॥ಹರೇ ರಾಮ॥

ಗೋವಿನೊಳಗೆ ಗೋವಾಗಿ, ಗೋವೇ ತಾನಾಗಿ, ಮೂಕಪ್ರಾಣಿಯ ವೇದನೆ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಜಗತ್ತಿಗೇ ತಿಳಿಸಿದವರು ನಮ್ಮೆಲ್ಲರ ಗುರುಗಳು ರಾಘವೇಶ್ವರ ಶ್ರೀಗಳು. ನಮ್ಮ ಗುರುಗಳು ಎಂದು ಹೇಳಲು ಅದೆಷ್ಟು ಸಂತೋಷ!, ಅದೆಷ್ಟು ಸಮಾಧಾನ!, ಅದೆಷ್ಟು ಹೆಮ್ಮೆ!, ಗುರುಗಳೆ… ಎಂದು ಹೇಳುತ್ತಿದ್ದರೆ ಅದೆಷ್ಟು ನೆಮ್ಮದಿ!.

ನಮಗೆ ಗುರುಗಳು ’ಗುರು’ವೂ ಹೌದು, ’ತಾಯಿ’ಯೂ ಹೌದು. ಸದಾ ನಗುತ್ತಾ, ನಮ್ಮೆಲ್ಲರ ಕಷ್ಟಗಳನ್ನು ಸಮಾಧಾನದಿಂದ ಆಲಿಸಿ, ಕೊನೆಗೆ ತಾವೇ ತೆಗೆದುಕೊಂಡು ಭರವಸೆಯಿಲ್ಲದ ಜೀವನಕ್ಕೆ   ಭರವಸೆಯನ್ನು, ಆತ್ಮವಿಶ್ವಾಸವನ್ನು ತಾಯಿಯಂತೆ ನೀಡುತ್ತಿದ್ದಾರೆ. ತುಂಬಿದ ಕತ್ತಲೆಗೆ ಬೆಳಕು ಹರಿಸಿ ಕತ್ತಲೆಯನ್ನು ದೂರ ಮಾಡುವವರು ಶ್ರೀಗಳು. ಕತ್ತಲೆಯಿ೦ದ ಬೆಳಕಿನೆಡೆಗೆ,  ಅಜ್ಞಾನದಿ೦ದ  ಜ್ಞಾನದೆಡೆಗೆ,  ದುಃಖದಿ೦ದ ಸುಖದೆಡೆಗೆ ಕರೆದುಕೊ೦ಡು ಹೋಗುವ ಮಹಾಶಕ್ತಿಯೇ ನಮ್ಮ ಗುರುಗಳು. ಕಹಿಯಾದ ನೋವನ್ನು ಮರೆಸುವವರು ನಮ್ಮ ಗುರುಗಳು. ಅವರನ್ನು ನೋಡಲು ಬಂದಾಗ, ನಮ್ಮ ಕಷ್ಟಗಳೆಲ್ಲವೂ ಮರೆತು ಹೋಗುತ್ತದೆ (ಪರೀಕ್ಷೆ ಟೆನ್ಷನ್ ಕೂಡ). ಸಹನೆಯ ಇನ್ನೊಂದು ಹೆಸರೇ ನಮ್ಮ ಗುರುಗಳು. ಅಂತಹ ’ಗುರುಪೀಠ’  ಹಾಗೂ ’ಗುರು’ಗಳನ್ನು ಪಡೆದ ನಾವು ನಿಜವಾಗಿಯೂ ಭಾಗ್ಯವಂತರು. ನಾವೇ ಅದೃಷ್ಟವಂತರು!

’ಗುರುಪೀಠ’ ಬಲು ದೊಡ್ಡದಣ್ಣ
ಬರಿಗಣ್ಣಿಗೆ ಮಾತ್ರ ಕಾಣುವುದು ಸಣ್ಣ |
ಒಳಗಣ್ಣು ತೆರೆದು ನೀ ನೋಡಿದರೆ
ತಿಳಿಯುವುದು ನಿನಗದರ ಬಣ್ಣ ||

ಚ೦ದ್ರನಿಗೆ ಸ್ವ೦ತ ಬೆಳಕಿಲ್ಲ. ಚ೦ದ್ರನು ಸೂರ್ಯನ ಸಹಾಯದಿ೦ದ ಬೆಳಗುತ್ತಾನೆ. ಹಾಗೆಯೇ ಪ್ರತಿಯೊಬ್ಬ ಶಿಷ್ಯನ ಬೆಳವಣಿಗೆಯ ಹಿಂದೆ ಸೂರ್ಯನಂತೆ ಗುರುಗಳಿದ್ದಾರೆ. ಗುರುಗಳು ಯಾವಾಗ ನಮ್ಮ ಊರಿಗೆ ಬರುತ್ತಾರೆ ಎಂದು ಕಾದು ಕುಳಿತ್ತಿರುತ್ತೇವೆ. ಗುರುಗಳು ಊರಿಗೆ ಬಂದ ಮೇಲೆ ಯಾವಾಗ ದರ್ಶನ ಭಾಗ್ಯ ಸಿಗುತ್ತದೆ, ಯಾವಾಗ ಮಂತ್ರಾಕ್ಷತೆ ಸಿಗುತ್ತದೆ, ಎಂದು ಹಾತೊರೆಯುತ್ತಿರುತ್ತೇವೆ. ಮಂತ್ರಾಕ್ಷತೆ ಸಿಕ್ಕಿದ ನಂತರ ’ಮನೆಗೆ ಹೋಗಲೇಬೇಕೇ?’ ಎಂಬ ಪ್ರಶ್ನೆ ಕಾಡುತ್ತದೆ. ಪುನಃ ಗುರುಗಳು ಯಾವಾಗ ಬರುತ್ತಾರೆ ಎಂದು ಕಾದು ಕುಳಿತ್ತಿರುತ್ತೇವೆ. ಇದಕ್ಕಿಂತ   ಹೆಚ್ಚಿನ ಉದಾಹರಣೆ ಬೇಕೇ ಗುರುಗಳ ವಾತ್ಸಲ್ಯಕ್ಕೆ? ಇ೦ತಹ ಗುರುವಿನ ಪಾದಪೂಜೆ ಮಾಡಲು ಅವಕಾಶ ಪಡೆದ ನಾವು ನಿಜಕ್ಕೂ  ಭಾಗ್ಯವ೦ತರು.

“ಕೆರೆಯ ನೀರನು ಕೆರೆಗೆ ಚೆಲ್ಲಿ” ಎನ್ನುವ ಶ್ರೀಗಳು ಇಂದು ತಮ್ಮ ಯೋಜನೆಯ ಮುಖಾಂತರ ಸಮಾಜಕ್ಕೆ ಬಹಳ ಹತ್ತಿರವಾಗಿದ್ದಾರೆ, ಎತ್ತರವಾಗಿದ್ದಾರೆ. ಎತ್ತರವಾಗಿಯೂ ಎಲ್ಲರಿಗೂ ಹತ್ತಿರವಾಗಿರುವುದು ಶ್ರೀ ಶ್ರೀಗಳವರ ಮಹಿಮೆಯೇ ಸರಿ.

ಗುರುಗಳ ಕಾರ್ಯಕ್ರಮಗಳಿಂದ ಅದೆಷ್ಟೋ ಒಳ್ಳೆಯ ಬದಲಾವಣೆಗಳಾಗಿವೆ. ಪ್ರಧಾನವಾಗಿ ’ಗೋವು’ ಕೇವಲ ಹಾಲು ಕೊಡುವ ಪ್ರಾಣಿ ಎಂದು ತಿಳಿದಿದ್ದ ಹಲವರಿಗೆ ಗೋವು ಕಾಮಧೇನು, ದೇವರು ಎಂಬ ನಿಜ ಸ್ವರೂಪದ ಅರಿವಾದ್ದು ಶ್ರೀಗಳಿಂದ ಅಲ್ಲವೇ? ’ವಿಶ್ವಗೋಸಮ್ಮೇಳನ’ ಒಂದು ಅತ್ಯದ್ಭುತ ಕಾರ್ಯಕ್ರಮ, ಇಲ್ಲಿ ನಮಗೆ ಕಾರ್ಯಕರ್ತರಾಗಿ ಸೇವೆ ಸಲ್ಲಿಸಲು ಅವಕಾಶ ದೊರಕಿತ್ತು. ವಸ್ತು ಪ್ರದರ್ಶನದ “ಪ್ರದರ್ಶಿನೀ” ವಿಭಾಗದಲ್ಲಿ ನಮಗೆ ಕೆಲಸವಿತ್ತು. ಇದೊಂದು ಅಭೂತಪೂರ್ವ ಅನುಭವ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಪರಿಚಯವಿಲ್ಲದವರು ಪರಿಚಯವಾದರು. ಪ್ರಪಂಚದ ಅರಿವಾಯಿತು. ಅಲ್ಲಿ ಎಲ್ಲರೂ ಅಣ್ಣತಮ್ಮಂದಿರು, ಅಕ್ಕಂದಿರು, ಅಮ್ಮಂದಿರು! ಅದೆಷ್ಟೋ ಜನರನ್ನು ಒಂದೇ ಜಾಗದಲ್ಲೇ ನೋಡಿದೆವು. ಎಂದೂ ನೋಡಿರದ, ಕೇಳಿರದ ಹೊಸ ಹೊಸ ವಿಷಯಗಳನ್ನು ನಾವು ಅಲ್ಲಿ ಕೇಳಿದೆವು, ನೋಡಿದೆವು. ’ಗೋವು’ ಎಂಬ ಅಮಾಯಕ ಸಾಧುಜೀವಿಯನ್ನು  ’ಕಸಾಯಿಖಾನೆ’ ಎಂಬ ನರಕಕ್ಕೆ ಕೊಂಡೊಯ್ದು, ಕತ್ತುಹಿಸುಕಿ ಸಾಯಿಸುವುದನ್ನು ಕಂಪ್ಯೂಟರ್‌ನಲ್ಲಿ ತೋರಿಸಿದ್ದರು. ಅದರಿಂದ ವಿವಿಧ ವಸ್ತುಗಳನ್ನು ತಯಾರಿಸುವುದೂ ತಿಳಿಯಿತು. ಇದರಿಂದ ನಿಜಾಂಶದ ಅರಿವಾಯಿತು. ಆ ದಿನದಿಂದ ನಾನು ಚಾಕಲೇಟು, ಐಸ್‌ಕ್ರೀಮ್  ತಿನ್ನುವ ಅಭ್ಯಾಸ ನಿಲ್ಲಿಸಿದೆ.  ಇಂದಿಗೆ ಗೋಮಾತೆಯನ್ನು ಹಿಂಸೆಗೊಳಪಡಿಸಿ ಉತ್ಪಾದಿಸುವ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಿ ಮೂರೂವರೆ ವರ್ಷ ಕಳೆಯಿತು. ಹೀಗೆ ಅದೆಷ್ಟೋ ಮಂದಿ ಪರಿವರ್ತಿತರಾಗಿರಬಹುದು. ಇದೆಲ್ಲಾ ಶ್ರೀಗಳ ಆಂದೋಲನದ ಪರಿಣಾಮವೆ ಅಲ್ಲವೆ? ಶ್ರೀಗಳವರು ’ವಿಶ್ವಮಂಗಲ ಗೋಗ್ರಾಮ ಯಾತ್ರೆ’ಯಂತಹ ವಿಶ್ವಮಟ್ಟದ ವಿಶಿಷ್ಟ ಕಾರ್ಯಕ್ರಮದ ಮೂಲಕ ಗೋವಿನ ಬಗ್ಗೆ ಅರಿವನ್ನು ಮೂಡಿಸಲು ಶ್ರಮಿಸುತ್ತಿರುವಾಗ, ನಾವು ಇಷ್ಟು ಸಣ್ಣ ಪ್ರಯತ್ನವನ್ನಾದರೂ  ಮಾಡದಿದ್ದರೆ ಹೇಗೆ? ಅಲ್ಲವೇ? ಇಂದು ಗೋವು, ’ಕಸಾಯಿಖಾನೆ’ ಎಂಬ ನರಕದಿಂದ ಸ್ವಾತಂತ್ರ್ಯದ ಸ್ವರ್ಗಕ್ಕೆ ಬರುತ್ತಿರುವುದು ಶ್ರಿಗುರುಗಳ ಗೋಮಾತಾ ಆಂದೋಲನದಿಂದ. ಈ ಆಂದೋಲನದಲ್ಲಿ ನಾವೆಲ್ಲಾ ಕೈ ಜೋಡಿಸೋಣ.

ಪರಿವರ್ತನೆಯ ಕುರಿತಾಗಿ ನಮ್ಮ ಮನೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ, “ಶತಕೋಟಿ ಕುಂಕುಮಾರ್ಚನೆ”ಯಿಂದಾಗಿ ನನ್ನಮ್ಮ ಹಾಗೂ ನಾನು ಲಲಿತಾಸಹಸ್ರನಾಮ ಕಲಿಯುವಂತಾದೆವು. ಜಗನ್ಮಾತೆಯ ಮಹಿಮೆಯ ದರ್ಶನವನ್ನು ಪಡೆದೆವು. ಶ್ರೀಕ್ಷೇತ್ರ ಗೋಕರ್ಣದಲ್ಲಿ ನಡೆಯುವ “ಕೋಟಿರುದ್ರ”ದಿಂದಾಗಿ ನನ್ನ ತಂದೆ, ತಮ್ಮ ರುದ್ರ ಮಂತ್ರ  ಕಲಿಯುವಂತಾಯಿತು. ತನ್ಮೂಲಕ ಮಹಾಬಲನ ಮಹಿಮೆಯ ಅರಿವಾಯಿತು. ಎಂಥಾ ಬದಲಾವಣೆ! ಹೀಗೆ ನಮ್ಮೊಳಗೆಯೇ  ಆನಂದವಿದೆಯೆಂದು ಗುರುಗಳು ತೋರಿಸಿಕೊಡುತ್ತಿದ್ದಾರೆ. ಹಾಗೆಯೇ ಇಲ್ಲದ ಆನಂದವನ್ನು ಹೊರಗಿನಿಂದ ಯಾರೂ ತಂದುಕೊಡಲು ಸಾಧ್ಯವಿಲ್ಲ. ಅದು ಒಳಗಿನಿಂದಲೇ ಆಗಬೇಕು. ಎಲ್ಲರ ಅಂತರಾಳದಲ್ಲಿ ಆನಂದವನ್ನು ತಂದುಕೊಡುತ್ತಿರುವವರು ಶ್ರೀಗುರುಗಳು.

ಗುರುಗಳ ಮಾತಿನಲ್ಲಿ ತಾಯಿಯ ಮಮತೆಯಿದೆ, ವಾತ್ಸಲ್ಯವಿದೆ, ಹಾಸ್ಯವಿದೆ, ಪ್ರಶ್ನೆಗಳಿಗೆ ಉತ್ತರವಿದೆ. ಗುರುಗಳು ಮಕ್ಕಳನ್ನು ಕಂಡಾಗ “ಹೇಂಗಿದ್ದೆ ಮಗಾ?”, “ಹೇಂಗಿದ್ದೆ ತಂಗೆ?” ಎಂದು ಮಾತನಾಡಿಸುತ್ತಾರೆ. ಶ್ರೀಗುರುಗಳೇ ನಮ್ಮೆಲ್ಲರ ತಂದೆ ತಾಯಿ. ಶಾಲೆಯಲ್ಲಿರುವ ’ಗುರು’ವನ್ನು ನೋಡಲು ಮಕ್ಕಳು ಭಯಪಟ್ಟರೆ, ನಮ್ಮ ’ಗುರು’ಗಳನ್ನು ನೋಡಲು ಮಕ್ಕಳು ಇಷ್ಟಪಡುತ್ತಾರೆ. “ಆ ದೇಶವೇ ಅವರ ತಾಯಿ” ಎಂಬ ಪಠ್ಯ ಪುಸ್ತಕದಲ್ಲಿದ್ದ ಪಾಠದ ಹೆಸರನ್ನು ತಪ್ಪಾಗಿ “ಆ ಗುರುವೇ ನನ್ನ ತಾಯಿ” ಎಂದು ಬರೆದಿದ್ದೆ.  ಎರಡನೇ ವಾಕ್ಯದ ಅರ್ಥ ಎಂದೂ ತಪ್ಪಲ್ಲ. ಯಾರಿಗೂ ತೊಂದರೆ ನೀಡದೆ, ಯಾರಿಗೂ ಕಷ್ಟ ಕೊಡದೆ, ಬೇರೆಯವರಿಗೆ ದುಃಖವನ್ನು ನೀಡದೆ, ಸದಾ ಬೇರೆಯವರ ಸಂತೋಷಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿಡುವವರು ಕೆಲವೇ ಕೆಲವರು. ಅಂತಹವರಲ್ಲಿ ನಮ್ಮ ಗುರುಗಳೂ ಒಬ್ಬರು.  ನನ್ನ ಅನಿಸಿಕೆಯಂತೆ ’ಗುರು’ ಹಾಗೂ ’ದೀಪದ ಬತ್ತಿ’ಗೆ ಏನೂ ವ್ಯತ್ಯಾಸವಿಲ್ಲ. ’ಬತ್ತಿ’ಯು ತನ್ನನ್ನು ತಾನು ಉರಿಸಿಕೊಂಡು   ಬೆಳಕನ್ನು ನೀಡಿದರೆ, ’ಗುರು’ವು ಬೆಂಕಿಯಂತಹ ಸಮಸ್ಯೆಗಳನ್ನು ತಾವು ತೆಗೆದುಕೊಂಡು ’ಜ್ಞಾನ’ವೆಂಬ ಬೆಳಕನ್ನು ನೀಡುತ್ತಾರೆ.  ಅಂತಹ ಗುರುಗಳೊಂದಿಗೆ  ನಾವಿರುವುದಕ್ಕೆ ನಾವೇ ಭಾಗ್ಯವಂತರು.

ಉರಿಯುವ ದೀಪದ ಬಳಿ ಇರುವವರಿಗೆ ಕತ್ತಲೆಯ ಭಯವಿಲ್ಲ
ಗುರುವಿನ ಚರಣಕೆ ಶರಣಾದವರಿಗೆ ಗುರಿ ತಲುಪಲು ತೊಡಕಿಲ್ಲ |

ಗುರುಗಳನ್ನು ನೆನೆಯುತ್ತಾ ಅವರ ಆದರ್ಶಗಳನ್ನು ಪಾಲಿಸಿ ’ಗುರಿ’ಯನ್ನು ತಲುಪೋಣ..

ಭಕ್ತಿಯಿಂದರ್ಪಿಸಲು ಗುರುಗಳಿಗೆ  ಭಿಕ್ಷೆ
ಶಿಷ್ಯ ವೃಂದಕ್ಕೊಂದು ಶ್ರೀರಾಮ ರಕ್ಷೆ
ಗುರುಗಳಾಶೀರ್ವಾದ ಬಲವೊಂದೇ ಸಾಕು,
ಬಾಳು ನಂದನವಾಗಲು ಇನ್ನೇನು ಬೇಕು?

ಪರಿಚಯ

ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀಯುತ ಗೋವಿಂದ ಶಾಸ್ತ್ರಿ ಮುಂಡಾಜೆ ದಂಪತಿಗಳಿಗೆ ಜ್ಯೇಷ್ಠ ಪುತ್ರಿಯಾಗಿ ೧೯೯೧ರಲ್ಲಿ

ದಕ್ಷಿಣ ಕನ್ನಡದ ಪುತ್ತೂರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಹಂತದವರೆಗೆ ಪುತ್ತೂರಿನ

ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದು ಪ್ರಸ್ತುತ ಉಜಿರೆಯಲ್ಲಿರುವ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು

ಕಮ್ಯುನಿಕೇಶನ್ ವಿಷಯವನ್ನು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸಿದ್ಧ ಚಕ್ರಕೋಡಿ ಮನೆತನಕ್ಕೆ ಸೇರಿದ ಇವರು

ಶ್ರೀಮಠದ ಬೃಹತ್ ಸಮಾರಂಭಗಳಲ್ಲೆಲ್ಲಾ ಕಾರ್ಯಕರ್ತರಾಗಿ ದುಡಿದಿರುತ್ತಾರೆ.

ಇವರಿಗೂ ಕುಟುಂಬಕ್ಕೂ ಶ್ರೀಗುರುದೇವತಾನುಗ್ರಹ ಸದಾ ಇರಲೆಂದು ಹಾರೈಕೆ

Facebook Comments Box