ಮನಸ್ಸಿನಲ್ಲಿ ಬಂದ ಭಾವನೆಗಳಿಗೆ ಬರಹ ರೂಪ ಕೊಡಿ: ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಘವೇಶ್ವರ ಶ್ರೀ.
ಬರಹ ಒಂದು ಸುಂದರವಾದ ಸಂಗತಿ. ಎಲ್ಲರ ಮನಸ್ಸಿಗೆ ಅದೆಷ್ಟೋ ಒಳ್ಳೆಯ ಭಾವನೆಗಳು ಬಂದು ಹೋಗುತ್ತಿರುತ್ತದೆ. ಅಂತಹ ಭಾವನೆಗಳು ಉಳಿಯಬೇಕು ಅಂದರೆ ಅವುಗಳಿಗೆ ಬರಹ ರೂಪವನ್ನು ಕೊಡಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಅವರು ಬೆಂಗಳೂರಿನ ರಾಮಚಂದ್ರಾಪುರಮಠದಲ್ಲಿ ನಡೆದ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದರು. ಬರೆಯಲು ಹೊರಟಾಗ ಭಾವ ಬರುವುದೂ ಉಂಟು. ಹೀಗೆ ಮಾಡುವುದರಿಂದ ಅನೇಕ ಒಳ್ಳೆಯ ಭಾವಗಳು, ಒಳ್ಳೆಯ ವಿಚಾರಗಳು ಸಮಾಜಕ್ಕೆ ಲಭಿಸುತ್ತದೆ. ಉದಾಹರಣೆಗೆ ಅಂದು ವಾಲ್ಮೀಕಿ ರಾಮಯಣವನ್ನು ಬರೆಯದೆ ಹೋಗಿದ್ದಾರೆ, ಇಂದು ನಮಗೆ ಸಮರ್ಪಕವಾದ ಒಂದು ರಾಮಾಯಣ ಗ್ರಂಥ ಇರುತ್ತಿರಲಿಲ್ಲ. ಜೀವನದ ಎಷ್ಟೋ ಆದರ್ಶಗಳು ಮರೆಯಾಗಿ ಬಿಡುತ್ತಿದ್ದವು.ಒಳ್ಳೆಯ ಭಾವಗಳು, ಯೋಚನೆಗಳು ಬಹುಕಾಲ ಬಾಳಬೇಕು ಎಂದರೆ ನಮ್ಮ ಭಾವವನ್ನು ಬರೆಯುವ ಅಭ್ಯಾಸ ಇಟ್ಟುಕೊಳ್ಳಬೇಕು ಎಂದು ನುಡಿದರು.
ದಿ. ಕೊಡಗಿನ ಗೌರಮ್ಮ ಸ್ಮಾರಕ ದತ್ತಿ ನಿಧಿ ಕಥಾ ಸ್ಪರ್ಧೆಯ ಕಾರ್ಯದರ್ಶಿ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ ಅವರು ಮಾತನಾಡಿ ಈ ಕಥಾ ಸ್ಪರ್ಧೆಯ ಹುಟ್ಟಿನ ಬಗ್ಗೆ ಹೇಳಿದರು.ಪ್ರತಿಯೊಬ್ಬ ಮಹಿಳೆಯಲ್ಲಿಯೂ ಒಂದೊಂದು ಕಥೆ ಇರುತ್ತದೆ. ಅವುಗಳನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಇಂತಹ ಕಥಾಸ್ಪರ್ಧೆಗಳು ಸಾಧನೆಯ ಮೆಟ್ಟಿಲುಗಳು, ಅದನ್ನು ಎಲ್ಲ ಮಹಿಳೆಯರು ಸದುಪಯೋಗಪಡಿಸಬೇಕು. ಕೊಡಗಿನ ಕಥಾ ಸ್ಪರ್ಧೆಗೆ ಯಾವುದೇ ವಿಷಯದ ಕತೆಯನ್ನು ಬರೆಯಬಹುದು. ಕೊನೆಯ ದಿನಾಂಕ ಪ್ರತಿ ವರ್ಷದ ಆಗಸ್ಟ್ 30 ಎಂದು ವಿವರಿಸಿದರು. ನಂತರ ೨೦೧೫ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದರು
ಪ್ರಥಮ ಬಹುಮಾನ: ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ
ದ್ವಿತೀಯ ಬಹುಮಾನ: ಶ್ರೀಮತಿ ಅಧಿತಿ ಎಂ.ಎನ್, ,ಪುಣೆ
ತೃತೀಯ ಬಹುಮಾನ: ಶ್ರೀಮತಿ ಡಾ|| ಅಜಿತಾ ಶರ್ಮ, ಪಾಂಡಿಚೆರ್ರಿ
ಪ್ರಥಮ ಪ್ರಶಸ್ತಿ ವಿಜೇತೆ ಶ್ರೀಮತಿ ಪ್ರಸನ್ನಾ ಮಾತನಾಡಿ, ನಾನು ಮೂಲತಃ ಬರಹಗಾರ್ತಿಯಾಗಿರಲಿಲ್ಲ. ಮೊದಲು ಒಂದು ಬಾರಿ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ ಬಳಗಕ್ಕೆ ಕಥೆ ಬರೆದು ಕಳಿಸಿದಾಗ, ಅದನ್ನು ನೋಡಿದ ಬಳಗದ ಕಾರ್ಯದರ್ಶಿ ಶ್ರೀಮತಿ ವಿಜಯಾ ಅವರು ಅದನ್ನು ಮೆಚ್ಚಿ, ಪ್ರೋತ್ಶಾಹಿಸಿದ್ದರು. ನಿನ್ನ ಸಾಧನೆ ಇಲ್ಲಿಂದ ಪ್ರಾರಂಭವಾಗಲಿ ಎಂದು ಉತ್ತೆಜಿಸಿದ್ದರು. ಇದು ನನಗೆ ಬರೆಯಲು ಸ್ಫೂರ್ತಿ ನೀಡಿತು ಎಂದರು.
ಇದೆ ಸಮಯದಲ್ಲಿ ಕಳೆದ ಹತ್ತು ವರ್ಷ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆಗಳ ಕಥಾಸಂಕಲನ “ಹತ್ತೆಸಳು ಸಂಕಲನ ಸಂಪುಟ – ೨” ಕೃತಿಯನ್ನು ಶ್ರೀಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.
ಇಂದು ನಡೆದ ಇನ್ನೊಂದು ಬಹುಮಾನ ವಿತರಣೆಯೆಂದರೆ ಶ್ರೀಸಂಸ್ಥಾನದವರ ಪೇಜಿನಲ್ಲಿ ಪ್ರಕಟವಾಗಿದ್ದ ‘ಚಿತ್ರೋತ್ತರ’ ಎಂಬ ಚಿತ್ರಕ್ಕೆ ಶೀರ್ಷಿಕೆ ಬರೆಯುವ ಸ್ಪರ್ಧೆಯಲ್ಲಿ ವಿಜೆತನಾದ ಕು. ವಿನೀತ್ ಮಜಿ ಅವರಿಗೆ.
ಕು. ವಿನೀತ್ ಮಾತನಾಡುತ್ತ “ನನಗೆ ಮೊದಲಿನಿಂದಲೂ ರಾಮ ದೇವರ ಮೇಲೆ ವಿಶೇಷ ಆಕರ್ಷಣೆಯಿತ್ತು, ಅಶೋಕೆಯ ಚಾತುರ್ಮಾಸ್ಯದ ಸಮಯದಲ್ಲಿ ಗುರುಗಳ “ನಮ್ಮ ಮಠ” ಎಂಬ ವಿಷಯದ ಮೇಲಿನ ಆಶೀರ್ವಚನ ಕೇಳಿದ ಮೇಲಂತೂ ಮಠದ ಇತಿಹಾಸದ ಬಗೆಗಿನ ಆಸಕ್ತಿ, ರಾಮದೇವರು, ಮಂಟಪ ಇತ್ಯಾದಿಗಳ ಬಗೆಗಿನ ಆಸಕ್ತಿ ಇನ್ನೂ ಹೆಚ್ಚಿತು, ಹಾಗೆಯೇ ನಾನು ಅಂಥವುಗಳ ಬಗ್ಗೆ ಲಭ್ಯವಾದ ಚಿತ್ರಗಳು ಮತ್ತು ಮಾಹಿತಿಗಳನ್ನು ಕಲೆಹಾಕುವ ಹವ್ಯಾಸ ಬೆಳೆಸಿಕೊಂಡೆ, ಹಾಗೆಯೇ ಗುರುಗಳ ಪೇಜಿನಲ್ಲಿ ಆ ಪ್ರಶ್ನೆ ನೋಡಿದ ನನಗೆ, ನಾನು ಸಂಗ್ರಹಿಸಿದ್ದ ಚಿತ್ರ ನೆನಪಾಯಿತು, ಕಂಪ್ಯೂಟರಿನಲ್ಲಿ ಹುಡುಕಿದಾಗ ಸರಿಯಾದ ಮಾಹಿತಿ ಸಿಕ್ಕಿತು ಹಾಗಾಗಿ ನಾನು ಸರಿ ಉತ್ತರ ಬರೆಯಲು ಸಾಧ್ಯವಾಯಿತು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಿ.ಕೊಡಗಿನ ಗೌರಮ್ಮನವರ ಮರಿಮೊಮ್ಮಗಳು ಕು.ಭುವನೇಶ್ವರಿ ಉಪಸ್ಥಿತರಿದ್ದದ್ದು ವಿಶೇಷವಾಗಿತ್ತು.
ಬೆಂಗಳೂರು: 24-01-2015
ಗಿರಿನಗರದ ಶ್ರೀರಾಮಾಶ್ರಮದಲ್ಲಿ ಕೊಡಗಿನ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆ ಪ್ರಶಸ್ತಿ ಪ್ರದಾನ ಮತ್ತು ಹತ್ತೆಸಳು ಕಥಾ ಸಂಕಲನದ ದ್ವೀತೀಯ ಆವೃತ್ತಿಯ ಲೋಕಾರ್ಪಣೆ.
January 25, 2016 at 4:12 PM
ಹರೇರಾಮ..ಗುರುವೆಂಬ ಚೈತನ್ಯದ ನಿಧಿಯಡಿಯಲ್ಲಿ ಕೊಡಗಿನ ಗೌರಮ್ಮ ದತ್ತಿನಿಧಿಯ ಸಾಹಿತ್ಯಾತ್ಮಕ ಕಾರ್ಯವನ್ನು ನಿಷ್ಠೆಯಿಂದ ನಡೆಸುತ್ತಿರುವ ವಿಜಯಕ್ಕನ ಕಾರ್ಯ ನಿಜಕ್ಕೂ ಶ್ಲಾಘನೀಯ…ಎಷ್ಟೊಂದು ಮಹಿಳೆಯರಿಗೆ ಆ ಕೈಂಕರ್ಯ ಗುರುತನ್ನೂ ,ಪ್ರತಿಭಾ ಪ್ರೋತ್ಸಾಹವನ್ನೂನೀಡುತ್ತಿದೆ!!!.ಗುರುಕರುಣೆ ಸದಾ ಇರಲಿ…ಹರೇರಾಮ