ನಿನ್ನಲ್ಲಿಯೋ… ಆ ಸಮಯದಲ್ಲಿ ಕುಂಭಕರ್ಣನ ಆವೇಶವೇ ಆಗಿರುತ್ತದೆ….!!!
ನಿನಗಾಗಿ ತಂದ ಅಮೃತಕಲಶವನ್ನು ಕೊಡಲಾರದೆ ಈಶ್ವರನು ಹಿಂದಿರುಗಬೇಕಾಗುತ್ತದೆ…!!
ಹಾಗೆ ಹಿಂದಿರುಗುವ ಮುನ್ನ ಬಹಳ ವಾತ್ಸಲ್ಯದಿಂದ ನಿನ್ನ ತಲೆ ನೇವರಿಸಿ ಈಶ್ಚರನು ನುಡಿಯುತ್ತಾನೆ…!
“ಇರಲಿ ಮಗೂ…! ಏನೂ ಬೇಸರವಿಲ್ಲ,ನಾಳೆ ಪುನಃ ಬರುವೆ…”!!
ಮರುದಿನವೂ ಅದೇ ಸಮಯದಲ್ಲಿ ಈಶ್ವರನು ಬಂದೇ ಬರುತ್ತಾನೆ… ನೀನೋ ನಿದ್ರಿಸುತ್ತಲೇ ಇರುತ್ತೀಯೆ….!!!
ಈ ಘಟನೆ ದಿನಕ್ಕೊಮ್ಮೆಯಂತೆ ನಿನ್ನ ಜೀವನವಿಡೀ ಪುನರಾವರ್ತನೆಯಾಗುತ್ತದೆ…!
ಕೊನೆಗೊಮ್ಮೆ ಈಶ್ವರನ ಬದಲು ಯಮದೂತರು ಅಮೃತಕಲಶದ ಸ್ಥಾನದಲ್ಲಿ ಮೃತ್ಯುಪಾಶವನ್ನು ಹಿಡಿದು ನಿನ್ನೆಡೆಗೆ ಬರುತ್ತಾರೆ…!!
ಮತ್ತೆ ಅತ್ತೂ ಫಲವಿಲ್ಲ……ಎಚ್ಚೆತ್ತುಕೊಳ್ಳಲೂ ಸಾಧ್ಯವಿಲ್ಲ…
ಏಕೆಂದರೆ…
ಆಗ ಬರುವುದು ಚಿರನಿದ್ರೆ…!!!
(ಸರಿದಾಟಿದರೂಮಲಗದ ,ಸೂರ್ಯಮೇಲೇರಿದರೂಮೇಲೇಳದಅಭಿನವಕುಂಭಕರ್ಣರಿಗೆಕಲಕತ್ತೆಯಉದ್ಯೋಗಪತಿರಾಧೇಶ್ಯಾಮ್ಅಗರ್ವಾಲ್ಅವರುಹೇಳುವಮಾತುಗಳಿವು….!!)
ಜಗತ್ತು ಕಂಡ ಬಹುದೊಡ್ಡ ಆರೋಗ್ಯಶಾಸ್ತ್ರಜ್ಞರಾದ ವಾಗ್ಭಟರು ಅಷ್ಟಾಂಗ ಹೃದಯದಲ್ಲಿ ಆಡಿದ ಸಾವಿಲ್ಲದ, ಸರ್ವಕಾಲಪ್ರಸ್ತುತವಾದ ಮಾತುಗಳಿವು..
।।ಬ್ರಾಹ್ಮೇ ಮುಹೂರ್ತೇ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಮಾಯುಷಃ ॥
ಸ್ವಸ್ಥ ಬದುಕನ್ನು ಬದುಕಬೇಕೆ…?
ಪೂರ್ಣ ಬದುಕನ್ನು ಬದುಕಬೇಕೇ…?
ಸತ್ತಂತೆ ನಿದ್ರಿಸಿರಬೇಡಿ ..ಅಮೃತವೇಳೆಯಲ್ಲಿ….!
ನಿತ್ಯಜೀವನವನ್ನು ಪ್ರಾರಂಭಿಸಿ ಆ ಹೊತ್ತಿನಲ್ಲಿ…!!
ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು
ಸ್ವಾಮಿ ನಮ್ಮಯ್ಯ ರಥವೇರೀ…
ಸ್ವಾಮಿ ನಮ್ಮಯ್ಯ ರಥವೇರಿ ಬರುವಾಗ
ನಾವೆದ್ದು ಕೈಯಾ ಮುಗಿದೇವು…॥
ಚರಾಚರ ಪ್ರಪಂಚಕ್ಕೆ ಚೈತನ್ಯದ ಧಾರೆಯನ್ನೆರೆಯುವ ಸೂರ್ಯದೇವನುದಯಿಸಿ ಬರುವಾಗ ನಾವೆದ್ದು ಸ್ವಾಗತಿಸಬೇಡವೇ…?
ವಿಶ್ವದ ಸ್ವಾಮಿಯೇ ನಮ್ಮ ಬಳಿಸಾರುವಾಗ ..
ಅಮೃತ ಕಿರಣಗಳ ದೃಷ್ಟಿಯನ್ನು ನಮ್ಮೆಡೆಗೆ ಬೀರುವಾಗ…
ನಮ್ಮ ಕಣ್ಣುಗಳು ನಿದ್ರಾಜಾಡ್ಯದಲ್ಲಿ ಮುಳುಗಿರಬೇಕೆ…?
ಎಚ್ಚರದ ಸ್ವಾಮಿಗೆ ಮುಚ್ಚಿದ ಕಣ್ಣುಗಳ ಸ್ವಾಗತವೇ…!!
ಗುರುಗಳು ಬರುವರೆಂದರೆ ಮುಂಚಿತವಾಗಿ ಮನೆಯನ್ನು ಶುಚಿಗೊಳಿಸಿ, ಸಿಂಗರಿಸಿ, ನಾವೂ ಶುಚೀರ್ಭೂತರಾಗಿ ಅವರನ್ನು ಇದಿರ್ಗೊಳ್ಳಬೇಕಲ್ಲವೇ…?
ವಿಶ್ವದ ಗುರುವಾದ ಪರಮಾತ್ಮನ ಪ್ರಕಟರೂಪವೇ ಆಗಿದ್ದಾನೆ ಸೂರ್ಯದೇವ…!!
ದಿನದ ಆರಂಭದಲ್ಲಿ ಕಿರಣಗಳ ರೂಪದಲ್ಲಿ ಆ ತೇಜೋರಾಶಿ ನಮ್ಮನ್ನು ಪ್ರವೇಶಿಸುವಾಗ…
ಸೌಮ್ಯ-ಸುಂದರ ರೂಪದಲ್ಲಿ ನಮಗೆ ದರ್ಶನವೀಯುವಾಗ …
ನಾವು ಹೇಗಿದ್ದರೆ ಚೆನ್ನ ಎಂದು ಚಿಂತಿಸಬೇಡವೇ….!?
ಶರೀರದ ಮನೆಗೆ ಕಣ್ಣುಗಳೇ ಬಾಗಿಲುಗಳು….ಮನವೇ ವಾಸದ ಕೋಣೆ….!!
ಆ ಸಮಯದಲ್ಲಿ ನಾವು ಮಲಗಿದ್ದು, ಮಲಿನ ಮನೆ (ದೇಹ)-ಮನಗಳು…ಮುಚ್ಚಿದ ಬಾಗಿಲುಗಳು(ಕಣ್ಣುಗಳು)..ದೇವರನ್ನು ಸ್ವಾಗತಿಸಬೇಕೇ…?
ಇನ್ನು ಆ ಸಮಯದಲ್ಲಿ ಕಣ್ಣು ಮುಚ್ಚಿರಬೇಕೆಂಬ ಹಠವೇ ಇದ್ದರೆ…..ಒಂದು ದಾರಿಯಿದೆ…!
ಅದು….ಒಳಗಣ್ಣು ತೆರೆಯುವುದು…!
ಒಳಗಣ್ಣು ತೆರೆಯುವಾಗ ಕೆಲವೊಮ್ಮೆ ಹೊರಗಣ್ಣು ಮುಚ್ಚಬೇಕಾಗುತ್ತದೆ…
ಧ್ಯಾನತನ್ಮಯತೆಯಲ್ಲಿ ಆಗ ಹೊರಗಣ್ಣು ಮುಚ್ಚಿ ಕುಳಿತಿದ್ದರೆ….
ಅಂತರಂಗದಲ್ಲಿ ಆತ್ಮಸೂರ್ಯನೇ ಉದಯವಾಗುವಂತಿದ್ದರೆ….
ಅದು ಅಮೃತಘಳಿಗೆಯ ಸಂಪೂರ್ಣ ಸಾರ್ಥಕತೆ…!!
ನಮ್ಮ ಬಹಿರಂಗದ ಮೇಲೆಲ್ಲಾ ಬಾಹ್ಯಸೂರ್ಯನ ಬೆಳಕು ಬಿದ್ದು ಅಂತರಂಗವನ್ನು ಆತ್ಮಸೂರ್ಯ ಆವರಿಸಿದ್ದರೆ…
ಒಳಗೂ ಹೊರಗೂ ಬೆಳಕೇ ಬೆಳಕಾದರೆ…..
ಮತ್ತೆ ಕತ್ತಲೆಗೆ ನೆಲೆಯೆಲ್ಲಿ…!!?
ಸರ್ವತ್ರ ಸೂರ್ಯ……!!
ಸೇವಕನಾದವನು ಸ್ವಾಮಿ ಮಲಗಿದ ಮೇಲೆಯೇ ಮಲಗಬೇಕು…!
ಸ್ವಾಮಿ ಏಳುವ ಸಾಕಷ್ತು ಮೊದಲೇ ಏಳಬೇಕು….!
ಸೂರ್ಯನೆಂಬ ಸ್ವಾಮಿಯ ಬಗೆಗೆ ಸೇವಕರಾದ ನಾವು ನಡೆದುಕೊಳ್ಳಬೇಕಾದ ರೀತಿ ಇದಲ್ಲವೇ….??
ತಾನು ಮಲಗಿದ ಮೇಲೆ ಮಲಗಿ, ತಾನೇಳುವ ಮುನ್ನವೇ ಏಳುವವರ ಬಗೆಗೆ ….
ಸ್ಥಾವರ-ಜಂಗಮಗಳ ಆತ್ಮವೇ ಆದ ಸೂರ್ಯದೇವನು ಸಂಪ್ರೀತನಾದಾನು…!!
ಬೆಳೆಯುವ ಸಿರಿ ಮೊಳಕೆಯಲ್ಲಿ….
ನಮ್ಮ ಬದುಕು ವಿಷಘಳಿಗೆಯಲ್ಲಿ ಆರಂಭವಾಯಿತೋ, ಅಮೃತಘಳಿಗೆಅಲ್ಲಿ ಆರಂಭವಾಯಿತೋ ನಾವರಿಯೆವು..
ಈಗ ನಮ್ಮ ಕೈಯಲ್ಲಿಲ್ಲದ ವಿಷಯವದು..
ಆದರೆ ಈಗ ಪ್ರತಿನಿತ್ಯದ ಬದುಕನ್ನು ಅಮೃತವೇಳೆಯಲ್ಲಿಯೇ ಆರಂಭಿಸುವುದು ನಮ್ಮ ಕೈಯಲ್ಲೇ ಇದೆ.
ಕಳ್ಳಿಯ ಬೀಜದಿಂದ ಕಲ್ಪವೃಕ್ಷ ಹುಟ್ಟಲು ಸಾಧ್ಯವಿಲ್ಲ.
ಬ್ರಾಹ್ಮೀಮುಹೂರ್ತವೆಂಬುದು ಸಂಪೂರ್ಣದಿನದ ಬೀಜವಿದ್ದಂತೆ.
ಅದು ಜಾಡ್ಯಮಯವಾದರೆ ಮತ್ತೆ ನಮ್ಮದಿನ ಚೈತನ್ಯಮಯವಾಗುವುದಾದರೂ ಹೇಗೆ..?
ಆರಂಭವಾದುದು ತಾನೆ ಮಂದುವರಿದು ಮುಕ್ತಾಯದಲ್ಲಿ ಪೂರ್ಣತೆಯನ್ನು ಕಾಣಬೇಕು..?
ನಮ್ಮ ಬದುಕು ಜಾಡ್ಯದಲ್ಲಿ ಆರಂಭವಾಗಿ, ಪರಮ ಜಾಡ್ಯದಲ್ಲಿ ಮುಂದುವರಿದು,
ಪರಿಪೂರ್ಣ ಜಾಡ್ಯದಲ್ಲಿ ಮುಕ್ತಾಯವಾಗಬೇಕೆ..?
ಅಥವಾ, ಜೀವ ಜಾಗೃತಿಯಲ್ಲಿ ಆರಂಭವಾಗಿ, ದೇವದಿವ್ಯತೆಯಲ್ಲಿ ಮುಂದುವರೆದು,
ಪರಮಾತ್ಮನ ಪರಿಪೂರ್ಣತೆಯಲ್ಲಿ ಪರ್ಯವಸನವಾಗಬೇಕೆ..?
ಆಯ್ಕೆ ನಮ್ಮದು….ಫಲವೂ ನಮ್ಮದೇ…….!!
ಉಠ್ ಜಾಗ್ ಮುಸಾಫಿರ್ ಬೋರ್ ಭಯೀ,
ಅಬ್ ರೈನ್ ಕಹಾ ಜೋ ಸೋವತ್ ಹೈ|
ಜೋ ಸೋವತ್ ಹೈ ಸೋ ಖೋವತ್ ಹೈ,
ಜೋ ಜಾಗತ್ ಹೈ ವೋ ಪಾವತ್ ಹೈ….||
ಟುಕ್ ನೀಂದ್ ಸೆ ಅಖಿಯಾ ಖೋಲ್ ಜರಾ,
ಔರ್ ಅಪನೇ ಪ್ರಭು ಸೆ ಧ್ಯಾನ್ ಲಗಾ|
ಯಹ್ ಪ್ರೀತ್ ಕರನ್ ಕೀ ರೀತ್ ನಹೀ,
ಪ್ರಭು ಜಾಗತ್ ಹೈ ತೂ ಸೋವತ್ ಹೈ…||
ಜೋ ಕಲ್ ಕರ್ನಾ ಹೈ ವೋ ಆಜ್ ಕರ್ ಲೇ,
ಜೋ ಆಜ್ ಕರ್ನಾ ಹೈ ವೋ ಅಬ್ ಕರ್ ಲೇ||
ರಾಮಬಾಣ-
ಬಾಳಿನಲ್ಲಿ ಏಳಬೇಕಾದರೆ ಬೇಗ ಏಳಬೇಕು..
ಬೇಗ ಏಳಲು ಸಾಧ್ಯವಾಗದಿದ್ದವರಿಗೆ ಇಲ್ಲಿದೆ ನೋಡಿ ಪರಿಹಾರ….
ಬೇಗ ಮಲಗಬೇಕು…!
|| ಹರೇರಾಮ ||
June 14, 2010 at 7:42 AM
ನಾಳೆಯ (ಇ೦ದಿನ) ಬ್ರಾಹ್ಮೀಮಹೂರ್ತ ಬ೦ದಾಗಿದೆ, ಕಾದು ನೋಡುತ್ತಿರುವೆವು…
.
ಪೂರ್ಣತೆಯನ್ನು ಬಿಟ್ಟು ಮೃತ್ಯುವನ್ನು ನಶ್ವರತೆಯನ್ನು ಹೊದ್ದುಕೊ೦ಡು ಬಿದ್ದುಕೊ೦ಡಿರುವ ನಮಗೆ ಅಮೃತದ ಅರಿವು೦ಟೆ…..? ಅಮೃತವ ನೀಡುತ್ತಿರುವ ತ೦ದೆಯನ್ನು ಬಿಟ್ಟು ಮಿಠಾಯಿ ಮಾರುವವರ ಬಳಿಯೇ ಸುಳಿದಾಡುತ್ತಿರುವ ನಮಗೆ ಮೃತ್ಯುಪಾಶವು ಶಿಕ್ಷೆಯ ರೂಪದ ಅಮೃತವೇ….? ಮಿಠಾಯಿ ಮಾರುತ್ತಿರುವವರ ಗುಣಗಾನವನ್ನೆ ಮಾಡುತ್ತಿರುವ ನಮಗೆ ನಮ್ಮ ತ೦ದೆಯ ಎಲ್ಲರ ಎಲ್ಲದರ ತ೦ದೆಯ ಗುಣಗಳ ಅರಿವು೦ಟೆ ನಿಜದ ಪರಿವು೦ಟೆ…..?
.
ಕಲಿಯುಗದಲ್ಲಿ ಭೂಮಿ ವೇಗವಾಗಿ ಸುತ್ತುತಿದೆಯೆ? ಹಗಲು ರಾತ್ರಿ ಬೇಗವಾಗಿ ಮುಗಿಯುತ್ತಿದೆಯೆ? ಅದಕ್ಕೆ ಸತ್ಯಯುಗದ ನಾಲ್ಕರ ಒ೦ದನೆ ಭಾಗ ಮಾತ್ರ ಕಲಿಯುಗ ಕಾಲವೇ? ಕಾಲಪುರುಷ ಓಡೋಡಿ ಬರುತ್ತಿರುವನೆ? ಮಿಠಾಯಿಯ ಕನಸಿನಲ್ಲಿರುವ ನಮಗೆ ಕಾಲ ಯಾವ ಲೆಕ್ಕ…? ಮಿಠಾಯಿಯನ್ನೂ ಸೃಷ್ಠಿಸಿರುವ ತ೦ದೆಗೆ ಪ್ರತಿ ದಿನವು ಬಾರದೇ ಬೇರೆ ವಿಧಿ ಇಲ್ಲವೇ?
June 18, 2010 at 1:23 PM
“ಅಮೃತವ ನೀಡುತ್ತಿರುವ ತ೦ದೆಯನ್ನು ಬಿಟ್ಟು ಮಿಠಾಯಿ ಮಾರುವವರ ಬಳಿಯೇ ಸುಳಿದಾಡುತ್ತಿರುವ ನಮಗೆ ಮೃತ್ಯುಪಾಶವು ಶಿಕ್ಷೆಯ ರೂಪದ ಅಮೃತವೇ….?”
ಮೆಚ್ಚಿದೆವು ಈ ಚಿಂತನೆಯನ್ನು…!
June 14, 2010 at 11:51 AM
ಹರೇ ರಾಮ..ನಮ್ಮಲ್ಲಿ ಕುಂಭಕರ್ಣನ ಆವೇಶ ನಿದ್ದೆಯಲ್ಲಿ ಅಲ್ಲದೆ ಎಲ್ಲಾ ರೀತಿಯಲ್ಲೂ ಇದೆ… ಭೌತಿಕವಾಗಿ ಎದ್ದಿದ್ದರೂ ಬೌದ್ಧಿಕವಾಗಿ ನಿದ್ದೆಯಲ್ಲಿರುವ ನಮಗೆ ಅಮೃತವೂ ವಿಷವೇ… ಒಳಿತು ಕೆಡುಕುಗಳನ್ನು ಯೋಚಿಸದೆ ದುಡ್ಡು ಸಂಪಾದನೆ, ಕೂಡಿಡುವಿಕೆಯೇ ಮುಖ್ಯವಾದಾಗ, ಸಮಯ-ಅಸಮಯದ ಪರಿಜ್ಞಾನ ಇರದಾಗ , ಈಶ್ವರನ ಅಸ್ತಿತ್ವವನ್ನೇ ಗಮನಿಸದ ಜನರಿರುವಾಗ, ಇನ್ನು ಅಷ್ಟು ಪ್ರೀತಿಯಿಂದ ಅಮೃತ ತಂದವರನ್ನು ಕಾಣುತ್ತಾರೆಯೇ? ರಾಕ್ಷಸ ಸಮಯ ಪರಿಪಾಲಕರಾದ ಇಂದಿನ ಜನರಿಗೆ ಒಳ್ಳೆಯದನ್ನು ಕಂಡುಕೊಳ್ಳುವ ದೃಷ್ಟಿ ಇದೆಯೇ? ದೇವರೆನೋ ನಾಳೆ ಬರುತ್ತೇನೆ ಎಂದು ಪ್ರೀತಿಯಿಂದ ಹೋಗುತ್ತಾರೆ ಆದರೆ ದೇವರ ಬಳಿ ನಾವು ಕೇಳಿದ ಕೋರಿಕೆ ಈಡೇರದಿದ್ದರೆ ಕಾಯುವ ತಾಳ್ಮೆ ನಮ್ಮಲ್ಲಿ ಇಲ್ಲ.. ಬೌದ್ಧಿಕವಾಗಿ ನಮ್ಮನ್ನೆಬ್ಬಿಸಲು ಯಾವ ದಂಡದ ಅಗತ್ಯವಿದೆ ಗುರುಗಳೇ? ಹರೇರಾಮ..
June 18, 2010 at 1:30 PM
ಮನೋದಂಡ, ವಾಗ್ದಂಡ, ಕಾಯದಂಡ (ದಂಡ=ಸಂಯಮ)ಗಳಿದ್ದರೆ, ಜೀವನ ದಂಡ(ವ್ಯರ್ಥ)ವಾಗುವುದೇ ಇಲ್ಲ…!
June 15, 2010 at 7:12 AM
ಶ್ರೀ ಗುರುಭ್ಯೋ ನಮಃ
.
ಓ೦ ಮಿತ್ರಾಯ ನಮಃ
ಸೂರ್ಯ ಮಿತ್ರ, ಸೂರ್ಯ ಕಾಣದ ದಿನ ಮನವು ಮ೦ಕಗಿರುತ್ತದೆ, ಸೂರ್ಯ ದೈರ್ಯದ ಜೀವನದ ಚಲನದ ಸೌ೦ದರ್ಯದ ಸ್ವರ್ಗದ ನಿಸರ್ಗದ ಸ೦ಕೇತ. ಸೂರ್ಯನೆ೦ಬ ನಿತ್ಯ ಸಾಧಕ ನಮ್ಮ ಅನಿತ್ಯ ಆಸೆಗಳನ್ನು ಸುಡಲಿ, ಎದೆಯ ಪೂರ್ಣ ಬೆಳಕಾಗಲಿ – ಸೂರ್ಯಪುತ್ರರಾಗೋಣ…..?
.
ಕಣ್ಣ ಮು೦ದೆ ಇರುವ ದೇವರನ್ನು ನೋಡದೆ, ಮಾಡಬೇಕಾದ ನಿತ್ಯ ಕರ್ಮಗಳನ್ನು ಮಾಡದೆ, ಜಗತ್ತು ಹಾಳಗಿದೆ ಎ೦ದು ಕುಣಿದಾಡುವ ನಮಗೆ,
ಒಮ್ಮೆ ಸೂರ್ಯಚ೦ದ್ರರ ನಿತ್ಯಾನ೦ದದ ನಿತ್ಯ ಬಯಲಾಗುವ ರಹಸ್ಯದ ಅರಿವಾಗಲಿ.
ಸೂರ್ಯರಶ್ಮಿ ಹಣೆಯನ್ನು ಎದೆಯನ್ನು ಮಿ೦ಚಿಸಲಿ, ಸತ್ಯಜ್ಯೋತಿ ಮೋಡಗಳನ್ನು ಸರಿಸಿ ಪ್ರತಿಬಿ೦ಬ ಮೂಡಿಸಲಿ.
June 15, 2010 at 7:22 AM
ಅದ್ಭುತ –
“ಸೇವಕನಾದವನು ಸ್ವಾಮಿ ಮಲಗಿದ ಮೇಲೆಯೇ ಮಲಗಬೇಕು…!
ಸ್ವಾಮಿ ಏಳುವ ಸಾಕಷ್ಟು ಮೊದಲೇ ಏಳಬೇಕು….!
ಸೂರ್ಯನೆಂಬ ಸ್ವಾಮಿಯ ಬಗೆಗೆ ಸೇವಕರಾದ ನಾವು ನಡೆದುಕೊಳ್ಳಬೇಕಾದ ರೀತಿ ಇದಲ್ಲವೇ….??
ತಾನು ಮಲಗಿದ ಮೇಲೆ ಮಲಗಿ, ತಾನೇಳುವ ಮುನ್ನವೇ ಏಳುವವರ ಬಗೆಗೆ ….
ಸ್ಥಾವರ-ಜಂಗಮಗಳ ಆತ್ಮವೇ ಆದ ಸೂರ್ಯದೇವನು ಸಂಪ್ರೀತನಾದಾನು…!!”
.
ಸೂರ್ಯ ಸ್ವಾಮಿಯ ರೂಪದ ಸೇವಕ…?
.
ಯಾರೋ ಯಾವುದೋ ಮಾಡಿದ ಸಣ್ಣ ಸಹಾಯವನ್ನು ನೆನೆಸಿಕೊ೦ಡು ಹೊಗಳಿಸಿಕೊಳ್ಳುವವರಿಗೆ ಹೊಗಳುವವರಿಗೆ ಒಮ್ಮೆ ದೇವರ ಸಹಾಯದ ವ್ಯಾಪ್ತಿಯ ಕಲ್ಪನೆ ಸಿಗಲಿ.
.
ನಮ್ಮ ದೇಶಕ್ಕಿ೦ತ ಕೆಲವು ಬೇರೆ ದೇಶಗಳಲ್ಲಿ ಸೂರ್ಯನನ್ನು ಜಪಿಸುವವರು ಕಾಯುವವರು ಹೆಚ್ಚು, ಕೆಲವು ದೇಶಗಳಲ್ಲಿ ಬೇಸಿಗೆ ಎ೦ದರೆ ಕೆಲವು ದಿನ ಸಿಗುವ ಅಮೃತದ ಹಬ್ಬ, ಸೂರ್ಯನ ಹಬ್ಬ.
June 15, 2010 at 8:27 AM
ಗುರುವೇ,ಒಂದು ಪ್ರಶ್ನೆ… ತಂದೆ ತರುವ ಅಮೃತವದಾವುದು?
June 18, 2010 at 1:40 PM
ಮೃತ್ಯುವಿಲ್ಲದಂತೆ ಮಾಡುವ, ಅಮೃತತ್ವವನ್ನು ನೀಡುವ ಆತ್ಮಜ್ಞಾನ(ತನ್ನೆಚ್ಚರ)…
June 15, 2010 at 3:02 PM
ಹರೇ ರಾಮ್ ಸಂಸ್ಥಾನ,
ಲೇಖನ ಅದೇಷ್ಟು ಪರಿಣಾಮಕಾರಿಯಾಗಿದೆಯೆಂದರೆ, ಲೇಖನವೇ ನಾಳೆ ಬ್ರಾಹ್ಮಿ ಮೂಹೂರ್ತದಲ್ಲಿ ಎಲ್ಲಿ ನಮ್ಮನ್ನು ಎಬ್ಬಿಸಿಬಿಡುತ್ತದೋ ಎಂದು ಭಯವಾಗುತ್ತಿದೆ…! 🙂
ದೀರ್ಘ ನಿದ್ರೆಯಿಂದ ’ಎಚ್ಚರಿಸುವ’ ಬರಹಕ್ಕಾಗಿ ಪ್ರಣತಿಗಳು.
June 18, 2010 at 1:41 PM
ಇದು ಒಳ್ಳೆಯ ಭಯವಲ್ಲ…!
June 15, 2010 at 3:46 PM
ಹರೆ ರಾಮ, ನಾವು ಬ್ರಹ್ಮ್ಹಿ ಮುಹೂರ್ತದಲ್ಲಿ ಎದ್ದರೂ ಸೂರ್ಯನ ಅಮೃತ ಕಿರಣಗಳನ್ನು ಸ್ವೀಕರಿಸುವಷ್ಟು ಪುರುಸೊತ್ತೇ ಇರೊದಿಲ್ಲ ಈಗಿನ ಓಟದ ಜೀವನದಲ್ಲಿ.
It is a superb article.
June 15, 2010 at 5:14 PM
Harerama samsthana
what is the time and duration of Brahmi muhurtha? What is the exact meaning of the word Brahmi ? time of godrealisation enlightenment?
June 18, 2010 at 1:45 PM
ಸೂರ್ಯೋದಯಕ್ಕೆ ಸುಮಾರು ೧.೩೦ಘಂಟೆ ಮುಂಚೆ ಪ್ರಾರಂಭವಾಗಿ, ಸುಮಾರು ಮುಕ್ಕಾಲು ಘಂಟೆಯಷ್ಟು ಇರುವ ಅವಧಿ.
ಬ್ರಾಹ್ಮೀ ಎಂದರೆ, ಬೃಹತ್ತಾಗಿ-ಮಹತ್ತಾಗಿ-ವಿಶ್ವರೂಪವಾಗಿ ಬೆಳೆಯುವ ಪರಮಾತ್ಮನ ಕಾಲವದು…!
June 16, 2010 at 7:12 AM
ಗುರುಗಳೇ, ನಾಳೆ(ಇ೦ದು) ಕಾದು ನೋಡುತ್ತಿದ್ದೆವೆ.
June 18, 2010 at 1:58 PM
ಎಂದೆಂದಿಗೂ ಕಾಯಬೇಕಾದ (ಪ್ರತೀಕ್ಷಿಸಬೇಕಾದ & ಜೋಪಾನ ಮಾಡಬೇಕಾದ) ಕಾಲವದು..
June 16, 2010 at 10:20 AM
ಹರೇ ರಾಮ.. ನಮ್ಮ ಅಂತರಂಗ ಬಹಿರಂಗವನ್ನು ಸೂರ್ಯನೇ ಆಕ್ರಮಿಸಿ ಸರ್ವತ್ರ ಸೂರ್ಯವಾಗುವವರೆಗೆ ನಾವು ಬೆಳೆದರೆ ನಮ್ಮ ಜೀವನ ಸಾರ್ಥಕ… ನಾವು ಹೇಗೆ ಇದ್ದರೂ, ಏನೇ ಮಾಡಿದರೂ ಸೂರ್ಯ ದೇವರು ತಮ್ಮ ಬರುವಿಕೆಯನ್ನು ಬದಲಿಸುವುದಿಲ್ಲವೆಂದು ನಾವು ಸೂರ್ಯ ದೇವರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ.. ಬೇರೆ ಯಾವ ದೇವರ ಪೂಜೆಗಳಲ್ಲಿಯೂ, ಗುರುಸೇವೆಯಲ್ಲಿಯೂ ಶ್ರದ್ಧೆಯನ್ನಿಡುತ್ತೇವೆ ಯಾಕೆಂದರೆ.. ಎಲ್ಲಿಯಾದರೂ ದೇವರು, ಗುರುಗಳು ಮುನಿದರೆ ಎಂಬ ಹೆದರಿಕೆಯಿಂದ.. ಸೂರ್ಯ ದೇವರ ಪರಿಕ್ರಮದಲ್ಲಿ ಸ್ವಲ್ಪವೂ ಏರುಪೇರಿಲ್ಲದೆ ಕ್ರಮಬದ್ಧವಾಗಿ ಋತುಮಾನ, ಸಂವತ್ಸರಗಳ ವ್ಯತ್ಯಾಸವಿಲ್ಲದೇ ನಮ್ಮನ್ನು, ನಮ್ಮ ಬಾಳನ್ನು, ಜಗವನ್ನು ಬೆಳಗಿ ಬೆಳೆಸಲು ಬರುವಾಗ ಪ್ರಾಣಿ, ಪಕ್ಷಿ, ಮರ ಗಿಡಗಳು ಅವರನ್ನು ಸ್ವಾಗತಿಸಲು ಹರ್ಷದಿಂದ ಎದ್ದು ಕುಣಿದಾಡುತ್ತಿರುತ್ತವೆ… ಸ್ವಾಮಿನಿಷ್ಠೆ ಮೆರೆಯುತ್ತವೆ..ಮೆದುಳು ಪೂರ್ಣ ಬೆಳೆದ ನಾವು ಎಲ್ಲವನ್ನೂ ಅರ್ಥ ಮಾಡಿಯೂ ಅರ್ಥ ಆಗದಂತಿರುತ್ತೇವೆ..
ಜಬ್ ತನ್ ಮನ್ ಜಾಗತಾ ಹೈ.. ಔರ್ ಮನ್ ಕಾ ಸೂರಜ್ ಚಮಕತಾ ಹೈ.. ತಬ್ ಹರ್ ಓರ್ ಪ್ರಭು ಹೀ ಪ್ರಭು ದಿಖ್ತೆ ಹೈ.. ಹರೇ ರಾಮ…
June 16, 2010 at 12:09 PM
ಹರೇ ರಾಮ. ನಾಳೆಯ ಬ್ರಾಹ್ಮೀ ಮುಹೂರ್ತ ( ಶ್ರೀಗಳ ಬ್ಲಾಗ್ ನಲ್ಲಿ ಜ್ಙಾನ ಸೂರ್ಯನ ಕಿರಣ ಹೊರಸೂಸುವ ಸಮಯ) ದ ವರೆಗೂ ಕಾಯುತ್ತೇನೆ. ವಂದನೆಗಳು, ಹರೇರಾಮ.
June 18, 2010 at 2:00 PM
ಅದು ನಿನ್ನ ಹೃದಯದಲ್ಲಿ ತಾನೇ ತಾನಾಗಿ ಹೊರಸೂಸುವವರೆಗೂ ನಾವೂ ಕಾಯುವೆವು…!
June 16, 2010 at 12:27 PM
ವೆಂ.ಭ (ವೆಂಕಟರಮಣ ಭಟ್ಟ) ವಂದೂರು ಎಂಬ ಕವಿ ಸುಮಾರು ಏಳೆಂಟು ವರ್ಷಗಳ ಹಿಂದೆ ನಮ್ಮ ಗುರುಗಳ ಕುರಿತು, ಅವರನ್ನು ಮನೆಗೆ ಬರಮಾಡಿಕೊಳ್ಳುವ ಸಂದರ್ಭದ ಹಾಡನ್ನು ಬರೆದಿದ್ದರು. ಅದರ ಕೆಲವು ಸಾಲುಗಳು ಹೀಗಿವೆ…
ಬಂದನು ಗುರುರಾಯ… ಚೆಂದದಿ ಪಾದವ ತೊಳೆಯಯ್ಯ…||ಪ||
ಬ್ರಹ್ಮಜ್ಞಾನವೇ ಮೂರ್ತೀರ್ಭವಿಸಿ
ಬ್ರಹ್ಮಹರಿಹರರಂಶವು ಬೆರೆಸಿ
ಬ್ರಹ್ಮಾಂಡದಿ ನರರೂಪವ ಧರಿಸಿ
—-
ಬ್ರಾಹ್ಮೀಮುಹೂರ್ತವ ಲೋಕಕೆ ಸಾರುತ ||
—-
(ಬಂದನು ಗುರುರಾಯ…)
ತಿಳಿ-ಮಾತು: ವೆಂ.ಭ ರವರ ಕವಿಹೃದಯಕ್ಕೆ ಗುರುಗಳು ಈ (ಬ್ರಾಹ್ಮೀ ಮುಹೂರ್ತದ ಕುರಿತು) ಬ್ಲಾಗ್ ಬರೆಯುವುದು ಆಗಲೇ ಗೋಚರವಾಗಿತ್ತೇ? 🙂
June 18, 2010 at 2:00 PM
ಕವಿಃ ಕ್ರಾಂತದರ್ಶೀ…
June 16, 2010 at 2:23 PM
ನಾನು ಶನಿವಾರ ಮತ್ತು ಭಾನುವಾರ ಕುಂಭಕರ್ಣ. (ಉಳಿದ ದಿನ ಆಫೀಸಿಗೆ ಬೇಗ ಎದ್ದು ಹೊರಡಬೇಕು) ಆಫೀಸ್ ಹತ್ರ ಇದ್ದಿದ್ರೆ ದಿನಾ ಕುಂಭಕರ್ಣ.
ಎಲ್ಲಾ ಕುಂಭಕರ್ಣರನ್ನು (ನನ್ನನ್ನೂ ಸೇರಿ) ಎಚ್ಚರಿಸುವ ಲೇಖನ ಇದು. ತುಂಬಾ ಸುಂದರವಾಗಿ ಬಂದಿದೆ ಸಂಸ್ಥಾನ
June 18, 2010 at 2:02 PM
ನಿನ್ನೊಳಗಿನ ಕುಂಭಕರ್ಣನಿಗೆ ಮೋಕ್ಷ ಕೊಡಲು ನಿನ್ನೊಳಗೇ ರಾಮನಿದ್ದಾನೆ..!
June 21, 2010 at 12:07 AM
hareraama
kumbhakarnarige, idu raamabhana
June 16, 2010 at 3:52 PM
ಗುರುಗಳು ’ನಾಳೆ ನೋಡಿ’ ಎಂದು, ಶಿಷ್ಯರಿಗೆ ನಾಳೆಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನೋಡಿ ಅಂತ ಹೇಳುತ್ತಿದ್ದಾರೆಯೆ?
June 16, 2010 at 4:03 PM
ಗುರುಗಳು ’ನಾಳೆ ನೋಡಿ’ ಎಂದು, ಶಿಷ್ಯರಿಗೆ ನಾಳೆಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸೂರ್ಯನನ್ನು ನೋಡಿ ಅಂತ ಹೇಳುತ್ತಿದ್ದಾರೆಯೆ?
June 16, 2010 at 10:29 PM
ಅಮ್ಮ.. ದಿನಾ ಬೆಳಗ್ಗೆ “…ಅಪ್ಪಿ …ಏಳ …ಬೆಳಗಾತು …ಹೊತ್ ಮದ್ಯಾನಾತು ….”ಈ ಸುಪ್ರಭಾತ ಕೇಳ್ದೆ ಎಳ್ತಾನೆ ಇರ್ಲೆ..ಈ
ಲೇಖನ …ಬೆಳಗು ಯಾವಾಗಾಗ್ತು ಅಂತ ನೋಡ್ತಾ ಇಪ್ಪ ಹಂಗೆ ಆಯ್ದು ….ಹರೇ ರಾಮ
June 18, 2010 at 1:11 PM
ನಿಜವಾಗಿಯೂ ‘ಕಣ್ತೆರೆಸುವ’ ಲೇಖನ..! (ಬ್ರಾಹ್ಮೀ ಮುಹೂರ್ತದಲ್ಲಿ!!)
June 18, 2010 at 1:32 PM
ಈ ಭಯ ದೇವರ ದಯ…!
June 18, 2010 at 11:18 PM
ಕಾಮೆ೦ಟ್ಸನಲ್ಲೂ ಗುರುಗಳನ್ನ ನೋಡಿ ಖುಷಿಯಾಯಿತು.
ಬೆಳಕಿನೊ೦ದಿಗೆ ಕ್ರೀಡಿಸಲು ಯಾರು ಎದ್ದಿದ್ದಾರೆ?
June 21, 2011 at 11:10 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ತಂದೆ… ನೀ ತಂದ ಅಮೃತವ ಸವಿದೆ… ಸವಿಯುತ್ತಲೇ ಇರುವೆ… ಎಂದೆಂದೂ ಹಸಿವನ್ನೂ ಕೊಡು, ಅಮೃತವನ್ನೂ ಕೊಡು… ಯಾಕೆಂದರೆ “ಕ್ಷುಧಾ ತೃಶಾರ್ತಾ ಜನನೀಂ ಸ್ಮರಂತೀ…”. ನಿನ್ನ ಸ್ಮರಣೆಯೆಂಬ ಅಮೃತವನ್ನು ಅನುಕ್ಷಣವೂ ಸವಿಯುವಂತೆ ಮಾಡು…
June 21, 2011 at 12:16 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ತಂದೆ… ನಾ ಕಾಣಿಸದಂತೆ ನಿನ್ನೊಳಗೆ ಲೀನಗೊಳಿಸೆನ್ನನು… ನಾ ಕಾಣಿಸದಂತೆ ಈ ದೇಹವನು ಆವರಿಸು ನೀನು… ಎಲ್ಲೆಲ್ಲೂ ನಿನ್ನನ್ನೇ ನೋಡಬಯಸುವೆನು… ತೃಪ್ತಿ ಪಡಿಸು… ತಂದೆ…
June 21, 2011 at 1:17 PM
“ಎಂದೆಂದೂ ಹಸಿವನ್ನೂ ಕೊಡು, ಅಮೃತವನ್ನೂ ಕೊಡು..”
ಅದ್ಭುತವಾದ ಭಾವ..!
June 21, 2011 at 2:03 PM
ಹರೇರಾಮ್,
ಆ ಅಮ್ರತದ ರುಚಿ ಸಿಕ್ಕಮೇಲೆ ಹಸಿವು ಸದಾತಣಿಯದೇನೋ?
ಆ ಹಸಿವು ತಣಿದ ಮೇಲೆ ನಾ ಬೇರೆ ಇರಲಾರೆನು?
ಆಯ್ಕೆ ಮಾಡಿಕೊ ನನ್ನ ಐಖ್ಯಮಾಡಿಕೊ ನಿನ್ನೊಳಗೆನ್ನ
November 27, 2012 at 11:15 AM
Hare Raama Samsthana..
Namma Bharathiya samskrithi yalli namma jeevanakke enenu olleyado adu mathra ide.. Bega eluvudu arogyakke olleyadu hagu manassigu hitha embudannu bahala chennagi helide ee lekhana..