ಸೃಷ್ಟಿಯಲ್ಲಿ ಸರಳರೇಖೆಯಾಗಿ ಯಾವುದೂ ಇಲ್ಲ, ಜಡ ಪ್ರಪಂಚ..ಉದಾಹರಣೆಗೆ ಭೂಮಿ, ಸೂರ್ಯ, ನಕ್ಷತ್ರಗಳು,‌ ಮರಗಿಡಗಳು, ಪ್ರಾಣಿ ಪಕ್ಷಿಗಳು, ಕೊನೆಗೆ ಮನುಷ್ಯನೂ ಸರಳ ರೇಖೆಯಲ್ಲ, ಸೀದಾ ಅಲ್ಲ.. ಅಂಕುಡೊಂಕು ಇಲ್ಲದ ಬದುಕೆಲ್ಲಿ, ಕೊರತೆಯಿಲ್ಲದ ಬದುಕೆಲ್ಲಿ. ಇದು ಭೂಮಿಯ ಸಹಜತೆಯೂ ಹೌದು, ವಿಶೇಷವೂ ಹೌದು..

*ಕೊರತೆಯಿಲ್ಲದ ಬದುಕು ಇಲ್ಲವೇ ಇಲ್ಲ, ಇದ್ದರೆ ಅದು ಬದುಕಿನ ಆಚೆಗಿನ ಮುಕ್ತಿ ಮಾತ್ರ ~ ಶ್ರೀಸೂಕ್ತಿ*

ಮುಕ್ತಿಯೇ ಬದುಕಿಗೆ ಬಂದಾಗ ಬದುಕು ಪೂರ್ಣತೆಯಾಗಬಹುದು. ರಾಮಾವತಾರವಾದಾಗ ಅದು ಪೂರ್ಣತೆಯ ಬದುಕು.

ಭವಿಷ್ಯವೇ ಇಲ್ಲ ಎಂಬ ಕೊರಗಿತ್ತು ದಶರಥನಿಗೆ, ಏನಿದ್ದರೇನಂತೆ, ವಂಶೋದ್ಧಾರಕ ಮಗ ಇಲ್ಲ.. ಇಕ್ಷ್ವಾಕು ವಂಶದಲ್ಲಿ ಸೂರ್ಯೋದಯವೇ ಇಲ್ಲದಂತಾಗಿತ್ತು.

ಸಂತಾನಕ್ಕಾಗಿ ನಾನೇಕೆ ಅಶ್ವಮೇಧಯಜ್ಞವನ್ನು ಮಾಡಬಾರದು ಎಂದು ದಶರಥನಿಗೆ ಪ್ರೇರಣೆ ಆಯಿತು, ಮಂತ್ರಿಗಳೂ ಸಮ್ಮತಿಸಿದರು. ಇಕ್ಷ್ವಾಕು ವಂಶದ ಪದ್ಧತಿಯಂತೆ ವಸಿಷ್ಠಾಗುರುಗಳ ಅಪ್ಪಣೆಯನ್ನೂ‌ ಪಡೆದ.

ವಸಿಷ್ಠಾದಿ ಗುರುಗಳೆಲ್ಲರೂ ‘ಸಾಧು ಸಾಧು’ ಎಂದು ಪ್ರತಿಕ್ರಿಯಿಸಿ, “ನಿನ್ನ ಇಷ್ಟ ಈಡೇರುತ್ತದೆ, ನಿನಗೆ ಮಕ್ಕಳಾಗುತ್ತಾರೆ” ಎಂದು ಆಶೀರ್ವದಿಸಿದರು.

*ವಿದ್ಯೆಯ ಜೊತೆ ಸಂಸ್ಕಾರ ಇಲ್ಲದಿದ್ದರೆ ಅದು ಸಮಾಜಕ್ಕೆ ಮಾರಕ ~ ಶ್ರೀಸೂಕ್ತಿ*

ಸುಮಂತ್ರನು ದಶರಥನಿಗೆ ಏಕಾಂತದಲ್ಲಿ ಸನತ್‍ಕುಮಾರು ಯುಗಗಳ ಮೊದಲು ದಶರಥನ ಸಂತಾನದ ಕುರಿತು ಋಷಿಮಧ್ಯದಲ್ಲಿ ಪ್ರಸ್ತಾಪಿಸಿದ್ದನ್ನು ಹೇಳಿದನು.

ವಿಭಾಂಢಕ ಮುನಿಗಳ ಏಕಮಾತ್ರ ಪುತ್ರ ಮಹಾಪುರುಷ ಋಷ್ಯಶೃಂಗರ ಪಾದಾರ್ಪಣೆಯಿಂದ ಅಂಗರಾಜ್ಯದಲ್ಲಿ ಮಳೆಯಾಗುತ್ತದೆ, ದಶರಥನಿಗೆ ಸಂತಾನವಾಗುತ್ತದೆ ಎಂದು ಸನತ್‍ಕುಮಾರರು ಹೇಳಿದ್ದರಂತೆ‌.

ಮೊದಲನೆಯ ದೃಷ್ಟಾಂತವನ್ನು ವಿವರಿಸುತ್ತಾ ಹ ಋಷ್ಯಶೃಂಗರನ್ನು ಕರೆತರುವುದು ಸುಲಭವಲ್ಲ, ಅಂಗರಾಜ್ಯದವ ಋಷ್ಯಶೃಂಗರನ್ನು ಕರೆತರಲು ಆಸ್ಥಾನದ ವಾರಾಂಗನೆಯರು ಹೋಗಿ ಬಂದ ದೃಷ್ಟಾಂತವನ್ನು ಸಂಕ್ಷಿಪ್ತವಾಗಿ ವಿವರಿಸಿದನು.

ವಾರಾಂಗನೆಯರು ಹೋಗಿ ಋಷ್ಯಶೃಂಗರ ಆಶ್ರಮದ ಬಳಿ ಕಾದು, ಅವನು ಹೊರಬಂದ ಬಳಿಕ ಅವರೊಂದಿಗೆ ಪರಿಚಯದ ಮಾತುಗಳನ್ನಾಡಿದರು, ಋಷ್ಯಶೃಂಗನು ಈ ವಾರಾಂಗನೆಯರನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಿ ಅತಿಥಿ ಸತ್ಕಾರ ಮಾಡಿದನು. ಅವರು ಇವನಿಗೆ ಬಗೆಬಗೆಯ ಭಕ್ಷ್ಯಗಳನ್ನು ನೀಡಿದರು, ಗಾಯನ,ನರ್ತನದ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದರು. ಆ ಕೂಡಲೇ ಅವರು ಹೊರಟುಹೋದರು. ಅವರು ಹೋದಮೇಲೆ ಇವನಿಗೆ ದುಃಖವಾಯಿತು, ಮತ್ತೆ ಅವರನ್ನು ಹುಡುಕಿಕೊಂಡು ಅವರಿದ್ದಲ್ಲಿ ಹೋದ, ಅವನು ಅಲ್ಲಿ ಬಂದೊಡನೆ ಅವರೆಲ್ಲ‌ ಇವನನ್ನು ಸುತ್ತುವರೆದು ಸಂತುಷ್ಟಪಡಿಸಿ, ‘ನೀವು ನಮ್ಮ ಆಶ್ರಮಕ್ಕೆ ಬಂದು ಅತಿಥಿಸತ್ಕಾರ ಸ್ವೀಕರಿಸಬೇಕು’ ಎಂದು ಅವನಲ್ಲಿ ಕೇಳುತ್ತಾರೆ. ಅವನು ಒಪ್ಪುತ್ತಾನೆ, ಅವರೊಡನೆ ಹೊರಡುತ್ತಾನೆ. ಹಿಂದೆಯೇ ವಿಭಾಂಡಕರೂ ಹೊರಡುತ್ತಾರೆ.

ಋಷ್ಯಶೃಂಗರು ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಮಳೆ ಬಂದಿತಂತೆ. ಅಂಗರಾಜ್ಯದ ಬರಗಾಲವನ್ನೇ ನೀಗಿಸಿದ ಋಷ್ಯಶೃಂಗ. ವಿಭಾಂಡಕರು ಅಲ್ಲಿಗೆ ತಲುಪುವ ಹೊತ್ತಿಗೆ ಅಂಗರಾಜ್ಯದ ರಾಜನ ಮಗಳು ಶಾಂತೆಯನ್ನು ಋಷ್ಯಶೃಂಗರಿಗೆ ಕೊಟ್ಟು ಮದುವೆ ಮಾಡಲು ತಯಾರಿ ನಡೆದಿತ್ತು. ಕೋಪಗೊಂಡ ವಿಭಾಂಡಕರು ಶಾಂತರಾದರು.

ಇಷ್ಟನ್ನು ಹೇಳಿ ಸುಮಂತ್ರ ಮುಂದುವರೆದು ಮುಂದಿನ ಕಥೆ ಹೇಳಿದ್ದು ನಿಮ್ಮದೇ ಎಂದನು

ಏನು ಕಥೆ: ಇಕ್ಷ್ವಾಕು ವಂಶದಲ್ಲಿ ದಶರಥ ಹುಟ್ಟಿಬರುತ್ತಾನೆ, ಅವನಿಗೆ ಅಂಗರಾಜದ ದೊರೆ ರೋಮಪಾದನ ಸಖ್ಯ ಇರುತ್ತದೆ. ರೋಮಪಾದನ ಆಶ್ರಯದಲ್ಲಿ ದಶರಥ ಋಷ್ಯಶೃಂಗರನ್ನು ಅಯೋಧ್ಯೆಗೆ ಕರೆದುಕೊಂಡು ಬರುತ್ತಾನೆ, ಶಾಂತೆಯ ಪತಿ ಋಷ್ಯಶೃಂಗ ಅಯೋಧ್ಯೆಗೆ ಬಂದಾಗ ದಶರಥನಿಗೆ ಮಕ್ಕಳಾಗುತ್ತಾರೆ. ಯಜ್ಞ ನೆರವೇರಿ ಅಮಿತ ವಿಕ್ರಮಿಗಳಾದ, ವಂಶೋದ್ಧಾರಕಾರದ ನಾಲ್ಕು ಮಕ್ಕಳಾಗುತ್ತಾರೆ ಎಂದು ಸನತಕುಮಾರರು ಹೇಳಿದ್ದಾರೆಂದು ನನಗೆ ತಿಳಿದಿದೆ‌‌. ಹಾಗಾಗಿ ಋಷ್ಯಶೃಂಗರನ್ನು ಕರೆಯಿಸಿ ಅಶ್ವಮೇಧ ಯಜ್ಞವನ್ನು ಮಾಡಿಸಿ. ಎಂದು ಸುಮಂತ್ರ ಹೇಳುತ್ತಾನೆ‌.

ಇದನ್ನು ಕೇಳಿ ಬಹುಸಂತುಷ್ಟನಾದ ದಶರಥ, ವಸಿಷ್ಠರಲ್ಲಿ ಅನುಮತಿ ಕೇಳಿ ಅಂತಃಪುರ ಸಮೇತ ಅಂಗರಾಜ್ಯವನ್ನು ತಲುಪಿದ. ದಶರಥನು ಅಂಗರಾಜನಿಗೆ ಕೇಳಿದ “ನಿನ್ನ ಮಗಳು ಶಾಂತೆಯನ್ನು ಪತಿಯ ಜೊತೆಯಲ್ಲಿ ಅಯೋಧ್ಯೆಗೆ ಕಳುಹಿಸಿಕೊಡುತ್ತೀಯಾ, ಬಹುದೊಡ್ಡ ಕಾರ್ಯ ಅವರು ಮಾಡೋದಿದೆ.”

ಕೂಡಲೇ ಒಪ್ಪಿದ‌ ಅಂಗರಾಜ, “ಶಾಂತೆಯನ್ನು ಕರೆದುಕೊಂಡು ಅಯೋಧ್ಯೆಗೆ ಹೋಗಬೇಕಂತೆ, ನಿಮ್ಮಿಂದ ದೊಡ್ಡ ಕಾರ್ಯ ಆಗಲಿಕ್ಕಿದೆ” ಎಂದು ಅಂಗರಾಜ ಋಷ್ಯಶೃಂಗರಿಗೆ ಸೂಚಿಸುತ್ತಾರೆ.
ಕೂಡಲೇ ಋಷ್ಯಶೃಂಗರು ಒಪ್ಪಿಕೊಂಡು ಹೊರಡುತ್ತಾರೆ. ಋಷ್ಯಶೃಂಗರು ಬರುವಾಗ ನಗರವನ್ನು ಸ್ವಲಂಕೃತ ಮಾಡಬೇಕು ಎಂದು ಅಶ್ವಗಳ ಮೂಲಕ ಪೌರರಿಗೆ ಹೇಳಿ ಕಳುಹಿಸಿದ. ನಗರವನ್ನು ಪ್ರವೇಶಿಸಿದ ನಂತರ ಶಾಂತೆ-ಋಷ್ಯಶೃಂಗರನ್ನು ಅಂತಃಪುರಕ್ಕೆ ಕರೆದೊಯ್ದು ಸತ್ಕರಿಸಿದ. ಅವರಿಗೆ ಸುಖವಾಸ ಕಲ್ಪಿಸಿದ.

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments Box