ಆ ಊರಿನಲ್ಲಿ ಹಾಲು ಹರಿಯದ ಮನೆಯಿಲ್ಲ; ಮೃಷ್ಟಾನ್ನವುಣ್ಣದ ಬಾಯಿಲ್ಲ; ಸುಗಂಧ ಪೂಸದ ತನುವಿಲ್ಲ; ತೃಪ್ತವಲ್ಲದ ಮನವಿಲ್ಲ; ಧರ್ಮವಿಲ್ಲದ ಜನರಿಲ್ಲ; ಶೀಲವಿಲ್ಲದ ಬದುಕಿಲ್ಲ!
ಆ ಊರಿನಲ್ಲಿ ಕುಂಡಲವಿಲ್ಲದ ಕಿವಿಯಿಲ್ಲ; ಕಂಕಣವಿಲ್ಲದ ಕರವಿಲ್ಲ; ಹಾರವಿಲ್ಲದ ಕೊರಳಿಲ್ಲ; ಮುಕುಟವಿಲ್ಲದ ಶಿರವಿಲ್ಲ!
ಕಾಮಿಯಿಲ್ಲದ ಊರು; ಕ್ರೂರಿಯಿಲ್ಲದ ಊರು; ಕಪಟಿ-ಕಾಪುರುಷ*ರಿಲ್ಲದ ಊರು; ಹುಡುಕಿದರೊಬ್ಬ ಕುಡುಕ ಸಿಗದೂರು!
ಅಲ್ಪರಿಲ್ಲದ, ಅತೃಪ್ತರಿಲ್ಲದ, ಅಜ್ಞಾನಿಗಳಿಲ್ಲದ, ಅಧರ್ಮಿಗಳಿಲ್ಲದ, ಅನ್ಯಾಯಿಗಳಿಲ್ಲದ ಅತಿವಿಚಿತ್ರದ ಊರು!
ದೀನ-ದರಿದ್ರರಿಲ್ಲ; ದುರ್ಬಲ-ದುರ್ಜನರಿಲ್ಲ; ಸುಳ್ಳರಿಲ್ಲ; ಕಳ್ಳರಿಲ್ಲ; ಕೊಲೆಗಡುಕರಿಲ್ಲ; ತಲೆಹಿಡುಕರಿಲ್ಲವೇ ಇಲ್ಲವಲ್ಲಿ!
“ಎಲ್ಲೆಲ್ಲಿಯೂ ಶುಭ! ಎಲ್ಲೆಲ್ಲಿಯೂ ಸುಖ!” ಈ ಪರಿಯ ರಾಜ್ಯವೊಂದು ಎಲ್ಲಿಯಾದರೂ, ಎಂದಾದರೂ ಇರಬಹುದೇ?
ಚಿತ್ರದಲ್ಲಿಯೋ, ಚಲನಚಿತ್ರದಲ್ಲಿಯೋ ಇರಬಹುದೆನ್ನುವಿರೇ? ಇತಿಹಾಸವೆಂದೇ ಕರೆಯಲ್ಪಡುವ ಶ್ರೀರಾಮಾಯಣ ಈ ಪರಿಯ ಊರೊಂದನ್ನು ಉಲ್ಲೇಖಿಸಿಯೇ ಆರಂಭಗೊಳ್ಳುತ್ತದೆ. ಅದೇ ಅಯೋಧ್ಯೆ! ಕೋಸಲದ ರಾಜಧಾನಿ! ರಾಮಾವಿರ್ಭಾವ ಭೂಮಿ! ಭಕ್ತಭಾವಭೂಮಿ!
ಶುದ್ಧಾಂತರಂಗರ ಪರಿಶುದ್ಧ ಸ್ವಪ್ನದಲ್ಲಿ ಮಾತ್ರವೇ ಕಾಣಬಹುದಾದ ರಾಜ್ಯವೊಂದನ್ನು, ಮತ್ತು ಅದಕ್ಕೆ ತಕ್ಕ ರಾಜಧಾನಿಯೊಂದನ್ನು ಹಾಗೆ ಕಟ್ಟಿದ್ದನು, ಮತ್ತು ಹಾಗೆಯೇ ಇಟ್ಟಿದ್ದನು ದೊರೆ ದಶರಥ. ಮಹಾದೈವಾನುಗ್ರಹ ಮತ್ತು ಮಹತ್ತಮವಾದ ಪುರುಷ ಪ್ರಯತ್ನವಲ್ಲದಿದ್ದರೆ ಕಾರ್ಯವಿದು ಕನಸು ಮಾತ್ರ! ಗುರುಗಳು ಮತ್ತು ಸಚಿವರ ರೂಪದಲ್ಲಿ ಇವೆರಡೂ ದಶರಥನಿಗೊಲಿದಿತ್ತು. ದೈವಾನುಗ್ರಹದ ದ್ವಾರವಾಗಿ ಗುರು ವಸಿಷ್ಠರಿದ್ದರು. ವಾಮದೇವರೇ ಮೊದಲಾದ ಮತ್ತೇಳು ಮಹರ್ಷಿಗಳಿದ್ದರು. ಪುರುಷ ಪ್ರಯತ್ನದ ಪ್ರಧಾನ ಸಾಧನವಾಗಿದ್ದವರೇ ಅವನ ಅಷ್ಟ ಸಚಿವರು.
ಚರಣಗಳೆರಡು ದೇಹದ ಭಾರವನ್ನು ಹೊತ್ತಂತೆ ದೇಶದ ಭಾರವನ್ನು ದೊರೆಯ ಎಂಟು ಗುರುಗಳು ಮತ್ತೆಂಟು ಮಂತ್ರಿಗಳು ಹೊತ್ತಿದ್ದರು. ವಸಿಷ್ಠರನ್ನು ಹೋಲುವ ಗುರುವೆಲ್ಲಿ? ಸುಮಂತ್ರನಿಗೆ ಸಮನಾದ ಮಂತ್ರಿಯೆಲ್ಲಿ? ವಸಿಷ್ಠರು ಮೂರ್ತಿಮತ್ತಾದ ಧರ್ಮಶಾಸ್ತ್ರವಾದರೆ ಸುಮಂತ್ರನು ಮೈವೆತ್ತ ಅರ್ಥಶಾಸ್ತ್ರ!
ಧ್ಯಾನದಿಂದಲೇ ಇಹಲೋಕ-ಪರಲೋಕಗಳ ಸಕಲವನ್ನೂ ತಿಳಿದು, ದೊರೆಗೆ, ದೇಶಕ್ಕೆ ಯಾವ ಅಶುಭವೂ ತಗುಲದಂತೆ ಗುರುಗಳು ನೋಡಿಕೊಂಡರೆ, ಚಾರರ ಮೂಲಕ ಸ್ವದೇಶ-ಪರದೇಶಗಳ ಸಮಸ್ತ ವಿದ್ಯಮಾನಗಳನ್ನೂ ತಿಳಿದು, ದೇಶಕ್ಕೂ, ದೊರೆಗೂ ಯಾವ ಆಪತ್ತೂ ಬಾರದಂತೆ ಮಂತ್ರಿಗಳು ನೋಡಿಕೊಳ್ಳುತ್ತಿದ್ದರು. ಅರಸನ ಆತ್ಮಗತವಾದ ಶುಭಾಶುಭಗಳನ್ನು ಅಂತರ್ದೃಷ್ಟಿಯಿಂದ ಕಂಡು, ಕೆಲವೊಮ್ಮೆ ಕರ್ಮತಂತ್ರದಿಂದ, ಕೆಲವೊಮ್ಮೆ ತಮ್ಮ ಅನುಗ್ರಹಮಾತ್ರದಿಂದ ಅಶುಭವಾಗದಂತೆ, ಶುಭವೇ ಆಗುವಂತೆ ನೋಡಿಕೊಳ್ಳುತ್ತಿತ್ತು ಗುರುವೃಂದ. ದೊರೆಯು ಏನನ್ನೂ ಹೇಳದೆಯೇ ಅವನ ಹೃದಯದಲ್ಲಿರುವುದನ್ನು ತಾವಾಗಿಯೇ ತಿಳಿದು, ಕಾರ್ಯಾನ್ವಯಗೊಳಿಸುತ್ತಿದ್ದರು ಮಂತ್ರಿಗಳು.
ಮುಂದಿನ ದಾರಿ ತೋರಲು ಪರಮರ್ಷಿಗಳಾದ ಗುರುಗಳಿದ್ದಾಗ, ಗುರು ತೋರಿದ ದಾರಿಯಲ್ಲಿ ರಾಜ್ಯರಥವನ್ನು ಮುನ್ನಡೆಸಲು ಮನೀಷಿಗಳಾದ ಮಂತ್ರಿಗಳಿದ್ದಾಗ ದೊರೆಗೇತರ ಚಿಂತೆ!?
ಆದರೂ ಚಿಂತೆಯೊಂದಿತ್ತು ದೊರೆಗೆ..
ಸುಖೀ ರಾಜ್ಯದ ಪರಮಸುಖಿಯಾದ ದೊರೆಯಾಗಿ ನಂದನವನದಲ್ಲಿ ಇಂದ್ರನಂತೆ ವಿಹರಿಸಬೇಕಿತ್ತು ದಶರಥ! ಆದರೆ ಇದು ಭೂಮಿ, ಸ್ವರ್ಗವಲ್ಲ! ಇಲ್ಲಿ ಕೇವಲ ಸುಖವಿರಲು ಸಾಧ್ಯವಿಲ್ಲ. ಅನಂತ ಸುಖವು ಸ್ವರ್ಗದಲ್ಲಿಯೂ ಇರಲು ಸಾಧ್ಯವಿಲ್ಲ. ದುಃಖಸ್ಪರ್ಶವೇ ಇಲ್ಲದ ಮುಕ್ತಿಯಲ್ಲಿ ಮಾತ್ರವೇ ಸುಖವಿರಲು ಸಾಧ್ಯ! ಭೂಮಿಯಲ್ಲಿ ‘ಥೋಡಾ ಸುಖ ತೋ ಥೋಡಾ ದುಃಖ ಹೈ!’.
ನಿಜ, ಸಮಸ್ತ ರಾಜ್ಯದಲ್ಲಿ ಸುಖವಿತ್ತು; ಆದರೆ ದಶರಥನ ಮನದಲ್ಲಿ ಬಿಡದೆ ಕಾಡುವ ಕೊರಗಿತ್ತು. ಕೊರಗದೇ ಅವನಾದರೂ ಏನು ಮಾಡಿಯಾನು? ಬಂಗಾರದ ರಾಜ್ಯವಾದರೇನು, ಭವಿಷ್ಯ ಬೇಡವೇ!? ಅಂತಃಪುರದಲ್ಲಿ ಎಷ್ಟು ರಾಣಿಯರಿದ್ದರೇನು, ಅಂತಕಾಲದಲ್ಲಿ ಗಂಗೋದಕವೀಯಲು ಒಂದಾದರೂ ಸಂತತಿ ಬೇಡವೇ? ರಾಣೀರತ್ನ ಕೌಸಲ್ಯೆಯು ದಶರಥನ ಬದುಕನ್ನು ಬೆಳಗಿದ್ದಳು. ಅವಳಲ್ಲಿ ನಾಡನ್ನು ಬೆಳಗುವ ಪುತ್ರರತ್ನದ ಪ್ರತೀಕ್ಷೆಯಿತ್ತು. ಅತಿ ದೀರ್ಘಸಮಯದಿಂದ ಆ ಪ್ರತೀಕ್ಷೆಯು ಪ್ರತೀಕ್ಷೆಯಾಗಿಯೇ ಉಳಿದಿತ್ತು. ದಶರಥನ ಬದುಕೆಲ್ಲವೂ ಪುತ್ರಪ್ರತೀಕ್ಷೆಯೆಂದರೆ ಅದು ಅತಿಶಯೋಕ್ತಿಯಲ್ಲ, ನಿಜೋಕ್ತಿ! ಇದೀಗ ಪುತ್ರಪ್ರತೀಕ್ಷೆಯು ಫಲಿಸದೇ, ಬದುಕೇ ಮುಗಿಯುವ ಸಮಯವು ಸನಿಹವಾಗುತ್ತಲಿತ್ತು.
ಯಾವುದಕ್ಕೂ ಸಮಯ ಬರಬೇಕಲ್ಲವೇ? ಅದೊಂದು ದಿನ ಇದ್ದಕ್ಕಿದ್ದಂತೆ ದಶರಥನ ಹೃದಯದಲ್ಲೊಂದು ಸ್ಫುರಣೆ! ಪುತ್ರಪ್ರಾಪ್ತಿಯ ಪ್ರೇರಣೆ! ಕಾರ್ಗತ್ತಲಿನಲ್ಲಿ ಅನಂತ ದೂರ ನಡೆದ ಬಳಿಕ, ದೂರದಲ್ಲೆಲ್ಲೋ ಬೆಳಕಿನ ಸೆಲೆಯ ಸುಳಿವು!
ಅಶ್ವಮೇಧದ ಯಜ್ಞಾಗ್ನಿಯ ಪ್ರಭೆಯೇ ತನ್ನ ಬಾಳ ಬೆಳಕಿನ ಶುಭಾಗಮನದ ದ್ವಾರವೆಂಬ ಹೊಳಹು!
~*~*~
(ಸಶೇಷ..)
ಕ್ಲಿಷ್ಟ-ಸ್ಪಷ್ಟ:
- ಕಾಪುರುಷ = ಹೇಡಿ
- ಮನೀಷಿ = ಜ್ಞಾನಿ
- ದಶರಥನ ಅಷ್ಟ ಗುರುಗಳು: ವಸಿಷ್ಠ, ವಾಮದೇವ, ಸುಯಜ್ಞ, ಜಾಬಾಲಿ, ಕಾಶ್ಯಪ, ಗೌತಮ, ಮಾರ್ಕಂಡೇಯ, ಕಾತ್ಯಾಯನ
- ದಶರಥನ ಅಷ್ಟ ಮಂತ್ರಿಗಳು: ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ, ಸುಮಂತ್ರ
August 31, 2017 at 6:54 AM
ಅಷ್ಟವೈಭವವಿದ್ದರೂ ಇಷ್ಟಪುತ್ರರಿಲ್ಲದಿರೆ ಬದುಕಿಗೇನರ್ಥ?ಕಲ್ಪತರುವಿಗೆ ಪುಷ್ಪವು ಬೇಡವೇ?
August 31, 2017 at 6:57 AM
ರಾಜಧಾನಿಯಾದ ಅಯೋಧ್ಯೆಯ ವರ್ಣನೆಯ ಕೇಳಿದಾಗ ದಶರಥನೂ ಸೇರಿದಂತೆ ಸೂರ್ಯವಂಶದ ರಾಜರುಗಳು, ಅವರ ಗುರುಗಳು, ಅವರ ಮಂತ್ರಿಗಳು ಎಂತಹವರಾಗಿದ್ದಿರಬಹುದೆಂಬುದು ಸುಸ್ಪಷ್ಟ! ಅಯೋಧ್ಯೆಯನ್ನು model ಆಗಿರಿಸಿ ಇಡಿಯ ರಾಜ್ಯ, ಮಾತ್ರವಲ್ಲದೇ ಇಡಿಯ ಭರತಖಂಡವನ್ನೇ ಈ ತರಹವಾಗಿಸುವ ದೂರದೃಷ್ಟಿ ಇದ್ದಿರಬಹುದು! ಆದರೆ ಅಂತಹಾ ಮಹತ್ಕಾರ್ಯಕ್ಕೆ ರಾಮನೇ ಬೇಡವೇ?
ರಾಮನ ಪ್ರತೀಕ್ಷೆ ಅಂದೂ, ಇಂದೂ!
August 31, 2017 at 9:40 AM
ರಾಜ್ಯಭಾರಕ್ಕೆ ಮುಂದಿನ ದಾರಿ ತೋರಲು ಪರಮರ್ಷಿಗಳು, ಗುರು ತೋರಿದ ದಾರಿಯಲ್ಲಿ ರಾಜ್ಯವನ್ನು ಮುನ್ನಡೆಸುವ ಮಂತ್ರಿ ಮಂಡಲವಿದ್ದರೆ ರಾಜ್ಯ ದಶರಥನ ರಾಜ್ಯದಂತೆ ಎಲ್ಲೆಲ್ಲೂ ಶುಭ, ಎಲ್ಲೆಲ್ಲೂ ಸುಖವಾಗಿರಲು ಸಾಧ್ಯ.
ಕಪಟಿಗಳೇ ರಾಜರಾಗಿಬಿಟ್ಟರೆ ನಾಡು ಏನಾಗಬಹುದೆಂಬುದಕ್ಕೆ ನಮ್ಮ ದೇಶದ ದುರವಸ್ಥೆಯೇ ನಿದರ್ಶನ. ಇಲ್ಲಿ ರಾಜನಿಗೆ ಆಧಾರಸ್ಥಂಭವಾಗಿ ಆತನ ಅಷ್ಟ ಗುರುಗಳು ಮತ್ತು ಅಷ್ಟಮಂತ್ರಿಗಳು ನಿಂತಿದ್ದರು. ದಶರಥ ಅವರ ಸಲಹೆಗಳನ್ನು ಸ್ವೀಕರಿಸುತ್ತಿದ್ದ. ಅದಕ್ಕೆ ಆತನ ರಾಜ್ಯ ಸುಭಿಕ್ಷವಾಗಿತ್ತು. ಇಂದು ಕೆಡುಕರು, ಕುಡುಕರೇ ಖುರ್ಚಿಯನ್ನು ತಮ್ಮದಾಗಿಸಿಕೊಂಡಿದ್ದರಿಂದ
ದೇಶ ದುರ್ಭಿಕ್ಷವಾಗಿದೆ. ರಾಜ ಗುರುವಿನ ಮಾರ್ಗದರ್ಶನದಲ್ಲಿ ಮುಂದುವರಿದರೆ ದೇಶ ಕ್ಷೇಮವೆಂದು ಎತ್ತಿ ಹೆಳುತ್ತಿದೆ.
#ರಾಮರಶ್ಮಿ
August 31, 2017 at 10:47 AM
ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಂ| ಏಕೈಕಮಕ್ಷರಂ ಪುಂಸಾಂ ಮಹಾ ಪಾತಕ ನಾಶನಂ||
August 31, 2017 at 7:17 PM
ಎಲ್ಲವೂ ಇದ್ದರೇನು? ಸಂತಾನವಿಲ್ಲವಲ್ಲಾ??!
ಈ ಕೊರಗಿಗೆ ರಾಜನೂ ಹೊರತಲ್ಲ!
ಒಳ್ಳೆಯದರ ಆಗಮನವಾಗುವುದು ಬಹುಕಾಲದ ಪ್ರತೀಕ್ಷೆಯ ನಂತರವೇ ತಾನೆ?
#ರಾಮರಶ್ಮಿ
September 1, 2017 at 6:19 AM
ಹರೇ ರಾಮ ಗುರುಬ್ಯೋನಮಃ
September 2, 2017 at 8:40 AM
ಏನಿದ್ದರೇನು ರಾಮನಿಲ್ಲದಿದ್ದರೆ..
ಕೋಟಿ ನಕ್ಷತ್ರ ಇದ್ದರೇನು ಚಂದ್ರನಿಲ್ಲದಿದ್ದರೆ..
ಏನಿದ್ದರೇನು ಗುರು ಪರಮಾತ್ಮ ಭಕ್ತಿ ಭಾವ ಜ್ಞಾನ ಇರದಿದ್ದರೆ ತೋರಿಕೆಯ ಭಾರವಷ್ಟೆ..
.
ಪಡೆಯುವ ಕ್ಷಣಿಕಗಳು ಕ್ಷಣಿಕ.. ಕೊಡುವ ಕಣಗಳ ಕ್ಷಣಗಳ ಕೊಡುವ ಪರಬ್ರಹ್ಮನಿಗೆ..
.
ರಾಜ್ಯ ರಾಮವಾಗಲು ಬಯಸುತಿತ್ತು, ಅಳಿಯದ ಸಾಮ್ರಾಜ್ಯವಾಗಲು ಕಾಯುತಿತ್ತು..
.
ಶ್ರೀ ಗುರುಭ್ಯೋ ನಮಃ