ಗೋಕರ್ಣ 21: ಕೇವಲ ಹಣ,ಸಂಪತ್ತು ಮಾತ್ರ ಮನುಷ್ಯನನ್ನು ಅಧಃಪತನಕ್ಕೆ ಕಾರಣವಲ್ಲ. ಅಧಿಕಾರದ ಅಮಲೂ ಸಹ ವ್ಯಕ್ತಿಯನ್ನು ತಿಳಿಗೇಡಿಯನ್ನಾಗಿಸುತ್ತದೆ. ಬದುಕಿಗೆ ಇವೆಲ್ಲವೂ ಬೇಕು ಎಂಬುದು ನಿಜವಾದರೂ ಸಹ ಅಧಿಕಾರವೋ,ಸಂಪತ್ತೋ ಬಂದಾಗ ಅದನ್ನು ತಲೆಗೇರಿಸಿಕೊಳ್ಳದೆ ತನ್ನ ವಿವೇಕವನ್ನು ಉಳಿಸಿಕೊಳ್ಳುವವನೇ ಸಾರ್ಥಕತೆಯನ್ನು ಪಡೆಯುತ್ತಾನೆ. ಸಂಪತ್ತು ಎಂತಹ ವಿವೇಕಿಯನ್ನೂ ಭ್ರಮೆಗೊಳಿಸಬಲ್ಲುದು. ಅಧಿಕಾರದ ಮತ್ತತೆ ಮಸ್ತಕಕ್ಕೇರಿದರೆ ನಮ್ಮವರ ಪರಿಚಯ ಉಳಿಯುವುದಿಲ್ಲ.ಸಂಬಂಧಿಗಳ ಗುರುತು ದೂರವಾಗುತ್ತದೆ. ಹಗಲಿನಲ್ಲಿಯೂ ಕಣ್ಣು ಮಂದವಾಗುತ್ತದೆ. ಸ್ವಾರ್ಥಿಗಳಾದ ಸಮಯಸಾಧಕರು ಸುತ್ತುವರೆದು ದಾರಿತಪ್ಪಿಸುತ್ತಾರೆ. ಇಂತಹ ಸ್ಥಿತಿಯನ್ನು ತಂದುಕೊಳ್ಳದೆ ಜೀವನದಲ್ಲಿ ಮಾದಕವಾದ ಅಧಿಕಾರಾದಿಗಳನ್ನು ಪಡೆದೂ ತನ್ನ ಬುದ್ಧಿಯನ್ನು ಸ್ವಾಧೀನದಲ್ಲಿಟ್ಟುಕಂಡವನೇ ನಿಜವಾದ ಧೀರ ಎಂದು ಪರಮ ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಇಂದು ಗೋಕರ್ಣದ ಸಾಗರತೀರದಲ್ಲಿ ಮಹರ್ಷಿ ದೈವರಾತವೇದಿಕೆಯಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಆಯೋಜಿತವಾದ “ರಾಮಕಥಾ”ದಲ್ಲಿ ಅನುಗ್ರಹಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ನಮ್ಮ ಎಲ್ಲ ಸನಾತನ ಭಾರತೀಯಸಾಹಿತ್ಯಪ್ರಕಾರಗಳೂ ಇಂತಹ ದೋಷಗಳನ್ನು ನೀಗಿಸಿಕೊಂಡು ಸಾರ್ಥಕಬದುಕನ್ನು ಪಡೆಯುವುವ ಮಾರ್ಗವನ್ನು ತೋರಿಸಲೆಂದೇ ರಚಿತವಾಗಿವೆ ಎಂಬುದನ್ನುಸತೀದೇವಿಯ ತಂದೆ ದಕ್ಷಪ್ರಜಾಪತಿಯ ದೃಷ್ಟಾಂತದ ನಿರೂಪಣೆಯೊಂದಿಗೆ ಸಮರ್ಥಿಸಿ ಅಧಿಕಾರ ಬರುತ್ತಲೆ ದಕ್ಷಪ್ರಜಾಪತಿ ಮಗಳು-ಅಳಿಯ ಎಂಬ ಬಂಧು ಪ್ರಜ್ನೆಯನ್ನೂ ಮರೆತ. ಲೋಕೇಶ್ವರನನ್ನೂ ಧಿಕ್ಕರಿಸಿದ. ಇಂತಹ ದುರ್ಬುದ್ಧಿಯೇ ಅವನ ಪತನಕ್ಕೆ ನಾಂದಿಯಾಯಿತು. ಇತಿಹಾಸದಲ್ಲಿ ಅಧಿಕಾರದ ಭ್ರಮೆಗೊಳಗಾಗಿ ತಮ್ಮತನವನ್ನೇ ಕಳೆದುಕೊಂಡ ನಹುಷ ಮೊದಲಾದ ಅನೇಕರು ಉದಾಹರಣೆಯಾಗಿ ನಿಲ್ಲುತ್ತಾರೆ. ನಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯಲು ಜೀವನದಲ್ಲಿ ಒಳ್ಳೆಯಗುಣಗಳನ್ನು ಅಳವಡಿಸಿಕೊಳ್ಳುವುದೊಂದೇ ದಾರಿ ಎಂದೂ ಹೇಳಿದರು.

ಶ್ರೀಪಾದ ಭಟ್ಟ ಪ್ರೇಮಲತಾ ದಿವಾಕರ ಇವರ ಸುಶ್ರಾವ್ಯ ಗಾನ, ಗೌರೀಶ ಯಾಜಿಯವರ ಹಾರ್ಮೋನಿಯಮ್, ಗೋಪಾಲಕೃಷ್ಣ ಹೆಗಡೆಯವರ ತಬಲಾ, ಪ್ರಕಾಶ ಕಲ್ಲಾರೆಮನೆ ಇವರ ಕೊಳಲು, ನೀರ್ನಳ್ಳಿ ಗಣಪತಿ, ರಾಘವೇಂದ್ರ ಹೆಗಡೆಯವರ ಚಿತ್ರಗಳು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದವು.  ಡಾ.ಜಿ.ಎಲ್.ಹೆಗಡೆ ಹಾಗೂ ಸಹಕಲಾವಿದರಿಂದ “ದಕ್ಷದರ್ಪದಲನ” ಎಂಬ ರೂಪಕವು ಆಯೋಜಿತವಾಗಿತ್ತು.  ಶ್ರೀ ಎಮ್.ಜಿ.ಉಪಾಧ್ಯ ದಂಪತಿಗಳು ಶ್ರೀರಾಮಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಕ್ತಿನೃತ್ಯ ಜೈ ಜೈಶ್ರೀರಾಮಕಥಾ ಸಂಪನ್ನಗೊಂಡಿತು.

Facebook Comments Box