ಆಂಗ್ಲತ್ವ ಭಾರತ ಬಿಟ್ಟು ತೊಲಗಲಿ – ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಬೆಂಗಳೂರು: ಬಾಗಿದವನು ಭಗವಂತನಾಗುವನು ಎಂಬುದು ಹನುಮಂತ ಕೊಟ್ಟ ಸಂದೇಶ. ಸೇವಕತ್ವದ ಆಳಕ್ಕೆ ಇಳಿದರೆ, ವ್ಯಕ್ತಿಯ ವ್ಯಕ್ತಿತ್ವ ಆಗಸದೆತ್ತರಕ್ಕೆ ಏರುತ್ತದೆ ಎಂಬುದನ್ನು ಹನುಮಂತ ಮಾಡಿ ತೋರಿಸಿದ್ದಾನೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಮನುಷ್ಯಸಂತತಿ ಇಲ್ಲವಾದರೆ ಇಡೀ ಸೃಷ್ಟಿಯೇ ಸಂತಸಪಡಬಹುದು. ಯಾಕೆಂದರೆ ಮನುಷ್ಯ ಇಡೀ ಸೃಷ್ಟಿಗೆ ಕಂಟಕ ಪ್ರಾಯನಾಗಿದ್ದಾನೆ. ಆದರೆ ಗೋವಿಲ್ಲದಿದ್ದರೆ ಇಡೀ ಸೃಷ್ಟಿಯೇ ಸಂಕಟಪಡಬಹುದು. ಗೋವು ಇಲ್ಲವಾದರೆ ಪ್ರಪಂಚವೇ ಇಲ್ಲ ಎಂದು ನುಡಿದರು.
ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭವಾದ ದಿನ ಇಂದು. ಬಿಳಿಯರು ತೊಲಗಿದರು, ಆದರೆ ನಮ್ಮಲ್ಲಿನ ಬಿಳಿ(ಪಾಶ್ಚಾತ್ಯ ಮನೋಭಾವನೆ) ಇನ್ನೂ ಹಾಗೆಯೇ ಇದೆ. ಹಾಗಾಗಿ ನಾವು ಇಂದು ನಮ್ಮಲ್ಲಿನ ಬಿಳಿ (ಆಂಗ್ಲತ್ವ) ಭಾರತ ಬಿಟ್ಟು ತೊಲಗಲಿ ಎಂದು ಸಂಕಲ್ಪ ಮಾಡೋಣ ಎಂದರು.
ರಾಯಚೂರು ಮಾನ್ವಿಯ ಮುಕ್ತಾಗುಚ್ಛ ಬೃಹನ್ಮಠ ಕಲ್ಮಠದ ಪರಮಪೂಜ್ಯ ಷ. ಬ್ರ. ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಮ್ಮ ತಾಯಿಯನ್ನು ರಕ್ಷಿಸುವ ಪರಿಸ್ಥಿತಿಗೆ ಯಾಕೆ ಬಂದಿದ್ದೇವೆ ಎಂದರೆ ಅದಕ್ಕೆ ಸಂಸ್ಕಾರದ ಕೊರತೆಯೇ ಕಾರಣ. ಕಲ್ಲಿಗೆ ಸಂಸ್ಕಾರ ಕೊಟ್ಟರೆ ದೇವರ ಮೂರ್ತಿ ಆಗುತ್ತದೆ, ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆ ಆಗುತ್ತದೆ, ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಸಂಸ್ಕಾರ ಕೊಟ್ಟರೆ ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದ ಅವರು, ಬದುಕು ತುಂಬಾ ಚಿಕ್ಕದು, ಕೆಡುಕು ಮಾಡುವವರ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಕೆಡುಕಿಗಿಂತ ಹತ್ತು ಪಟ್ಟು ಹೆಚ್ಚು ಒಳಿತು ಮಾಡಬೇಕು. ರಾಘವೇಶ್ವರಶ್ರೀಗಳ ಸ್ಪೂರ್ತಿಯಿಂದ ರಾಯಚೂರು ಜಿಲ್ಲೆಯಲ್ಲಿ ‘ಮನೆಗೊಂದು ಗೋವು’ ಎಂಬ ಅಭಿಯಾನವನ್ನು ಆರಂಭಿಸಿ ಗೋರಕ್ಷಣಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.
ಬಳ್ಳಾರಿ ಜಿಲ್ಲೆ ಸಿರಗುಪ್ಪಿ ಶ್ರೀಕೃಷ್ಣ ನಗರದ ಶ್ರೀ ಗುರುಬಸವ ಮಠದ ಪೂಜ್ಯ ಮ.ನಿ.ಪ್ರ. ಬಸವಭೂಷಣ ಸ್ವಾಮೀಜಿ ಉಪಸ್ಥಿತರಿದ್ದರು.
ಪಶುವೈದ್ಯರಾಗಿ ಸುಮಾರು 53 ವರ್ಷ ಗೋಸೇವೆ ಮಾಡಿದ ಕುಮಟಾದ ಡಾ. ವೆಂಕಟ್ರಮಣ ಜಿ ಶೆಟ್ಟಿ ಹಾಗೂ ಪಂಚಗವ್ಯ ಚಿಕಿತ್ಸೆಯ ಮೂಲಕ ವೈದ್ಯಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಡಾ. ಕವಿತಾ ಜೈನ್ ಇವರುಗಳಿಗೆ ಗೋ ಸೇವಾ ಪುರಸ್ಕಾರವನ್ನು ನೀಡಲಾಯಿತು.
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಸವಭೂಷಣ ಸ್ವಾಮೀಜಿ ‘ಪ್ರಕೃತಿ ಪಾಠ’ ಪುಸ್ತಕವನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು.
ಗುಡೇಅಂಗಡಿ, ಧಾರೇಶ್ವರ, ಹೆಗಡೆ ಮತ್ತು ಮಿರ್ಜಾನ್ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ರವೀಂದ್ರ ಭಟ್ ಸೂರಿ ಹಾಗೂ ರಮ್ಯಾ ಸುರೇಶ್ ಮಾಬ್ಲಡ್ಕ ನಿರೂಪಿಸಿದರು. ಅನಂತರ ಶ್ರೀಮತಾ ಹವ್ಯಕ ಭಜನಾ ತಂಡ ಬದಿಯಡ್ಕ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಗುರುಚರಿತ್ರೆ ಪಾರಾಯಣ, ಶ್ರೀದುರ್ಗಾ ತ್ರಿಕಾಲಪೂಜೆ, ರಾಮತಾರಕ ಮಂತ್ರ ಜಪ, ಹನುಮಾನ್ ಚಾಲೀಸ್ ಪಾರಾಯಣ, ಧನ್ವಂತರಿ ಮಂತ್ರ ಜಪ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭವಾದ ದಿನ ಇಂದು. ಬಿಳಿಯರು ತೊಲಗಿದರು, ಆದರೆ ನಮ್ಮಲ್ಲಿನ ಬಿಳಿ(ಪಾಶ್ಚಾತ್ಯ ಮನೋಭಾವನೆ) ಇನ್ನೂ ಹಾಗೆಯೇ ಇದೆ. ಹಾಗಾಗಿ ನಾವು ಇಂದು ನಮ್ಮಲ್ಲಿನ ಬಿಳಿ (ಆಂಗ್ಲತ್ವ) ಭಾರತ ಬಿಟ್ಟು ತೊಲಗಲಿ ಎಂದು ಸಂಕಲ್ಪ ಮಾಡೋಣ . – ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರಮಠ
• ಡಾ. ವೆಂಕಟ್ರಮಣ ಜಿ ಶೆಟ್ಟಿ ಹಾಗೂ ಡಾ. ಕವಿತಾ ಜೈನ್ ಇವರುಗಳಿಗೆ ಗೋ ಸೇವಾ ಪುರಸ್ಕಾರ ಪ್ರದಾನ
• ಶ್ರೀಭಾರತೀಪ್ರಕಾಶನದ ‘ಪ್ರಕೃತಿ ಪಾಠ’ ಪುಸ್ತಕ ಲೋಕಾರ್ಪಣೆ
• ಮುಕ್ತಾಗುಚ್ಛ ಬೃಹನ್ಮಠದ ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಉಪಸ್ಥಿತಿ

10.08.2016 ರ ಕಾರ್ಯಕ್ರಮ:

  • ಬೆಳಗ್ಗೆ 7.00 ಕಾಮಧೇನು ಹವನ
  • ಬೆಳಗ್ಗೆ 9.00 : ಕುಂಕುಮಾರ್ಚನೆ
  • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
  • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
  • ಅಪರಾಹ್ನ 3.30 :
    ಗೋಸಂದೇಶ : ಗೋಬರ್ ಗ್ಯಾಸ್ – ಡಾ. ವಿ. ಕುಮಾರ್ ಗೌಡ
    ಲೋಕಾರ್ಪಣೆ : ಗೋಸಂಪ್ರದಾಯಗೀತೆ – ಧ್ವನಿಮುದ್ರಿಕೆ
    ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
    ಗೋಸೇವಾಪುರಸ್ಕಾರ : ಭಾಜನರು – ಡಾ. ವಿ. ಕುಮಾರ್ ಗೌಡ ಮತ್ತು ಮಂಜುನಾಥ ಆರ್. ಭಟ್ಟ, ಹೆಬ್ಳೇಕೇರಿ
    ಸಂತ ಸಂದೇಶ : ಪರಮಪೂಜ್ಯ ಸದ್ಗುರು ಶ್ರೀರಾಮ, ಉಪಾಸನಾ ಧ್ಯಾನಮಂದಿರ,
    ರಾಜರಾಜೇಶ್ವರಿನಗರ, ಬೆಂಗಳೂರು.
    ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
  • ಸಂಜೆ: 5.00 : ಕಲಾರಾಮ – ಭಜನೆ : ಶ್ರೀಮಾತಾ ಹವ್ಯಕ ಭಜನಾ ಸಂಘ
  • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
  • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Facebook Comments Box