ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ರಾಮ-ರಾಜ್ಯಾಭಿಷೇಕದ ಪೂರ್ವ ಪ್ರಕ್ರಿಯೆಯ ಮುಂದುವರಿದ ಭಾಗ..
“ಶ್ರಮವಿಲ್ಲದೇ ಫಲವಿಲ್ಲ”. ಏಕೆಂದರೆ ಶ್ರಮದಲ್ಲಿ ತ್ಯಾಗವಿದೆ. ಆದರೆ ಅದೇ ಶ್ರಮಕ್ಕೆ ಫಲ ದೊರೆತಾಗ ಸುಖವಾಗಿ ಮಾರ್ಪಾಡಾಗುವುದು/ಪರಿವರ್ತನೆ ಗೊಳ್ಳುವುದು; ಕ್ಲೇಶವು ಇಲ್ಲವಾಗುವುದು.
ಅದೇ ಅನುಭವವು ಇಲ್ಲಿ ಕೌಸಲ್ಯೆಗೂ ಆಯಿತು.
ಕೌಸಲ್ಯೆಯ ಏಕಮಾತ್ರ ಪುತ್ರ ಎದುರು ಬಂದು ನಿಂತು- “ನಾನು ರಾಜನಾಗಿ ನಿಯುಕ್ತಿಗೊಂಡಿರುವೆ; ನಾಳೆ ನನ್ನ ರಾಜ್ಯಾಭಿಷೇಕ” ಎಂಬ ಮಾತನ್ನು ಕೇಳಿ ಅವಳಿಗೆ ಇದುವರೆಗೂ ಇದ್ದ /ಮಾಡಿದ ಕ್ಲೇಶಗಳೆಲ್ಲವೂ ಮರೆತು ಹೋಯಿತು. ಆನಂದ ಭಾಷ್ಪಗಳಿಂದ ಕೂಡಿದ ಕಣ್ಣುಗಳು ತುಂಬಿ ಬಂದವು, ಕಂಠವು ಕಟ್ಟಿತು, ವಾಕ್ಯಗಳು ಕೌಸಲ್ಯೆಗೆ ತೊದಲಿದವು…ಮಗ;ನೂರ್ಕಾಲ ಬದುಕು, ಸತ್ಯ – ಧರ್ಮದ ವೈರಿಗಳು ಹತರಾಗಲಿ; ನಾನು ಇದುವರೆಗೆ ಮಾಡಿದ ಪುಂಡರೀಕನ ವ್ರತದ ಫಲದಿಂದಾಗಿ ಕ್ಲೇಶವು ಇಲ್ಲವಾಯಿತು.
ಕೌಸಲ್ಯೆ ಮತ್ತು ಸುಮಿತ್ರೆಯ ಬಳಗಕ್ಕಿನ್ನು ಸಂತಸದ ದಿನಗಳೆಂದು ಹೇಳಿದಳು.
ನಂತರ ರಾಮನು ಪಟ್ಟಾಭಿಷೇಕದ ವಿಷಯವನ್ನು ತಿಳಿಸಲು ಲಕ್ಷ್ಮಣನ ಬಳಿ ಹೋದಾಗ ಲಕ್ಷ್ಮಣನು ಆಗಲೂ ಕೈ ಮುಗಿದೇ ಇದ್ದ. ಶ್ರೀರಾಮನು ಸಣ್ಣಕ್ಕೆ ನಸು ನಕ್ಕು ‘ನಾನು ನೀನು ಸೇರಿ ರಾಜ್ಯವಾಳೋಣ’. ಏಕೆಂದರೆ ನೀನು ನನ್ನ ಅಂತರಾತ್ಮ, ಎರಡನೇಯ ಆತ್ಮ ನೀನು, ಈ ಸಂಪತ್ತು ನನಗೂ-ನಿನಗೂ ಇಬ್ಬರಿಗೂ ಬಂದಿದ್ದು; ನಾವು ದೇಹ ಬೇರೆ-ಬೇರೆಯಾದರೂ; ಆತ್ಮ ಒಂದೇ ಎಂದು ನುಡಿದು… ಲಕ್ಷ್ಮಣನನ್ನು ಧನ್ಯಗೊಳಿಸಿದ. ಹಾಗೆಯೇ ಲಕ್ಷ್ಮಣನ ಪೂರ್ಣ ಜೀವನವೇ ರಾಮನಾಗಿದ್ದ.
ಅನಂತರದಲ್ಲಿ ಸೀತೆಗೂ ವಿಷಯವನ್ನು ತಿಳಿಸಿ, ತನ್ನ ಭವನದತ್ತ ತೆರಳುವೆನೆಂದನು.
ಇತ್ತ ಮಹರ್ಷಿ ವಸಿಷ್ಠರು ದಶರಥನ ಮಾತಿನಂತೆ ಬ್ರಹ್ಮ ರಥದಲ್ಲಿ ರಾಮಭವನದತ್ತ ತೆರಳಿದರು.
ಗುರುಗಳು ಬಂದದ್ದನ್ನು ಗಮನಿಸಿ ತಾನೇ ಸೇವಕನಾಗಿ ಹೋಗಿ; ಕೈ ನೀಡಿ ಗುರುಗಳನ್ನು ರಥದಿಂದ ಕೆಳಗಿಳಿಸುವನು ರಾಮ. ನಂತರ ಗುರುಗಳು ನಾಳೆಯೇ ನಿನಗೆ ಪಟ್ಟಾಭಿಷೇಕ; ತದಂಗವಾಗಿ ನೀನು ದೇವರು ದೇವತೆಗಳಿಗೆ ಹವಿಸ್ಸನ್ನು ನೀಡಿ, ದರ್ಭಾಶಯನಸ್ಥನಾಗಿ ಜನಾರ್ದನನ ಆಲಯವನ್ನು ಸೇರಬೇಕು. ದೊರೆಯ ಸಂದೇಶವನ್ನು ಹೇಳಿದರು.
ಅದಕ್ಕೆ ಬೇಕಾದ ಮಂತ್ರವತ್ತಾದ ವ್ರತ ಉಪದೇಶವನ್ನು ವೈದೇಹೀ ಸಹಿತನಾದ ಶ್ರೀರಾಮನು ಪಡೆದನು.
ಸುಂದರವಾಗಿತ್ತು ರಾಮನ ಭವನ. ಅಲ್ಲಿ ಸೇರಿದವರೆಲ್ಲರಲೂ ಹರುಷ ಕಂಡುಬಂತು.
ರಾಮನ ಭವನದಿಂದ ಹೊರಬಂದು ನೋಡಿದ ವಸಿಷ್ಠರು ಜನ ತುಂಬಿದ ದಾರಿ, ರಸ್ತೆಗಳಲ್ಲಿ ನೂಕುನುಗ್ಗಲು, ಜಾಗವಿಲ್ಲ ; ಜನರು ಕುತೂಹಲದಿಂದ /ಕಾತರದಿಂದ ರಾಮನ-ರಾಜ್ಯಭಿಷೇಕಕ್ಕಾಗಿ ಕಾಯುತ್ತಿದ್ದರು. ಭವನದ ಮುಂದೆ ಸೇರಿದ ಜನರ ಗುಂಪುಗಳು ಸಮುದ್ರದ ಅಲೆಗಳಂತಿತ್ತು.
ಜನರು ದಾರಿಯನ್ನು ತಂಪು ಜಲದಿಂದ ಪೂರ್ತಿ ಶುಚಿಗೊಳಿಸಿದ್ದಾರೆ. ಪರಿಸರವು ಫಲ-ಪುಷ್ಪಗಳಿಂದ ತುಂಬಿದೆ, ಮನೆ-ಮನೆಯಲ್ಲಿಯೂ ಧ್ವಜ-ಪತಾಕೆಗಳನ್ನು ಏರಿಸಿದ್ದಾರೆ.
ಅಯೋಧ್ಯೆಯ ಪ್ರತಿಯೊಬ್ಬರೂ ಕೂಡ ರಾಮಾಭಿಷೇಕದ ಆಕಾಂಕ್ಷಿಗಳು. ಪ್ರತಿಯೊಂದು ಜೀವವು ಸಹ ನಾಳೆಯ ಸೂರ್ಯೋದಯಕ್ಕಾಗಿ ಉತ್ಸುಕತೆಯಿಂದಿತ್ತು. ಹೀಗೆ ರಾಮನರಮನೆಯ ಎದುರು ಸೇರಿದ್ದ ಸೇನೆಯ ಗುಂಪಿನಂತಿದ್ದ ಜನರ ಗುಂಪನ್ನು ವಸಿಷ್ಠರು ಸರಿಸಿಕೊಂಡು ಅರಮನೆಯನ್ನು ತಲುಪಿದರು.
ಅಲ್ಲಿ ರಾಜ ಮತ್ತು ರಾಜಗುರುವಿನ ಭೇಟಿಯಾಯಿತು. ಹೋದ ಕಾರ್ಯವು ಪೂರ್ಣಗೊಂಡಿತೆಂದು ವಸಿಷ್ಠರು ದಶರಥನಿಗೆ ತಿಳಿಸಿದರು. ನಂತರ ಗುರುವಿನ ಆಜ್ಞೆಯಂತೆ ಜನಸಭೆಯನ್ನು ವಿಸರ್ಜಿಸಿ “ಬೆಟ್ಟದ ಗುಹೆಯನ್ನು ಸಿಂಹ ಪ್ರವೇಶಿಸುವಂತೆ ದಶರಥ ಅರಮನೆಯನ್ನು ಪ್ರವೇಶಿಸಿದ.
ಇತ್ತ ರಾಮನು ವ್ರತಾಚರಣೆಯನು ಮಾಡಿ, ಮನಸ್ಸನ್ನು ಸಂಯಮಗೊಳಿಸಿ, ವಿಶಾಲನೇತ್ರೆಯಾದ ಸೀತೆಯೊಡಗೂಡಿ ಹವಿಸ್ಸಿನ ಪಾತ್ರೆಯನು ತಲೆಯಲಿರಿಸಿಕೊಂಡು ಶ್ರೀಮನ್ನಾರಾಯಣನ ಮಂದಿರವನು ಸೇರುವನು. ನಂತರ ನಾರಾಯಣ ಮಹಾದೇವತೆಯ ಹೋಮವನ್ನು ಮಾಡಿ; ಪ್ರಸಾದವನ್ನು ಸೇವಿಸಿ, ಪ್ರಾರ್ಥನೆಯನ್ನು ಮಾಡಿ, “ದಿವಿಯ ನಾರಾಯಣನನ್ನು ಭುವಿಯ ನಾರಾಯಣನನು ಸ್ಮರಿಸುತ್ತಾ ದರ್ಭಾಶಯನನಾಗಿ, ಮೌನಧಾರಣೆಯನು ಮಾಡಿ, ಸೀತೆಯೂ ಕೂಡ ಮನಸಿನ ಸಂಯಮವನ್ನು ಮಾಡಿದಳು ಮತ್ತು ನರ-ವರ ರಾಜಕುಮಾರ ವಿಶ್ರಾಂತಿಯನು ಮಾಡಿದ.
ಸೂರ್ಯೋದಯದ ಒಂದು ಯಾನದ ಮೊದಲು ಎದ್ದ ರಾಮನು ಮನೆಯ ಶೋಭಾ ಕರ್ಮವನ್ನು ಮಾಡಿಸಿ ; ಬೆಳಗಿನ ಸಂಧ್ಯಾವಂದನೆಯನ್ನು ಮಾಡಿದನು.
ನಂತರ ಹರಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ, ಶುಚಿಯಾದ ಶ್ವೇತವಸ್ತ್ರ ಧರಿಸಿದ್ದ ರಾಮನು. ವಿಪ್ರರ ವೇದ ಪುಣ್ಯಾರ್ಚನೆಯು ಅಯೋಧ್ಯೆಯಲಿ ಮೊಳಗಿತು. ಮಂಗಲ ವಾದ್ಯಗಳ ಘೋಷ ತುಂಬಿತು. ಇದರಿಂದ ಅಯೋಧ್ಯೆಯ ಜನರು ರಾಮಾಭಿಷೇಕದ ಖಚಿತತೆಯನು ಅರಿತರು.
ಅತ್ತ ಪ್ರಜೆಗಳು, ಇನ್ನು ರಾಮನ ಆಳ್ವಿಕೆ ಎಂಬ ಧನ್ಯತೆಯನ್ನು ಹೊಂದುವೆವೆಂದರು. ಏಕೆಂದರೆ ರಾಮನು ಭ್ರಾತೃವತ್ಸಲ… ಅದರಂತೆಯೇ ಜನರಲ್ಲಿಯೂ ರಾಮನಿಗೆ ಪ್ರೀತಿ ಭಾವವಿತ್ತು. ದಿಕ್ಕು ದಿಕ್ಕುಗಳಿಂದ ಗ್ರಾಮಗಳಿಂದ ಬಂದಿದ್ದ ಜಾನಪದರಿಂದ ತುಂಬಿಹೋಯಿತು ಆ ನಗರ. ಹಾಗೆಯೇ ಎಲ್ಲೆಲ್ಲೂ ಆನಂದವೇ ಆನಂದ.
ಅದರಂತೆ ಆನಂದದಲ್ಲಿರುವಾಗ ಈ ಸಂತೋಷಕ್ಕೆ “ದೃಷ್ಟಿಬೊಟ್ಟೊಂದು ಬಿದ್ದಿತು” .
ಇತ್ತ ಮಂಥರೆಯು ಅದೆನೋ ಆಕಸ್ಮಿಕವೆಂಬಂತೆ ಚಂದ್ರಕಾಂತ ಉಪ್ಪರಿಗೆಯನು ಏರಿದಾಗ ಆಶ್ಚರ್ಯದಿಂದ ನೋಡಿದಳು. ಮಂಗಳಸ್ನಾನವನು ಮಾಡಿದ್ದ ಜನರು, ದೇವಾಲಯಗಳಿಗೆಲ್ಲಾ ಬಳಿಯುತ್ತಿದ್ದ ಸುಣ್ಣ – ಬಣ್ಣ ಲೇಪಿಸುತ್ತಿರುವುದು, ಸಂತುಷ್ಟರಾಗಿದ್ದರು ಜನರು, ಅಯೋಧ್ಯೆಯ ಜನರು ಮಾತ್ರವಲ್ಲದೇ ಆನೆ, ಕುದುರೆ, ನಂದಿ, ಪಶು ಪಕ್ಷಿಗಳು ಸಂತುಷ್ಟಗೊಂಡಿದ್ದವು. ಇದನ್ನು ನೋಡಿ ಭಯಂಕರ ಅಚ್ಚರಿಯಾಯಿತು. ಹೀಗೆ ಮಂಥರೆಯು ವಿಷದೃಷ್ಟಿಯಲಿ ಅಯೋಧ್ಯೆಯನು ನೋಡಿದಳು.
ಏನಿದು ವಿಷಯವೆಂದು ತಿಳಿಯುವ ಸಲುವಾಗಿ ಅತ್ತಿತ್ತ ನೋಡಿದಾಗ ಒಬ್ಬಳು ಬಿಳಿ ರೇಷ್ಮೆ ಪಟ್ಟೆಯನುಟ್ಟ ದಾದಿಯನು ಕಂಡು ಕೇಳಿದಳು.
ಆದರೆ ಆನಂದ ಪರವಶತೆಯಲ್ಲಿ ವಿವೇಚನೆಯನು ಮಾಡದೆ, ಗೂನು ಬೆನ್ನಿನ ಕುಬ್ಜೆಯ ಮತ್ತು ಮನಸ್ಸಿನಲ್ಲಿ ವಕ್ರತೆಯಿದ್ದ ಮಂಥರೆಯ ಬಳಿ, ” ಪಾಪವಿಲ್ಲದ, ಸಿಟ್ಟು ಗೊತ್ತಿಲ್ಲದ ರಾಮನಿಗೆ ಪುಷ್ಯ ನಕ್ಷತ್ರದಲ್ಲಿ ರಾಜ್ಯಾಭಿಷೇಕ” ಎಂದು ದಾದಿಯು ಹೇಳಿದಳು.
ಈ ಮಾತನು ಕೇಳಿದ ಮಂಥರೆಯು ಪ್ರತಿಕ್ರಿಯೆಯಿಲ್ಲದೇ ಅಸಹನೆಯಿಂದ ಅವಸರ ಅವಸರದಲ್ಲಿಯೇ ಉಪ್ಪರಿಗೆಯಿಂದಿಳಿದವಳೇ ; ಕಣ್ಣನಲಿ ಬೆಂಕಿಯಂಥಾ ಪಾಪವನು ತುಂಬಿಕೊಳ್ಳುತ್ತಾ ನೇರವಾಗಿ ಕೈಕೇಯಿ ಇದ್ದಲ್ಲಿಗೆ ಬಂದಳು.
ಇನ್ನೂ ಶಯನಾವಸ್ಥಯಲ್ಲೇ ಇದ್ದ ಕೈಕೇಯಿ ಬಳಿ ನಿಂದು “ಏಳು, ಹೇ ಮೂರ್ಖಳೇ! ಇನ್ನೂ ಮಲಗಿಕೊಂಡಿರುವೆಯಾ??? ಆಪತ್ತಿನ ಮಹಾ ಪ್ರವಾಹವು ನಿನ್ನ ಬಳಿ ಬರುತ್ತಿದೆ. ನೀನು ನೋಡೋಕೆ ಚಂದ ಅಂದುಕೊಂಡಿರುವೆ… ಆದರೆ ನೀನಲ್ಲ ಇನ್ನು ನಿನ್ನ ಸೌಭಾಗ್ಯ ಬೇಸಿಗೆಯಲ್ಲಿ ಹರಿವ ನದಿಯಂತೆ, ಆ ಸಮಯ ಬಂದಿದೆ…” ಎಂದು ಹೇಳುವಳು.
ಆಗ ಕೈಕೇಯಿಯು ಅರ್ಧ ನಿದ್ದೆಯಿಂದ ಎಚ್ಚೆತ್ತು ಅಂತದ್ದು ಏನಾಯಿತು? ಎಲ್ಲಾ ಕ್ಷೇಮ ತಾನೇ ? ಎಂದು ಕೇಳುವಾಗ ಮತ್ತೂ ವಿಷದ ಮುಖ ತೋರುವಳು ಮಂಥರೆ…
ಮಂಥರೆ ಮುಂದುವರೆದು, ನಿನಗೆ ಪರಿಹಾರವೇ ಇಲ್ಲವೆಂಬಂತ ನಿನ್ನ ಸರ್ವನಾಶದ ಪ್ರಕ್ರಿಯೆ ಆರಂಭವಾಗಿದೆ.
ನಿನ್ನ ಹಿತೈಷಿಯು ನಾನು, ನಿನ್ನ ಹಿತವನು ಬಯಸಿ ಬಂದಿರುವೆ. ನಿನಗೆ ಸುಖ ಇದ್ದರೆ ನನಗೆ ಮಹಾಸುಖ, ನೀ ದುಃಖಿ ಆದರೆ ನನಗೂ ಮಹಾ ದುಃಖ ಎಂದು ನುಡಿದು,
ನೀನು ಮುಗ್ಧಳು, ಈ ಕ್ರೂರ ರಾಜನೀತಿಯ ಅರಿವಿಲ್ಲ. ನಿನಗದು ತಿಳಿಯದು. ದಶರಥನ ಬಾಯಲ್ಲಿ ಧರ್ಮ, ಕಾರ್ಯದಲ್ಲಿ ವಂಚನೆ; ದಶರಥನು ಸ್ವತಃ ಸರ್ವನಾಶವನ್ನು ಮಾಡುತ್ತಿದ್ದಾನೆ ಎನ್ನುವ ದಾಟಿಯಲ್ಲಿ ಮಂಥರೆಯು ತನ್ನ ಮಾತನ್ನು ಕೈಕೇಯಿಯ ಮುಂದೆ ಪ್ರಚುರ ಪಡಿಸಿದಳು.
ಕಥಾ ಭಾಗದ ಮುಂದಿನ ಸರ್ಗದ ಅರ್ಥವನ್ನು ಶ್ರೀ ಸಂಸ್ಥಾನದವರ ಮುಂದಿನ ಧಾರಾ-ರಾಮಾಯಣ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:
ಪ್ರವಚನವನ್ನು ನೋಡಲು:
Leave a Reply