ಗೋಕರ್ಣ: ೪, ನಮ್ಮ ಬದುಕಿನಲ್ಲಿ ನಾವು ಎಷ್ಟೋ ಸಮಸ್ಯೆಗಳನ್ನು ಎದುರಿಸುತ್ತೇವೆ. ಎಡರು ತೊಡರುಗಳನ್ನು ದಾಟುತ್ತೇವೆ. ಅನೇಕ ವಿಚಾರಗಳಲ್ಲಿ ಗೆಲುವನ್ನೂ ಪಡೆಯುತ್ತೇವೆ. ಆದರೆ ಇದಾವುದೂ ನಿಜವಾದ ವಿಜಯವಲ್ಲ. ನಮ್ಮ ಅಂತರಂಗದ ಗೆಲುವೇ ನಮ್ಮ ಜೀವನವನ್ನು ಸಾರ್ಥಕತೆಯ ಗುರಿಯತ್ತ ಕೊಂಡೊಯ್ಯುತ್ತದೆ. ಆದ್ದರಿಂದ ಬಾಹ್ಯವಾದ ಜಯಕ್ಕಿಂತ ನಮ್ಮ ಮನಸ್ಸಿನ ಮೇಲೆ ಸಾಧಿಸುವ ನಿಯಂತ್ರಣವೇ ನೈಜವಾದ ಸಾಧನೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀಮದಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಅಶೋಕೆಯಲ್ಲಿ ಆಯೋಜಿತವಾದ ರಾಮಕಥಾದಲ್ಲಿ ಶ್ರೀಮದ್ವಾಲ್ಮೀಕೀ  ರಾಮಾಯಣವನ್ನಾಧರಿಸಿದ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು, ನಮ್ಮ ಬದುಕು ಭಗವಂತನ ಕೊಡುಗೆಯೆಂಬುದನ್ನು ಮರೆಯದೆ ಆ ಪರತತ್ವದತ್ತ ನಡೆಯುವುದು ನಮ್ಮ ಗುರಿಯಾಗಬೇಕು ಎಂದು ಹೇಳಿ, ಲೋಕ ಪೀಡಕನಾದ ರಾವಣನು  ಊರೂರು ಸುತ್ತುತ್ತ ಸುಂದರನಾರಿಯರನ್ನು ಬಲಾತ್ಕಾರವಾಗಿ ಎಳೆದೊಯ್ಯುತ್ತಿದ್ದಾಗ, ಅವನ ಸಹೋದರಿಯಾದ ಕುಂಭೀನಸಿಯನ್ನು ರಾಕ್ಷಸನಾದ ಮಧು ಕದ್ದೊಯ್ದ. ಮಾಡಿದ ಪಾಪಪುಣ್ಯಗಳು ಅತ್ಯುತ್ಕಟವಾಗಿದ್ದಾಗ ಅವು ತತ್ಕ್ಷಣ ಫಲ ನೀಡುತ್ತವೆಯೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆಮೇಲೆ ದೇವಲೋಕದತ್ತ ಹೋದಾಗ ರಾವಣ ಕುಬೇರಪುತ್ರ ನಲಕೂಬರನ ಪ್ರೇಯಸಿಯಾದ ಹಾಗೂ ಸುರವಿಲಾಸಿನಿಯಾದ ರಂಭೆಯನ್ನು ಬಲಾತ್ಕರಿಸಿದಾಗ ಕ್ರುದ್ಧನಾದ ನಲಕೂಬರ ಅವನಿಗೆ ಶಾಪವನ್ನಿತ್ತ. ನಲಕೂಬರನ ವ್ಯಕ್ತಿತ್ವ ಅತ್ಯಂತ ವಿಶಿಷ್ಟವಾದದ್ದು. ಚಿಕ್ಕಪ್ಪನಾದ ರಾವಣ ಇನ್ನು ಮುಂದೆ ಮನಸ್ಸಿಲ್ಲದ ಯಾವವುದೇ ಸ್ತ್ರೀಯನ್ನು ಬಲಾತ್ಕರಿಸಿದರೆ ಅದರಂದ ಅವನ ತಲೆಯು ಹೋಳಾಗಲೆಂಬ ಆ ಶಾಪದಿಂದ ಮುಂದೆಂದೂ ರಾವಣನು ಅನ್ಯಸ್ತ್ರೀಯರನ್ನು ಬಲವಂತವಾಗಿ ತನ್ನ ಭೋಗಕ್ಕೆಳಸುವ ಸ್ವಚ್ಛಂದ ಪ್ರವೃತ್ತಿಗೆ ತಡೆ ಹಾಕಿತು. ಮುಂದೆ ಶ್ರೀರಾಮನ ಪತ್ನಿ ಲೋಕಮಾತೆ ಸೀತಾದೇವಿಯನ್ನು ಅಪಹರಿಸಿ ತಂದು ಅಶೋಕವನದಲ್ಲಿಟ್ಟರೂ, ಆ ಶಾಪದ ಭಯದಿಂದಲೇ ಆಕೆಯ ಮೇಲೆ ಅಕೃತ್ಯವನ್ನು ನಡೆಸಲು ಅಸಮರ್ಥನಾದ ಎಂದು, ಮನಸ್ಸಿನ ಮೇಲೆ ನಿಯಂತ್ರಣವಿಲ್ಲದಿದ್ದರೆ ಇಂತಹ ಪಾಪಕೃತ್ಯಗಳು ಘಟಿಸುತ್ತವೆಯೆಂದು ಹೇಳಿ ರಾಮಾಯಣದಲ್ಲಿ ನಿರೂಪಿತವಾದ ರಾವಣನ ಅವನತಿಯ ಪರಂಪರೆಯನ್ನು ವಿಶ್ಲೇಷಿಸಿದರು.

ಇಂದಿನ ರಾಮಕಥಾದಲ್ಲಿ ಶ್ರೀಪಾದ ಭಟ್, ವಸುಧಾ ಶರ್ಮಾ, ಪ್ರೇಮಲತಾ ದಿವಾಕರ್, ಇವರ ಸಂಗೀತ ಮತ್ತು ಪ್ರಕಾಶರ ವೇಣುವಾದನ, ಗೋಪಾಲಕೃಷ್ಣ ಹೆಗಡೆಯವರ ತಬಲಾ, ನರಸಿಂಹ ಮೂರ್ತಿಯವರ ಮೃದಂಗವಾದನಗಳು ಅದ್ಭುತವಾದ ಗಾನಲೋಕವೊಂದನ್ನು ಸೃಷ್ಟಿಸಿದರೆ ಖ್ಯಾತ ಆಶುಚಿತ್ರಕಾರ ಶ್ರೀ ಗಣಪತಿ ನೀರ್ನಳ್ಳಿಯವರ ಸಾಂದರ್ಭಿಕ ಚಿತ್ರಗಳು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವು.

ಇಂದು ಮುಳ್ಳೇರಿಯಾ ಮಂಡಲದ ಕಾಸರಗೋಡು, ನೀರ್ಚಾಲು, ಸೀತಾಂಗೋಳಿ, ಎಡನಾಡು ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆಯು ಸಂಪನ್ನವಾಯಿತು. ಪೂಜ್ಯಶ್ರೀಗಳು. ಧರ್ಮಸಭೆಯಲ್ಲಿ ಆಶೀರ್ವಚನ ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.

Facebook Comments Box