ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ ರಾಮಾಯಣದ ಸಾರಾಂಶ:
ಸೀತೆಯ ಆಗಮನ
ವಿಶ್ವಾಮಿತ್ರರು ಮತ್ತು ಶ್ರೀರಾಮ-ಲಕ್ಷ್ಮಣ ರ ಆಗಮನವನ್ನು ತಿಳಿದ ಜನಕನು ಅವರನ್ನು ಅರಮನೆಗೆ ಕರೆದುಕೊಂಡು ಬರಲು ಹೇಳುತ್ತಾನೆ.
ಅರಮನೆಗೆ ಬಂದಂತಹ ವಿಶ್ವಾಮಿತ್ರರನ್ನು ಹಾಗೂ ರಾಮ-ಲಕ್ಷ್ಮಣರನ್ನು ಸ್ವಾಗತಿಸಿದವನೇ ; ನನ್ನಿಂದ ಏನಾಗಬೇಕು ಅಪ್ಪಣೆಯನ್ನು ನೀಡಿ ಎಂದು ಜನಕನು ವಿಶ್ವಾಮಿತ್ರರಲ್ಲಿ ಕೇಳುತ್ತಾನೆ.
ಆಗ ವಿಶ್ವಾಮಿತ್ರರು ಕೋಸಲ ದೇಶದ ಮಹಾರಾಜನಾದ ದಶರಥನ ಪುತ್ರರಾದ ರಾಮ-ಲಕ್ಷ್ಮಣರಿವರು. ಇಬ್ಬರಿಗೂ ಶಿವಧನುಸ್ಸನ್ನು ನೋಡಬೇಕಂತೆ ತೋರಿಸು ಎಂದರು.
ಜನಕನು ಆಗ ಧನುಸ್ಸನ್ನು ತೋರಿಸುವ ಮೊದಲು ದೇವ ದೇವನ ದಿವ್ಯ-ಧನುಸ್ಸನ್ನು ತನ್ನ ಪೂರ್ವಜರಾದ ದೇವರಾತನಿಗೆ ನೀಡಿದ ಮತ್ತು ಧನುಸ್ಸಿನ ಪೂರ್ವ ವೃತ್ತಾಂತದ ಬಗ್ಗೆ ತಿಳಿಸಿಕೊಡುವನು.
ಹಾಗೇಯೇ ಶಿವಧನುಸ್ಸಿನ ಬಗ್ಗೆ ಇರುವ ಪಣದ ಬಗ್ಗೆಯೂ ತಿಳಿಸುವನು.
ಈ ಶಿವಧನುಸ್ಸಿನ ಬಗೆಗಿರುವ ಪಣವೇನೆಂದರೆ: ಜನಕನು ಯಾಗವನ್ನು ನಡೆಸಲು ಯಜ್ಞ ಭೂಮಿಯನ್ನು ನೇಗಿಲನು ಹಿಡಿದು ಉಳುವ ಸಂದರ್ಭದಲ್ಲಿ “ನೇಗಿಲ ನಾಲಿಗೆಯು ಭೂಮಿಯ ನಾಲಿಗೆ” ಯನು ತೆರೆದಾಗ ಅವನಿಯಿಂದ ದೊರೆತ ಅಯೋನಿಜ ಪುತ್ರಿ ಸೀತೆಯು ದೊರಕುವಳು.
ಹೀಗೆ ಸೀತೆಯು ಜನಕನಿಗೆ ಸಿಕ್ಕುವಳು.ಅದರಂತೆಯೇ ಹುಣ್ಣಿಮೆಯ ಚಂದ್ರನಂತೆ ದಿನೇ ದಿನೇ ಬೆಳೆಯುತ್ತಿದ್ದ ಸೀತೆಯನ್ನು ವರಿಸಲು ಹಲವಾರು ರಾಜಕುಮಾರರು ಬಂದರು. ಆದರೆ ಅವರೆಲ್ಲರೂ ಕೂಡ
” ಸೀತೆಯು ಬೇಕಾದರೆ ಈ ದಿವ್ಯ ಧನುಸ್ಸನ್ನು ಎತ್ತಬೇಕು, ಶಿವಧನುಸ್ಸನ್ನು ಎತ್ತಿ ಹೆದೆಯೇರಿಸಿದವರಿಗೆ ಸೀತೆ ” ಎಂಬ ಜನಕನ ಪಣವನ್ನು ಗೆಲ್ಲಲಾರದೇ ಹೋದರು.
ಒಂದು ವೇಳೆ ಈ ದಿವ್ಯವಾದ ಶಿವಧನುಸ್ಸನ್ನು ಶ್ರೀರಾಮನು ಎತ್ತಿ ಹೆದೆಯೇರಿಸಿದೆನೆಂದಾದರೆ ಸೀತೆಯನು ನಿನಗೆ ಕೊಡುವುದಾಗಿ ಎಂಬುದಾಗಿ ತನ್ನ ಪಣದ ವಿಚಾರವನ್ನು ಸಂಪೂರ್ಣವಾಗಿ ಹೇಳಿದರು.
ನಂತರ ಜನಕನ ಆದೇಶದಂತೆ ಧನುಸ್ಸನ್ನು ರಾಮ-ಲಕ್ಷ್ಮಣರ ಎದುರಿಗೆ ತಂದಿರಿಸಲಾಯಿತು. ಆದಾದ ಬಳಿಕ ವಿಶ್ವಾಮಿತ್ರರು ರಾಮನಿಗೆ ಧನುಸ್ಸನ್ನು ನೋಡಲು ಹೇಳಿದರು.
ಶ್ರೀರಾಮನಾಗ ಪೆಟ್ಟಿಗೆಯನ್ನು ತೆರೆದು ಧನುಸ್ಸನ್ನು ನೋಡಿ; ಬ್ರಹ್ಮರ್ಷಿಗಳೇ ಇದನ್ನು ಮುಟ್ಟಿ ತೂಕ ನೋಡಲೇ?!! ಎಂದು ಕೇಳುವನು. ರಾಜ ಜನಕ ಮತ್ತು ವಿಶ್ವಾಮಿತ್ರರು ಒಪ್ಪಿಗೆಯನ್ನು ಸೂಚಿಸುವರು.
ಅವರೊಪ್ಪಿಗೆಯ ಬಳಿಕ ಶ್ರೀರಾಮನು ನೋಡ ನೋಡುತ್ತಿದ್ದಂತೆಯೇ ಲೀಲಾಜಾಲವಾಗಿ ಬಿಲ್ಲನ್ನು ಎತ್ತಿ;ಎಳೆದು ಹೆದೆಯೇರಿಸಿದ. ಆಗ ಶಿವಧನುಸ್ಸು ಮುರಿದು ಹೋಯಿತು. ಧನುಸ್ಸು ಮುರಿದ ಪರಿಣಾಮವಾಗಿ ಪರ್ವತವೇ ಸೀಳಿಬಂದಂತಹ ಭಯಂಕರ ಶಬ್ಧ;ರಾಮ-ಲಕ್ಷ್ಮಣ, ಜನಕ ಹಾಗೂ ಬ್ರಹ್ಮರ್ಷಿಗಳ ಹೊರತಾಗಿ ಸುತ್ತಲಿರುವವರೆಲ್ಲರೂ ಮೂರ್ಛೆತಪ್ಪಿಹೋದರು.
ಅನಂತರದಲ್ಲಿ ಜನಕನು ‘ಕಂಡೆ ಶ್ರೀರಾಮನ ಪರಾಕ್ರಮವನ್ನು;ದಶರಥನ ಅರಮನೆಗೆ ತೆರಳಿರುವ ಸೀತೆಯು (ಸೊಸೆಯಾಗಿ) ತನ್ನ (ಜನಕನ) ಕುಲವನ್ನು /ವಂಶವನ್ನು ಬೆಳಗುತ್ತಾಳೆ. ನನ್ನ ಪ್ರತಿಜ್ಞೆಯು ನೆರವೇರಿತೆಂದು ಸಂತಸದಿಂದ ನುಡಿದನು.
ಬ್ರಹ್ಮರ್ಷೀ ವಿಶ್ವಾಮಿತ್ರರ ಮಾತಿನಂತೆ ಜನಕನು ತನ್ನ ಶೀಘ್ರ ದೂತರನ್ನು ಕೋಸಲ ದೇಶಕ್ಕೆ ಕಳುಹಿಸಿದನು.
ವಿಷಯವು ತಿಳಿಯುತ್ತಿದ್ದಂತೆಯೇ ಪರಮ ಹರ್ಷಿತನಾದನು.
ಈ ವಿಚಾರವನ್ನು ರಾಜಗುರುಗಳಾದ ವಸಿಷ್ಠರು ಮತ್ತು ಮಂತ್ರಿಗಳ ಮುಂದೆ ದಶರಥನು ಪ್ರಚುರ ಪಡಿಸಿದನು.
ಅವರೆಲ್ಲರ ಒಪ್ಪಿಗೆಯನು ಕೇಳಿದ ದಶರಥನು ಮತ್ತಷ್ಟು ಸಂತೋಷಿತನಾದನು. ನಾಳೆಯೇ ಮಿಥಿಲೆಗೆ ಹೊರಡುವುದಾಗಿ ಹೇಳಿದನು.
ಸಕಲ ಸಂಪತ್ತು-ಸುವಸ್ತುಗಳೊಂದಿಗೆ ನಾಲ್ಕು ದಿನದ ಪ್ರಯಾಣದ ಬಳಿಕ ಮಿಥಿಲೆಯನು ತಲುಪಿದ ದಶರಥನನ್ನು ಜನಕನು ಲಗುಬಗೆಯಲಿ ಸ್ವಾಗತಿಸಿದನು.
ನಂತರ ಮಹರ್ಷಿಗಳ, ಗುರುವರೇಣ್ಯರ ಅನುಮತಿಯ ಮೇರೆಗೆ ಸೀತೆಯ ವಿವಾಹವನ್ನು ನೆರವೇರಿಸಿಕೊಡಬೇಕೆಂದು ಹೇಳುವನು. ಅನಂತರ ಕ್ಷಣದಲ್ಲಿ ದಶರಥನನ್ನು ಕಂಡ ರಾಮ-ಲಕ್ಷ್ಮಣರು ಪಾದಸ್ಪರ್ಶಿಸಿ ಆಶೀರ್ವಾದವನು ಪಡೆದರು. ಇತ್ತ ಸೀತೆಯ ವಿವಾಹದ ತಯಾರಿಯೊಂದಿಗೆ ; ಆ ದಿನ ರಾತ್ರಿಯನ್ನು ಎಲ್ಲರೂ ಮಿಥಿಲೆಯ ಅರಮನೆಯಲ್ಲಿ ಕಳೆದರು.
ಹೀಗೆ ರಾಮ-ಸೀತೆಯ ಕಲ್ಯಾಣೋತ್ಸವಕ್ಕಾಗಿ ಏನೆಲ್ಲಾ ತಯಾರಿಗಳು ನಡೆದವು ಎಂಬುದನ್ನು ಶ್ರೀ ಸಂಸ್ಥಾನದವರ ಮುಂದಿನ ಧಾರಾ-ರಾಮಾಯಣ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:
ಪ್ರವಚನವನ್ನು ನೋಡಲು :
Leave a Reply