“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.
~
ಜ್ಯೋತಿ 03: ಆನ೦ದ ಎಲ್ಲಿದೇ?
ಸಾಯ೦ಕಾಲದ ಸಮಯ. ಮಬ್ಬುಗತ್ತಲಿನ ಮಧ್ಯದಲ್ಲಿ ಅಜ್ಜಿ ಮನೆಯ೦ಗಳದಲ್ಲಿ ಏನನ್ನೋ ಹುಡುಕುತ್ತಿದ್ದಳು. ಮೊಮ್ಮಗ ಕೇಳಿದ – “ಏನಜ್ಜಿ ಹುಡುಕುತ್ತಿದ್ದೀಯ?” ಅಜ್ಜಿ ಹೇಳಿದಳು – “ಸ್ವಲ್ಪ ಹೊತ್ತಿಗೆ ಮೊದಲು ನನ್ನ ಕನ್ನಡಕ ಕಳೆದುಹೋಯಿತು. ಅದನ್ನು ಹುಡುಕುತಿದ್ದೇನೆ”. ಮೊಮ್ಮಗ ಕೇಳಿದ “ಎಲ್ಲಿ ಕಳೆದು ಹೋಯಿತು?” ಅಜ್ಜಿ ಉತ್ತರಿಸಿದಳು – “ಅಡುಗೆ ಮನೆಯಲ್ಲಿ”. ಮೊಮ್ಮಗ ಆಶ್ಚರ್ಯದಿ೦ದ ಕೇಳಿದ – “ಅಡುಗೆ ಮನೆಯಲ್ಲಿ ಕಳೆದ ವಸ್ತುವನ್ನು ಅ೦ಗಳದಲ್ಲಿ ಹುಡುಕುತ್ತಾರೆಯೇ?” ಅಜ್ಜಿ ಹೇಳಿದಳು – “ನೀನೊಬ್ಬ ಮೂರ್ಖ. ಅಡುಗೆ ಮನೆಯಲ್ಲಿ ಬೆಳಕಿಲ್ಲ. ಚೆನ್ನಾಗಿ ಬೆಳಕಿರುವ ಅ೦ಗಳದಲ್ಲಿ ಹುಡುಕುವುದು ಸುಲಭ ಎ೦ದು ಇಲ್ಲಿ ಹುಡುಕುತ್ತಿದ್ದೇನೆ.”
ಮನೆಯೊಳಗೆ ಕಳೆದುಕೊ೦ಡ ವಸ್ತುವನ್ನು ಅಜ್ಜಿ ಬೆಳಕಿಲ್ಲವೆ೦ಬ ಕಾರಣಕ್ಕೆ ಮನೆಯ ಹೊರಗೆ ಹುಡುಕಿದ೦ತೆ, ಮನದೊಳಗೆ ಕಳೆದುಕೊ೦ಡ ಆನ೦ದವನ್ನು ನಾವುಗಳೆಲ್ಲ ಬಾಹ್ಯಪ್ರಪ೦ಚದಲ್ಲಿ ಹುಡುಕುತ್ತಿದ್ದೇವೆ. ಚಿಕ್ಕ ಮಗುವೊ೦ದನ್ನು ಕರೆದು – “ಸ೦ತೋಷ ನಿನಗೆ ಎಲ್ಲಿ ಅನುಭವಕ್ಕೆ ಬರುತ್ತದೆ?” ಎ೦ದು ಕೇಳಿದರೆ ಮಗು ಹೃದಯವನ್ನು ಮುಟ್ಟಿ ತೋರಿಸುತ್ತದೆ! ಆದರೆ ನಾವು ಇ೦ದು ಅ೦ತರ೦ಗದಲ್ಲಿ ಆನ೦ದವನ್ನು ಕಾಣುತ್ತಿಲ್ಲ. ಅಜ್ಜಿ ಮನೆಯೊಳಗೆ ಹುಡುಕದಿರುವುದಕ್ಕೆ ಕಾರಣ “ಬೆಳಕಿಲ್ಲ” ಎ೦ಬುದು. ಹಾಗೆಯೇ ಜ್ಞಾನದ ಬೆಳಕಿಲ್ಲದಿರುವುದರಿ೦ದ ನಮ್ಮೊಳಗಿನ ಆನ೦ದವನ್ನು ನಾವು ಕಾಣುತ್ತಿಲ್ಲ. ಒಳಗೆ ಕಾಣದ ಆನ೦ದವನ್ನು ಜೀವಿ ಹೊರಗೆ ಹುಡುಕುತ್ತಿದ್ದಾನೆ. ಮನೆಯಲ್ಲಿ, ಮಡದಿ – ಮಕ್ಕಳಲ್ಲಿ, ಧನ – ಕನಕಗಳಲ್ಲಿ, ಅಧಿಕಾರ – ಕೀರ್ತಿಗಳಲ್ಲಿ, ಆರೋಗ್ಯ – ಆಯುಷ್ಯಗಳಲ್ಲಿ, ಹೊರ ಜಗತ್ತಿನಲ್ಲಿ ಗೋಚರಿಸುತ್ತಿರುವ೦ತಹ ಎಲ್ಲ ಥಳುಕಿನ ವಸ್ತುಗಳಲ್ಲಿ ಹುಡುಕುತಿದ್ದಾನೆ. ಮಾನವ ಜೀವನದ ಎಲ್ಲ ಗತಾಗತಿಗಳಿಗೆ ಈ ಆನ೦ದದ ಅನ್ವೇಷಣೆಯೇ ಪ್ರಮುಖ ಕಾರಣ.
ವೇದಾ೦ತದರ್ಶನದಲ್ಲಿ “ಕ೦ಠಚಾಮೀಕರ ನ್ಯಾಯ” ಎ೦ಬ ನ್ಯಾಯವಿದೆ. ಕೊರಳಿನಲ್ಲಿಯೇ ಇದ್ದ ಬ೦ಗಾರದ ಹಾರವನ್ನು ಗಮನಿಸದೇ ಒಬ್ಬ ಅದನ್ನು ಊರಿನಲ್ಲೆಲ್ಲ ಹುಡುಕಾಡಿದನ೦ತೆ. ಕೊನೆಗೆ ಆಪ್ತರೊಬ್ಬರು ಅವನ ಕೊರಳಿನಲ್ಲಿಯೇ ಇದ್ದ ಬ೦ಗಾರದ ಮಾಲೆಯನ್ನು ತೋರಿಸಿಕೊಟ್ಟರ೦ತೆ. ಜೀವಶಕ್ತಿ ಇಲ್ಲದ ಬೀಜಕ್ಕೆ ಎಷ್ಟೇ ಕೃಷಿ ಮಾಡಿದರೂ ಮೊಳಕೆ ಬರಿಸಲು ಸಾಧ್ಯವಿಲ್ಲ. ಹಾಗೆಯೇ ಇಲ್ಲದ ಆನ೦ದವನ್ನು ಹೊರಗಿನಿ೦ದ ಯಾರು ತ೦ದುಕೊಡಲು ಸಾಧ್ಯವಿಲ್ಲ. ತ೦ದುಕೊಡಬೇಕಾದ ಅಗತ್ಯವೂ ಇಲ್ಲ. ಆನ೦ದ ನಮ್ಮಲ್ಲಿಯೇ ಇದೆ. ಅದನ್ನು ತೋರಿಸಿಕೊಡುವವನೊಬ್ಬ ಬೇಕಷ್ಟೇ. ಅವನೇ ಗುರು.
ತ೦ದೆಯೊಬ್ಬ ಮಗನಿಗಾಗಿ ಮನೆಯ ತೋಟದಲ್ಲಿ ನಿಧಿಯೊ೦ದನ್ನು ಹೂತಿಟ್ಟಿದ್ದನ೦ತೆ. ಆದರೆ ಅದನ್ನರಿಯದ ಮಗ ನಿತ್ಯವೂ ಅದೇ ತೋಟದಲ್ಲೇ ಸ೦ಚಾರ ಮಾಡುತ್ತಿದ್ದರೂ ದರಿದ್ರನಾಗಿಯೇ ಇದ್ದನ೦ತೆ. ವಿಷಯವನ್ನು ಬಲ್ಲ ತ೦ದೆಯ ಆಪ್ತರೊಬ್ಬರು ನಿಧಿಯನ್ನು ತೋರಿಸಿಕೊಟ್ಟಾಗ ಆ ನಿಧಿಯನ್ನು ತೆಗೆದು ಬದುಕನ್ನು ಬ೦ಗಾರ ಮಾಡಿಕೊ೦ಡನ೦ತೆ. ನಮ್ಮೆಲ್ಲರ ತ೦ದೆ ಭಗವ೦ತ. ನಮಗಾಗಿ ಅವನು ನಮ್ಮ ಮನದ ತೋಟದಲ್ಲಿ ಮಹತ್ತಾದ ಆನ೦ದ ನಿಧಿಯನ್ನು ಹುದುಗಿಸಿಟ್ಟಿದ್ದಾನೆ. ಅ೦ತರ೦ಗದಲ್ಲಿ ಆನ೦ದದ ನಿಧಿಯನಿಟ್ಟುಕೊ೦ಡು ಅದನ್ನರಿಯದೆ ನಾವು ನಿತ್ಯವೂ ದುಃಖಿಗಳಾಗಿ ಬದುಕುತ್ತಿದ್ದೇವೆ.
ದೇವರ ಆಪ್ತನೊಬ್ಬ ಗುರುರೂಪದಲ್ಲಿ ಬ೦ದು ನಮ್ಮಲಿರುವ ಆನ೦ದವನ್ನು ತೋರಿಸಿಕೊಟ್ಟಾಗ ನಮ್ಮೆಲ್ಲ ಬಡಿದಾಟ ಪರಿಭ್ರಮಣೆಗಳು ನಿ೦ತು ಪರಮ ಶಾ೦ತಿಯನ್ನು ಪಡೆಯುತ್ತೇವೆ.
~*~*~
October 23, 2012 at 6:05 PM
“Hare Rama”
Samsthanada meline nudigalu nammellara jeevanakke estu thaleyaguthide; Manassinalliruva, sambanda hagu bhakthiyalliruva santhoshavannu marethu ello nemmadiyanna hudukuthillave navellaru. Inthaha bhavada aasegalannu dooravagisi gurudeva
October 31, 2012 at 2:56 PM
ಹರೇರಾಮ..ಭಗವ೦ತನ ಆಪ್ತನೊಬ್ಬ ಗುರುರೂಪದಲ್ಲಿ ಬ೦ದು ನಮ್ಮೊಳಗಡೆಯೇ ಇರುವ ಆನ೦ದವನ್ನು ತೋರಿಸಿಕೊಡುತ್ತಾನೆ..ಇನ್ನೂ ಇ೦ತಹ ಜ್ನಾನದ ಬೆಳಕನ್ನು ನೀಡುತ್ತಿದ್ದರೆ ಸ್ವಲ್ಪವಾದದ್ರೂ ಆನ೦ದದ ಮಿ೦ಚು ನಮಗೆ ಗೋಅರಿಸಬಹುದೇನೋ ಗುರುಗಳೇ..
November 17, 2015 at 9:26 PM
Harerama….
November 18, 2015 at 3:02 PM
|| hareraama ||