ಕಣ್ಮುಚ್ಚಿ ಭಗವಂತನನ್ನೊಮ್ಮೆ ಭಾವಿಸಿ. ಏಕೆಂದರೆ ತತ್ತ್ವವನ್ನು ಅವನೇ ತೆರೆದುಕೊಡಬೇಕು. ತಾನ್ಯಾರು ಎಂಬುದನ್ನು ಅವನೇ ನಮಗೆ ತಿಳಿಸಿಕೊಡಬೇಕು. ಅದಿಲ್ಲದಿದ್ದರೆ ಎಷ್ಟು ಹೇಳಿದರೂ, ಎಷ್ಟು ಕೇಳಿದರೂ ಅದು ಅರ್ಥವಾಗುವುದಿಲ್ಲ. ಮನಸ್ಸಿಗದು ಮುಟ್ಟುವುದಿಲ್ಲ. ಹಾಗಾಗಿ ಒಮ್ಮೆ ಕಣ್ಮುಚ್ಚಿ ಒಳಗಿರುವ ಆ ಪರಮಾತ್ಮನನ್ನು ಭಾವಿಸಿ, ನಿನ್ನ ಗುಟ್ಟನ್ನು ನೀನೇ ಬಿಚ್ಚಿಕೊಡು ಎಂದು ಪ್ರಾರ್ಥಿಸಿ ಆ ಬಳಿಕ ಮುಂದುವರೆಯೋಣ.
ನಿನ್ನೆಯ ಪ್ರವಚನದಲ್ಲಿ ಕೆಲವು ತತ್ತ್ವಗಳನ್ನು ನಾವು ಉಲ್ಲೇಖ ಮಾಡಿದ್ದೆವು. ಪ್ರವಚನ ಬಾಳೆಹಣ್ಣಾದರೆ ತತ್ತ್ವ ಅದರ ತಿರುಳು. ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದಂಥದ್ದು. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವಂಥದ್ದು. ನಿನ್ನೆ ಉಲ್ಲೇಖ ಮಾಡಿದ ತತ್ತ್ವಗಳು :
ಮುಂದಾಲೋಚನೆ : ನಾವಿಂದು ವಿದ್ಯಾಭ್ಯಾಸ ಮಾಡಿದರೆ ಅದು ನಮ್ಮ ಜೀವನದ ಕೊನೆಯವರೆಗೂ, ಜೀವನದ ಬಳಿಕವೂ ಉಪಯೋಗಕ್ಕೆ ಬರಬೇಕು. ಈ ದೇಹ ಬಿದ್ದುಹೋಗುವಂಥದ್ದು. ಅದು ಬಿದ್ದುಹೋದ ನಂತರವೂ ವಿದ್ಯೆ ಉಪಯೋಗಕ್ಕೆ ಬರಬೇಕು. ಹಾಗಾಗಿಯೇ ನಾವು ವಿದ್ಯಾಭ್ಯಾಸ ಮಾಡುತ್ತಿರುವಂಥದ್ದು. ಹಾಗಾಗಿ ವಿದ್ಯಾಭ್ಯಾಸವೂ ಕೂಡಾ ಮುಂದಾಲೋಚನೆ. ಅದು ದೂರದೃಷ್ಟಿ.
ಯಜ್ಞ, ದಾನ, ಶ್ರದ್ಧೆ, ಲೋಭ.
ತಪ್ಪನ್ನು ಕಂಡು ಕಣ್ಮುಚ್ಚಿ ಕೂರದಿರುವಂಥದ್ದು.
ಇಂತಹ ಅನೇಕ ತತ್ತ್ವಗಳನ್ನು ನಿನ್ನೆ ನಾವು ಕಥೆಯ ಸಮಯದಲ್ಲಿ ಗಮನಿಸಿದೆವು. ಕಥೆ ಹೇಳುವುದು ಏಕೆ ಎಂದರೆ, ಕಥೆಯು ಸ್ವಲ್ಪ ರುಚಿಯಾಗಿರುತ್ತದೆ. ತತ್ತ್ವವು ಔಷಧದಂತೆ ಇರುತ್ತದೆ. ನೇರವಾಗಿ ಔಷಧ ಕೊಟ್ಟರೆ ನಮಗೆ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಜೇನಿನಲ್ಲಿ ಬೆರೆಸಿ ಕೊಟ್ಟರೆ ಇಷ್ಟವಾಗುತ್ತದೆ. ಹಾಗೆಯೇ ಕಥೆಯೆಂಬ ಜೇನಿನಲ್ಲಿ ತತ್ತ್ವವೆಂಬ ಔಷಧವನ್ನು ಬೆರೆಸಿ ಕೊಡುವಂಥದ್ದು. ಆ ಕಹಿಯನ್ನು ಸಿಹಿಯಾಗಿಸಿ ಕೊಡುವಂಥದ್ದು, ನೆನಪಿರಲಿ ಎಂದು. ನಾಳೆ ನಚಿಕೇತ ಎಂದರೆ ಈ ಎಲ್ಲಾ ತತ್ತ್ವಗಳೂ ನೆನಪಾಗಬೇಕು. ನಚಿಕೇತ ಹೇಗೂ ನೆನಪಿನಲ್ಲಿರುವವನು. ನೀವೆಲ್ಲಾ ನಚಿಕೇತರಾಗಬೇಕು. ಅವನಂತೆ ದೂರದೃಷ್ಟಿಯುಳ್ಳವರಾಗಬೇಕು. ಅಂತಹ ದೃಢತೆಯುಳ್ಳವರಾಗಬೇಕು, ಅಂತಹ ಧೀರರಾಗಬೇಕು. ಯಮನನ್ನೇ ಭೇಟಿ ಮಾಡುವಂತಹ ಧೈರ್ಯ ಅವನದು. ಅಂತಹ ಧೈರ್ಯವುಳ್ಳವರಾಗಬೇಕು. ಈಗ ಇನ್ನೊಂದು ತತ್ತ್ವವನ್ನೊಮ್ಮೆ ಕಂಡು ನಂತರ ಮುಂದಕ್ಕೆ ಹೋಗೋಣ.
ಅದು EGO ಎಂಬ ಆಂಗ್ಲಶಬ್ದ. ಅಂದರೆ ದುರಹಂಕಾರ. ಅಹಂಕಾರ ಸ್ವಲ್ಪ ಕೆಟ್ಟರೆ ಅದು Ego. ಅಹಂಕಾರ ಎಲ್ಲರಿಗೂ ಇದೆ. “ನಾನು” ಎಂಬುದು ಇದ್ದೇ ಇದೆ. ಅದು ಹೋದರೆ ಜೀವನವೇ ಇಲ್ಲ. ’ನಾನು’ ಎನ್ನುವುದರಿಂದಲೇ ಬದುಕು ನಡೆಯುತ್ತಿರುವಂಥದ್ದು. ಅದು ಯಾವಾಗಲೂ ಇದೆ. ಅದು ಸಾತ್ವಿಕ ಅಹಂಕಾರ. ಜೀವನ ನಿರ್ವಹಣೆಗೆ ಬೇಕು ಅದು. ದುರಹಂಕಾರವೆಂದರೆ ಅಲ್ಲದೇ ಇರುವಂತಹದ್ದನ್ನು ‘ನಾನು’ ಎಂದುಕೊಂಡುಬಿಡುವುದು. ಕೆಟ್ಟ ಪರಿಣಾಮವನ್ನುಂಟುಮಾಡುವ ‘ನಾನು’ ಎನ್ನುವುದನ್ನು ದುರಹಂಕಾರ ಅಥವಾ Ego ಎಂದು ಕರೆಯುತ್ತಾರೆ. ನಿನ್ನೆ ಗಮನಿಸಿದ್ದು ವಾಜಶ್ರವಸನ Ego. ‘ಅಪ್ಪ ನನ್ನನ್ನು ಯಾರಿಗೆ ಕೊಡುವಿರಿ?’ ಎಂದು ನಚಿಕೇತ ಕೇಳಿದಾಗ ವಾಜಶ್ರವಸನಿಗೆ ಕೋಪ ಬಂತು ಏಕೆಂದರೆ ಅವನ Ego hurt ಆಗಿದೆ. ‘ನನಗೆ ಗೊತ್ತಿಲ್ಲವೇ? ನನಗೆ ಯಾರಾದರೂ ಬುದ್ಧಿ ಹೇಳುವುದೆಂದರೆ ಏನು? ನಾನೆಲ್ಲಿಯಾದರೂ ತಪ್ಪು ಮಾಡುತ್ತೇನೆಯೇ?’ ವಾಜಶ್ರವಸ ತಪ್ಪು ಮಾಡಲು ಸಾಧ್ಯವೇ ಇಲ್ಲ ಎನ್ನುವಂತಹ ಒಂದು ಭಾವ. ಅದು Ego. ದೇಹ ನಾನು ಎಂಬುದೇ ದೊಡ್ಡ ಭ್ರಮೆಯಂತೆ. ದೇಹ ನಾನಲ್ಲ. ದೇಹಾತೀತ ಆತ್ಮ ನಾನು. ಇದು ಅದಕ್ಕಿಂತ ಮುಂದೆ, ಅಲ್ಲದಿರುವುದನ್ನೆಲ್ಲಾ ಹೌದು ಎಂದುಕೊಂಡುಬಿಡುವುದು. ನಾನೇನೋ special ಎಂದುಕೊಂಡುಬಿಡುವುದು. ನಮಗೆಲ್ಲರಿಗೂ ಸ್ವಲ್ಪ ಇದೆ ಈ ಭಾವ. ಅದಕ್ಕೆ ತಕ್ಕನಾಗಿ ವರ್ತಿಸುವುದು. ಏನೋ ಒಂದು ಗತ್ತು. ಹಾಗೆಯೇ ಅದಕ್ಕೆ ತಕ್ಕಂತೆ ಬೇರೆಯವರು ವರ್ತಿಸಬೇಕೆಂದು ನಿರೀಕ್ಷೆ ಮಾಡುವುದು. ಹಾಗೆ ವರ್ತಿಸದಿದ್ದಾಗ ವಿಚಲಿತವಾಗುವಂಥದ್ದು, ಕೋಪಗೊಳ್ಳುವಂಥದ್ದು, ಬೇಸರವಾಗುವಂಥದ್ದು, ಅವರ ಮೇಲೆ ದ್ವೇಷ ಬರುವಂಥದ್ದು. ಹೀಗೆಲ್ಲಾ ಆಗುವಂಥದ್ದು. Ego ಒಂದು ವಿಷಜಂತು. ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾ ಹೊಗುತ್ತದೆ ಅದು. ಬಾಂಧವ್ಯಗಳನ್ನು ಹಾಳುಮಾಡುತ್ತಾ ಹೋಗುತ್ತದೆ ಅದು. ಕಾರಣವಿಲ್ಲದೇ ನಮ್ಮ ಒಡನಾಡಿಗಳೊಡನೆ, ಕುಟುಂಬದವರೊಡನೆ ಕೋಪದಿಂದ, ಬೇಸರದಿಂದ ವರ್ತಿಸುವಂತೆ ಮಾಡುತ್ತದೆ. ಇಲ್ಲಿ ಆಗಿದ್ದು ಅದೇ. ವಾಜಶ್ರವಸ ತಾನೇನೋ ಎಂದುಕೊಂಡುಬಿಟ್ಟಿದ್ದಾನೆ. ತಕ್ಕಂತೆ ನಚಿಕೇತನೂ ಸೇರಿದಹಾಗೆ ಎಲ್ಲರೂ ವರ್ತಿಸಬೇಕು. ವರ್ತಿಸದೇ ಇದ್ದಾಗ ವಿಚಲಿತನಾಗುತ್ತಾನೆ, ಕೋಪಗೊಳ್ಳುತ್ತಾನೆ. ಎಷ್ಟು ದೊಡ್ಡ ಅನಾಹುತವಾಗುತ್ತದೆ ಈ Ego ಪರಿಣಾಮವಾಗಿ. ಚಿನ್ನದಂತಹ ಮಗ, ರತ್ನದಂತಹ ಮಗ, ಅಂತಹ ಮಕ್ಕಳು ಬೇಕು ಎಂದು ನಾವು ಆಸೆ ಪಟ್ಟು, ತಪಸ್ಸು ಮಾಡಬೇಕು. ಇಂತಹ ಒಬ್ಬ ಪುತ್ರರತ್ನನನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ. ನಚಿಕೇತನು ತಾನಾಗಿ ಯಮನೂರಿಗೆ ಹೋಗುತ್ತೇನೆಂದು ಹೇಳಲಿಲ್ಲ. ವಾಜಶ್ರವಸನೇ ಹೇಳಿದ್ದು ‘ನಿನ್ನನ್ನು ಯಮನಿಗೆ ಕೊಟ್ಟೆ’ ಎಂದು. Ego ಇಂದ ಯಾರಿಗೆ ನಷ್ಟ? ಯಾರಿಗೆ Ego ಇದೆಯೋ ಅವನಿಗೇ ತುಂಬಾ ನಷ್ಟ ಆಗುವುದು. ಅದರ ಜಾಗದಲ್ಲಿ ವಿನಯ ಇದ್ದರೆ ತುಂಬಾ ಲಾಭಗಳಾಗುತ್ತವೆ. ನಮಗೆ ಎಲ್ಲರೂ ಒಳ್ಳೆಯವರಾಗುತ್ತಾರೆ. ನಮಗೆ ಎಲ್ಲರೂ ಒಳ್ಳೆಯದನ್ನು ಮಾಡುತ್ತಾರೆ. ಆದರೆ ವಿನಯದ ಬದಲಿಗೆ Ego ಇದ್ದರೆ ಶತ್ರುಗಳು ಸೃಷ್ಟಿಯಾಗುತ್ತಾರೆ. ದುರ್ಭಾವನೆಗಳು ಸೃಷ್ಟಿಯಾಗುತ್ತವೆ. ಬಾಂಧವ್ಯಗಳು ಮುರಿಯುತ್ತವೆ. ಇಲ್ಲಿ ಕೂಡಾ ಅಂಥದ್ದೇ ಒಂದು ಆಗಿಹೋಗಿದೆ.
ನಮ್ಮಂತಹ ಜೀವಿಗಳು ಸಹಸ್ರಕೋಟಿ ಇದ್ದಾವೆ. ನಮಗಿಂತಲೂ special ಎನ್ನುವವರು ಎಷ್ಟು ಜನರಿಲ್ಲ ಪ್ರಪಂಚದಲ್ಲಿ? ನಾನೇನು ಮಹಾ? ನಮಗೇಕೆ ನಾವು special ಎನ್ನಿಸಬೇಕು? ಕಣ್ಣುಬಿಟ್ಟು ಪ್ರಪಂಚವನ್ನು ನೋಡಬೇಕು. ಎಷ್ಟೆಲ್ಲಾ ವಿಶಿಷ್ಟವಾಗಿರುವಂತಹ ವ್ಯಕ್ತಿಗಳು, ಜೀವಿಗಳು ಪ್ರಪಂಚದಲ್ಲಿ ಇರುತ್ತವೆ. ಗೋವು ಎಂಬುದು ಎಷ್ಟು ಶ್ರೇಷ್ಠವಾಗಿರುವಂತಹ ಪ್ರಾಣಿ, ಅಲ್ಲವೇ? ಅದಕ್ಕೆ ಮಾತು ಬರದೇ ಇರಬಹುದು. ಆದರೆ ಅದರ ಗುಣಗಳು ನಮಗಿವೆಯೇ? ಅದರ ಶ್ರೇಷ್ಠತೆ ನಮಗಿದೆಯೇ? ತುಳಸಿ ಗಿಡ ಅಥವಾ ಯಾವುದೋ ಒಂದು ಗಿಡ, ಮರ. ಅದರಲ್ಲಿ ಎಷ್ಟೋ ಗುಣಗಳಿವೆ. ಹಾಗಾಗಿ ನಾನೇನೋ special ಎಂದುಕೊಂಡುಬಿಡುವುದು, ಅದಕ್ಕೆ ತಕ್ಕಂತೆ ಹಾವ-ಭಾವಗಳನ್ನು ಮಾಡುವುದು, ಬೇರೆಯವರಿಂದ ನಿರೀಕ್ಷೆ ಮಾಡುವುದು ಎನ್ನುವ ಹಾಗೆ ಯಾವುದೇ ಕಾರಣಕ್ಕೂ ಆಗಕೂಡದು. Ego ದ ದೊಡ್ಡ ಸಮಸ್ಯೆ ಏನೆಂದರೆ, ಯಾರಿಗೆ Ego ಇದೆಯೋ, ಅವರ ತಪ್ಪನ್ನು ಯಾರೂ ಹೇಳುವಂತೆ ಇಲ್ಲ. ಇದರಿಂದ ನಷ್ಟ ಯಾರಿಗೆ? ನಿಮ್ಮ ತಪ್ಪನ್ನು ನಿಮಗೆ ಹೇಳಿದರೆ ತಿದ್ದಿಕೊಳ್ಳುತ್ತೀರಿ. ತಿದ್ದಿಕೊಂಡಾಗ ನಿಮ್ಮ ವ್ಯಕ್ತಿತ್ತ್ವ ಉತ್ತಮವಾಗುತ್ತದೆ. ಹೇಳದೇ ಇದ್ದರೆ ತಪ್ಪು ಹಾಗೆಯೇ ಉಳಿದುಕೊಳ್ಳುತ್ತದೆ, ಬೆಳೆದುಕೊಳ್ಳುತ್ತದೆ. ಮುಂದೊಂದು ದಿನ ಮುಳುವಾಗುತ್ತದೆ. ನಮ್ಮ ದೋಷಗಳು ದೂರವಾಗಬೇಕು, ನಮ್ಮ ಕೆಡುಕುಗಳು ಇಲ್ಲವಾಗಬೇಕು. ಯಾರಾದರೂ ಹೇಳುವವರು ಬೇಕು. ನಮ್ಮ ಗುರುಗಳು, ಹಿರಿಯರು, ಸ್ನೇಹಿತರು, ಯಾರಾದರೂ ನಮ್ಮ ದೋಷಗಳನ್ನು ಹೇಳುವವರು ಬೇಕು, ಗುಣಗಳನ್ನಲ್ಲ.
ವಿಭೀಷಣನು ರಾವಣನಿಗೆ ಬುದ್ಧಿಮಾತನ್ನು ಹೇಳುತ್ತಾನೆ. “ಮರಳಿ ಕೊಟ್ಟುಬಿಡು ರಾಮನಿಗೆ ಸೀತೆಯನ್ನು. ನಾವೆಲ್ಲರೂ ಲಂಕೆಯಲ್ಲಿ ಚೆನ್ನಾಗಿರೋಣ. ರಾಮನೂ ಸೀತೆಯೊಂದಿಗೆ ಚೆನ್ನಾಗಿರಲಿ”. ವಿಭೀಷಣನ ಮಾತನ್ನು ರಾವಣ ಸ್ವೀಕಾರ ಮಾಡಲಿಲ್ಲ. ವಿಭೀಷಣನಿಗೆ ಅವಮಾನ ಮಾಡಿದ. ಏಕೆಂದರೆ ಸಭಾಮಧ್ಯದಲ್ಲಿ ರಾವಣನ ತಪ್ಪನ್ನು ವಿಭೀಷಣ ಎತ್ತಿ ಹೇಳಿದ್ದರಿಂದ ರಾವಣನ Ego hurt ಆಗಿತ್ತು. ಹಾಗಾಗಿ ಆಡಬಾರದ ಮಾತುಗಳನ್ನು ವಿಭೀಷಣನಿಗಾಡುತ್ತಾನೆ. ಆಳಿಗಿಂತ ಕಡೆಯಾಗಿ ಅವನನ್ನು ಅವಮಾನ ಮಾಡುತ್ತಾನೆ. ವಿಭೀಷಣ ರಾವಣನನ್ನು ಬಿಟ್ಟುಬಂದು ರಾಮನಿಗೆ ಶರಣಾದ. ಮುಂದೊಂದು ದಿನ ಬಂತು. ಅನೇಕ ರಾಕ್ಷಸರ ವಧೆಯಾಗಿತ್ತು. ಕೊನೆಗೆ ಕುಂಭಕರ್ಣನ ವಧೆಯಾದಾಗ ರಾವಣ ಪಶ್ಚಾತ್ತಾಪ ಪಡುತ್ತಾನೆ. ಧರ್ಮಾತ್ಮನಾದ ವಿಭೀಷಣ ಆಡಿದ ಶುಭವಾದ ಮಾತು ಈಗ ಸತ್ಯವಾಗುತ್ತಿದೆ. ಅಂದು ಅವನ ಮಾತನ್ನು ಕೇಳಿದರೆ ಇಂದು ಹೀಗಾಗುತ್ತಿರಲಿಲ್ಲ’ ಎಂದು ರಾವಣನು ಮುಂದೊಂದು ದಿನ ಹೇಳುವಂತಾಯಿತು. Ego ಇಂದ ಆಗಿದ್ದೇನು? ರಾವಣನ Ego ಪ್ರಸಿದ್ಧವಾಗಿರುವಂಥದ್ದು. ಅವನು ಹೇಳುತ್ತಾನೆ, “ಅಪಿದ್ವಿಧಾ ವಿಭಜ್ಯೇಯಂ ನ ನಮೇಯಂ ಕದಾಚನಾ”, ‘ನಾನು ಎರಡಾಗಿ ತುಂಡಾಗಿ ಹೋದೇನು ಆದರೆ ಬಗ್ಗುವವನಲ್ಲ’ ಎಂದು. ಕಲ್ಲಿನ ಕಂಬ ತುಂಬಾ ಬಗ್ಗಿಸಿದರೆ ಮುರಿದು ಹೋಗುತ್ತದೆ ಆದರೆ ಬಗ್ಗುವುದಿಲ್ಲ. ಬಿದಿರಾದರೆ ಬಾಗುತ್ತದೆ. ಬಾಗಿದವನು ಬಾಳಿಯಾನು, ಬಾಗದವನು ಕಲ್ಲಿನ ಕಂಬದಂತೆ ಮುರಿದೇ ಹೋದಾನು. ನಾನು ಬಾಗುವವನಲ್ಲ ಎಂಬುದು Ego ದ ಪರಿಣಾಮ. Ego ಸೆಟೆಯುವ ಹಾಗೆ ಮಾಡುತ್ತದೆ, ವಿನಯ ಬಾಗುವ ಹಾಗೆ ಮಾಡುತ್ತದೆ. ಹಾಗಾಗಿ ತಾಳಿದವನು ಬಾಳಿಯಾನು ಮಾತ್ರ ಅಲ್ಲ, ಬಾಗಿದವನು ಕೂಡಾ ಬಾಳಿಯಾನು.
ಇನ್ನು ಕೋಪ. ವಾಜಶ್ರವಸನಿಗೆ ಕೋಪ ಬಂತು. ಕೋಪವೆಂಬುದು ಬೆಂಕಿ. ಬೆಂಕಿ ಮೊದಲು ಯಾವುದನ್ನು ಸುಡುವುದು? ಎಲ್ಲಿ ಬೆಂಕಿ ಇದೆಯೋ ಅದನ್ನು ಮೊದಲು ಸುಡುವುದು. ಕೊಳ್ಳಿಯಲ್ಲಿ ಬೆಂಕಿ ಇದ್ದರೆ, ಆ ಬೆಂಕಿ ಮೊದಲು ಸುಡುವುದು ಕೊಳ್ಳಿಯನ್ನು. ಯಾವುದು ತನಗೆ ಆಶ್ರಯವನ್ನು ಕೊಟ್ಟಿದೆಯೋ ಆ ಆಶ್ರಯವನ್ನು ಮೊದಲು ಸುಡುವುದು ಬೆಂಕಿಯ ಸ್ವಭಾವ. ಕೋಪ ಕೂಡಾ ಹಾಗೆಯೇ. ಅದೊಂದು ಜಾತಿಯ ಬೆಂಕಿ. ಅದು ತಾನು ಎಲ್ಲಿದೆಯೋ ಅದನ್ನು ಮೊದಲು ಸುಟ್ಟು ಆಮೇಲೆ ಬೇರೆಡೆಯಲ್ಲಿ ಬಿಸಿ ತಟ್ಟುವಂಥದ್ದು. ಹಾಗಾಗಿ ಯಾರಿಗೆ ಕೊಪ ಬಂದಿದೆಯೋ ಮೊದಲು ಅವರಿಗೆ ತೊಂದರೆಯಾಗುತ್ತೆ. ಅದು ಮೊದಲು ಅವರನ್ನು ಸುಡುತ್ತದೆ. ತಪಿಸುವಂತೆ ಮಾಡುತ್ತದೆ ಅದು. ಆಮೇಲೆ ಎಷ್ಟು ಅನಾಹುತಗಳಾಗಬಹುದೆಂದು ಊಹಿಸಲೂ ಸಾಧ್ಯವಿಲ್ಲ. ಏನಾದರೂ ಆಗಬಹುದು. ಸಿಟ್ಟಿಗೆ ಬುದ್ಧಿ ಕೊಟ್ಟಾಗ ಮನುಷ್ಯ ಮಾಡದ ತಪ್ಪಿಲ್ಲ. ಅದಕ್ಕೆ ತುಂಬಾ ಉದಾಹರಣೆಗಳಿವೆ. ಮೊದಲು ತನ್ನನ್ನು ಸುಟ್ಟು ಮುಂದೆ ಯಾರ ಮೇಲೆ ಬಂದಿದೆಯೋ ಅವರನ್ನು, ಈ ನಡುವೆ ಯಾರು ಯಾರನ್ನೋ ಸುಡುವುದು ಕೋಪದ ಸ್ವಭಾವ. ವಾಜಶ್ರವಸನ ಕಥೆಯೂ ಅದೇ. ಕೋಪ ಬಂತು. ಸುಟ್ಟಿದ್ದು ಯಾರನ್ನು? ತನ್ನನ್ನೇ. ತಾನು ತನ್ನ ಮಗನನ್ನು ಕಳೆದುಕೊಳ್ಳುವಂತೆ ಆಯಿತು. ನಚಿಕೇತನನ್ನು ಇವೆಲ್ಲಾ ಸುಡಲು ಸಾಧ್ಯವಿಲ್ಲ. ಹಾಗಾಗಿ ಯಾರಿಗೆ ತಾಪ ಉಂಟಾಯಿತೆಂದರೆ ಅದು ವಾಜಶ್ರವಸನಿಗೆ. ಕೋಪದ್ದು ಕೂಡಾ ಒಂದು ವಂಶಾವಳಿ ಇದೆ. ಕೋಪ ಸೃಷ್ಟಿ ಆಗಿದ್ದು ಹೇಗೆಂದು ಗೊತ್ತಾ ನಿಮಗೆ? ಪ್ರಳಯಕಾಲದ ಅಂತ್ಯದಲ್ಲಿ ಬ್ರಹ್ಮದೇವನಿಂದ ಕೋಪ ಸೃಷ್ಟಿಯಾಯಿತು. ಇದು ಕಲ್ಕಿಪುರಾಣದ ಪ್ರಥಮ ಅಂಶದಲ್ಲಿದೆ. ಪ್ರಳಯಕಾಲದ ಅಂತ್ಯದಲ್ಲಿ ಬ್ರಹ್ಮದೇವರ ಪೃಷ್ಠಭಾಗದಿಂದ ಘೋರರೂಪದ ಅಧರ್ಮದ ಸೃಷ್ಟಿಯಾಯಿತು. ಅದರ ಹಿಂದೆಯೇ ಸುಳ್ಳಿನ ಸೃಷ್ಟಿಯಾಯಿತು. ಮಿಥ್ಯೆಗೆ ಬೆಕ್ಕಿನ ಕಣ್ಣುಗಳು. ಎಲ್ಲರನ್ನೂ ಮರುಳು ಮಾಡುವಂತಹ ಸ್ವಭಾವ. ಹೀಗೆ ಸುಳ್ಳು, ಅಧರ್ಮ ಒಟ್ಟಿಗೆ ಸೃಷ್ಟಿಯಾಗಿರುವುದು. ಅವೆರಡೂ ಅಣ್ಣ-ತಂಗಿ ಇದ್ದ ಹಾಗೆ. ಅಣ್ಣ-ತಂಗಿಯಾದರೂ ಅಧರ್ಮವಾದ್ದರಿಂದ ಅದು ತನ್ನ ತಂಗಿಯನ್ನೇ ಮದುವೆಯಾಗಿರುವಂಥಹದ್ದು. ಅಧರ್ಮ ಮತ್ತು ಮಿಥ್ಯೆ ಮದುವೆಯಾಗಿ ಒಂದು ಸಂತತಿ ಹುಟ್ಟಿತು ಅದು ದಂಭ ಮತ್ತು ಮಾಯೆ. ಮತ್ತೆ ಈ ಅಣ್ಣ-ತಂಗಿಯೇ ಮದುವೆಯಾದರು. ಅವರ ಸಂಸಾರದ ಫಲವೇ ಲೋಭ ಮತ್ತು ನಿಕೃತಿ. ನಿಕೃತಿ ಎಂದರೆ ವಂಚನೆ. ಮತ್ತೆ ಲೋಭ ಮತ್ತು ನಿಕೃತಿ ಅವರಿಬ್ಬರೇ ಮದುವೆಯಾದರು. ಹಾಗೆ ಹುಟ್ಟಿದ್ದು ಕ್ರೋಧ. ಅದರ ತಂಗಿ ಹಿಂಸೆ. ಸಿಟ್ಟು ಎನ್ನುವುದು ಮೈಲಿಗೆ. ಸ್ನಾನ ಮಾಡಿ, ರೇಷ್ಮೆ ಮಡಿಯುಟ್ಟು, ದೇವರ ಮುಂದೆ ಕುಳಿತಾಗ ಕೋಪ ಬಂದರೆ ಮೈಲಿಗೆಯೇ, ಅದು ಮಡಿಯಲ್ಲ. ಚಂಡಾಲ ಎಂಬ ಶಬ್ಧ ಚಂಡ ಎಂಬ ಶಬ್ದದಿಂದ ಬಂದಿದೆ. ಚಂಡ ಎಂದರೆ ಪರಮಕೋಪಿಷ್ಠ ಎಂದರ್ಥ. ಹಾಗಾಗಿ ಕೋಪ ಮೈಲಿಗೆ. ಇಂತಹ ಕೆಟ್ಟ ವಂಶವಿದೆ ಕೋಪಕ್ಕೆ. ಅದು ಬಂದರೆ ಮಾಡುವುದು ಅನರ್ಥವನ್ನೇ.
ಬ್ರಹ್ಮದೇವನ ಹುಬ್ಬಿನಿಂದ ಕೋಪದ ಉತ್ಪತ್ತಿಯಾದ ಇನ್ನೊಂದು ಬಗೆಯ ವಿವರಣೆ ಭಾಗವತದಲ್ಲಿದೆ. ರಾಮನೂ ರಾವಣ ಇದಿರಾದಾಗ ಕ್ರೋಧವನ್ನು ತಂದುಕೊಂಡ. ಅದು ಮೈಲಿಗೆಯಲ್ಲ. ಬ್ರಹ್ಮದೇವನ ಉತ್ತಮಾಂಗದಿಂದ ಹುಟ್ಟಿದ ಕ್ರೋಧ ಅದು. ಬರಬೇಕಾದಲ್ಲಿ, ಬರಬೇಕಾದಾಗ ಕೋಪ ಬಂದರೆ ಅದು ಗುಣವಾಗಲೂಬಹುದು. ಆದರೆ ಬೇರೆಯದೆಲ್ಲಾ ದೋಷ, ಕೆಟ್ಟದ್ದು. ಕೆಟ್ಟದ್ದನ್ನೇ ಮಾಡುವುದು.
ವಾಜಶ್ರವಸನಿಗೆ ಎಂತಹ ಕೋಪ ಬಂತು? ಆದ ಪರಿಣಾಮ ಏನೆಂದರೆ ‘ನಿನ್ನನು ಮೃತ್ಯುವಿಗೇ ಕೊಟ್ಟೆ’ ಎಂದ. ನಚಿಕೇತ ತಂದೆಯ ಮಾತನ್ನು ನಡೆಸಬೇಕೆಂದು ಎದ್ದು ಹೊರಟ. ತಂದೆಯ ಮಾತನ್ನು ನಡೆಸಬೇಕು. ರಾಮಾಯಣ ಏಕಾಯಿತು? ತಂದೆಯಾಡಿದ ಮಾತು ಸುಳ್ಳಾಗಬಾರದು ಎಂಬ ರಾಮನ ಭಾವದ ಪರಿಣಾಮವಾಗಿ ಇಷ್ಟೆಲ್ಲಾ ಘಟನಾವಳಿಗಳು. ಎಂತಹ ತ್ಯಾಗಗಳನ್ನು ಮಾಡುತ್ತಾನೆ ರಾಮ. ನಚಿಕೇತ ಕೂಡಾ ಹಾಗೆಯೇ. ಸಾವಿಗೆ ನಿನ್ನನ್ನು ಕೊಟ್ಟೆ, ಎಂದರೂ ಕೂಡಾ ಏಕೆಂದು ಕೇಳಲಿಲ್ಲ. ಯಮನೂರಿಗೆ ಎದ್ದು ಹೊರಟೇ ಬಿಟ್ಟ. ಸಾವಿನ ಅರಮನೆಗೆ ಹೊರಟ ನಚಿಕೇತ. ಅಂತಹ ಧೈರ್ಯ ಎಲ್ಲರಿಗೂ ಬರಬೇಕು. ಅವನಂತಹ ವಿವೇಕವೂ ಬರಬೇಕು. ನಚಿಕೇತನ ಜೊತೆಯಲ್ಲಿ ಯಾರಿದ್ದರು? ನಚಿಕೇತನ ಜೊತೆ ದೈವವಿತ್ತು. ಅವನನ್ನು ಕುರಿತಾಗಿ, ಅವನಿಗೆ ಮಾತ್ರ ಕೇಳುವಂತೆ ಒಂದು ವಾಣಿಯಾಯಿತು. ಆ ವಾಣಿ ನಚಿಕೇತನಿಗೆ ದಾರಿ ತೋರಿಸಿತು. ಆ ವಾಣಿ ನಚಿಕೇತನಿಗೆ ಹೇಳಿತಂತೆ, ‘ಯಮನೂರಿಗೆ ಹೋಗು ನಚಿಕೇತ. ಅಲ್ಲಿ ನೀನು ಹೋದಾಗ ಯಮನಿರುವುದಿಲ್ಲ. ಮೂರು ಹಗಲು, ಮೂರು ರಾತ್ರಿ ಅಲ್ಲಿರು. ಆದರೆ ಏನನ್ನೂ ತಿನ್ನದಿರು, ಕುಡಿಯದಿರು, ಏನನ್ನೂ ಸ್ವೀಕರಿಸದಿರು. ಯಮ ತಿರುಗಿ ಬಂದು ಮಗೂ ಎಷ್ಟು ರಾತ್ರಿಗಳಾಯಿತು ನೀನಿಲ್ಲಿ ಬಂದು? ಎಂದು ಕೇಳುತ್ತಾನೆ, ಮೂರೆಂದು ಹೇಳು. ಆಗ ಅವನು ಮೊದಲ ಹಗಲು ರಾತ್ರಿ ಏನು ಸ್ವೀಕರಿಸಿದೆ? ಎಂದು ಕೇಳಿದರೆ, ನಿನ್ನ ಮಕ್ಕಳನ್ನು ಎಂದು ಹೇಳು. ಎರಡನೇ ದಿನ ನಿನ್ನ ಪಶುಗಳನ್ನು, ಮೂರನೇ ದಿನ ನಿನ್ನ ಪುಣ್ಯವನ್ನು, ನೀನು ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳನ್ನು ತಿಂದೆ ಎಂದು ಹೇಳು’ ಎಂದು ಆ ದೈವೀ ವಾಣಿ ಹೇಳಿತು. ನಾವು ಸತ್ಯದ ಜೊತೆಗಿದ್ದರೆ, ಒಳ್ಳೆಯ ದಾರಿಯಲ್ಲಿದ್ದರೆ ನಮ್ಮ ಜೊತೆ ಬೇರೆ ಯಾರಿಲ್ಲದಿದ್ದರೂ ದೇವರು ಇರುತ್ತಾರೆ. “ನಹಿ ಧರ್ಮಾವಿರಕ್ತಾನಾಂ ಭಯಂ” ಯಾರು ಧರ್ಮದ ಜೊತೆಗಿರುತ್ತಾರೆಯೋ ಅವರಿಗೆ ಭಯವಿಲ್ಲ. ಅವರು ನಿರ್ಭೀತರು. ಹಾಗೆಯೇ ನಚಿಕೇತನ ಜೊತೆಗೆ ದೈವ ಇತ್ತು. ಅದು ಆತನಿಗೆ ಧೈರ್ಯವನ್ನು ತಂದು ಕೊಟ್ಟಿತು.
ನಚಿಕೇತ ಹೊರಟಿದ್ದು ಯಮಲೋಕಕ್ಕೆ ಅದು
“ಯಾಮ್ಯ ನೈರ್ಋತ್ಯಾಯೋರ್ಮಧ್ಯೇ ಪುರಂ ವೈವಸ್ವತಸ್ಯ ತತೋ”
ನೈಋತ್ಯ ದಿಕ್ಕು ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳ ಮಧ್ಯೆ ಬರುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕುಗಳ ಮಧ್ಯೆ ಈಶಾನ್ಯ ದಿಕ್ಕು ಬರುತ್ತದೆ. ಇದು ಎರಡು ಶುಭ ದಿಶೆಗಳ ಮಧ್ಯ ಬರುವಂತದ್ದು. ಹಾಗೆಯೇ ಪೂರ್ವ ಮತ್ತು ದಕ್ಷಿಣಗಳ ಮಧ್ಯೆ ಆಗ್ನೇಯ, ಇನ್ನು ವಾಯುವ್ಯ ದಿಕ್ಕು ; ಇದು ಉತ್ತರ ಮತ್ತು ಪಶ್ಚಿಮದ ಮಧ್ಯ ಬರುವಂತದ್ದು. ಎರಡು ಅಶುಭ ದಿಕ್ಕುಗಳ ಮಧ್ಯೆ ಬರುವ ದಿಕ್ಕು ನೈರುತ್ಯ. ಹಾಗೆಯೇ ವಾಯುವ್ಯ ಮತ್ತು ಆಗ್ನೇಯ ಇವೆರಡು ಮಿಶ್ರ.
ಯಮಲೋಕ ಅಥವಾ ಪಿತೃ ಲೋಕ ಅನ್ನುವಂತದ್ದು ತುಂಬ ದೂರದ ದಾರಿ. ಆ ದಿಕ್ಕೇ ಮುಗಿದ ಮೇಲೆ ಸೈಯಮಿನೀ ಪಟ್ಟಣ ಸಿಗುವಂತದ್ದು ಕಟ್ಟಕಡೆಗೆ ಬರುವಂತದ್ದು. ಆ ನಗರದ ವಿಸ್ತಾರ ಸಾವಿರಾರು ಯೋಜನಗಳು. ಒಂದು ಯೋಜನ ಅಂದರೆ ಸುಮಾರು ನಾಲ್ಕು ಮೈಲು. ಒಂದು ಕ್ರೋಶ ಅಂದ್ರೆ ಒಂದು ಸಾವಿರ ಧನುಸ್ಸು ಅಂದಾಜು 1 ಮೈಲು. ಎರಡು ಕ್ರೋಶ ಅಂದರೆ ಒಂದು ಗವ್ಯುತಿ. ಎರಡು ಗವ್ಯುತಿ ಎಂದರೆ ಒಂದು ಯೋಜನ. ಅಲ್ಲಿ ಚಿತ್ರಗುಪ್ತನ ಮಂದಿರವೂ ಇದೆ. ಅದು 25 ಯೋಜನ ಅಂದರೆ ಸುಮಾರು ನೂರು ಮೈಲಿ ವಿಸ್ತಾರ ಇದೆಯಂತೆ. ಅದರ ಸುತ್ತಮುತ್ತಲು ಯಮನಿಗೆ ಸಹಕಾರ ಕೊಡುವವರ ಮನೆ ಇದೆಯಂತೆ. ಪೂರ್ವಕ್ಕೆ ಜ್ವರನ ಮನೆ, ದಕ್ಷಿಣಕ್ಕೆ ಶೂಲ, ಲೂಥ ವಿಸ್ಪೋಟ ಅಂದರೆ ಸಿಡುಬು, ಪಶ್ಚಿಮಕ್ಕೆ ಕಾಲಪಾಶ, ಅಜೀರ್ಣ, ಅರುಚಿ ಇವರ ಮನೆ ಇದೆ, ಉತ್ತರ ದಿಕ್ಕಿಗೆ ರಾಜಯಕ್ಷ್ಮ, ಪಾಂಡು ರೋಗ, ಈಶಾನ್ಯಕ್ಕೆ ತಲೆನೋವು, ಆಗ್ನೇಯಕ್ಕೆ ಮೂರ್ಛೆ, ನೈರುತ್ಯಕ್ಕೆ ಅತಿಸಾರ ಅಂದರೆ ಭೇದಿ, ವಾಯುವ್ಯಕ್ಕೆ ಶೀತದಿಂದ ಉಷ್ಣದಿಂದ ಬರುವ ಖಾಯಿಲೆಗಳು. ಚಿತ್ರಗುಪ್ತನ ಮನೆಯ ಸುತ್ತ ವ್ಯಾಧಿಗಳ ಮನೆಗಳು. ಚಿತ್ರಗುಪ್ತನ ಮನೆಯಾಚೆಗೆ ಯಮನ ಮನೆ ಇದೆಯಂತೆ ರತ್ನಮಯವಾದ ಮಿಂಚಿನ ತೇಜಸ್ಸಿನಿಂದ ಕೂಡಿದಂತಹ 200 ಯೋಜನಗಳ ವಿಸ್ತಾರ 50 ಯೋಜನೆಗಳ (200 ಮೈಲಿಯ) ಸ್ತಂಭಗಳ ಮನೆ. ಅಲ್ಲಿ ಯಮನ ಸಭೆ. ಹಸಿವೆ, ಬಾಯಾರಿಕೆ, ಬಿಸಿ, ಶೀತ, ದುಃಖ, ಮುಪ್ಪು ಇಲ್ಲದ ಜಾಗ.
ಸೈಯಮಿನೀ ಪಟ್ಟಣವು ಚತುರಸ್ರಾಕಾರವಂತೆ ಅಂದರೆ ಚೌಕಾಕಾರ. ಅಲ್ಲಿಗೆ ಬರಲು 4 ದ್ವಾರಗಳು. ಆ ನಾಲ್ಕು ದ್ವಾರಗಳಲ್ಲಿ ಮೂರರಲ್ಲಿ ಪುಣ್ಯವಂತರು ಬರುತ್ತಾರೆ ಅಂತೆ. ಪಾಪಿಗಳಿಗೆ ಒಂದೇ ದ್ವಾರ ಅದು ದಕ್ಷಿಣ ದ್ವಾರ.
ಜೀವನವಿಡೀ ಒಳ್ಳೆಯ ಕೆಲಸ ಮಾಡಿ ಸಾತ್ವಿಕ ರೀತಿಯಲ್ಲಿ ಇದ್ದವರು ಪೂರ್ವ, ಪಶ್ಚಿಮ, ಉತ್ತರದ ದ್ವಾರಗಳಲ್ಲಿ ಬರುತ್ತಾರೆ. ಅಂತಹ ಅದ್ಭುತವಾಗಿರುವಂತಹ ಯಮನಗರಿಯಲ್ಲಿ ಯಮ ಶೋಭಿಸುತ್ತಾನೆ, ಸಿಂಹಾಸನವೇರಿ ಮಂಡಿಸುತ್ತಾನೆ. ಅವನ ಸಭೆಯಲ್ಲಿ ಅಂತಂತಹ ಒಳ್ಳೆಯವರು, ಮಹಾತ್ಮರು ಸಹ ಸೇರಿರುತ್ತಾರೆ.
ಅಪ್ಪಯ್ಯ ದೀಕ್ಷಿತರು ವೈರಾಗ್ಯದ ಬಗ್ಗೆ ವೈರಾಗ್ಯ ಶತಕವೆಂಬ ನೂರು ಶ್ಲೋಕಗಳ ಒಂದು ಕೃತಿ ರಚಿಸಿದ್ದಾರೆ. ಅದರಲ್ಲಿ 76ನೇ ಶ್ಲೋಕ ಹೀಗಿದೆ.
“ವಂಗಾಃ ಕಥಮ್? ಅಂಗಾಃ ಕಥಮ್? ಇತ್ಯನಯಂತೇ ವೃಥಾ ದೇಶಾಮ್”
ಅಂಗ ದೇಶ ಹೇಗಿದೆ? ವಂಗ ದೇಶ ಹೇಗಿದೆ? ಎಲ್ಲಾ ನಾವು ಕುತೂಹಲ ತಾಳುತ್ತೇವೆ. ಅಂದರೆ ಈಗಿನ ಕಾಲದಲ್ಲಿ ನೋಡುವುದಾದರೆ ಲಂಡನ್ ಹೇಗಿರಬಹುದು ವಾಷಿಂಗ್ಟನ್ ಹೇಗಿರಬಹುದು ಎಂದೆಲ್ಲಾ ಚಿಂತನೆ ಮಾಡುತ್ತೇವೆ.
“ಕೀದೃಕ್ ಕೃತಾಂತ ಪುರಂ ಇತಿ ಕೋsಪಿ ನ ಜಿಜ್ಞಾಸತೇ ಲೋಕಃ”
ಒಂದು ದಿನ ಹೋಗಲೇಬೇಕಾದ ಊರು ಯಮನ ಊರು. ಅದರ ಬಗ್ಗೆ ಯಾರೂ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಆದರೆ ಅದನ್ನು ತಿಳಿದುಕೊಂಡಾಗ ಮಾತ್ರ ಅಲ್ಲಿ ಒಳ್ಳೆಯದಾಗಲು ಸಾಧ್ಯ.
ಅಲ್ಲಿ ಬದುಕಬೇಕಾದರೆ ನಾವು ಇಲ್ಲಿ ಹೇಗಿರಬೇಕು, ಎಂತಹ ಕೆಲಸ ಮಾಡಿದರೆ ಅಲ್ಲಿ ಯಾವ ದ್ವಾರ ಸಿಗುತ್ತದೆ ಎಂಬುದರ ಅರಿವು ನಮಗಾಗುತ್ತದೆ. ಆದರೂ ಯಾರು ಅದನ್ನು ಅರಿಯುವ ಪ್ರಯತ್ನ ಮಾಡುತ್ತಿಲ್ಲವಲ್ಲಾ ಎಂದು ಅಪ್ಪಯ್ಯ ದೀಕ್ಷಿತರು ಬೇಸರ ವ್ಯಕ್ತಪಡಿಸುತ್ತಾರೆ.
ಇಂತಹ ಊರನ್ನು ನಚಿಕೇತ ಪ್ರವೇಶ ಮಾಡುತ್ತಾನೆ. ಮೂರು ದಿನ ಉಪವಾಸ ಮಾಡುತ್ತಾನೆ. ಯಮನ ನಗರಿಯಲ್ಲಿ ಪುಣ್ಯವಂತರಿಗೆ ಆತಿಥ್ಯವಿದೆ. ಪುಣ್ಯವಂತರು ಬಂದಾಗ ಯಮನು ಸಿಂಹಾಸನದಿಂದ ಕೆಳಗಿಳಿದು ಬಂದು ಸ್ವಾಗತಿಸುತ್ತಾನಂತೆ. ಅಲ್ಲಿ ಪಾಪಿಗಳಿಗೂ ಆತಿಥ್ಯವಿದೆ; ಆದರೆ ಬೇರೆಯೇ ರೀತಿ ಇದೆ. ಬಡಿಗೆಯ ಆತಿಥ್ಯವಿದೆ. ಅದು ಬೇರೆಯ ರೀತಿ ಭಯಂಕರವಾಗಿರುತ್ತದೆ.
ಹೀಗೆ ಅದ್ಭುತವಾದ ಆತಿಥ್ಯವಿರುವ ಯಮನಗರಿಯಲ್ಲಿ ನಚಿಕೇತನ ದೈವೀ ವಾಣಿಯ ಮಾತಿನ ಪ್ರಕಾರ ಮೂರು ರಾತ್ರಿ ಮೂರು ಹಗಲು ಏನನ್ನೂ ಮುಟ್ಟಲಿಲ್ಲ. ನಚಿಕೇತ ಎಂತಹವನು ಅಂದರೆ ಅಷ್ಟು ಸಣ್ಣ ವಯಸ್ಸಿಗೆ ಅಂತರ್ವಾಣಿ ಪ್ರಬೋಧವಾಗಿರತಕ್ಕಂತಹ ಬಾಲಕ. ಹಾಗಾಗಿ ಏನನ್ನು ತಿನ್ನದೇ ಏನನ್ನು ಕುಡಿಯದೇ ಇದ್ದ. ಅವನಿದ್ದ ಮೂರು ದಿನದಲ್ಲಿ ಯಮನು ಊರಿನಲ್ಲಿ ಇರಲಿಲ್ಲ. ಮರಳಿ ಯಮ ಬಂದಾಗ ತನ್ನ ಲೋಕದಲ್ಲಿ ಹೊಸ ಜನವನ್ನು ನೋಡಿದ. ಆಯಸ್ಸು ಮುಗಿದು ಬಂದವನಲ್ಲ, ಆಯಸ್ಸು ಮುಗಿಯದೆ ಬಂದಂತಹ ಒಬ್ಬನನ್ನು ಕಂಡ. ಆಯಸ್ಸು ಮುಗಿದವರಿಗಾದರೆ ಒಂದು ವ್ಯವಸ್ಥೆ ಉಂಟು. ಚಿತ್ರಗುಪ್ತನಿಗೆ ಹೇಳಿ ಪಾಪ ಪುಣ್ಯದ ಲೆಕ್ಕಾಚಾರ ಮಾಡಿ ಉತ್ತಮ ಲೋಕವನ್ನು ನೀಡುವ ವ್ಯವಸ್ಥೆ ಇದೆ. ಆದರೆ ಇದು ಹಾಗಲ್ಲ ತನ್ನ ತೇಜಸ್ಸಿನ ಬಲದಿಂದ ಪಿತೃವಾಕ್ಯ ಪರಿಪಾಲಕನಾಗಿ ಬಂದಿರತಕ್ಕಂತಹ ಒಂದು ಶ್ರೇಷ್ಠ ಜೀವ.
ಅಂತಹ ಒಂದು ಶ್ರೇಷ್ಠ, ಅದ್ಭುತವಾದ ಜೀವ ಬಂದಿದೆ. ಹಾಗಾಗಿ ಎಲ್ಲರಂತೆ ನೋಡಿಕೊಳ್ಳುವಂತಿಲ್ಲ ಎಂದು ಅಚ್ಚರಿಯಿಂದ ಯಮನು ನೋಡಿದನು. ಅಷ್ಟೊತ್ತಿಗೆ ಯಮನ ಪರಿವಾರದವರು ಯಮನಿಗೆ ಎಚ್ಚರಿಕೆಯನ್ನು ಕೂಡ ಕೊಟ್ಟರು. ಮನೆಗೆ ಬರುವ ಅತಿಥಿ ವೈಶ್ವಾನರ. ಅಗ್ನಿದೇವ ಅವನು. ಅವನನ್ನು ಶಾಂತಗೊಳಿಸಬೇಕಾಗುತ್ತದೆ. ಮನೆಗೆ ಅತಿಥಿ ಬಂದರೆ ಅಗ್ನಿ ಬಂದ ಎಂದು ಭಾವಿಸು. ಅವನ ಹಸಿವೆಯನ್ನು ಶಾಂತ ಮಾಡು. ನಾವು ಮನೆಗೆ ಬಂದ ಅತಿಥಿಗೆ ಕೈಕಾಲು ತೊಳೆಯಲು ನೀರು, ಕುಡಿಯಲು ಪಾನೀಯ ನೀಡುತ್ತೇವೆ. ನಾವು ಈ ರೀತಿ ಮಾಡುವುದು ಏಕೆಂದರೆ ಇಲ್ಲದಿದ್ದರೆ ಅವನ ಅಗ್ನಿಯು ನಮ್ಮನ್ನು ಸುಡುತ್ತದೆ.
“ವೈಶ್ವಾನರಃ ಪ್ರವಿಶತಿ ಅತಿಥಿಃ ಬ್ರಾಹ್ಮಣೋ ಗೃಹಾನ್”
ಅದರಲ್ಲಿಯೂ ಕೂಡ ಅವನು ವಿಪ್ರೋತ್ತಮನಾದರೆ, ಬ್ರಾಹ್ಮಣನಾದರೆ ಅದರಲ್ಲಿಯೂ ವೇದಾಧ್ಯಯನ ಸಂಪನ್ನನಾದರೆ ಅತಿ ಉತ್ಕೃಷ್ಟ . ಬಂದವನು ವೈಶ್ವಾನರ ತಣಿಸುವ ಯಾವ ಕಾರ್ಯವು ಆಗಲಿಲ್ಲ.
“ತಸ್ಯೈತಾಂ ಶಾಂತಿಂ ಕುರ್ವಂತಿ ಹರ ವೈವಸ್ವತೋದಕಮ್”
ಕ್ಷಿಪ್ರವಾಗಿ ನೀರು ತಾ, ಮೂರು ದಿನದಿಂದ ಏನು ಸಿಕ್ಕಿಲ್ಲದ ಕಾರಣ ಅದು ಪ್ರಜ್ವಲಿಸಿ ಉರಿಯುತ್ತಾ ಇದೆ. ಇನ್ನು ಏನೇನು ಸುಡುತ್ತದೆ ಗೊತ್ತಿಲ್ಲ. ನಮ್ಮ ಮನೆಗೆ ಬಂದ ಅತಿಥಿಗೆ ಏನನ್ನು ನೀಡದಿದ್ದರೆ “ಆಶಾ ಪ್ರತೀಕ್ಷೆ” ಅಂದರೆ ಆ ಅಗ್ನಿಯು ನಮ್ಮ ಬದುಕಿನ ಅಶೋತ್ತರಗಳನ್ನು ( ಆಸೆಗಳು ನಮ್ಮ ಪ್ರತೀಕ್ಷೆಗಳನ್ನು) ಸುಡುತ್ತದೆ.
ಆಸೆ ಮತ್ತು ಪ್ರತೀಕ್ಷೆಗಳಿಗೆ ವ್ಯತ್ಯಾಸವಿದೆ. ಆಶೆ ಪೂರೈಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಪ್ರತೀಕ್ಷೆ ಎಂದರೆ ಹಾಗಲ್ಲ ನಮಗೆ ಅದು ಪೂರೈಸುತ್ತದೆ ಎಂಬುದು ತಿಳಿದಿರುತ್ತದೆ. ಅವೆರಡನ್ನು ಕೂಡ ಸುಟ್ಟುಬಿಡುತ್ತಾನೆ. ಇನ್ನು ಅನೇಕ ವಿಷಯಗಳಾದ “ಸೂನೃತಾಂ” ಒಳ್ಳೆಯ ಮಾತು, “ಇಷ್ಟಾಪೂರ್ತೇ” ಇಷ್ಟ ಎಂದರೆ ಪುಣ್ಯ. ಯಜ್ಞ ಯಾಗ ಮಾಡಿದ ಪುಣ್ಯ , ಪೂರ್ತಾ ಅಂದರೆ ಕೆರೆಕಟ್ಟೆ ಕಟ್ಟಿಸಿದ್ದು, ಯಾರಿಗಾದರೂ ಈ ಲೋಕದಲ್ಲಿ ಉಪಕಾರ ಮಾಡಿ ಪುಣ್ಯಗಳಿಸಿದ್ದು, “ಪುತ್ರ ಪಶೂಶ್ಚ ಸರ್ವಾನ್ ಏತತ್ ವೃಂಕ್ತೇ ಪುರುಷಸ್ಯ ಅಲ್ಪ ಮೇಧಸಃ” ಆತಿಥ್ಯ ಮಾಡದ ಅಲ್ಪ ಬುದ್ಧಿಯವನ ಮನೆಗೆ ಬಂದ ಅತಿಥಿಯು ಆತಿಥ್ಯ ಮಾಡದವನ ಮನೆಯ ಎಲ್ಲ ಒಳ್ಳೆಯದನ್ನು ಮನೆಗೆ ಬಂದ ಅತಿಥಿ ಸುಟ್ಟೇ ಬಿಡುತ್ತಾನೆ.
“ಯಸ್ಯ ಅನಶ್ನನ್ ವಸತಿ ಬ್ರಾಹ್ಮಣೋ ಗೃಹೇ”
ಅಗ್ನಿಗೆ ಎರಡು ರೂಪ ಒಂದು ಬೆಳಕು, ಇನ್ನೊಂದು ಬೆಂಕಿ. ಮನೆಗೆ ಬಂದ ಅತಿಥಿಯ ಅಗ್ನಿ ಶಮನ ಮಾಡಿದರೆ ಅದು ಬೆಳಕು ಇಲ್ಲದಿದ್ದರೆ ಅದು ಬೆಂಕಿ. ಹಾಗಾಗಿ ನಚಿಕೇತನನ್ನು ಕೇಳಬೇಕಾಯಿತು.
“ಕುಮಾರ! ಕಥಿ ರಾತ್ರೀರವಾತ್ಸೀಃ”
ಮಗೂ ಎಷ್ಟು ರಾತ್ರಿ ನನ್ನ ಮನೆಯಲ್ಲಿ ಉಳಿದುಕೊಂಡೆ.
“ತಿಸ್ರೈತಿ ಪ್ರತ್ಯುವಾಚ” ಅಂದರೆ ಮೂರು ರಾತ್ರಿಯೆಂದು ಪ್ರತಿ ಉತ್ತರವನ್ನು ಕೊಟ್ಟ.
ಆಗ ಯಮ ಪ್ರಶ್ನೆಯನ್ನು ಕೇಳುತ್ತಾನೆ. “ಕಿಂ ಪ್ರಥಮಾಂ ರಾತ್ರಿಮಾಶ್ನಾ ಇತಿ” ಮೊದಲ ದಿನ ಹೊಟ್ಟೆಗೆ ಏನು ತೆಗೆದುಕೊಂಡೆ
ಉತ್ತರ- “ಪ್ರಜಾಂತ ಇತಿ” ಅಂದರೆ ನಿನ್ನ ಮಕ್ಕಳನ್ನು.
ಪ್ರಶ್ನೆ – “ಕಿಮ್ ದ್ವಿತೀಯಾಮ್”
ಉತ್ತರ – “ಪಶೂಂಸ್ತ ಇತಿ” ಎಂದರೆ ನಿನ್ನ ಪಶುಗಳನ್ನು
ಪ್ರಶ್ನೆ – “ಕಿಮ್ ತೃತೀಯಾಮ್ ಇತಿ”
ಉತ್ತರ – “ಸಾಧು ಕೃತ್ಯಾಂ ತ ಇತಿ” ಅಂದರೆ ಆವರೆಗೆ ಮಾಡಿರತಕ್ಕಂತಹ ಎಲ್ಲಾ ಪುಣ್ಯ ಕಾರ್ಯಗಳು, ಅದರಿಂದ ಬಂದ ಈವರೆಗಿನ ಪುಣ್ಯ. ಇಂತಹ ದಿಟ್ಟ ಉತ್ತರವನ್ನು ಕೊಟ್ಟು “ನಮಸ್ತೇ ಅಸ್ತು ಭಗವ ಇತಿ” ಭಗವಂತ ನಿನಗೆ ನಮಸ್ಕಾರವನ್ನು ಕೊಡುತ್ತೇನೆ.
ಸಾಮಾನ್ಯವಾಗಿ ಯಮನ ಮುಂದೆ ಜೀವಗಳು ಬಂದರೆ ಅವನ ಗತ್ತೇ ಬೇರೆ. ಮೊದಲನೇ ಬಾರಿ ಯಮನಿಗೆ ಇಂತಹದೊಂದು ಅನುಭವವಾಯಿತು. ಈ ಲೋಕದಿಂದ ಬಂದವನೊಬ್ಬ ಹೆಚ್ಚು ಕಡಿಮೆ ಯಮನನ್ನು ಬೆದರಿಸುತ್ತಿದ್ದಾನೆ. ನಿನ್ನ ಮಕ್ಕಳನ್ನು ತಿಂದೆ, ನಿನ್ನ ಪಶುಗಳನ್ನು ತಿಂದೆ, ನಿನ್ನ ಪುಣ್ಯವನ್ನು ತಿಂದೆ. ಒಂದೊಂದು ಉತ್ತರವನ್ನು ಕೇಳಿದಾಗ ಬೆಚ್ಚಿ ಹಿಂದೆ ಬರಬೇಕು. ಇದನ್ನೆಲ್ಲ ಕೇಳಿದಾಗ ನಚಿಕೇತನು ನಮಗೆ ಸ್ಫೂರ್ತಿ. ಯಮನ ಊರಿಗೆ ಹೋಗಿ ನಚಿಕೇತನು ಯಮನಿಗೆ ಕೊಟ್ಟ ಉತ್ತರಗಳು.
ಇಲ್ಲಿ ತತ್ವವನ್ನು ಕೂಡ ಗಮನಿಸಬೇಕು. ಯಾರಾದರೂ ನಮಗೆ ಬಂದರೆ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು. ಮನೆಗೆ ಬಂದವನು ಭಗವಂತ. ಅವನನ್ನು ಉಪಚರಿಸಿದರೆ ಬಹುದೊಡ್ಡ ಪುಣ್ಯ ಅಪಚಾರ ಮಾಡಿದರೆ ಬಹುದೊಡ್ಡ ಪಾಪ. ಅದು ಅತಿ ದೋಷ. ಮನೆಗೆ ಯಾರೇ ಬಂದರೂ ಕೂಡ ಅಷ್ಟು ಪ್ರೀತಿಯಿಂದ ಉಪಚಾರ ಮಾಡಬೇಕು. ಅದು ನಮ್ಮ ಸಂಸ್ಕೃತಿ. ಮನೆಗೆ ಬಂದ ಅತಿಥಿಗೆ ಬಾಗಿಲು ತೆಗೆಯದೆ ಇರುವುದು ಅವರನ್ನು ವಿಚಾರಿಸಿ ಆತಿಥ್ಯ ನೀಡದೆ ಇರುವುದು ರಾಕ್ಷಸರ ಸಂಸ್ಕೃತಿ.
ಈ ಆತಿಥ್ಯದ ತತ್ವವನ್ನು ಹೃದಯದಲ್ಲಿ ಧಾರಣೆ ಮಾಡಬೇಕು. ಈಗ ಯಮನ ಮುಂದೆ ನಚಿಕೇತನ ಅಗ್ನಿಯನ್ನು ಹೇಗಾದರೂ ಮಾಡಿ ಶಾಂತ ಮಾಡಬೇಕು. ಈಗ ಇಲ್ಲಿ ಸಂದರ್ಭ ಹೇಗಿದೆಯೆಂದರೆ ಯಮನೇ ಏನಾದರೂ ನಚಿಕೇತನಿಗೆ ಕೊಡುವ ಪರಿಸ್ಥಿತಿ ಇದೆ. ಸಾಮಾನ್ಯವಾಗಿ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಎತ್ತರದಲ್ಲಿ ಯಮ, ಕೆಳಗೆ ಹೋದವರು. ನಚಿಕೇತನ ಪರಿಸ್ಥಿತಿ ಹೇಗಿದೆ ಎಂದರೆ ಯಮನ ನಚಿಕೇತನನ್ನು ಎತ್ತರದಲ್ಲಿ ನೋಡುವಂತಿದೆ. ಏನು ಕೊಟ್ಟರೆ ನಚಿಕೇತನ ಅಗ್ನಿಯು ಸಮಾಧಾನವಾಗಬಹುದು ಎಂಬ ಸಂದರ್ಭ ಏರ್ಪಟ್ಟಿದೆ. ಇಂತಹದೊಂದು ಅದ್ಭುತವಾದ ಸನ್ನಿವೇಶವು ಅಲ್ಲಿ ಸೃಷ್ಟಿಯಾಯಿತು. ಅದರ ಫಲವಾಗಿ ಅತ್ಯದ್ಭುತವಾದ ಜ್ಞಾನ ಭಂಡಾರದ ಅನಾವರಣವಾಯಿತು. ಮೂರು ರಾತ್ರಿ ಮೂರು ಹಗಲು ಉಪವಾಸ ಇದ್ದದ್ದಕ್ಕೆ ಏನು ಪ್ರಾಯಶ್ಚಿತವನ್ನು ಯಮನು ಮಾಡಿಕೊಂಡ. ನಚಿಕೇತ ಹೇಗೆ ಬಳಸಿಕೊಂಡ ಎಂಬುದನ್ನು ನಾಳೆಯ ಪ್ರವಚನದಲ್ಲಿ ಅವಲೋಕನ ಮಾಡೋಣ. ಇಲ್ಲಿ ಸಿಗುವಂತಹ ಜ್ಞಾನ ಒಂದಲ್ಲ ಒಂದು ದಿನ ಜೀವನದಲ್ಲಿ ಇದು ಬೇಕಾಗುತ್ತದೆ. ಜೀವನ ಮುಗಿದು ಹೋಗುವಾಗ ಅವಶ್ಯವಾಗಿ ಬೇಕಾಗುತ್ತದೆ. ಜೀವನದ ಅತ್ಯಂತ ವಿಕಟ ಪರಿಸ್ಥಿತಿಯಲ್ಲಿ ಯಾರು ಸಹಾಯಕ್ಕೆ ಬರಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ನಮಗೆ ಇದು ಸಹಾಯಕ್ಕೆ ಬರುತ್ತದೆ. ಹಾಗಾಗಿ ಇದನ್ನು ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಳ್ಳಬೇಕು. ಹೃದಯದ ಆಳಕ್ಕೆ ಇಳಿಸಿಕೊಳ್ಳಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಚಿಕೇತನ ಕಥಾನಕದ ಮುಂದಿನ ಭಾಗವನ್ನು ನಾಳೆ ನೋಡೋಣ.
Jagadguru Shankaracharya SriSri Raghaveshwara Bharati Mahaswamiji – “Jeevayaana” – Pravachana – Akshararoopa
#Jeevayaana
#SriSamsthana
#SriRaghaveshwaraBharatiSwamiji
#SriMatha
Leave a Reply