ಶ್ರೀ ಆರ್. ಎಸ್. ಅಗರವಾಲ್
ಇಮಾಮಿ ಲಿಮಿಟೆಡ್ ಅಧ್ಯಕ್ಷರು

ಶ್ರೀಗಳ ಜೊತೆಗೆ ಅಗರವಾಲ್ ಮತ್ತು ಗೊಯೆಂಕಾ ದಂಪತಿಗಳು.
ಅಲೌಕಿಕ ಶಕ್ತಿಯೊಂದನ್ನು ವರ್ಣಿಸುವುದಾಗಲೀ, ಆ ಶಕ್ತಿಸ್ವರೂಪವನ್ನು ಶಬ್ದಗಳಲ್ಲಿ ಕಟ್ಟುವುದಾಗಲೀ ಸರಳವಲ್ಲ. ಅವರ ಸಾಮೀಪ್ಯದಲ್ಲಿ ಕುಳಿತು ನಾವೇನನ್ನು ಪಡೆದಿದ್ದೇವೆ ಎನ್ನುವುದು ವರ್ಣನೆಗೆ ಮೀರಿದ ಸಂಗತಿ. ಅವರ ರೋಮ ರೊಮಗಳಲ್ಲಿ ಜ್ಞಾನ, ಶಾಂತಿ, ಶಕ್ತಿ, ಪ್ರಕಾಶಗಳು ತುಂಬಿದೆಯೆಂದರೆ; ಅವರಿಂದ ಆನಂದದ ಪ್ರವಾಹವೇ ಹರಿದು ಬರುತ್ತದೆಯೆಂದರೆ; ಆ ಆನಂದ ನಿಮ್ಮನ್ನು ತಲುಪುತ್ತದೆಯೆಂದರೆ; ನಿಮ್ಮನ್ನು ಅದು ಚರಮಾನಂದ, ಬ್ರಹ್ಮಾನಂದ, ಪರಮಾನಂದದ ಸ್ಥಿತಿಗೆ ಏರಿಸುವಷ್ಟು ಆನಂದಮಯಗೊಳಿಸುತ್ತದೆಯೆಂದರೆ ಆ ವ್ಯಕ್ತಿ ಸಾಧಾರಣ ವ್ಯಕ್ತಿಯಲ್ಲ. ಭಗವಂತನ ಪರಿಪೂರ್ಣ ಅನುಗ್ರಹವನ್ನು ಪಡೆದುಕೊಂಡವರಿಂದ ಮಾತ್ರ ಇದು ಸಾಧ್ಯ. ಅಂತವರು ನಮ್ಮ ಗುರುಗಳು, ಪೂಜ್ಯ ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು.
ಅವರನ್ನು ಸತ್ಯವೆನ್ನಲೇ, ಶಿವವೆನ್ನಲೇ, ಸುಂದರವೆನ್ನಲೇ, ಮೂರನ್ನೂ ಸೇರಿಸಿ ಸತ್ಯಶಿವಸುಂದರವೆನ್ನಲೇ ಏನೆಂದರೂ ಅದು ಅಲ್ಪವೇ ಆಗಿರುತ್ತದೆ. ಯಾಕೆಂದರೆ ಅವರ ಗುಣಗಳು ಗಣನೆಗೆ ನಿಲುಕದಂತವುಗಳು. ಅವರು ಪ್ರೀತಿ ತುಂಬಿದ ನಗುವಿನೊಂದಿಗೆ ಒಳ್ಳೆಯದಾಗಲಿ ಎಂದು ನಿಮ್ಮನ್ನು ಆಶೀರ್ವದಿಸಿದಂತೆಯೇ ನೀವು ಅವರೆಡೆಗೆ ಸೆಳೆದುಕೊಳ್ಳುತ್ತಿರುವಿರೆಂದು ನಿಮಗೆ ಅನಿಸತೊಡಗುತ್ತದೆ. ಅನಿಸಿಕೆ ಮಾತ್ರವಲ್ಲ ನೀವು ಅವರ ಸೆಳೆತಕ್ಕೆ ಒಳಗಾಗುತ್ತೀರಿ ಕೂಡ. ಕಣ್ಣಿನಲ್ಲಿ ಸ್ನೇಹ: ನಗುವಿನಲ್ಲಿ ಪ್ರೀತಿ: ಕೈಗಳಲ್ಲಿ ನೀಡುವ ಇಚ್ಛೆ…. ಹೀಗಿದ್ದಾರೆ ನಮ್ಮ ಗುರುವರ್ಯರು. ಒಂದು ಅದ್ಭುತ ವಾತ್ಸಲ್ಯ: ಒಂದು ತನ್ನತನ, ಒಂದು ಆತ್ಮೀಯತೆ, ಎಲ್ಲರ ಜೊತೆ… ಇವರು ನಮ್ಮ ಗುರುವರ್ಯರು. ಯಾರೇ ಬರಲಿ ಅವರ ಹೆಸರು ಪರಿಚಯ ಅವರ ಮನದಲ್ಲಿರುತ್ತದೆ. ಬಂದವರ ಹೆಸರು ಹೇಳಿ ಒಳ್ಳೆಯದಾಗಲಿ ಎಂದು ಗುರುಗಳು ಹರಸುತ್ತಾರೆ.
ಗುರು ಭಗವಂತನಂತೆಯೇ ವರ್ಣಿಸುವ ವಸ್ತುವಲ್ಲ; ಅನುಭವಿಸುವ ವಸ್ತು, ಗುರುವಿನ ಕುರಿತಾಗಿ ಭಾವ – ಭಕ್ತಿ – ಆಸ್ಥೆ ಇದ್ದವರಿಗೆ ಮಾತ್ರ ಆ ಅನುಭವ ಸಾಧ್ಯ. ಈ ಮಾರ್ಗದಲ್ಲಿ ಬಂದವರನ್ನು ಕಂಡಾಗ ಗುರುಗಳಿಗೆ ಸಂತಸ; ನಿಮ್ಮ ರೋಮ ರೋಮವೂ ಪುಲಕಿತ. ಜೀವನದಲ್ಲಿ ಮೇಲೇರಲು; ಶಾಂತಿ, ಸುಖ, ಆನಂದ ಪಡೆಯಲು ಎಷ್ಟು ಶಕ್ತಿ ಬೇಕೋ ಅದಷ್ಟೂ ನಮ್ಮ ಗುರುವಿನಲ್ಲಿ ನಿಮಗೆ ದೊರೆಯುತ್ತದೆ.
ನಮ್ಮ ದೇಶದಲ್ಲಿ ಬಹುಕಾಲದಿಂದ ಗೋಹತ್ಯೆ ನಡೆಯುತ್ತಿದೆ. ಗುರುಗಳು ಬೇರೆಯದೇ ವಿಧಾನದ ಆಂದೋಲನವನ್ನು ಆರಂಭಿಸಿದರು. ಅವರ ಪ್ರಕಾರ ಗೋವನ್ನು ರಕ್ಷಿಸುವ ಅವಶ್ಯಕತೆಯೇ ಇಲ್ಲ; ಗೋವು ತಾನೇ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಗೋಮಯ ಮತ್ತು ಗೋಮೂತ್ರಗಳನ್ನು ಯೋಗ್ಯ ವಿಧಾನದಲ್ಲಿ ನಾವು ಬಳಸುವುದನ್ನು ಕಲಿಯಬೇಕಷ್ಟೆ! ಅವುಗಳಿಂದ ಔಷಧಗಳನ್ನು ತಯಾರಿಸಬಹುದು; ಅವು ಫರ್ಟಿಲೈಸರ್ ಆಗಿಯೂ ಉಪಯುಕ್ತ; ಪರ್ಯಾಯ ಶಕ್ತಿಮೂಲವಾಗಿಯೂ ಸಹ ಅವುಗಳ ಬಳಕೆ ಸಾಧ್ಯ.. ಹೀಗೆಲ್ಲ ಬಳಸಿಕೊಂಡಾಗ ಗೋವು ನಮಗೆ ಖರ್ಚಿನ ಹಾದಿಯಲ್ಲ, ಆದಾಯದ ಸಾಧನ. ಗುರುಗಳು ಇದರ ಕುರಿತಾದ ತುಂಬಾ ಉತ್ತಮ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಅದರ ಪ್ರಯೋಜನವನ್ನು ಆಸಕ್ತರು ಯಾರೂ ಕೂಡ ಪಡೆದುಕೊಳ್ಳಬಹುದು, ಅದ್ಭುತವನ್ನು ಸಾಧಿಸಬಹುದು.
ಗೋಸಂರಕ್ಷಣೆಗಾಗಿ ಗುರುಗಳು ಗೋಗ್ರಾಸ ಯೋಜನೆಯನ್ನು ಮಾಡಿದ್ದಾರೆ. ಒಂದು ತಿಂಗಳಿನ ಗೋವಿನ ನಿರ್ವಹಣೆಯ ವೆಚ್ಚವಾದ ೧೦೦೦ ರೂಗಳನ್ನು ನೀಡಿ ಗೋಪಾಲನೆಗೆ ತೊಡಗಿಸಿಕೊಳ್ಳುವ ಯೋಜನೆಯದು. ಇದಲ್ಲದೇ ಗೋವಿನ ವಾರ್ಷಿಕ ನಿರ್ವಹಣೆಗೆ ದೇಣಿಗೆ ನೀಡುವ ಗೋಬಂಧು ಯೋಜನೆ ಕೂಡ ಇದೆ. ಈ ಎಲ್ಲ ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸರಣಗೊಳ್ಳುತ್ತಿವೆ.
ವಿದ್ಯಾಬಂಧು ಯೋಜನೆಯ ಮೂಲಕ ಗುರುಗಳು ಶಿಕ್ಷಣಸಂಸ್ಥೆಗಳನ್ನು ಮತ್ತು ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ, ಆಹಾರ, ವಸತಿ ಎಲ್ಲವೂ ಲಭ್ಯ. ಅದೆಲ್ಲವೂ ನಿಶ್ಶುಲ್ಕವಾಗಿ ಲಭ್ಯ. ಇಂತಹ ೨೦-೨೫ ಶಿಕ್ಷಣ ಸಂಸ್ಥೆಗಳನ್ನು ಅವರು ನಡೆಸುತ್ತಿದ್ದಾರೆ. ವಿಶೇಷವೆಂದರೆ ವೈದಿಕ ಪದ್ಧತಿಯ ಶಿಕ್ಷಣ ಕೂಡ ಇಲ್ಲಿ ಲಭ್ಯ.
ದೀನರು ದಲಿತರು, ದುರ್ಬಲರ ಬಗ್ಗೆ ಗುರುಗಳಿಗೆ ವಿಶೇಷ ಅನುಕಂಪ. ಅವರನ್ನು ಗುರುಗಳು ಸಹೋದರ ಭಾವದಿಂದ, ಬಂಧು ಭಾವದಿಂದ ಕಾಣುತ್ತಾರೆ. ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಾರೆ.
ಲಕ್ಷಾಂತರ ಶಿಷ್ಯರಿದ್ದಾರೆ ಗುರುಗಳಿಗೆ. ಅವರೆಲ್ಲರನ್ನು ಸಂಘಟಿಸಬೇಕೆಂದರೆ ಅದೆಷ್ಟು ಸಾಮರ್ಥ್ಯ ಬೇಕು ! ಶಿಷ್ಯ ಪರಿವಾರದ ಸಂಘಟನೆಯನ್ನು ಗುರುಗಳು ವ್ಯವಸ್ಥಿತವಾಗಿ ಮಾಡಿದ್ದಾರೆ. ಪ್ರತಿ ಐದು ಮನೆಗಳಿಗೊಬ್ಬ ಪ್ರತಿನಿಧಿ ॒ಅಂತಹ ಐದು ಜನರ ಮೇಲೆ ಒಬ್ಬ. ಹೀಗೆ ೩೦ ಸಾವಿರ ಮನೆಗಳನ್ನು ಪರಸ್ಪರ ಜೋಡಿಸಿದ್ದಾರೆ. ಪರಿವಾರ ಸಂಘಟನೆಯ ಈ ಪರಿಕಲ್ಪನೆಯನ್ನು ಒಂದೊಮ್ಮೆ ಎಲ್ಲ ಸಾಧು ಸಂತರೂ ಕಾರ್ಯರೂಪಕ್ಕೆ ತಂದರೆ ನಮ್ಮ ದೇಶದಲ್ಲಿ ಶತ್ರುಭಾವವೇ ನಾಶವಾಗಿ ಎಲ್ಲರಲ್ಲಿ ಪರಸ್ಪರ ಮೈತ್ರಿ, ಆತ್ಮೀಯತೆಗಳು ಆರಂಭವಾಗುತ್ತದೆ.
ಕೆಲವೊಮ್ಮೆ ನಾವು ನಮ್ಮ ಕುರಿತಾಗಿಯೂ ಯೋಚಿಸುತ್ತೇವೆ. ಒಬ್ಬ ಉದ್ಯಮಪತಿಯಾಗಿ ನಾನೇನು ಮಾಡಿದ್ದೇನೆ ಎಂದು. ಹೀಗೆ ಯೋಚಿಸುವಾಗ ನನಗೇ ಸಂಕೋಚವಾಗುತ್ತದೆ, ನಾಚಿಕೆಯೆನಿಸುತ್ತದೆ. ನಾವೇನು ಮಾಡುತ್ತಿದ್ದೇವೆ? ನಾವೆಷ್ಟು ಹಿಂದಿದ್ದೇವೆ ಎಂದೆನಿಸುತ್ತದೆ.
ಶಿಷ್ಯ ಪರಿವಾರದ ಮೇಲೆ ಗುರುಗಳ ಪ್ರೀತಿ ಕೂಡ ಅದ್ಭುತವೇ ಸರಿ! ಬೆಳಗಿನಿಂದ ರಾತ್ರಿಯವರೆಗೆ ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ಗೃಹಸ್ಥರವರೆಗೆ ಇವರ ಹಿಂದಿರುತ್ತಾರೆ. ಎಷ್ಟೊಂದು ಸೇವೆ ಮಾಡುತ್ತಾರೆ; ಇದೆಲ್ಲವನ್ನು ನೋಡಿಯೇ ಅರಿಯಬೇಕು, ಹಾಗಿದೆ ಆ ಶಿಷ್ಯರ ಆತ್ಮಸಮರ್ಪಣೆ.
ನಮ್ಮ ಇಡೀ ಕುಟುಂಬದೊಂದಿಗೆ ಗುರುಗಳು ಎರಡುಮೂರು ಬಾರಿ ಸಂವಾದ ನಡೆಸಿದರು. ಅದರ ಪ್ರಭಾವ ಎಷ್ಟಿತ್ತೆಂದರೆ ಮುಂದಿನ ಸಂವಾದಕ್ಕೆ ಕುಳಿತಾಗ ೫-೬ ವರ್ಷದ ಮಕ್ಕಳು ಕೂಡ ಗುರೂಜಿಯವರ ಮಾತನ್ನು ಬರೆದುಕೊಂಡು ಪ್ರಸ್ತುತಪಡಿಸಿದ್ದು ಅದ್ಭುತವಾಗಿತ್ತು. ಹಿರಿಯರಿಗಿಂತಲೂ ಕಿರಿಯರೇ ಹೆಚ್ಚೆಚ್ಚು ಚರ್ಚೆಯಲ್ಲಿ ಭಾಗವಹಿಸಿ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದುದು ಯಾರನ್ನೂ ಆಶ್ಚರ್ಯಚಕಿತರನ್ನಾಗಿಸುವಂತಿತ್ತು. ಹೀಗೆ ಗುರುಗಳು ಮಕ್ಕಳ ಮೇಲೂ ಪ್ರಭಾವ ಬೀರಿದಾರೆ.
ಗುರುಗಳ ಸಾನ್ನಿಧ್ಯದಲ್ಲಿ ನಿಮ್ಮೊಳಗೆ ವಿಶಿಷ್ಟ ಭಾವ ಜಾಗೃತವಾಗುತ್ತದೆ ನನ್ನಲ್ಲಿ ಬಲವಿದೆ, ಆದರಿಂದ ಇನ್ನೊಬ್ಬರಿಗೆ ಹೇಗೆ ಒಳಿತು ನೀಡಲಿ, ನನ್ನಲ್ಲಿ ಜ್ಞಾನವಿದೆ, ಅದನ್ನು ಇನ್ನೊಬ್ಬರಿಗೆ ಹೇಗೆ ಹಂಚಲಿ, ನಾನು ಸಮಾಜಕ್ಕೆ ಒಳಿತನ್ನು ಹೇಗೆ ಮಾಡಲಿ, ದೇಶಕ್ಕೆ ಒಳ್ಳೆಯದನ್ನು ಹೇಗೆ ಮಾಡಲಿ ಎಂಬುದೇ ಆ ಭಾವ.
ಇದೆಲ್ಲದರಿಂದಾಗಿ ನಿಮ್ಮೊಳಗಿಂದ ಎಷ್ಟು ಆತ್ಮ ಸುಖ ಸಿಗಲಾರಂಭಿಸುತ್ತದೆ ಎಂದರೆ ನಿಮ್ಮ ಮನಸ್ಸಿಗೆ ಅನ್ನಿಸತೊಡಗುತ್ತದೆ ಇಂತಹ ಸುಖವನ್ನು ನಾನು ಹಿಂದೆಂದೂ ಅನುಭವಿಸಿರಲಿಲ್ಲ. ಬಹಳ ಹಣವನ್ನು ಗಳಿಸಿದೆ, ಆದರೆ ಇಂತಹ ಸುಖ ಯಾವಾಗಲೂ ಸಿಗಲಿಲ್ಲ ಎಂದು. ಹೀಗೆ ನಿಮಗೆ ವಾಸ್ತವ ಸುಖ ಸಿಗಲಾರಂಭಿಸುತ್ತದೆ.
ನಿಮಗೆ ಈ ಜಗತ್ತಿನೊಂದಿಗೆ ಹೋರಾಡುವ ಶಕ್ತಿ ಇಲ್ಲವಾದಾಗ ಅವರ ಸಾನ್ನಿಧ್ಯ, ಅವರ ಜ್ಞಾನದರ್ಶನ, ಅವರ ಮಾರ್ಗದರ್ಶನ ನಿಮಗೆ ಪುನರ್ಜನ್ಮವನ್ನು ನೀಡುತ್ತದೆ.
ಇತರ ಸಾಧು – ಸಂತರು ಮತ್ತು ರಾಜಕಾರಣಿಗಳಿಗಿಂತ ಇವರು ಹೇಗೆ ಭಿನ್ನ? ನಾನು ಬಹಳ ಸಾಧು – ಸಂತರನ್ನು ನೋಡಿದ್ದೇನೆ, ದೊಡ್ಡ ದೊಡ್ಡವರ ಜೊತೆ ಕೆಲಸ ಮಾಡಿದ್ದೇನೆ. ದೊಡ್ಡ – ದೊಡ್ಡವರಿಗಿಂತ ನಾನು ಇವರನ್ನು ಭಿನ್ನವಾಗಿ ತಿಳಿದುಕೊಂಡಿದ್ದೇನೆ. ಏಕೆಂದರೆ ಗುರುಗಳು ಯಾರೊಬ್ಬರ ಬಗ್ಗೆಯೂ ಏನನ್ನೂ ಹೇಳುವುದಿಲ್ಲ. ಯಾರೊಬ್ಬರನ್ನೂ ಕಡಿಮೆ ಎಂದು ಭಾವಿಸುವುದಿಲ್ಲ. ಇನ್ನೊಬ್ಬರ ಜೊತೆ ತುಲನೆ ಮಾಡಿ ತಾನೇ ಶ್ರೇಷ್ಠ ಎಂದು ಹೇಳುವ ಪ್ರಯತ್ನವನ್ನು ಮಾಡುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ಸಾಧು – ಸಂತರ ಒಂದು ಪ್ರವೃತ್ತಿ ಏನೆಂದರೆ ಇನ್ನೊಬ್ಬರ ಕಾಲೆಳೆಯುವುದು. ತಮ್ಮನ್ನು ತಾವೇ ಪ್ರಚಾರ ಮಾಡಿಕೊಳ್ಳುವುದು. ನನಗೆ ಈ ರೀತಿಯ ಸಂತರೂ ಸಿಕ್ಕಿದ್ದಾರೆ. ಅವರು ಹೇಳುತ್ತಾರೆ. ಅಗರ್ವಾಲ್ಜಿ ನಮ್ಮ ಪೋಸ್ಟರ್ ಕಡಿಮೆ ಇದೆ, ಆದ್ದರಿಂದ ನಮ್ಮ ಪ್ರಚಾರ ಕಡಿಮೆ ಆಗುತ್ತಿದೆ. ಇದನ್ನು ನಾನು ಗುರುಗಳಲ್ಲಿ ಎಂದೂ ನೋಡಿಲ್ಲ. ಹಾಗೆಯೇ ಕೆಲವರು ತಮ್ಮ ದಿನದ ಖರ್ಚನ್ನು ನಿಗದಿಪಡಿಸಿಕೊಂಡು ಬರುತ್ತಾರೆ. ಆದರೆ ಅವರೂ ಗುರುಗಳೇ. ಪ್ರತಿಯೊಬ್ಬ ಗುರುವನ್ನೂ ಈಶ್ವರನು ತನ್ನ ಅಂಶದಿಂದ ಗುರುವನ್ನಾಗಿ ಮಾಡಿದ್ದಾನೆ. ಆದರೆ ಯಾವುದು ಕೆಟ್ಟದ್ದು, ಯಾವುದು ದೋಷ, ಯಾವುದು ಗುಣ ಇವುಗಳನ್ನೆಲ್ಲ ಅರ್ಥೈಸಿಕೊಳ್ಳಲು ನಾನು ಬಹಳ ಸಣ್ಣವನು, ಆದರೆ ನಾನು ಇಷ್ಟು ಹೇಳಬಲ್ಲೆ ನನಗೆ ಗುರುಗಳು ಒಳ್ಳೆಯವರಾಗಿ ಕಂಡಿದ್ದಾರೆ.
ಆರಂಭದಲ್ಲಿ ನಾನು ಗುರುಗಳಲ್ಲಿ ಅಷ್ಟು ಬೇಗನೆ ವಿಶ್ವಾಸವನಿಡಲಿಲ್ಲ. ನನ್ನ ಹೆಂಡತಿ ತುಂಬಾ ಗೌರವಿಸುತ್ತಿದ್ದಳು. ಅವಳು ಮೀರಾಬಾಯಿಯಂತೆ ಭಕ್ತಳಾಗಿದ್ದಳು. ನಿಧಾನವಾಗಿ ನಾನೂ ಅವರ ಬಗ್ಗೆ ಆಕರ್ಷಿತನಾಗಲಾರಂಭಿಸಿದೆ. ನನಗೀಗ ಇಲ್ಲಿ ಬಹಳ ಶಾಂತಿ ಸಿಗುತ್ತಿದೆ; ಸುಖ ಸಿಗುತ್ತಿದೆ ಮತ್ತು ಬಹಳ ಜ್ಞಾನ ಸಿಗುತ್ತಿದೆ. ಹಾಗೆಯೇ ದೊಡ್ಡ ದೊಡ್ಡ ಸಂಕಷ್ಟದಿಂದ ಮುಕ್ತಿ ಸಿಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಾವು ಏನು ಒತ್ತಡಮಯವಾದ ಕೆಲಸದಲ್ಲಿ ಸಿಕ್ಕಿಕೊಂಡಿದ್ದೇವೆ, ಒತ್ತಡಮಯವಾದ ಸಂದರ್ಭಗಳನ್ನು ಸೃಷ್ಟಿಸುವಲ್ಲಿ ಪರಿಣತರಾಗಿದ್ದೇವೆ. ಗುರುಗಳ ಸನ್ನಿಧಿಯಲ್ಲಿ ಅವೆಲ್ಲ ದೂರವಾಗುತ್ತವೆ, ಅನಂತರ ಒತ್ತಡವಿಲ್ಲ.
ಗುರುಗಳ ಮುಖದಲ್ಲಿ ಯಾವ ನಗುವಿದೆಯೋ, ನಿರಂತರ ಹಸನ್ಮುಖ ಅದನ್ನು ನೋಡುತ್ತಿದ್ದರೆ ನೋಡುತ್ತಲೇ ಇರೋಣವೆಂದೆನಿಸುತ್ತದೆ.
ಹರೇರಾಮ ದ ಈ ಬಾರಿಯ ಪ್ರಮುಖರು
ಶ್ರೀರಾಧೇಶ್ಯಾಮ ಅಗರವಾಲ್
ಇಮಾಮಿ ಲಿಮಿಟೆಡ್ ಅಧ್ಯಕ್ಷರು
*ಜನನ- ೧೯೪೫ ಫೆಬ್ರವರಿ ೧೮
*ಪದವಿ MCom, LLB, FCA, FCS
*ಸ್ವಂತ ಕಂಪೆನಿಯನ್ನು ಆರಂಭಿಸುವ ಮೊದಲು ಬಿರ್ಲಾ ಗ್ರೂಪಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರಲ್ಲದೇ ಅಲ್ಪ ಸಮಯದಲ್ಲಿ ಉನ್ನತ ಹುದ್ದೆಗೇರಿ ಅತ್ಯಂತ ಕಿರಿಯ ಪ್ರೆಸಿಡೆಂಟ್ ಎನಿಸಿಕೊಂಡಿದ್ದರು.
*ಅಂತಹ ಉನ್ನತ ಉದ್ಯೋಗವನ್ನು ಬಿಟ್ಟು ೨೦ಸಾವಿರ ರೂಗಳ ಬಂಡವಾಳದಲ್ಲಿ ೧೯೭೪ರಲ್ಲಿ ತಮ್ಮ ಬಾಲ್ಯದ ಗೆಳೆಯ ಶ್ರೀರಾಧೇಶ್ಯಾಮ್ ಗೋಯಂಕಾ ಅವರನ್ನು ಸೇರಿಸಿಕೊಂಡು ಸ್ವಂತ ಉದ್ಯಮವನ್ನು ಆರಂಭಿಸಿದರು.
*ಇಂದು ಇಮಾಮಿ ಗ್ರೂಪಿನ ಮೌಲ್ಯ ೩೦೦೦ ಕೋಟಿ ರೂ.
*ತೀವ್ರತರವಾದ ಜ್ಞಾನದ ಆಕಾಂಕ್ಷೆ ಅವರನ್ನು ಉತ್ತಮ ಪುಸ್ತಕ ಓದುಗರನ್ನಾಗಿಸಿದೆ.
*ಅವರು ಚಿತ್ರಗಳ ಮತ್ತು ಶಿಲ್ಪಗಳ ಅತ್ಯುತ್ತಮ ಸಂಗ್ರಾಹಕ. ವಿಶ್ವದಲ್ಲೇ ಅತ್ಯಪರೂಪವಾದ ಚಿತ್ರ – ಶಿಲ್ಪಗಳು ಅವರ ಸಂಗ್ರಹದಲ್ಲಿದೆ.
*ತಮ್ಮದೇ ದಾಖಲೆಗಳನ್ನು ಮುರಿಯುತ್ತಾ, ತಮಗೆ ತಾವೇ ಮತ್ತೊಂದು ಗುರಿಯನ್ನು ಹಾಕಿಕೊಂಡು ಅದನ್ನು ತಲುಪಲು ಸದಾ ಪ್ರಯತ್ನ ಶೀಲರಾಗಿರುವುದು ಅವರ ಸ್ವಭಾವ.
*ಸಂತರೊಂದಿಗೆ ಒಡನಾಟ; ಅವರೊಂದಿಗೆ ಧರ್ಮ, ಅಧ್ಯಾತ್ಮದ ಕುರಿತು ಚರ್ಚಿಸುವುದು; ಅವರ ಉಪದೇಶಗಳನ್ನು ಆಲಿಸುವುದು ಅವರ ನಿತ್ಯದ ಅಭ್ಯಾಸ.
*ಧರ್ಮ ಕಾರ್ಯಗಳಿಗೆ ಕೊಡುಗೈ ದಾನಿ.
*ಬಡವರಿಗೆ ಸದಾ ಪ್ರೀತಿ ಪೂರ್ವಕ ನೀಡುವುದು ಅವರ ಹೃದಯವಂತಿಕೆ.
*ಸರಳ ಹಾಗೂ ಶಿಸ್ತಿನ ಜೀವನ ಅವರದ್ದು.
August 6, 2010 at 10:13 PM
ಹರಿಃ ಓಂ
ಗುರು ಸನ್ನಿಧಿಯಲ್ಲಿ ದೊರಕುವ ಅನುಭವ ಅಪೂರ್ವ
ಗುರುಗಳು ಸರಳ ವಾಕ್ಯಗಳ ಮೂಲಕ ನೀಡುವ ಸಂದೇಶ ಅತ್ಯಂತ ಪ್ರಿಯವಾದದ್ದು
ಗುರುವಿಗೆ ಗುರುವೇ ಹೋಲಿಕೆ
ಅಬಾಲ-ವೃದ್ಧರಿಗೆ, ಸಮಾಜದ ಎಲ್ಲಾ ವರ್ಗದವರಿಗೆ ಶ್ರೀ ಶ್ರೀ ರಾಘವೇಶ್ವರ ಭಾರಥಿ ಗುರು ಸನ್ನಿಧಿ ನೀಡುವ ಅನುಭವ ಒಂದೇ!!!
ಶ್ರೀಯುತ ರಾಧೇಶ್ಯಾಮರು ಹೊರತಾಗಿಲ್ಲ!!
||ಹರೇ ರಾಮ||
August 6, 2010 at 11:12 PM
ಸರಳ ಸಜ್ಜನಿಕೆಯ ಶ್ರೀಯುತರು ಪರಮಪೂಜ್ಯರ ಪೂರ್ಣ ಕೃಪಾಕಾಟಾಕ್ಷಕ್ಕೆದ ಶ್ರೀರಕ್ಷೆಗೊಳಪಟ್ಟವರು.ನಮಗೆಲ್ಲರಿಗೂ ಆಗುತ್ತ್ತಿರುವ
ಅನುಭ್ಹವಗಳನ್ನ ತಮ್ಮದೇ ಆದ ರೀತಿಯಲ್ಲಿ ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ..ನಿಮಿಗಿದೋ ಕೋಟಿ ನಮನಗಳು.
August 6, 2010 at 11:14 PM
ಬಹಳ ಸೊಗಾಸಾದ ಲೇಖನ.
.
ಭಕ್ತನಾದಾಗಲೆ ದೇವರೇನೆ೦ದು ಅರ್ಥವಾಗುವುದು.
ಶಿಷ್ಯನಾದಾಗಲೆ ಗುರು ಎಲ್ಲೆಲ್ಲು ಕಾಣುವನು.
August 7, 2010 at 4:38 PM
ನಾವು ಸಹ್ರುದಯರು..ಯಾಕೆ೦ದರೆ ನಮಗನಿಸಿದ ಭಾವವೇ ನಿಮಗನಿಸಿದೆ…
ನಿಮ್ಮ ಭಾವನೆ , ಅನಿಸಿಕೆಗಳನ್ನು ಈ ಮೂಲಕ ತೆರೆದಿರಿಸಿದ್ದಕ್ಕೆ ಧನ್ಯವಾದಗಳು..
August 9, 2010 at 2:40 PM
ಎಲ್ಲಿಯ ಕೊಲ್ಕೋತಾ, ಎಲ್ಲಿಯ ಹೊಸನಗರ? ಎಲ್ಲಿಯ ಕೋಟ್ಯಾಧಿಪತಿ, ಎಲ್ಲಿಯ ‘ಹಣವನ್ನು ತೃಣವಾಗಿ ಕಾಣುವ’ ಪರಮ ವಿರಕ್ತ?… ಇಂಥ ಪರಿಸ್ಥಿತಿಯಲ್ಲಿ ಗುರು-ಶಿಷ್ಯ ಸಂಬಂಧ ಏರ್ಪಡುತ್ತದೆಂದರೆ ಇದು ಪವಾಡವಲ್ಲದೇ ಇನ್ನೇನು? ಹಿಂದನೇಕ ಜನ್ಮಗಳಲ್ಲಿ ಅಗರವಾಲರು ನಮ್ಮ ಶ್ರೀಗಳಲ್ಲಿ ಶಿಷ್ಯವೃತ್ತಿ ನಡೆಸಿರಬಹುದು. ಹಾಗಿದ್ದಲ್ಲಿ ಮಾತ್ರ ಇಂಥ ಪವಾಡ ನಡೆಯಲು ಸಾಧ್ಯವಲ್ಲವೇ?
ಈ ಲೇಖನ, ಶ್ರೀಗಳ ಆತ್ಮಶಕ್ತಿಯ ಪರಮ ಹಿರಿತನದ ದರ್ಶನದೊಂದಿಗೆ, ಅಗರವಾಲರ ಅಹಂಭಾವದ ಆತ್ಯಂತಿಕ ಕಿರಿತನವನ್ನೂ ತೋರಿಸುತ್ತದೆ. ಇಂಥವರ ಲೌಕಿಕ ಶ್ರೀಮಂತಿಕೆಗೆ, ದೊಡ್ಡಸ್ತಿಕೆಗೆ ಒಂದು ಅರ್ಥ, ಘನತೆ ಇದೆ. ಇಂಥ ಧರ್ಮಭೀರುಗಳ ಸಂಖ್ಯೆ ಸಾವಿರ ಪಟ್ಟಾಗಲಿ!!!
August 10, 2010 at 4:23 PM
ಹರೆ ರಾಮ
ಅಗರವಾಲ್ ರವರ ಲೇಖನ ….
ಶುಷ್ಕ ಬುದ್ಧಿವ೦ತಿಕೆಯ ಭಾರವಿಲ್ಲ ದೆ, ಸಹಜ ಸೇವಾ ಭಾವ ಹೊ೦ದಿ…ಹೃದ್ಯ ವಾಗಿದೆ.
ಪ್ರಣಾಮಗಳು.
August 18, 2010 at 1:36 PM
The simple and plain expressions from sri Agarwalji is touching ones heart.There is no coating. We can feel that the expressions are from the bottom of the heart, from a self made great entreprenuer.Agarwalji,Goenkaji and all their family members are all very humble and so great. We are happy that they are with us. Hare Raama.
September 23, 2010 at 8:39 PM
Agarwalji and goenkaji are having somuch faith on our ramasharama and our guruji Raghaveshwara swamiji – thank u somuch. even though they staying very far from karnataka they are very close to ramachapur mut in all respect.
thank u agarwaji and goenkaji
November 17, 2010 at 12:34 PM
Extremely frank and core of the heart narrative.Shows that Laxmi and Saraswati both can live together as one person 🙂 We need more such industrialists who care about society and Dharma, for that is the root from where all prosperity comes. May God bless him with billions more in order to serve the needy and deprived,for we can now expect only from such people- not from corrupt politicians and power hungry leaders who have ruined our motherland and each day betray our trust. Hari Om
July 12, 2011 at 1:11 PM
ಹರೇ ರಾಮ ,
ಈ ಲೇಖನದಿಂದ ಅಂದು ಅತ್ಯಂತ ಪ್ರಭಾವಿತಳಾದ ನಾನು ಇಂದು ಮಹದಾನಂದವನ್ನು ಅನುಭವಿಸುತ್ತಿದ್ದೇನೆ. ಅನಂತಾನಂತ ಧನ್ಯವಾದಗಳು…