ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ನಾಲಿಗೆ ಕುಲವನ್ನು ಹೇಳುತ್ತದೆ-ಶ್ರೀಸೂಕ್ತಿ ನಮ್ಮೊಳಗಿನ ಸತ್ಯವನ್ನು ನಾಲಿಗೆ ಹೇಳಿಯೇ ಬಿಡುತ್ತದೆ.
ದಶರಥನು ಹೊಸ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ರಾಮನ ಜೊತೆಗೆ ಸೇನೆ, ವಣಿಜ, ವೀರರನ್ನು ಕಳುಹಿಸಲು ಅಪ್ಪಣೆಯಿತ್ತನು. ಆ ಅಪ್ಪಣೆಯನ್ನು ಕೇಳಿದ ಕೈಕೆಯಿಯ ಸ್ವರ ಬಿತ್ತು, ಮುಖ ಒಣಗಿ, ರಾಜನನ್ನು ನೇರದೃಷ್ಟಿಯಿಂದ ನೋಡಿದವಳಾಗಿ, “ಜನರೆಲ್ಲರೂ ಹೋದಮೇಲೆ ಈ ರಾಜ್ಯವನ್ನು ಭರತನು ಇಷ್ಟಪಡಲಾರ” ಎಂದು ಹೇಳಿ ಹೆಂಡಕ್ಕೆ ರಾಜ್ಯವನ್ನು ಹೋಲಿಸುತ್ತಾಳೆ. “ಎಲ್ಲವನ್ನು ರಾಮನಿಗೆ ಕೊಟ್ಟು, ಭರತನಿಗೆ ಏನು?” ಎಂದು ಪ್ರಶ್ನಿಸಿದಾಗ ದಶರಥನು ಕುಪಿತಗೊಂಡು “ಹೊರಲಾರದ ಹೊರೆಯನ್ನು ಹೊರೆಸಿ ಪುನಃ ಚುಚ್ಚುವುದುಂಟೇ? ಅನಾರ್ಯೆಯೇ ವರವನ್ನು ಬಿಡುವಾಗ ಕೇಳಬೇಕಿತ್ತು.”ಎಂದು ಗದರಿದನು. ದ್ವಿಗಿಣೀ ಕೃಧಳಾದ ಕೈಕೆಯಿಯು ದಶರಥನ ಕುರಿತು “ನಿನ್ನ ವಂಶದಲ್ಲಿ, ನಿನ್ನದೇ ಪೂರ್ವಜ ಸಗರ ತನ್ನ ಮಗ ಅಸಮಂಜಸನನ್ನು ಹೊರಹಾಕಲಿಲ್ಲವೆ, ಹಾಗೆಯೇ ರಾಮನು ಹೋಗಲಿ.” ಎಂದು ಹೇಳಿದಾಗ ಅಲ್ಲಿ ನೆರೆದ ಎಲ್ಲರಿಗೂ ನಾಚಿಕೆಯಾಯಿತು.
ಆಗ ಅಷ್ಟಮಂತ್ರಿಗಳಲ್ಲೊಬ್ಬನಾದ ಸಿದ್ಧಾರ್ಥ ನಿರ್ಮಲತೆಗೆ ಪ್ರಸಿದ್ಧನಾದವನು ಕೈಕೆಯಿಗೆ ಅಸಮಂಜಸನನ್ನು ಕಾಡಿಗೆ ಅಟ್ಟಿದ ಕಾರಣವನ್ನು ನೀಡುತ್ತಾನೆ. ನಂತರ ಕೈಕೆಯಿಯಲ್ಲಿ “ರಾಮನ ತಪ್ಪೇನು? ಏನು ಕಾರಣ?. ರಾಮನು ಆಗುಣ ದುರ್ಲಭ, ಪಾಪದುರ್ಲಭನು. ಏನು ದೋಷವನ್ನು ಆತನಲ್ಲಿ ಕಂಡಿ? ದೋಷವಿಲ್ಲದವನನ್ನು, ಸನ್ಮಾರ್ಗದಲ್ಲಿರುವವನನ್ನು ದಂಡಿಸಿದರೆ 3 ಲೋಕದ ದೊರೆಯನ್ನದರೊ ಸುಟ್ಟುಹಾಕೀತು. ರಾಮನ ಶ್ರೇಯಸ್ಸಿಗೆ ಕಲ್ಲು ಹಾಕಬೇಡ, ಅಪವಾದ ಶಾಶ್ವತವಾದೀತು” ಎಂದು ಎಚ್ಚರಿಸಿದನು.
ದಶರಥನು ನೀನು ಶೂನ್ಯರಾಜ್ಯವನ್ನಾಳು ಎಂದು ಗದರಿದಾಗ, ರಾಮನು ಈ ಪ್ರಸಂಗಕ್ಕೆ ತೆರೆ ಎಳೆಯುತ್ತಾನೆ. ರಾಮನು” ಆನೆಯನ್ನು ಕೊಟ್ಟಮೇಲೆ ಹಗ್ಗ ಏಕೆ? ರಾಜ್ಯವನ್ನು ತ್ಯಾಗ ಮಾಡಿದ ಮೇಲೆ ಭಂಡಾರ ಇತ್ಯಾದಿ ಏಕೆ? ನನಗೆ ಏನು ಬೇಕು? ನಾರು ವಸ್ತ್ರ , ಹಾರೆ ಬುಟ್ಟಿಗಳು. ತಾಪಸಾಯೋಗ್ಯವಾದದ್ದನ್ನ ಕೊಡಿ” ಎಂದು ಕೇಳಿದ ಮಾತ್ರಕ್ಕೆ ಕೈಕೆಯಿಯಾದರೊ ತಾನೇ ಓಡಿ ನಾರು ಬಟ್ಟೆಯನ್ನು ತಂದು ಕೊಡುತ್ತಾಳೆ. ಗೌರವದಿಂದ ಸ್ವೀಕರಿಸಿ ರಾಮ ಲಕ್ಷ್ಮಣರು ಅಲ್ಲಿಯೇ ಉಟ್ಟುಕೊಂಡಾಗ, ಕೋಮಲೆ ಸೀತೆಗೆ ಇದನ್ನು ಉಟ್ಟುಕೊಳ್ಳುವುದು ಹೇಗೆ? ಎಂದು ನಾಚಿಸಿಕೊಂಡಾಗ, ರಾಮನು ಉಟ್ಟ ಸೀರೆಯ ಮೇಲೆ ಅದನ್ನು ಉಡಿಸಿದ.
ಅಂತಃಪುರದ ನಾರಿಯರು ರಾಮನಲ್ಲಿ, ” ನಿನಗೆ ವನವಾಸ ಈಕೆಗೆ ಅಲ್ಲ. ಈಕೆಯನ್ನಾದರೂ ಬಿಟ್ಟು ಹೋಗು. ಈಕೆಯಲ್ಲಿ ನಿನ್ನನ್ನು ಕಾಣುತ್ತೇವೆ”ಎಂದು ಉದ್ಗಾರವನ್ನು ಮಾಡಿದರು.
ಆಗ ಕ್ಷಮಾಧನ, ಶಾಂತಿಮೂರ್ತಿ, ಯಾವತ್ತೂ ಕೋಪಗೊಂಡಿರದ ವಸಿಷ್ಠ ಮಹರ್ಷಿಗಳಿಗೆ ಅತ್ಯಂತ ಕುಪಿತಗೊಂಡು ಕೈಕೆಯಿಗೆ “ಅತಿಯಾಯಿತು ನಿನ್ನದು. ಈ ಕುಲಕ್ಕೆ ಕಳಂಕ, ರಾಜನಿಗೆ ಮೋಸಮಾಡಿ ನಿನ್ನ ಮಿತಿಯೊಳಗೆ ಇರುವುದಿಲ್ಲ. ಶೀಲವಂತಳಾದ ಇವಳನ್ನು ಸಿಂಹಾಸನದಲ್ಲಿ ಕೂರಿಸುತ್ತೇನೆ. ಈಕೆ ರಾಜ್ಯಭಾರವನ್ನು ಮಾಡಲಿ. ನಾನು ನಮ್ಮ ಶಿಷ್ಯರು, ಇಡೀ ಅಯೋಧ್ಯೆ ರಾಮನೊಂದಿಗೆ ಕಾಡಿಗೆ ಹೋಗುತ್ತೇವೆ. ನೀನು ಮರಗಳನ್ನು ಪಾಲನೆ ಮಾಡು. ಅಂತರಂಗದಿಂದ ದೊರೆಯು ಕೊಡದ ರಾಜ್ಯವನ್ನು ಭರತ ಸ್ವೀಕರಿಸಲಾರ. ದಶರಥನ ಮಗನೇ ಆದರೆ, ಭರತನು ಶತ್ರುಘ್ನ ಸಹಿತವಾಗಿ ಕಾಡಿಗೆ ಹೋಗುತ್ತಾನೆ. ಪುತ್ರಲೋಭದಿಂದ ಮಗನಿಗೆ ನೀನೇ ಕೇಡು ಮಾಡಿದಿ. ಸೀತೆಗೆ ಪಟ್ಟೆ ವಸ್ತ್ರ, ಆಭರಣಗಳನ್ನು ಕೊಡಬೇಕು ಹೊರತು ನಾರು ಬಟ್ಟೆಯನ್ನಲ್ಲ.” ಎಂದು ಆಕ್ರೋಶದಿಂದ ನುಡಿದರು.
ಸೀತೆಯು ನಾರುಬಟ್ಟೆಯನ್ನು ಉಟ್ಟದ್ದನ್ನು ನೋಡಿ ಜನರು ಆಕ್ರೋಶಗೊಂಡರು, ದಶರಥನಿಗೆ ಧಿಕ್ಕಾರವನ್ನು ಕೂಗಿದರು.
ಒಳ್ಳೆಯವರ ಜೊತೆ ಇರಬೇಕು, ನಮ್ಮ ಜೊತೆ ಒಳ್ಳೆಯವರನ್ನು ಇಟ್ಟುಕೊಳ್ಳಬೇಕು- ಶ್ರೀಸೂಕ್ತಿ
ದಶರಥನು ಧರ್ಮಸಾಧನೆಮಾಡಲಾಗಲಿಲ್ಲವೆಂಬ ಕಾರಣಕ್ಕೆ ಜೀವದಾಸೆಯನ್ನು ತೊರೆದ.
ರಾಮನು ತಲೆಕೆಳಗೆ ಹಾಕಿ ಕೂತ ದಶರಥನಿಗೆ, “ಇನ್ನೇನು ಅಪೇಕ್ಷೆಯಿಲ್ಲ, ಆದರೆ ನನ್ನಮ್ಮ ಕೌಸಲ್ಯೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಜೀವ ಉಳಿಯಲಿ ನಾನು ಬರುವವರೆಗೆ.”
ಒಬ್ಬಳಿಂದಾಗಿ ಎಲ್ಲರಿಗೂ ಪೀಡೆ.
ದಶರಥನು “ರಾಮಾ……” ಎಂದು ಉದ್ಘಾರ ಮಾಡುತ್ತಿರುವಾಗಲೇ ಬೋಧತಪ್ಪಿ ಬಿದ್ದ. ಸ್ವಲ್ಪ ಸಾಯದಲ್ಲಿ ಎದ್ದ ದೊರೆ, ಸುಮಂತ್ರನಿಗೆ ರಥವನ್ನು ತರಲು ಹೇಳಿ ಹಳ್ಳಿಗಳನ್ನು ದಾಟಿ ತಲುಪಿಸುವ ಸಲುವಾಗಿ ಆಜ್ಞೆಯಿತ್ತನು.
ಸದ್ಗುಣಿಗಳ ಫಲವೇ ಇದು ಎಂದು ದಶರಥನು ದುಃಖಿಸುತ್ತಾನೆ. ಕೋಶಾಧಿಕಾರಿಯನ್ನು ಕರೆದು 14 ವರ್ಷಗಳಿಗೆ ಬೇಕಾದ ವಸ್ತ್ರಗಳನ್ನು ಕೊಡಲು ಸೂಚಿಸಿದನು.
ನಂತರ ಸೀತೆಯು ತನ್ನ ತಾಯಿಗೆ ಸಮಾನಳಾದ ಕೌಸಲ್ಯೆಗೆ ನಮಸ್ಕರಿಸಿದಳು. ನಂತರ ಕೌಸಲ್ಯೆ ಸೀತೆಗೆ, “ಚೆನ್ನಾಗಿದ್ದಾಗ ಸೌಲಭ್ಯವನ್ನು ಪಡೆದು ತೊಂದರೆಬಂದಾಗ ಕೇಡು ಮಾಡುತ್ತಾರೆ. ಅವರು ಪಾಪಸಂಪನ್ನರು. ಸಾತ್ವಿಯವರಿಗೆ ಪತಿಯೇ ಸರ್ವಸ್ವ. ರಾಮನೇ ದೇವತೆ.” ಸೀತೆ ಎಲ್ಲವನ್ನೂ ಹೀಗೆ ನಡೆದುಕೊಳ್ಳುತ್ತೇನೆ ಎಂದು ಹೇಳಿದಳು. ನಂತರ, ” ಪತಿಯಿಲ್ಲದ ಸತಿ, ಚಕ್ರವಿಲ್ಲದ ರಥದಂತೆ” ಎಂದು ಹೇಳಿದಾಗ ಕೌಸಲ್ಯೆ ದುಃಖಹರ್ಷದ ಕಣ್ಣೀರನ್ನು ಸುರಿಸಿದಳು.
ಲಕ್ಷ್ಮಣನು ತನ್ನ ತಾಯಿಯ ಬಳಿಗೆ ಹೋದಾಗ ತಾಯಿ ಸುಮಿತ್ರೆ,” ವನವಾಸಕ್ಕಾಗಿ ಹುಟ್ಟಿದವನು, ಪ್ರೀತಿಯನ್ನು ರಾಮನಲ್ಲಿಟ್ಟಿರುವೆ. ರಾಮನವಿಷಯದಲ್ಲಿ ತಪ್ಪನ್ನು ಮಾಡಬೇಡ. ನಿನಗೆ ರಾಮನೇ ದಶರಥ, ಸೀತೆಯಲ್ಲಿ ನನ್ನನ್ನು ಕಾಣು, ಅಡವಿಯಲ್ಲಿ ಅಯೋಧ್ಯೆಯನ್ನು ಕಾಣು. ಹೋಗು…… ಹೋಗು……” ಎಂದು ಹೇಳಿದಳು.
ಮುಂದೆ ಕಾಡಿಗೆ ಹೋಗುವ ವಿಚಾರವನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:
ಪ್ರವಚನವನ್ನು ನೋಡಲು:
Leave a Reply