ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ||
ಕಾಶ್ಮೀರವೆಲ್ಲಿ? ಕರ್ನಾಟಕವೆಲ್ಲಿ? ಆದರೆ ಕಾಶ್ಮೀರಪುರವಾಸಿನಿಯಾದ ಶಾರದಾ ದೇವಿಯನ್ನು ಅಭಿನಮಿಸುವ ಈ ಶ್ಲೋಕವನ್ನು ಬಾಲ್ಯದಲ್ಲಿ ನಾವು ಕರ್ನಾಟಕದ ಯಾವುದೋ ಮೂಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿ ಕುಳಿತು ನಿತ್ಯ ಪಠಿಸುತ್ತಿದ್ದೆವು! ನಾವೆಂದರೇನು, ಪ್ರತಿಯೊಬ್ಬ ಸನಾತನ ಭಾರತೀಯನೂ ಈ ಶ್ಲೋಕವನ್ನು ಪಠಿಸಿದವನೇ! ಕರ್ನಾಟಕವೇನು, ಭಾರತವರ್ಷದ ಉದ್ದಗಲವೆಷ್ಟೋ ಈ ಶ್ಲೋಕದ ವ್ಯಾಪ್ತಿಯಷ್ಟು!
ಹೌದು! ಕಾಶ್ಮೀರದ ಶಾರದೆಯ ವ್ಯಾಪ್ತಿ ಕಾಶ್ಮೀರಮಾತ್ರವಲ್ಲ, ಸಮಸ್ತ ಭಾರತ ದೇಶ!
ಕಾಶ್ಮೀರವಂತೂ ಶಾರದಾಮಯ! ಒಂದು ಕಾಲದಲ್ಲಿ ಕಾಶ್ಮೀರವನ್ನು ಶಾರದಾ ದೇಶವೆಂದೇ ಕರೆಯುತ್ತಿದ್ದರು. ಅಲ್ಲಿಯ ಲಿಪಿಯ ಹೆಸರು ಶಾರದಾ! ಶಾರದಾ ಮಂದಿರವಿರುವ ಗ್ರಾಮಕ್ಕೆ ಆಗಲೂ, ಈಗಲೂ – ಅದು ಪಾಕಿಸ್ತಾನದ ವಶವಾದ ಬಳಿಕವೂ – ಶಾರದಾಗ್ರಾಮವೆಂದೇ ಹೆಸರು! ಸಮ್ಮುಖದಲ್ಲಿರುವ ಪರ್ವತಶಿಖರವೊಂದನ್ನು ಈಗಲೂ ಶಾರದೀ ಎಂದು ಕರೆಯುತ್ತಾರೆ. ಆ ಊರಿನಲ್ಲಿ ಈಗ ಉಳಿದುಕೊಂಡಿರುವುದು ಶತಮಾನಗಳ ಹಿಂದೆ ಮತಪರಿವರ್ತನೆಗೊಳಗಾದ ಮುಸಲ್ಮಾನರು ಮಾತ್ರ. ಆದರೆ ಇಂದಿಗೂ ಅವರು ಆಣೆ ಹಾಕುವುದು, ಪ್ರಮಾಣ ಮಾಡುವುದು ತಾಯಿ ಶಾರದೆಯ ಹೆಸರಿನಲ್ಲಿ!
ಕಾಶ್ಮೀರದ ಮೂಲ ಜನಾಂಗವನ್ನು ಕಾಶ್ಮೀರಿ ಪಂಡಿತರು ಎಂದೇ ಕರೆಯುತ್ತಾರೆ. ಪಾಂಡಿತ್ಯವು ವಿದ್ಯೆಯಿಂದ; ವಿದ್ಯೆಯು ಶಾರದೆಯಿಂದ. ಕಾಶ್ಮೀರಿ ಪಂಡಿತರು ಎಂಬ ಅಭಿಧಾನವು ಆ ಜನಾಂಗಕ್ಕೆ ಶಾರದಾನುಗ್ರಹ!
ನಿಮಗೆ ಗೊತ್ತೇ? ಒಂದು ಕಾಲದಲ್ಲಿ, ಒಂದಿಡೀ ಜನಾಂಗದಲ್ಲಿ ಜ್ಞಾನಿಯಲ್ಲದ ಒಬ್ಬನೇ ಒಬ್ಬ ಮನುಷ್ಯನಿರಲಿಲ್ಲ! ಆದುದರಿಂದಲೇ ಆ ಜನಾಂಗವೇ ಪಂಡಿತರು ಎಂದು ಕರೆಯಲ್ಪಟ್ಟಿತು. ಒಂದು ಕಾಲದಲ್ಲಿ, ಅಖಂಡ ಭರತಖಂಡದಲ್ಲಿ ವಿದ್ಯೆಯ ಪರಮೋಚ್ಚ ಪರೀಕ್ಷೆಯಾಗುತ್ತಿದ್ದುದು ಕಾಶ್ಮೀರದಲ್ಲಿ. ಅಲ್ಲಿ ಸೈ ಎನಿಸಿಕೊಂಡರೆ ಅವನು ನಿಜವಾದ ಪಂಡಿತ! ಅಲ್ಲಿಯವರೆಗೆ ಅವನ ಪಾಂಡಿತ್ಯ ಪೂರ್ಣವಲ್ಲ.
ವಿದ್ಯಾಸಾಮ್ರಾಜ್ಯವಾಗಿತ್ತು ಕಾಶ್ಮೀರ!
ಭಾರತವು ದೇವಸ್ಥಾನವಾದರೆ ಅದರ ಶಿಖರ ಕಾಶ್ಮೀರ. ಕಾಶ್ಮೀರವು ಭಾರತದ ಶಿಖರವಾದರೆ ಅದರ ಕಲಶವು ಶಾರದಾಪೀಠ! ನಾವು-ನೀವಿರುವ ಈ ಕಾಲದ ದೌರ್ಭಾಗ್ಯವೆಂದರೆ ಭಾರತದ ಕಲಶವೆನಿಸಿದ ಶಾರದಾಮಂದಿರಕ್ಕೆ ಇಂದು ಕಲಶವಿರಲಿ, ಛಾವಣಿಯೇ ಇಲ್ಲ! ಸಮಸ್ತ ಭಾರತೀಯರ ಹೃದಯಮಂದಿರದಲ್ಲಿ ವಿದ್ಯಾಮೂರ್ತಿಯಾಗಿ ಪೂಜಿಸಲ್ಪಡುವ ಶಾರದೆಯ ಮೂಲ ಮಂದಿರದಲ್ಲಿ ಮೂರ್ತಿಯೇ ಇಲ್ಲ! ಇನ್ನು ಪೂಜೆಯೆಲ್ಲಿ!? ಮೋಟು ಗೋಡೆಗಳ, ಮುರುಕು ಪೀಠದ, ಭಗ್ನಾವಶೇಷಗಳ ಇಂದಿನ ಶಾರದಾಪೀಠದ ದುರಂತದೃಶ್ಯವನ್ನು ನೋಡಿ, ಕರಗಿ-ಮರುಗದಿದ್ದರೆ ನೀವು ಭಾರತೀಯರೇ ಅಲ್ಲ!
ಕೇವಲ ಮಂದಿರಮಾತ್ರದಲ್ಲಲ್ಲ, ಶಾರದೆಯು ಕಾಶ್ಮೀರದ ಅಸಂಖ್ಯ ಪಂಡಿತರ ಮಸ್ತಿಷ್ಕಗಳಲ್ಲಿ, ಮುಖಗಳಲ್ಲಿ ವಿದ್ಯಾವಾಹಿನಿಯಾಗಿ ವಿರಾಜಿಸುತ್ತಿದ್ದಳು. ಆದರೆ ಇಂದವರ ಸ್ಥಿತಿ ಸಾವಿಗಿಂತ ಘೋರ! ಯಾರಿಗೂ ಕೇಡು ಮಾಡದ ಆ ಜ್ಞಾನ~ಜನಾಂಗದ ಅದೆಷ್ಟೋ ಜನರ ಜೀವಹರಣ ಮಾಡಲಾಯಿತು; ಇನ್ನೆಷ್ಟೋ ಪಂಡಿತರ ಮಡದಿ-ಮಕ್ಕಳ ಮಾನಹರಣ ಮಾಡಲಾಯಿತು; ಕೊನೆಗುಳಿದವರು ತಮ್ಮ ನೆಲೆ-ನೆಲಗಳನ್ನು ಪರಿತ್ಯಜಿಸಿ, ದಿಕ್ಕುದೆಸೆಯಿಲ್ಲದೆ ಓಡುವಂತಾಯಿತು!
ಎಲ್ಲಿಂದಲೋ ಬಂದ ರೋಹಿಂಗ್ಯಾಗಳ ಕುರಿತು ಕಣ್ಣೀರು ಸುರಿಸುವವರಿಗೆ ನಮ್ಮವರೇ ಆದ ಕಾಶ್ಮೀರಿ ಪಂಡಿತರ ದುರವಸ್ಥೆಯನ್ನು ನೋಡಲು ಕಣ್ಣೇ ಇಲ್ಲ!
ಇಂದವರ ಆಸೆ ವರ್ಷಕ್ಕೊಂದು ಬಾರಿ ಶಾರದಾಪೀಠದ ದರ್ಶನ ಮಾಡುವುದು. ದುರಂತದ ದುರಂತವೆಂದರೆ ತಮ್ಮ ಮಾತೃಸ್ಥಾನದ ಭಗ್ನಾವಶೇಷಗಳನ್ನು ನೋಡಲೂ ಅವರಿಗೆ ಅವಕಾಶವಿಲ್ಲ! ಗಡಿನಿಯಂತ್ರಣರೇಖೆ(LOC) ಎಂಬ ತಡೆಗೋಡೆಯು ತಾಯ್ಮಕ್ಕಳನ್ನು ಬೇರ್ಪಡಿಸಿದೆ.
ಗೊತ್ತೇ ನಿಮಗೆ? ಗಡಿಯೀಚೆಯ ಮುಸಲ್ಮಾನರಿಗೆ ಆಚೆಯಿರುವ ತಮ್ಮ ಬಂಧುಗಳನ್ನು ಭೇಟಿ ಮಾಡಲು ವಿಶೇಷಾನುಮತಿಯಿದೆ. ಇಲ್ಲಿಯವರಿಗೆ ಅಲ್ಲಿ ಹೋಗಿ ವ್ಯಾಪಾರ ಮಾಡಲು ವಿಶೇಷಾವಕಾಶವಿದೆ! ಆದರೆ ಹಿಂದುಗಳಾದ ನಮಗೆ, ನಮ್ಮೆಲ್ಲರ ಸೋದರರೇ ಆದ ಕಾಶ್ಮೀರಿ ಪಂಡಿತರಿಗೆ ತಮ್ಮ ತಾಯಿಯ ಬಳಿ ವರ್ಷಕ್ಕೊಮ್ಮೆ ಹೋಗಲೂ ಅವಕಾಶವಿಲ್ಲ! ಕಾಶ್ಮೀರಿ ಪಂಡಿತರ ಬಹುದಿನಗಳ ಈ ಬೇಡಿಕೆಗೆ ನಮ್ಮದೇ ಸರಕಾರಗಳು ಸ್ಪಂದಿಸಿಲ್ಲ!
ಈಗ ಕಾಲ ಬದಲಾಗತೊಡಗಿದೆ. ಅಥವಾ ಕಾಶ್ಮೀರಿ ಪಂಡಿತರ ಎಡೆಬಿಡದ ಹೋರಾಟಗಳು ಕಾಲವನ್ನು ಬದಲಾಯಿಸುತ್ತಿವೆ. ಶಾರದಾಪೀಠದ ಮತ್ತು ಕಾಶ್ಮೀರಿ ಪಂಡಿತರ ದುರವಸ್ಥೆಗೆ ಪ್ರಧಾನ ಕಾರಣವಾದ ಪಾಕಿಸ್ಥಾನವು ಇತ್ತೀಚೆಗೆ ಶಾರದಾದರ್ಶನಕ್ಕೆ ಅವಕಾಶ ನೀಡುವ ಮಾತಾಡುತ್ತಿದೆ! ಮಾತ್ರವಲ್ಲ, ಯಾತ್ರಿಗಳ ಅನುಕೂಲಕ್ಕಾಗಿ, ಶಾರದಾಗ್ರಾಮದ ಪರಿಸರದಲ್ಲಿ ರಸ್ತೆಯೇ ಮೊದಲಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಮಾಡುವುದಾಗಿಯೂ ಪ್ರಕಟಿಸಿದೆ. ಈಗಿನ ಜಮ್ಮು-ಕಾಶ್ಮೀರ ಸರಕಾರವು ಶಾರದಾಯಾತ್ರೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿಯೇ ಘೋಷಿಸಿದೆ.
ಇನ್ನು ಶಾರದಾ ಗ್ರಾಮದ ಮುಸಲ್ಮಾನರು; ಅವರೊಂದು ವಿಸ್ಮಯ!
ಶಾರದಾಪೀಠದ ಪುನರುಜ್ಜೀವನ ಅವರ ತವಕ; ಕಾಶ್ಮೀರೀ ಪಂಡಿತರ ಶಾರದಾಯಾತ್ರೆಗೆ ಅವರು ಪೂರಕ. ನಂಬಲಸಾಧ್ಯವಾದ ಸಂಗತಿಯೆಂದರೆ ಇತ್ತೀಚೆಗೆ ಶಾರದಾಮಂದಿರದಲ್ಲಿ ಬಹುಕಾಲದ ಬಳಿಕ ಪೂಜೆಯೊಂದು ನಡೆಯಿತು! ಆ ಪೂಜೆಯನ್ನು ನೆರವೇರಿಸಿದವರು ಶಾರದಾ ಗ್ರಾಮದ ಮುಸಲ್ಮಾನರು! ಅವರು ಮೊದಲು ಮೂರ್ತಿಯಿದ್ದ ಸ್ಥಳದಲ್ಲಿ ಪುಷ್ಪಗಳಿಂದ ಪೂಜೆ ನಡೆಸಿದ್ದಾರೆ; ಗರ್ಭಗುಡಿಯ ಗೋಡೆಯಲ್ಲಿ ಶಾರದಾ ದೇವಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿದ್ದಾರೆ; ಪುಷ್ಪಪ್ರಸಾದವನ್ನೂ ಮತ್ತು ಶಾರದಾಭೂಮಿಯ ಮಂಗಲಮಯವಾದ ಮಣ್ಣನ್ನೂ ಪಂಡಿತರುಗಳಿಗೆ ಅಂಚೆಯ ಮೂಲಕ ಕಳುಹಿಸಿದ್ದಾರೆ!
ಗಮನಿಸಿ; ಇವೆಲ್ಲವನ್ನೂ ಪರಮಪ್ರೇಮದಿಂದ ನೆರವೇರಿಸಿದವರು ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದಲ್ಲಿ ವಾಸಿಸುವ ಮುಸಲ್ಮಾನರು! ಇಂದು ಅವರ ಬದುಕು ಇಸ್ಲಾಂ ಮತದಲ್ಲಿ; ಅವರಿರುವ ಊರು ಪಾಕಿಸ್ತಾನದ ವಶದಲ್ಲಿ! ಸಾಕಾರ ದೇವರ ಪೂಜೆಯನ್ನು ಅತ್ಯುಗ್ರವಾಗಿ ವಿರೋಧಿಸುವ ಮುಸಲ್ಮಾನರು, ಪಾಕಿಸ್ತಾನದ ಅಂಕೆಗೊಳಪಟ್ಟ ಪ್ರದೇಶದಲ್ಲಿ, ಅದೂ ಉಗ್ರಗಾಮಿಗಳ ಹಾವಳಿಯ ನಡುವೆ ಪುಷ್ಪಗಳಿಂದ ಶಾರದಾಪೀಠಕ್ಕೆ ಪೂಜೆಗೈದು, ಪ್ರಸಾದ ಕಳುಹಿಸಿದರೆಂಬುದನ್ನು ನಂಬಲಾಗದು! ಆದರೆ ಸ್ವತಃ ಕಾಶ್ಮೀರಿ ಪಂಡಿತರ ನಿಯೋಗವೇ ನಮ್ಮನ್ನು ಭೇಟಿಯಾಗಿ, ಪ್ರಸಾದವಿತ್ತು, ಪುಷ್ಪಪೂಜೆಯ ಭಾವಚಿತ್ರವನ್ನೂ, ಮತ್ತು ಪಾಕಿಸ್ತಾನದಿಂದ ಪಂಡಿತರಿಗೆ ಬಂದ, ಅಲ್ಲಿಯ ಮೊಹರಿರುವ ಲಕೋಟೆಯನ್ನೂ ತೋರಿಸಿದಾಗ ನಂಬಲೇಬೇಕಾಯಿತು!
ಕಾಶ್ಮೀರದ ಶಾರದೆಯ ಪ್ರಸಾದ ಪುಷ್ಪಗಳು, ಶಾರದಾ ಗ್ರಾಮದ ಮಣ್ಣು ನಮ್ಮ ಮಠದಲ್ಲಿದೆಯೆಂಬುದು ವಿಖ್ಯಾತ-ವ್ಯಾಖ್ಯಾನಸಿಂಹಾಸನವು ನಮ್ಮಲ್ಲಿದೆಯೆಂಬಷ್ಟೇ ಹೆಮ್ಮೆ ನಮಗೆ!
ಆದರೆ “ಆ ಹೂವುಗಳ ಹಿಂದಿರುವ, ಆ ಮಣ್ಣಿನ ಹಿಂದಿರುವ ಶಾರದಾಗ್ರಾಮವಾಸಿಗಳೆಲ್ಲರೂ ಮೂಲದಲ್ಲಿ ಮತಾಂತರ-ದೇಶಾಂತರಗಳಿಗೆ ಒಳಗಾದ ಕಾಶ್ಮೀರಿ ಪಂಡಿತರೇ!” ಎಂಬುದನ್ನು ನೆನೆದಾಗ ಕರುಳು ಚುರ್ರೆನ್ನದಿರದು!
ಇವೆಲ್ಲವೂ ಸರಿ. ಶಾರದಾಯಾತ್ರೆಗೆ ಈಗ ಬೇಕಿರುವುದು ಭಾರತ ಸರಕಾರದ ಅನುಮತಿ. ಈಗಿರುವ ಅನುಮತಿ-ನಿಯಮದಲ್ಲಿ “ಗಡಿಯಾಚೆಗಿನ ಬಂಧುಗಳನ್ನು ಭೇಟಿಯಾಗಲು, ಅಲ್ಲಿ ವ್ಯಾಪಾರ ಮಾಡಲು” ಎಂಬುದರ ಜೊತೆಗೆ “ಧಾರ್ಮಿಕಯಾತ್ರೆಗೈಯಲು” ಎಂಬ ಒಂದು ಶಬ್ದ ಸೇರಿದರೆ ಪಂಡಿತರಿಗೆ ಶಾರದೆಯ ದ್ವಾರ ತೆರೆಯುವುದು! ಇದೇ ಉದ್ದೇಶಕ್ಕಾಗಿಯೇ “Save Sharda” ಎಂಬ ಹೆಸರಿನಲ್ಲಿ ಸಂಘಟನೆಯೊಂದನ್ನು ಕಟ್ಟಿಕೊಂಡು ಅವರುಗಳು ಅವಿರತವಾದ ಹೋರಾಟವನ್ನು ನಡೆಸುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಈ ಹೋರಾಟದಲ್ಲಿ ಭಾರತೀಯರೆಲ್ಲರೂ ಜೊತೆಯಾಗಬೇಕಿದೆ. ಅವರ ದನಿಗೆ ನಮ್ಮ ದನಿಯನ್ನು, ಅವರ ಶಕ್ತಿಗೆ ನಮ್ಮ ಶಕ್ತಿಯನ್ನು ಸೇರಿಸಬೇಕಿದೆ. ಏಕೆಂದರೆ ಶಾರದಾಕಾರ್ಯವು ಕೇವಲ ಪಂಡಿತರದಲ್ಲ, ನಮ್ಮೆಲ್ಲರದು! ಶಾರದೆ ಕಾಶ್ಮೀರಿ ಪಂಡಿತರುಗಳಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ತಾಯಿ!
ಯಾರಿರಲಿ ಬಿಡಲಿ, ಶಾರದಾಪೀಠದ ಪುನರುತ್ಥಾನಕಾರ್ಯದಲ್ಲಿ ಕಾಶ್ಮೀರಿ ಪಂಡಿತರ ಜೊತೆಗೆ ನಾವಂತೂ ಇದ್ದೇವೆ. ಅದಕ್ಕೆ ಸಹಜ ಕಾರಣ ಭಾರತೀಯತೆ. ವಿಶೇಷ ಕಾರಣ ಶ್ರೀಶಂಕರಾಚಾರ್ಯರ ಪರಂಪರೆಗೆ ನಾವು ಸೇರಿರುವುದು!
ಶಂಕರರಿಗೂ ಶಾರದೆಗೂ ಅವಿನಾಭಾವದ ಸಂಬಂಧ!
ಕಾಶ್ಮೀರಪುರವಾಸಿನಿಯ ಸನ್ನಿಧಿಯಲ್ಲಿಯೇ ಅಲ್ಲವೇ ಆದಿ ಶಂಕರರು ಸರ್ವಜ್ಞಪೀಠವನ್ನೇರಿ ಜಗದ್ಗುರುವೆನಿಸಿಕೊಂಡಿದ್ದು! ದಕ್ಷಿಣ ದೇಶದ ಯಾರೊಬ್ಬ ಪಂಡಿತನೂ ಆವರೆಗೆ ಅರಿವಿನ ಆ ಎತ್ತರವನ್ನು ಏರದ ಕಾರಣ ಶಾರದಾ ಪೀಠದ ದಕ್ಷಿಣದ್ವಾರವೇ ಅಂದಿನವರೆಗೆ ತೆರೆದಿರಲಿಲ್ಲ! ಶಂಕರರು ತಮ್ಮ ವಿದ್ವತ್ತಿನಿಂದ ಕಾಶ್ಮೀರದ ಪಂಡಿತಮಂಡಲವನ್ನು ಮಂತ್ರಮುಗ್ಧಗೊಳಿಸಿ, ದಕ್ಷಿಣದ್ವಾರವನ್ನು ತೆರೆಯಿಸಿ, ಒಳ ಪ್ರವೇಶಿಸಿದರು! ಶಸ್ತ್ರದಿಂದಲ್ಲ, ಶಾಸ್ತ್ರದಿಂದ ಅವರು ಜ್ಞಾನಸಾಮ್ರಾಜ್ಯದ ಆ ಮಹಾರಾಜಧಾನಿಯನ್ನು ಗೆದ್ದು, ಸರ್ವಜ್ಞಪೀಠವನ್ನೇರಿದರು! ಅಷ್ಟು ಮಾತ್ರವಲ್ಲ, ಅಲ್ಲಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿ, ಶಾರದೆಗೆ ನೈಜಪೂಜೆ ಸಲ್ಲಿಸಿದರು!
ಶಂಕರಭಗವತ್ಪಾದರ ಅವಿಚ್ಛಿನ್ನ ಪರಂಪರೆಯ ಇಂದಿನ ಕೊಂಡಿಯಾದ ನಮ್ಮ ಹೃದಯದ ಹಿರಿಯಾಸೆ:
ಸಮಸ್ತ ಕಾಶ್ಮೀರವು ಭಾರತಕ್ಕೆ ಮರಳಬೇಕು.
ಸಮಸ್ತ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳಬೇಕು.
ಸಮಸ್ತ ಕಾಶ್ಮೀರಿಗಳು ಶಾರದೆಯ ಆರಾಧಿಸುವ ತಮ್ಮ ಮೂಲಧರ್ಮಕ್ಕೆ ಮರಳಬೇಕು.
ಶಾರದಾಪೀಠವು ಭಾರತಕ್ಕೆ ಮರಳಬೇಕು; ತನ್ನ ಮೊದಲಿನ ಭವ್ಯತೆಯಲ್ಲಿ ಅರಳಬೇಕು.
ಈಗಿಂದೀಗ ಆಗಬೇಕಿರುವುದು:
ಕಾಶ್ಮೀರಿ ಪಂಡಿತರಿಗೆ ಕಾಶ್ಮೀರಪುರವಾಸಿನಿಯ ಚರಣದರ್ಶನದ ಅವಕಾಶ.
ದೇಶಭಕ್ತರ, ಧರ್ಮನಿಷ್ಠರ ಒಲವಿನ ಬಲದಲ್ಲಿ ಅಧಿಕಾರಕ್ಕೆ ಬಂದಿರುವ ಸರಕಾರವು ಇಂದು ಭಾರತವನ್ನು ಆಳುತ್ತಿದೆ. ಈ ಕಾರ್ಯವು ಇಂದಲ್ಲದಿದ್ದರೆ ಎಂದು?
ಈಗ ನವರಾತ್ರಿ; ವಿಜಯದಶಮಿಯು ಕಣ್ಮುಂದಿದೆ. ದೇಶವೆಲ್ಲವೂ ಶಾರದಾಪೂಜೆಯಲ್ಲಿ ಮಗ್ನವಾಗುವ ಸಮಯವದು. ಶಾರದೆಯ ಮೂಲನೆಲೆಯ ಕುರಿತು ಒಂದಷ್ಟು ಭಕ್ತಿ, ಶಾರದಾಸಂತಾನದ ಕುರಿತು ಒಂದಷ್ಟು ಕಾಳಜಿಗಳು ನಮಗಿಲ್ಲದಿದ್ದರೆ ನಾವು ಮಾಡುವ ಶಾರದಾಪೂಜೆಗೆ ಯಾವ ಅರ್ಥವೂ ಇಲ್ಲ! ಶಾರದಾನುಗ್ರಹಕ್ಕೆ ನಾವು ಯೋಗ್ಯರೂ ಅಲ್ಲ!
ಅಂತ್ಯದಲ್ಲೊಂದು ಅಮೃತದ ಬಿಂದು:
ಭಾರತಿಯು ಭಾರತಕ್ಕೆ ಮರಳಿದಂದು ಭಾರತವು ವಿಶ್ವಗುರುವಾಗುವುದು!
~*~*~
ಚಿತ್ರ~ವಿಶೇಷ:
ಮಾಹಿತಿ & ಚಿತ್ರದ ಆಕರ – ಸೇವ್ ಶಾರದಾ ನಿಯೋಗದ ನೇತೃತ್ವ ವಹಿಸಿರುವ ರವೀಂದ್ರ ಪಂಡಿತರು.
- ಶಾರದಾ ಮಾತೆಗೆ ಸ್ಥಳೀಯರಿಂದ ನಡೆದ ಪೂಜಾ ಕೈಂಕರ್ಯ
- ಕಾಶ್ಮೀರದ ಶಾರದಾ ಮಂದಿರಕ್ಕೆ ಶಾರದಾಗ್ರಾಮವಾಸಿಗಳಿಂದ ಪೂಜೆ
- ಭವ್ಯ ಶಾರದಾಪೀಠದ ಈಗಿನ ಸ್ಥಿತಿ
- ಶಾರದಾಮಾತೆಯ ಗರ್ಭಗೃಹದಲ್ಲಿ ಶಾರದಾಮಾತೆಯ ಚಿತ್ರ – ದೂರದಿಂದ
- ಶಾರದಾಮಾತೆಯ ಗರ್ಭಗೃಹದಲ್ಲಿ ಶಾರದಾಮಾತೆಯ ಚಿತ್ರ – ಸನಿಹದಿಂದ
- ಶಾರದಾ ಗ್ರಾಮದ ಮುಸ್ಲಿಮರಿಂದ ಶಾರದಾ ಪೀಠಕ್ಕೆ ಪುಷ್ಪಪೂಜೆ
- ಗಡಿಯ ದಾಟಿ ಬಂದ ಶಾರದೆಯ ಅನುಗ್ರಹ
- ನೀಗ ರ ಕಲಾಶಾರದೆ
ಇದು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ 41ನೇ ಲೇಖನ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
September 25, 2017 at 7:13 AM
ಕಣ್ಣು ತುಂಬಿ ಬಂತು. ಅವರು ಅನುಭವಿಸಿರಬಹುದಾದ ಕಷ್ಟ ನಷ್ಟಗಳನ್ನ ನೆನೆದರೆ ತುಂಬಾ ದುಃಖ. ಇನ್ನಾದರೂ ಎಲ್ಲವೂ ಸರಿಯಾಗಿ ಇಡೀ ಕಾಶ್ಮೀರ ಭಾರತೀಯವಾಗಲಿ ಎಂಬ ಪ್ರಾರ್ಥನೆ.
September 25, 2017 at 7:58 AM
ಕಾಶ್ಮೀರಿ ಪಂಡಿತರಿಗೆ ಕಾಶ್ಮೀರ ಪುರವಾಸಿನಿಯ ಚರಣದರ್ಶನದ ಅವಕಾಶ ದೊರೆಯಲಿ.ಭಾರತಿಯು ಭಾರತಕ್ಕೆ ಮರಳಲಿ.
ಶ್ರೀ ಸಂಸ್ಥಾನದ ದಿವ್ಯಸಂಕಲ್ಪಕ್ಕೆ ನಮ್ಮೆಲ್ಲರ ಸೇವೆ ಸೇರಲೇಬೇಕು.ರಾಮಸೇತುವೆಗೆ ರಾಮಭಕ್ತ ವಾನರರು ಸೇರಿದಂತೆ ಶಿಷ್ಯಕೋಟಿ ಜೊತೆಗೂಡೋಣ.
September 25, 2017 at 10:45 AM
It was 10 years back first time I red a blog about our Shrada Peeta Eyes were were wet when I came to know the truth. Today again eyes are wet after reading lokalekha. That time eyes were filled with tears was by my helplesness coz I was reading the blog sitting in a Arebian country and feeling sad about our culture being scrapped by greedy rulers. This time eyes are full coz our Guru started an initiation to regain our culture and traditional monuments..
. Even in Wikipedia it is mentioned. Link is , https://en.m.wikipedia.org/wiki/Sharada_Peeth
September 25, 2017 at 10:59 AM
Reality in India…..
https://en.m.wikipedia.org/wiki/Sharada_Peeth
September 25, 2017 at 11:44 AM
Kashmiri panditara novu kanniru tarisitu.. avara novu innadaru koneyagali.. a sharadeyu kashmirada dusthithiyannu dura madali.. hare rama..
September 25, 2017 at 12:10 PM
ಭಾರತೀಪದಭೂಷಿತರಾದ ಜಗದ್ಗುರುಗಳ ಚಿತ್ತಸಂಕಲ್ಪ ಅತ್ತ ನಿಂತಿದೆಯೆಂದಾದರೆ ಭಾರತಿ ಭಾರತಕ್ಕೆ ಬಾರದಿರುವಳೇ ?
September 25, 2017 at 1:12 PM
ಶ್ರೀಗಳ ಲೇಖ ಲೋಕ ಕಾಶ್ಮೀರ ಪುರವಾಸಿನಿ ಶಾರದಾ ಮಾತೆ ಮತ್ತು ಅಲ್ಲಿಯ ಪಂಡಿತರ ನಿಜ ಸ್ಥಿತಿಯ ಬಿಂಬಿಸಿದೆ.ಕಣ್ಣಂಚು ತೇವ ಗೊಂಡಿತು.
ಶ್ರೀ ಸಂಸ್ಥಾನದ ಕಳಕಳಿ ಹಾಗೂ ಅವರು ಇಡುವ ಹೆಜ್ಜೆಗೆ ನಾವು ಗೆಜ್ಜೆಯಾಗೋಣ.
September 25, 2017 at 9:01 PM
ಪ್ರತೀ ಭಾರತೀಯನು ಓದಲೇಬೇಕಾದ #ಲೋಕಲೇಖ ದೇಶಪ್ರೇಮವು ಪ್ರತಿಯೊಬ್ಬನಲ್ಲೂ ಪುಟಿದೇಳಬೇಕಾಗಿದೆ!
ನಮ್ಮತನವನ್ನು ಹಿಂತಿರುಗಿ ಪಡೆಯಬೇಕಾಗಿದೆ; ನಮ್ಮ ತಾಯಿ ಶಾರದೆ ನಮ್ಮ ನೆಲಕ್ಕೆ ಮರಳಬೇಕಾಗಿದೆ. ಈ ಕೈಂಕರ್ಯದಲ್ಲಿ ನಾವು ನಿಮ್ಮ ಜೊತೆಯಿರುವೆವು ಸಂಸ್ಥಾನ…
September 26, 2017 at 7:24 AM
ಜಾಡ್ಯ, ಉದಾಸೀನ, ತಮ್ಮ ದಿನಚರಿಯಲ್ಲಿ ಒಂದು ಚೂರೂ ಬದಲಾವಣೆ ಬಯಸದ ಭಾರತೀಯರು, ತಾಯಿ ಶಾರದೆಯ ವೈಭವವನ್ನು ಮರಳಿ ತರುವರೇ? ಶಾರದೆಯೇ ತನ್ನ ಮಕ್ಕಳಿಗೆ ಬುದ್ಧಿ ಮನಸ್ಸು ದಯಪಾಲಿಸಬೇಕು.
September 27, 2017 at 8:07 PM
ಗಾಢವಾದ ಸಂಕಟ ಕಾಡುತ್ತಿದೆ,…
ನಿಸ್ಸಹಾಯಕರಂತೆ ನೋಡುವುದನ್ನು ಬಿಟ್ಟರೆ ನಮ್ಮ ಕೈಯಿಂದ ಏನೂ ಮಾಡಲಾಗುತ್ತಿಲ್ಲವಲ್ಲ ಸುಧಾರಣೆಗಾಗಿ ಎಂಬ ಖೇದ. 🙁
October 2, 2017 at 8:58 AM
ವಿದ್ಯಾಸ್ಥಾನಕ್ಕೆ ಆಕ್ರಮಣ.. ಅವಿದ್ಯೆ ಅಜ್ಞಾನಕ್ಕೆ ಪೀಠ.. ರೋಗಾಣುಗಳ ಮೂಲವೆಲ್ಲಿ.. ಯಾರೋ ಎಂದರೇನು, ನಾವೇ ಅಲ್ಲವೇನು.
.
ನಿರ್ಗುಣ ಅವಳ ಪ್ರೇಮ, ಸಗುಣ ನಮ್ಮ ಪ್ರೇಮ, ಎರಡಕ್ಕೂ ಸಾಕ್ಷಿ ಆ ಚಿತ್ರ.
.
ರಕ್ಷಿಸಿದ್ದ ಕಲ್ಲುಗಳು ಇನ್ನೂ ಇರುವವು, ಹೃದಯಗಳು ಆ ಕಲ್ಲ ಸೇರಲಿ.
.
ಜ್ಞಾನವನ್ನು ಕಳೆದುಕೊಂಡು ಅನಾಥವಾಗುವ ಮುನ್ನ ಅನಂತನನ್ನು ಸೇರಿಸುವವಳ ಅದ್ವೈತವಾಗಲಿ.
.
ಭಾರತ ಶಾರದವಾಗಲಿ, ಹಣೆಯಲ್ಲಿ ಜ್ಞಾನ ತಿಲಕವಿರಲಿ, ರಕ್ತವಲ್ಲ ರಾಸಾಯನಿಕವಲ್ಲ.
.
ಶಿಖರದಲ್ಲಿ ಬೆಳಕಿದ್ದರೆ, ಹರಿವುದು ಎಲ್ಲೆಡೆ ಜ್ಞಾನಸರಸ್ವತಿನದಿ.
.
ತಾಯೇ ಈ ಮನಸ ಸ್ವೀಕರಿಸು, ಮನಸಿದ್ದಲ್ಲಿ ಮಂದಿರ.
.
ಶ್ರೀ ಗುರುಭ್ಯೋ ನಮಃ
September 18, 2018 at 1:02 PM
ಗುರುಚರಣಗಳಿಗೆ ನಮಸ್ಕಾರ
ಶಾರದಾದೇವಾಲಯದ ಪುನರುತ್ಥಾನದ ಚಳುವಳಿಯ ಈ ಸಂದರ್ಭದಲ್ಲಿ ನಿಮ್ಮ ಈ ಲೇಖನವನ್ನು ಪ್ರೇರಣೆಯಾಗಿ ಪಡೆದು ಬರೆದ ವಿಸ್ತೃತ ಅಧ್ಯಯನ ಲೇಖನವು ಕಸ್ತೂರಿ ಮಾಸಪತ್ರಿಕೆಯ 2018 ನವರಾತ್ರ ( ಆಕ್ಟೊಬರ್ ತಿಂಗಳ ) ಹೊಸ ಸಂಚಿಕೆಯಲ್ಲಿ ಪ್ರಕಟವಾಗುತ್ತದೆ. ತಾವು ಪರಾಂಬರಿಸಿ ಆಶೀರ್ವದಿಸಬೇಕಾಗಿ ಬಿನ್ನಹ.
ಆ ಕುರಿತು ಲೇಖನ ಬರೆದ ರೀತಿಯ ಕುರಿತು ನಾನು ಬರೆದ ಒಂದು ಉಪೋದ್ಘಾತ ಲೇಖನ ಕೆಳಕಂಡಂತಿದೆ.
#ಹೀಗೊಂದುಶಾರದಾಕಥನ
ಈಗ್ಗೆ 4 ವರುಷಗಳ ಹಿಂದೆ #ದೇವಾಲಯಶಿಲ್ಪ ಗಳಲ್ಲಿರುವ #ನಾಟ್ಯಸರಸ್ವತಿಯ ದಿವ್ಯಾಕಾರವು ಸರಸ್ವತೀ ಸಂಬಂಧಿ ಅಧ್ಯಯನಕ್ಕೆ ಪ್ರೇರೇಪಿಸಿದಾಗ ಆ ನಿಟ್ಟಿನಲ್ಲಿ ಹಜೆಯಿಟ್ಟವಳಿಗೆ ಕಂಡದ್ದು ಅಗಾಧ #ಅಧ್ಯಯನರಾಶಿ..ಅವೆಲ್ಲವನ್ನೂ ಓದಿ ಜೀರ್ಣಿಸಿಕೊಳ್ಳುವಷ್ಟು ಸಮಯ, ಅನುಕೂಲ ಈವರೆಗೆ ಒದಗಿಲ್ಲವಾದರೂ ತಾಯಿ ಶಾರದೆಯೇ ಮಾಡಿಸಿಕೊಂಡ ಸೇವೆಯಿದು ಎಂದೇ ನಂಬಿದ್ದೇನೆ.
#ಪಾಕ್ ವಲಯದಲ್ಲಿರುವ ದೂರದ #ಶಾರದಾಪೀಠ ಕ್ಕೆ ತೆರಳುವುದು ಪ್ರಕೃತ ನಮ್ಮಿಂದ ಅಸಾಧ್ಯ..ಆದರೆ ಲೇಖನಾಪೇಕ್ಷೆಯ ಮೂಲಕ ಅಧ್ಯಯನದ ಓಟಕ್ಕೆ ಅಯಾಚಿತವಾಗಿ ನನ್ನನ್ನು ಓಡಿಸಿದವರು ಸನ್ಮಿತ್ರರಾದ ವಿಘ್ನೇಶ್ವರ್ ಭಟ್ಟರು. #ಕಸ್ತೂರಿಮಾಸಪತ್ರಿಕೆ ಯ ನವರಾತ್ರ ಸಂಚಿಕೆಯ ಮುಖಪುಟದ ಲೇಖನಕ್ಕೆ. ಅವರೇ ಆರುತಿಂಗಳಿನಿಂದ ಬರೆಯಬೇಕೆಂದಿದ್ದ ಕಸ್ತೂರಿ ಬಳಗದ ಅಹವಾಲನ್ನು ಕೊನೆಗೆ ನನ್ನ ಹೆಗಲಿಗೇರಿಸಿದಾಗ ಉಳಿದದ್ದು ಕೇವಲ ಒಂದುವಾರದ ಡೆಡ್ಲೈನ್ ಅಷ್ಟೇ. ಅದರೊಳಗೆ ಅಷ್ಟೂ ಅಧ್ಯಯನ ಸಾಗಬೇಕು.. ಅದೂ ನನ್ನ ಬೇರೆ ಕಾರ್ಯದೊತ್ತಡಗಳ ಮಧ್ಯೆ..
ಮೇಲಾಗಿ ನಾನು ಈ ಲೇಖನ ಬರೆಯಲು ಆ ಜಾಗವನ್ನೇ ನೋಡಿಲ್ಲವಲ್ಲ ! #ಕ್ಷೇತ್ರಕಾರ್ಯ ಮಾಡದೇ ಇಂಥಹ ಸ್ಥಳ #ಐತಿಹ್ಯ ಬರೆಯುವುದು ತಪ್ಪು ಎನ್ನುವುದೇ ನನ್ನ ಖಚಿತ ಅಭಿಪ್ರಾಯ. ಹಾಗಂತಲೇ ಬೇರೆ ಯಾರಾದರೂ ಅದೃಷ್ಟವಶಾತ್ ಸ್ಥಳ ನೋಡಿ ಬಂದವರಿದ್ದರೆ ಅವರಿಂದಲೇ ಬರೆಸಿ ಎಂದು ಒಂದಷ್ಟು ಜನರ ಲಿಸ್ಟ್ ಕೊಟ್ಟು ತಪ್ಪಿಸಿಕೊಳ್ಳಲು ನೋಡಿದ್ದೆ. ಆದರೆ ಬಿಲ್ಕುಲ್ ಒಪ್ಪದ ವಿಘ್ನೇಶ್ವರರು ಪಟ್ಟು ಹಿಡಿದು ಕೂತಿದ್ದರೆನಿಸುತ್ತದೆ. ಯಾವ ನೆವಕ್ಕೂ ಜಪ್ಪಯ್ಯ ಅಂದರೂ ಜಗ್ಗಲಿಲ್ಲ ಆಸಾಮಿ. ‘ನಿಮ್ಮಿಂದ ಆಗುತ್ತೆ ಇದು’ ಎಂದು ಓದುವ ಮೈದಾನಕ್ಕೆ ನೂಕಿಬಿಟ್ಟರು. ಕಸ್ತೂರಿ ಬಳಗಕ್ಕೂ ‘ನಿಮಗೆ ಬೇಕಾದಂತ ಲೇಖನ ಬರುತ್ತೆ’ ಅಂತ ವಿಶ್ವಾಸವೂ ಕೊಟ್ಟುಬಿಟ್ಟರಂತೆ !
ಸರಿ,ಈ ಸಲ ಮಾತ್ರ ಒಂದು ಎಕ್ಸೆಪ್ಶನ್..ಹೇಗೋ ಒಂದಷ್ಟು ಈ ಮೊದಲೇ ಬಂದ ಬೇರೆ ರೆಫರೆನ್ಸ್ ಲೇಖನ ನೋಡಿ ಬರೆದರಾಯಿತು ಎಂದು ಗೊಣಗಿಕೊಂಡೇ
ಗೂಗಲ್ ಬ್ರಹ್ಮನಿಗೆ ಮೊರೆಹೋದರೆ…. ಅರೆ…ಕನ್ನಡದಲ್ಲಿ ಈವರೆಗೆ ಯಾವುದೇ #ಪತ್ರಿಕೆ, #ಪುರವಣಿ, #ನಿಯತಕಾಲಿಕೆ ಗಳಲ್ಲಿ ಈ ಕುರಿತು ಪ್ರಕಟವಾದದ್ದಿಲ್ಲ ! ಬ್ಲಾಗಿನಲ್ಲಿ ಶ್ರೀಶ್ರೀ #ರಾಘವೇಶ್ವರ ಮಹಾಸ್ವಾಮಿಗಳವರ ಭಾವನಾತ್ಮಕ ಸಚಿತ್ರ ಲೇಖನವೊಂದನ್ನು ಬಿಟ್ಟರೆ ಕನ್ನಡದಲ್ಲಿ ಮತ್ತೊಂದು ಲೇಖನವಿದ್ದಿದ್ದು ವಿಕಿಪೀಡಿಯಾ ಇಂಗ್ಲಿಷ್ ಬರೆಹದ ನೇರ ಕನ್ನಡಾನುವಾದವೊಂದೇ! ಅಯ್ಯೋ ರಾಮ..
..ಪೀಕಲಾಟಕ್ಕಿಟ್ಟುಕೊಂಡಿತ್ತು. ಇದ್ದಬದ್ದ ವಿವರಗಳನ್ನೆಲ್ಲ ಕೆದಕಿ ಬೆದಕಿದರೆ ಸಿಕ್ಕಿದ್ದು ಒಂದಷ್ಟು ಇಂಗ್ಲಿಷಿನ ಬ್ಲಾಗ್ ಪೋಸ್ಟ್ಗಳು. ಅದಕ್ಕೂ ಸರಿಯಾದ ರೆಫರೆನ್ಸ್ ಇರಲಿಲ್ಲ. ಒಂದಷ್ಟು ಗ್ರಾಮವಾಸಿಗಳಾಗಿದ್ದ #ಕಾಶ್ಮೀರಿಪಂಡಿತರು, ಪ್ರತ್ಯಕ್ಷದರ್ಶಿಗಳ ಸಂವಾದ. ಅವರಿಗೆ ಸೆಡ್ಡು ಹೊಡೆಯುವಂತೆ ಸತ್ಯದ ತಲೆ ಮೇಲೆ ಹತ್ತಿ ಕೂತವರಂತೆ ಮಾತಾಡಿ ಧಾರ್ಮಿಕ ಶ್ರದ್ಧೆಗಳನ್ನು ಕೆಣಕಿ ಕಟ್ಟುಕತೆಗಳಲ್ಲಿ ತಮ್ಮ ಬಾಲ ಬೆಳೆಸಲು ನೋಡಿದರೆ, ಮತ್ತೊಂದಷ್ಟು ಮಂದಿಗೆ ಶ್ರದ್ಧೆ, ನಂಬಿಕೆಗಳೇ ಶಾರದೆಯಾಗಿದ್ದವು. ಕೆಲವರಿಗೆ ಭಾವವೇ ಇಲ್ಲ, ಭಾವಗಳಲ್ಲಿ ಬಲವಿರುವವರಿಗೆ ಇಂದಿನ ಜಗತ್ತು ನಿರೀಕ್ಷಿಸುವ ಅಧ್ಯಯನದ ಬಲವಿಲ್ಲ. ಬೆರಳೆಣಿಕೆಯ ಒಬ್ಬಿಬ್ಬರು ಸಂಶೋಧಕರ ಹೆಸರು ಸಿಕ್ಕಿತಾದರೂ ಅವರ ಕೃತಿಗಳು ಸಿಗಲಿಲ್ಲ. ಪೂರಕ ಪುಸ್ತಕಗಳಲ್ಲಿ ಹುಡುಕಿದರೂ ಅಲ್ಲೊಂದು ಇಲ್ಲೊಂದು ಎಂದು ತರಹೇವಾರಿ ಮಾಹಿತಿಗಳು ದೊರೆತವೇ ವಿನಾ ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಯುವವಿದ್ವಾಂಸ, ಮಿತ್ರ ಅರ್ಜುನ್ ಭಾರಧ್ವಾಜ್ ಒಂದಷ್ಟು ತಮ್ಮಲ್ಲಿರುವ ಪುಸ್ತಕದ ಪುಟ, ಡಿಸ್ಕಶನ್ ಪೇಜ್ ಗಳ ಸೋರ್ಸ್ ಕೊಟ್ಟರೂ ನೂರುಪದವೂ ಮುಂದೆ ಹೋಗಲಿಲ್ಲ ಲೇಖನದ್ದು. ಇರೋಬರೋ ಎಲ್ಲಾ ಮಾಹಿತಿಗಳನ್ನು ಒಟ್ಟುಮಾಡಿ ‘ನೀವೇ ಗತಿ’ ಎಂದವಳೇ ನನ್ನೆಲ್ಲಾ ಅಧ್ಯಯನಕ್ಕೂ ದಿಗ್ಧರ್ಶಕರಾಗಿರುವ #ಶತಾವಧಾನಿಗಣೇಶ ರ ಮಡಿಲಿಗೆ ಹಾಕಿದ್ದಾಯ್ತು… ಅವರೂ ಪರಾಮರ್ಶಿಸಿ ಶಾರದಾಪೀಠದ ಕುರಿತಾಗಿ ಈ ಹೊತ್ತಿಗೆ ಸಿಗುತ್ತಿರುವ ಸೋರ್ಸ್ ಕೋಟ್ ಮಾಡಿದ ವಿವರಗಳಿಗೂ ಆಧಾರಗಳು ದೊರೆಯದಿರುವುದು, ಕೆಲವು ಐತಿಹ್ಯಗಳು ಲುಪ್ತವಾಗಿರುವುದನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಸಿಕ್ಕ ವಿವರಗಳಿಗೆ #ಗ್ರಂಥಾಧಾರ ತಾಳೆಯಾಗುವುದರಲ್ಲೇ ಕಷ್ಟವಿತ್ತು.
ಮೊದಲೇ #ಸಂಶೋಧನೆ ಯ ಜಾಡು ನನ್ನದು.. ಶಬ್ದಾಡಂಬರದ ತೊಗಲು ತೊಡಿಸಿ ಚೆಂದ ಮಾಡುವುದು ಕಷ್ಟವಲ್ಲವಾದರೂ ಜವಾಬ್ದಾರಿ ಬಯಸುವ ಲೇಖನಕ್ಕೆ ಈ ಮಾದರಿಯನ್ನವಲಂಬಿಸುವುದಕ್ಕೆ ನನಗೇ ಮನಸ್ಸಿರಲಿಲ್ಲ. ನಿಜಕ್ಕೂ ಈ ಸಲ ಬೇಸ್ತು ಬಿದ್ದೆ ಎನ್ನಿಸಿತ್ತು.. ಲೇಖನಿ ಮುಂದೋಡುತ್ತಿರಲಿಲ್ಲ..ಸಾವಿರ ಪದಗಳಾದರೂ ಇರಬೇಕೆನ್ನುವ ತಾಕೀತು ಅಣಕಿಸುತ್ತಾ ಆಧಾರ ಹುಡುಕುವ ಕಣ್ಣುಗಳನ್ನು ಮಕಾಡೆ ಮಲಗಿಸುತ್ತಿತ್ತು..
ನಂತರ.. ಅದೊಂದು ಚಮತ್ಕಾರ..ತಾಯಿ ಶಾರದೆಯೇ ಬರೆಸಿದಳೆನ್ನಬೇಕು.. ಆಕೆಯ ಸಂಕಲ್ಪವದು ಎಂದೇ ಅನಿಸುತ್ತದೆ. ಅಲ್ಲಿಯವರೆಗೂ ಸಾಗುತ್ತಿದ್ದ ತಳ್ಳುಗಾಡಿ ಮುಂದೆ ದಿನವೆರಡರೊಳಗೆ ಎಕ್ಸ್ಪ್ರೆಸ್ ಆಗಿ ನನ್ನಿಂದಾದ ಅಷ್ಟೂ ಓದನ್ನು ಮಾಡಿಸಿ ಲೇಖನದ ಕೊನೆಯ ವಾಕ್ಯ ಬರೆಯುವ ಹೊತ್ತಿಗೆ ಡೆಡ್ ಲೈನ್ ಮೀರಿ ಬೆಳಗ್ಗಿನ ಜಾವ 4 ಗಂಟೆಯ ಬ್ರಾಹ್ಮೀ ಮುಹೂರ್ತ..ನೋಡಿದರೆ 2,800ಪದಗಳಾಗಿದ್ದವು. ಮತ್ತೊಂದಷ್ಟು ಸಾವಿರ ಪದಗಳು ಅನುಬಂಧಗಳಾಗಿ ಡ್ರಾಫ್ಟ್ ಪೇಜಿನಲ್ಲಿ ಬೆಚ್ಚಗೆ ಮಲಗಿದ್ದವು. ಬೆಳಗಾಗುವುದರೊಳಗೆ ಕಳಿಸಬೇಕೆನ್ನುವ ಎಚ್ಚರಕ್ಕೆ ಶಬ್ದಶ್ರೀಮಂತಿಕೆ, ವ್ಯಾಕರಣದೋಷ, #ಪದಚ್ಛೇದ, #ಅಲಂಕಾರ, ನನ್ನ ಬರೆವಣಿಗೆ ಪ್ರೀತಿಯ #ಕಾವ್ಯಶೈಲಿ ಯಾವುದನ್ನೂ ಗಮನವಿಟ್ಟು ಗುರುತಿಸಿ ನೋಡುವಷ್ಟು ವ್ಯವಧಾನ ಉಳಿಸಿರಲಿಲ್ಲ. ಸೆಂಡ್ ಬಟನ್ ಒತ್ತಿ ಚಾಪೆ ಬಿಡಿಸಿದ್ದೆ.
ಮಲಗಿದರೆ …ನಿದ್ರೆ ಬಾರದು. ಕನಸು ಮನಸು ತಲೆಯ ತುಂಬೆಲ್ಲಾ ಲೇಖನದ ಶಬ್ದಗಳು ಕುಣಿಯುತ್ತಿತ್ತು. ಅದಾಗಿ ಎರಡು ದಿನ ಮೈಗ್ರೇನ್ ಹೈರಾಣು ಮಾಡಿತ್ತು… ಲೇಖನವನ್ನೂ ಕಣ್ಣೆತ್ತಿ ಪುನಾ ಓದುವುದಕ್ಕೂ ಆಗದಂತೆ..
ಆದರೆ ಆಗಲೇ ಹೇಳಿದೆನಲ್ಲ..ತಾಯಿಯ ಸಂಕಲ್ಪವದು.. ಶಾರದಾಪೀಠದ ಪುನರುತ್ಥಾನ ಚಳುವಳಿ ಇನ್ನೇನು ಆರಂಭವಾಗುವುದರಲ್ಲಿದೆ. ಈ ಹಂತಕ್ಕೆ ನನ್ನಿಂದಾದ ಪುಟ್ಟ ಈ ಅಕ್ಷರಸೇವೆಯನ್ನು ಆಕೆಯೇ ಮಾಡಿಸಿಕೊಂಡಿದ್ದಾಳೆ. ಬರೆವಣಿಗೆ, ಪ್ರಕಟಣೆ ಎಂಬ ನಮ್ಮ ಪ್ರಯತ್ನಗಳೆಲ್ಲವೂ ನಿಮಿತ್ತ ಮಾತ್ರ. ಎಲ್ಲವೂ ಆಕೆಯದೇ ಇಚ್ಛೆ. ನನ್ನ ಅರಿವಿಗೆ ನಿಲುಕಿದ್ದಷ್ಟನ್ನು ಯಾವುದೇ ಆವೇಶಕ್ಕೊಳಗಾಗದೆ ಮುಂದಿಟ್ಟಿದ್ದೇನೆ ಎನ್ನುವುದು ನನ್ನ ಭಾವನೆ. ಇನ್ನು ಅವರವರ ಓದಿಗೆ ಬಿಟ್ಟದ್ದು.
ಮತ್ತೊಮ್ಮೆ ಶಾರದಾಪೀಠದ ಭವ್ಯದಿನಗಳನ್ನು ನೋಡುವಂತಾಗಲಿ ಎಂಬ ಆಶಯದೊಂದಿಗೆ ಈ ಲೇಖನ #ಶರನ್ನವರಾತ್ರ ದ ಈ ಮಾಸಕ್ಕೆ ಕಸ್ತೂರಿ ಪತ್ರಿಕಾಬಳಗದಿಂದ ಶಾರದಾರಾಧಕರಿಗೆ ಕಾಣಿಕೆಯಾಗಿ ನೀಡುತ್ತಿದೆ.. #ಶಾರದಾಚಳುವಳಿ ಗೆಂದು ಹೊರಟಿರುವ ಸಾಧಕರ ಆಶಯದಂತೆ ಅವರು ಪತ್ರಿಕೆಗೆ ವಿನಂತಿಸಿಕೊಳ್ಳುವ ಮೊದಲೇ ಅವರ ಕಣ್ಣ ಮುಂದೆ ಅಚ್ಚರಿಯ ರೂಪದಲ್ಲಿ ಸಂತಸದ ಮುಗುಳ್ನಗು ಬೀರಿಸಿದೆ. ಬೆಂಗಳೂರಿನಿಂದ ಶುರುವಾಗುತ್ತಿರುವ ಈ ಅಭಿಯಾನಕ್ಕೆ ಕಾಣಿಕೆಯ ರೂಪದಲ್ಲಿ ಬಂದಿರುವ ಪತ್ರಿಕೆ ಮತ್ತು ಅದರ ಲೇಖನಭಾಗ್ಯದಿಂದ ಪಾಲುದಾರಳಾಗುವ ಅವಕಾಶ ನನಗೆ. ಇದಕ್ಕಾಗಿ ಕಸ್ತೂರಿ ಬಳಗಕ್ಕೆ, ಲೇಖನದ ಜವಾಬ್ದಾರಿಯನ್ನು ನನಗಿಂತಲೂ ಅಚ್ಚುಕಟ್ಟಾಗಿ ಹೆಗಲೇರಿಸಿಕೊಂಡು ಸಮರ್ಥವಾಗಿ ನಾಡಿಗಿತ್ತ ಶಾಂತಲಾ ಅವರಿಗೆ, ಮತ್ತು ಲೇಖನದ ಅಧ್ಯಯನಕ್ಕೆ ಇಂಬಾಗಿ ನಿಂತ ತಂದೆ ವೇದಮೂರ್ತಿ ಬಿ ಜಿ ನಾರಾಯಣ ಭಟ್, ಪತಿ ವಿಷ್ಣುಪ್ರಸಾದ್, ಪುಟ್ಟ ಕಂದ ಆನಂದವರ್ಧನ ಮತ್ತು ಎಲ್ಲ ಸನ್ಮಿತ್ರರಿಗೂ, ವಿದ್ವಾಂಸರಿಗೂ (ಶತಾವಧಾನಿ ಡಾ ಗಣೇಶ್, ವಿಘ್ನೇಶ್, ಅರ್ಜುನ್) ಓದಲಿರುವ ಓದುಗರಿಗೂ, ಮುಖ್ಯವಾಗಿ ಶಾರದಾಪೀಠದ ಪುನರುಜ್ಜೀವನಕ್ಕೆ ಹಾತೊರೆಯುತ್ತಿರುವ ಶ್ರೀಗುರುಸಾರ್ವಭೌಮರಿಗೂ, ಸಂಶೋಧಕಪ್ರಮುಖರಿಗೂ, ಕಾಶ್ಮೀರಿಪಂಡಿತರಿಗೂ, ಚಳುವಳಿಗಾರರಿಗೂ ಅಭಿಮಾನಪೂರ್ವಕ ಧನ್ಯವಾದ. ????
ಕಲಾಸಂಶೋಧಕರು
editor@noopurabhramari.com
http://www.noopuradancejournal.org
#sharadapeeta #pakoccupiedsharadapeeta #shaktipeeta #sharada #sarvajnapeeta #kashmirsharadapeeta #kashmir