26-07-2015 ಶ್ರೀರಾಮಾಶ್ರಮ :
‘ಕಲಾಮುಕುಲ’ ಸಾಂಸ್ಕೃತಿಕ ವೇದಿಕೆ ಅನಾವರಣ
ಭಾರತೀಯ ಪರಂಪರೆಯಲ್ಲಿ ಕಲೆಗಳಿಗೆ ಅತ್ಯುಚ್ಚಸ್ಥಾನವನ್ನು ನೀಡಲಾಗಿದ್ದು, ನಶಿಸುತ್ತಿರುವ ಕಲೆಗಳ ಉಳಿವಿಗೆ ಹಾಗು ಉದಯೋನ್ಮುಖ ಕಲಾವಿದರಿಗೆ ವೇದಿಕೆಯನ್ನು ಒದಗಿಸುವ ದೃಷ್ಟಿಯಿಂದ “ಕಲಾಮುಕುಲ” ಎಂಬ ಸಾಂಸ್ಕೃತಿಕ ವೇದಿಕೆಯನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ಕಲಾಮುಕುಲ ಎಂಬ ಸಾಂಸ್ಕೃತಿಕ ವೇದಿಕೆಯನ್ನುಲೋಕಾರ್ಪಣಗೋಳಿಸಿ ಮಾತನಾಡಿದ ಶ್ರೀಗಳು, ಹಿಂದೆ ಕಲೆಗಳಿಗೆ ರಾಜಾಶ್ರಯವಿತ್ತು. ಇಂದು ಸಂಘ-ಸಂಸ್ಥೆಗಳು, ಸರ್ಕಾರ ಕಲೆಗಳಿಗೆ ಮನ್ನಣೆ ನೀಡಿದ್ದರೂ, ಸಮಾಜದಲ್ಲಿ ಸದಭಿರುಚಿಯ ಕಲೆಗಳ ಬಗ್ಗೆ ಆಸಕ್ತಿ ಹಾಗು ಪ್ರೋತ್ಸಾಹ ಕಡಿಮೆಯಾಗಿದೆ. ಆ ಕೊರತೆಯನ್ನು ನಿವಾರಿಸುವ ದಿಶೆಯಲ್ಲಿ ವೇದಿಕೆಯನ್ನು ಅನಾವರಣಗೊಳಿಸಲಾಗಿದೆ. ಶ್ರೀ ರಾಮಚಂದ್ರಾಪುರಮಠವು ರಾಮಕಥಾ ಹಾಗು ಇತರ ಕಾರ್ಯಕ್ರಮಗಳ ಮೂಲಕ ಹಿಂದಿನಿಂದಲೂ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದು, ಈಗ ಸಮಾಜದ ಯಾವುದೇ ವ್ಯಕ್ತಿ ತನ್ನಲ್ಲಿರುವ ಕಲೆಯನ್ನು ಪ್ರಸ್ತುತಪಡಿಸಲು ಬಯಸಿದರೆ “ಕಲಾಮುಕುಲ”ವು ಅವರಿಗೆ ವೇದಿಕೆಯಾಗಲಿದೆ ಎಂದು ತಿಳಿಸಿದರು. ಮೊಗ್ಗಿನಂತೆ ಸುಪ್ತವಾಗಿರುವ ಕಲಾವಿದರಿಗೆ, ಕಲಾಪ್ರಕಾರಗಳಿಗೆ ಕಲಾಮುಕುಲವು ವೇದಿಕೆಯಾಗಲಿ, ಉದಯೋನ್ಮುಖ ಕಲಾವಿದರಿಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿ ಸುಪ್ತ ಪ್ರತಿಭೆಗಳನ್ನು ಅನಾವರಣಗೋಳಿಸುವ ಮೂಲಕ ಭಾರತೀಯ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು “ಕಲಾಮುಕುಲ” ಸಾಂಸ್ಕೃತಿಕ ವೇದಿಕೆ ಮಾಡಲಿ ಎಂದು ಆಶಿಸಿದರು.
ಕಲಾಮುಕುಲದ ಪ್ರಥಮ ಕಲಾಸೇವೆಯಾಗಿ ಉದಯೋನ್ಮುಖ ಗಾಯಕಿಯಾದ ಕುಮಾರಿ ಹರ್ಷಿತಾ ಪಿ ಭಟ್ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನೆಡೆಸಿಕೊಟ್ಟರು. ಇವರಿಗೆ ಪಿಟೀಲು ವಾದಕ ವಿದ್ವಾನ್ ಡಾ.ಆರ್.ರಘುರಾಮ್, ಮೃದಂಗ ವಾದಕ ವಿದ್ವಾನ್.ಬಿ.ಧೃವರಾಜ್ ವಾದ್ಯ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಶಶಿಧರ ಕೋಟೆ, ಮಹಾಮಂಡಲದ ಉಪಾಧ್ಯಕ್ಷರಾದ ಡಾ. ಸೀತಾರಾಮಪ್ರಸಾದ್ , ಬೆಂಗಳೂರು ಮಂಡಲದ ಅಧ್ಯಕ್ಷರಾದ ಡಿ. ಕೇಶವಕುಮಾರ್, ಕಾರ್ಯದರ್ಶಿಗಳಾದ ಜಿ ಜಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
Facebook Comments Box
Leave a Reply