ಗೋಕರ್ಣ. ರಾಜ್ಯದ ಮಾಜಿ ಶಿಕ್ಷಣ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ ಅವರು ದಿ. 9 ಗುರುವಾರದಂದು ಶ್ರೀಕ್ಷೇತ್ರಗೋಕರ್ಣಕ್ಕೆ ಆಗಮಿಸಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗವನ್ನು ಅರ್ಚಿಸಿದರು. ಈ ಸಂದರ್ಭದಲ್ಲಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ ಶ್ರೀ ಚಂದ್ರಶೇಖರ ಗೋಕರ್ಣ ಪರಶಿವನ ಆತ್ಮಲಿಂಗವನ್ನೇ ಪಡೆದು ಭೂಕೈಲಾಸ ಎಂದು ಪ್ರಸಿದ್ಧವಾದ ದಿವ್ಯಸನ್ನಿಧಿ.

ಪ್ರಾಚೀನ ಕಾಲದಿಂದಲೂ ವಿದ್ಯಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ದಾಖಲಿಸಿದ ವಿಶಿಷ್ಟಕ್ಷೇತ್ರ. ಅಂತಾರಾಷ್ಟ್ರೀಯ ಸ್ತರದಲ್ಲಿ ಹೆಸರು ಮಾಡಿದ ಅನೇಕ ವಿದ್ವಾಂಸರನ್ನು, ಚಿಂತಕರನ್ನು ನಾಡಿಗೆ ಕೊಟ್ಟ ಪುಣ್ಯಭೂಮಿ. ಇಂತಹ ಕ್ಷೇತ್ರದಲ್ಲಿ ಭಗವಂತನನ್ನು ಅರ್ಚಿಸಿದ್ದರಿಂದ ತುಂಬ ಸಂತೋಷವಿದೆ. ಅಪೂರ್ವ ಸಾಹಿತ್ಯವಾದ ವೇದಗಳ ಪಾರಾಯಣವನ್ನು ಕೇಳಿ ಅನುಭವಿಸಬೇಕೆಂಬ ಅಭಿಲಾಷೆಯಿದೆ. ಅದಕ್ಕಾಗಿ ಮತ್ತೊಮ್ಮೆ ಬಿಡುವಾಗಿ ಬರುವುದಾಗಿ ತಿಳಿಸಿ ದೇವಾಲಯದ ವತಿಯಿಂದ ಆಯೋಜಿತವಾಗಿರುವ “ಅಮೃತಾನ್ನ” ಪ್ರಸಾದ ಭೋಜನ, ಲೋಕಕಕಲ್ಯಾಣಕರವಾದ “ಕೋಟಿರುದ್ರ” ಜಪಗಳ ವಿಚಾರಗಳನ್ನು ಕೇಳಿ ಸಂತೋಷಗೊಂಡರು.

ದೇವಾಲಯದ ಪರವಾಗಿ ಶ್ರೀ ಜಿ.ಕೆ.ಹೆಗಡೆ ಗೋಳಗೋಡು ಇವರು ಶ್ರೀಯುತರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಡಾ.ಜಿ.ಜಿ.ಹೆಗಡೆ  ಕುಮುಟಾ ಹಾಗೂ ಸಾಮಾಜಿಕ ಧುರೀಣ ಶ್ರೀ ನಾಗರಾಜ ಹಿತ್ತಲಮಕ್ಕಿ ಉಪಸ್ಥಿತರಿದ್ದರು.

 

 

Facebook Comments Box