ನಚಿಕೇತ ಮತ್ತು ಯಮರಾಜನ ಭೇಟಿ. ಭೂಮಿಯ ಚಿಕ್ಕ ಬಾಲಕ ಮತ್ತು ಯಮಲೋಕದ ಪ್ರಭು. ಪರ್ವತ ಮತ್ತು ಪರಮಾಣುಗಳ ಭೇಟಿಯಾದಂತಿದೆ. ಅಂತಹದ್ದೊಂದು ಭೇಟಿ. ಲೋಕಕ್ಕೆಲ್ಲಾ ಪ್ರಾಯಶ್ಚಿತ್ತವನ್ನು ವಿಧಿಸುವ, ಲೋಕದ ಜೀವಿಗಳೆಲ್ಲಾ ತಪ್ಪು ಮಾಡಿದಾಗ ದಂಡನೆ ವಿಧಿಸುವ ಯಮ, ಆತನೇ ಪ್ರಾಯಶ್ಚಿತ ಮಾಡಿಕೊಳ್ಳುವಂತಹ ಪರಿಸ್ಥಿತಿಯಲ್ಲಿದ್ದಾನೆ. ನಚಿಕೇತನಿಗೆ ಆತಿಥ್ಯ ಮಾಡದ ಕಾರಣ, ಆತನು ಮೂರು ದಿವಸ ಉಪವಾಸವಿದ್ದ ಕಾರಣ ಬಂದ ದೋಷವನ್ನು ನಿವಾರಣೆ ಮಾಡಿಕೊಳ್ಳುವ ಸಲುವಾಗಿ ಮೂರು ವರಗಳನ್ನು ನಚಿಕೇತನಿಗೆ ಕೊಟ್ಟಿದ್ದಾನೆ. ಎರಡನೆಯ ವರವನ್ನು ಕೇಳುವಾಗ ಇನ್ನೊಂದು ಹೆಚ್ಚುವರಿಯ ವರವನ್ನೂ ಕೊಟ್ಟಿದ್ದಾನೆ. ಏನೆಂದರೆ “ಯಾವ ಅಗ್ನಿ ಜೀವವನ್ನು ದೇವಲೋಕಕ್ಕೆ ಒಯ್ಯುತ್ತದೆಯೋ ಅಂತಹ ಅಗ್ನಿವಿದ್ಯೆ ನಿನ್ನ ಹೆಸರಿನಿಂದಲೇ, ನಾಚಿಕೇತಾಗ್ನಿ ಎಂದೇ ಪ್ರಸಿದ್ಧವಾಗಲಿ” ಎಂಬ ವರವನ್ನು ಕೊಟ್ಟು ಉಡುಗೊರೆಯನ್ನೂ ಕೊಟ್ಟಿದ್ದಾನೆ. ಸೃಂಕಾ ಎಂಬ ರತ್ನಮಾಲೆಯನ್ನೂ ಸಹ ಕೊಟ್ಟಿದ್ದಾನೆ.(ರತ್ನಮಾಲೆ ಎಂದು ಆಚಾರ್ಯ ಶಂಕರರು ವ್ಯಾಖ್ಯಾನಿಸಿದ್ದಾರೆ. ಸೃಂಕಾ ಎಂಬ ಶಬ್ಧ ಸಾಮಾನ್ಯ ಸಂಸ್ಕೃತದಲ್ಲಿ ಬಳಕೆಯಲ್ಲಿಲ್ಲ.)
ಮೂರನೆಯ ವರ. ಅದೊಂದು ಪ್ರಶ್ನೆ. ಆತ ಕೇಳಿದ ಜ್ಞಾನವೆಂದರೆ “ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ ಅಸ್ತಿ ಇತ್ಯೇಕೇ ನಾಯಮಸ್ತೀತಿ ಚೈಕೇ” ಇದು ಪ್ರಶ್ನೆಯ ತಿರುಳು. ಸತ್ತಮೇಲೂ ಇದ್ದಾನೆ, ಆನಂತರವೂ ಜೀವನ ಉಂಟು ಎಂದು ಕೆಲವರು, ಇಲ್ಲ ಎಂದು ಕೆಲವರು. ನಿಜ ಏನು ಎಂಬುದೇ ಪ್ರಶ್ನೆ.
ಅದಕ್ಕೆ ಯಮ ಬೇರೆ ಏನಾದರೂ ಕೇಳು, ಈ ವರವನ್ನು ಕೊಡುವುದು ಕಷ್ಟ ಎಂದು ಹೇಳಿದ. ಎಂತಹ ದುರ್ಲಭವಾದ ವರವನ್ನು ಆತ ಕೊಟ್ಟಿದ್ದಾನೆ. ಯಮಲೋಕಕ್ಕೆ ಹೋದವರು ಮತ್ತೆ ಮರಳಿ ಮನೆಗೆ ಹೋಗುವಂತಹ ವರವನ್ನು ಕೊಟ್ಟಿದ್ದಾನೆ. ಭೂಲೋಕದವರು ಯಮಲೋಕವನ್ನು ಮೀರಿ ಸ್ವರ್ಗಲೋಕಕ್ಕೆ ಹೋಗುವಂತಹ ವಿದ್ಯೆಯನ್ನು ಕೊಟ್ಟಿದ್ದಾನೆ. ಆದರೆ ಈ ಒಂದು ಜಿಜ್ಞಾಸೆಯನ್ನು ಕೇಳಿದಾಗ ಮಾತ್ರ ಬೇರೆ ಏನಾದರೂ ಕೇಳು ಎಂದು ಹೇಳಿದ. ಹೆಣ್ಣು, ಹೊನ್ನು, ಮಣ್ಣು ಈ ಮೂರೂ ಆಸೆಯನ್ನು ತೋರಿಸಿದ್ದಾನೆ. ದಿವ್ಯಸ್ತ್ರೀಯರನ್ನು ತೋರಿಸಿ ಅವರಿಂದ ಸೇವೆಯನ್ನು ಮಾಡಿಸಿಕೊ ಇಂತಹವರು ಭೂಲೋಕದಲ್ಲಿ ನಿನಗೆ ಸಿಗುವುದಿಲ್ಲ. ಹೊನ್ನು – ಎಷ್ಟು ಬೇಕಾದರೂ ಚಿನ್ನ, ಸಂಪತ್ತನ್ನು ಕೇಳು. ಮಣ್ಣು – ವಿಶಾಲವಾದ ಭೂಮಿಯನ್ನು ವರವಾಗಿ ಪಡೆದುಕೊ. ದೊಡ್ಡ ಜಮೀನ್ದಾರನಾಗು, ಭೂಮಾಲೀಕನಾಗು. ಎಷ್ಟು ಬೇಕಾದರೂ ಆಯಸ್ಸನ್ನು ಕೇಳು ಎನ್ನುತ್ತಾನೆ. ಮತ್ತೇನಾದರೂ ಕೇಳು ಆದರೆ ಈ ಪ್ರಶ್ನೆಯನ್ನು ಮಾತ್ರ ಕೇಳಬೇಡ ಎನ್ನುತ್ತಾನೆ. ಇದಕ್ಕೆ ಪ್ರಲೋಭನೆ ಎಂದು ಹೆಸರು.
ಸೀತೆಯ ಮುಂದೂ ಸಹ ಇಂತಹ ಪ್ರಲೋಭನೆಗಳಿದ್ದವು. ರಾವಣ ಸೀತೆಯ ಮುಂದೆ ಅನೇಕ ಪ್ರಲೋಭನೆಗಳನ್ನು ಇರಿಸಿದ್ದ. ನೀನು ಏಕೆ ಹೀಗಿದ್ದೀಯ? “ಏಕವೇಣಿ” ಎಂದರೆ ಜಡೆಯನ್ನು ಸಂಸ್ಕರಿಸದೆ ಇರುವುದು. ಸೀತೆಯ ಅಪಹರಣದ ನಂತರ ರಾಮನ ಭೇಟಿಯಾಗುವವರೆಗೆ ಆಕೆ ಜಡೆಗೆ ಸಂಸ್ಕಾರವನ್ನೇ ಕೊಟ್ಟಿರುವುದಿಲ್ಲ. ನೆಲದಲ್ಲಿಯೇ ಮಲಗುತ್ತಿರುತ್ತಾಳೆ. ಯಾವಾಗಲೂ ಮೌನ, ಧ್ಯಾನ, ಚಿಂತೆ. ಬಟ್ಟೆಯೆಲ್ಲಾ ಮಲಿನವಾಗಿದೆ. ಅವನು ಕೊಟ್ಟ ಯಾವ ಬಟ್ಟೆಯನ್ನೂ ಸಹ ಆಕೆ ಉಟ್ಟಿರುವುದಿಲ್ಲ. ಒಂದು ವರ್ಷವೂ ಸಹ ಹಾಗೆಯೇ ಇತ್ತು. ಉಪವಾಸ ಮಾಡುತ್ತಿದ್ದಳು. ಆದ್ದರಿಂದ ರಾವಣನು ವಿವಿಧ ಆಮಿಷಗಳನ್ನು ತೋರುತ್ತಾನೆ. ವಿಚಿತ್ರಾಣಿಚ ಮಾಲ್ಯಾನಿ ವಿಚಿತ್ರವಾದ ಮಾಲೆಗಳನ್ನು ಕೊಡುತ್ತೇನೆ ಅದನ್ನು ಧರಿಸಿಕೊ ಎನ್ನುತ್ತಾನೆ. ಚಂದನಾನಿ ಅಗರೂಣಿಚ ಪರಿಮಳ ದ್ರವ್ಯಗಳನ್ನು ಕೊಡುತ್ತೇನೆ. ವಿವಿಧಾನಿಚ ವಾಸಾಂಸಿ ಬಗೆಬಗೆಯ ರೇಷ್ಮೆ, ಪೀತಾಂಬರ, ದುಕೂಲ ಇಂತಹ ಅನರ್ಘ್ಯವಾದ ವಸ್ತ್ರಗಳನ್ನು ಕೊಡುತ್ತೇನೆ. ದಿವ್ಯವಾದ ಆಭರಣಗಳನ್ನು ಕೊಡುತ್ತೇನೆ ಧರಿಸಿಕೋ. ಮಹಾರ್ಹಾಣಿಚ ಪಾನಾನಿ ದುರ್ಲಭವಾದ ಪಾನೀಯಗಳು, ಪೇಯಗಳು ಹಾಗೆಯೇ ಶಯಾನಾನಿ ಆಸನಾನಿ ಚ ದಂತದ ಮಂಚ, ಸ್ಫಟಿಕದ ಮಂಚ, ಅನೇಕ ಮಂಚಗಳು ಹಾಗೆಯೇ ರತ್ನಮಯವಾದ ಕುಳಿತುಕೊಳ್ಳುವ ಆಸನಗಳು, ಗೀತ, ನೃತ್ಯ, ವಾದ್ಯ ಇವೆಲ್ಲವನ್ನೂ ನಾನು ನಿನಗೆ ಒದಗಿಸಿ ಕೊಡುತ್ತೇನೆ. ನೀನು ನನ್ನನ್ನು ಪತಿಯಾಗಿ ಒಪ್ಪಿಕೊಳ್ಳಬೇಕು ಎನ್ನುತ್ತಾನೆ. ಹಾಗೆಯೇ ನಾನು ಜಗತ್ತಿನ ಎಲ್ಲೆಡೆಯಿಂದ ತಂದಂತಹ ರತ್ನಗಳಿವೆ. ಅವನು ದೇವಲೋಕವನ್ನೂ, ಪಾತಾಳಲೋಕವನ್ನೂ ಗೆದ್ದವನು. ಅಲ್ಲಿಂದ ತಂದ ಅನರ್ಘ್ಯವಾದ ಅಪರೂಪವಾದ ಉತ್ತಮ ವಸ್ತುಗಳಿವೆ. ಆಯಾ ಜಾತಿಯಲ್ಲಿ ಶ್ರೇಷ್ಠವಾದವು. ಅದೆಲ್ಲಾ ನಿನ್ನದು. ಈ ಲಂಕಾರಾಜ್ಯವು ನಿನ್ನದು. ನಾನೂ ನಿನ್ನ ದಾಸನಾಗಿರುತ್ತೇನೆ. ಅಂತಹ ದಶಕಂಠ ರಾವಣ, ಚತುರ್ದಶಭುವನ ತಲ್ಲಣ ನಿನ್ನ ದಾಸನಾಗಿರುತ್ತೇನೆ, ನೀನು ನನಗೆ ಆಜ್ಞೆ ಮಾಡಬಹುದು ಎನ್ನುತ್ತಾನೆ. ಸಾಧಾರಣವಾಗಿ ಹೆಣ್ಣುಮಕ್ಕಳಿಗೆ ತವರಿನ ಮೇಲೆ ಪ್ರೀತಿಯಿರುತ್ತದೆ. ಆದ್ದರಿಂದ ಇಡೀ ಭೂಮಂಡಲವನ್ನು ಗೆದ್ದು ಜನಕರಾಜನಿಗೆ ಕೊಡುತ್ತೇನೆ ಎಂದೂ ಸಹ ಹೇಳುತ್ತಾನೆ. ವಿಜಿತ್ಯ ಪೃಥಿವೀಂ ಸರ್ವಾಂ ನಾನಾನಗರ ಮಾಲಿನೀಮ್ ಅನ್ಯಾನ್ಯ ನಗರಗಳನ್ನೇ ಮಾಲೆಯಾಗಿ ಹೊಂದಿರುವಂತಹ, ಒಂದೊಂದು ನಗರವೂ ಒಂದು ರತ್ನವಿದ್ದಂತೆ. ಆ ಎಲ್ಲಾ ರತ್ನಗಳೂ ಸೇರಿ ಒಂದು ಮಾಲೆ. ಅಂತಹ ಭೂಮಂಡಲವನ್ನೇ ಗೆದ್ದು ಜನಕಾಯ ಪ್ರದಾಸ್ಯಾಮಿ ಎನ್ನುತ್ತಾನೆ. ಹಾಗೆಯೇ ಅಲಂಕಾರವನ್ನು ಮಾಡಿಕೋ ಅಂತಹ ಅಲಂಕಾರ ಕುಶಲರು ನಮ್ಮಲ್ಲಿದ್ದಾರೆ. ನಾನವಿಧವಾಗಿ ಸುಂದರವಾಗಿ ಅಲಂಕರಿಸುತ್ತಾರೆ. ಭುಂಕ್ಷ್ವ ಭೋಗಾನ್” ಬೇಕಾದ ಭೋಗಗಳನ್ನು ಅನುಭವಿಸು. ನಿನಗೆ ಬೇಕಾದಷ್ಟು ಕುಡಿ, ತಿನ್ನು, ಖುಷಿಪಡು ಅಥವಾ ದಾನ ಮಾಡು. ದಾನಮಾಡಬೇಕೆಂದಾದರೆ ಭೂಮಿ, ಹಿರಣ್ಯ, ರತ್ನ ಏನಾದರೂ ದಾನ ಮಾಡು. ಧೃಷ್ಟಮಾಜ್ಞಾಪಯಸ್ವ ಚ ಎಂದು ರಾವಣ ಹೇಳಿದ. ಧೃಷ್ಟಮ್ ಎಂದರೆ ದಾರ್ಷ್ಠ್ಯದಿಂದ, ಆಜ್ಞಾಪಯಸ್ಯು ~ ಆಜ್ಞೆ ಮಾಡು ಎಂದರ್ಥ. ನಿನ್ನ ಆಪ್ತೇಷ್ಟರು, ಪ್ರೀತಿಪಾತ್ರರು ಯಾರಿದ್ದಾರೋ ಅವರೆಲ್ಲರಿಗೂ ಕೊಡುತ್ತೇನೆ, ಅವರ ಇಚ್ಛೆಗಳನ್ನು ಪೂರೈಸುತ್ತೇನೆ. ನನ್ನ ಸಮೃದ್ಧಿಯನ್ನು, ಸಂಪತ್ತನ್ನು, ಕೀರ್ತಿಯನ್ನು ನೋಡು. ಪಾಪ ರಾಮ ಆತನು ಕಾಡಾಡಿ. ನಾರುಬಟ್ಟೆಯನ್ನು ಉಟ್ಟುಕೊಂಡು ಓಡಾಡುತ್ತಾನೆ. ಆತನ ಜೊತೆ ಏನು ಮಾಡುತ್ತೀಯ? ಇನ್ನು ನನ್ನ ಅಂತಃಪುರದ ಎಲ್ಲಾ ಸ್ತ್ರೀಯರಿಗೂ ಸಹ ನೀನೆ ಅಧೀಶ್ವರಿ ಆಗುತ್ತೀಯ. ರಾವಣನ ಅಂತಃಪುರದಲ್ಲಿದ್ದ ಉತ್ತಮ ಸ್ತ್ರೀಯರು, ದೇವ ಸ್ತ್ರೀಯರು, ಗಂಧರ್ವ ಸ್ತ್ರೀಯರು, ನಾಗಸ್ತ್ರೀಯರಂತಹ ಏಳು ಸಾವಿರ ರಾಣಿಯರು ಸೀತೆಯ ದಾಸಿಯರು. ಹೆಣ್ಣು ಮಕ್ಕಳಲ್ಲಿ ಇಂತಹ ಅಪೇಕ್ಷೆಗಳಿರಬಹುದು. ಅವರೆಲ್ಲರೂ ನಿನ್ನ ಸೇವೆ ಮಾಡುತ್ತಾರೆ. ಅಪ್ಸರಸಿಯರು ಲಕ್ಷ್ಮೀದೇವಿಯ ಸೇವೆಯನ್ನು ಮಾಡಿದಂತೆ ಇವರೆಲ್ಲರೂ ನಿನ್ನ ಸೇವೆಯನ್ನು ಮಾಡುತ್ತಾರೆ. ಆದ್ದರಿಂದ ಒಪ್ಪಿಕೊ. ಕುಬೇರ ಧನೇಶ್ವರ. ಆತನಲ್ಲಿ ಯಾವ ಯಾವ ಬಗೆಯ ರತ್ನಗಳಿರಬಹುದು, ಧನಗಳಿರಬಹುದು ಅದೆಲ್ಲವೂ ನನ್ನಲ್ಲಿದೆ. ಇನ್ನುಮೇಲೆ ಅದೆಲ್ಲಾ ನಿನ್ನದೇ. ಹಾಗಾಗಿ “ಪಿಬ” ಕುಡಿ, “ವಿಹರ” ವಿಹರಿಸು, “ರಮಸ್ವ” ಮೋಜು ಮಾಡು ಖುಷಿಪಡು, “ಭುಂಕ್ಷ್ವ ಭೋಗಾನ್” ಬಗೆಬಗೆಯ ಭೋಗಗಳನ್ನು ಅನುಭವಿಸು. ಧನಭಂಡಾರವನ್ನೇ ನಿನಗೆ ಕೊಡುತ್ತೇನೆ ನನ್ನನ್ನು ಒಪ್ಪಿಕೋ. ನನ್ನ ಜೊತೆಯಲ್ಲಿ ನೀನು ಪ್ರಪಂಚವನ್ನೇ ಸುತ್ತಬಹುದು. ಪುಷ್ಪಕವಿಮಾನವನ್ನೇರಿ ಲೋಕ ಲೋಕಾಂತರಗಳನ್ನು ವಿಹರಿಸಬಹುದು.
ಆದರೆ ಸೀತೆ ರಾವಣನ ಈ ಯಾವುದೇ ಮಾತುಗಳಿಗೂ ಬಗ್ಗಲಿಲ್ಲ. ಆತನ ಮುಖವನ್ನು ಸಹ ನೋಡಲಿಲ್ಲ. ಒಂದು ಹುಲ್ಲುಕಡ್ಡಿಯನ್ನು ಹಿಡಿದು ಅದನ್ನು ರಾವಣ ಎಂದು ತಿಳಿದು ಮಾತನಾಡುತ್ತಾಳೆ. ಹುಲ್ಲುಕಡ್ಡಿ ನೀನು ಎಂಬ ಭಾವದಲ್ಲಿ ತೃಣಮಂತರತಃ ಕೃತ್ವಾ ಎಂದು. ನಂತರ ಆತನಿಗೆ ಹಿಮ್ಮುಖವಾಗಿ ತಿರುಗಿ ಮಾತನಾಡುತ್ತಾಳೆ. ಆತನನ್ನು ಒಪ್ಪಿಕೊಳ್ಳುವುದೇ ಇಲ್ಲ. ಬದಲಿಗೆ ಆತನಿಗೆ ನೀನು ಇಂತಹ ಕಾರ್ಯವನ್ನು ಮಾಡಬಾರದೆಂದು ಬುದ್ಧಿ ಹೇಳುತ್ತಾಳೆ. ನಂತರ ಮಾತಿಗೆ ಮಾತು ಬೆಳೆಯುತ್ತಾ ಕಾವೇರತೊಡಗಿತು. ಸೀತೆ ಆತನಿಗೆ ಅವಮಾನವಾಗುವಂತೆ ಕೋಪದಲ್ಲಿ ಕಠೋರವಾಗಿ ಉತ್ತರವನ್ನು ಕೊಡುತ್ತಾಳೆ. ಕೊನೆಯಲ್ಲಿ ರಾವಣ ಸೀತೆಗೆ ಇನ್ನು ಕೇವಲ ಎರಡು ತಿಂಗಳುಗಳಿದೆ ಎಂದು ಹೇಳುತ್ತಾನೆ. ಸೀತೆಯನ್ನು ಆತನು ಅಪಹರಿಸಿ ತಂದಾಗ ಅವಧಿ ಹಾಕಿರುತ್ತಾನೆ. ಆಕೆಯು ಒಂದು ವರ್ಷದಲ್ಲಿ ರಾವಣನನ್ನು ಒಪ್ಪಿಕೊಳ್ಳಬೇಕೆಂದು. ಒಂದು ವರ್ಷ ದಾಟಿದರೆ ನಿನಗೆ ಮೃತ್ಯು ಎಂದು ನೆನಪಿಸುತ್ತಾನೆ. ಹತ್ತು ತಿಂಗಳುಗಳು ಕಳೆದಿವೆ. ಇನ್ನು ಎರಡು ತಿಂಗಳಿದೆ. ದ್ವೌ ಮಾಸೌ ರಕ್ಷಿತವ್ಯೋ ಮೇ ಎರಡು ತಿಂಗಳು ಸುಮ್ಮನಿರುತ್ತೇನೆ. ಏಕೆಂದರೆ ಒಪ್ಪಂದ ಆ ರೀತಿಯಿದೆ. ಅಷ್ಟರಲ್ಲಿ ನೀನು ನನ್ನನ್ನು ಒಪ್ಪಿ ನನ್ನ ಅಂತಃಪುರವನ್ನು ಸೇರಿಕೊಳ್ಳಬೇಕು. ಇಲ್ಲವೆಂದರೆ ಆ ಎರಡು ತಿಂಗಳು ಕಳೆದ ಮರುದಿನದ ನನ್ನ ಬೆಳಗಿನ ಉಪಹಾರಕ್ಕೆ ನೀನೆ ಆಹಾರ. ತತಸ್ತ್ವಾಂ ಪ್ರಾತರಾಶಾರ್ಥಂ ಆಲಭಂತೇ ಮಹಾನಸೇ ನೀನು ಒಪ್ಪಿಕೊಂಡರೆ ಲಂಕೆಯ ಸಾಮ್ರಾಜ್ಞಿ, ಅಧಿರಾಜ್ಞಿ. ಇಲ್ಲದಿದ್ದರೆ ಒಂದು ವರ್ಷದ ನಂತರದ ಬೆಳಗಿನ ಉಪಾಹಾರದ ತರಕಾರಿ ನೀನು. “ಆಲಭಂತೇ ಮಹಾನಸೇ” ಅಂದರೆ ನಿನ್ನನ್ನು ಕೊಂದು ಸಣ್ಣ ಚೂರುಗಳನ್ನಾಗಿ ಮಾಡುತ್ತೇನೆ ಎಂದು ರಾವಣನು ಹೇಳುತ್ತಾನೆ. ರಾಕ್ಷಸರು ನರಮಾಂಸ ಭಕ್ಷಕರು. ಇದು ಭಯ. ಅದು ಆಮಿಷ ಅಥವಾ ಪ್ರಲೋಭನೆ. ರಾವಣನು ಇವೆರಡನ್ನೂ ತೋರಿಸುತ್ತಾನೆ. ಆದರೆ ಸೀತೆ ಬಗ್ಗಲಿಲ್ಲ. ನಚಿಕೇತನಲ್ಲಿಯೂ ಸಹ ನಾವು ಅಂತಹ ದೃಢತೆಯನ್ನು ಕಾಣುತ್ತೇವೆ.
ನಚಿಕೇತನು ಯಮನಲ್ಲಿ ಹೇಳುತ್ತಾನೆ. ಯಮದೇವ ನೀನೆ ಹೇಳಿದಂತೆ ದೇವತೆಗಳಿಗೂ ಸಹ ಈ ವಿಷಯದಲ್ಲಿ ಸಂಶಯವಿತ್ತು. ಅವರೂ ಸಹ ಜಿಜ್ಞಾಸೆ ಮಾಡಿ ನಿರ್ಧಾರಕ್ಕೆ ಬರಬೇಕಾಯಿತು. ಇದು ಸುಲಭಕ್ಕೆ ಸಿಗುವಂತಹದಲ್ಲ ಎಂದು ನೀನೆ ಹೇಳಿದೆ. ಮತ್ತೆ ನಿನ್ನನ್ನು ಬಿಟ್ಟು ಇನ್ನು ಯಾರ ಬಳಿ ಇದಕ್ಕೆ ಉತ್ತರ ಸಿಗಬಹುದು ಎಂದು ಕೇಳುತ್ತಾನೆ. ವಕ್ತಾಚಸ್ಯ ತ್ವಾದೃಗನ್ಯೋ ನಭ್ಯ ಭೂಮಂಡಲದಲ್ಲಿ ಯಾರೂ ಸಿಗಲಿಕ್ಕಿಲ್ಲ ನೀನೆ ಈ ಪ್ರಶ್ನೆಗೆ ಉತ್ತರಿಸಲು ಸರಿಯಾದ ವ್ಯಕ್ತಿ ಎಂದು ಹೇಳುತ್ತಾನೆ. ಯಮನು ಮಾತಿನ ಮಧ್ಯೆ ಬೇರೆ ವರವನ್ನು ಕೇಳು ಎಂದಾಗಲೂ ಸಹ ನಚಿಕೇತನು ಈ ವರಕ್ಕೆ ಸಮಾನದ ವರ ಮತ್ತೊಂದಿಲ್ಲ ಎನ್ನುತ್ತಾನೆ. ಯಮನು ಈ ವರಕ್ಕೆ ಸಮಾನವಾಗಿ ಸಂಪತ್ತನ್ನು ಕೇಳು, ಜನಜೀವನವನ್ನು ಕೇಳು ಎಂದು ಹೇಳುತ್ತಾನೆ. ಅದಕ್ಕೆ ನಚಿಕೇತನು ಇದಕ್ಕೆ ಸಮಾನವಾದ ವರ ಅಲ್ಲ ಎನ್ನುತ್ತಾನೆ. ತನಗೆ ಜ್ಞಾನ ಬೇಕು. ಈ ನೂರು ವರ್ಷ ಅಲ್ಪ. ನಾವು ನೂರು ವರ್ಷ ಬದುಕಿದರೂ ಆ ನೂರು ವರ್ಷ ಕಳೆದೇಹೋಗುತ್ತದೆ. ಈ ಸೃಷ್ಟಿಯನ್ನೂ, ಮರಗಿಡಗಳನ್ನು ಗಮನಿಸಿದರೆ ಅವುಗಳು ಐದು ನೂರು ಎಂಟುನೂರು ವರ್ಷಗಳಷ್ಟು ಬದುಕುತ್ತವೆ. ಬೇರೆ ಬೇರೆ ಲೋಕಗಳನ್ನು ತೆಗೆದುಕೊಂಡರೂ ಸಹ ನಮ್ಮ ಆಯಸ್ಸಿಗಿಂತ ಅವರ ಆಯಸ್ಸು ಜಾಸ್ತಿ. ಹಿಂದಿನ ಜೀವನ ಹೇಗೆ ಸಮಯ ಕಳೆಯುತ್ತದೆಂದು ತಿಳಿಯುವುದಿಲ್ಲ. ಸಮಯ ಸಾಗುತ್ತಲೇ ಇರುತ್ತದೆ. ಅಪಿ ಸರ್ವಂ ಜೀವಿತಂ ಅಲ್ಪಮೇವ ಇಡೀ ಜೀವನ ಎಲ್ಲಾ ಸೇರಿಸಿದರು ಅದು ಚಿಕ್ಕದು. ನೀನು ಮತ್ತೆ ಯಾವ ವರವನ್ನು ಕೊಡುವುದೂ ಬೇಡ. ನೀನು ಹೇಳಿದವುಗಳೆಲ್ಲಾ ನನ್ನ ಇಂದ್ರಿಯ ಶಕ್ತಿಯನ್ನು ಹಾಳು ಮಾಡುತ್ತವೆ. ತಿನ್ನುವುದು, ಕುಡಿಯುವುದು, ಮೋಜು ಮಾಡುವುದು ಇವುಗಳೆಲ್ಲಾ ನಮ್ಮ ಇಂದ್ರಿಯಗಳ ಪಾಠವನ್ನು ಹಾಳು ಮಾಡುತ್ತವೆ. ಸರ್ವೇಂದ್ರಿಯಾಣಾಮ್ ಹರಯಂತಿ ತೇಜಃ ಹಾಗಾಗಿ ಅದೆಲ್ಲಾ ಬೇಡವೆನ್ನುತ್ತಾನೆ. ವಾಹನಗಳನ್ನು ಕೊಡುತ್ತೇನೆ ಎಂದಾಗ ನಿನ್ನ ವಾಹನಗಳು ನಿನಗೇ ಇರಲಿ ಎನ್ನುತ್ತಾನೆ. ತವ ನೃತ್ಯ ಗೀತೇ ಆ ಅಪ್ಸರೆಯರು, ನೃತ್ಯ, ಗೀತ ಸಹ ನಿನ್ನಲ್ಲಿಯೇ ಇರಲಿ ಎಂದು ನಚಿಕೇತನು ಯಮನ ಹತ್ತಿರ ಹೇಳುತ್ತಾನೆ.
ಹೀಗೆ ಸಂದರ್ಭಕ್ಕೆ ಒಂದು ಕಥೆ. ದೀಪಾವಳಿ ಹಬ್ಬದ ಸಮಯದಲ್ಲಿ ಬಟ್ಟೆ ಅಂಗಡಿಗೆ ವ್ಯಾಪಾರಕ್ಕೆ ಬೆಳಿಗ್ಗೆ ಮುಂಚೆಯಲ್ಲಿ ಒಬ್ಬ ವ್ಯಕ್ತಿ ಬಂದಿದ್ದಾನೆ. ಆತ ಇಡೀ ಅಂಗಡಿಯನ್ನೂ ಸಹ ಪೂರ್ತಿ ನೋಡಿ ಒಂದು ಸೀರೆಯನ್ನು ಆರಿಸಿದ. ಬೆಲೆಯನ್ನು ಅಂಗಡಿಯಾತನಲ್ಲಿ ವಿಚಾರಿಸಿದ. ಅದರ ಬೆಲೆ ಒಂದು ಸಾವಿರ ರೂಪಾಯಿ. ಆ ವ್ಯಕ್ತಿಯು ಅಂಗಡಿಯಾತನಲ್ಲಿ ಇದನ್ನು ಐದುನೂರು ರೂಪಾಯಿಗೆ ಕೇಳಿದ. ಅದು ಐದು ನೂರು ರೂಪಾಯಿಗೆ ಕೊಡುವ ಸೀರೆಯಲ್ಲ. ಆದರೆ ಅದು ಮೊದಲನೆಯ ವ್ಯಾಪಾರವಾದ್ದರಿಂದ ಬಿಡುವಂತಿಲ್ಲ. ಆದ್ದರಿಂದ ಅಂಗಡಿಯವನು ಒಪ್ಪಿಗೆ ನೀಡಿದ. ಆ ವ್ಯಕ್ತಿ ಪುನಃ ಇನ್ನೂರೈವತ್ತು ರೂಪಾಯಿಗೆ ಕೇಳಿದ. ಅದಕ್ಕೂ ಸಹ ಅಂಗಡಿಯವನು ಒಪ್ಪಿದ. ಆ ವ್ಯಕ್ತಿಯು ಪುನಃ ಕಡಿಮೆ ಬೆಲೆಗೆ ಕೇಳಿದಾಗ ಅಂಗಡಿಯಾತನು ನಿನಗೆ ಎಷ್ಟು ಬೆಲೆಗೆ ಬೇಕೋ ಅಷ್ಟಕ್ಕೆ ತೆಗೆದುಕೊಂಡು ಹೋಗು ಹಾಗೇಯೇ ಉಚಿತವಾಗಿ ಆದರೂ ಸಹ ತೆಗೆದುಕೊಂಡು ಹೋಗು ಎಂದು ಹೇಳಿದ. ಆ ವ್ಯಕ್ತಿ ಹಾಗದರೆ ಇನ್ನೊಂದು ಸೀರೆ ಕೊಡುವಿರಾ ಎಂದು ಕೇಳುತ್ತಾನೆ. ಇದು ಮುಕ್ತಾಯವಾಗುವುದೆಲ್ಲಿ??
ಹಾಗಾಗಿ ನ ವಿತ್ತೇನ ತರ್ಪಣೀಯೋ ಮನುಷ್ಯಃ ದುಡ್ಡು ಕೊಟ್ಟು ಮನುಷ್ಯನನ್ನು ಸಮಾಧಾನ ಪಡಿಸಲು ಸಾಧ್ಯವೇ ಇಲ್ಲ. ಎಷ್ಟು ಕೊಟ್ಟರೂ ಮತ್ತೆ ಮತ್ತೆ ಬೇಕೆನ್ನುತ್ತಾನೆ.
ನಚಿಕೇತನು ಯಮನಲ್ಲಿ ನನಗೆ ದುಡ್ಡು ಬೇಡ, ನಿನ್ನ ದರ್ಶನವಾದ ಮೇಲೆ ಸಂಪತ್ತು, ಆಯಸ್ಸು ಎಲ್ಲಾ ತಾನಾಗಿಯೇ ಬರುತ್ತದೆ ಎನ್ನುತ್ತಾನೆ. ಆಯಸ್ಸಿನ ಪ್ರಭು ನೀನು. ಇದಾವುದೂ ನನಗೆ ಬೇಡ. ವರಸ್ತುಮೇ ವರಣೀಯ ಸ ಏವ ನಾನು ಕೇಳಿದ ವರವನ್ನೇ ನನಗೆ ಕೊಡು ಎಂದು ಹೇಳಿದ. ಇದನ್ನು ಬಾಲಹಠ ಎನ್ನುತ್ತಾರೆ.
ಹಠಕ್ಕೆ ಚಿಕ್ಕಮಕ್ಕಳು ಪ್ರಸಿದ್ಧ. ತರುಣಹಠ, ವೃದ್ಧಹಠ ಎಂಬುದು ಎಲ್ಲಿಯೂ ಇಲ್ಲ. ಒಮ್ಮೆ ಒಂದು ದಿನ ಅಕ್ಬರನ ಆಸ್ಥಾನಕ್ಕೆ ಬೀರಬಲ್ಲನು ಬರುವುದು ತಡವಾಯಿತಂತೆ. ಅಕ್ಬರನು ಏಕೆ ತಡ ಎಂದು ಪ್ರಶ್ನಿಸಿದಾಗ ಬೀರಬಲ್ಲ ತನ್ನ ಮೊಮ್ಮಗ ಹಟ ಮಾಡುತ್ತಿದ್ದ ಆತನನ್ನು ಸಮಾಧಾನಿಸುವುದು ತಡವಾಯಿತೆಂದು ಹೇಳುತ್ತಾನೆ. ಆಗ ಅಕ್ಬರನು ಆತನಲ್ಲಿ ನೀನು ಬೀರಬಲ್ಲ, ಚತುರ. ನಿನಗೆ ಚಿಕ್ಕಮಗುವನ್ನು ಸಂಭಾಳಿಸುವುದು ಕಷ್ಟವೇ ಎಂದು ಕೇಳುತ್ತಾನೆ. ಬೀರಬಲ್ಲ ವಿವರಿಸಿದರೂ ಸಹ ಆತ ಒಪ್ಪುವುದಿಲ್ಲ. ಮಕ್ಕಳನ್ನು ಸಮಾಧಾನಿಸುವುದು ಸುಲಭ ನಾನೇ ಮಾಡುತ್ತೇನೆ ಎಂದು ಹೇಳುತ್ತಾನೆ. ಆಗ ಬೀರಬಲ್ಲ ಮೊಮ್ಮಗುವನ್ನು ಕರೆತರುತ್ತಾನೆ. ಆ ಮೊಮ್ಮಗನು ಅಕ್ಬರನಲ್ಲಿ ಕಬ್ಬು ಬೇಕೆಂದು ಕೇಳುತ್ತಾನೆ. ಅಕ್ಬರನು ಕಬ್ಬನ್ನು ತರಿಸಿ ಮಗುವಿಗೆ ತಿನ್ನಲು ಸುಲಭವಾಗಲು ಸಿಪ್ಪೆಯನ್ನು ತೆಗಿಸಿ, ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಕೊಡುತ್ತಾನೆ. ಆ ಮಗುವು ಆಗ ತನಗೆ ಇಡೀ ಕಬ್ಬು ಬೇಕೆಂದು ಕೇಳಿತು. ಅಕ್ಬರನು ಇನ್ನೊಂದು ಇಡೀ ಕಬ್ಬನ್ನು ತರಿಸಲು ಆದೇಶ ನೀಡಿದಾಗ ತನಗೆ ಇದೇ ಕಬ್ಬು ಇಡಿಯಾಗಿ ಬೇಕು ಎಂದು ಹೇಳಿತು. ಆ ಮಗುವಿನ ಹಠದಿಂದ ಅಕ್ಬರನು ಬೇಸರಗೊಂಡು ಮಗುವನ್ನು ಸಮಾಧಾನಿಸುವುದಕ್ಕಿಂತ ರಾಜ್ಯಭಾರವೇ ಸುಲಭವೆಂದು ಹೇಳುತ್ತಾನೆಂದು ಅಕ್ಬರ – ಬೀರಬಲ್ ರ ಕಥೆಯಲ್ಲಿ ಹೇಳುತ್ತಾರೆ. ಆ ಮಗುವು ಹಠ ಮಾಡುವುದೇ ಬಾಲಹಠ.
ಹಠ ತಪ್ಪಲ್ಲ. ನಾವು ಮಕ್ಕಳಿಗೆ ಹೇಳುವುದು ಅದೇ. ಹಠ ಹೇಗೆ ಮಾಡಬೇಕು, ಯಾವುದಕ್ಕಾಗಿ ಮಾಡಬೇಕು ಎನ್ನುವುದು ಮುಖ್ಯ. ನಚಿಕೇತನು ಯಾವುದಕ್ಕಾಗಿ ಹಠ ಮಾಡಿದನೋ ಅಂತಹುದಕ್ಕಾಗಿ ಮಾಡಬೇಕು. ಅರಿವಿಗಾಗಿ, ಜ್ಞಾನಕಾಗಿ ನಚಿಕೇತ ಯಾವ ರೀತಿ ಹಠ ಮಾಡಿದನೋ, ಯಮರಾಜನಿಂದಲೂ ಸಹ ಆತನನ್ನು ಸಮಾಧಾನಿಸಲು ಸಾಧ್ಯವಾಗಲಿಲ್ಲವೋ ಅಂತಹ ಹಠ ಮಾಡಬೇಕು. ಜೀವನದಲ್ಲಿ ಒಳ್ಳೆಯದನ್ನು ಸಂಪಾದಿಸಲು ಹಠ ಮಾಡಬೇಕು. ಬೇರೆ ವಸ್ತುಗಳಿಗಲ್ಲ. ಇಂತಹುದೇ ಪುಸ್ತಕ ಬೇಕು, ಜ್ಞಾನ ಬೇಕು ಎಂಬ ಹಠ ಒಳ್ಳೆಯದು. ಒಳ್ಳೆಯದಕ್ಕೆ ಹಠ ಬಂದಾಗ ಅದು ಜೀವನವನ್ನು ಉದ್ಧಾರ ಮಾಡುತ್ತದೆ. ಅಂತಹ ಹಠವನ್ನು ನಚಿಕೇತ ಮಾಡುತ್ತಾನೆ. ಆತನದು ಮುಂದಾಲೋಚನೆ. ಈ ಮೊದಲೇ ಹೇಳಿದಂತೆ ದೂರದೃಷ್ಟಿ ಮತ್ತು ಮುಂದಾಲೋಚನೆ ಈ ಪ್ರವಚನ ಸರಣಿಯ ಮುಖ್ಯವಸ್ತು.
ನಮ್ಮೆಲ್ಲರಿಗೂ ಮುಂದಾಲೋಚನೆ ಇದ್ದೇ ಇರುತ್ತದೆ. ಮನೆಯಲ್ಲಿನ ಸಾಮಗ್ರಿಗಳು, ಬಟ್ಟೆಬರೆಗಳನ್ನು ನಾವು ಮುಂದಕ್ಕೆ ಸಾಕಾಗುವಷ್ಟು ತಂದುಕೊಂಡಿರುತ್ತೇವೆ. ಈಗಿನ ಕಾಲದಲ್ಲಿ ಎಲ್ಲದಕ್ಕೂ ಸಹ; ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ, ಮನೆ ನಿರ್ಮಿಸಲು ಉಳಿತಾಯ, ವಿಮೆ ಮುಂತಾದ ಯೋಜನೆಗಳಿವೆ. ಆದರೆ ಇದೆಲ್ಲಕ್ಕಿಂತಲೂ ಮಿಗಿಲಾದ ಮುಂದಿನ ಯೋಚನೆಯನ್ನು ನಚಿಕೇತ ಮಾಡಿದ್ದಾನೆ. “ಸಾವು” ಅದರ ನಂತರ ಏನು?? ನಾವು ಹೆಚ್ಚೆಂದರೆ ಸಾವಿನವರೆಗೂ ಯೋಚಿಸಬಹುದು. ಹೆಚ್ಚಿನವರು ಅಲ್ಲಿಯವರೆಗೂ ಸಹ ಯೋಚಿಸುವುದಿಲ್ಲ. ಒಂದುವೇಳೆ ಅಲ್ಲಿಯವರೆಗೂ ಯೋಚಿಸಿದರೆ ಸತ್ತ ನಂತರ ಏನು ಎಂದು ಯಾರೂ ಸಹ ಯೋಚಿಸುವುದಿಲ್ಲ. ಆದರೆ ನಚಿಕೇತನು ಅಲ್ಲಿಯವರೆಗೂ ಅಲ್ಲದೇ ಅದರಾಚೆಗೂ ಸಹ ಯೋಚಿಸಿದ್ದಾನೆ. ಇದು ಮುಂದಾಲೋಚನೆ. ಸಾವಿನ ಬಳಿಕ ಬದುಕಿನ ಚಿಂತನೆ ಅದು ನಮ್ಮ ಪೂರ್ವಜರ ಹಿರಿಮೆ. ಅವರೂ ಅಲ್ಲಿಯವರೆಗೂ ಸಹ ಆಲೋಚಿಸಿದ್ದಾರೆ. ಹಾಗಾಗಿ ಈಗಿನ ಕಾಲದ ಮುಂದಾಲೋಚನೆಗಳು ಸಂಕುಚಿತ. ನಮ್ಮ ಪೂರ್ವಜರ ಮುಂದಾಲೋಚನೆಗಳು ಬಹಳ ದೂರಗಾಮಿ ಎಂದು ನೆನಪಿಸಲಾಗುತ್ತದೆ.
ಈಗ ನಚಿಕೇತನ ಪ್ರಶ್ನೆಗೆ ಯಮ ಉತ್ತರಿಸಬೇಕು. ಆತನಿಗೆ ಉತ್ತರ ಹೇಳಲು ಮನಸ್ಸಿಲ್ಲವೆಂದಲ್ಲ. ಆತನು ನಚಿಕೇತನನ್ನು ಪರೀಕ್ಷಿಸುತ್ತಿದ್ದಾನೆ. ಈಗ ವಿಧ್ಯಾರ್ಥಿಗಳಿಗೆ ಪರೀಕ್ಷೆಯು ಮುಂದಿನ ತರಗತಿಗೆ ಹೋಗಲು ಅವರು ಅರ್ಹರೋ ಇಲ್ಲವೋ ಎಂದು ನಿರ್ಧರಿಸಲು ಮಾಡಲಾಗುತ್ತದೆ. ಗುರುಕುಲಕ್ಕೆ ಅಥವಾ ಶಾಲೆಗಳಿಗೆ ಸೇರಲು ಸಂದರ್ಶನ ನಡೆಸುತ್ತಾರೆ. ಏಕೆಂದರೆ ಆ ಶಾಲೆ ಅಥವಾ ಗುರುಕುಲದಲ್ಲಿ ಆ ವಿದ್ಯಾರ್ಥಿ ಅರ್ಹರೇ ಇಲ್ಲವೇ ಎಂದು ಪರೀಕ್ಷಿಸಲು. ಹಾಗೇಯೇ ಯಮನೂ ಸಹ ನಚಿಕೇತನ ಅರ್ಹತೆಯ ಪರೀಕ್ಷೆ ಮಾಡುತ್ತಾನೆ. ಯಮನಿಗೆ ನಚಿಕೇತನನ್ನು ನೋಡಿ ಖುಷಿಯಾಗುತ್ತದೆ. ಮುಂದೆ ಆತನೇ ‘ನಿನ್ನಂಥವರು ನನಗೆ ಸಿಗಲಿ’ ಎನ್ನುತ್ತಾನೆ. ‘ನಿನ್ನಂತಹ ಪ್ರಾಶ್ನಿಕರು ಸಿಗಲಿ’ ಎಂದು ಹೇಳುತ್ತಾನೆ. ಆತನಿಗೂ ಸಂತೋಷವಾಗುತ್ತದೆ.
ಅನರ್ಘ್ಯವಾದುದು, ಅಪರೂಪವಾದುದ್ದನ್ನು ಕೊಡುವಾಗ ತೆಗೆದುಕೊಳ್ಳುವವರು ಅರ್ಹರೋ ಇಲ್ಲವೋ ಎಂದು ಒಂದಕ್ಕೆರಡು ಬಾರಿ ಪರೀಕ್ಷಿಸಬೇಕು. ಹಾಗೆಯೇ ಯಮನೂ ಸಹ ನಚಿಕೇತನನ್ನು ಪರೀಕ್ಷಿಸಿದ, ಆತನಿಗೆ ತೃಪ್ತಿಯಾಯಿತು. ತುಂಬಾ ಸಂತೋಷವಾಯಿತು. ನಚಿಕೇತನು ಈ ಪ್ರಶ್ನೆಗೆ ಉತ್ತರ ಪಡೆಯಲು ಅರ್ಹ ಎಂದು ಎನಿಸಿತು. ಏಕೆಂದರೆ ಅತಿಯಾಸೆ, ವಿಪರೀತ ಆಸೆಗಳನ್ನು ಹೊಂದಿರುವವರಿಗೆ ಇದು ಅರ್ಥವಾಗುವುದಿಲ್ಲ. ನಚಿಕೇತನಂತಹ ಮನಸ್ಥಿತಿ ಬೇಕು. ಸಾವಿನ ಆಚೆಗೆ ಯೋಚಿಸುವಂಥವರಿಗೆ ಇದು ಅರ್ಥವಾಗುತ್ತದೆಯೇ ವಿನಃ ವಿಪರೀತ ಆಶಾ – ಪಾಶಗಳಿರುವವರಿಗಲ್ಲ. ಹಾಗಾಗಿ ಆತನಿಗೆ ಸಾವಿನ ರಹಸ್ಯವನ್ನು ಯಮನು ತಿಳಿಸುತ್ತಾನೆ. ಸಾವಿನ ನಂತರ ಏನೆಂಬುದನ್ನು ತಿಳಿಸಿಕೊಡುತ್ತಾನೆ.
ಪ್ರಶ್ನೆ ಏನಿತ್ತು? “ಅಸ್ತಿ ಇತ್ಯೇಕೇ ನಾಯಮಸ್ತೀತಿ ಚೈಕೇ”
ಅಸ್ತಿ ಮತ್ತು ನಾಸ್ತಿ. ಸತ್ತನಂತರ ನಾವು ಇರುತ್ತೇವೋ ಇಲ್ಲವೋ?! ಸತ್ತ ನಂತರ ಬದುಕಿದೆಯೋ ಇಲ್ಲವೋ?! ಅವನು ಇಲ್ಲ ಎಂದರೆ ಅರ್ಥವೇನು? ಅವನು ಇಲ್ಲ, ಹೋದ ಎಂದು ಹೇಳುತ್ತಾರೋ ಇಲ್ಲವೋ? ಹೋದ ಅಂದರೆ ಏನು? ಅವನು ಇದ್ದಾನೆ ಎಂದು ಅರ್ಥ. ಆದರೆ ಇಲ್ಲಿ ಇಲ್ಲ ಬೇರೆ ಕಡೆ ಹೋದ, ಬೇರೆ ದೇಹಕ್ಕೆ ಹೋದ, ಬೇರೆ ಲೋಕಕ್ಕೆ ಹೋದ ಎಂದು.
ನಾನು ಮತ್ತು ದೇಹ ಎರಡೂ ಒಂದೇ ಆದರೆ ಅಥವಾ ನಾನೇ ದೇಹ ಎಂದಾದರೆ ದೇಹಕ್ಕೆ ನಾಶ, ಮುಂದೇನಿಲ್ಲ ಎನ್ನಬಹುದು. ಆದರೆ ‘ನಾನೇ’ ದೇಹವಲ್ಲ. ಉದಾಹರಣೆಗೆ ನನ್ನ ಪುಸ್ತಕ, ನನ್ನ ಬಟ್ಟೆ, ನನ್ನ ಮನೆ ಎಂದು ಹೇಳುವ ಹಾಗೇ ನನ್ನ ದೇಹ ಎಂದು ನಾವು ಹೇಳುತ್ತೇವಲ್ಲವೇ? ಹಾಗಾದರೆ ಅದು ಬೇರೆ ಎಂದಾಯಿತು. ನನ್ನ ಕಣ್ಣು, ನನ್ನ ಕಿವಿ ಎಂದು ನಾವು ಹೇಳುತ್ತೇವೋ ಇಲ್ಲವೋ? ಹಾಗಾದರೆ ಅದು ಬೇರೆ ಎಂದಾಯಿತು. ಹಾಗಾಗಿ “ನಾನು” ಯಾರು? ಎಂಬ ಪ್ರಶ್ನೆ ರಮಣಮಹರ್ಷಿಗಳಿಗೆ ಬಂದಿತ್ತು.
ಅಷ್ಟು ಗುಟ್ಟಿನ ವಿಷಯವಾಗಿದ್ದಕ್ಕೆ ಯಮ ಹೇಳಬೇಕೋ, ಬೇಡವೋ ಎಂದು ಅನುಮಾನ ಪಟ್ಟಿದ್ದು. ‘ನಾನು’ ಅನ್ನೋದು ಇದರ essence. ಅದು ನಮ್ಮ ವ್ಯಕ್ತಿತ್ವದ ಸಾರ. ಸಾರ ಇದ್ದರೆ ಇದಕ್ಕೆಲ್ಲಾ ಅಸ್ತಿತ್ವ ಇರುತ್ತದೆ, ಅದು ಇಲ್ಲದಿದ್ದರೆ ಯಾವುದಕ್ಕೂ ಅಸ್ತಿತ್ವ ಇರುವುದಿಲ್ಲ. ಜೇನುಗೂಡಿನಲ್ಲಿ ರಾಣಿಹುಳ ಇರುತ್ತದೆ. ಆ ರಾಣಿ ಹುಳವನ್ನು ಎತ್ತಿ ಬಿಟ್ಟರೆ ಎಲ್ಲಾ ಹುಳಗಳೂ ಅದರ ಹಿಂದೆಯೇ ಬರುತ್ತದೆ. ‘ನಾನು’ ಎನ್ನುವಂಥದ್ದು ಕೂಡಾ ಅಷ್ಟೇ ಮುಖ್ಯ. ಅದು ಇದ್ದರೆ ಇದೆಲ್ಲಾ, ಇಲ್ಲದಿದ್ದರೆ ದೇಹ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಸತ್ತು ಹೋಯಿತು, ಸತ್ತು ಹೋದನು ಎಂದು ಹೇಳುತ್ತಾರೆ. ಆ ‘ಸತ್’ ಎಂದರೆ ಜೀವ, ಅದು ಬೇರೆ ಕಡೆ ಹೋಯಿತು. ಈ ಜೀವವನ್ನು ಬಿಟ್ಟು ಹೋಯಿತು ಎಂದರ್ಥ. ದೇಹವಲ್ಲದ, ಮನಸ್ಸಲ್ಲದ, ಇಂದ್ರಿಯಗಳು ಕಣ್ಣು, ಕಿವಿ, ಮೂಗು ಇದು ಯಾವುದೂ ಅಲ್ಲದ “ನಾನು” ಎನ್ನುವುದು ಬೇರೆ. ಇದು ಯಾವುದೂ ಅಲ್ಲದೇ ಇರುವಂತಹ “ನಾನು” ಎನ್ನುವುದು ಬೇರೆ. ಇವೆಲ್ಲಾ ಅಳಿದು ಹೋದರೂ ಕೂಡ “ನಾನು” ಅಳಿದು ಹೋಗದು. ರೂಪ ಬೇರೆ ಆಗಬಹುದು, ಲೋಕ ಬೇರೆ ಆಗಬಹುದು ಆದರೆ “ನಾನು” ಇದ್ದೇನೆ. ಹಾಗಾಗಿ “ಅಸ್ತಿ ಇತ್ಯೇಕೇ ನಾಯಮಸ್ತೀತಿ ಚೈಕೇ”, ಇದರಲ್ಲಿ ಯಾವುದು ಸರಿ? ಎಂದರೆ, ಅಸ್ತಿ ಎನ್ನುವುದು ಸರಿ. ಅಸ್ತಿ ಎಂದರೆ ಆಸ್ತಿಕರು, ಅವರು ಯಾರು ಎಂದರೆ ಸತ್ತಮೇಲೂ “ಅಸ್ತಿ” ಅಥವಾ ಇದ್ದಾನೆ ಎಂಬುದನ್ನು ಅರಿತವರು. ನಿಜವಾದ ಆಸ್ತಿಕರು ಯಾರೆಂದರೆ ಅದನ್ನು ಕಂಡವರು. ಬೇರೆ ದೃಷ್ಟಿ ತೆರೆದು ನೋಡಿದವರು. ಜೀವಗಳು ದೇಹವನ್ನು ಬಿಟ್ಟು ಹೋಗುವುದನ್ನು, ಬೇರೆ ದೇಹಗಳಿಗೆ ಸೇರುವುದನ್ನು ಅಥವಾ ಬೇರೆ ಲೋಕಗಳಿಗೆ ಸೇರುವುದನ್ನು ಕಂಡವರು ನಿಜವಾದ ಆಸ್ತಿಕರು. ನಾವೆಲ್ಲಾ ಆಸ್ತಿಕರ ಪೀಳಿಗೆಯವರು ನಮಗೂ ಅಂತಹ ದೃಷ್ಟಿ ಬಂದಾಗ ನಾವೂ ಆಸ್ತಿಕರಾಗುತ್ತೇವೆ. ಹಾಗಾಗಿ ಯಮ ಇದನ್ನು ವಿವರಿಸಿ ವಿವರಿಸಿ ನಚಿಕೇತನಿಗೆ ಹೇಳುತ್ತಾನೆ.
ಸತ್ತ ನಂತರ ಜೀವಕ್ಕೆ ಏನಾಗುತ್ತದೆ? ದೇಹ ಗತಿಸಿದ ನಂತರ ಏನಾಗುತ್ತದೆ? ಏನು ಆಗಬಹುದು?! ಜೀವಿಗಳು ಏನಾಗುತ್ತಾರೆ? ಅವನು ದೇವತೆ ಆಗಬಹುದು, ರಾಕ್ಷಸನಾಗಬಹುದು, ಮನುಷ್ಯ, ಪ್ರಾಣಿ-ಪಕ್ಷಿ, ಮರ-ಗಿಡ ಆಗಬಹುದು. ಅಥವಾ ಕರ್ಮಕ್ಕೆ ತಕ್ಕಂತೆ ಬೇರೆ ಬೇರೆ ಜೀವ ಬರಬಹುದು. ಮನುಷ್ಯ ಸತ್ತನಂತರ ಏನಗುತ್ತಾನೆ ಎಂಬುದನ್ನು ಮೂರು ಗತಿಗಳಲ್ಲಿ ವಿವರಿಸಿದ್ದಾನೆ. ಯಮ ಮೂರು ಗತಿಗಳ ಬಗ್ಗೆ ಹೇಳಿದ್ದಾನೆ. ಜೀವಕ್ಕೆ ಗತಿಸಿದ ಬಳಿಕ ಅಂದರೆ ದೇಹ ಬಿದ್ದ ಬಳಿಕ ಮೂರು ಗತಿಗಳು ಒಂದು “ಸದ್ಗತಿ”, ಇನ್ನೊಂದು “ದುರ್ಗತಿ”, ಮತ್ತೊಂದು “ಪರಗತಿ”. ಜೀವ ದುರ್ಗತಿಯನ್ನು ಹೊಂದುವುದಿದೆ, ಸದ್ಗತಿ ಹೊಂದುವುದಿದೆ ಹಾಗೆಯೇ ಪರಗತಿಯನ್ನು ಹೊಂದುವುದೂ ಇದೆ. ಸತ್ತ ಮೇಲೆ ಜೀವ ಮೂರು ದಾರಿಗಳಲ್ಲಿ ಹೋಗುತ್ತದೆ. ಒಂದನೇಯದು ದೇವಮಾರ್ಗ ಅದು ಸದ್ಗತಿ, ಎರಡನೇಯದು ಯಮಮಾರ್ಗ ಅದು ದುರ್ಗತಿ, ಮೂರನೇಯದು ಮುಕ್ತಿಮಾರ್ಗ. ಇದರಲ್ಲಿ ದುರ್ಗತಿ ಮತ್ತು ಸದ್ಗತಿ ಎಂಬುದು ನಮಗೆ ಸುಲಭವಾಗಿ ಅರ್ಥವಾಗುವಂತಹದ್ದು. ದುರ್ಗತಿ ಎಂದರೆ ಕೆಳಗೆ ಹೋದನು, ಸದ್ಗತಿ ಎಂದರೆ ಮೇಲಕ್ಕೆ ಹೋಗುತ್ತಾನೆ. ಮೇಲೆ ಏನಿದೆ? ಕೆಳಗೆ ಏನಿದೆ? ಎಂಬುದನ್ನು “ಲೋಕತ್ರಯ” ಎಂದು ವಿಂಗಡಿಸುವುದಾದರೆ ಮೇಲೆ ಸ್ವರ್ಗ, ಕೆಳಗೆ ನರಕ, ನಡುವೆ ಭೂಮಿ. ಮತ್ತೆ ಭೂಮಿಯಲ್ಲೇ ಹುಟ್ಟಬಹುದು, ನರಕಕ್ಕೂ ಪತನಗೊಳ್ಳಬಹುದು, ಸ್ವರ್ಗಕ್ಕೂ ಏರಬಹುದು. ಹದಿನಾಲ್ಕು ಲೋಕ ಎಂದು ವಿಭಜಿಸುವುದಾದರೆ ಅತಲ, ವಿತಲ, ಸುತಲ, ತಲಾತಲ, ರಾಸಾತಲ, ಮಹಾತಲ, ಪಾತಾಲಗಳು ಇದು ಸಪ್ತ ಅಧೋಲೋಕಗಳು. ಇಲ್ಲಿ ‘ಅಜ್ಞಾನ’, ಕತ್ತಲು ಹೆಚ್ಚು, ದುಃಖ ಹೆಚ್ಚು. ಕೆಳಗೆ ಹೋದಂತೆ ಹೋದಂತೆ ಹೆಚ್ಚು ಹೆಚ್ಚು ಕತ್ತಲು, ಹೆಚ್ಚು ಹೆಚ್ಚು ದುಃಖ.
ಸಪ್ತ ಊರ್ಧ್ವಲೋಕಗಳು ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯ. ಈ ಏಳು ಊರ್ಧ್ವಲೋಕಗಳು.
ಈ ಏಳರಲ್ಲಿ ಮೊದಲ ಲೋಕ ಯಾವುದು? ಇದೇ ಲೋಕ.
ಭೂಲೋಕದಿಂದ ಮೇಲೆ ಎಲ್ಲಾ ತೇಜೋ ಲೋಕಗಳು. ಅಲ್ಲಿ ಅರಿವು ಹೆಚ್ಚು, ಆನಂದ ಹೆಚ್ಚು, ನೆಮ್ಮದಿ ಹೆಚ್ಚು ಇವೆಲ್ಲಾ ಸುಖದ ಲೋಕಗಳು. ಕೆಳಗೆ ಹೋದಂತೆ ತುಂಬಾ ಕ್ಲೇಶ, ಅಜ್ಞಾನ, ಅಂಧಕಾರ ಇರುವಂತಹ ಲೋಕಗಳು. ಹಾಗಾಗಿ ದುರ್ಗತಿ ಎಂದರೆ ಏನು? ಎಂದರೆ ಅಲ್ಲಿ ಹೋಗಿ ಹುಟ್ಟುತ್ತಾನೆ ಅವನು. ಆ ಕತ್ತಲೆಯಲ್ಲಿ, ಆ ನರಕದಲ್ಲಿ, ಆ ಕ್ಲೇಶದಲ್ಲಿ ಅವನ ಜನನವಾಗುವುದು.
ಸದ್ಗತಿ ಅಂದರೆ ಏನು? ಮೇಲೆ ಮೇಲಿನ ಲೋಕಗಳಲ್ಲಿ ಅವನು ದೇವತೆ ಆಗುತ್ತಾನೆ, ಯಕ್ಷನಾಗುತ್ತಾನೆ, ಗಂಧರ್ವನಾಗುತ್ತಾನೆ. ಇನ್ನೂ ಮೇಲಕ್ಕೆ ಹೋದರೆ ಬ್ರಹ್ಮಲೋಕದಲ್ಲಿ ಬ್ರಹ್ಮನ ಜೊತೆಯಲ್ಲಿ ವಾಸಮಾಡುತ್ತಾನೆ, ರುದ್ರನಲೋಕಕ್ಕೆ ಹೋಗಿ ಅವನ ಜೊತೆಯಲ್ಲಿ, ವೈಕುಂಠದಲ್ಲಿ ವಿಷ್ಣುವಿನ ಜೊತೆಯಲ್ಲಿ ವಾಸಮಾಡುತ್ತಾನೆ, ಆನಂದವನ್ನು ಹೊಂದುತ್ತಾನೆ. ಇದೆಲ್ಲಾ ಸದ್ಗತಿ.
“ಪರಗತಿ” ಎಂದರೆ, ನದಿ ಹೋಗಿ ಸಮುದ್ರದಲ್ಲಿ ಒಂದಾಗುವಂತೆ, ಎರಡು ದೀಪದ ಬತ್ತಿಗಳು ಕೂಡಿಸಿ ಇಟ್ಟರೆ ಒಂದೇ ಜ್ವಾಲೆ ಆಗುತ್ತದೆ ಹಾಗೆಯೇ ನಾವು ಪರಮಾತ್ಮನಲ್ಲಿ ಒಂದಾಗುತ್ತೇವೆ. ಇಡೀ ಈ ಪ್ರಪಂಚವನ್ನು ಸೃಷ್ಟಿಸಿದ್ದು ಯಾರೋ, ಯಾರು ಈ ಪ್ರಪಂಚದ ಅಂತರ್ಯಾಮಿಯೋ ಅಂತಹ ಮೂಲತತ್ವದಲ್ಲಿ ಮತ್ತೆ ಬೇರೆ ಆಗದಂತೆ ಒಂದಾಗುವಂತದ್ದು. ನಾವು ದೇವರು ಬೇರೆ ಇರಬಾರದು ಅದನ್ನು “ಪರಗತಿ” ಎನ್ನುತ್ತಾರೆ. ದುರ್ಗತಿ, ಸದ್ಗತಿಗಳನ್ನು ಮೀರಿದ್ದು ಪರಗತಿ. ಸಾವಿಲ್ಲದ ಸ್ಥಿತಿ ಬರಬೇಕು ಎಂದಾದರೆ ನಾವು ದೇವರಲ್ಲಿ ಒಂದಾಗಬೇಕು ಇದನ್ನು “ಪರಗತಿ” ಎಂದು ಕರೆಯುತ್ತಾರೆ.
ದುರ್ಗತಿ, ಸದ್ಗತಿ ಹೇಗೆ ಬರುತ್ತೆ ಎಂದರೆ, ಪುಣ್ಯ ಮಾಡಿದರೆ ಒಳ್ಳೆ ಲೋಕಕ್ಕೆ ಹೋಗುತ್ತಾನೆ. ಪಾಪ ಮಾಡಿದರೆ ಕೆಟ್ಟ ಜನ್ಮವನ್ನು ಪಡೆಯುತ್ತಾನೆ. ದುಃಖಗಳನ್ನು ಅನುಭವಿಸುತ್ತಾನೆ, ಕಷ್ಟ ಪಡುತ್ತಾನೆ.
ಪಾಪ, ಪುಣ್ಯ ಎಂದರೇನು?
ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳೂ ಪಾಪದಿಂದಲೇ.
ನಿಮಗೊಂದು ತೊಂದರೆ ಆಯಿತು ಎಂದಾದರೆ ಅದರ ಹಿಂದೆ ಪಾಪವಿದೆ. ಅಯ್ಯೋ ಪಾಪ! ಎಂದು ಹೇಳುತ್ತೇವೆ ಅದರ ಅರ್ಥ, ಯಾರೇ ಕಷ್ಟಪಡುತ್ತಿದ್ದರೂ ಅದರ ಹಿಂದೆ ಪಾಪವಿದೆ ಎಂದರ್ಥ. ಅದು ಇದ್ದ ಕಾರಣ ದುಃಖ ಬರುವುದು. ಹಾಗೆಯೇ ಒಳ್ಳೆಯದಾದಾಗ ನನ್ನ ಪುಣ್ಯ ಅಥವಾ ಅವನ ಪುಣ್ಯ ಎಂದು ಹೇಳುತ್ತೇವೆ ಅದರ ಅರ್ಥ ಯಾವುದೇ ಸುಖದ ಹಿಂದೆ, ಯಾವುದೇ ಶ್ರೇಯಸ್ಸಿನ ಹಿಂದೆ ಪುಣ್ಯವಿದೆ. ಪುಣ್ಯ ಪಾಪ ಹೇಗೆ ಬರುತ್ತದೆ? ಎಂದರೆ, ನಾವೇ ಅದನ್ನು ಮಾಡಿಕೊಳ್ಳವುದು. ಮುಂದೆ ನಮಗೆ ದುರ್ಗತಿ ಆಗಬೇಕು, ಸದ್ಗತಿ ಆಗಬೇಕು, ಪರಗತಿ ಆಗಬೇಕೆಂದರೆ ಅದು ನಮ್ಮ ಕೈಯಲ್ಲಿದೆ. ನಾವು ಮನುಷ್ಯರಾಗಿ ಹುಟ್ಟಿದ ಕಾರಣ ಪ್ರತಿಯೊಬ್ಬರಿಗೂ ಮುಕ್ತಿ ಹೊಂದುವುದಕ್ಕೆ ಅಧಿಕಾರವಿದೆ. ದುರ್ಗತಿಯನ್ನು ಕೂಡಾ ನಾವು ಅನುಭವಿಸಬಹುದು. ಹೇಗೆಂದರೆ ಮಾಡಬಾರದ ಕೆಲಸಗಳನ್ನು ಮಾಡಿದರೆ, ಕೆಟ್ಟ ಕೆಲಸಗಳನ್ನು ಮಾಡಿದರೆ. ಇದೆಲ್ಲಾ ನಮ್ಮ ಕೈಯಲ್ಲಿದೆ. ಹಾಗಾಗಿ ನಾವು ಮಾಡುವ ಕರ್ಮಗಳಿಂದ ಪುಣ್ಯವೂ ಬರಬಹುದು, ಪಾಪವೂ ಬರಬಹುದು. ಕರ್ಮಗಳನ್ನು ಮೀರುವಂತೆ ಮುಕ್ತಿಯನ್ನೂ ಪಡೆಯಬಹುದು. ನಾವು ಒಂದು ಒಳ್ಳೆಯ ಕೆಲಸ ಮಾಡಿದರೆ ಹಾಗೂ ಕೆಟ್ಟ ಕೆಲಸ ಮಾಡಿದರೆ ಅದು ಒಂದು ಗುರುತಾಗುತ್ತದೆ. ಅದನ್ನು ಓದುವವರು ಬೇರೆಯವರಿದ್ದಾರೆ.
ಪುಣ್ಯಪಾಪಗಳೆಂದರೆ ನಮ್ಮ ಜೀವನದಲ್ಲಿ ಬಿದ್ದ ಗುರುತುಗಳು(mark). ನೀವು ಒಳ್ಳೆಯ ಕೆಲಸ ಮಾಡಿದರೆ ಜೀವದ ಮೇಲೆ ಒಂದು ಚಿಹ್ನೆ ಆಗುತ್ತದೆ. ಹಾಗೆಯೇ ಕೆಟ್ಟ ಕೆಲಸ ಮಾಡಿದರೂ ಜೀವದ ಮೇಲೆ ಚಿಹ್ನೆ ಆಗುತ್ತದೆ. ಆ ಚಿಹ್ನೆಯನ್ನು ಓದುವವನು ಇದ್ದಾನೆ ಅವನು ನಿನಗೆ ಈ ಶಿಕ್ಷೆ, ನಿನಗೆ ಈ ಸುಖ ಎಂದು ಫಲವನ್ನು ಕಲ್ಪಿಸಿ ಕೊಡುತ್ತಾನೆ. ಹಾಗಾಗಿ ನಮ್ಮ ಜೀವಕ್ಕೆ ಕಲೆ ಆಗದಂತೆ ನೋಡಿಕೊಳ್ಳಬೇಕು, ಕೆಟ್ಟ ಕೆಲಸ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕಲೆ ಆದರೂ ಅದನ್ನು ಒರೆಸಿ ತೆಗೆಯಬೇಕು, delete ಮಾಡಬೇಕು ಅದನ್ನು. ಚಿತ್ರಗುಪ್ತ read ಮಾಡುವ ಮೊದಲೇ delete ಮಾಡಬೇಕು. ಗಂಗಾ ಸ್ನಾನ ಮಾಡಿದರೆ, ಅಶ್ವಮೇಧ ಯಾಗ ಮಾಡಿದರೆ ಪಾಪ ಪರಿಹಾರವಾಗುತ್ತದೆ. ನಮ್ಮ ಪೂರ್ವಜರು ಹೇಳಿರುವ ಎಷ್ಟೋ ದಾರಿಗಳಿವೆ. ಹಾಗಾಗಿ ಚಿತ್ರಗುಪ್ತ ಓದುವ ಮೊದಲು ನೀನು ಜಾಣನಂತೆ ಪಾಪವನ್ನು ಒರೆಸಿಟ್ಟುಬಿಡು.
ಈಗ ಯಮಲೋಕದ ವರ್ಣನೆಯನ್ನು ನೋಡೋಣ. ಏಕೆಂದರೆ ಪುಣ್ಯ ಮತ್ತು ಪಾಪ ಮಾಡಿದವರು ಎಲ್ಲಿ ಹೋಗುತ್ತಾರೆ? ಏನಾಗುತ್ತಾರೆ? ಎಂಬ ವಿವರಣೆ ಇದೆ ಅಲ್ಲಿ. ಯಮಲೋಕ ಹೇಗಿದೆ ಎಂದು ಗಮನಿಸಬೇಕು. ಯಮಲೋಕದ ಪರಿಚಯವಾದರೆ ಜೀವನ ನೋಡುವ ದೃಷ್ಟಿಯೇ ಬೇರೆ ಆಗುತ್ತದೆ. ಯಮಲೋಕ ಎಲ್ಲಿದೆ ಎಂದರೆ, ದಕ್ಷಿಣ ನೈಋತ್ಯಗಳ ಮಧ್ಯದಲ್ಲಿ. ದಕ್ಷಿಣದಿಕ್ಕಿನಿಂದ ಸ್ವಲ್ಪ ಬಲಕ್ಕೆ ಒತ್ತಿಬರುವ ಕೇಂದ್ರದಲ್ಲಿ, ಆ ದಿಕ್ಕಿನಲ್ಲಿ 86000 ಯೋಜನಗಳ ಕಾಲ ಸಾಗಿದರೆ ಯಮನಗರ ಸಿಗುತ್ತದೆ. ಸಾವಿರಾರು ಮೈಲುಗಳ ವಿಸ್ತಾರ. ರಾಮಾಯಣದಲ್ಲಿ ಯಮನಲೋಕದ ಬಗ್ಗೆ ವಿಸ್ತಾರವಾಗಿ ಹೇಳಿದ್ದಾರೆ. ಯಮಲೋಕವನ್ನು ಕಾಣಲು ಬೇರೆ ಕಣ್ಣುಗಳು ಬೇಕು. ಯಮಲೋಕಕ್ಕೆ ಹೋಗಲು ಕಾಲು ಬೇರೆ ಬೇಕು. ಯಮಲೋಕ ಹೇಗಿದೆ? ಹೇಗೆ ಕಾಣುತ್ತದೆ ಎಂದೆಲ್ಲಾ ವಿಸ್ತಾರವಾಗಿ ವಿವರಿಸಿದ್ದಾರೆ. ಯಮಲೋಕವನ್ನು ಕಂಡ ಕಣ್ಣುಗಳು ಇದ್ದವು ನಮ್ಮ ದೇಶದಲ್ಲಿ. ನಾವೂ ಕೂಡ ಸಾಧನೆಯ ಬಲದಿಂದ ಯಮನ ದರ್ಶನವನ್ನು ಮಾಡಬಹುದು.
ಯಮಲೋಕ ಹೇಗಿದೆ ಎಂದರೆ, “ಸರ್ವಂ ವಜ್ರಮಯಂ” ಇಡೀ ಯಮಲೋಕದ ಆಕಾರ ವಜ್ರದಿಂದಲೇ ನಿರ್ಮಾಣ ಆಗಿರುವಂತದ್ದು. ಅಲ್ಲೂ ಬಂದು ಆಕ್ರಮಣ ಮಾಡುವವರು ಇರುತ್ತಾರೆ. ಯಮಲೋಕದ ಮೇಲೆ ರಾವಣ ದಂಡೆತ್ತಿ ಹೋಗಿದ್ದನಂತೆ. ರಾವಣ ಅಲ್ಲಿಗೆ ಹೋಗಿ ಆಕ್ರಮಣ ಮಾಡಿದ್ದನಂತೆ. ಯಮನಿಗೆ ಕೋಪ ಬಂದು ಕಾಲದಂಡವನ್ನು ಮೇಲೆತ್ತಿದ್ದನಂತೆ. ಆಗ ಒಂದು ಅಶರೀರವಾಣಿ ಕೇಳಿಸುತ್ತದೆ, ಬ್ರಹ್ಮನ ಸೂಚನೆ ಬರುತ್ತದೆ. ಅದೇನೆಂದರೆ ಆಯಸ್ಸು ಮುಗಿದಿಲ್ಲ, ಅವನ ಸಂಹಾರ ನೀನು ಮಾಡುವುದಲ್ಲ ಎಂದು. ಆಗ ಯಮ, ರಾವಣನ ಕಣ್ಣಿಗೆ ಕಾಣದಂತೆ ತನ್ನ ಪರಿವಾರ, ಸೈನ್ಯದವರೊಡಗೂಡಿ ಅದೃಶ್ಯನಾಗಿ ಬಿಡುತ್ತಾನೆ. ಅಭೇದ್ಯವಾಗಿರುವಂತಹ ಕೋಟೆ ಅಲ್ಲಿ ಇದೆ. “ಅಭೇದ್ಯಮ್ ತತ್ ಸುರಾಸುರೈಃ” ದೇವತೆಗಳು, ಅಸುರರು ಯಾರೇ ಬಂದರೂ ಭೇದಿಸಲು ಅಸಾಧ್ಯವಾದಂತಹ ಕೋಟೆಯಿಂದ ರಕ್ಷಿತವಾಗಿದೆ ಆ ಯಮಪುರಿ. ಅದು “ದಿವ್ಯಂ” ಅಂದರೆ, ಈ ಕಣ್ಣಿನಿಂದ ಕಾಣುವಂತದ್ದಲ್ಲ. ಈ ಕಾಲಿನಿಂದ ಹೋಗುವಂತಹದಲ್ಲ. ಯಾವುದು ದಿವ್ಯವೋ ಅಂತಹದ್ದನ್ನು ನಮ್ಮ ಈ ಕಣ್ಣುಗಳಿಂದ ಕಾಣಲು ಸಾಧ್ಯವಿಲ್ಲ.
“ದಿವ್ಯಂದದಾಮಿ ತೇ ಚಕ್ಷುಃ” ಈ ಕಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಚರ್ಮಚಕ್ಷುವಿನಿಂದ ಕಾಣುವುದಲ್ಲ. ಇಡೀ ಯಮಲೋಕ ಚತುರಸ್ರ, ಅಂದರೆ ಚೌಕಾಕಾರದಲ್ಲಿ ಇದೆ. ನಾಲ್ಕು ದ್ವಾರಗಳು. ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ.
“ಉಚ್ಛಪ್ರಾಕಾರವೇಷ್ಟಿತಂ”, ಎತ್ತರದ ಕೋಟೆ ಯಮಲೋಕಕ್ಕೆ, “ಯೋಜನಾನಾಂ ಸಹಸ್ರಮ್ ಹಿ ಪ್ರಮಾಣೇನ ತತ್ಯುಚ್ಛತೇ” ಸಾವಿರಾರು ಯೋಜನಗಳು. ಅಂದರೆ ನೂರಾರು ಸಾವಿರ ಮೈಲುಗಳ ವಿಸ್ತಾರ ಆ ಲೋಕದ್ದು.
ಯಮಲೋಕದಲ್ಲಿ ದ್ವಿತೀಯ ಸ್ಥಾನ, ಯಮನ ನಂತರದ ಸ್ಥಾನ ಚಿತ್ರಗುಪ್ತನದ್ದು. ಅವನ್ಯಾಕೆ ಚಿತ್ರಗುಪ್ತ ಎಂದರೆ ಅವನು ಗುಪ್ತವಾಗಿ ನಮ್ಮ ತಪ್ಪು- ಸರಿ, ಹಣೆಬರಹ, ನಾವೇನು ಮಾಡುತ್ತಾ ಇದ್ದೇವೆ ಎಲ್ಲವನ್ನೂ ಉಲ್ಲೇಖ ಮಾಡುತ್ತಿರುತ್ತಾನೆ.
“ತಸ್ಮಿನ್ ಪುರಯಸ್ತಿ ಸುಭಗಂ ಚಿತ್ರಗುಪ್ತಸ್ಯ ಮಂದಿರಂ”
ಆ ಯಮ ನಗರಿಯಲ್ಲಿ ತುಂಬಾ ಸುಂದರವಾದಂತಹ ಒಂದು ಮಂದಿರ ಚಿತ್ರಗುಪ್ತನದ್ದೂ ಇದೆ. ಅದರ ವಿಸ್ತಾರ 25 ಯೋಜನಗಳು, ಅಂದರೆ 100 ಮೈಲಿ. ಎತ್ತರ 10 ಯೋಜನಗಳು. ಕಂಡು ಮರಳಿ ಬಂದಂತವರ ವರ್ಣನೆ ಇದು.
“ತಚೋಚ್ಛಿತಂ ಮಹಾ ದಿವ್ಯಂ ಲೋಹ ಪ್ರಾಕಾರ ವೇಷ್ಠಿತಂ, ಪ್ರತೋಲೀ ಶತಸಂಚಾರಂ ಪತಾಕಾ ಧ್ವಜ ಪೋಷಿತಂ”
ಲೋಹದ ಪ್ರಾಕಾರ ಇದೆಯಂತೆ. ನೂರಾರು ರಸ್ತೆಗಳಂತೆ. ಪತಾಕೆಗಳು, ಧ್ವಜಗಳು ಎಲ್ಲಾ ಶೋಭಿಸುತ್ತಾ ಇದೆಯಂತೆ. “ವಿಮಾನಗಣ ಸಂಕೀರ್ಣಂ” ನೂರಾರು ವಿಮಾನಗಳು ನಿಂತಿರುತ್ತವೆಯಂತೆ. ಪುಣ್ಯವಂತರನ್ನು ಕರೆದುಕೊಂಡು ಹೋಗಲು ಇರುವಂತದ್ದು ಅದು. “ಗೀತ ವಾದಿತ್ರ ನಾದಿತಂ” ಮನೋಹರವಾದ ಗೀತೆಗಳು, ವಾದ್ಯಗಳು ಕೇಳಿ ಬರುತ್ತಿರುತ್ತವೆಯಂತೆ. “ಚಿತ್ರಿತಂ ಚಿತ್ರ ಕುಶಲೈಃ” ಸುಂದರವಾದ ಚಿತ್ರಗಳು ರಚಿತವಾಗಿದೆಯಂತೆ. “ನಿರ್ಮಿತಂ ದೇವಶಿಲ್ಪಿಭಿಃ” ದೇವಶಿಲ್ಪಿಗಳು ಚಿತ್ರಗಳನ್ನು ರಚನೆ ಮಾಡುತ್ತಿರುತ್ತಾರೆ. ಹಾಗಾಗಿ ಚಿತ್ರಗುಪ್ತ ಪಾಪಿಯಲ್ಲ. ಪುಣ್ಯವಂತ. “ಉದ್ಯಾನೋಪವನೈರಮ್ಯಂ” ಉದ್ಯಾನವನಗಳು, ಉಪವನಗಳು ಅವನ ಮನೆಯ ಸುತ್ತಮುತ್ತ ಇದೆ. “ನಾನಾ ವಿವಿಧ ಕೂಜಿತಂ” ಬೇರೆ ಬೇರೆ ಪಕ್ಷಿಗಳ ಮಧುರವಾದ ಧ್ವನಿ, ಗಂಧರ್ವರು ಅಪ್ಸರೆಯರು ಎಲ್ಲರೂ ಸುತ್ತುವರೆದಿರುತ್ತಾರೆ ಭವನವನ್ನು.
ಆ ಸಭೆಯಲ್ಲಿ ಚಿತ್ರಗುಪ್ತ ಅಧ್ಭುತವಾದ ಸಿಂಹಾಸನವನ್ನೇರಿ ಕುಳಿತಿರುತ್ತಾನೆ. “ಗಣಯೇತ್ ಆಯುರ್ಮಾನುಷಾಣಾಂ ಯಥಾ ತಥಂ” ಅಲ್ಲಿ ಕುಳಿತು ಮನುಷ್ಯರ ಆಯಸ್ಸನ್ನು ಲೆಕ್ಕ ಮಾಡುತ್ತಾ ಇರುತ್ತಾನೆ. “ಸಂಸ್ಥಿತೋ ಗಣಯೇದಾಯುಃ” ಚಿತ್ರಗುಪ್ತ ಲೆಕ್ಕ ತಪ್ಪಿದರೆ? ಯಮಲೋಕದಲ್ಲಿ ಸುಳ್ಳು ಮೋಸಕ್ಕೆ ಎಡೆಯೇ ಇಲ್ಲ. ಅದನ್ನು ಮಾಡಲು ಸಾಧ್ಯವೇ ಇಲ್ಲ. “ನ ಮುಷ್ಯತಿ ಕದಂಚಿತ್ ಸಃ” ಯಾವ ಕಾರಣಕ್ಕೂ ಅವನಿಗೆ ಭ್ರಮೆ ಬರುವುದಿಲ್ಲ, ಲೆಕ್ಕ ತಪ್ಪುವುದಿಲ್ಲ. “ಸುಕೃತೇ ದುಷ್ಕೃತೇsಪಿ ವ” ನಾವು ಮಾಡಿದ ಪುಣ್ಯ ಇರಬಹುದು, ಪಾಪ ಇರಬಹುದು ಅದರ ಲೆಕ್ಕವನ್ನು ಇಡುತ್ತಾನೆ ಅವನು. ಎಲ್ಲಿಯೂ ಸಣ್ಣ ತಪ್ಪು ಕೂಡ ಆಗುವುದಿಲ್ಲ. ನೀವು ಏನು ತಪ್ಪು ಮಾಡಿರುತ್ತೀರೋ, ಒಳ್ಳೆಯದು ಮಾಡಿರುತ್ತೀರೋ, ಅದನ್ನು ಅನುಭವಿಸಲೇಬೇಕು. ಚಿತ್ರಗುಪ್ತನ ಶಾಸನ ಇದು.
ಚಿತ್ರಗುಪ್ತನ ಮನೆಯ ಹತ್ತಿರ ಯಮನ ಬೇರೆ ಬೇರೆ ಪರಿವಾರ ಇದೆ. ಪೂರ್ವ ದಿಕ್ಕಿನಲ್ಲಿ ಜ್ವರನ ಮನೆ ಇದೆ. ಜ್ವರ ಎನ್ನುವುದು ದೇವತೆ. ಅದು ನಮ್ಮ ಮೇಲೆ ಜ್ವರ ಉಂಟುಮಾಡುವುದು. ದಕ್ಷಿಣದಲ್ಲಿ ಶೂಲ. ಲೂತ ಮತ್ತು ವಿಸ್ಫೋಟ ಅಂತ ಇಬ್ಬರು. ಲೂತ ಅಂದರೆ ಚರ್ಮ ರೋಗ, ವಿಸ್ಫೋಟ ಅಂದರೆ ಸಿಡುಬು. ಪಶ್ಚಿಮದಲ್ಲಿ ಕಾಲಪಾಶ. ಅಜೀರ್ಣನ ಮನೆ ಕೂಡ ಪಶ್ಚಿಮದಲ್ಲಿಯೇ ಇದೆ. ಅಜೀರ್ಣ ಎಲ್ಲಾ ರೋಗಕ್ಕೂ ಮೂಲ. ಅರುಚಿ ಅಂದರೆ ರುಚಿ ಗ್ರಹಣ ಶಕ್ತಿ ಹೋಗುವಂತದ್ದು, ಅದು ಕೂಡ ಪಶ್ಚಿಮದಲ್ಲಿಯೇ ಇದೆ. ಉತ್ತರದಲ್ಲಿ ರಾಜಯಕ್ಷ್ಮ ರೋಗ ಅಥವಾ ಕ್ಷಯ ರೋಗ ಮತ್ತು ಪಾಂಡುರೋಗ. ಈಶಾನ್ಯದಲ್ಲಿ ತಲೆನೋವು, ಆಗ್ನೇಯದಲ್ಲಿ ಮೂರ್ಛೆ, ನೈಋತ್ಯದಲ್ಲಿ ಬೇಧಿ. ವಾಯುವ್ಯದಲ್ಲಿ ಶೀತರೋಗ ದೇವತೆ ಮತ್ತು ಉಷ್ಣರೋಗ ದೇವತೆ. ಹೀಗೆಯೇ ಈ ವ್ಯಾಧಿಗಳೆಲ್ಲ ಚಿತ್ರಗುಪ್ತನ ಮನೆಯ ಸುತ್ತಮುತ್ತ ಇದೆಯಂತೆ. ಇವೆಲ್ಲಾ ಸೇರಿ ಯಮನ ಪರಿವಾರ. ಯಮನ ಕಾರ್ಯ ತಪ್ಪಿಗೆ ಶಿಕ್ಷೆ ಕೊಡುವುದು. ಅದನ್ನು ಈ ಲೋಕದಲ್ಲಿಯೂ ಕೊಡಬಹುದು, ಆ ಲೋಕದಲ್ಲಿಯೂ ಕೊಡಬಹುದು. ಈ ದೇಹಕ್ಕೆ ಅನುಭವಿಸಲು ಸಾಧ್ಯವಾದರೆ ಇಲ್ಲಿ, ಆಗದೇ ಇದ್ದರೆ ಅಲ್ಲಿ. ಏಕೆಂದರೆ ಮನುಷ್ಯ ಶರೀರಕ್ಕೆ ಒಂದು ಮಿತಿ ಇದೆ. ಸ್ವಲ್ಪ ವೇದನೆ ಜಾಸ್ತಿ ಆದರೆ ಎಚ್ಚರ ತಪ್ಪುತ್ತದೆ, ಜೀವ ಹೋಗುತ್ತದೆ. ಖುಷಿಗೂ ಹಾಗೆ. ಅಷ್ಟು ಖುಷಿ ತಡೆಯುವ ಶಕ್ತಿಯೂ ಇಲ್ಲ, ಅಷ್ಟು ವೇದನೆ ತಡೆಯುವ ಶಕ್ತಿಯೊ ಇಲ್ಲ. ಹಾಗಾಗಿ ಹೆಚ್ಚಿನ ಸುಖ ಅನುಭವಿಸುವುದಾದರೆ ಬೇರೆ ಲೋಕ, ಬೇರೆ ಶರೀರ. ಅದು ದಿವ್ಯ ಶರೀರ. ಹಾಗೆಯೇ ಹೆಚ್ಚಿನ ವೇದನೆ ಅನುಭವಿಸುವುದಾದರೆ ಅದಕ್ಕೆ ನರಕ ಲೋಕ ಮತ್ತು ಯಾತನಾ ಶರೀರ. ಯಾತನಾ ಶರೀರ ಅಂದರೆ ಕುದಿಯುವ ಎಣ್ಣೆಯಲ್ಲಿ ಹಾಕಿ ಕುದಿಸುತ್ತಾರೆ, ಬೇಯಿಸುತ್ತಾರೆ, ಆದರೆ ಜೀವ ಹೋಗುವುದಿಲ್ಲ. ನರಕ ಹೇಗಿದೆ ಎಂದರೆ ಅಂಥ ಪಾಪಗಳನ್ನು ಮಾಡಿದರೆ ಇಲ್ಲಿ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಅದಕ್ಕೆ ಬೇರೆಯದೇ ವ್ಯವಸ್ಥೆ ಇದೆ. ಹಾಗಾಗಿ ವ್ಯಾಧಿಗಳಿಗೆ ಎರಡು ಕೆಲಸ. ಅವು ಇಲ್ಲಿ ಬಂದು ಶಿಕ್ಷ ಕೊಡುತ್ತವೆ. ಮಾಡಿದ ತಪ್ಪುಗಳಿಗೆ, ಪಾಪ ಪರಿಹಾರಕ್ಕೆ ಬರುವಂತದ್ದು ಅವು. ರೋಗ ಎಂದರೆ ಒಂದು ಟ್ರೀಟ್ಮೆಂಟ್. ಯಾವುದಕ್ಕೆ ಟ್ರೀಟ್ಮೆಂಟ್ ಅಂದರೆ ಪಾಪಕ್ಕೆ. ಕೆಲವೊಮ್ಮೆ ಅದೇ ರೋಗವೇ ಬಂದು ಯಮನ ಮನೆಗೆ ಕರೆದುಕೊಂಡು ಹೋಗುತ್ತವೆ. ಹಾಗಾಗಿ ಕೆಲವು ಇಲ್ಲಿ ಕ್ಲೇಶಗಳನ್ನು ಕೊಡುತ್ತವೆ, ಕೆಲವೊಮ್ಮೆ ಕರೆದುಕೊಂಡು ಹೋಗುತ್ತವೆ.
ಚಿತ್ರಗುಪ್ತನ ಮನೆಯಿಂದ 20 ಯೋಜನ ದೂರದಲ್ಲಿ ಯಮಲೋಕದ ಮಧ್ಯ ಕೇಂದ್ರದಲ್ಲಿ ಮಹಾದಿವ್ಯವಾದ ಯಮಧರ್ಮನ ಮನೆ ಇದೆಯಂತೆ. “ಮಹಾದಿವ್ಯಂ ಧರ್ಮರಾಜಸ್ಯ ಮಂದಿರಂ, ಅಸ್ತಿ ರತ್ನಮಯಂ ದಿವ್ಯಂ” ಆ ಮನೆ ರತ್ನಗಳಿಂದ ಕಟ್ಟಿರುವಂತದ್ದು. “ವಿದ್ಯುಜ್ವಾಲಾರ್ಕ ವರ್ಚಸಂ” ಮಿಂಚಿನಂತಹ ಪ್ರಭೆ ಇದೆಯಂತೆ. ಅಂತಹ ತೇಜೋಮಯವಾದ ಭವನವಂತೆ ಯಮರಾಜನದ್ದು. 200 ಯೋಜನ ವಿಸ್ತಾರ, ಎತ್ತರ 50 ಯೋಜನಗಳು. “ಧೃತಂ ಸ್ತಂಭ ಸಹಸ್ರೈಶ್ಚ” ಸಾವಿರಾರು ಸ್ತಂಭಗಳು. “ವೈಢೂರ್ಯ ಮಣಿ ಮಂಡಿತಂ” ಎತ್ತ ನೋಡಿದರತ್ತ ವಜ್ರ ವೈಢೂರ್ಯಗಳು, ಮರಕತಗಳು. “ಕಾಂಚನಾಲಂಕೃತಂ” ಚಿನ್ನ ಎಲ್ಲಿ ನೋಡಿದರಲ್ಲಿ. “ನಾನಾ ಹರ್ಮ್ಯ ಪ್ರಾಸಾದ ಸಂಕುಲಮ್” ಅನೇಕ ಕಟ್ಟಡಗಳ ಸಮುಚ್ಚಯ ಅದು. ಅನೇಕ ಭವನಗಳು, ಉಪ್ಪರಿಗೆ ಮನೆಗಳು ಎಲ್ಲವೂ ಇದೆ ಅಲ್ಲಿ. ಪಕ್ಕನೆ ನೋಡಿದರೆ ಚಳಿಗಾಲದ ಮೋಡದಂತೆ ಬೆಳ್ಳಗೆ ಇದೆಯಂತೆ. ಕಲಶಗಳಿವೆಯಂತೆ. “ರತ್ನ ಕಲಶೇ” ಸುಮನೋಹರ ಚಿನ್ನದ ಕಲಶಗಳು. “ಚಿತ್ರ ಸ್ಫಟಿಕ ಸೋಪಾನಂ” ವಿಶೇಷ ಸ್ಫಟಿಕದ ಮೆಟ್ಟಿಲುಗಳು. ಕೆಲವು ಕಡೆ ವಜ್ರವೇ ಹಾಸಿದೆಯಂತೆ. “ವಜ್ರ ಕುಟ್ಯಂ ಭೂಷಿತಂ” ವಜ್ರಭೂಮಿಗಳು, ನೆಲಕ್ಕೆ ಪೂರ್ತಿ ವಜ್ರವೇ ಇದೆ. ಇಂತಹ ಭವನ ಯಮರಾಜನದು.
ಕೃಷ್ಣನ ಬಗ್ಗೆ ನೀಲಾಶಕ ಸುಂದರವಾಗಿ ವರ್ಣನೆ ಮಾಡುತ್ತಾನೆ. “ರತ್ನಸ್ಥಲೇ ಜಾನುಚರಃ ಕುಮಾರಃ” ಕೃಷ್ಣ ರತ್ನಭೂಮಿಯಲ್ಲಿ ಅಂಬೆಗಾಲೂರಿ ಓಡಾಡುತ್ತಾ ಇದ್ದಾನೆ, ಅವನಿಗೆ ಅವನ ಮುಖವೇ ಕಾಣಿಸುತ್ತದೆಯಂತೆ ನೆಲದಲ್ಲಿ. ಹಾಗಿದೆ ನೆಲ. ಕಂಡಾಗ ಅವನಿಗೆ ಅವನ ಮುಖ ಆಕರ್ಷಿತವಾಗಿ ಕಾಣಿಸುತ್ತದೆಯಂತೆ. ಆ ಮುಖ ತಗೋಬೇಕು ಅಂತ ಕೈ ಹಾಕಿದರೆ ಸಿಗೋದೇ ಇಲ್ಲ. “ಆದಾತು ಕಾಮಃ ತದ ಲಾಭ ಖೇದಾತ್” ಆ ಮುಖವನ್ನು ಎತ್ತಿಕೊಳ್ಳುವುದಕ್ಕೆ ಬರದೇ ಇದ್ದಾಗ ದಾದಿಯ ಮುಖ ನೋಡಿ ಅತ್ತನಂತೆ. ಕೃಷ್ಣ ಎಂದರೆ ಆಕರ್ಷಣೆ ಅಂತ ಅರ್ಥ. ಅಂತಹ ಸೆಳೆತ. ಅವನಿಗೇ ಆ ಸೆಳೆತ. ಹಾಗಾಗಿಯೇ ತನ್ನ ಬಲಗಾಲ ಹೆಬ್ಬೆರಳನ್ನು ಬಾಯೊಳಗೆ ಇಟ್ಟುಕೊಳ್ಳುತ್ತಾನೆ ಕೃಷ್ಣ. “ಕರಾರವಿಂದೇನ ಪದಾರವಿಂದಂ, ಮುಖಾರವಿಂದೇನ ವಿನಿವೇಶಯಂತಂ” ಕರವೂ ಕಮಲ, ಪಾದವೂ ಕಮಲ, ಮುಖವೂ ಕಮಲವೇ. ಹಾಗಾಗಿ ಒಂದು ಕಮಲವನ್ನು ಮತ್ತೊಂದು ಕಮಲದಲ್ಲಿ ಎತ್ತಿಕೊಂಡು ಇನ್ನೊಂದು ಕಮಲದಲ್ಲಿ ಇಟ್ಟುಕೊಂಡ. ಕರ ಕಮಲದಿಂದ ಪದ ಕಮಲವನ್ನೆತ್ತಿ ಮುಖ ಕಮಲದಲ್ಲಿಟ್ಟುಕೊಂಡ. ಹಾಗೆಯೇ ವಜ್ರ ಭೂಮಿಗಳಿವೆ ಯಮನ ಭವನದಲ್ಲಿ. ಮುತ್ತಿನಿಂದ ರಚನೆಯಾದ ಜಾಲರಿಗಳಿರುವ ಕಿಟಕಿಗಳಿವೆಯಂತೆ. ಧ್ವಜಗಳು, ಅಲ್ಲಲ್ಲಿ ಘಂಟಾನಾದ, ಚಿನ್ನದ ಕಮಾನುಗಳು. ಎಲ್ಲಾ ಕಡೆ ಆಶ್ಚರ್ಯ. ಚಿನ್ನದ ನೂರಾರು ಬಾಗಿಲುಗಳು. ಹಾಗೆಯೇ ಸುತ್ತ ಮರಗಳು, ಲತೆಗಳು. ಯಾವುದರಲ್ಲಿಯೂ ಮುಳ್ಳಿಲ್ಲ. ಮನೆಯ ತುಂಬಾ ಹತ್ತಿರ ಗುಲಾಬಿ ಗಿಡ ನೆಡಬಾರದು. ಯಾಕೆಂದರೆ ಮುಳ್ಳಿದೆ ಅದರಲ್ಲಿ. ಮುಳ್ಳಿದ್ದರೆ ಚುಚ್ಚೋದು ಮಾತ್ರವಲ್ಲ, ಮನೆಯ ತುಂಬಾ ಹತ್ತಿರ ಮುಳ್ಳಿನ ಗಿಡಗಳಿದ್ದರೆ ಮನೆಯಲ್ಲಿ ಕಲಹಗಳು, ಜಗಳಗಳು ಆಗುತ್ತಾ ಇರುತ್ತವೆ. ಮನೆಯ ಒಳಗೆ ನೆಮ್ಮದಿ ಬೇಕೆಂದರೆ ಮುಳ್ಳಿನ ಗಿಡಗಳನ್ನು ತುಂಬಾ ಹತ್ತಿರ ಇಟ್ಟುಕೋಬಾರದು. ಇದ್ದರೂ ತುಂಬಾ ದೂರದಲ್ಲಿ ವಾಸ್ತುವಿನಿಂದ ಹೊರಗೆ ಇರಬೇಕು. ಯಮನ ಮನೆಯಲ್ಲಿ ಹತ್ತಿರದಲ್ಲೆಲ್ಲೂ ಮುಳ್ಳಿನ ಗಿಡಗಳಿಲ್ಲ. ಅಲ್ಲಿರುವ ಗಿಡಗಳೆಲ್ಲ ನಿಷ್ಕಂಟಕ. ಯಮನ ಮನೆಯನ್ನು ಕಟ್ಟಿದವನು ಯಾರೆಂದರೆ ದೇವಶಿಲ್ಪಿ ವಿಶ್ವಕರ್ಮ. “ಆತ್ಮಯೋಗ ಪ್ರಭಾವೈಶ್ಚ” ಅವನು ತನ್ನ ತಪಸ್ಸಿನ ಪ್ರಭಾವದಿಂದ ಕಟ್ಟಿರುವಂತದ್ದು. ಹಾಗಾಗಿಯೇ ಅಷ್ಟು ಅದ್ಭುತವಾದ ಭವನ ಯಮನದ್ದು.
ಮುಂದೆ ಯಮನ ಸಭೆಯ ವರ್ಣನೆ ಇದೆ. ಅದನ್ನು ನಾಳೆ ನೋಡೋಣ. ಯಮ ಎಂದರೆ ಕೆಟ್ಟವನಲ್ಲ. ಹೇಗೆ ಪೊಲೀಸ್ ಅಧಿಕಾರಿ ಕಳ್ಳರು, ಕೊಲೆಗಡಕರು, ಕೆಟ್ಟವರ ಪಾಲಿಗೆ ಕಠೋರನಾಗಿರುತ್ತಾನೋ ಹಾಗೆಯೇ ಯಮ. ಆದರೆ ಅದರಿಂದಾಗಿಯೇ ಒಳ್ಳೆಯವರು ಚೆನ್ನಾಗಿ ಇರಬಹುದು, ಇಡೀ ಸಮಾಜ ನಿಶ್ಚಿಂತೆಯಿಂದ ಇರಬಹುದು. ಹಾಗೆಯೇ ಇಡೀ ಜಗತ್ತಿನ ಪೊಲೀಸ್ ವ್ಯವಸ್ಥೆಯ ಮುಖ್ಯಸ್ಥ ಯಮಧರ್ಮ. ಇಡೀ ಜಗತ್ತಿನ ಸಮಸ್ತ ಸೃಷ್ಟಿಯ ಕಾನೂನುಗಳನ್ನು ಪಾಲನೆ ಮಾಡುವ ದೊಡ್ಡ ಅಧಿಕಾರಿ ಆತ. ನೋಡಲು ಕಠೋರನಾದರೂ ಒಳಗಡೆ ಬೆಣ್ಣೆಯಂತಹ ಹೃದಯ ಇದೆ ಯಮನಿಗೆ. ಕನಿಕರ ಇದೆ. ಅವನು ಏನು ಮಾಡುತ್ತಾನೋ ಅದು ಒಳ್ಳೆಯದಕ್ಕೆ ಮಾಡುವಂತದ್ದು. ನಾವು ತಪ್ಪು ಕೆಲಸ ಮಾಡಿದಾಗ ಆತ್ಮದ ಮೇಲೆ ಕಲೆಯಾಗುತ್ತದೆ, ಒಳ್ಳೆಯ ಕೆಲಸ ಮಾಡಿದಾಗ ಒಳ್ಳೆಯ ಗುರುತು ಮೂಡುತ್ತದೆ. ಯಮ ಈ ಜೀವಗಳನ್ನು ತೊಳೆದು ಶುದ್ಧ ಮಾಡುತ್ತಾ ಇರುತ್ತಾನೆ. ಯಮನ ಮನೆ ಎಂದರೆ ಜೀವಗಳನ್ನು ಎತ್ತಿ ಕಲೆ ತೊಳೆಯುವಂತದ್ದು. ಕಲೆ ತೆಗೆಯುವಾಗ ನೋವಾಗುವುದು ಸಹಜ. ಅಂಟಿದ್ದನ್ನು ತೆಗೆಯುವಾಗ ನೋವಾಗುತ್ತದೆ. ಹಾಗೆಯೇ ಪಾಪ ಅಂಟಿಕೊಂಡಿದೆ ಜೀವಕ್ಕೆ. ಆಸ್ಪತ್ರೆ ಎಂದರೆ ಒಂದು ತರಹ ನರಕದಂತೆಯೇ, ತುಂಬಾ ವ್ಯತ್ಯಾಸವೇನಿಲ್ಲ. ಆದರೆ ಆಸ್ಪತ್ರೆ ಹಿಂದಿರುವುದು ಕನಿಕರ. ನರಕವೂ ಹಾಗೆಯೇ. ಅದೊಂದು ದೊಡ್ಡ ಆಸ್ಪತ್ರೆ. ಅದು ಜೀವಕ್ಕೆ ಚಿಕಿತ್ಸೆ ಕೊಡುವ ಆಸ್ಪತ್ರೆ, ದೇಹಕ್ಕಲ್ಲ. ಜೀವಕ್ಕೆ ಹಿಡಿದಿರುವ ರೋಗಗಳನ್ನು ಗುಣ ಮಾಡಲು ಇರುವ ಆಸ್ಪತ್ರೆ. ಸ್ವಲ್ಪ ನೋವಾಗುತ್ತದೆ ಆವಾಗ. ಆದರೆ ಒಳ್ಳೆಯದು ಕೂಡ ಇದೆ ಯಮಲೋಕದಲ್ಲಿ. ಎರಡು ಭಾಗ ಅದು. ಮೂರು ಬಾಗಿಲಿನಿಂದ, ಮೂರು ದಿಕ್ಕಿನಿಂದ ಬಂದರೆ ಅದು ತುಂಬಾ ಸುಂದರ, ಸುಮನೋಹರ. ಒಂದು ಭಾಗದಲ್ಲಿ, ದಕ್ಷಿಣ ಭಾಗದಲ್ಲಿ ಕೆಟ್ಟು ಹೋದ ಜೀವಗಳಿಗೆ ಚಿಕಿತ್ಸೆ ಕೊಡುವ ವ್ಯವಸ್ಥೆ ಇರುತ್ತದೆ. ಜೀವಗಳನ್ನು ಗುಣ ಮಾಡಿ, ಪಾಪಗಳನ್ನು ತೊಳೆದು ಮತ್ತೆ ಈ ಲೋಕಕ್ಕೆ ಕಳಿಸಿಕೊಡುವಂತಹ ಆಸ್ಪತ್ರೆ ಯಮಲೋಕ. ಸ್ನಾನ ಮಾಡುವಾಗ ಮಗು ಅಳುವುದೇಕೆ? ಹಾಗೆಯೇ ಯಮನೆಂದರೆ ತಾಯಿ ಇದ್ದಂತೆಯೇ. ನಾವೆಲ್ಲ ಮಕ್ಕಳಿದ್ದಂತೆ. ಪಾಪಿಗಳು ಕೂಡ ಇರುತ್ತಾರೆ ಮಕ್ಕಳಲ್ಲಿ. ಹಾಗಾಗಿ ಯಮನೆಂದರೆ ನೆಗೆಟಿವ್ ಕಲ್ಪನೆಗಳು ಬೇಡ. ಧರ್ಮ ದೇವ ಅವನು. ಧರ್ಮದ ಸಾಕ್ಷಾತ್ ರೂಪ. ಕರುಣಾಳು ಕೂಡ ಹೌದು. ಅವನು ಕ್ರೌರ್ಯವನ್ನು ವ್ಯಕ್ತಪಡಿಸಿದರೂ ಅದರ ಹಿಂದೆ ಕಾರುಣ್ಯ ಇದ್ದೇ ಇದೆ. ನಾವೆಲ್ಲ ಪುಣ್ಯವಂತರು. ಯಾಕೆಂದರೆ ಯಮಲೋಕದ ವರ್ಣನೆಯನ್ನು ಯಾರೆಲ್ಲಾ ಕೇಳುತ್ತಾರೆಯೋ ಅವರ ಮೇಲೆ ಯಮನ ಅನುಗ್ರಹ ಇರುತ್ತದೆ. ಯಮನ ಕಾರುಣ್ಯ ಇರುತ್ತದೆ. ಅಂತಹ ವೇದನೆಗಳನ್ನು ಅನುಭವಿಸುವಂತಹ ಸಂದರ್ಭಗಳು ಕಡಿಮೆಯಾಗುತ್ತವೆ. ನಾಳೆ ಯಮ ಸಭೆಯ ಅವಲೋಕನೆಯನ್ನು, ಆ ಚಿಂತನೆಯನ್ನು ಮಾಡೋಣ.
Jagadguru Shankaracharya SriSri Raghaveshwara Bharati Mahaswamiji – “Jeevayaana” – Pravachana – Akshararoopa
#Jeevayaana
#SriSamsthana
#SriRaghaveshwaraBharatiSwamiji
#SriMatha
Leave a Reply