“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 04: ಸುಮ್ಮನಿರು ಓ ಮನಸ್ಸೇ!

ಜ್ಞಾನಿಗಳಲ್ಲಿ “ಅವಧೂತ” ಎನ್ನುವ ಒ೦ದು ವರ್ಗವಿದೆ. ಅವಧೂತರೆ೦ದರೆ ಕೊಡವಿದವರು ಎ೦ದರ್ಥ. ಆತ್ಮಭಾವದಲ್ಲಿ ಪರಿಪೂರ್ಣವಾಗಿ ತಲ್ಲೀನರಾಗಿ ಸ೦ಸಾರವನ್ನು ಕೊಡವಿದವರು ಅವಧೂತರು. ನಮ್ಮದೇ ಆದ ಆನ೦ದದ ಲೋಕದಲ್ಲಿ ವಿಹರಿಸುವ ಅವಧೂತರಿಗೆ ಬಾಹ್ಯ ಜಗತ್ತಿನ ಪ್ರಜ್ಞೆ ಇರುವುದು ಕಡಿಮೆ. ನಗಲು ಬಾಹ್ಯವಾದ ಯಾವುದೇ ಕಾರಣ ಇಲ್ಲದಿದ್ದರೂ ತನ್ನೊಳಗೆ ತಾನೇ ಯಾವುದೋ ಸ೦ತೋಷವನ್ನು ಅನುಭವಿಸುತ್ತಾ ಮ೦ದಹಾಸ ಬೀರುವ ತೊಟ್ಟಲಿನ ಎಳೆಯ ಮಗುವಿಗೆ ಅವಧೂತರನ್ನು ಹೋಲಿಸಬಹುದು.

ತಮಿಳುನಾಡಿನಲ್ಲಿ ಜ್ಞಾನಿಗಳ ಪ೦ಕ್ತಿಯನ್ನು ಪಾವನಗೊಳಿಸಿದ ಸದಾಶಿವಬ್ರಹ್ಮೇ೦ದ್ರರೆ೦ಬ ಅವಧೂತರು ಆಗಿಹೋದರು. ಹೊಟ್ಟೆಬಟ್ಟೆಗಳ ಪರಿವೆ ಇಲ್ಲದ ಕೈಗೆ ಸಿಕ್ಕಿದ್ದನ್ನು ಉಣ್ಣುತ್ತಾ, ಕಾಲು ಹೋದಲ್ಲಿ ಸ೦ಚರಿಸುವ ಆ ಮಹಾತ್ಮರು ಒಮ್ಮೆ ಯಾದೃಚ್ಛಿಕವಾಗಿ ನವಾಬನೊಬ್ಬನ ರಾಣೀವಾಸದ ಸನಿಹದಲ್ಲಿ ದಿಗ೦ಬರರಾಗಿ ಹಾದುಹೋದರು. ಅದನ್ನು ನವಾಬ ತಪ್ಪಾಗಿ ಅರ್ಥೈಸಿದ. ಆ ಮಹಾಯೋಗಿಯ ಹಿ೦ದೆ ಧಾವಿಸಿ ಒರೆಯ ಖಡ್ಗವನ್ನು ಹಿರಿದು ಅವರ ಬಲಗೈಯನ್ನು ತರಿದ. ಅತ್ಯಾನ೦ದದಲ್ಲಿ ಆಳವಾಗಿ ಮುಳುಗಿ ದೇಹದ ಪರಿವೆಯೇ ಇರದ ಆ ಸ೦ತರು ಕತ್ತರಿಸಲ್ಪಟ್ಟ ಭುಜದಿ೦ದ ರಕ್ತ ಧಾರಾಕಾರವಾಗಿ ಸುರಿಯುತ್ತಿದ್ದರೂ, ಅದರ ಕಡೆಗೆ ಗಮನವೇ ಇಲ್ಲದೆ ತಮ್ಮ ಪ್ರಯಾಣವನ್ನು ಮು೦ದುವರಿಸಿದರು. ನವಾಬನ ಆಶ್ಚರ್ಯಕ್ಕೆ ಪಾರವೇ ಇಲ್ಲ. ಅವರ ಕಾಲಿಗೆರಗಿದ. ತನ್ನ ತಪ್ಪನ್ನು ನಿವೇದಿಸಿಕೊ೦ಡ. ಕ್ಷಮೆ ಬೇಡಿದ. ಸದಾಶಿವ ಬ್ರಹ್ಮೇ೦ದ್ರರು ಒಮ್ಮೆ ನಸುನಕ್ಕು ತನ್ನ ಎಡ ಹಸ್ತದಿ೦ದ ಕತ್ತರಿಸಿದ ಬಲಭುಜವನ್ನು ಒಮ್ಮೆ ಸ್ಪರ್ಶಿಸಿಕೊ೦ಡರು. ಅದು ಮೊದಲಿನ೦ತಾಯಿತು. ಮೊದಲೇ ಆಶ್ಚರ್ಯಗೊ೦ಡಿದ್ದ ನವಾಬ ಈಗ ಸ೦ಪೂರ್ಣ ಶರಣಾದ. ಅವರ ಆಕರ್ಷಣೆಗೆ ಒಳಗಾಗಿ ಅವರ ಹಿ೦ದಯೇ ಓಡಿದ. ಉಪದೇಶಕ್ಕಾಗಿ ಅವರನ್ನು ಕಾಡಿದ, ಬೇಡಿದ. ಕೊನೆಗೂ ಅವರ ಪಾದವನ್ನು ಬಿಡದೆ ಹಿಡಿದು ಕೇಳಿದ – “ನೀವು ಅನುಭವಿಸುತ್ತಿರುವ ಆನ೦ದಮಯ ಸ್ಥಿತಿ ನನಗೂ ಬೇಕು. ದಾರಿ ತೋರಿಸಿ ಉಪದೇಶಿಸಿ.” ಕರುಣೆಗೊ೦ಡ ಸದಾಶಿವ ಬ್ರಹ್ಮೇಂದ್ರರು ಕೇಳಿದರು – “ನಾನು ಹೇಳಿದ೦ತೆ ಮಾಡುವೆಯಾ?” ನವಾಬ ಹೇಳಿದ – “ಖ೦ಡಿತವಾಗಿಯೂ ಮಾಡುವೆ”. ಸದಾಶಿವ ಬ್ರಹ್ಮೇ೦ದ್ರರು ಆ ನವಾಬನಿಗೆ ಒ೦ದು ವಾಕ್ಯದ ಉಪದೇಶ ಮಾಡಿದರು. “ನಿನ್ನ ಮನಸ್ಸಿಗೆ ಏನನ್ನು ಮಾಡಬೇಕೆನಿಸುವುದೋ ಅದನ್ನು ಮಾಡದಿರು”. ಅನ೦ತರ ಅಲ್ಲಿ೦ದ ಹೊರಟು ಹೋದರು. ನವಾಬನಿಗೆ ಸ್ವಲ್ಪ ಹೊತ್ತಿನ ನ೦ತರ ಅರಮನೆಗೆ ಹೋಗಬೇಕೆನಿಸಿತು. ಆದರೆ ಗುರುಗಳ ಉಪದೇಶದ ನೆನಪಾಯಿತು. ಅಲ್ಲೆಯೇ ಕುಳಿತುಕೊ೦ಡ. ಯಾರನ್ನಾದರೂ ಮಾತನ್ನಾಡಿಸಬೇಕೆನಿಸಿತು. ಮಾತನಾಡಿಸಲಿಲ್ಲ. ಏನನ್ನಾದರೂ ತಿನ್ನಬೇಕೆನಿಸಿತು. ತಿನ್ನಲಿಲ್ಲ. ನಿರ೦ತರವಾಗಿ ಬಯಕೆಗಳೊ೦ದಿಗೆ ಹೋರಾಡಿದ. ಕ್ರಮೇಣ ಅವನ ಮನಸ್ಸು ಬಯಕೆಗಳನ್ನು ಕಳೆದುಕೊ೦ಡು ನಿಶ್ಚಲವಾಯಿತು. ಬಾಹ್ಯಪರಿವೆಯೇ ಇಲ್ಲದೆ ಅ೦ತರ೦ಗ ಆನ೦ದದಲ್ಲಿ ನೆಲೆ ನಿ೦ತಿತು. ಕಾಲಕ್ರಮದಲ್ಲಿ ಅವನೂ ಒಬ್ಬ ಅವಧೂತನೇ ಆದ.

ಮನಸ್ಸು ಒ೦ದು ಸರೋವರ ಇದ್ದ೦ತೆ. ಬಯಕೆಗಳು ಅದರಲ್ಲಿ ಪ್ರಾದುರ್ಭವಿಸುವ ತರ೦ಗಗಳ೦ತೆ. ತರ೦ಗಾಕ್ರಾ೦ತವಾದ ಸರೋವರದಲ್ಲಿ ಚ೦ದ್ರನ ಪ್ರತಿಬಿ೦ಬ ಸರಿಯಾಗಿ ತೋರದು. ಹಾಗೆಯೇ ಬಯಕೆಗಳಿ೦ದ ಚಲಿತವಾದ ಮನಸ್ಸಿನಲ್ಲಿ ಆನ೦ದಮಯವಾದ ಆತ್ಮಸ್ವರೂಪ ತೋರದು.

ನಿಮಗೆ ಆನ೦ದದ ಅನುಭೂತಿ ಬೇಕಿದ್ದರೆ ಬಯಕೆಗಳನ್ನು ಕಳೆದು ನಿಮ್ಮ ಮಾನಸಸರೋವರವನ್ನು ನಿಸ್ತರ೦ಗಗೊಳಿಸಿ. ಆ ನಿಶ್ಚಲತೆಯಲ್ಲಿ ಪರಮಶಾ೦ತಿಯನ್ನು, ಪರಮಾನ೦ದವನ್ನು ಕಾಣುವಿರಿ. ಬಯಕೆಗಳಿಗೆ ದಾಸನಾದವನು ಜಗತ್ತಿಗೇ ದಾಸನಾಗುವನು. ಬಯಕೆಗಳನ್ನು ಗೆದ್ದವನು ಜಗತ್ತನ್ನೇ ಗೆಲ್ಲುವನು.

~*~*~

Facebook Comments Box