ಗೋಕರ್ಣ- ಮಹಾತ್ಮರು ಎಂದೂ ತಮ್ಮ ಸ್ವಾರ್ಥಕ್ಕಾಗಿ ಬದುಕುವವರಲ್ಲ. ಲೋಕೋಪಕಾರವೇ ಅವರ ಜೀವನೋದ್ದೇಶ. ನಮ್ಮ ಜೀವನದ ಭಾಗ್ಯದಿಂದಾಗಿಯೇ ಅಂತಹ ಮಾರ್ಗದರ್ಶಕ ಗುರು ಸಿಗುತ್ತಾನೆ. ಆಗ ಅವರನ್ನನುಸರಿಸಿದರೆ ಮಾತ್ರ ಬದುಕಿನ ಎಲ್ಲ ಒಳಿತುಗಳನ್ನು ಪಡೆಯಬಹುದು. ಆದರೆ ಸಂತ ಸಮಾಗಮ ಸುಲಭವಲ್ಲ. ಇದಕ್ಕೆ ನಮ್ಮ ನಿರಂತರ ಸಾಧನೆ, ಪರಿಶ್ರಮ, ಕಾತರ ಅಗತ್ಯ. ಪಡೆಯುವ ಅರ್ಹತೆಯೂ ಇರಬೇಕು. ಇಂತಹ ಸನ್ಮಾರ್ಗ ಪ್ರವರ್ತಕರಾದ ಗುರುವನ್ನು ಆಶ್ರಯಿಸಿ ಅವರ ಅನುಗ್ರಹದಿಂದ ನಮ್ಮ ಜೀವನವನ್ನು ಸಾರ್ಥಕವನ್ನಾಗಿಸಿಕೊಳ್ಳಬೇಕು ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟರು.

ಇಂದು ಬುಧವಾರದಂದು ಸಂಜೆ ಶ್ರೀಕ್ಷೇತ್ರದ ವಾರ್ಷಿಕವಾದ ದೈವಿಕೋತ್ಸವ “ಮಹಾಶಿವರಾತ್ರಿ” ಉತ್ಸವದ  ಅಂಗವಾಗಿ ಗೋಕರ್ಣದ ಸಾಗರ ತೀರದಲ್ಲಿ ಆಯೋಜಿತವಾಗಿರುವ “ರಾಮಕಥಾ” ದಲ್ಲಿ ಪ್ರವಚನದ ಅನುಗ್ರಹವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಮರ್ಯಾದಾಪುರುಷೋತ್ತಮನಾದ ಪ್ರಭು ಶ್ರೀರಾಮಚಂದ್ರನು ಲಕ್ಷ್ಮಣನೊಂದಿಗೆ ಯಾಗರಕ್ಷಣೆಗಾಗಿ ಮಹರ್ಷಿ ವಿಶ್ವಾಮಿತ್ರರ ಜೊತೆ ಹೋದಾಗ ದಾರಿಯಲ್ಲಿ ಶ್ರೀರಾಮನಿಗೆ ಮೂರು ಸಾಧನಗಳನ್ನು ಅನುಗ್ರಹಿಸಿದರು. ಮೊದಲನೆಯದು ಶ್ರೀರಾಮನ ಪೂರ್ವಜರ ವೃತ್ತಾಂತದ ಕಥೆಯಾದರೆ ಎರಡನೆಯದು ಯುದ್ಧೋಪಯೋಗಿಯಾದ ಅಸ್ತ್ರಗಳು ಮತ್ತು ಮೂರನೆಯದಾಗಿ ಮಿಥಿಲೆಗೆ ಶ್ರೀರಾಮನನ್ನು ಕರೆದೊಯ್ದು ಅಲ್ಲಿ ಸೀತೆಯನ್ನು ವರಿಸುವಂತೆ ಮಾಡಿ ಆ ಮೂಲಕ ಲೋಕಕ್ಕೆ ಕಂಟಕನಾಗಿ ಪರಿಣಮಿಸಿದ್ದ ದುಷ್ಟರಾವಣ ಹಾಗೂ ಅವನ ಅನುಯಾಯಿಗಳನ್ನು ವಿನಾಶಗೊಳಿಸುವ ವ್ಯವಸ್ಥೆ. ಮುಂದೆ  ತನ್ನ ವಂಶದವರ  ಪರಾಕ್ರಮವನ್ನು ಪ್ರಜಾರಂಜನೆಯನ್ನು ತಿಳಿದ  ಶ್ರೀ ರಾಮಚಂದ್ರ  ಇವರ ಸಾಧನೆಯಿಂದ ಪ್ರೇರಿತನಾಗಿ ರಘುವಂಶದ ಕೀರ್ತಿಯನ್ನು ಎತ್ತಿಹಿಡಿದ ಎಂದು ಹೇಳಿ ಲೋಕವಿಶ್ರುತವಾದ ಸೂರ್ಯವಂಶವು ಸಗರನ ತಂದೆ ಅಸಿತನಕಾಲದಲ್ಲಿ ಕುಲಕ್ಷಯವಾಗುವ ಹಂತ ತಲುಪಿದಾಗ ಮಹರ್ಷಿ ಚ್ಯವನರ ಕೃಪೆಯಿಂದ ವಿಷವನ್ನು ಜೀರ್ಣಿಸಿಕೊಂಡೇ ಸಗರ ಹುಟ್ಟಿದ ವೃತಾಂತವನ್ನು “ಗಂಗಾವತರಣ”ದ ಪೂರ್ವಕಥೆಯನ್ನಾಗಿ ಹೇಳಿದರು.

ರಾಮಕಥೆಯಲ್ಲಿ ಗಾಯಕರಾಗಿ ಶ್ರೀಪಾದ ಭಟ್ಟ, ಶ್ರೀಮತಿ ಪ್ರೇಮಲತಾ ದಿವಾಕರ, ಹಾರ್ಮೋನಿಯಂ ವಾದಕರಾಗಿ ಗೌರೀಶ ಯಾಜಿ, ತಬಲಾವಾದಕರಾಗಿ ಗೋಪಾಲಕೃಷ್ಣ ಹೆಗಡೆ, ಕೊಳಲುವಾದಕರಾಗಿ ಶ್ರೀ ಪ್ರಕಾಶ ಕಲ್ಲಾರಮನೆ ಇವರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಕುಮುಟಾದ ಡಾ.ಜಿ.ಎಲ್.ಹೆಗಡೆ ಹಾಗೂ ಸಹಕಲಾವಿದರಿಂದ “ಸಗರೋನ್ನತಿ”ಎಂಬ ರೂಪಕವು ಪ್ರದರ್ಶಿತವಾಯಿತು. ದಿನಾಂಕ ೨೨ರವರೆಗೆ ಪ್ರತಿದಿನ ಸಂಜೆ ಆರರಿಂದ ಈ ರಾಮಕಥೆಯು ನಡೆಯಲಿದೆ.

Facebook Comments Box