ಗೋವಿಗೆ ಕೃತಘ್ನರಾಗಬಾರದು
ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಬೆಂಗಳೂರು: ಮನುಷ್ಯ ಏನಾದರೂ ಆಗಬಹುದು ಆದರೆ ಕೃತಘ್ನನಾಗಬಾರದು. ಒಂದುವೇಳೆ ಕೃತಘ್ನನಾದರೂ ತಾಯಿಗೆ ಮಾತ್ರ ಕೃತಘ್ನನಾಗಬೇಡ, ಯಾಕಂದ್ರೆ ಹೊತ್ತು ಹೆತ್ತಿದ್ದಾಳೆ ತಾಯಿ. ಒಂದುವೇಳೆ ತಾಯಿಗೆ ಕೃತಘ್ನನಾದರೂ ಗೋಮಾತೆಗೆ ಮಾತ್ರ ಕೃತಘ್ನನಾಗಬಾರದು, ಯಾಕಂದ್ರೆ ತಾಯಿ ಹಾಲು ಕೊಡುವುದು ತನ್ನ ಮಕ್ಕಳಿಗೆ ಮಾತ್ರ, ಆದರೆ ಗೋವು ನಮಗೆಲ್ಲರಿಗೂ ಹಾಲು ಕೊಡುತ್ತದೆ. ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಗೋವು ನಮ್ಮನ್ನು ಜೀವಂತ ಇರುವಾಗ ಮಾತ್ರ ಅಲ್ಲ, ಜೀವನದ ಅನಂತರವೂ ರಕ್ಷಿಸುತ್ತದೆ. ನಾವು ಸತ್ತ ಮೇಲೆ ನಾವು ದಾನ ಕೊಟ್ಟ ಗೋವು ನಮ್ಮನ್ನು ವೈತರಣೀ ನದಿಯನ್ನು ದಾಟಿಸಿ ಸ್ವರ್ಗದ ಹಾದಿಯನ್ನು ಸುಗಮಗೊಳಿಸುತ್ತದೆ. ಅಂತಹ ಗೋಸಂತತಿಗೆ ಉಪಕಾರ ಮಾಡಲು ಆಗದಿದ್ರೂ ಕೃತಘ್ನರಾಗಬಾರದು ಎಂದು ನುಡಿದರು.

ನಮಗೆ ಉಪಕಾರ ಮಾಡುವ ಗೋ-ಮಾತೆಗೆ ಅಪಕಾರ ಮಾಡದಿರೋಣ. ಜೀವನದಲ್ಲಿ ಗೋವು ಇರಲೇಬೇಕು, ಅದಿಲ್ಲದಿದ್ದರೆ ನೋವು, ಸಾವು. ಗೋವಿದ್ದರೆ ಮಾತ್ರ ನಲಿವು. ಗೋವಿನಿಂದಲೇ ಭಾರತದ ಶ್ರೇಯಸ್ಸು. ಅಂತಹ ಗೋಮಾತೆಗೆ ಕೃತಘ್ನರಾದರೆ ಪ್ರಾಯಶ್ಚಿತ್ತವಿಲ್ಲ ಎಂದು ಅಭಿಪ್ರಾಯಪಟ್ಟರು.

ಆಂದ್ರಪ್ರದೇಶದ ಕರ್ನೂಲು ಜಿಲ್ಲೆ, ಯಾದವಗಿರಿ ಆದೋನಿ ಶ್ರೀ ಶಾರದಾ ದತ್ತಪೀಠಂನ ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಮಹಾಸ್ವಾಮೀಜಿಗಳು, ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ ಅವತಾರವೆತ್ತಿ ಗೋವುಗಳನ್ನು ರಕ್ಷಣೆ ಮಾಡಿದ್ದ , ಈ ಕಲಿಯುಗದಲ್ಲಿ ಪರಮಪೂಜ್ಯ ರಾಘವೇಶ್ವರ ಸ್ವಾಮೀಜಿಯವರು ಅವತರಿಸಿ ಗೋವುಗಳನ್ನು ರಕ್ಷಿಸುತ್ತಿದ್ದಾರೆ. ಗೋಪೂಜೆ ಮಾಡಿದರೆ ಎಲ್ಲ ದೇವ ದೇವತೆಗಳನ್ನು ಪೂಜಿಸಿದಂತೆ. ಗೋವಿನಷ್ಟು ಪವಿತ್ರವಾದ ಜನ್ಮ ಇನ್ನೊಂದಿಲ್ಲ. ಗೋ-ಮೂತ್ರ, ಗೋಮಯ ಸಕಲ ರೋಗ ಪರಿಹಾರಕ, ಇವೆರಡಿದ್ದರೆ ಯಾವ ವೈದ್ಯರೂ ಬೇಕಿಲ್ಲ, ಯಾವ ಔಷಧಿಯೂ ಬೇಕಿಲ್ಲ. ಪ್ರತಿನಿತ್ಯ ಅರ್ಧ ಚಮಚ ಗೋಮೂತ್ರವನ್ನು ಒಂದು ಲೋಟ ನೀರಿನೊಂದಿಗೆ ಸೇವಿಸಿದರೆ ಯಾವ ರೋಗವೂ ಬರುವುದಿಲ್ಲ ಎಂದರು.

ವಿಜಯನಗರದ ಮಾರುತಿ ಮೆಡಿಕಲ್ಸ್ನ ಮಾಲೀಕ ಅನನ್ಯ ಗೋಸೇವಕ, ಹಲವಾರು ಗೋವುಗಳ ಸಂರಕ್ಷಕ, ನಾಡಿನ ಜನರನ್ನು ಗೋವಿನೆಡೆಗೆ ಸೆಳೆಯುತ್ತಿರುವ ಮಹೇಂದ್ರ ಮುನ್ನೋಟ್ ಇವರಿಗೆ ಗೋ ಸೇವಾಪುರಸ್ಕಾರವನ್ನು ನೀಡಲಾಯಿತು.

ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿ ಹಾಗೂ ಶ್ರೀಧರ ಡಿ.ಎಸ್. ಕಿನ್ನಿಗೋಳಿ ಬರೆದ “ಜಡಭರತ” ಪುಸ್ತಕವನ್ನು ಸುಬ್ರಹ್ಮಣ್ಯಭಾರತೀ ಶ್ರೀಗಳು ಲೋಕಾರ್ಪಣೆ ಮಾಡಿದರು.

ಉತ್ತರಕನ್ನಡದ ಅಂಗಡಿಬೈಲ್, ಚೆನ್ನಗಾರ, ಕುಂಟಗನಿ ಪ್ರದೇಶದ ಗೋಚಾತುರ್ಮಾಸ್ಯ ಸೇವಾಸಮಿತಿ ಅಚಿವೆ ಇದರ ಪದಾಧಿಕಾರಿಗಳಾದ ಜಿ. ಎಂ. ಶೆಟ್ಟಿ ಮಾಬಗಿ, ಬೊಮ್ಮಯ್ಯ ಗುನಾಗಾ, ನಿತ್ಯಾನಂದ ಗೋಪಾಲ ನಾಯಕ ಹಾಗೂ ಸರ್ವ ಸಮಾಜದ ಶಿಷ್ಯರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬೆಂಗಳೂರು ನಗರ ರಾಜರಾಜೇಶ್ವರಿನಗರ ಹಾಗೂ ಬನಶಂಕರಿ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ಸರ್ಪಂಗಳ ರಾಮಚಂದ್ರ ಭಟ್ ದಂಪತಿಗಳು ಸಭಾಪೂಜೆ ಮಾಡಿದರು. ಅರ್ಪಿತಾ ಹೆದ್ಲಿ ನಿರೂಪಿಸಿದರು.

ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಕೋಟ್ಸ್
ನಮಗೆ ಉಪಕಾರ ಮಾಡುವ ಗೋ-ಮಾತೆಗೆ ಅಪಕಾರ ಮಾಡದಿರೋಣ. ಜೀವನದಲ್ಲಿ ಗೋವು ಇರಲೇಬೇಕು, ಅದಿಲ್ಲದಿದ್ದರೆ ನೋವು, ಸಾವು. ಗೋವಿದ್ದರೆ ಮಾತ್ರ ನಲಿವು. ಗೋವಿನಿಂದಲೇ ಭಾರತದ ಶ್ರೇಯಸ್ಸು. ಅಂತಹ ಗೋಮಾತೆಗೆ ಕೃತಘ್ನರಾದರೆ ಪ್ರಾಯಶ್ಚಿತ್ತವಿಲ್ಲ. – ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರ

ಗೋ-ಮೂತ್ರ, ಗೋಮಯ ಸಕಲ ರೋಗ ಪರಿಹಾರಕ, ಇವೆರಡಿದ್ದರೆ ಯಾವ ವೈದ್ಯರೂ ಬೇಕಿಲ್ಲ, ಯಾವ ಔಷಧಿಯೂ ಬೇಕಿಲ್ಲ.
– ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಮಹಾಸ್ವಾಮೀಜಿಗಳು

• ಮಹೇಂದ್ರ ಮುನ್ನೋಟ್ ಇವರಿಗೆ ಗೋ ಸೇವಾಪುರಸ್ಕಾರ ಪ್ರದಾನ
• ಶ್ರೀಧರ ಡಿ.ಎಸ್. ಕಿನ್ನಿಗೋಳಿ ಬರೆದ “ಜಡಭರತ” ಪುಸ್ತಕ ಲೋಕಾರ್ಪಣೆ
• ಆದೋನಿ ಶ್ರೀ ಶಾರದಾ ದತ್ತಪೀಠಂನ ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಸ್ವಾಮೀಜಿ ಉಪಸ್ಥಿತಿ

Facebook Comments Box