ಹರೇ ರಾಮ.

ನಮ್ಮೆಲ್ಲರ ಉದ್ಧಾರಕ್ಕಾಗಿ ನಮ್ಮ ಪರಮಪೂಜ್ಯ ಶ್ರೀಗಳು ಪರಮಪವಿತ್ರವಾದ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲು ಉದ್ಯುಕ್ತರಾಗಿರುವ ಸಂದರ್ಭವಿದು. ಅನಾರೋಗ್ಯದ ನಿಮಿತ್ತವಾಗಿ, ಗುರುಗಳ ಈ ಮಂಗಳಕರ ವ್ರತದಲ್ಲಿ ಅಶೋಕೆಗೆ ಬಂದು ದೈಹಿಕವಾಗಿ ಸೇವೆಮಾಡಿ ಕೃತಾರ್ಥಳಾಗುವ ಭಾಗ್ಯವಿಲ್ಲ. ಪರಮಗುರುವಿನ ಈ ವ್ರತದ ಯಶಸ್ಸಿಗೆ, ಶ್ರೀಗಳ ಶಿಷ್ಯಕೋಟಿಯ ಪರವಾಗಿ ನನ್ನೀ ಕೃತಜ್ಞತಾಪೂರ್ವಕವಾದ ಗಾನಹಾರೈಕೆ.

ಗುರುಕೃಪೆಯಿರಲಿ ನಿರಂತರ.
ಹಾಡಿನ ಕಮಲಕ್ಕ


ಚಾತುರ್ಮಾಸದ ವ್ರತ ಇದು ಸರ್ವಶ್ರೇಷ್ಠ |
ಆ ತುರೀಯಾಶ್ರಮವದು ಬಲು ಕಷ್ಟ ||ಪ||

ಹೆತ್ತವರಿದ್ದರೂ ಹತ್ತಿರವಲ್ಲ |
ಬೆಂಬತ್ತಿ ಬಂದವರ್ ಯಾರೂ ಬಂಧುಗಳಲ್ಲ ||
ಭಕ್ತರು ಬಂದು ಕೈಯೆತ್ತಿ ನಮಿಸುವರು |
ಪೊತ್ತಿಹ ದೀಕ್ಷೆ ಸಮಷ್ಟಿಯ ರಕ್ಷೆ ||

ಭಕ್ತರು ತರುವ ಹೂ ತುಳಸಿಯನು |
ಶಂಕರಗೆ ಸಮರ್ಪಿಸಿ ಸಂತಸ ಪಡುವಾ ||
ಹರಿನಾಮ ಸುಧೆಯನ್ನು ಲೋಕಕ್ಕೆ ಕೊಡುವಾ |
ಗುರುವಿನ ಪಾದಪದ್ಮಕೆ ನಾವು ಮಣಿವಾ ||

ಸೀಮಾಭಿಕ್ಷವ ನಾವ್ ನಡೆಸೋಣಾ ಬನ್ನಿ |
ಸ್ವಾಮಿ ಶ್ರೀರಾಘವೇಶ್ವರನೇ ಗತಿ ಎನ್ನಿ ||
ರಾಮ ರಾಮ ಎನ್ನಿ ರಾಮಚಂದ್ರ ಎನ್ನಿ |
ಸಾಮಗಾನದೊಳೆಮ್ಮ ಸ್ವಾಮಿಗೆ ನನ್ನಿ ||
–ಸಾಹಿತ್ಯ: ಶ್ರೀ ವೆಂ. ಭ. ವಂದೂರು

ಪರಿಚಯ:

ಕಮಲಾ ಶಂಭು ಹೆಗಡೆ (ಹಾಡಿನ ಕಮಲಕ್ಕ) ಇವರು ಉತ್ತರ ಕನ್ನಡದ, ಹೊನ್ನಾವರ ತಾಲೂಕಿನ, ಗುಣವಂತೆ ಗ್ರಾಮದವರು (ಗೇರುಸೊಪ್ಪ ಸೀಮೆ, ಅಪ್ಸರಕೊಂಡ ವಲಯ). ಶಂಭು ಸಣ್ಣ ಹೆಗಡೆ, ನಿವೃತ್ತ ಅಧ್ಯಾಪಕರು, ಇವರ ಪತ್ನಿ.  ಇಬ್ಬರು ಮಕ್ಕಳು (ರಜನಿ ಹಾಗು ಕೃಷ್ಣಮೂರ್ತಿ), ಆಳಿಯ (ಗೋಪಾಲ), ಸೊಸೆ (ನಾಗರತ್ನ) ಹಾಗು ಮೂವರು ಮೊಮ್ಮಕ್ಕಳ (ಗಣಪತಿ, ಕನ್ನಿಕಾ ಹಾಗು ಪ್ರಥಮ) ಕುಟುಂಬ ಇವರದು.

ನಮ್ಮ ಪರಮಪೂಜ್ಯರಲ್ಲಿ ಆಗಾಧ ಭಕ್ತಿ-ಶ್ರದ್ಧೆಗಳನ್ನು ಇಟ್ಟಿರುವ ಇವರು, ತಮ್ಮ ನಿರಂತರ ಭಜನೆ-ತುಳಸಿಗಳ ಸೇವೆಯಿಂದಲೇ ಗುರುಪ್ರೇಮಕ್ಕೆ ಪಾತ್ರರಾಗಿದ್ದಾರೆ.

ಎಂಟು ವರ್ಷಗಳ ಹಿಂದೆ ಮಾರಣಾಂತಿಕ ಕ್ಯಾನ್ಸರ್ ಖಾಯಿಲೆಗೆ ತುತ್ತಾದಾಗ, ಇವರನ್ನ ವೈತರಿಣಿ ನದಿ ದಾಟದಂತೆ ಮಾಡಿದ್ದು ಇವರ ಅನನ್ಯ ಗುರುಭಕ್ತಿ. (ಆಗ  ವೈದ್ಯರ ಪ್ರಕಾರ ಅವರಿಗೆ ಒಂದು ವರ್ಷ ಮಾತ್ರ ಆಯಸ್ಸಿತ್ತು.). 6 ಸುತ್ತುಗಳ ಅತ್ಯಂತ ಪ್ರಬಲವಾದ ಕೀಮೋಥೆರಪಿ ಚಿಕಿತ್ಸೆಯನ್ನು ತೆಗೆದುಕೊಂಡರೂ ಕೂಡ ಅವರ ತಲೆಗೂದಲು ಉದುರಲಿಲ್ಲ. ಸಾಮಾನ್ಯವಾಗಿ ಪ್ರಥಮ ಸುತ್ತಿನ ಚಿಕಿತ್ಸೆಗೇ ತಲೆಗೂದಲು ಪೂರ್ತಿಯಾಗಿ ಉದುರುತ್ತದೆ. ವೈದ್ಯರುಗಳಿಗೆಲ್ಲಾ ಇದನ್ನು ನಂಬುವುದೇ ಸಾಧ್ಯವಿರಲ್ಲ. ಕಾರಣ, ಕೀಮೋಥೆರಪಿ ತೆಗೆದುಕೊಳ್ಳುವ ಮೊದಲು, ಹೊಸನಗರ ಮಠದಲ್ಲಿ ಸ್ಥಳದಲ್ಲಿ ನೂರಾರು ಜನರ ಸಭೆಯಲ್ಲಿ, ಪೀಠದ ಮುಂದೆ ನಿಂತು “ನನ್ನ ತಲೆಗೂದಲು ಉದುರಬಾರದು” ಎಂದು ಕಣ್ಣೀರಿಟ್ಟು ಪ್ರಾರ್ಥಿಸಿದಾಗ ಶ್ರೀಗಳು ಇವರಿಗೆ ಪ್ರಭು ಶ್ರೀರಾಮ ಕೈಬಿಡನೆಂದು ಅಭಯವನ್ನು ನೀಡಿದ್ದರು. ಇಂಥಾ ಅನೇಕ ಅನುಪಮವಾದ ಪೀಠದ ಅನುಗ್ರಹಗಳಿಗೆ ಕಮಲಕ್ಕ ಪಾತ್ರರಾಗಿದ್ದಾರೆ. ಪರಮಪೂಜ್ಯರು ಬಹಳ ಸಾರಿ ಹೇಳಿದ್ದಾರೆ – “ಈ ಕಮಲಕ್ಕ ಪೀಠದ ಹತ್ತಿರ ಬೇಡಿದ್ದನ್ನೆಲ್ಲವನ್ನೂ ಶ್ರೀರಾಮ ಅನುಗ್ರಹಿಸಿದ್ದಾನೆ. ಕಾರಣ, ಕಮಲಕ್ಕನ ಶ್ರದ್ಧಾ-ಭಕ್ತಿಯೇ” ಎಂದು.

ಇವರು ಹಾಡಿರುವ, ಪರಮಪೂಜ್ಯರ ಗುಣಗಣಿತ್ವದ ವರ್ಣನೆಯಿರುವ ಹದಿನಾರು ಭಜನೆಗಳನ್ನು ಒಳಗೊಂಡ ‘ಸದ್ಗುರು ಸಂಕೀರ್ತನ’ ಸಿ.ಡಿ. ಯನ್ನು ಶ್ರೀಗಳು ಇತ್ತೀಚಿಗೆ ಲೋಕಾರ್ಪಣೆಗೊಳಿಸಿದ್ದಾರೆ. ಈ ಧ್ವನಿಮುದ್ರಿಕೆಯಿಂದ ಗುರುಭಕ್ತರೆಲ್ಲರೂ ತಾವೂ ಗುರುಭಜನೆಗಳನ್ನು ಕಲಿತು, ಅದನ್ನು ಹಾಡುವಂತಾಗಿ, ಗುರುಕೃಪೆಗೆ ಪಾತ್ರರಾಗಲೆಂಬುದು ಇವರ ಮನದಿಚ್ಛೆ.

ಪರಮಪೂಜ್ಯರು ಇವರಿಗೆ 2009ರ ಚಾತುರ್ಮಾಸ್ಯ ಸಂದರ್ಭದಲ್ಲಿ ‘ಸರ್ವಧಾರಿ ಸಮ್ಮಾನ’ ಹಾಗು 2011ರ ರಾಮೋತ್ಸವ ಸಂದರ್ಭದಲ್ಲಿ ‘ಶ್ರೀಮಾತಾ’ ಪ್ರಶಸ್ತಿಗಳನ್ನು ಅನುಗ್ರಹಿಸಿ ಅವರ ಜೀವನಕ್ಕೆ ಧನ್ಯತೆಯನ್ನು ಕರುಣಿಸಿದ್ದಾರೆ.

ಅವರಿಗೆ ಈಗ 6 ಆಪರೇಶನ್ ಗಳಾಗಿವೆ. ಈಗಲಾದರೂ ಕೂಡ ದೇಹದಲ್ಲಾಗುವ ಅತೀವ ವೇದನೆಯನ್ನು ಗುರುಭಜನೆಯಿಂದಲೇ ಮರೆಯುತ್ತಿದ್ದಾರೆ. ಗುರು ಅನುಗ್ರಹದಿಂದ ಅವರಿಗೆ ಇನ್ನಾವ ಔಷಧಿಯೂ ಬೇಕಿಲ್ಲ. ಕೇವಲ ಭಜನೆಯೇ ಔಷಧಿ

Facebook Comments Box