ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್, ಶ್ರೀಸಂಸ್ಥಾನಗೋಕರ್ಣ - ಶ್ರೀರಾಮಚಂದ್ರಾಪುರಮಠ
|| ಹರೇ ರಾಮ ||
ಜೀವಿಗೆ ಹುಟ್ಟು ನೈಸರ್ಗಿಕ..
ಹುಟ್ಟಿದ ಮೇಲೆ ಬದುಕು ನೈಸರ್ಗಿಕ..
ಬದುಕಿಗಾಗಿ ಹಸಿವಾದಾಗ ತಿನ್ನುವುದು ನೈಸರ್ಗಿಕ..
ಶರೀರಕ್ಕೆ ಬೇಡವಾದುದ್ದನ್ನು ವಿಸರ್ಜಿಸುವುದು ನೈಸರ್ಗಿಕ ..
ಇವೆಲ್ಲ ಎಷ್ಟು ನೈಸರ್ಗಿಕವೋ..ಸಾವೂ ಕೂಡಾ ಅಷ್ಟೇ ನೈಸರ್ಗಿಕ..
ಆದರೆ ಇವೆಲ್ಲವನ್ನೂ ಸಹಜವಾಗಿ ಸ್ವೀಕರಿಸುವ ಮನುಷ್ಯನಿಗೆ ಸಾವಿನ ಕುರಿತು ಅದೇಕೆ ಎಲ್ಲಿಲ್ಲದ ಭಯ..?
ನೋಡೋಣ….
ಬೆಂಗಳೂರಿನ ವ್ಯಕ್ತಿಯೊಬ್ಬ ಕಾರ್ಯನಿಮಿತ್ತ ಮುಂಬೈಗೆ ಹೋಗುತ್ತಾನೆ..
ಬೆಳಗಿನ ವಿಮಾನದಲ್ಲಿ ಮುಂಬಯಿ ತಲುಪು ಕೆಲಸಗಳನ್ನೆಲ್ಲಾ ಪೂರೈಸಿ ರಾತ್ರಿ ೯ ಘಂಟೆಯ ವಿಮಾನದಲ್ಲಿ ಮರಳಿ ಬೆಂಗಳೂರಿಗೆ ಬರಬೇಕಾಗುತ್ತದೆ ಎಂದುಕೊಳ್ಳಿ..
ಈಗ, ವಿಮಾನದ ಸಮಯ ಹತ್ತಿರ ಬಂದರೂ ಬಂದ ಕೆಲಸವಾಗದಿದ್ದರೆ ಭಯ-ಉದ್ವೇಗಗಳು೦ಟಾಗುವುದು ಸಹಜವಲ್ಲವೇ..?
ಈ ದೃಷ್ಟಾಂತದ ಸಂಗಮನ ನಮ್ಮ ಬದುಕಿನಲ್ಲಿದೆ..
ನಾವು ಕೂಡ ಈ ಊರಿನವರಲ್ಲ..(ಭೂಮಿಯವರಲ್ಲ)
ನಾವು ‘ಅಲ್ಲಿಯವರು’.. ಭಗವಂತನ ಮಡಿಲೇ ನಮ್ಮಮನೆ..
ನಾವಿಲ್ಲಿಗೆ ಕಾರ್ಯನಿಮಿತ್ತ ಬಂದವರು..
ಇಲ್ಲಿಯ ನಮ್ಮ ಇರವಿಗೆ ಸಮಯಮಿತಿಯಿದೆ ..
ಕಾರ್ಯವಾಗಲಿ, ಆಗದಿರಲಿ, ಆ ಸಮಯ ಬಂದ ಕೂಡಲೇ ಹೊರಡಲೇ ಬೇಕು..
ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಪೇಟೆ ತಿರುಗುವ ಮಾಣಿಗೆ ಒಳಗೊಳಗೇ ಅಳುಕಿರುವಂತೆ..
ಬಂದಕಾರ್ಯವನ್ನೇ ಮರೆತು ಎಲ್ಲೆಲ್ಲೋ ಸುತ್ತುವ ನಮಗೂ ಅನವರತ ಮೃತ್ಯುವಿನ ಅಳುಕಿರುವುದು ಸಹಜವೇ..!
ಮೇಲೆ ನೀಡಿದ ದೃಷ್ಟಾಂತದಲ್ಲಿ ಕೊನೆಯ ಪಕ್ಷ ಹೊರಡುವ ಸಮಯವಾದರೂ ನಿಶ್ಚಿತವಾಗಿದೆ..
ನಿಜ ಜೀವನದಲ್ಲಿ ಹೊರಡುವ ಸಮಯ ಮೊದಲೇ ಗೊತ್ತಿಲ್ಲ.. ಬಂದ ಕಾರ್ಯದ ಕಡೆ ಗಮನವೂ ಇಲ್ಲ..
ಭಯವಾಗದೆ ಮತ್ತೇನಾಗಬೇಕು ಹೇಳಿ..!
ನಾವು ಬಂದ ಕಾರ್ಯವಾವುದು ಎಂಬುದನ್ನು ಆಚಾರ್ಯ ಶಂಕರರ ಭಾಷೆಯಲ್ಲಿ ಕೇಳಿ..
“ಮಹತಾ ಪುಣ್ಯ-ಪಣ್ಯೇನ ಕ್ರೀತೇಯಂ ಕಾಯನೌಸ್ತ್ವಯಾ |
ತರ್ತುಂ ಭವಾಂಬುಧೇಃ ಪಾರಂ ತರ ಯಾವತ್ ನ ಭಿದ್ಯತೇ ||”
(ಭವಸಾಗರವನ್ನು ದಾಟಲೋಸುಗ ಪುಣ್ಯವೆಂಬ ಹಣದ ರಾಶಿಯನ್ನೇ ಸುರಿದು, ದೇಹವೆಂಬ ನೌಕೆಯನ್ನು ನೀನು ಖರೀದಿಸಿದೆ.
ತ್ವರೆ ಮಾಡು ಮಗೂ.. ದಾಟು ಬೇಗ , ದೋಣಿ ಯಾವ ಕ್ಷಣದಲ್ಲಿಯೂ ಒಡೆದೀತು..)
ನಾವಿನ್ನೂ ಭವಸಾಗರದ ನಡುವಿನಲ್ಲಿರುವಾಗಲೇ ದೋಣಿ ಒಡೆಯಲಾರ೦ಭಿಸಿದರೆ ಭಯವಾಗದಿದ್ದೀತೆ..?
ಸಂಸಾರವನ್ನು ಮೀರಲು, ಪರಮಗಮ್ಯವನ್ನು ಸೇರಲು..ಈಶ್ವರನಿತ್ತ ಮಹಾಸಾಧನವೇ ನಮ್ಮ ಶರೀರ..
ಕಾರ್ಯ ಕೈಗೂಡದೆ ಸಾಧನ ಕಳೆದು ಹೋಗುವಾಗ ಮುಂದೇನು..? ಮುಂದೇನು..? ಎಂಬ ಪ್ರಶ್ನೆಗೆ ಕತ್ತಲೆಯೇ ಉತ್ತರವಾದಾಗ..ರಾಜ್ಯವಾಳುವುದು ಭಯವೇ ತಾನೆ ?
ಇದರ ಸಾರಾಂಶ ಈ ಕೆಳಗಿನ ಶ್ಲೋಕಾರ್ಧದಲ್ಲಿದೆ..
ಪ್ರಾಯೋ ಹಿ ಅಕೃತ ಕೃತ್ಯತ್ವಾತ್ ಮೃತ್ಯೋಃ ಉದ್ವಿಜತೇ ಜನಃ |
(ಬದುಕು ಏತಕ್ಕಾಗಿ ಬಂದಿತೋ, ಆ ಕಾರ್ಯ ಆಗದಿದ್ದಾಗ ಜನರಿಗೆ ಮೃತ್ಯುಭೀತಿ ಉಂಟಾಗುತ್ತದೆ..)
ಬಂದ ಕೆಲಸವಾದವರ ಆನಂದವೇ ಬೇರೆ..
ಊರಿಗೆ ಮರಳುವ ವಿಮಾನವಿರುವುದು ೯ ಘಂಟೆಗೆ..
ಬಂದ ಕೆಲಸ ೫ ಘಂಟೆಗೆ ಮುಗಿಯಿತು ಎಂದಾದರೆ ಅಂತಹವನಿಗೆ ಯಾವ ಉದ್ವೇಗವೂ ಇಲ್ಲ.. ಆತ ಶಾಂತನಾಗಿ ವಿಮಾನವನ್ನುಕಾಯುತ್ತಾನೆ..
ಕೃತಕೃತ್ಯಾಃ ಪ್ರತೀಕ್ಷಂತೇ ಮೃತ್ಯುಂ ಪ್ರಿಯಮಿವ ಅತಿಥಿಂ ||
(ಕೃತಕೃತ್ಯರು ಮೃತ್ಯುವನ್ನು ಎದುರುನೋಡುತ್ತಾರೆ..ಮನೆಗೆ ಬರುವ ಪ್ರಿಯ ಅತಿಥಿಯನ್ನು ನಾವು ಎದುರು ನೋಡುವುದಿಲ್ಲವೇ..? ಹಾಗೆ..)
ಬದುಕನ್ನು ಸಾರ್ಥಕಪಡಿಸಿಕೊಂಡವನು ಸಾವಿನ ಭಯವನ್ನು ಮೀರುತ್ತಾನೆ..
ಬಂದ ಉದ್ದೇಶವನ್ನೇ ಮರೆತು ಬೀದಿ ಸುತ್ತುವವನ ಬದುಕು ಸಾವಿನ ಭಯದಿಂದ ತುಂಬಿರುತ್ತದೆ..
ನಮ್ಮ ಮೃತ್ಯು ಮೃತ್ಯುಂಜಯ ಶಂಕರನಾಗಿರಬೇಕೆ..?
ಅಥವಾ ಭಯಂಕರ ಯಮಕಿಂಕರನಾಗಿರಬೇಕೆ..?
ಆಯ್ಕೆ ನಮ್ಮದು..!
(ಉತ್ತರ ನಮ್ಮ ಬದುಕಿನಲ್ಲೇ ಇದೆ)..
|| ಮೃತ್ಯೋರ್ಮಾ ಅಮೃತಂ ಗಮಯ ||