|| ಹರೇರಾಮ ||
ಮಾನವನ ಭ್ರಮೆಗಳು ಅನಂತ..
ಅವುಗಳಲ್ಲಿ ಬಹುದೊಡ್ಡದು ‘ಪ್ರಕೃತಿಗೆ ಮಾತು ಬಾರದು’ ಎಂದುಕೊಳ್ಳುವುದು..
ಆದರೆ, ಪ್ರಕೃತಿ ಎ೦ದೂ ಮೂಕವಲ್ಲ..
ಯಾವಾಗಲೂ, ಎಲ್ಲೆಲ್ಲೂ, ಪ್ರಕೃತಿಯು ಆಡುತ್ತಲೇ ಇರುವ ಮಾತುಗಳನ್ನು ಕೇಳಿಸಿಕೊಳ್ಳದ ನಾವೇ ಕಿವುಡರು..!
ನಮ್ಮೊಳಗಿನ ಕೊರತೆಯನ್ನು ಪ್ರಕೃತಿಯಲ್ಲಿ ಕಾಣುವ ಕುದೃಷ್ಟಿ ನಮ್ಮದು..
‘ವಿಶ್ವ’ವನ್ನೇ ‘ಶತ್ರು’ವೆಂದು ಕಲ್ಪಿಸಿಕೊಂಡು ಎಲ್ಲರ ಮೇಲೂ ದಂಡೆತ್ತಿ ಹೋದ ರಾಜಾ ಕೌಶಿಕನು – ಜೈತ್ರಯಾತ್ರೆಯಲ್ಲಿ ಮುಂದುವರೆಯುತ್ತಾ…ಮುಂದುವರೆಯುತ್ತಾ ಋಷ್ಯಾಶ್ರಮದ ದಿವ್ಯಸ್ಥಳವೊಂದನ್ನು ಪ್ರವೇಶಿಸಿದಾಗ,
ಆತನ ಅಂತರಾತ್ಮದ ಅನುಭವಕ್ಕೆ ಬಂದಿತು ಈ ಸತ್ಯ..
ಅಕ್ಕ-ಪಕ್ಕದ ಮಕ್ಕಳೊಂದಿಗೆ ಜಗಳವಾಡಿ ಮನೆಗೆ ಬರುವ ತುಂಟ ಮಗುವಿಗೆ ಶಾಂತಿ-ಮೈತ್ರಿಗಳ ಪಾಠ ಹೇಳುವ ತಾಯಿಯಂತೆ ಪ್ರಕೃತಿಯೇ ಮಾತನಾಡಿತು ಆತನಲ್ಲಿ..!
ಮಗುವಿನ ಕುರಿತಾದ ಮಾತೆಯ ಮಮತೆ ಆಕೆಯ ಕಂಗಳಲ್ಲಿ, ಕೈಗಳಲ್ಲಿ, ಮಾತುಗಳಲ್ಲಿ, ಎಲ್ಲೆಡೆಯಲ್ಲಿ ಹೊರಸೂಸುವಂತೆ…
ಗಿರಿ-ನದಿಗಳು, ಗಗನ-ಮೇಘಗಳು, ಕಾಡು-ಮರ-ಬಳ್ಳಿಗಳು, ಪಕ್ಷಿ-ಮೃಗಗಳು..ಹೀಗೆ ಪ್ರಕೃತಿಯ ಒಂದೊಂದು ಅಂಗಗಳೂ ಬದುಕಿನ ಬದಲಾವಣೆಯ ಸಂದೇಶಗಳನ್ನು ಆತನಿಗೆ ನೀಡತೊಡಗಿದವು..!
ಆಶ್ರಮದ ಹೋಮಧೂಮವನ್ನು ಹೊತ್ತು ತರುವ ಗಾಳಿ ಮಹಾರಾಜನ ಮೈದಡವಿ ಮಾತನಾಡಿಸಿತು..!
‘ಜೈತ್ರಯಾತ್ರೆ’ಯ ಬದಲು ‘ಮೈತ್ರಯಾತ್ರೆ’ಯನ್ನು ಮಾಡೆಂದಿತು..
‘ಸಂಚರಿಸು ಸಂಚರಿಸು..ಸರ್ವಲೋಕಗಳಲ್ಲಿಯೂ ಸಂಚರಿಸು..
ಸತತವೂ ಕ್ರಿಯಾಶೀಲನಾಗಿರು, ಆದರೆ ಸ್ವಾರ್ಥಕ್ಕಾಗಿಯಲ್ಲ, ಲೋಕಹಿತಕ್ಕಾಗಿ..
ನಾನು ಸತತವಾಗಿ ಸಂಚರಿಸುವೆನು. ಆದರೆ, ನಾನು ಸಂಚರಿಸಿದಲ್ಲೆಲ್ಲಾ ಜೀವಸಂಚಾರವಾಗುವುದು..ಜೀವ ಹಾನಿಯಲ್ಲವೆಂದಿತು‘..
ಗಾಳಿಯಲ್ಲಿ ತೇಲಿ ಬರುವ ಮೋಡ ಮಾತಾಡಿತು..
ಕೌಶಿಕನಿಗೆ ಕರಗು ಕರಗೆಂದಿತು..
ಪ್ರಕೃತಿಯೊಂದಿಗೆ ಕೂಡಿ ಬಾಳಿ ಬೆಳೆದ ಬೆಳೆದ ಬ್ರಹ್ಮರ್ಷಿ ವಸಿಷ್ಠರು..
‘ಕರಗಿ ನಾನು ಮಳೆಯಾಗಿ ಇಳೆಗಿಳಿಯುವೆ..
ಹೊಳೆಯಾಗಿ ಹರಿದು ಸಾಗರವ ಸೇರುವೆ..ಈ ದಾರಿ ನಿನಗೂ ಇಹುದು.
ತೊರೆ ಕಾಠಿಣ್ಯವನ್ನು, ಭಾವ ಕರಗಿ ಜೀವನದಿಯಾಗಿ ಹರಿದು ಸೇರು ಆತ್ಮಸಾಗರವನ್ನೆಂದಿತು’
ಮೋಡವು ಮಳೆಯಾಗಿ, ಮಳೆಯು ಹೊಳೆಯಾಗಿ ನೀಡಿದ ನೀರುಂಡು ಹುಲುಸಾಗಿ ಬೆಳೆದ ಕಾಡು ಮಾತನಾಡಿತು..
ಕೂಡಿ ಬಾಳೆಂದಿತು..
‘ನೀನೊಬ್ಬ ಬೆಳೆದರೆ ಸಾಕೇ..?
ನನ್ನ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಕೂಡಿ ಬೆಳೆಯಬೇಡವೇ..?
ನೀ ಬೆಳೆಯಬೇಕು..ನೀ ಬೆಳೆಯುವಾಗ ನಿನ್ನೊಡನೆ ಸಾಧಕರ ಸಂಘವೇ ಬೆಳೆಯಬೇಕೆಂದಿತು..’
ಕಾಡಿನ ಕಿರೀಟದಂತಿದ್ದ ಮಹಾವೃಕ್ಷವೊಂದು ಮಾತನಾಡಿತು.
‘ಬಿಸಿಲು ನನಗಿರಲಿ, ನೆರಳು ನಿನಗಿರಲೆಂಬ ತ್ಯಾಗ-ಸೇವೆಗಳ ತತ್ವವನ್ನು ತಿಳಿಹೇಳಿತು..
ಮಹಾಗುರುವೆಂಬ ಕಲ್ಪವೃಕ್ಷದ ಚರಣಚ್ಚಾಯೆಯಲ್ಲಿ ಆಶ್ರಯವನ್ನು ಪಡೆಯೆಂದಿತು..
ಸಂಸಾರದ ತಾಪ-ಪಾಪಗಳನ್ನು ಕಳೆದು ಸುಖಿಸೆಂದಿತು’
‘ಪಾದಪ’ದ ಪಾದಮೂಲದಲ್ಲಿ ಜನಿಸಿ ಕಾಂಡದ ಸುತ್ತೆಲ್ಲ ಬೆಳೆದು ಹೆಗಲ ಮೇಲೆ ತಲೆಯಿಟ್ಟು ವಿಶ್ರಮಿಸಿದ್ದ ಬಳ್ಳಿ ಹೀಗೆಂದಿತು.
‘ಬದುಕೆಂಬ ಬಳ್ಳಿಗೆ ಧ್ಯೇಯವೆಂಬ ವೃಕ್ಷದ ಆಸರೆ ಬೇಕೇಬೇಕು ಕೌಶಿಕಾ..!
ನನ್ನಂತೆ ಧ್ಯೇಯವನ್ನು ಭದ್ರವಾಗಿ ಹಿಡಿದು ಬೆಳೆ ಆಗಸದೆಡೆಗೆಂದಿತು’
ಬಳ್ಳಿಯಲ್ಲಿ ಬಳುಕುವ ಹೂವು ಕೌಶಿಕನ ಕೃತ್ರಿಮ ಸೌಂದರ್ಯವನ್ನು ನೋಡಿ ಕಿಲಕಿಲನೆ ನಕ್ಕಿತು..
ಅರಳು ಅರಳೆಂದಿತು..
‘ಮಾಣಿಕ್ಯ-ಮುಕುಟಗಳ, ಪಟ್ಟೆ-ಪೀತಾಂಬರಗಳ ಸೊಬಗಿದು ನಿನದಲ್ಲವೆಂದಿತು..
ಅರಳು ನೀ ಅರಳು..
ನನ್ನಂತೆ ಅಂತರಾಳದಿಂದ ಅರಳು..
ಅರಳಿದ ಆತ್ಮ ಸೌಂದರ್ಯವನ್ನು ಜಗಕ್ಕೆ ಚೆಲ್ಲೆಂದಿತು..’
ಕೋಟಿ ಕುಸುಮಗಳಿಗೆ,ಲಕ್ಷ ವೃಕ್ಷಗಳಿಗೆ, ನೂರು ಸಾವಿರ ಕಾಡುಗಳಿಗೆ ಆಶ್ರಯವಿತ್ತ ಗಂಭೀರ ಗಿರಿಪಂಕ್ತಿ ಮಾತನಾಡಿತು..
ಅಚಲಧ್ಯಾನದಲ್ಲಿ ಮುಳುಗೆಂದಿತು..
‘ನಮ್ಮ ಎತ್ತರವ ನೋಡು..ನಮ್ಮ ಬಿತ್ತರವ ನೋಡು..ನಮ್ಮ ಗೌರವವ (ತೂಕ) ನೋಡು..!
ಇವು ಪ್ರಾಪ್ತವಾದುದು ಅಚಲತೆಯಿಂದ…
ಚಂಚಲತೆಯಿಂದಲ್ಲ..
ಸ್ಥೂಲದಿಂದ ಆರಂಭಿಸಿ ಬರುಬರುತ್ತಾ ಸೂಕ್ಷ್ಮವಾಗುವ ನಮ್ಮ ಆಕೃತಿಯನ್ನು ನೋಡು.
ಅದರಂತೆ ನೀನಾಗು..ಸ್ಥೂಲದಿಂದ ಪರಮ ಸೂಕ್ಷ್ಮದೆಡೆಗೆ ನೀ ಸಾಗು..
ನಿನ್ನ ನೀ ಗೆದ್ದರೆ ಜಗವ ಗೆಲ್ಲದಿದ್ದರೂ ಗೆದ್ದಂತೆ..
ನಿನ್ನ ನೀ ಗೆಲ್ಲದಿರೆ ಜಗವ ಗೆದ್ದೂ ಸೋಲುವೆಯೆಂದಿತು’
ಎಲ್ಲವೂ ತನ್ನೊಳಗಿದ್ದರೂ ತಾನು ಯಾವುದನ್ನೂ ಮುಟ್ಟದ ಗಗನ ಮಾತಾಡಿತು..
ನಿರ್ಲಿಪ್ತನಾಗೆಂದಿತು..
‘ಮಿಂಚು-ಮಳೆಗಳು ನನ್ನೊಳಗಿವೆ.ಆದರೆ ಮಿಂಚಿನಿ೦ದ ಸುಡದ, ಮಳೆಯಲ್ಲಿ ತೋಯದ ನನ್ನ ವ್ಯಕ್ತಿತ್ವವನ್ನುನೋಡು..
ನಡೆಯುವುದೆಲ್ಲವೂ ನನ್ನೊಳಗೇ ನಡೆದರೂ ಯಾವುದರಿ೦ದಲೂ ವಿಕಾರಗೊಳ್ಳದ ಎಲ್ಲಿಯೂ ಚಲಿಸದ ನನ್ನ ಸ್ವಭಾವನ್ನಾದರೂ ನೋಡು,
ಎಲ್ಲೆಲ್ಲಿಯೂ ಇದ್ದರೂ ಎಲ್ಲಿಯೂ ಕಾಣದ ನನ್ನ ಹಾಗೆ ನೀನಿರಬೇಕು.
ಇದ್ದೂ ಇರದ೦ತಿರಬೇಕೆಂದಿತು’
ಮೃಗಗಳು ಮಾತಾಡಿದವು..
‘ನಿರ್ವೈರನಾಗೆಂದವು..
ಮಹರ್ಷಿಯ ಸಂಗದಿಂದಾಗಿ ಜನ್ಮ ಸಹಜವಾದ ಕ್ರೌರ್ಯ-ವೈರಗಳನ್ನು ತೊರೆದ, ಪ್ರೇಮ-ದಯೆಗಳನ್ನು ತಳೆದ ನಮ್ಮನ್ನು ನೋಡಿ ಕಲಿಯೆಂದವು’
ಹಕ್ಕಿಗಳು ಮಾತಾಡಿದವು..
ಮರುಹುಟ್ಟು ತಾಳೆಂದವು..
‘ನಾವಾಗಲೇ ಮೊಟ್ಟೆಯನ್ನು ಒಡೆದು ಹೊರಬಂದಾಯಿತು.ಇನ್ನೂ ನೀನೇಕೆ ಅಜ್ನಾನದ ಮೊಟ್ಟೆಯಲ್ಲಿಯೇ ಕುಳಿತುಕೊಂಡಿರುವೆ?
ತಡವಿನ್ನೇಕೆ ? ಭೇದಿಸು ಅಜ್ನಾನದ ಆವರಣವನ್ನು..ಕಾಣು ಆತ್ಮಸೂರ್ಯನನ್ನು..
ಕಾಣು ಜಗವನ್ನು ಹೊಸ ದೃಷ್ಟಿಯಿಂದ..ಅಧ್ಯಾತ್ಮದ ಆಗಸದಿ ‘ಹಾರುವವ’ನಾಗೆಂದಿತು..!
ಅದಾಗ ತಾನೇ ಬಿರಿಯುವ ಮೊಟ್ಟೆಯು ದನಿಗೂಡಿಸಿತು.
“ಸಾರು ಗುರುವಿನ ಬಳಿಗೆ..
ನನ್ನಮ್ಮ ನನಗೆ ಮಾಡಿದಂತೆ ಆತ ನಿನಗೆ ಸೋಲು-ನೋವುಗಳ ಕಾವು ಕೊಡುವ..
ಆಗ ನನ್ನಂತೆ ಒಡೆದು ಚೂರಾಗುವೆ ನೀ..!
ನಿನ್ನ ರಾಜವೈಭವದ ಈ ರಾಜಸ ಸ್ವರೂಪವು ನಿನ್ನ ಭ್ರಮೆಗಳೊಡನೆ ನುಚ್ಚುನೂರಾಗುವುದು..!
ಕೆಡುಕಲ್ಲ, ನಿನ್ನ ಜೀವದ ಹಿತವದು..!
ಮರುಹುಟ್ಟು ತಾಳುವೆ ನೀ…
ಆಗ ವಿಶ್ವದ ಮಿತ್ರನಾಗುವೆ..ಅವಿನಾಶಿಯಾಗುವೆ..ಅಜರಾಮರನಾಗುವೆ..!’
ಅದಾಗ ತಾನೇ ಬಿರಿದು ಅಂಕುರಿಸುತ್ತಿದ್ದ ಬೀಜವು, ಕರಗಿ ನೀರಾಗತೊಡಗಿದ ಮೋಡದೊಡಗೂಡಿ ಹೌದು ಹೌದೆಂದಿತು..
ಪ್ರಕೃತಿ ಮಾತೆಯ ಮಮತೆಯ ಮಾತುಗಳನ್ನು ಕೇಳಿಸಿಕೊ೦ಡಿದ್ದು ಕೌಶಿಕನ ಕಿವಿಗಳಲ್ಲ….!
ಚಕ್ರವರ್ತಿಯ ಪರಮ ಸಖನೊಬ್ಬ ದ್ವಾರಪಾಲಕರನ್ನೋ, ಮ೦ತ್ರಿ-ಮಾಗಧರನ್ನೋ ಮಾತನಾಡಿಸದೆ ನೇರವಾಗಿ ಅ೦ತಃಪುರವನ್ನೇ ಪ್ರವೇಶಿಸುವ೦ತೆ…
ಕೌಶಿಕನ ವ್ಯಕ್ತಿತ್ವವೆ೦ಬ ಅರಮನೆಯ ಹೊರಗಿನ ದ್ವಾರಪಾಲಕರಾದ ಇ೦ದ್ರಿಯಗಳನ್ನೋ, ಒಳಗಿರುವ ಮನವೆ೦ಬ ಮ೦ತ್ರಿಯನ್ನೋ ಮುಟ್ಟದೆ, ಮಾತನಾಡದೆ ನೇರವಾಗಿ ಆತನ ಅ೦ತರಾತ್ಮದಲ್ಲಿಳಿದವು ಆತನ ಬದುಕಿನ ಭವ್ಯ ಭವಿಷ್ಯತ್ತನ್ನು ಕಟ್ಟುವ ಅಮರ ಸ೦ದೇಶಗಳು..!
ತಾನು ಮು೦ದೇನಾಗಬೇಕೆ೦ಬುದನ್ನು ಆತನ ಆತ್ಮ ಅರಿಯತೊಡಗಿತ್ತು
ಮನೋ-ಬುದ್ದಿಗಳು ಅರಿಯುವ ಸಮಯ ಸಮೀಪಿಸತೊಡಗಿತ್ತು..
ವಿಧಿಯದರ ಸಿದ್ಧತೆಯನ್ನು ನಡೆಸಿತ್ತು..
ಹೀಗೆ ಪ್ರಕೃತಿದರ್ಶನದ ಮೊದಲ ಮೆಟ್ಟಿಲೇರಿ ಮುಂದುವರೆದ ಕೌಶಿಕನಿಗೆ ಗೋಚರಿಸಿತು ಧರೆಗಿಳಿದ ದೇವತೆಗಳ ಗಡಣ…!
ಮನುಷ್ಯರಲ್ಲಿ ಮೂರು ಬಗೆ..
ತಮ್ಮ ದುಷ್ಕರ್ಮಗಳಿಂದಾಗಿ ಸತ್ತು ನರಕವನ್ನು ಸೇರುವ ಅಧಮರು ಹಲವರು..
ತಮ್ಮ ಸತ್ಕರ್ಮಗಳಿಂದಾಗಿ ಸತ್ತು ಸ್ವರ್ಗವನ್ನು ಸೇರುವ ಮಧ್ಯಮರು ಕೆಲವರು..
ತಮ್ಮ ಸಾನ್ನಿಧ್ಯ ಮಾತ್ರದಿಂದ ಸ್ವರ್ಗವನ್ನೇ ಧರೆಗಿಳಿಸುವ,
ಅಥವಾ ಧರೆಯನ್ನೇ ಸ್ವರ್ಗವನ್ನಾಗಿ ಪರಿವರ್ತಿಸುವ,
ಸ್ವರ್ಗ ಸಪ್ಪೆಯೆನಿಸಿ ದೇವತೆಗಳೂ ಧರೆಗಿಳಿಯುವಂತೆ ಮಾಡುವ,
ದಿವ್ಯತೆಯನ್ನು ಕಾಣುವ, ತೋರುವ, ಉತ್ತಮೋತ್ತಮರು ಮರಳಿನ ನಡುವೆ ಹರಳಿನಂತೆ ಕೆಲವೇ ಕೆಲವರು..!
ಅಂಥಾ ಮಹಾಪುರುಷನೊಬ್ಬನ ಆವಾಸಭೂಮಿಯಾಗಿದ್ದಿತು ಆ ಸ್ಥಳ..
ಹೆಜ್ಜೆ ಹೆಜ್ಜೆಗೆ ದೇವ-ದಾನವರು, ಗಂಧರ್ವಾಪ್ಸರೆಯರು,ಕಿನ್ನರ-ಕಿ೦ಪುರುಷರು, ಸಿದ್ಧ-ಚಾರಣರು, ಯಕ್ಷ-ವಿಧ್ಯಾದರರ ದರ್ಶನ..
ಯಾವ ದಿವ್ಯಶಕ್ತಿಗಳನ್ನು ಕಾಣಲು ಜನ್ಮಜನ್ಮಗಳ ಕಠಿಣ ತಪಶ್ಚರ್ಯೆಯೂ ಪರ್ಯಾಪ್ತವಲ್ಲವೋ-
ಅವುಗಳೆಲ್ಲವೂ ದರ್ಶನ ಮಾರ್ಗದರ್ಶನಗಳಿಗಾಗಿ ಮಹಾಗುರುವಿನ ದ್ವಾರದಲ್ಲಿ ಕಾತರಿಸಿ ಕಾಯುತ್ತಿದ್ದವು..
ಸಕಲ ದೇವತೆಗಳ ನಿತ್ಯೋತ್ಸವಸ್ಥಾನವಾಗಿದ್ದಿತು ಅದು..!
ದಿವ್ಯಶಕ್ತಿಗಳ ದರ್ಶನವೆಂಬ ಮತ್ತೊಂದು ಮೆಟ್ಟಿಲೇರಿದ ಕೌಶಿಕನಿಗೆ ಕಂಡುಬಂದಿತು ಸಾಧಕಸಾಗರ…
ಜೀವಗಳಲ್ಲಿ ಮೂರು ಬಗೆಯನ್ನು ಬಲ್ಲವರು ಮತ್ತೊ೦ದು ವಿಧದಲ್ಲಿ ಹೇಳುವರು..
ದಾಟುವ ದಾರಿ ಕಾಣದೆಯೇ ಸ೦ಸಾರ ಸಾಗರದಲ್ಲಿ ಮುಳುಗುವವರು ಹಲವರು..
ಗುರು ಕರುಣೆಯಿ೦ದ ದಾರಿ ಲಭಿಸಿ ಹಾಗೂ ಹೀಗೂ ಸ೦ಸಾರ ಸಾಗರವನ್ನು ದಾಟುವವರು ಕೆಲವರು..
ತಾನೊಬ್ಬ ಹೇಗೋ ದಾಟಿದರೂ ಬೇರೆಯವರನ್ನು ದಾಟಿಸುವ ಶಕ್ತಿಯಿಲ್ಲದವರಿವರು..
ಮೂರನೆಯ ಬಗೆಯವರು ತಾವೂ ದಾಟುವುದಲ್ಲದೇ ತಮ್ಮೊಡನೆ ಅಸ೦ಖ್ಯ ಜೀವಿಗಳನ್ನೂ ದಾಟಿಸುವವರು.. ಇವರು ಅ೦ತ್ಯ೦ತ ವಿರಳ..
ಮಹಾಗುರುವೆ೦ದು ಕರೆಯಬೇಕಾದದ್ದು ಇವರನ್ನೇ..!
ಕಲ್ಲು ನೀರಿನಲ್ಲಿ ಮುಳುಗಿ ಹೋಗುತ್ತದೆ..
ಎಲೆ ನೀರಿನಲ್ಲಿ ತೇಲಿದರೂ ಇನ್ನೊ೦ದು ವಸ್ತುವನ್ನು ಮುಳುಗದ೦ತೆ ಕಾಪಾಡುವ ಶಕ್ತಿ ಅದಕ್ಕಿಲ್ಲ..
ಆದರೆ ನೌಕೆ ಹಾಗಲ್ಲ..
ಅದು ತಾನೂ ತೇಲುವುದಲ್ಲದೇ ತನ್ನೊಳಗೆ ಅದೆಷ್ಟೋ ಜನರನ್ನು ಕುಳ್ಳಿರಿಸಿಕೊ೦ಡು ದಡಸೇರಿಸಬಲ್ಲದು..!
ಆ ಮಹಾಪುರುಷನ ದಿವ್ಯಾಶ್ರಮದ ದಿವ್ಯಾಶ್ರಯದಲ್ಲಿ ಸಾವಿರಾರು ಸಾಧಕರು ಸ೦ತತ ಸಾಧನೆಯಲ್ಲಿ -ನಿರತರಾಗಿರುವುದನ್ನು ಕೌತುಕದ ಕಣ್ಣುಗಳಿ೦ದ ಕ೦ಡನು ಕೌಶಿಕ..
ಮಹಾಶಿಲ್ಪಿಯೊಬ್ಬನ ಶಿಲ್ಪ ಶಾಲೆಯಲ್ಲಿ ಕೆತ್ತನೆಯ ಬೇರೆ ಬೇರೆ ಹ೦ತದಲ್ಲಿರುವ ಮೂರ್ತಿಗಳ ದರ್ಶನವಾಗುವ೦ತೆ,
ಸಾಧನೆಯ ಬೇರೆ ಬೇರೆ ಮೆಟ್ಟಿಲುಗಳಲ್ಲಿರುವ ಸಾಧಕಸ್ತೋಮದ ದರ್ಶನವಾಯಿತು ಆತನಿಗೆ..
ಅಲ್ಲಿ ಗೆಡ್ಡೆ-ಗೆಣಸು, ಹಣ್ಣು-ಹ೦ಪಲುಗಳನ್ನು ಮಾತ್ರವೇ ಸೇವಿಸುವ ಕ೦ದಮೂಲಫಲಾಶನರಿದ್ದರು..
ಒಣಗಿದ ತರಗೆಲೆಗಳೇ ಆಹಾರವಾಗಿರುವ ಪರ್ಣಾಶನರಿದ್ದರು..
ತರೆಗೆಲೆಗಳನ್ನೂ ತ್ಯಜಿಸಿ ಕೇವಲ ಜಲಮಾತ್ರವನ್ನೇ ಸೇವಿಸುವ ಜಲಾಶನರಿದ್ದರು..
ಇವೆಲ್ಲವನ್ನೂ ಪರಿತ್ಯಜಿಸಿ ಕೇವಲ ವಾಯುಮಾತ್ರವನ್ನೇ ಸೇವಿಸುತ್ತಾ ತಪಗೈಯುವ ವಾಯುಭಕ್ಷರಿದ್ದರು..
ಅಲ್ಲಿ ಸಾಧಕರಿದ್ದರು..
ಸಿದ್ಧರಿದ್ದರು..
ಋಷಿಗಳಿದ್ದರು..
ಮಹರ್ಷಿಗಳಿದ್ದರು..
ದೇವರ್ಷಿಗಳಿದ್ದರು..
ಬ್ರಹ್ಮರ್ಷಿಗಳಿದ್ದರು..
ಅವರೆಲ್ಲರೊಳಗೆ ಸಾಧನೆಯ ಬೇರೆ ಬೇರೆ ಅವಸ್ಥೆಯಲ್ಲಿರುವ ತನ್ನನ್ನೇ ನೋಡಿದ೦ತೆನಿಸಿತು ಕೌಶಿಕನಿಗೆ..!
ಸಾಧಕರಸ೦ಗಮವೆಂಬ ಮೂರನೆಯ ಮೆಟ್ಟಿಲನ್ನೇರಿದನು ಕೌಶಿಕ..
ದಾರಿಯೆಲ್ಲವನ್ನೂ ಕ್ರಮಿಸಿದ ಮೇಲಲ್ಲವೆ ಗುರಿ ತಲುಪುವುದು..?
ವಿಶ್ವದರ್ಶನವಾದ ಮೇಲಲ್ಲವೇ ವಿಶ್ವ೦ಭರನ ದರ್ಶನವಾಗುವುದು..?
ಮೋಡದಿ೦ದ ಮಳೆಯಾಗಿ ಹೊಳೆಗಿಳಿಯುವ ಬಿ೦ದುವೊ೦ದು ನದಿಗಳನ್ನೂ,ಮಹಾನದಿಗಳನ್ನೂ ಕ೦ಡ ಮೇಲಲ್ಲವೇ ಸಾಗರವನ್ನು ಸೇರುವುದು..?
ಮೂರು ಮೆಟ್ಟಿಲುಗಳನ್ನೆರಿ ಮೂರ್ತಿಯನ್ನು ಕಾಣುವ೦ತೆ..ಪ್ರಕೃತಿ ಮ೦ಡಲವನ್ನೂ, ದೇವಮ೦ಡಲವನ್ನೂ, ಮುನಿಮ೦ಡಲವನ್ನೂ ದಾಟಿ ಮು೦ದುವರೆದು ಬ೦ದ ಕೌಶಿಕನಿಗಾಯಿತು ಅದುವರೆಗೆ ಕ೦ಡ ಬಗೆಬಗೆಯ ದಿವ್ಯತೆಗಳ ಮೂಲಪುರುಷನ ದಿವ್ಯದರ್ಶನ ..!
ಹೌದು..! ಅದು ವಸಿಷ್ಠಾಶ್ರಮ..
ಅದೋ..!
ಅವರೇ ಬ್ರಹ್ಮಮಾನಸಪುತ್ರರಾದ ಭಗವಾನ್ ವಸಿಷ್ಠರು..!!
|| ಹರೇರಾಮ ||
August 1, 2010 at 3:46 PM
ಹರೇರಾಮ,
ನಿಜ, ಅಸತ್ಯದಿಂದ ಸತ್ಯದೆಡೆಗೆ ತೋರಿದ ಪ್ರಕೃತಿಯ ದೃಷ್ಟಿ
August 1, 2010 at 3:53 PM
ಶ್ರೀ ಗುರುಭ್ಯೋ ನಮಃ, ಪರಮ ಗುರುಭ್ಯೋ ನಮಃ, ಪರಮೇಷ್ಠಿ ಗುರುಭ್ಯೋ ನಮಃ
ಸು೦ದರ ಪಯಾಣದ ಲೇಖನ. ಪ್ರಯಾಣದ ದಾರಿಯಲ್ಲಿ, ಹಲವು ಕಡೆ ನಿ೦ತು ನೋಡಿ ಆಸ್ವಾದಿಸಿ ಮು೦ದೆ ಹೋಗುವ೦ತೆ, ಈ ಲೇಖನ ಒ೦ದು ಸು೦ದರ ಪ್ರಕೃತಿ. ಸು೦ದರ ತಾಣಗಳು. ಪ್ರಯಾಣ ದೀರ್ಘವಾಗುವ ಲಕ್ಷಣ ಕಾಣಿಸುತ್ತಿದೆ, ಇನ್ನೂ ಶುರುವಿನಲ್ಲೇ ಇದ್ದೇವೆ.
July 12, 2011 at 10:50 AM
🙂
August 2, 2010 at 9:32 AM
ಹರೇ ರಾಮ
ನಾವು ಚಿಕ್ಕವರಿದ್ದಾಗ ಪ್ರಕೃತಿಯೊಡನೆ ಮಾತನಾಡುತಿದ್ದೆವು ,ಆಟವಾಡುತಿದ್ದೆವು,ಆದರೆ ದೊಡ್ಡವರಾಗುತ್ತ ಅದನ್ನು ಮರೆಯುತಿದ್ದೇವೆ ,ಮರೆತಿದ್ದೇವೆ ,ಇಂದು ಮಕ್ಕಳಿಗೆ ಪ್ರಕ್ರತಿ ಎಂದರೆ ಬಿಳಿ ಹಾಳೆಯಲ್ಲಿ ಬಣ್ಣದ ಗೆರೆಗಳನ್ನು ಎಳೆದು ಇದು ಆಕಾಶ ,ಇದು ಚಂದ್ರ ,ಇದು ಗುಡ್ಡ ,ಬೆಟ್ಟ ,ಮರ ,ಸೂರ್ಯ ಎಂದು ತೋರಿಸುತ್ತಿದ್ದೇವೆ ,ಎಸ್ಟೋ ಜನರಿಗೆ ಬಳ್ಳಿ,ಮತ್ತು ಮರದ ವ್ಯತ್ಯಾಸ ಗೊತ್ತಿಲ್ಲ ,ತಂಗಾಳಿಯ ಸ್ಪರ್ಶ ,ಹೂವಿನ ಸುಗಂಧ ,ರವಿಯ ಎಳೆಕಿರಣ ,ತಣ್ಣನೆ ಹರಿಯುವ ನೀರಿನ ಝರಿ ,ಮೊದಲ ಮಳೆಯ ಮಣ್ಣಿನ ವಾಸನೆ ,ಎಸ್ಟೋ ಬಗೆಯ ಕಾಡಿನ ಹಣ್ಣುಗಳು ,ಹೂಗಳು ,ಗುಬ್ಬಚ್ಚಿ ಗೂಡು ,ಇವೆಲ್ಲ ನೋಡದಿದ್ದ ಮೇಲೆ ಅದರ ಸಂದೇಶ ತಿಳಿಯುವದಾದರು ಹೇಗೆ ?
ನಾವು ಎಲೆಗಳು ,ನೌಕೆಯ ಮೆಟ್ಟಿಲೇರಲು ಹಾತೊರೆಯುತಿರುವೆವು
ಪ್ರಣಾಮಗಳು
August 2, 2010 at 2:03 PM
ಹರೇರಾಮ,
‘ವಿಶ್ವ’ ವನ್ನೇ ‘ಶತ್ರು’ವೆಂದು ಕಲ್ಪಿಸಿ ದಂಡೆತ್ತಿ ಹೋದ ಕೌಶಿಕನಂತೆ ನಾವಲ್ಲವೇ? ನಮ್ಮ ಜೀವನದಲ್ಲಿ ಧನ, ಜನ,ಮೋಹದ ಜೈತ್ರ ಯಾತ್ರೆಯಲ್ಲಿ ಮದದಿಂದ ಹೋಗುತ್ತಿರುವವರಿಗೆ, ಗುರು ಮುಖೇನ ಸಿಕ್ಕುತ್ತಿರುವ ಅಮೃತ ಧಾರೆ.. ಪ್ರಕೃತಿಯ ಜಾಗದಲ್ಲಿ, ಮಾತೆಯ ಜಾಗದಲ್ಲಿ ನಿಂತು,ಸಂಸ್ಥಾನ ನಮಗೆ ತಿಳಿ ಹೇಳುತ್ತಿರುವಂತೆ ಅನಿಸುತ್ತದೆ… ಕೌಶಿಕನ ಜಾಗದಲ್ಲಿ ನಮ್ಮನ್ನೇ ನಿಲ್ಲಿಸಿ ಓದಿದರೆ ನಮ್ಮ ದೃಷ್ಟಿಯೂ ಚುರುಕಾಗಬಹುದು, ನಮ್ಮ ಪ್ರಕೃತಿಯ ಬಗ್ಗೆ ಇರುವ ಕಿವುಡುತನವೂ ಮಾಯವಾಗಬಹುದೇನೋ, ನಮ್ಮ ಅಜ್ಞಾನದ ಮೊಟ್ಟೆಯನ್ನು ಒಡೆಯುತ್ತಿರುವ, ಆತ್ಮಸೂರ್ಯನನ್ನು ಕಾಣಲು ಪ್ರೇರೇಪಿಸುವ ಗುರುಗಳ ಚರಣಗಳಿಗೆ ಮನಸಾ ನಮನಗಳು…
ಮೂರು ಮೆಟ್ಟಿಲುಗಳಲ್ಲಿ ಮೂರು ಲೋಕದ ಸತ್ಯದ ಜೀವನ ಪಾಠವಿದು ಅಲ್ಲವೇ ಗುರುಗಳೇ? ಹರೇರಾಮ..
August 6, 2010 at 11:21 PM
ಸು೦ದರವಾದ ಪ್ರತಿಕ್ರೀಯೆ
August 2, 2010 at 2:12 PM
ಅದ್ಭುತ ದರ್ಶನ!!!………….
ಭಾಗವತದ ಅವಧೂತ ಗೀತೆಯ ಸಾಕ್ಷಾತ್ಕಾರ!
ಸೃಷ್ಠಿಯಲ್ಲಿ ಗುರುವನ್ನು ಕಂಡನೇ!! ಷಷ್ಠಾಂಶವೃತ್ತಿ???
ತಪೋಧನರಿಂದ ಪಡೆದ ಷಷ್ಠಾಂಶದ ಸಾರ್ಥಕತೆ!!…………
ಇದಲ್ಲವೇ? ಜೀವನದಲ್ಲಿ ಅರ್ಥ ಸಂಗ್ರಹದ ಸಾರ್ಥಕತೆ!!…………
August 2, 2010 at 3:00 PM
ರಾಮ ರಾಮ!
ಅದ್ಭುತ ಕಾವ್ಯಮಯವಾಗಿ ಮೊಡಿಬಂದ ವೇದಾಂತ ಸಾರಗಂಗೆ
ಒಳ ಒಳ ಹರಿದಂತೆ ತೆರೆದುಕೊಂಡು ತಿರುಳ ಸಾರ
ಉಣ ಬಡಿಸುವ ಪರಿ ಇದೂ ಅದ್ಭುತ !ಅತ್ಯದ್ಭ್ಹುತ!!
August 2, 2010 at 3:17 PM
ನಾನೇನೂ ಬರೆಯಲಾರೆ ದೇವಾ……….
August 2, 2010 at 3:27 PM
ಅನಂತ ಭ್ರಮೆಗಳಿಂದಲೇ ಅನಂತನ ದರ್ಶನವಲ್ಲವೇ ಗುರುವರ್ಯಾ…..
August 2, 2010 at 8:59 PM
ennadaru navu prakrutiyodane matanadalu nimma abhavirali deva…..
August 2, 2010 at 11:02 PM
hareraama…. As i know, we are gifted with very fine system in the body to hear to nature…not only hearing even seeing… but we neglected and never bothered to maintain the system given by the god, which has led us to be deaf..a man with fine system can hear the voice of ants and also can see the cells of living systems which are now observed under microscope….we failed to keep up…Samsthana ,am i right ? if not , please correct……
Through this article Guru has made us to think and listen to nature’s talk along with the inner meanings of the talk… i think, no where we will get such a good spoon feeding!!!!!
August 4, 2010 at 11:04 PM
ಅಬ್ಬಾ……..
ಅಬ್ಬಾ……..
ಅಬ್ಬಾ……..
ಅಬ್ಬಾsssssssssssssssssssssssssssssss
.
ಪುಣ್ಯವಿರಬೇಕು ಈ ಲೇಖನವ ಓದಲು, ಗುರು ಹಿರಿಯರ ಆಶೀರ್ವಾದವಿರಬೇಕು ಈ ಲೇಖನವ ಅನುಭವಿಸಲು.
.
ನಿತ್ಯ ಪಾರಾಯಣ ಕಾವ್ಯ ಲೇಖನವಿದು..
.
ಹಾದಿಯ ತು೦ಬ ಸಾಧಕರ ದರ್ಶನ, ಸ್ವದರ್ಶನ.
.
ಸಾಧಕ ಶಾಲೆಯ ವಿಧ್ಯಾರ್ಥಿಗಳೇ ಇದೋ ಇಲ್ಲಿದೆ ನಿಮಗೆ ಭವ್ಯ ಸ್ವಾಗತ
ಇಲ್ಲಿ ಗಡಿಬಿಡಿ ಇಲ್ಲ, ಅನುಭವಿಸಿ ಅನುಭವಿಸಿ ಹೆಜ್ಜೆ ಹೆಜ್ಜೆಯ ಅನುಭವಿಸಿ,
ನೀ ಬೇರೆಯಲ್ಲ ನೀ ಕಾಣುತ್ತಿರುವ ನೋಟ ಬೇರೆಯಲ್ಲ
ಹರಿಯಲ್ಲ ಅರಿವೆಲ್ಲಾ
.
ಚಿತ್ತ ಚ೦ಚಲತೆಯಿ೦ದಾದ ಚಲನವೇ ಸ೦ಸಾರ, ಅಚಲತೆಯೆ ಪರಬ್ರಹ್ಮ……?
ಕುಣಿದಾಡಿ ಬಳಲಿದಾಗ ಅಚಲತೆ, ಮೊದಲು ಸರೀ ಕುಣಿಯಬೇಕು…..?
.
ಬಹಳ ದಿನವಾದ ಮೇಲೆ ಸ್ವಯು೦ಭು ಮತ್ತೆ ನೆನಪಾಗುತ್ತಿದೆ.
.
“ಮೂರು ಮೆಟ್ಟಿಲುಗಳ ಮೀರಿ ಮೆರೆವನೋ ಗುರುಮೂರುತಿ…” – ಅರ್ಥವಾಗುತ್ತಿದೆ – ಪುಣ್ಯವಿದೆ – ಗುರುಗಳೇ ಆಶೀರ್ವಾದ ಬೇಡುತ್ತಿರುವೆವು – ಪೂರ್ಣ ಅರ್ಥವಾಗಲಿ – ಅರ್ಥ ತಟಸ್ಥವಾಗಲಿ – ಸಾಧಕ ಸಾಧನೆ ಸತತವಾಗಲಿ ಸಹಜವಾಗಲಿ
.
ಶ್ರೀಗುರುಗಳಿ೦ದ ಪ್ರಣಾಮ ಸ್ವೀಕರಿಸುತ್ತಿರುವ ಶ್ರೀರಾಮನಿಗೆ ಪ್ರಣಾಮಗಳು
ಒ೦ದು ಮಠಕ್ಕೆ ಆರಾಧ್ಯ ದೈವವನ್ನು ಹೇಗೆ ತೀರ್ಮನಿಸುತ್ತಾರೆ? ಶ್ರೀರಾಮಚ೦ದ್ರ ಮಠಕ್ಕೆ ಆರಾಧ್ಯ ದೈವ ಹೇಗೆ ಮತ್ತು ಏಕೆ?
.
ಶ್ರೀ ಗುರುಭ್ಯೋ ನಮಃ
August 8, 2010 at 9:37 PM
ಔಷಧದ ಅಂಗಡಿಯಲ್ಲಿ ಅದೆಷ್ಟೋ ಔಷಧಗಳಿವೆ…ಅವೆಲ್ಲವೂ ನಮಗಲ್ಲ…ವೈದ್ಯರು ಶರೀರಶಾಸ್ತ್ರದ ಜ್ಞಾನದಿಂದ ನಿರ್ದೇಶಿಸುತ್ತಾರೆ ನಮಗ್ಯಾವ ಔಷಧ ಉಚಿತವೆಂದು…
ಹಾಗೆಯೇ ಒಂದು ವ್ಯಕ್ತಿಗಾಗಲೀ,ಸಂಸ್ಥೆಗಾಗಲೀ ೩೩ ಕೋಟಿ ದೇವತೆಗಳಲ್ಲಿ ಯಾವುದು ಭವಭೇಷಜವೆಂದು ಆತ್ಮಜ್ಞಾನದ ಬಲದಿಂದ ಪರಮಗುರು ನಿರ್ಣಯಿಸುತ್ತಾನೆ…ನಿರ್ದೇಶಿಸುತ್ತಾನೆ…
ನಮ್ಮ ಮಠಕ್ಕೆ ಶ್ರೀಸೀತಾರಾಮಚಂದ್ರ-ಚಂದ್ರಮೌಲೀಶ್ವರ-ರಾಜರಾಜೇಶ್ವರಿಯರ ಉಪಾಸನೆ ವಿಹಿತವೆಂದು ಆದಿಗುರು ಶಂಕರರು ನಿರ್ಣಯಿಸಿದರು…
August 10, 2010 at 11:43 PM
ಪ್ರಣಾಮಗಳು. ಧನ್ಯವಾದಗಳು. ಪ್ರಣಾಮಗಳು.
August 4, 2010 at 11:09 PM
Don’t miss this article, this is the best in the list.
.
hit this page more and more times, become timeless and spaceless
August 4, 2010 at 11:15 PM
ಈ ಲೇಖನ ಇನ್ನೂ ಓದಿಲ್ಲದಿದ್ದರೆ ಓದಿ, ಓದಿದ್ದರೆ ಮತ್ತೆ ಓದಿ
ಒದ್ದು ಹೊರಹಾಕಿರಿ ಕೆಟ್ಟ ಕೌಶಿಕನ, ಎದ್ದು ಬ೦ದು ಮಿತ್ರನಾಗಿ ವಿಶ್ವ೦ಭರನ
ಹರೇ ರಾಮ, ಹರಿ ರಾಮ
October 30, 2010 at 6:20 PM
ಹೌದು, ಪ್ರವಚನಕ್ಕು ಲೇಖನಕ್ಕು ವ್ಯತ್ಯಾಸಗಳಿವೆ.
ಗುರುಗಳೇ ರಾಜ್ಯ ಲೇಖನವನ್ನು ತಿ೦ಗಳಿಗೆ ಒ೦ದು ಬಾರಿಯಾದರು ಬರೆಯಬೇಕೆ೦ದು ಸಾಸ್ಠಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
————————————————————————-
.
ಈ ಲೇಖನವ ಓದಿ ಪೂರ್ಣ ಕಳೆದುಹೋಗಿದ್ದೆವು.
ಪರಮಾತ್ಮನ ಸ್ಪರ್ಶವಾದರೆ ಕಳೆದುಹೋಗುವುದು ಲೋಕ, ಪರಮಾತ್ಮ ನಿನ್ನ ನೋಡಿದ ಮೇಲೆ ಮತ್ತೆ ಲೋಕ ನೋಡಲಾರೆ, ನಿನ್ನ ಚರಣವ ಮುಟ್ಟಿ ಸೃಷ್ಟಿಯ ಮೆಟ್ಟಿ ಹಾರಿ ಬರುವೆ.. ಹಿಡಿದಿಕೊ, ಕೂಡಿಸಿಕೊ ನಿನ್ನ ಹೆಗಲ ಮೇಲೆ, ಮಗುವಾಗುವೆನು ಹಗುರಾಗುವೆ, ಹೆರ ನಿ೦ತು ನೋಡುವೆನು ನಿನ್ನ ಕಾಲಡಿಯಲ್ಲಿರುವ ಸೃಷ್ಟಿಯ.
.
ಕಾಲಾಡಿಯ ಸೃಷ್ಟಿಯಲ್ಲಿರುವ ನೀರಲ್ಲಿ ಮುಳುಗೆಳುತ್ತಿರುವ ಶ೦ಕರಾಚಾರ್ಯರ ಕಾಣುತಿರುವೆ. ಆಚಾರ್ಯರನ್ನು ಅತಿ ಆನ೦ದದಿ೦ದ ಪರಮಾತ್ಮ ನೀ ನೋಡುತಿರುವೆ. ಆಚಾರ್ಯರು ಸೃಷ್ಟಿಯಲ್ಲೆ ಪರಮಾತ್ಮನನ್ನು ಸೃಷ್ಟಿಸಿಹರು. ಪರಮಾತ್ಮ ನೀ ಗುರುಗಳ ಮು೦ದೆ ಕರುವಾಗಿರುವೆ, ನಿನ್ನ ಪೂರ್ಣ ದರ್ಶನವ ಆಚಾರ್ಯರು ನಿನ್ನ ಕಾಲು ಭಾಗದ ಸೃಷ್ಟಿಯಲ್ಲೆ ಮಾಡಿಸಿಹರು. ನನ್ನೊಳು ದ್ವೈತ ಭಾವವಿನ್ನು ನಶಿಸಿಲ್ಲವಾದರೂ, ಪರಮಾತ್ಮ ಮತ್ತು ಶ೦ಕರಾಚಾರ್ಯರ ಅದ್ವೈತವನ್ನು ಪರಮಾತ್ಮನ ಹೆಗಲ ಮೇಲೆ ಕುಳಿತು ಕ೦ಡೆನು.
.
ಇರದ ಸ೦ಸಾರವ ಹಿಡಿಯಲು ಹೊರಟರೆ ಬರೀ ಅಲೆದಾಟ. ಅಲೆಅಲೆಗಳ ದಾಟಿ ಶಾ೦ತಗ೦ಭೀರನಾದದೊಳು ಕಲೆತು ಕಳೆದುಹೋಗಬೇಕು. ಹಿ೦ದೆ ನಿಲ್ಲಲೂ ಆಗದೆ, ದಾಟಿ ನಿನ್ನ ಸೇರಲು ಆಗದೆ, ರೋಗದಿ೦ದ ಬಳಲುತ್ತಿರುವೆ, ಭವರೋಗವ ಗುಣಪಡಿಸು… “…ಸರ್ವ ವ್ಯಾಧಿ ನಿವಾರಣ೦ ಸರ್ವ ದುರೀತೋಪಶಮನ೦ ವಿಷ್ಣು ಪದೋದಕ೦ ಶುಭ೦…”, ಶ೦ಕರಾಚಾರ್ಯ ಗುರುಗಳೆ ನಮಗೆ ತೀರ್ಥ ದಯಪಾಲಿಸಿರಿ.
.
ಶ್ರೀ ಗುರುಭ್ಯೋ ನಮಃ
October 30, 2010 at 8:18 PM
ಬರೆಯುವ ತುಡಿತ ಬಹಳವೆ ಇದೆ..
ಪ್ರಯತ್ನವೂ ಇದೆ…
ಕಾಲದೊಡನೆ ನಡೆಸುತ್ತಿರುವ ಕದನದಲ್ಲಿ ಗೆಲ್ಲಬೇಕಾಗಿದೆ..
‘ಮತ್ತೆ ಬರುವೆವು..ಮತ್ತೆ ಮತ್ತೆ ಬರೆಯುವೆವು’
ಇದು ನಿಶ್ಚಿತ..!
July 10, 2011 at 8:55 PM
ಕೌಶಿಕನಲ್ಲಿ ನನ್ನನ್ನೇ ಕಂಡಂತಾಯಿತು…
ಬೇಸರವಾಯಿತು..
ಖುಶಿಯೂ ಆಯಿತು.
ಗುರು ಸಿಗುವನೆಂದು.. ದಾರಿ ಸಿಗುವುದೆಂದು…
July 11, 2011 at 4:27 PM
ಃ-)
October 30, 2012 at 8:31 AM
ಪ್ರಕೃತಿಪುರುಷರ ಪ್ರೇಮನಾದ ನಿರ್ಗುಣಬ್ರಹ್ಮನ ಕಾಣಿಸುತ್ತಿರುವುದು ಸ್ವಚ್ಛಂದ ನೇಸರನಲ್ಲಿ, ಆಲಿಸಲು ಬೇಕು ನಮ್ಮೊಳಗೂ ಸು೦ದರ ಪರಿಸರ, ಚಿಲಿಪಿಲಿ ಎ೦ದು ಮರಿಹಕ್ಕಿಗಳು ಗುರುವಿನ ಗಾನವ ಹಾಡಲು ಬೇಕು..
(* ಹರೇರಾಮ *ಬ್ಲಾಗ್ಸ್* ಗುರುಗಳೇ — ಜಟಾಯು *)
.
ಶ್ರೀ ಗುರುಭ್ಯೋ ನಮಃ
October 30, 2012 at 10:54 AM
ಇಂಥಾ ಅದ್ಭುತ ಮತ್ತೆಂದು ಓದುವ ಭಾಗ್ಯ ನಮಗೆ? ಸಾಷ್ಟಾಂಗ ಪ್ರಣಾಮಂಗೊ ಸಂಸ್ಥಾನ.
October 31, 2012 at 3:48 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಸಾಧನೆಯ ಅದ್ಯಾವ ಹಂತದಲ್ಲಿರುವೆನೋ ನಾನರಿಯೆ. ಮರುಭೂಮಿಯಲ್ಲಿ ನೀರಿನ ತಾಣವನ್ನು ನೋಡಿ ಎಲ್ಲರನ್ನೂ ಕರೆತರುವೆನೆಂಬ ವಿಶ್ವಾಸದಿಂದ ಹಿಂದಿರುಗಿ ‘ದಾರಿ ಕಾಣದೆ’ ಪರದಾಡುತ್ತಿರುವ ಅನುಭವವಾಗುತ್ತಿದೆ. ಗುರುವೇ ನಿನ್ನ ಪಾದದಡಿಯ ಹೂವಾಗುವಷ್ಟು ಪುಣ್ಯ ಮಾಡಲಿಲ್ಲ. ಧೂಳಾದರೂ ನಿನ್ನ ಪಾದ ಸ್ಪರ್ಶ ಪಡೆಯುವ ಭಾಗ್ಯ ಸಿಕ್ಕಿತಲ್ಲವೇ ಎಂಬ ಧನ್ಯತೆ. ಧೂಳಾಗಿ ಆ ಪಾವನ ಚರಣಗಳಿಗೆ ಕೊಳೆಯಾದೆನಲ್ಲ ಎಂಬ ಕೊರಗು ಕಾಡುತ್ತಿದೆ.