ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಒಳ್ಳೆಯ ಕಾರ್ಯಕ್ಕೆ ಮುಂದಾಗುವಾಗ ಬಲಗಾಲು ಮುಂದಿಟ್ಟು ಪ್ರವೇಶಿಸುವುದು ಪದ್ಧತಿ. ಬಲ ಎಷ್ಟು ಮುಖ್ಯವೋ ಎಡವೂ ಅಷ್ಟೇ ಮುಖ್ಯ. ಹೇಗಾದರೆ ಒಳ್ಳೆಯ ಕಾರ್ಯಕ್ಕೆ ನಾವು ಬಲಗಾಲು ಮುಂದಿಟ್ಟು ಮುಂದಾಗ್ತೇವೆ, ಹಾಗೇ ಬೇರೆ ರೀತಿಯ ಕಾರ್ಯಗಳಿಗೆ ಎಡಗಾಲು ಮುಂದಿಟ್ಟು ಮುಂದಾಗುವುದು ಕೂಡ ಇದೆ. ಈಗ ಹನುಮಂತ ಮಾಡಿದ್ದೂ ಅದನ್ನು. ಎಡಗಾಲು ಮುಂದಿಟ್ಟು ಲಂಕೆಯನ್ನು ಪ್ರವೇಶ ಮಾಡಿದನಂತೆ ಹನುಮ. ಮಾತ್ರವಲ್ಲ, ಲಂಕೆಯ ಮಹಾದ್ವಾರವನ್ನು ಆತನು ಉಪಯೋಗಿಸಲಿಲ್ಲ. ಯದ್ಯಪಿ, ಲಂಕಾ ದೇವಿಯನ್ನು ಗೆದ್ದಾಗಿದೆ. ಲಂಕಾ ದೇವಿಯೇ ಮೊದಲು ಯುದ್ಧಾಹ್ವಾನ ಕೊಟ್ಟವಳು, ಈಗ ಲಂಕಾ ನಗರಕ್ಕೆ ಆಹ್ವಾನವನ್ನು, ಸ್ವಾಗತವನ್ನು ನೀಡಿದ್ದಾಳೆ. ಹಾಗಾಗಿ ಲಂಕಾ ಪ್ರವೇಶಕ್ಕೆ ಏನಡ್ಡಿಯಿಲ್ಲ. ಆದರೆ ಹನುಮಂತ ದ್ವಾರದ ಮೂಲಕವಾಗಿ ಪ್ರವೇಶ ಮಾಡ್ಲಿಲ್ಲ, ದ್ವಾರವಲ್ಲದ ಸ್ಥಳದಿಂದ, ಪ್ರಾಕಾರವನ್ನು ಹಾರಿ ಲಂಕೆಯನ್ನು ಪ್ರವೇಶ ಮಾಡಿದ. ಅದು ಒಳ್ಳೆದು ಮಾಡಲಿಕ್ಕಲ್ಲವೆಂದೇ ಲೆಕ್ಕವದು. ಮಿತ್ರನಾದರೆ ದ್ವಾರದಿಂದ ಒಳಗೆ ಬರಬೇಕು. ಹಾಗೇ, ಕಾಮರೂಪಿಣಿಯಾದ ಲಂಕಾ ನಗರಿಯನ್ನು ಗೆದ್ದ ಹನುಮಂತ, ಪ್ರಾಕಾರವನ್ನು ಲಂಘಿಸಿ ಎಡಗಾಲನ್ನು ಮುಂದಿಟ್ಟು ಪ್ರವೇಶ ಮಾಡ್ತಾನೆ.
ಪ್ರಯಾಣ ಕಾಲದಲ್ಲಿ, ಸ್ವಗೃಹವನ್ನು ಪ್ರವೇಶಿಸುವಾಗ, ವಿವಾಹ ಕಾಲದಲ್ಲಿ ಮನೆಯನ್ನು ತುಂಬಿಸುವಾಗ ಕುಲವಧು ಬಲಗಾಲು ಮುಂದಿಟ್ಟು ಪ್ರವೇಶ ಮಾಡ್ಬೇಕು. ಆದರೆ ಶತ್ರುವಿನ ನಗರವನ್ನು ಪ್ರವೇಶ ಮಾಡುವಾಗ ದೊರೆಯಾದವನು ಎಡಗಾಲು ಮುಂದಿಟ್ಟು ಪ್ರವೇಶ ಮಾಡಬೇಕು. ಇಲ್ಲಿ ದೊರೆಯ ಪ್ರತಿನಿಧಿ ಆಗಿರತಕ್ಕಂತ ಹನುಮಂತ ಅದನ್ನೇ ಮಾಡ್ತಾನೆ. ಈ ಪ್ರಾಕಾರವನ್ನು ನೆಗೆದವನು, ಇಳಿಯಬೇಕಾದರೆ ಎಡಗಾಲನ್ನಿಟ್ಟ. ಬಲಗಾಲು ಆಮೇಲೆ ಇಟ್ಟ. ಇಟ್ಟ ಎಡಗಾಲು ಹನುಮಂತನ ಪ್ರಕಾರ, ‘ಇದು ನಾನು ರಾವಣನ ತಲೆಯ ಮೇಲೆ ಇಡ್ತಾ ಇದ್ದೇನೆ’ ಎನ್ನುವ ಭಾವ ಇದೆ, ಲಂಕೆಯ ನೆಲದಲ್ಲಿ ಅಂತ ಅಲ್ಲ. ರಾವಣನ ತಲೆಮೆಟ್ಟುವ ಮೂಲಕ ಶುಭಾರಂಭ ಅನ್ನುವ ಹಾಗೆ.
ಸರಿ, ಲಂಕಾ ನಗರಿಯೊಳಗೆ ಹನುಮಂತನ ಸಂಚಾರ ಪ್ರಾರಂಭ. ಚಂದ್ರೋದಯದ ಹೊತ್ತು ಅದು. ರಾಜಮಾರ್ಗದಲ್ಲಿಯೇ ಮುನ್ನಡೆದನಂತೆ ಹನುಮಂತ. ಅಲ್ಲಿ ಮುತ್ತಿನಂಥಾ ಪುಷ್ಪಗಳು ಚೆಲ್ಲಿದ್ದವು. ಇಕ್ಕೆಲಗಳಲ್ಲಿ ವಜ್ರದ ಜಾಲಕಗಳನ್ನು ಒಳಗೊಂಡು ಐರಾವತದಂತೆ ಶೋಭಿಸುತ್ತಿರುವ ಆ ಭವನಗಳು. ಹನುಮಂತನ ಕಣ್ಣಿಗೆ ಲಂಕೆ ಹೊತ್ತಿ ಉರಿಯಿತೋ ಎಂಬಂತೆ ಗೋಚರಿಸಿತು ಮುಕ್ತಾಮಣಿಗಳ ಪ್ರಭೆಯಿಂದಲಾಗಿ. ಅಲ್ಲಿ ಬಗೆಬಗೆಯ ಭವನಗಳಿದ್ದವು. ಲಂಕೆಯ ಭವನಗಳಿಗೆ ಹೂಮುಡಿಸಲಾಗಿದೆ, ಆಭರಣಗಳನ್ನು ತೊಡಿಸಲಾಗಿದೆ. ಒಂದೊಂದೇ ಮನೆಯನು ನೋಡ್ತಾ ಇದ್ದಾನೆ ಹನುಮಂತ. ಒಂದು ಇದ್ದ ಹಾಗೆ ಇನ್ನೊಂದು ಇಲ್ಲ. ಚಿತ್ರ-ವಿಚಿತ್ರವಾಗಿರುವ ಆಕೃತಿಗಳು. ಲಂಕಾಲೋಕದ ಸ್ತ್ರೀಯರಿಂದ ಮಧುರ ಗಾಯನ ಕೇಳಿತು. ಆ ಗಾಯನದಲ್ಲಿ ಸ್ವಲ್ಪ ಅಮಲಿನ ಚಿಹ್ನೆಯೂ ಇದೆ. ಸ್ತ್ರೀಯರ ನೂಪುರಗಳು, ಕಾಂಚೀ(ಡಾಭಿ)ಗಳು ಸದ್ದು ಮಾಡ್ತಾ ಇದ್ದವು. ಮೆಟ್ಟಿಲು ಹತ್ತಿ ಹೋಗುವ ಶಬ್ದ. ಹಾಗೆಯೇ ಚಪ್ಪಾಳೆ, ಘರ್ಜಿಸುವ ಶಬ್ದ ಎಲ್ಲ ಕೇಳ್ತಾ ಇದೆ. ಆಶ್ಚರ್ಯ ಕಾದಿತ್ತು ಹನುಮಂತನಿಗೆ, ಮಂತ್ರಘೋಷ ಕೇಳಲು ಶುರುವಾಯಿತಂತೆ. ರಾಕ್ಷಸರೇ ಮಂತ್ರ ಹೇಳ್ತಾ ಇದ್ದಾರೆ, ವೇದಾಧ್ಯಯನವನ್ನೂ ಮಾಡ್ತಾ ಇದ್ದರಂತೆ. ಇದೆಲ್ಲ ಅವರ ಕೈಗೆ ಸಿಕ್ಕಿದರೆ ಇನ್ನು ಏನೇನು ವಿಪತ್ತೋ ಪ್ರಪಂಚಕ್ಕೆ! ಇನ್ನು ಕೆಲವರದು ರಾವಣನ ಸ್ತೋತ್ರ! ಇನ್ನು ಕೆಲವರು ರಾಕ್ಷಸರು ಬೊಬ್ಬಿರಿತಾ ಇದ್ದರು. ಮತ್ತೂ ಮುಂದುವರೆದು ಹೋದಾಗ ಹನುಮಂತ ನಗರ ಮಧ್ಯದಲ್ಲಿ ದೊಡ್ಡ ರಾಕ್ಷಸರ ಸೈನ್ಯವೊಂದನ್ನು ಕಂಡ.
ಆಮೇಲೆ ರಾವಣನ ‘ಚರಲು’ (ಅಧಿಕಾರಿಗಳು) ಅಲ್ಲಲ್ಲಿ ಅಡ್ಡಾಡ್ತಾ ಇತ್ತು. ಇನ್ನು ಎಂತೆಂಥಾ ರಾಕ್ಷಸರನ್ನು ಹನುಮ ಕಂಡನಂತೆ? ದೀಕ್ಷಿತರು, ಜಟೆ ಬಿಟ್ಟ ರಾಕ್ಷಸರು, ಕಡಲ ರಾಕ್ಷಸರು ಪೂರ್ತಿ ಬೋಳು ಮಾಡಿಕೊಂಡಿದ್ದರಂತೆ. ಕೆಲವರು ಗೋವಿನ ಚರ್ಮವನ್ನು ತೊಟ್ಟಿದ್ದರಂತೆ. ಇನ್ನು ಕೆಲವು ರಾಕ್ಷಸರಿಗೆ ದರ್ಭಮುಷ್ಟಿಯೇ ಆಯುಧವಂತೆ. ಇನ್ನು ಕೆಲವು ರಾಕ್ಷಸರಿಗೆ ಅಗ್ನಿಕುಂಡವೇ ಆಯುಧವಂತೆ. ಅಂದರೆ, ವಾಮಾಚಾರವನ್ನು ಮಾಡತಕ್ಕಂತವನು.
ಹಾಗೆಯೇ, ಮುಂದುವರೆದ ಹನುಮಂತನಿಗೆ ರಾಕ್ಷಸರ ಅನೇಕ ವೈವಿಧ್ಯಗಳು ಕಂಡವು. ಒಂದೇ ಕಣ್ಣಿನ, ಒಂದೇ ಕಿವಿಯ, ಜೋಲು ಹೊಟ್ಟೆಯ ರಾಕ್ಷಸರು. ಇನ್ನು ಕೆಲವರಿಗೆ ಎದೆಯೇ ಜೋಲುತ್ತಾ ಇತ್ತಂತೆ. ಕೆಲವರು ಕರಾಳರು, ಕೆಲವರಿಗೆ ಸೊಟ್ಟೆ ಮೂತಿ, ಕೆಲವರು ವಿಕಟರು, ಕೆಲವರು ವಾಮನರು. ಬಗೆಬಗೆಯ ಆಯುಧಗಳನ್ನು ಹಿಡಿದವರು.
ಧನುಸ್ಸು, ಜಡ್ಗ, ಶತಘ್ನೀ, ಮುಸಲ, ಪರಿಧಗಳನ್ನು ತೊಟ್ಟ ರಾಕ್ಷಸರು. ವಿಚಿತ್ರ ಕವಚಗಳನ್ನು ತೊಟ್ಟು ಶೋಭಿಸುವವರು ಕೆಲವರು. ಆದರೆ ಒಳ್ಳೆಯ ತಳಿಗಳೂ ಇದ್ದವಂತೆ. ಕೆಲವು ರಾಕ್ಷಸರು ಹೆಚ್ಚು ಸ್ಥೂಲ ಅಲ್ಲ, ಅತಿಕೃಶವೂ ಅಲ್ಲ. ಅತಿ ದೀರ್ಘವಲ್ಲ, ಅತಿ ಹೃಸ್ವವಲ್ಲ. ಅತಿ ಬಿಳಿಯಲ್ಲ, ಅತಿ ಕಪ್ಪಲ್ಲ. ಅತಿ ಕುಬ್ಜ ಅಲ್ಲ, ಹೇಗಿರಬೇಕೋ ಹಾಗಿದ್ದಾರೆ. ಅಂಥವರೂ ಇದ್ದರು. ಕೆಲವರು ವಿರೂಪರು, ಕೆಲವರು ಬಹುರೂಪರು. ಇನ್ನು ಕೆಲವರು ಸುರೂಪರು. ಕೆಲವರ ಕೈಯ್ಯಲ್ಲಿ ಪತಾಕೆ, ಕೆಲವರ ಕೈಯ್ಯಲ್ಲಿ ಧ್ವಜ. ಕೆಲವರ ಕೈಯ್ಯಲ್ಲಿ ಕೆಲವು ಕೆಲವು ಆಯುಧಗಳು.
ಕೆಲವರು ಒಳ್ಳೆಯ ಮಾಲೆ ಹಾಕಿಕೊಂಡು ಗಂಧ ಲೇಪನ ಮಾಡಿಕೊಂಡಿದ್ದಾರೆ. ಒಳ್ಳೊಳ್ಳೆಯ ಆಭರಣಗಳನ್ನು ಹಾಕಿಕೊಂಡಿದ್ದಾರೆ, ನಾನಾ ರೀತಿಯ ವೇಷಗಳನ್ನು ಧಾರಣೆ ಮಾಡಿದ್ದಾರೆ. ಮನಬಂದಂತೆ ಇದ್ದ ಕೆಲವರು ರಾಕ್ಷಸರನ್ನು ಹನುಮಂತ ಕಂಡ. ಮುಂದೆ ಹನುಮಂತ ಅವನಿಗೇ ಗೊತ್ತಿಲ್ಲದಂತೆ ರಾವಣನ ಅರಮನೆಯ ಮುಂದೆ ಬಂದು ನಿಂತಿದ್ದಾನೆ. ಅಲ್ಲಿ ಲಕ್ಷೋಪಲಕ್ಷ ರಾಕ್ಷಸರು ಶೂಲ, ವಜ್ರಗಳನ್ನು ಹಿಡಿದು ನಿಂತಿದ್ದಾರೆ. ತಲೆ ಎತ್ತಿ ನೋಡಿದಾಗ ಇದು ರಾವಣನ ಮನೆ ಅಂತ ಗೊತ್ತಾಯಿತು ಹನುಮನಿಗೆ. ಇಡೀ ಲಂಕೆಯಲ್ಲಿಯೇ ಅತ್ಯಂತ ಶೋಭಾಯಮಾನವಾದ ಭವನಮಾಲಿಕೆ ಅದು. ಮೈಲುಗಟ್ಟಲೆ ವಿಸ್ತೀರ್ಣದಲ್ಲಿ ಇತ್ತಂತೆ ಆ ಒಂದು ನಿಲಯ. ಯಾಕೆಂದರೆ ಅಲ್ಲಿ ಅನೇಕಾನೇಕ ಪ್ರಾಸಾದಗಳು, ಭವನಗಳು ಇದ್ದವು. ದೊಡ್ಡ ಅಪರಂಜಿ ಚಿನ್ನದ ತೋರಣವಿತ್ತು. ಗಿರಿಶಿಖರದಲ್ಲಿ ಲಂಕೆ, ಲಂಕೆಯ ನೆತ್ತಿಯಲ್ಲಿ ರಾವಣನ ಮನೆ. ಆ ಮನೆಯ ಸುತ್ತ ಕಂದಕಗಳು, ಕೋಟೆ. ತಪ್ಪು ಮಾಡಿಕೊಂಡವರಿಗೆ ರಕ್ಷಣೆ ಜಾಸ್ತಿ ಬೇಕಾಗ್ತದೆ. ಹೀಗೆ, ಕಂದಕಗಳ ಸುತ್ತ ನೀರು, ನೀರಲ್ಲಿ ಕಮಲ ಮತ್ತು ಉತ್ಫಲಗಳು ಅರಳಿದ್ದವು. ಎಲ್ಲ ಕಡೆಯಿಂದ ಆ ಪ್ರಾಕಾರವಿತ್ತು. ಮನೆಯೆಂದರೇನು ಸ್ವರ್ಗದಂತೆ ಇದೆ.
ದಿವ್ಯವಾಗಿದೆ. ದಿವ್ಯನಾದವನ್ನ ಹೊರಗೆ ಚೆಲ್ತಾ ಇದೆ ಮನೆ. ಕುದುರೆಗಳ ಹೇಷಾರವವೇನು? ಆಭರಣಗಳ ಧ್ವನಿಯೇನು? ರಥಗಳೇನು, ಪಲ್ಲಕ್ಕಿಗಳೇನು, ವಿಮಾನಗಳೇನು, ಆನೆ ಕುದುರೆಗಳೇನು, ನಾಲ್ಕು ದಂತದ ಆನೆಗಳನ್ನು ಕಂಡನಂತೆ ಹನುಮಂತ. ಮನೋಹರವಾದ ದ್ವಾರ. ಆ ದ್ವಾರವು ಅಲಂಕೃತವಾಗಿದೆ. ಅಮಲೇರಿದ ಮೃಗಪಕ್ಷಿಗಳು. ಸಾವಿರಾರು ರಾಕ್ಷಸರು ಕಾವಲು ಕಾಯ್ತಿದಾರೆ ಆ ರಾವಣನ ಮನೆಯನ್ನು. ಇಂತಹ ರಾವಣನ ಮನೆಯನ್ನು ಪ್ರವೇಶಿಸಲೆಣಿಸಿದನು ಹನುಮಂತ. ಅಷ್ಟು ಹೊತ್ತಿಗೆ ಚಂದ್ರ ಮೇಲೆ ಬಂದ. ಚಂದ್ರದೀಪದಲ್ಲಿ ಲಂಕೆಯನ್ನು ನೋಡ್ತಾನೆ ಹನುಮಂತ. ಲಂಕೆಯನ್ನು ಪ್ರವೇಶಮಾಡುವಾಗ ಚಂದ್ರೋದಯ. ರಾವಣನ ಮನೆಗೆ ಬರುವಾಗ ಮಧ್ಯ ಬಂದಿದಾನೆ ಚಂದ್ರ. ಬೆಳದಿಂಗಳನ್ನು ಚೆಲ್ತಾ ಇದಾನೆ. ನೋಡಿದರೆ ದೊಡ್ಡ ಬಿಳಿಯ ನಂದಿಯು ಹಟ್ಟಿಯಲ್ಲಿ ಅತ್ತಿತ್ತ ಅಡ್ಡಾಡುವಂತೆ ಕಾಣ್ತಿದಾನೆ ಚಂದ್ರ. ಲೋಕದ ದುಃಖವನ್ನು ಕಳೆಯುವವನು. ಸಮುದ್ರವನ್ನು ಉಕ್ಕೇರಿಸುವವನು. ಸಮಸ್ತ ಜೀವರಾಶಿಗಳಿಗೆ ತಂಪೀಯುವವನು ಆ ಚಂದ್ರನು ಮೇಲೇರಿ ಬರುವುದನ್ನು ಕಂಡನಂತೆ ಹನುಮಂತೆ.
ಇತ್ತ ಲಂಕೆಯಲ್ಲಿ ಸಂಗೀತ ಜೋರಾಯಿತು. ಕಿವಿಗೆ ಇಂಪಾಗಿರುವ ತಂತ್ರೀ ವಾದ್ಯಗಳು ಆರಂಭವಾದವಂತೆ. ಹನುಮಂತ ನೋಡ್ತಾ ಇದಾನೆ. ಅನೇಕ ನಾರಿಯರು ತಮ್ಮ ಪತಿಯ ಜೊತೆಯಲ್ಲಿ ಸುಖವಾಗಿ ಪವಡಿಸಿದಾರೆ. ಕೆಲವು ರಾಕ್ಷಸರು ಅತ್ಯದ್ಭುತ ಕ್ರೌರ್ಯಕ್ಕಾಗಿ ಹೊರಟರಂತೆ. ರಾಕ್ಷಸರು ಕೆಲವರು ಒಬ್ಬರನ್ನೊಬ್ಬರು ಬೈದಾಡ್ತಾ ಇದ್ದರಂತೆ. ಮತ್ತೊಬ್ಬರ ಭುಜಕ್ಕೆ ತಮ್ಮ ಭುಜ ಘಟ್ಟಿಸುವ ರಾಕ್ಷಸರು, ಇನ್ನು ಕೆಲವರು ಕುಡಿದ ಅಮಲೇರಿ ಹುಚ್ಚರಂತೆ ಹಲುಬುತ್ತಾ ಇದ್ದಾರೆ. ಕೆಲವು ರಾಕ್ಷಸರು ಎದೆ ತಟ್ತಾ ಇದ್ದರಂತೆ. ಇನ್ನು ಕೆಲವರು ತಮ್ಮ ಕಾಂತೆಯರ ಮೇಲೆ ಠೀವಿಯಲ್ಲಿ ಕೈಯಿಡ್ತಾ ಇದ್ರು. ಕಲವು ರಾಕ್ಷಸರು ಬಗೆಬಗೆಯ ವೇಷಗಳನ್ನು ತೊಟ್ಟಿದ್ದರು, ಇನ್ನು ಕೆಲವು ರಾಕ್ಷಸರು ಧನುರ್ವಿದ್ಯೆಯ ಅಭ್ಯಾಸವನ್ನು ಮಾಡ್ತಾ ಇದ್ರು. ಕಾಂತೆಯರನ್ನ ಕಂಡನಂತೆ ಹನುಮಂತ. ಕೆಲವರು ಪ್ರೀತಿ ಮಾತುಕತೆಗಳಲ್ಲಿ ತೊಡಗಿದ್ದರು, ಕೆಲವರು ನಿದ್ದೆ ಮಾಡಿದ್ದರು, ಇನ್ನು ಕೆಲವರು ಒಳ್ಳೆಯ ಮುಖ, ಒಳ್ಳೆಯ ರೂಪ ನಗುತ್ತಾ ಇದ್ದರು. ಇನ್ನು ಕೆಲವರು ತಮ್ಮ ತಮ್ಮ ಪ್ರಿಯರ ಮೇಲೆ ಕೋಪ ಮಾಡಿಕೊಂಡು ನಾಗಿಣಿಯಂತೆ ಉಸಿರು ಬಿಡ್ತಾ ಇದ್ದರಂತೆ.
ಆನೆಗಳು ಘೀಂಕಾರ ಮಾಡ್ತಾ ಇದ್ದವು ಯಾರೋ ಯಾರಿಗೋ ಸತ್ಕಾರ, ಗೌರವ, ಪೂಜೆ ಮಾಡ್ತಾ ಇರೋದನ್ನ ಕಾಣ್ತಾನೆ ಹನುಮಂತೆ. ಮತ್ತೆ ಕೆಲವು ವೀರರು ಯುದ್ಧದ ತೀಟೆ ತೀರದೆ ಬಿಸಿಯುಸಿರು ಬಿಡ್ತಾ ಇದ್ದರಂತೆ. ಕೆಲವು ಒಳ್ಳೆಯ ರಾಕ್ಷಸರನ್ನೂ ಕಂಡ. ಅವರು ಹೇಗಿದ್ದರು ಅಂದ್ರೆ ಬುದ್ಧಿಪ್ರಧಾನರು, ಶ್ರದ್ಧೆಯುಳ್ಳವರು, ನಾನಾ ವಿಧಾನಗಳನ್ನ ಬಲ್ಲವರು. ಇಂತಹ ಕೆಲವು ಸಾತ್ವಿಕ ರಾಕ್ಷಸರನ್ನು ಕಂಡಾಗ ಇಲ್ಲಿ ಒಳ್ಳೆಯವರೂ ಇದ್ದಾರೆ ಅಂತ ಸಂತೋಷಗೊಂಡನಂತೆ ಹನುಮಂತ. ತನ್ನಂತೆ ಶೋಭೆಯುಳ್ಳ ಕೆಲವು ರಾಕ್ಷಸರನ್ನೂ ಹನುಮಂತ ಕಂಡ. ಮತ್ತೆ ಕೆಲವು ವಿರೂಪರನ್ನೂ ಕಂಡ. ನಾರಿಯರನ್ನು ಕಂಡ. ಕೆಲವರು ಶುದ್ಧ ಮನಸ್ಸುಳ್ಳವರು, ಮಹಾನುಭಾವರಾದ ಪತಿವ್ರತಾ ಸ್ತ್ರೀಯರು, ಪತಿ ಮತ್ತು ಪಾನದಲ್ಲಿ ಏಕಕಾಲದಲ್ಲಿ ಪ್ರೀತಿ ಇಟ್ಟಿಕೊಂಡಿರುವವರು, ಕೆಲವರು ಉಪ್ಪರಿಗೆಯಲ್ಲಿ ತಮ್ಮ ಪತಿಯ ಮಡಿಲಿನಲ್ಲಿ ಸುಖವಾಗಿ ಪವಡಿಸಿರತಕ್ಕಂತವರು, ತಮ್ಮ ಪತಿಯ ಮನಸ್ಸನ್ನು ಪ್ರವೇಶ ಮಾಡಿರುವಂಥವರು, ಧರ್ಮಮಾರ್ಗದಲ್ಲಿರುವಂಥವರು, ಪತಿವ್ರತಾ ಸ್ತ್ರೀಯರನ್ನೂ ಕೂಡಾ ಕಂಡ. ಕೆಲವರು ಅವಘುಂಟನ ಹಾಕಿಕೊಂಡಿರದ ಸ್ವರ್ಣ ಕಾಂತಿಯ ಸ್ತ್ರೀಯರು, ಪತಿ ವಿರಹದ ದುಃಖದಲ್ಲಿ ಬಿಳುಚಿರುವವರು, ಹೀಗೆ ಅನೇಕ ಬಗೆಯ ಸ್ತ್ರೀಯರನ್ನು ಕಾಣ್ತಾನೆ ಮತ್ತು ಗಮನವಿಟ್ಟು ನೋಡ್ತಾನೆ. ಚಂದ್ರನಂತಹ ಮುಖ, ವಕ್ರವಾಗಿರುವ ರೆಪ್ಪೆಗಳು, ಒಳ್ಳೆಯ ನೇತ್ರಗಳು, ಒಳ್ಳೆಯ ಆಭರಣಗಳು ಇವನ್ನೆಲ್ಲ ನೋಡಿದ ಹನುಮಂತ. ಸೀತೆಯ ಹೋಲಿಕೆ ಇದೆಯಾ? ಆ ಕಣ್ಣುಗಳು, ಆಭರಣಗಳು, ಅದನ್ನೆಲ್ಲ ಗಮನಿಸ್ತಿದಾನೆ ಹನುಮಂತ ಎಲ್ಲಿಯಾದರೂ ಸೀತೆ ಕಾಣ್ತಾಳ ಎಂಬುದಾಗಿ. ಆದರೆ ಸೀತೆ ಮಾತ್ರ ಕಾಣಲಿಲ್ಲ. ಸತ್ಕುಲಪ್ರಸೂತೆ, ಜನಕವಂಶಜಾತೆ, ಸರ್ವಲಕ್ಷಣ ಸಂಪನ್ನೆ, ಸನಾತನ ಧರ್ಮಮಾರ್ಗದಲ್ಲಿರುವವಳು, ರಾಮನಲ್ಲಿಯೇ ತನ್ನ ದೃಷ್ಟಿಯನ್ನು ನೆಟ್ಟವಳು, ಅಂತಹ ರಾಮನಲ್ಲಿ ಭಾವವುಳ್ಳ ಸೀತೆಯನ್ನು ಹನುಮಂತ ಕಾಣಲಿಲ್ಲ. ರಾಮನ ಮನಸ್ಸಿನಲ್ಲಿ ಸದಾ ಇರುವವಳು, ಜಗತ್ತಿನ ಎಲ್ಲ ಸ್ತ್ರೀಯರಿಗಿಂತ ವಿಶಿಷ್ಟವಾಗಿರುವಂತಹವಳು, ಜಗತ್ತಿನ ಉತ್ತಮೋತ್ತಮ ಸ್ತ್ರೀಯರಿಗಿಂತ ಶ್ರೇಷ್ಠಳಾದವಳು ಸೀತೆ. ಅವಳನ್ನ ವಾಲ್ಮೀಕಿಗಳು ವರ್ಣನೆ ಮಾಡಿದಾರೆ. ಯಾವ ಸೀತೆಯ ಕೊರಳಿನಲ್ಲಿ ಉತ್ತಮೋತ್ತಮವಾದ ನಿಷ್ಕವೆಂಬ ಆಭರಣವಿತ್ತೋ ಆ ಕೊರಳ ಮೇಲೆ ಇಂದು ಕಣ್ಣೀರಧಾರೆ. ಒಳ್ಳೆಯ ಕೊರಳವಳು, ಉತ್ತಮೋತ್ತಮವಾಗಿರತಕ್ಕಂತಹ ಕಂಠ, ಒಂದು ಕಾಲದಲ್ಲಿ ತನ್ನ ಪತಿಯ ಪಕ್ಕದಲ್ಲಿ ಮಯೂರಿಯಂತೆ ನಲಿದವಳು, ಆದರೆ ಇಂದು ಕಣ್ಣೀರಿನಿಂದ ಕೈ ತೊಳಿತಾ ಇದಾಳೆ. ಅಂತಹ ಮನುಷ್ಯೇಂದ್ರನಾದ ರಾಮನ ಪತ್ನಿಯನ್ನು ಕಾಣದೇ ದುಃಖ ತುಂಬಿತು ಹನುಮನ ಮನಸ್ಸಿನಲ್ಲಿ. ಕೆಲಕಾಲ ಏನೂ ತೋಚದ ದಿಙ್ಮೂಢ ಸ್ಥಿತಿ ಹನುಮನನ್ನು ಆವರಿಸಿತು. ಆದರೆ ಪ್ರಯತ್ನ ಬಿಡಲಿಲ್ಲ ಆತ. ಅಲ್ಲಿ ಇಲ್ಲಿ ಹುಡುಕಿ ಮತ್ತೆ ರಾವಣನ ಮನೆಗೆ ಬಂದ. ಹನುಮಂತ ಇದ್ದಕಿದ್ದಂತೆ ರಾವಣನ ಮನೆಯೊಳಗೆ ಪ್ರವೇಶ ಮಾಡಲಿಲ್ಲ. ಸುತ್ತಮುತ್ತ ನೋಡ್ತಾನೆ ಮೊದಲು ಏಳು ಮಹಡಿಗಳುಳ್ಳ ಮನೆಯಲ್ಲಿ ಹುಡುಕಿ ಹುಡುಕಿ ಕೊನೆಗೆ ಮತ್ತೆ ರಾಕ್ಷಸೇಂದ್ರನ ಮನೆಗೆ ಬಂದ.
ರಾವಣನ ಮನೆಯ ಪ್ರಾಕಾರವೆ ಸೂರ್ಯನಂತಿದೆ. ಸುರಕ್ಷೆ ತುಂಬ ಇದೆ. ಸಿಂಹಗಳು ವನದಲ್ಲಿ ಅಡ್ಡಾಡುವಂತೆ ರಾಕ್ಷಸರ ಹಿಂಡು ಅಡ್ಡಾಡ್ತಾ ಇದೆ ಅಲ್ಲಿ. ಅವರನ್ನ ಗಮನಿಸ್ತಾನೆ ಹನುಮಂತ.
ಸಣ್ಣ ಕಪಿಯಾದ್ದರಿಂದ ಅವನ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇಡೀ ಲಂಕೆಯಲ್ಲಿ ಮುಕ್ತಸಂಚಾರ. ಬೆಳ್ಳಿ, ಬಂಗಾರದ ಅಲಂಕಾರದ ಬಾಗಿಲುಗಳು. ವಿಚಿತ್ರವಾದ ಆಕೃತಿಯ ಕೋಣೆಗಳು. ರಾಕ್ಷಸೇಂದ್ರನ ಮನೆಯ ಸುತ್ತ ಅಧಿಕಾರಿಗಳು ಸಂಚಾರ ಮಾಡುತ್ತಿದ್ದಾರೆ. ಕೆಲವರು ಆನೆಯ ಮೇಲೆ, ಕೆಲವರು ಕುದುರೆಯ ಮೇಲೆ, ಕೆಲವರು ರಥದ ಮೇಲೆ ಸಂಚಾರ ಮಾಡುತ್ತಿದ್ದಾರೆ. ಅವರೆಲ್ಲಾ ಶೂರರು. ಶ್ರಮವೇ ಗೊತ್ತಿಲ್ಲದವರು. ಅವರನ್ನು ಕೊಲ್ಲಲು ಸಾಧ್ಯವೇ ಇಲ್ಲ. ಅಂತಹ ವೀರರಾದ ರಾವಣನ ಅಧಿಕಾರಿಗಳು ಸುತ್ತ ಇದ್ದಾರೆ. ದಂತ, ಚಿನ್ನ, ಬೆಳ್ಳಿಯ ರಥಗಳು. ಕೆಲವು ರಥಗಳಿಗೆ ಸಿಂಹದ ಚರ್ಮವನ್ನು ಹೊದಿಸಲಾಗಿದೆ. ಇನ್ನು ಕೆಲವು ರಥಗಳಿಗೆ ಹುಲಿಯ ಚರ್ಮವನ್ನು ಹೊದಿಸಲಾಗಿದೆ. ಆ ರಥಗಳಲ್ಲಿ ಚಿಕ್ಕಚಿಕ್ಕ ಘಂಟೆಗಳು. ಕಿಣಿಕಿಣಿ ಶಬ್ಧವನ್ನು ಮಾಡುತ್ತಾ ಆ ರಥಗಳು ಸಂಚಾರ ಮಾಡುತ್ತಿದ್ದಾವೆ. ಎಲ್ಲಿ ನೋಡಿದರೂ ರತ್ನಗಳು, ರಾಜಾಸನಗಳು. ಈ ರಾಜಾಸನಗಳು ಪರಮವೀರರಿಗಾಗಿ ಮೀಸಲಿರುವ ಆಸನಗಳು. ಹೊರಗೆ ವಿನೀತರಾದ ಅಂತಪಾಲರು.
ಹೊರಗೆ ಅವರು ಕಾಯುತ್ತಿದ್ದರೆ ಒಳಗೆ ಉತ್ತಮ ಸ್ತ್ರೀಯರು. ಶ್ರೇಷ್ಠನಾರಿಯರು ಅಲ್ಲಿ ಸಂತೋಷವಾಗಿದ್ದಾರೆ. ಅಲ್ಲಿಂದ ಆಭರಣಗಳ ಸದ್ದು ಸಮುದ್ರದಂತೆ ಕೇಳಿಬರುತ್ತಿತ್ತು. ಆ ಭವನ ರಾಜಭವನವೇ. ಉತ್ತಮೋತ್ತಮ ಪರಿಮಳ ಹಬ್ಬಿ ಹರಡಿದೆ. ಭೇರಿ, ಮೃದಂಗಗಳ ಶಬ್ಧ. ಶಂಖನಾದ. ನಿತ್ಯ ಪೂಜೆ ಮತ್ತು ನಿತ್ಯ ಹೋಮ. ರಾಕ್ಷಸರು ಆ ಮನೆಯನ್ನು ಪೂಜಿಸುತ್ತಿದ್ದಾರೆ. ಸಮುದ್ರದಂತೆ ಗಂಭೀರ. ಅಂತಹ ದೊಡ್ಡ ಮನುಷ್ಯನ ದೊಡ್ಡ ಮನೆ. ಅಲ್ಲಿ ದೊಡ್ಡ ದೊಡ್ಡ ರತ್ನಗಳಿವೆ. ಅದನ್ನು ಹನುಮಂತ ಕಾಣುತ್ತಾನೆ. ಆನೆ, ಕುದುರೆಗಳ ಹಿಂಡು. ಇದು ಲಂಕಾಭರಣ ಎನ್ನುವುದು ಹನುಮಂತನ ಅಭಿಪ್ರಾಯ. ರಾವಣನ ಮನೆ ಲಂಕೆಗೆ ಕಿರೀಟದಂತೆ. ಕಿರೀಟಕ್ಕೆ ವಜ್ರದ ಮಣಿ ಇದ್ದಂತೆ. ಹನುಮಂತನು ರಾವಣನ ಹತ್ತಿರದಲ್ಲಿ ಓಡಾಡುತ್ತಿದ್ದಾನೆ. ಘೋರ ರಾವಣನ ಬಳಿಯಲ್ಲಿ ವೀರ ಹನುಮ. ಎರಡು ಧ್ರುವಗಳು. ಅದು ಅಧರ್ಮದ ಮುದ್ದೆ. ಇದು ಧರ್ಮಮೂರ್ತಿ. ಅವನು ರಾಜ. ಇವನು ಸೇವಕ. ರಾವಣನ ಕೋಟಿ ಪಾಲು ಮಿಗಿಲಾದ ಯೋಗ್ಯತೆಯುಳ್ಳ ರಾಮನ ಸೇವಕ. ಮನೆಯ ಒಳಗೆ ಹನುಮಂತ ಹೋಗಲಿಲ್ಲ. ಮತ್ತೊಮ್ಮೆ ಹೊರಗೆ ಸಂಚಾರವನ್ನು ಪ್ರಾರಂಭಿಸಿದ.
ಎಚ್ಚರಿಕೆಯಿಂದಿದ್ದಾನೆ ಹನುಮಂತ. ಮನೆಯಿಂದ ಮನೆಗೆ, ಉದ್ಯಾನದಿಂದ ಉದ್ಯಾನಕ್ಕೆ ನಿರ್ಭೀತನಾದ ಹನುಮಂತನು ಸಂಚಾರವನ್ನು ಮಾಡುತ್ತಿದ್ದಾನೆ. ರಾವಣನ ಸೇನಾಪತಿಯಾದ ಪ್ರಹಸ್ತನ ಮನೆಯನ್ನು ಹೊಕ್ಕನು. ಕಪಿಗಳಿಗೆ ನೀಲನಿದ್ದಂತೆ. ಅಲ್ಲಿಂದ ಮಹಾಪಾರ್ಶ್ವನ ಮನೆಗೆ ಹಾರಿದ. ಮುಂದೆ ಕುಂಭಕರ್ಣನ ಮನೆಗೆ. ಅದು ದೊಡ್ಡದಾಗಿತ್ತು. ಅಲ್ಲಿಂದ ವಿಭೀಷಣನ ಮನೆಗೆ ನೆಗೆದನು. ತುಳಸೀ ರಾಮಾಯಣದಲ್ಲಿ ಇಲ್ಲಿಯ ಘಟನೆಗಳ ವರ್ಣನೆಯಿದೆ.
ವಿಭೀಷಣನ ಮನೆಯನ್ನು ಹುಡುಕಿದ. ಅಲ್ಲಿಂದ ಮಹೋದರನ ಮನೆ. (ದೊಡ್ಡಹೊಟ್ಟೆಯವನು). ರಾಕ್ಷಸರ ಹೆಸರೇ ಹೀಗಿತ್ತು. ಅಲ್ಲಿಂದ ವಿರೂಪಾಕ್ಷನ ಮನೆಗೆ ಹೋದನು. (ವಿರೂಪವಾದ ಕಣ್ಣುಳ್ಳವನು). ಶಿವನಿಗೂ ಈ ಹೆಸರಿದೆ. ಮೂರು ಕಣ್ಣುಳ್ಳವನು ಎನ್ನುವ ಅರ್ಥದಲ್ಲಿ. ಮುಂದೆ ವಿದ್ಯುಜ್ಜಿಹ್ವನ ಮನೆ(ಮಿಂಚಿನಂತೆ ನಾಲಿಗೆಯುಳ್ಳವನು). ಅಲ್ಲಿಂದ ವಿದ್ಯುನ್ಮಾಲಿಯ ಮನೆ(ಮಿಂಚಿನ ಮಾಲೆ). ಅಲ್ಲಿಂದ ವಜ್ರದಂಷ್ಟ್ರನ ಮನೆ (ವಜ್ರದಂತಹ ಹಲ್ಲುಳ್ಳವನು). ಮುಂದೆ ಶುಕನ ಮನೆ. ಅವನು ರಾವಣನ ಗುಪ್ತಚರ. ಅಲ್ಲಿಂದ ಸಾರಣನ ಮನೆ. ಅಲ್ಲಿಗೆ ತುಂಬಾ ವೇಗದಲ್ಲಿ ಪ್ರಯಾಣ ಮಾಡಿದ. ನಂತರ ಇಂದ್ರಜಿತನ ಮನೆ. ಅಲ್ಲಿಂದ ಜಂಬುಮಾಲಿಯ ಮನೆಗೆ. ಬಳಿಕ ಸುಮಾಲಿ. ಇವನು ಕೈಕಸೆಯ ತಂದೆ. ಮುಂದೆ ಸೂರ್ಯಶತ್ರು, ವಜ್ರಕಾಯ, ಧೂಮ್ರಾಕ್ಷ (ಹೊಗೆಯ ಕಣ್ಣವನು), ಸಂಪಾತಿ, ಶಠ(ಮೋಸಗಾರ), ವಿಕಟ, ದಂಷ್ಟ್ರ, ರೋಮಷ, ಯುದ್ಧೋನ್ಮತ್ತ(ಯುದ್ಧದ ಹುಚ್ಚು), ಮತ್ತ(ಅಮಲೇರಿದವನು), ಹಸ್ತಿಮುಖ, ಕರಾಲ, ಪಿಶಾಚ, ಶೋಣಿತಾಕ್ಷ(ರಕ್ತದ ಕಣ್ಣು) ಮುಂತಾದವರ ಮನೆಗೆ ಹೊದನು. ಇವರ ಹೆಸರುಗಳೇ ಹೀಗಿದ್ದ ಮೇಲೆ ಸಂಸ್ಕೃತಿ ಹೇಗಿದ್ದಿರಬಹುದು! ಅವರೆಲ್ಲರ ಮನೆಯಲ್ಲೂ ಹುಡುಕಿದನು ಹನುಮಂತ. ಎಂತಹ ವೈಭವದ ಮನೆಗಳು ಅವು. ಅಲ್ಲೆಲ್ಲ ಹುಡುಕಿದ ನಂತರ ಮತ್ತೆ ರಾವಣನ ಮನೆಗೆ ಬಂದನು. ಪ್ರತಿ ಬಾರಿಯೂ ಬೇರೆ ಮಾರ್ಗದಲ್ಲಿ ಬರುತ್ತಿದ್ದರಿಂದ ಈಗ ಸ್ತ್ರೀಯರ ಸೈನ್ಯ ಕಂಡಿತು ಅವನಿಗೆ. ಅವರು ರಾವಣನು ಒಳಗೆ ಮಲಗಿದರೆ ಹೊರಗೆ ಕಾಯುವಂತಹ ರಾಕ್ಷಸಿಯರು. ಅವರು ವಿಕಾರವಾದ ಕಣ್ಣವರು. ಕೆಲವರ ಕೈಯಲ್ಲಿ ಶೂಲ, ಕೆಲವರ ಕೈಯಲ್ಲಿ ಮುದ್ಗರ, ಕೆಲವರಲ್ಲಿ ತೋಮರ. ಬಳಿಕ ರಾಕ್ಷಸರ ಸೈನ್ಯ. ದೊಡ್ಡ ಆಕಾರದವರು. ಕೆಂಪು, ಬಿಳಿ, ಹಸಿರು ಬಣ್ಣದ ರಾಕ್ಷಸರು! ಅದರ ಬಳಿಕ ಯುದ್ಧದ ಆನೆಗಳು. ಅವುಗಳಿಗೆ ಸರಿಯಾದ ತರಬೇತಿಯಾಗಿದೆ. ಯುದ್ಧದಲ್ಲಿ ಅವು ಐರಾವತಕ್ಕೆ ಸಮಾನ. ಅವು ಗಿರಿಯಿಂದ ಝರಿ ಹರಿಯುವಂತೆ ಮದೋದಕವನ್ನು ಸುರಿಸುತ್ತಿದ್ದಾವೆ. ಅವುಗಳನ್ನು ಕಂಡನು ಹನುಮಂತ. ಹಾಗೆಯೇ ಅನೇಕ ಸೈನಿಕರ ಗುಂಪುಗಳನ್ನು ಕಾಣುತ್ತಾನೆ. ಬಗೆಬಗೆಯ ಸ್ವರ್ಣಭೂಷಿತವಾದ ಪಲ್ಲಕ್ಕಿಗಳು. ಅಲ್ಲಿ ಬೇರೆಬೇರೆ ಬಗೆಯ ಲತಾಗೃಹಗಳು. ಹಾಗೆಯೇ ಚಿತ್ರಶಾಲಾಗೃಹಗಳು. ಉದ್ದದ ಕಟ್ಟಡಕ್ಕೆ ಶಾಲೆಯೆಂದು ಹೆಸರು. ಮುಂದೆ ಕ್ರೀಡಾಗೃಹಗಳು. ಮರದಿಂದ ಮಾಡಿದ ಪರ್ವತದ ರಚನೆಗಳು. ಕಾಮಗೃಹ ಮತ್ತು ದಿವಾಗೃಹ(ಹಗಲು ಹೋಗಿ ಕುಳಿತುಕೊಳ್ಳುವಂತಹದ್ದು). ಅವೆಲ್ಲವನ್ನೂ ಕಂಡ ರಾವಣನ ಮನೆಯಲ್ಲಿ.
ಆದಮೇಲೆ ಮಂದರಗಿರಿಯಷ್ಟು ಎತ್ತರದ ಭವನವನ್ನು ಕಂಡನು. ರಾವಣನ ಮನೆಯಲ್ಲಿ ನೂರಾರು ಭವನಗಳಿದ್ದವು. ಅಲ್ಲಿ ನವಿಲುಗಳಿಗಾಗಿಯೇ ಶಿಲೆಯಲ್ಲಿ ಮಾಡಿದ ಒಂದು ಸ್ಥಾನವಿತ್ತು. ಅಲ್ಲಿ ನವನಿಧಿ ಮತ್ತು ನವರತ್ನಗಳು ಇದ್ದವು. ರಾಕ್ಷಸರು ರಾವಣನಿಗೆ ವಿಜಯವಾಗಬೇಕೆಂದು ಕೋಣನ ಬಲಿಯನ್ನು ಮಾಡುತ್ತಿರುವ ದೃಶ್ಯವನ್ನು ಹನುಮಂತನು ನೋಡಿದನು. ಹನುಮಂತನಿಗೆ ರಾವಣನ ಮನೆಯು ಭೂತಗಳ ಮನೆಯಂತೆ ಭಾಸವಾಯಿತು. ಅಲ್ಲಿರುವ ರತ್ನಗಳು ಮತ್ತು ರಾವಣನ ತೇಜಸ್ಸು ಸೇರಿ ಮನೆಯೇ ಸೂರ್ಯನಂತೆ ಕಂಡಿತು. ಮನೆಯಲ್ಲಿರುವ ಮಂಚ, ಪಾತ್ರೆ ಹೀಗೆ ಎಲ್ಲ ವಸ್ತುಗಳು ಚಿನ್ನದ್ದಾಗಿದ್ದವು. ಮನೆಯಲ್ಲಿ ಮದ್ಯದ ಪಾತ್ರೆಯನ್ನು ಮತ್ತು ಮದ್ಯದಿಂದ ನೆಲ ಒದ್ದೆಯಾಗಿರುವುದನ್ನು ಹನುಮಂತನು ಕಂಡನು. ಒಟ್ಟಾರೆ ರಾವಣನ ಮನೆಯು ಕುಬೇರನ ಮನೆಯಂತೆ ಇತ್ತು. ಹನುಮಂತನಿಗೆ ಗೆಜ್ಜೆ, ಮೃದಂಗ ಮತ್ತು ವಾದ್ಯಗಳ ಶಬ್ದ ಕೇಳಿಸಿತು. ಹನುಮಂತ ಯಾವ ದಿಕ್ಕಿಗೆ ನೋಡಿದರೂ ಭವನಗಳ ಸಾಲೇ ಕಾಣುತ್ತಿತ್ತು. ನಂತರ ಹನುಮಂತನು ಮನೆಯೊಳಗೆ ಪ್ರವೇಶ ಮಾಡಿದನು. ಪ್ರವೇಶ ಮಾಡುವಾಗ ಶಂಖ ಶಾಲೆಯನ್ನು ಕಂಡನು. ಕೆಲವು ಕಡೆ ಧನಸ್ಸಗಳ ಉಗ್ರಾಣ , ಕೆಲವು ಕಡೆ ಕತ್ತಿಗಳ, ಚಕ್ರಗಳ ಶಾಲೆಯೇ ಇತ್ತು. ಭವನದಲ್ಲಿ ದೇವಾಸುರರು ಆಸೆಪಡುವಂತಹ ಸಂಪತ್ತುಗಳು ಇದ್ದವು. ರಾವಣನ ಮನೆಯಲ್ಲಿ ಯಾವ ವಾಸ್ತುದೋಷವೂ ಇರಲಿಲ್ಲ. ಮಯನೇ ಕಟ್ಟಿದ, ಭೂಮಂಡಲದಲ್ಲಿ ಸರ್ವೋತ್ಕ್ರಷ್ಠ ಎನ್ನುವಂತೆ ಹನುಮಂತನಿಗೆ ರಾವಣನ ಮನೆಯು ಕಾಣಿಸಿತು. ಹನುಮಂತನು ಇದನ್ನೆಲ್ಲ ನೋಡುತ್ತಾ ಮುಂದೆ ಸಾಗಿದಾಗ ಭವನಗಳಿಗೆ ಏನೂ ಕಡಿಮೆಯಿಲ್ಲದ ಭವನವೊಂದು ಕಾಣಿಸಿತು. ಆ ಭವನವು ನೆಲದ ಮೇಲೆ ಇರಲಿಲ್ಲ. ಬೆಳ್ಳಿ ಮೊಡದಂತೆ ನೆಲ ಬಿಟ್ಟು ತೇಲುತ್ತಿತ್ತು. ಮನೆಯೇ ಎಂದರೆ ಮನೆಯಲ್ಲ, ಮನೆಯಲ್ಲ ಎಂದರೆ ಮನೆ ಎನ್ನುವಂತೆ ಇತ್ತು. ಇದನ್ನು ನೋಡಿದ ಹನುಮಂತನಿಗೆ ಈ ಜಗತ್ತಿನಲ್ಲಿ ಇಂತಹ ಮನೆಯನ್ನು ನೋಡಿಲ್ಲವಲ್ಲ, ಏನಿದು..? ಎಂದು ತಿಳಿಯಲು ಹನುಮಂತನಿಗೆ ಸ್ವಲ್ಪ ಸಮಯ ಬೇಕಾಯಿತು. ಅದು ರಾವಣನ ಪುಷ್ಪಕ ವಿಮಾನವಾಗಿತ್ತು. ವಿಮಾನವೇ ಭವನದಂತೆ, ಭೂಮಿಗೆ ಚೆಲ್ಲಿದ ಸ್ವರ್ಗದಂತೆ ಕಾಣುತ್ತಿತ್ತು. ಪುಷ್ಪಕ ವಿಮಾನದಲ್ಲಿ ಎಲ್ಲವೂ ರತ್ನಗಳೇ ಆಗಿದ್ದವು. ( ರತ್ನ : ಯಾವುದೇ ಜಾತಿಯಲ್ಲಿ ಉತ್ಕೃಷ್ಟವಾದದ್ದು) ಅಲ್ಲಿ ಹೂವಿನ ಶಿಲ್ಪಗಳು ನೈಜ ಹೂವುಗಳು ಚೆಲ್ಲಿದಂತೆ ಕಾಣುತ್ತಿದ್ದವು. ಇದರಿಂದ ಪುಷ್ಪಕ ವಿಮಾನದಲ್ಲಿನ ಶಿಲ್ಪ ವೈಶಿಷ್ಟ್ಯವು ಅರ್ಥವಾಗುತ್ತದೆ. ಆ ವಿಮಾನಗಳನ್ನು ಹಂಸಗಳು ಹೊತ್ತಿದ್ದವು!!. ಹಂಸಗಳೇ ಎಂದರೆ ಪ್ರತಿಮೆಗಳಂತೆ.. ಪ್ರತಿಮೆಗಳೇ ಎಂದರೆ ಹಂಸಗಳಂತೆ ಇತ್ತು …
ವಿಮಾನದೊಳಗೆ ಶ್ರೇಷ್ಠ ಸ್ತ್ರೀಯರಿದ್ದರು. ಅಲ್ಲಿ ಯಾವುದು ಶಿಲ್ಪ ಮತ್ತು ಯಾವುದು ನಿಜ ಎಂದು ಗೊತ್ತಾಗುವಂತೆ ಇರಲಿಲ್ಲ. ಉತ್ತಮೋತ್ತಮ ಪರ್ವತಗಳು ಬಣ್ಣಗಳಿಂದ, ಬೇರೆ ಬೇರೆ ಧಾತುಗಳಿಂದ ಶೋಭಿಸುವಂತೆ, ಆಕಾಶವು ನಕ್ಷತ್ರ, ಗ್ರಹ, ಚಂದ್ರನಿಂದ ಶೋಭಿಸುವಂತೆ, ವಿಮಾನವು ಬಗೆಬಗೆಯ ರತ್ನಗಳಿಂದ ಶೋಭಿಸುತ್ತಿತ್ತು. (ಆ ಕಾಲದಲ್ಲಿ ಪರ್ವತಗಳಲ್ಲಿ ರತ್ನ, ಚಿನ್ನ, ಬೆಳ್ಳಿ ಎಲ್ಲವೂ ಇರುತ್ತಿದ್ದವು. ಅದನ್ನು ವಾಲ್ಮೀಕಿಗಳು ಪರ್ವತಗಳು ಬೇರೆಬೇರೆ ಧಾತುಗಳಿಂದ ಶೋಭಿಸುತ್ತಿದ್ದವು ಎಂದು ವರ್ಣಿಸಿದ್ದಾರೆ.) ವಿಮಾನದೊಳಗೆ ವಿಚಿತ್ರವಾದ ಕಲೆಯೊಂದನ್ನು ಹನುಮಂತನು ಕಾಣುತ್ತಾನೆ. ಒಂದರೊಳಗೊಂದರೊಳ.. ಒಂದರೊಳ… ಒಂದು. ವಿಮಾನದೊಳಗೆ ಭೂಮಿಯ ಕೆತ್ತನೆ ಇತ್ತು. ಭೂಮಿಯೊಳಗೆ ಪರ್ವತ ಮಾಲೆ, ಪರ್ವತ ಮಾಲೆಯ ಒಂದೊಂದು ಪರ್ವತದಲ್ಲಿ ವೃಕ್ಷಗಳು, ಒಂದೊಂದು ವೃಕ್ಷದಲ್ಲಿ ಹೂವುಗಳು, ಒಂದೊಂದು ಹೂವಿನಲ್ಲಿಯೂ ಕೇಸರ, ದಳಗಳು ಎಲ್ಲವೂ ಕಾಣುವಂತೆ ಇತ್ತು. ಭೂಮಂಡಲದಿಂದ ಹೂವಿನ ಕೇಸರದ ತನಕ ಸ್ಪಷ್ಟವಾಗಿ ಕಾಣುವಂತೆ ಅತ್ಯಂತ ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿತ್ತು. ಅಲ್ಲಿ ಭವನಗಳ ಶಿಲ್ಪವು ಇತ್ತು. ಸ್ವಚ್ಛಂದವಾದ ಭವನಗಳು, ಭವನದೊಳಗೆ ಕೆರೆಗಳು, ಸರೋವರಗಳು, ಸರೋವರದೊಳಗೆ ಕಮಲಗಳು, ಕಮಲದೊಳಗೆ ಕೇಸರ ಮತ್ತು ದಳಗಳು ಕಾಣುವಂತೆ ಕೆತ್ತನೆ ಮಾಡಲಾಗಿತ್ತು. ಮನೆಯಲ್ಲಿ ಉಪವನಗಳು, ಉಪವನದಲ್ಲಿ ಮರ–ಗಿಡ, ಬಳ್ಳಿ, ಹೂವು ಎಲ್ಲವೂ ಕಾಣುವಂತೆ ಮನೆಯ ಶಿಲ್ಪ ಇತ್ತು. ಪುಷ್ಪಕ ವಿಮಾನದ ಮುಂದೆ ಜಗತ್ತಿನ ಯಾವ ಒಳ್ಳೆಯ ಭವನಗಳು ಸಪ್ಪೆಯಾಗಿತ್ತು. ಏಕೆಂದರೆ ಮನೆಯೊಳಗೆ ಇರಲು ಬೇಕಾಗುವ ಎಲ್ಲ ವ್ಯವಸ್ಥೆಗಳು ಪುಷ್ಪಕ ವಿಮಾನದಲ್ಲಿ ಇತ್ತು. ಪುಷ್ಪಕ ವಿಮಾನವು ಒಂದು ಊರಿನಂತೆ ಕಾಣುತ್ತಿತ್ತು ಮತ್ತು ಅದರಲ್ಲಿ ಸುಖ ಜೀವನಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳು ಇದ್ದವು.
ವಾಲ್ಮೀಕಿಗಳು ಇಲ್ಲಿ ಪಕ್ಷಿಗಳ ಶಿಲ್ಪದ ವರ್ಣನೆಯನ್ನು ಮಾಡಿದ್ದಾರೆ. ವೈಢೂರ್ಯದ ಮಣಿಗಳಿಂದ ಮಾಡಿದ ಪಕ್ಷಿಗಳು, ಬೆಳ್ಳಿಯ ಪಕ್ಷಿಗಳು, ಹವಳದ ಪಕ್ಷಿಗಳು ಹಾಗೆ ಸರ್ಪಗಳು ಜಾತ್ಯಶ್ವಗಳು, ಪಕ್ಷಿಗಳಿಗೆ ಹವಳದ ಮತ್ತು ಚಿನ್ನದ ರೆಕ್ಕೆಗಳನ್ನು ಕೆತ್ತನೆ ಮಾಡಲಾಗಿತ್ತು. (ಜಾತ್ಯಶ್ವಗಳು : ಜಾತಿಯನ್ನು ಗುರುತಿಸುವಂತೆ ಮಾಡಿದ ಬೇರೆ ಬೇರೆ ಜಾತಿಯ ಅಶ್ವಗಳ ಕೆತ್ತನೆ.) ಹನುಮಂತ ನೋಡುವಾಗ ತಮ್ಮ ವಕ್ರವಾದ ರೆಕ್ಕೆಗಳನ್ನು ಒಳಗೆ ಎಳೆದುಕೊಳ್ಳುತ್ತಿದ್ದವು. ಇದನ್ನು ಹನುಮಂತನಿಗೆ ನೈಜವೋ / ಸುಳ್ಳೋ ಎಂದು ತಿಳಿಯಲಿಲ್ಲ. ಮನುಷ್ಯನ ಆಶೋತ್ತರಗಳಿಗೆ ರೆಕ್ಕೆ ಬಂದಂತೆ ಇದ್ದವು. ಯಾವುದು ನಿಜ ..? ಯಾವುದು ಕಲೆ..? ಎಂದು ಪತ್ತೆಮಾಡಲು ಸಾಧ್ಯವಿರಲಿಲ್ಲ. ಅಲ್ಲಿಯೇ ಒಂದು ಸರೋವರ ಇತ್ತು. ಸರೋವರದಲ್ಲಿ ಲಕ್ಷ್ಮೀ ವಿಗ್ರಹ, ವಿಗ್ರದ ಎರಡು ಪಾರ್ಶ್ವದಲ್ಲಿ ಆನೆಗಳು, ಆನೆಗಳ ಶೃಂಗದಲ್ಲಿ ಪದ್ಮಗಳು, ಪದ್ಮದಲ್ಲಿ ದಳ ಮತ್ತು ಕೇಸರ ಎಲ್ಲವೂ ಸ್ಪಷ್ಟವಾಗಿ ಕಾಣುವಂತೆ ಇತ್ತು. ಆ ಲಕ್ಷ್ಮೀ ವಿಗ್ರಹವನ್ನು ಕುಬೇರನು ತಪಸ್ಸಿನಿಂದ ಪಡೆದಿದ್ದನು. ಕುಬೇರನು ತಪಸ್ಸನ್ನು ಮಾಡಿ, ಲೋಕಸೇವೆಯನ್ನು ಕೇಳಿದಾಗ ಬ್ರಹ್ಮನು ಮೆಚ್ಚಿ ಪುಷ್ಪಕ ವಿಮಾನವನ್ನು ಕೊಟ್ಟಿದ್ದನು. ಅದರ ಜೊತೆಗೆ ಲಕ್ಷ್ಮಿಯ ವಿಗ್ರಹವನ್ನು ಪಡೆದಿದ್ದ. ಇಂತಹ ವಿಮಾನವನ್ನು ಹನುಮಂತನು ಒಂದು ಸುತ್ತು ತಿರುಗಿ ಸೀತೆಯನ್ನು ಹುಡುಕಿದನು. ಹನುಮಂತನಿಗೆ ಮನೋಹರವಾದ ಶಿಲ್ಪಗಳೇ ಮೊದಲಾದ ಜಡ ವಸ್ತುಗಳು ಮಾತ್ರ ಗೋಚರಿಸಿದವು. ಆದರೆ ಪರಮ ಪೂಜನೀಯಳಾದ ಸೀತೆ ಮಾತ್ರ ಗೋಚರಿಸಲಿಲ್ಲ. ರಾಮನಿಗೆ ಪೂರ್ಣವಾಗಿ ಮನಸೋತ ಸೀತೆಯನ್ನು ಕಾಣದೇ ದುಃಖಿತನಾದನು. ಹನುಮಂತನ ಕಣ್ಣಿಗೆ ಅತ್ಯಂತ ಸೂಕ್ಷ್ಮವನ್ನು ನೋಡುವ ಶಕ್ತಿ ಇತ್ತು. ವಿಶ್ವಕರ್ಮನಿಗಿಂತ ಹೆಚ್ಚು ಶಕ್ತಿ ಪ್ರಪಂಚದಲ್ಲಿ ಯಾರಿಗೂ ಇಲ್ಲ. ಅಂತಹ ವಿಶ್ವಕರ್ಮ ಪೂರ್ಣ ಮನಸ್ಸಿಟ್ಟು ಪುಷ್ಪಕ ವಿಮಾನವನ್ನು ನಿರ್ಮಿಸಿದ್ದನು. ನಿರ್ಮಾಣ ಮಾಡಿದ ಮೇಲೆ ನೋಡುವಾಗ ವಿಶ್ವಕರ್ಮನು ತನ್ನನ್ನು ತಾನೇ ಮೆಚ್ಚಿದ್ದನಂತೆ. ಇಂತಹ ಪುಷ್ಪಕ ವಿಮಾನವು ಆಕಾಶಕ್ಕೆ ಅಲಂಕಾರವಾಗಿತ್ತು.
ವಿಮಾನದಲ್ಲಿ ಪ್ರತಿಯೊಂದು ಅಂಗವೂ ಅನರ್ಘ್ಯವಾಗಿತ್ತು. ಕುಬೇರನಿಗೆ ತಪಸ್ಸಿನಿಂದ ಈ ವಿಮಾನವೂ, ರಾವಣನು ತನ್ನ ಬಲ ಗರ್ವಗಳಿಂದ ತನ್ನದಾಗಿಸಿಕೊಂಡಿದ್ದನು. ಪುಷ್ಪಕ ವಿಮಾನದ ವಿಶೇಷತೆ ಏನೆಂದರೆ ಅದರಲ್ಲಿ ಕುಳಿತು ಮನಸ್ಸಿನಲ್ಲಿ ಎಲ್ಲಿಗೆ ಹೋಗಬೇಕು ಎಂದು ಭಾವಿಸಿದರೆ ಅಲ್ಲಿಗೆ ಕರೆದೊಯ್ಯುತ್ತಿತ್ತು. ಜಗತ್ತಿನಲ್ಲಿ ಕಾಣದೇ ಇರುವ ಆಕೃತಿಗಳು ಇದ್ದವು. ಗಗನ ಸಂಚರಿಗಳಾದ, ನಿಶಾಚಾರರಾದ ಭೂತ ಗಣಗಳು ವಿಮಾನವನ್ನು ಹೊತ್ತು ಸಂಚರಿಸುತ್ತಿದವು. ಅಂತಹ ಭೂತ ಗಣಗಳನ್ನು ಹನುಮಂತನು ಕಾಣುತ್ತಾನೆ. ಆ ವಿಮಾನದ ಮುಂದೆ ವಸಂತ ಮಾಸದ ಚೈತ್ರವೂ ಸಪ್ಪೆಯಾಗಿತ್ತು. ವಿಮಾನವನ್ನು ಕಂಡು ಸಂತೋಷಪಟ್ಟ ಹನುಮಂತ ಸೀತೆಯನ್ನು ಕಾಣದೇ ಬೇಸರಗೊಂಡನು. ಎಲ್ಲಿ ಸೀತೆ …? ಎಂದು ಹನುಮಂತನು ಮತ್ತೆ ಹುಡುಕಲು ಮುಂದಾದನು.
ಮುಂದೇನಾಯಿತು ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.
#DhaaraRamayan
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
[17:48, 12/4/2019] +91 99160 21475: #ಧಾರಾ_ರಾಮಾಯಣ ಪ್ರವಚನಮಾಲಿಕೆಯ 104ನೇ ದಿನದ ಅಕ್ಷರರೂಪ:
ಒಂದು ಮನೆ ಎಷ್ಟು ದೊಡ್ಡವಿರಬಹುದು? ಮೊದಲು ಕೇಳಬೇಕಾದ ಪ್ರಶ್ನೆ ಎಷ್ಟು ದೊಡ್ಡದಿರಬೇಕು ಅಂತ. ಏಕೆಂದರೆ, ಚಿಕ್ಕದಾದರೂ ತೊಂದರೆ, ದೊಡ್ಡದಾದರೂ ತೊಂದರೆ. ಎಷ್ಟು ಬೇಕೋ ಅಷ್ಟಿದ್ದರೆ ಮಾತ್ರವೇ ಸುಖ. ಹಣವು ಕಡಿಮೆಯಾದರೆ ಹಾಹಾಕಾರ, ಹೆಚ್ಚಾದರೆ ಅಹಂಕಾರ, ಎರಡೂ ಆಪತ್ತು. ಕಡಿಮೆ ಇದ್ದರೆ ಸಣ್ಣ ಆಪತ್ತು, ಹೆಚ್ಚಿದ್ದರೆ ದೊಡ್ಡ ಆಪತ್ತು. ಹಾಗೆ, ಯಾವುದೂ ಕೂಡ ಕಡಿಮೆಯೂ ಆಗಬಾರದು, ಹೆಚ್ಚೂ ಆಗಬಾರದು. ಈಗ ಸಣ್ಣ ಜನರಿಗೆ ಸಣ್ಣ ಮನೆ ಸಾಕು. ದೊಡ್ಡ ಜನರಿಗೆ ದೊಡ್ಡ ಮನೆ ಬೇಕಾಗ್ತದೆ.
ರಾವಣ? ದೊಡ್ಡ ಜನವೇ. ಯಾಕೆಂದರೆ, ನಮಗೆಲ್ಲ ಒಂದು ತಲೆ ಇದ್ರೆ, ಅವನಿಗೆ ಹತ್ತು ತಲೆ. ನಮಗೆಲ್ಲ ಎರಡು ಕೈ ಇದ್ರೆ, ಅವನಿಗೆ ಇಪ್ಪತ್ತು ಕೈ ಇದೆ. ವ್ಯಾಪ್ತಿ ಹದಿನಾಲ್ಕು ಲೋಕದಲ್ಲಿದೆ. ಅವನ ಮನೆ ಎಷ್ಟು ದೊಡ್ಡದಿತ್ತು ಅಂದ್ರೆ, ಅಗಲ – ಅರ್ಧ ಯೋಜನ, ಉದ್ದ – ಒಂದು ಯೋಜನ! ಮನೆ ಅಂದರೇನು? ಒಂದೇ ಮನೆಯಲ್ಲ ಅದು. ಅನೇಕಾನೇಕ ಭವನಗಳ ಮಾಲಿಕೆ. ಅಲ್ಲಿ ರಾವಣನ ಭವನಗಳೇ ಅನೇಕ. ಒಂದೊಂದು ಭಾವಕ್ಕೆ ಒಂದೊಂದು ಭವನ ಇದೆ. ಇನ್ನು ಅವನ ರಾಣಿಯರಿಗೆಲ್ಲ ಬೇರೆ ಬೇರೆ ಮನೆಗಳು ಇರಬೇಕೇ ಹೇಗೂ. ಎಲ್ಲಾ ರಾಣಿಯರಿಗೂ ಇಲ್ಲ, ಇರಲಿಕ್ಕೆ ಸಾಧ್ಯವೂ ಇಲ್ಲ! 7,000! ಇನ್ನು ಅವನ ರಾಜಕುಮಾರರು. ಅವನ ಮಕ್ಕಳು, ಸಹೋದರರು.. ಅವರ ಮನೆಗಳು, ಮಂತ್ರಿಗಳು, ಸೇನಾಪತಿಗಳು, ದೊಡ್ಡ ದೊಡ್ಡ ರಾಕ್ಷಸ ನಾಯಕರುಗಳು, ಸಚಿವರುಗಳು, ಅವರ ಗೃಹಗಳು, ಇದೆಲ್ಲ ಸೇರುವಾಗ ಎರಡು ಮೈಲಿ ಮತ್ತು ನಾಲ್ಕು ಮೈಲಿಗಳ ವಿಸ್ತೀರ್ಣದಲ್ಲಿ ಇದ್ದುಬಿಟ್ಟಿದೆ.
ಮನೆ ಚಿಕ್ಕದಿದ್ದರೂ ತೊಂದರೆಯಿಲ್ಲ, ಮನಸ್ಸು ದೊಡ್ಡದಿರಬೇಕು. ಇವನಿಗೆ ಮನೆ ದೊಡ್ಡದಿದೆ, ಆದರೆ ಮನಸ್ಸು ಚಿಕ್ಕದಿದೆ, ಸಂಕುಚಿತವಾದ ಮನಸ್ಸಿದೆ. ತಾನು, ತನ್ನದು, ತನಗೇ ಬೇಕು ಎಲ್ಲ. ಇನ್ಯಾರೂ ಸುಖವಾಗಿರಬಾರದು ಎನ್ನುವ ಮಟ್ಟಿಗೆ ಶುದ್ಧವಾದ ಮನಸ್ಸುಳ್ಳವನು ಅವನು. ಆದರೆ ಮನೆ ಮಾತ್ರ ದೊಡ್ಡದಿದೆ. ಮಾತ್ರವಲ್ಲ, ಸಮೃದ್ಧಿ ಕೂಡ ಅದ್ಭುತವಾಗಿದೆ. ಸಂಪತ್ತಿನ ಪಾಲಕ ಕುಬೇರನ ಬಳಿ ಇರಬಹುದಾದ ಅಥವಾ ಇಂದ್ರನ ಬಳಿ ಇರಬಹುದಾದ ಅಥವಾ ಮಿಗಿಲಾದ ಸಂಪತ್ತೆಲ್ಲ ರಾವಣನ ಊಳಿಗದವರಲ್ಲಿತ್ತು. ಇಂಥಾ ಮನೆಯಲ್ಲಿ ಕುಬೇರನಿಂದ ದರೋಡೆ ಮಾಡಿ ತಂದ ಅದ್ಭುತವಾದ ಆ ಪುಷ್ಪಕ ವಿಮಾನ. ಅದು ನಿಜವಾಗಿ ವಿಶ್ವಕರ್ಮನಿಂದ ಸೃಷ್ಟಿಕರ್ತ ಬ್ರಹ್ಮನಿಗಾಗಿ ವಿರಚಿತವಾಗಿರತಕ್ಕಂತದ್ದು. ಹಾಗಾಗಿ ಒಂದು ಕಾಲದಲ್ಲಿ ಬ್ರಹ್ಮನ ವಿಮಾನವಾಗಿತ್ತದು. ಬಳಿಕ ಕುಬೇರ, ರಾವಣನ ದೊಡ್ಡಣ್ಣ. ಅವನು ಎಳವೆಯಲ್ಲಿ ತಪಸ್ಸು ಮಾಡಿ ಬ್ರಹ್ಮನನ್ನು ಪರಿತೋಷಿಸಿದಾಗ ಪ್ರಕಟಗೊಂಡ ಬ್ರಹ್ಮ, “ಏನು ಬೇಕು, ಕೇಳು” ಎಂದಾಗ ಕುಬೇರ, ” ಈ ಲೋಕದ ಸೇವೆಯನ್ನು ನಾನು ಮಾಡಬೇಕು, ಲೋಕಪಾಲಕತ್ವವನ್ನು ಕೊಡು” ಎಂದು ಕೇಳಿದ. ಅವನು ಕೇಳಿದ್ದಕ್ಕಿಂತ ಬಹಳ ಹೆಚ್ಚನ್ನೇ ಕೊಡ್ತಾನೆ ಬ್ರಹ್ಮ. ಪುಷ್ಪಕವಿಮಾನವಿರಲಿ ತಗೋ. ಉತ್ತರ ದಿಕ್ಕಿನ ಒಡೆತನ ತಗೊ, ಇರಲಿ. ಧನೇಶ್ವರತ್ವ ನಿನಗೇ ಇರಲಿ. ಲಂಕಾನಗರಿ ನಿನಗಿರಲಿ. ಹೀಗೆ, ಕುಬೇರನ ತಪಸ್ಸಿಗೆ ಮೆಚ್ಚಿ ಬ್ರಹ್ಮದೇವ ಕುಬೇರನಿಗೆ ಕೊಟ್ಟಿರತಕ್ಕಂತದ್ದು ಆ ವಿಮಾನ.
ಯಾವುದನ್ನು ಪರಮ ತಪಸ್ಸಿನಿಂದ ಕುಬೇರನು ಪಡಕೊಂಡನೋ, ಅದನ್ನು ದೌರ್ಜನ್ಯದಿಂದ ಅಪಹರಿಸಿದನು ರಾವಣ. ಲಂಕೆಯನ್ನು ಔದಾರ್ಯದಿಂದ ಬಿಟ್ಟುಕೊಟ್ಟ ಕುಬೇರ. ಆ ಪುಷ್ಪಕವಿಮಾನದೊಳಗೆ ಮುಗಿಲು ಮುಟ್ಟುವ ಜಗಲಿಗಳು, ಗೌಪ್ಯ ಪ್ರಕೋಷ್ಠಗಳಿದ್ದವು. ಆ ವಿಮಾನದೊಳಗೆ ಎಲ್ಲವೂ ರತ್ನಮಯ. ತುಲನೆ ಮಾಡಲು ಸಾಧ್ಯವಿಲ್ಲದ ಮೌಲ್ಯವುಳ್ಳ ಮುತ್ತುಗಳಿಂದ ನೆಲವನ್ನು ಮಾಡಿದ್ದರು. ಇಷ್ಟು ಹೊತ್ತು ಪುಷ್ಪಕವಿಮಾನವನ್ನು ಸುತ್ತ ನೋಡ್ತಿದ್ದಾನೆ ಹನುಮಂತ. ಮೆಲ್ಲನೆ ಆ ದಿವ್ಯ ಪುಷ್ಪಕವಿಮಾನವನ್ನು ಏರಿದನಂತೆ. ಪುಷ್ಪವಿದ್ದಂತೆ ಪುಷ್ಪಕವಿಮಾನ, ನೋಡುವಾಗಲೇ ಸಂತೋಷ ಕೊಡುವಂಥದ್ದು. ಜನರಿಗೆ ತಕ್ಕಂತೆ ವಿಸ್ತಾರವಾಗಬಲ್ಲದು. ಅರಳುವ, ಮುದುಡುವ ಶಕ್ತಿಯುಳ್ಳದ್ದಾದ್ದರಿಂದ ‘ಪುಷ್ಪ’ಕವಿಮಾನ ಶಬ್ದ ಬಂದಿರತಕ್ಕಂತದ್ದು. ಅದರದ್ದೇ ಆದ ದಿವ್ಯಗಂಧ, ಜೊತೆಯಲ್ಲಿ ಬಗೆಬಗೆಯ ಪಾನ, ಭಕ್ಷ್ಯದ ಎಲ್ಲ ವ್ಯವಸ್ಥೆಯಿದೆ. ಇವೆಲ್ಲದರ ಪರಿಮಳದ ‘ವಾಯು’ ಹನುಮಂತನನ್ನು ಕರೆದಿದೆ.
ದೊಡ್ಡದೊಂದು ರತ್ನಗಂಬಳಿಯನ್ನು ಹಾಸಿತ್ತು ವಿಮಾನದೊಳಗೆ. ಆ ಒಂದು ರತ್ನಗಂಬಳಿಯಲ್ಲಿ ಸಮಗ್ರ ಭೂಮಂಡಲದ ಚಿತ್ರಣವಿತ್ತು. ಪರಿಮಳದ ಗಾಳಿ ಬೀಸುವ ವ್ಯವಸ್ಥೆಯಿತ್ತು. ವಸಿಷ್ಠರ ಕಾಮಧೇನುವಿನಂತೆ ಆ ಪುಷ್ಪಕ ವಿಮಾನವಿತ್ತು. ಒಳಗೆ ಇರುವವನ ಇಂದ್ರಿಯಗಳು ಏನು ಬಯಸಿದರೂ ಲಭ್ಯವದು. ಎಲ್ಲ ಸುಖವೂ ಲಭ್ಯವಿದೆ ಆ ವಿಮಾನದ ಒಳಗೆ. ಒಳಗೆ ಹೋದೊಡನೆಯೇ ಮನಸ್ಸಿಗೊಂದು ಆಹ್ಲಾದ. ಶೋಕನಾಶಿನಿ ಪುಷ್ಪಕವಿಮಾನ. ಮಾತ್ರವಲ್ಲ, ಆನಂದದ ಅಲೆಯನ್ನು ಚೆಲ್ಲುವಂಥದ್ದು. ಒಳಗೆ ಹೋದವರು ಸುಂದರರಲ್ಲದಿದ್ದರೂ ಸುಂದರರಾಗ್ತಾರಂತೆ! ಚರ್ಮದ ವರ್ಣವನ್ನೇ ತಿಳಿಗೊಳಿಸುವ ಶಕ್ತಿಯುಳ್ಳದ್ದು ಪುಷ್ಪಕವಿಮಾನ. ನಮ್ಮನ್ನೇ ಬದಲು ಮಾಡಬಲ್ಲದ್ದು. ಕರೆದು ಕರೆದು ಬೇಕಾದ್ದನ್ನು ಕೊಡಬಲ್ಲ ವಿಮಾನವದು. ಅಚ್ಚರಿಗೊಂಡ ಮಾರುತಿ, “ಇದು ಸ್ವರ್ಗ, ಇದು ದೇವಲೋಕ, ಇದು ಇಂದ್ರನಗರಿ. ಅಥವಾ ಇದು ಪರಮಸಿದ್ಧಿ. ಈ ಆನಂದ ಮುಕ್ತಿಗೆ ಹತ್ತಿರ ಹತ್ತಿರವಿದೆ” ಎಂಬುದಾಗಿ ಹನುಮನು ಉದ್ಘರಿಸಿದನಂತೆ.
ಹನುಮಂತನು ಅಲ್ಲಿ ಒಂದು ವಿಚಿತ್ರವನ್ನು ಕಂಡ. ಒಂದು ಜಾತಿ ಅಸಂಖ್ಯಾತ. ಆ ಜಾತಿಯನ್ನು ಒಂದು ಕಡೆಯಲ್ಲಿ ಅಷ್ಟು ಸಂಖ್ಯೆಯಲ್ಲಿ ಕಾಣಲಿಕ್ಕೆ ಸಾಧ್ಯವಿಲ್ಲ. ಏನದು? ನಾರಿಯರು. ರತ್ನಗಂಬಳಿಯಲ್ಲಿ ಪವಡಿಸಿದ ಅಸಂಖ್ಯಾತ ನಾರಿಯರನ್ನು ಕಂಡನಂತೆ ಹನುಮಂತ. ಚಿತ್ರವಿಚಿತ್ರವಾದ ದೇಹವರ್ಣ, ವಸ್ತ್ರವರ್ಣ ಮತ್ತು ಮಾಲಿಕೆಗಳ ವರ್ಣ. ನಾರಿಯರ ಸಮೂಹ. ಎಲ್ಲ ಮಲಗಿದ್ದಾರೆ. ಹನುಮಂತ ಒಂದು ಶಾಲೆ (Hall) ಯನ್ನು ಪ್ರವೇಶ ಮಾಡಿದರೆ ಸಾವಿರಾರು ಸ್ತ್ರೀಯರಿದ್ದರಂತೆ. ಯಾರೂ ಎಚ್ಚರವಾಗಿಲ್ಲ, ಎಲ್ಲರೂ ನಿದ್ದೆ ಮಾಡ್ತಾ ಇದ್ದಾರೆ. ಅರ್ಧರಾತ್ರಿಯ ಸಮಯವದು. ಹನುಮ ಲಂಕೆಯ ಪ್ರವೇಶ ಮಾಡುವಾಗ ಸೂರ್ಯಾಸ್ತವಾಗಿತ್ತು. ಲಂಕೆಗೂ ಹನುಮನಿಗೂ ಒಂದು ಯುದ್ಧ, ಒಂದು ರಾಜಿ ಎಲ್ಲ ಆಯ್ತಲ್ಲ! ಅದು ಸೂರ್ಯಾಸ್ತದ ಹೊತ್ತು.
ಹನುಮ ಲಂಕೆಯನ್ನು ಪ್ರವೇಶ ಮಾಡುವಾಗ ಸೂರ್ಯಾಸ್ತವಾಗಿತ್ತು. ಲಂಕೆಗೂ ಹನುಮಂತನಿಗೂ ಆದ ಒಂದು ಯುದ್ಧ, ರಾಜಿ ಅದು ಸೂರ್ಯಾಸ್ತದ ಹೊತ್ತು, ಒಳಬಂದಾಗ ಅದು ಚಂದ್ರೋದಯದ ಹೊತ್ತು. ಪುಷ್ಪಕವಿಮಾನದ ಬಳಿ ಬರುವಾಗ ಅರ್ಧ ರಾತ್ರಿ. ಹಾಗೆ ಹುಡುಕುತ್ತಾ ಮುಂದೆ ಸಾಗಿದಾಗ ಅಲ್ಲಿ ಸಾವಿರಾರು ಸ್ತ್ರೀಯರು, ಮಧುಪಾನ ಮತ್ತು ನಿದ್ದೆಯಲ್ಲಿದ್ದಾರೆ. ಅತಿಯಾದ ಪಾನದಿಂದ ಮಲಗಿಲ್ಲ ಬದಲಾಗಿ ಅಮಲಿನಿಂದ ಒರಗಿದ್ದಾರೆ. ಅತಿಯಾದ ಪಾನದಿಂದ ಅಮಲು ಮತ್ತು ನಿದ್ದೆ ಎರಡು ಸೇರಿದೆ ಅಲ್ಲಿ. ಅದಕ್ಕಿಂತ ಮೊದಲು ತುಂಬಾ ಕ್ರೀಡಿಸಿದ್ದಾರೆ ಮತ್ತು ಪಾನ, ನಿದ್ದೆಯ ಶ್ರಮದ ಫಲವಾಗಿ ಅತಿಯಾದ ನಿದ್ದೆಯಲ್ಲಿ ಒರಗಿ ಮಲಗಿದ್ದಾರೆ. ಅಲ್ಲಿರುವ ಸಾವಿರಾರು ಸ್ತ್ರೀಯರ ಮುಖಗಳು ಪದ್ಮಗಳಂತೆ ಇತ್ತು. ಅವರ ಮುಖಗಳು ಪದ್ಮಗಂಧವನ್ನು ಬೀರುತ್ತಿತ್ತು. ಹಾಗಾಗಿ ಅದು ಸಾವಿರಾರು ಪದ್ಮಗಳಿಂದ ಕೂಡಿದ ಪದ್ಮವನದಂತೆ ಕಂಡಿತು. ಹೀಗೆ ಕಾಣಲು ಒಂದು ಕಾರಣವೂ ಇತ್ತು ಅದೇನೆಂದರೆ ಪದ್ಮವನದಲ್ಲಿ ಹಗಲಿನಲ್ಲಿ ದುಂಭಿಗಳು, ಜೇನು ಮತ್ತು ಹಂಸಗಳ ಬೇರೆ ಬೇರೆ ಜಲಚರಗಳು ಸದ್ದುಮಾಡುತ್ತಾ ಇರುತ್ತದೆ ಆದರೆ ರಾತ್ರಿಯಲ್ಲಿ ಕಮಲಗಳು ಮುದುಡಿರುತ್ತವೆ ಮತ್ತು ಯಾವ ಸದ್ದು ಕೂಡ ಇರುವುದಿಲ್ಲ. ಹಾಗೆಯೇ ಆ ಸ್ತ್ರೀಯರಿದ್ದರ ಕಣ್ಣುಮುಚ್ಚಿದ್ದವು, ತುಟಿಗಳು ಮುಚ್ಚಿದ್ದವು ಯಾವುದೇ ಶಬ್ದ ಇರಲಿಲ್ಲ. ಆ ಇಡೀ ಪ್ರಕೋಷ್ಟದಲ್ಲಿ ಸ್ತ್ರೀಯರ ಮುಖಗಳಿಂದ ಪದ್ಮಪರಿಮಳ ಬೇರುತ್ತಿತ್ತು. ಉತ್ತಮೊತ್ತಮ ಜಾತಿಯ ಸ್ತ್ರೀಯರಿದ್ದರು. ಆಗಸದಿಂದ ಸಾವಿರಾರು ತಾರೆಗಳು ಉರುಳಿಬಿದ್ದಂತೆ. ತಾರೆಗಳ ರಾಶಿಯಂತೆ ಆ ವರನಾರಿಗಳು ಕಂಡರು. ಹಾಗೆಯೇ ರಾವಣನನ್ನು ಇಷ್ಟು ಪರಿಮಳವೂ ಸೇವಿಸುತ್ತಿತ್ತು. ಭುಜಗಳೆಲ್ಲ ಸೇರಿದ್ದವು, ಎಲ್ಲಾ ಸ್ತ್ರೀಯರು ಅಸ್ತವ್ಯಸ್ತವಾಗಿ ಮಲಗಿದ್ದರು. ಅಂತಹ ವಿಚಿತ್ರವಾದ ಸ್ತ್ರೀಮಾಲೆಯನ್ನು ಕಂಡನು. ಸ್ತ್ರೀವನವೆಂದು ಕೂಡಾ ಕರೆದಿದ್ದಾರೆ ಅದನ್ನು. ಅಷ್ಟು ಸ್ತ್ರೀಯರನ್ನು ಕಂಡನು ಹನುಮಂತ. ಅಲ್ಲಿಯ ಪರಿಸ್ಥಿತಿ ಹೇಗಿತ್ತು ಎಂದರೆ ಯಾರ ಆಭರಣ, ವಸ್ತ್ರ, ಮುಖ ಯಾರದ್ದು ಎಂದು ಪ್ರಯತ್ನ ಪಟ್ಟರೂ ಕಂಡುಹಿಡಿಯಲು ಆಗದ ಪರಿಸ್ಥಿತಿ ಹಾಗೆ ಕಲಸಿ ಹೋಗಿದೆ. ಒಂದು ವ್ಯಕ್ತಿಗೆ ಅಥವಾ ಮನುಷ್ಯನಿಗೆ ಇಷ್ಟು ಅಗತ್ಯ ಇದೆಯಾ? ಹೀಗೆ ಮಾಡಬೇಕಾ? ಎಂಬುದು ದೊಡ್ಡ ಪ್ರಶ್ನೆ. ಯಾವ ರಾಜನಿಗಾಗಲಿ, ಯಾವ ಚಕ್ರವರ್ತಿಯಾಗಲಿ ಅಥವಾ ಉದಾಹರಣೆ ರಾಮ ಅವನು ಈ ಭೂಮಂಡಲಕ್ಕೆ, ಎಲ್ಲ ಮೃಗಪಕ್ಷಿ, ಮನುಕುಲಕ್ಕೆ ಚಕ್ರವರ್ತಿ ಆದರೆ ರಾಮ ಏಕಪತ್ನಿ ವ್ರತಸ್ಥ. ಆ ಪತ್ನಿಯೊಡನೆ ಬಾಳಲಾಗದ ವಿಕಟ ಬಂದಾಗಲೂ ಬೇರೆ ಹೆಣ್ಣಿನ ಕಡೆ ನೋಡಲಿಲ್ಲ ರಾಮ. ಅವನ ಇಡೀ ಜೀವನದಲ್ಲಿ ಮತ್ತೊಂದು ಸ್ತ್ರೀಯನ್ನು ಕಣ್ಣೆತ್ತಿ ನೋಡಲೇ ಇಲ್ಲ ರಾಮ. ಅಂತಹ ರಾಮನೆಲ್ಲಿ, ಈ ರಾವಣನೆಲ್ಲಿ? ಇವರಿಗೆ ನ್ಯಾಯಕೊಡಬಹುದ ಅವನು? ಇವರ ಬದುಕಿಗೆಲ್ಲಾ ಅರ್ಥವೇನು? ಅರ್ಥ ಇದೆಯಾ ಅವರ ಬದುಕಿಗೆ? ಆ ಸ್ತ್ರೀಯರ ತಂದೆಯನ್ನೋ, ಗಂಡನನ್ನೋ, ಅಣ್ಣತಮ್ಮಂದಿರನ್ನೋ ಕೊಂದು ಎತ್ತಿಕೊಂಡು ಬಂದಿರುವುದು. ಬಲಾತ್ಕಾರದಿಂದ ಸೆಳೆದು ತರಲ್ಪಟ್ಟವರು ಅವರೆಲ್ಲಾ. ಏನು ಅರ್ಥ ಅವರ ಬದುಕಿಗೆ? ಎಂತಹ ಬದುಕು ಅದು? ಇದಕ್ಕಿಂತ ಕ್ರೌರ್ಯ ಮತ್ತೊಂದಿಲ್ಲ. ಅವರ ಬದಕನ್ನು ನೆನೆಸಿಕೊಂಡರೆ ಅವರು ಹೇಗಿರಬಹುದು ಎಂದು ಬೇಸರವಾಗುತ್ತದೆ. ಅವರೆಲ್ಲಾ ಯಾರು ಎಂಬುದನ್ನು ವರ್ಣನೆಮಾಡಿದ್ದಾರೆ ವಾಲ್ಮೀಕಿಮಹರ್ಷಿಗಳು; ಅಲ್ಲಿ ರಾಜಕನ್ಯೆಯರಿದ್ದರು, ಋಷಿಕನ್ಯೆಯರಿದ್ದರು, ದೈತ್ಯಕನ್ಯೆಯರಿದ್ದರು, ಗಂಧರ್ವಕನ್ಯೆಯರು, ರಾಕ್ಷಸಕನ್ಯೆಯರು ಇದ್ದರು. ಕೆಲವರು ಅವರಾಗೆ ರಾವಣನ ಹಿಂದೆ ಬಂದವರು. ಅವರ ಬದುಕೂ ಬರಡೇ. ಇನ್ನು ಕೆಲವರು ಯುದ್ಧದಲ್ಲಿ ಸೋತವರ ಪತ್ನಿ, ಮಕ್ಕಳು ಅಂತವರನ್ನು ಎತ್ತಿಕೊಂಡು ಬಂದಿದ್ದ. ರಾವಣನ ಪತ್ನಿದರ್ಜೆ ಯಾರಿಗೆ ಸಿಕ್ಕಿದೆಯೋ ಅವರ ಸಂಖ್ಯೆ ಎಳುಸಾವಿರ. ವಾಲ್ಮೀಕಿಗಳು ಒಂದು ಮಾತನ್ನು ಹೇಳಿದ್ದಾರೆ; ಅಲ್ಲಿ ಇದ್ದ ಎಲ್ಲಾ ಸ್ತ್ರೀಯರು ರಾವಣನಮೇಲೆ ಮನಸ್ಸು ಉಳ್ಳವರಾಗಿದ್ದರು. ಇದರ ಅರ್ಥ ರಾವಣ ಒಳ್ಳೆಯ ಮನುಷ್ಯ ಎಂದಲ್ಲ, ಬದಲಾಗಿ ರಾವಣನ ಮೇಲೆ ಮನಸ್ಸು ಇಟ್ಟರೆ ಮಾತ್ರ ಅವರಿಗೆ ಬದುಕುವ ಅವಕಾಶವಿತ್ತು ಅಲ್ಲಿ. ರಾವಣನಿಗೆ ಬ್ರಹ್ಮದೇವರ ಶಾಪವಿತ್ತು ಅದೇನೆಂದರೆ ಯಾರು ರಾವಣನನ್ನು ಒಪ್ಪಿಲ್ಲವೋ ಅವರನ್ನು ರಾವಣ ಮುಟ್ಟುವಂತಿಲ್ಲ, ಅವರನ್ನು ಪತ್ನಿ ಮಾಡಿಕೊಳ್ಳುವಂತಿಲ್ಲ. ಅದಕ್ಕಾಗಿ ಅವನು ಸ್ತ್ರೀಯರನ್ನು ಸೆಳೆದುತಂದು ಅವರಿಗೆ ಷರತ್ತು ಹಾಕುತ್ತಿದ್ದ, ಸಮಯದ ಗಡುವನ್ನು ನೀಡುತ್ತಿದ್ದ ಅಷ್ಟರಲ್ಲಿ ಅವರು ಪತ್ನಿಯಾಗುವುದಾಗಿ ಒಪ್ಪದಿದ್ದರೆ ಅವರನ್ನು ಸಣ್ಣ ಸಣ್ಣ ಚೂರಾಗಿ ಕತ್ತರಿಸಿ ಬೆಳಗಿನ ತಿಂಡಿಗೆ ಸೇವಿಸುತ್ತಿದ್ದ. ಸೀತೆಗೂ ಇದನ್ನೇ ಹೇಳಿದ್ದ, ಒಂದು ವರ್ಷದ ಅವಧಿಯನ್ನು ನೀಡಿದ್ದ. ಇದು ಅವನ ಪದ್ಧತಿ. ಮಾನಸಿಕವಾಗಿ ಒತ್ತಡ ನೀಡುವಂತದ್ದು. ಬೆಳಗಿನ ತಿಂಡಿಯಗಬೇಕು ಇಲ್ಲವೇ ಪತ್ನಿಯಾಗಬೇಕು ಇಂತಹ ಷರತ್ತು. ಹೀಗೆ ಅವನನ್ನು ಪತಿಯಾಗಿ ಒಪ್ಪಿಕೊಂಡಂತಹ ಸ್ತ್ರೀಯರು ಅವರೆಲ್ಲಾ. ಕೆಲವರು ಮನಸಾರೆ ಒಪ್ಪಿದವರು, ಇನ್ನು ಕೆಲವರು ಒತ್ತಡದಿಂದ. ಇದು ರಾವಣನ ಪ್ರೇಮದ ಪರಿ. ಕೆಲವರು ಆತನ ಮನೆಯಮೇಲೆ ಆಕ್ರಮಣವಾದಗ ಸತ್ತಿದ್ದರು, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಉಳಿದವರನ್ನು ಇವನೇ ಕೊಂದಿದ್ದಾನೆ. ಹೀಗಿದ್ದೂ ಆತನಿಗೆ ಏಳುಸಾವಿರ ಪತ್ನಿಯರು. ಅಂದರೆ ಇಂತಹ ಅನ್ಯಾಯವನ್ನು, ಪಾಪವನ್ನು ಊಹೆಮಾಡಿಕೊಳ್ಳಬಹುದು. ಇಂತವನನ್ನು ಪೂಜಿಸುವವರು, ಅವನ ಅನುಯಾಯಿಗಳು ಇಂದಿಗೂ ಇದ್ದಾರೆ. ಅವರು ಎಂತವರಾಗಿರಬಹುದು?
ಅಲ್ಲಿರುವವರ ಪೈಕಿ ಎಲ್ಲರೂ ಒಳ್ಳೆಯ ಕುಲದವರು, ಔದಾರ್ಯ ಉಳ್ಳವರು, ರೂಪವತಿಯರು. ಹೇಗೆ ಅವರೆಲ್ಲರೂ ಉತ್ತಮ ಸ್ತ್ರೀಯರಿಗೆ ಇರುವಂತಹ ಎಲ್ಲಾ ಗುಣಗಳನ್ನು ಹೊಂದಿದವರು. ಅಂತಹ ಸ್ತ್ರೀಯರು ಅಷ್ಟು ಸಂಖ್ಯೆಯಲ್ಲಿ ಇದ್ದರು ಆದರೆ ಸೀತೆ ಮಾತ್ರಾ ಅವರೆಲ್ಲರಿಗಿಂತ ಭಿನ್ನ. ಅದು ರಾವಣನ ತುತ್ತಲ್ಲ. ಹಾಗಾಗಿ ಹನುಮಂತ ಆಲೋಚನೆ ಮಾಡುತ್ತಾನೆ ಇವರಲ್ಲಿ ಯಾರು ಸೀತೆಯಾಗಲು ಸಾಧ್ಯವಿಲ್ಲವೆಂದು. ಆರ್ತನಾಗಿ ಹನುಮಂತ ಆ ದೃಶ್ಯವನ್ನು ನೋಡುತ್ತಾನೆ. ಇವರಿಗಿಂತ ಗುಣಶ್ರೇಷ್ಠಳು ಸೀತೆ. ಈ ಪಟ್ಟಿಯಲ್ಲಿ, ಈ ಸಾಲಿನಲ್ಲಿ ಆಕೆ ಸೇರಲಿಕ್ಕೆ ಸಾಧ್ಯವಿಲ್ಲ. ಎಂತಹ ಅನ್ಯಾಯ ಮಾಡಿದ್ದಾನೆ ಅವಳ ವಿಷಯದಲ್ಲಿ ಲಂಕೇಶ್ವರ. ಅನಾರ್ಯಕರ್ಮವನ್ನು ಮಾಡಿದನಲ್ಲಾ ಆಕೆಯ ವಿಷಯದಲ್ಲಿ ಎಂದು ಪರಿತಪಿಸಿದನು ಹನುಮಂತ. ಮತ್ತೂ ಮುಂದುವರೆಯುತ್ತಾನೆ ಹನುಮಂತ ಅಲ್ಲಿ ಒಂದು ದೊಡ್ಡ ಶಯನಾಸನವಿತ್ತು ಅದನ್ನು ಸ್ಫಟಿಕದಿಂದ ಮಾಡಲ್ಪಟ್ಟಿತ್ತು. ಆ ಮಂಚಕ್ಕೆ ನವರತ್ನಗಳ ಅಲಂಕಾರವಿತ್ತು. ಆ ಮಂಚವನ್ನು ನೋಡಿ ಆಶ್ಚರ್ಯವಾಯಿತಂತೆ ಹನುಮಂತನಿಗೆ. ಆ ಮಂಚದಲ್ಲಿ ಆನೆದಂತ, ಬಂಗಾರ, ವೈಡೂರ್ಯ, ಅದಕ್ಕೆ ತಕ್ಕಂತೆ ಆಸನಗಳನ್ನು ಕಲ್ಪಿಸಲಾಗಿತ್ತು. ಬೇಕಾದಾಗ ಕುಳಿತುಕೊಳ್ಳುವ, ಮಲಗುವ ವ್ಯವಸ್ಥೆ ಆ ಮಂಚದಲ್ಲಿ ಇತ್ತು. ಮತ್ತು ಬಹಳ ಶ್ರೇಷ್ಠವಾದ ಹಾಸಿಗೆಯನ್ನು ಹಾಸಲಾಗಿತ್ತು. ಬೆಲೆಕಟ್ಟಲಾರದ ಬೆಲೆಯ ಹಾಸಿಗೆಯನ್ನು ಹಾಸಲಾಗಿತ್ತು. ವಿಚಿತ್ರವೆಂದರೆ ಆ ಮಂಚದ ಒಂದು ತುದಿಯಲ್ಲಿ ಹುಣ್ಣಿಮೆಯ ಚಂದ್ರನನ್ನು ಹೋಲುವ ಶ್ವೇತಛತ್ರವಿತ್ತು, ಅದನ್ನು ಉತ್ತಮೋತ್ತಮವಾದ ರತ್ನಮಾಲಿಕೆಗಳಿಂದ, ಪುಷ್ಪಮಾಲಿಕೆಗಳಿಂದ ಅಲಂಕಾರ ಮಾಡಲಾಗಿತ್ತು. ಇಕ್ಕೆಲೆಗಳಲ್ಲಿ ಸ್ತ್ರೀಯರು ಪರಿಮಳಭರಿತ ಗಾಳಿಯನ್ನು ಬೀಸುತ್ತಿದ್ದರು. ಆ ಹಾಸಿಗೆಗೆ ಕುರಿಯ ತುಪ್ಪಳದಿಂದ ಮಾಡಿದ ಕಂಬಳಿಯನ್ನು ಹಾಸಲಾಗಿತ್ತು. ಉತ್ತಮೋತ್ತಮವಾದ ಹೂವುಗಳಿಂದ ಹಾಸಿಗೆಯನ್ನು ಅಲಂಕಾರ ಮಾಡಲಾಗಿತ್ತು. ಅಷ್ಟೆಲ್ಲಾ ಸ್ರ್ತೀಯರೊಡಗೂಡಿ ರಾವಣ ಪುಷ್ಪಕವಿಮಾನದಲ್ಲಿ ಮಲಗಿದ್ದ. ರಾವಣನ ಭವನಕ್ಕಿಂತಲೂ ಉತ್ಕೃಷ್ಟವಾಗಿತ್ತು ಪುಷ್ಪಕವಿಮಾನ. ಪುಷ್ಪಕವಿಮಾನದ ಸುಖ ಬೇರೆ ಹಾಗಾಗಿ ಅಲ್ಲಿ ಹೋಗಿ ಮಲಗಿದ್ದ ರಾವಣ. ಆ ಸ್ಫಟಿಕದ ಮಂಚದ ಮೇಲೆ ಕಾರ್ಮೋಡದಂತೆ ಮಲಗಿದ್ದ ರಾವಣ. ಉತ್ತಮೋತ್ತಮವಾದ ಕುಂಡಲಗಳು, ಕೆಂಪಾದ ಕಣ್ಣು, ದೊಡ್ಡ ದೊಡ್ಡ ಬಾಹುಗಳು, ಬೆಳ್ಳಿಯ ಬಂಗಾರದ ನೂಲುಗಳಿಂದ ಮಾಡಿದ ವಸ್ತ್ರ. ತೆಳುವಾದ ಬೆಳ್ಳಿಯ ಬಂಗಾರದ ನೂಲುಗಳಿಂದ ಹೆಣೆದು ಆ ವಸ್ತ್ರಗಳನ್ನು ಸಿದ್ಧಪಡಿಸಲಾಗಿತ್ತು. ರಕ್ತಚಂದನದ ಲೇಪನವನ್ನು ಮಾಡಿಕೊಂಡಿದ್ದಾನೆ ರಾವಣ. ದಿವ್ಯ ಆಭರಣಗಳನ್ನು ಧಾರಣೆಮಾಡಿದ್ದಾನೆ. ಕುರೂಪಿಯಲ್ಲ, ರಾಕ್ಷಸರ ಪೈಕಿ ಸ್ಪುರದ್ರೂಪಿ ರಾವಣ.
ತನಗೆ ಬೇಕಾದಾಗ ಬೇಕಾದ ರೂಪವನ್ನು ಧಾರಣೆಮಾಡುವ ಶಕ್ತಿಯಿತ್ತು ರಾವಣನಿಗೆ. ರಾಕ್ಷಸಕನ್ಯೆಯರಿಗೆ ಪ್ರಿಯನಂತೆ ಅವನು. ಮತ್ಯಾರಿಗೂ ಪ್ರಿಯನಲ್ಲ. ರಾಕ್ಷಸರಿಗೆ ಸುಖವನ್ನು ಕೊಡುವವನು. ಇನ್ನು ಅವಕಾಶವಿಲ್ಲದಷ್ಟು ಮಧ್ಯಪಾನ ಮಾಡಿ ಹಾಗೆಯೇ ಒರಗಿದ್ದಾನೆ. ಆ ಹೊಳೆಯುವ ಮಂಚದಲ್ಲಿ ರಾವಣನು ಮಲಗಿದ್ದಾನೆ. ಉಸಿರಾಡುತ್ತಿದ್ದಾನೆ. ಅದು ಹೇಗೆ ಎಂದರೆ ಸರ್ಪವು ಬುಸುಗುಡುವಂತೆ ಉಸಿರಾಡುತ್ತಿದ್ದಾನೆ. ಅಥವಾ ಆನೆ ಉಸಿರಾಡುವಂತೆ ಉಸಿರಾಡುತ್ತಿದ್ದಾನೆ. ವಾನರ ಶ್ರೇಷ್ಠನು ಅದು ರಾವಣ ಎಂದು ತಿಳಿದಕೂಡಲೇ ಭೀತ ಭೀತನಂತೆ ಹಿಂದೆ ಸರಿದನು. ಹನುಮಂತನಿಗೆ ಉದ್ವೇಗ ಉಂಟಾಯಿತು. ಅದು ಯಾಕೆ ಎಂದು ತಿಲಕರು ಉದಾಹರಣೆ ನೀಡಿದ್ದಾರೆ; ಪಾಪಿಗಳಲ್ಲಿ ಪಾಪಿ ತಾನೇ ರಾವಣ. ಅಂತವನನ್ನು ಕಂಡಾಗ ಪುಣ್ಯ ಪುರುಷರಿಗೆ ತಾನಾಗಿಯೇ ಹಿಂದೆ ಸರಿಯುವಂತೆ ಆಗುತ್ತದೆ. ಸ್ವಚ್ಛವಾಗಿದ್ದವರು ಕೊಳಕನ್ನು ಕಂಡು ಹಿಂದೆಸರಿದಂತೆ, ಯಾವ ಪರಿಮಳ, ರೂಪ ಇಷ್ಟವಾಗುವುದಿಲ್ಲವೋ ಅಲ್ಲಿಂದ ತಕ್ಷಣವೇ ಹಿಂದೆ ಸರಿಯುತ್ತೇವೆ. ಹಾಗಾಗಿ ಭೀತನಾಗು ಅಲ್ಲ ಅದು ಅವನಿಗೆ ಸಹ್ಯವಲ್ಲ ಎಂದು ಹಿಂದೆ ಸರಿದ. ಜೊತೆಯಲ್ಲಿ ರಾವಣನ ಪ್ರಭಾವ, ತೇಜಸ್ಸು ಕೂಡ ಹಾಗಿದೆ. ಹಿಂದೆ ಸರಿದವನು ಅಲ್ಲಿದ್ದ ಒಂದು ವೇದಿಕೆಯ ಮೆಟ್ಟಿಲನ್ನೇರಿ ನೋಡತೊಡಗಿದ ರಾವಣನನ್ನು. ರಾವಣನನ್ನು ನೋಡುವ ಮನಸ್ಸು ಇದೆ. ಹಾಗೆ ನೋಡಿದಾಗ ಹನುಮಂತನಿಗೆ ರಾವಣನಲ್ಲಿ ಕಂಡಿದ್ದೇನೆಂದರೆ ಬರೀ ಮಧ್ಯ. ಮಧ್ಯಕ್ಕೆ ಅಂದರೆ ಪಾನಕ್ಕೆ ಮೇಲು ಹೊದಿಕೆಯನ್ನು ಹಾಕಲಾಗಿದೆ. ಅವನನ್ನು ನೋಡುತ್ತಿದ್ದನು ಹನುಮಂತ. ಅಂತಹ ರಾವಣ ಮಲಗಿದ್ದಾಗ ಅವನ ಮಂಚವು ಹೇಗೆ ಶೋಭಿಸಿತು ಎಂದರೆ ಗಂಧಹಸ್ತಿ ಮಲಗಿದಂತೆ. ಆನೆಗಳಲ್ಲಿ ಒಂದು ಜಾತಿಯ ಆನೆ ಗಂಧಹಸ್ತಿ. ಅದರ ಪರಿಪಳ ಆಘ್ರಾಣಮಾತ್ರದಿಂದ ಬೇರೆ ಆನೆಗಳು ಬೆದರಿ ಓಡುತ್ತವೋ ಆ ಆನೆಗೆ ಗಂಧಹಸ್ತಿ ಎಂದು ಹೆಸರು. ಪರ್ವತದ ಮೇಲೆ ಗಂಧಹಸ್ತಿ ಮಲಗಿದಂತೆ ಇತ್ತು ಆ ದೃಶ್ಯ.
ಯಾವ ಆನೆಯ ಪರಿಮಳದ ಆಘ್ರಾಣ ಮಾತ್ರದಿಂದ ಬೇರೆಯ ಆನೆಗಳು ಬೆದರಿ ಓಡುತ್ತವೆಯೋ ಆ ಆನೆಗೆ ಗಂಧಹಸ್ತಿ ಎಂದು ಹೆಸರು. ಗಂಧಹಸ್ತಿಯು ಮಲಗಿದರೆ ಪ್ರಸ್ರವಣ ಪರ್ವತ ಹೇಗೆ ಕಾಣಬಹುದೋ ಹಾಗಿತ್ತು ದೃಶ್ಯ. ಎರಡು ಕೈಗಳು ಅತ್ತ ಇತ್ತ ಚೆಲ್ಲಲ್ಪಟ್ಟಿದೆ. ಇಪ್ಪತ್ತಲ್ಲ. ಸ್ವರ್ಣದ ಅಂಗದಗಳು ಬಾಹುಗಳಲ್ಲಿ. ಎರಡು ಭುಜಗಳು ಇಂದ್ರ ಧ್ವಜದಂತೆ. ಆ ಭುಜಗಳ ಮೇಲೆ ಚಿಹ್ನೆಗಳು. ಐರಾವತವು ತನ್ನ ದಂತದಿಂದ ತಿವಿದ ಗುರುತಿದೆ. ಅವನಿಗೆ ಹೆಮ್ಮೆ ಅದು. ಇನ್ನೊಂದು ಕಡೆಗೆ ಇಂದ್ರನ ವಜ್ರಾಯುಧವು ಸೀಳಿದ ಗುರುತು. ಬೇರೆ ಸ್ಥಳದಲ್ಲಿ ವಿಷ್ಣುಚಕ್ರದ ಚಿಹ್ನೆ. ನಾರಾಯಣನಿಗೂ ರಾವಣನಿಗೂ ಯುದ್ಧವಾಗಿಲ್ಲ. ವಿಷ್ಣುಚಕ್ರ ಎನ್ನುವುದು ಒಂದು ಬಗೆಯ ಅಸ್ತ್ರ. ಅದರ ಪ್ರಯೋಗವಾಗಿದೆ. ಹೀಗೆ ಅನೇಕ ಅನೇಕ ದೇವಾಯುಧಗಳು ತಮ್ಮ ಗುರುತನ್ನು ಮೂಡಿಸಿವೆ ಅವನ ದೇಹದ ಮೇಲೆ. ಆದರೆ ಅವನಿಗೇನೂ ಆಗಿಲ್ಲ. ಶರೀರಕ್ಕೆ ಸರಿಹೊಂದುವ ಬಾಹುಗಳು, ಬಲಪೂರ್ಣವಾಗಿವೆ. ಒಳ್ಳೆಯ ಉಂಗುರಗಳನ್ನು ಬೆರಳಿಗೆ ಹಾಕಿದ್ದಾನೆ. ಪರಿಘಾಯುಧವನ್ನು ಹೋಲುವ ಭುಜಗಳು ವೃತ್ತಾಕಾರವಾಗಿವೆ, ಆನೆಯ ಸೊಂಡಿಲಿನಂತೆ. ಕೈಗಳು ಐದು ಹೆಡೆಯ ಸರ್ಪದಂತೆ ಇದೆ. ಕೆಂಪಾದ ಚಂದನವನ್ನು ಪೂಸಿಕೊಂಡಿದ್ದಾನೆ ಕೈಗಳಿಗೆ. ಯಕ್ಷರು, ಪನ್ನಗರು, ದೇವರು, ದಾನವರನ್ನು ಆಕ್ರಂಂದಿಸುವಂತೆ ಮಾಡಿದ ಭುಜಗಳು. ಮಂದರ ಪರ್ವತದಂತಿರುವ ಶರೀರದಿಂದ ಹೊರಬಂದ ಎರಡು ಮಹಾಸರ್ಪಗಳಂತೆ ಎರಡು ಭುಜಗಳು. ನಿದ್ದೆ ಮಾಡುತ್ತಿರುವಾಗ ಉಸಿರು ಬಿಡುತ್ತಿದ್ದನು. ಆ ಉಸಿರಿನಲ್ಲಿ ಚೂತ, ಪುನ್ನಾಗ, ಬಕುಲ ಇವುಗಳ ಪರಿಮಳವಿತ್ತು. ಜೊತೆಯಲ್ಲಿ ಮೃಷ್ಟಾನ್ನದ ಮತ್ತು ಪಾನದ ಪರಿಮಳ. ಆ ಪರಿಮಳ ಮನೆಯನ್ನೇ ತುಂಬುತ್ತಿತ್ತು.
ಆಮೇಲೆ ಅವನ ಕಿರೀಟ. ಮುತ್ತಿನ ಮಣಿಯಿಂದ ಶೋಭಿಸುವ ಸ್ವರ್ಣಕಿರೀಟ. ಸ್ವಲ್ಪ ಓರೆಯಾಗಿತ್ತು. ಅದು ಮುಖಕ್ಕೆ ಕಾಂತಿಯನ್ನು ಕೊಟ್ಟಿತ್ತು. ಮಲಗಿದ್ದಾಗಲೂ ಕಿರೀಟವನ್ನೇಕೆ ಧರಿಸಿದ್ದನೆಂದರೆ ಕುಳಿತು ಕುಡಿಯುವಾಗ ಒರಗಿದ್ದ ಕಾರಣದಿಂದ. ವಿಶಾಲವಾಗಿರುವ ವಕ್ಷಸ್ಥಲ. ಅಲ್ಲಿ ರತ್ನಹಾರ. ರಕ್ತಚಂದನ ಲೇಪನವಾಗಿದೆ. ಅಲ್ಲಿ ಒಳ್ಳೆಯ ಭಾವನೆ ಯಾವುದೂ ಇಲ್ಲ. ಸ್ವಚ್ಛ ಬಿಳಿಯ ರೇಷ್ಮೆಯ ಬಟ್ಟೆಯನ್ನು ಉಟ್ಟಿದ್ದಾನೆ. ಪೀತಾಂಬರವೂ ಸೇರಿದೆ. ಇಷ್ಟೆಲ್ಲಾ ಅಲಂಕಾರವಿದ್ದರೂ ಸ್ಫಟಿಕದ ಮಂಚದ ಮೇಲೆ ಉದ್ದಿನ ರಾಶಿಯನ್ನು ಹಾಕಿದಂತಿತ್ತು. ಕಪ್ಪುಬಣ್ಣದವನು ಅವನು. ಮಂಚದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕಾಂಚನ ದೀಪಗಳು. ಅವನ ಶರೀರದ ಮೇಲೆ ಬೆಳಕು ಚೆಲ್ಲಿದ್ದವು ಅವು. ನಾಲ್ಕು ದಿಕ್ಕಿಗೂ ಬೆಳಕು ಚೆಲ್ಲುತ್ತಿದ್ದವು ಅವು. ಹೀಗೆ ರಾವಣನನ್ನು ನೋಡುತ್ತಾನೆ ಹನುಮಂತ.
ಹಾಗೆಯೇ ಅವನ ಪಾದದ ಕಡೆಗೆ ನೋಡಿದಾಗ ಒಂದಷ್ಟು ಸ್ತ್ರೀಯರು ಅಲ್ಲಿ ಬಿದ್ದಿದ್ದಾರೆ. ಚಂದ್ರವದನೆಯರು, ಚಾರುಕುಂಡಲ ಭೂಷಿತೆಯರು ಅವರು. ಕೆಲವರು ನೃತ್ಯ ಕುಶಲೆಯರು. ಕೆಲವರು ಗಾಯನದಲ್ಲಿ, ವಾದನದಲ್ಲಿ ನಿಷ್ಣಾತರು. ಕೆಲವರು ಹಾಗೆಯೇ ಕುಳಿತು ನಿದ್ದೆಮಾಡುತ್ತಿದ್ದಾರೆ. ಅವರು ಜಾಗ ಸಿಕ್ಕಿದಲ್ಲೆಲ್ಲಾ ಮಲಗಿದ್ದರು. ಒಂದು ಕಡೆ ಅಮಲು ಇನ್ನೊಂದು ಕಡೆ ಶ್ರಮ. ಹಾಗಾಗಿ ಗಾಢ ನಿದ್ದೆ ಅವರಿಗೆ. ಒಬ್ಬ ನೃತ್ಯ ಕೋವಿದೆ ನೃತ್ಯದ ಭಂಗಿಯಲ್ಲಿಯೇ ಮಲಗಿದ್ದಳು. ಬೇರೆಬೇರೆ ವಾದನಗಳನ್ನು ನುಡಿಸುತ್ತಿದ್ದವರು ಅದನ್ನು ತಬ್ಬಿಕೊಂಡು ಮಲಗಿದ್ದರು. ಒಬ್ಬಳು ವೀಣೆಯನ್ನು, ಇನ್ನೊಬ್ಬಳು ಮಡ್ಡುಕವನ್ನು ಹಿಡಿದು ಅದರ ಮೇಲೆಯೇ ನಿದ್ದೆ ಮಾಡಿದ್ದಾಳೆ. ಪುಟ್ಟ ಮಗುವನ್ನು ತಬ್ಬಿ ಮಲಗಿದಂತೆ ಇತ್ತು. ಇನ್ನೊಬ್ಬಳು ತಮಟೆಯನ್ನು ತಬ್ಬಿ ಮಲಗಿದ್ದಳು. ಇನ್ನೊಬ್ಬಳ ಕೈಯಲ್ಲಿ ಕೊಳಲಿದೆ. ಇನ್ನೊಬ್ಬಳು ವಿಪಂಚಿ( 7 ತಂತಿಗಳ ವೀಣೆ)ಯನ್ನು ಹಿಡಿದು ಮಲಗಿದ್ದಳು. ಮೃದಂಗ, ಮದ್ದಲೆ, ಡಿಂಡಿಮವನ್ನು ತಬ್ಬಿ ಮಲಗಿದ್ದರು. ಇನ್ನೊಬ್ಬಳು ಕಲಶದಲ್ಲಿ ನೀರು ತಂದಿದ್ದಾಳೆ. ಅಲ್ಲಿಯೇ ನಿದ್ದೆ ಮಾಡಿದ್ದರಿಂದ ಅವಳ ಮೇಲೆ ನೀರು ಚೆಲ್ಲಿದೆ. ಹೇಗಿದೆಯೋ ಹಾಗೆಯೇ ವರ್ಣನೆ ಮಾಡಿದ್ದಾರೆ ವಾಲ್ಮೀಕಿಗಳು. ಆತೋದ್ಯಗಳೆಲ್ಲವೂ ಪ್ರದರ್ಶಿತವಾಗಿದ್ದವು. ಆದರೆ ಎಲ್ಲರೂ ನಿದ್ದೆ ಮಾಡಿದ್ದರು.
ಈ ಗುಂಪಿನಿಂದ ಪ್ರತ್ಯೇಕವಾಗಿರುವ ಉತ್ತಮವಾದ ಒಂದು ಮಂಚ. ಅಲ್ಲಿ ಒಬ್ಬಳು ಮಲಗಿದ್ದಾಳೆ. ಏಕೆಂದರೆ ಅವಳು ಈ ಗುಂಪಿನಿಂದ ಭಿನ್ನಳು. ಅವಳು ತುಂಬಾ ಲಕ್ಷಣವಾಗಿದ್ದಳು. ಆಕೆಯನ್ನು ಹನುಮಂತ ಕಂಡ. ಅನೇಕ ಆಭರಣಗಳನ್ನು ತೊಟ್ಟಿದ್ದಳು ಅವಳು. ಅವಳಿಂದಾಗಿ ಆ ಮನೆಯೇ ಬೆಳಗುತ್ತಿತ್ತು. ಆ ಇಡೀ ಭವನಕ್ಕೆ ಅಲಂಕಾರದಂತೆ ಅವಳಿದ್ದಳು. ಚಿನ್ನದ ವರ್ಣದವಳು. ರಾವಣನಿಗೆ ಅತ್ಯಂತ ಪ್ರೀತಿಯವಳು. ರಾವಣನ ಅಂತಃಪುರದ ಒಡತಿ ಅವಳು. ಅವಳೇ ಮಂದೋದರಿ. ಮಹೋದರಿ ಎಂದರೆ ದೊಡ್ಡ ಹೊಟ್ಟೆಯವಳು, ಶೂರ್ಪನಖಿಯಂತೆ. ಮಂದೋದರಿ ಎಂದರೆ ಕ್ಷೀಣವಾಗಿರುವ ಹೊಟ್ಟೆ. ಇದೆಯೋ ಇಲ್ಲವೋ ಎನ್ನುವಂತೆ. ಹನುಮಂತನು ಅವಳನ್ನು ಕಂಡನು. ಒಂದು ಕ್ಷಣ ಸೀತೆಯೇ ಇವಳು ಅನ್ನಿಸಿತು. ಮಂದೋದರಿಯ ಯೋಗ್ಯತೆ ತುಂಬಾ ದೊಡ್ಡದು, ಲಕ್ಷಣಗಳೂ ಕೂಡಾ. ಸೀತೆಯದ್ದೇ ಬಣ್ಣ. ಅವಳಂತೆಯೇ ಪತಿವ್ರತೆ. ಅವಳಲ್ಲಿ ಧರ್ಮವಿದೆ. ಹಾಗಾಗಿ ಅವನಿಗೆ ಸೀತೆ ಎಂದು ಅನ್ನಿಸಿತು. ಅವನಿಗೆ ತುಂಬಾ ಸಂತೋಷವಾಯಿತು. ಇದರ ಫಲ ಎಷ್ಟು ದೊಡ್ಡದು! ಇದಕ್ಕಾಗಿ ಎಷ್ಟೆಲ್ಲಾ ಹುಡುಕಿದ್ದು! ಹಾಗಾಗಿ ಅತ್ಯದ್ಭುತವಾದ ಆನಂದವಾಯಿತು. ಒಮ್ಮೆ ಬಾಲವನ್ನೆತ್ತಿ ಬಡಿದನು. ಚಪ್ಪಾಳೆ ತಟ್ಟಿದನು. ಭುಜವನ್ನು ತಟ್ಟಿಕೊಂಡನು. ನಂತರ ತನ್ನ ಬಾಲಕ್ಕೆ ಮುತ್ತು ಕೊಟ್ಟು ಅವನಿಗಾದ ಆನಂದವನ್ನು ಆಚರಣೆ ಮಾಡಿದನು. ಹನುಮಂತನು ಆಟವಾಡುತ್ತಾ, ಹಾಡುತ್ತಾ, ಎಲ್ಲ ಕಡೆ ಓಡುಡುತ್ತಾ, ಕೊನೆಯಲ್ಲಿ ಅಲ್ಲಿ ಮರಗಳಿಲ್ಲದಿದ್ದರೂ ಒಂದೊಂದು ಕಂಬವನ್ನು ಹತ್ತಿ ಹಾರುತ್ತಾ ಶುದ್ಧ ಕಪಿಯ ವರ್ತನೆಯನ್ನು ಹನುಮಂತನು ಮಾಡಿದನು. ಹನುಮಂತನು ವಾಯುಪುತ್ರ, ರಾಮದೂತನೇ ಆಗಿದ್ದರೂ ಸಹ ತಾನು ಕಪಿಯು ಹೌದು ಎಂದು ಸಾಬೀತು ಪಡಿಸಿದ ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ಸಂತೋಷಗೊಂಡಾಗ ಕಪಿಗಳು ಏನೆಲ್ಲ ಮಾಡಬಹುದೋ ಅದನ್ನೆಲ್ಲ ಹನುಮಂತನು ಮಾಡಿದನು. ಹಿಂದೊಮ್ಮೆ ರಾಮ ಸುಗ್ರೀವನ ಬಳಿ ಪ್ರಥಮ ಬಾರಿಗೆ ಬರುತ್ತಿದ್ದಾಗ ಸುಗ್ರೀವನಿಗೆ ಭಯವಾಗುತ್ತದೆ. ಆಗ ಹನುಮಂತನು ಕಪಿಯ ಹಾಗೆ ಮಾಡಬೇಡ ಎಂದು ಸುಗ್ರೀವನಿಗೆ ಹೇಳಿದ್ದನು.
ಮಂಡೋದರಿಯನ್ನು ನೋಡಿದ ಮೇಲೆ ಹನುಮಂತನು ಇವಳು ಸೀತೆಯಲ್ಲ ಎಂದು ತೀರ್ಮಾನಿಸುತ್ತಾನೆ. ರಾಮನ ವಿರಹದಿಂದ ಸೀತೆ ಇಷ್ಟು ನಿಶ್ಚಿಂತೆಯಿಂದ ಮಲಗಿರಲು ಸಾಧ್ಯವಿಲ್ಲ, ಸೀತೆಯಾದರೆ ಊಟ ಮಾಡುತ್ತಿರಲಿಲ್ಲ, ಇಷ್ಟೊಂದು ಅಲಂಕಾರ ಮಾಡಿಕೊಳ್ಳುತ್ತಿರಲಿಲ್ಲ, ಸೀತೆಯೇ ಆಗಿದ್ದರೆ ದೇವತೆಗಳೇ ಬಂದರೂ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಯೋಚಿಸಿ ಇವಳು ಸೀತೆ ಅಲ್ಲ ಎಂದು ತೀರ್ಮಾನಿಸಿದನು.
ರಾಮನಿಗೆ ಸಮಾನರಾದವರು ದೇವತೆಗಳಲ್ಲಿ ಕೂಡ ಇಲ್ಲ.
ಮೇಲಿನ ಹನುಮಂತನ ಭಾವವು ಸೀತೆಯ ಮೇಲೆ ಅವನಿಗಿದ್ದ ನಂಬಿಕೆಯನ್ನು ತೋರಿಸುತ್ತದೆ. ಸೀತೆ ಯಾರು..? ಸೀತೆ ಏನು …?? ಎಂಬುದನ್ನು ರಾಮ–ಲಕ್ಷ್ಮಣರಿಂದ ಹಲವು ಬಾರಿ ಕೇಳಿದ್ದರಿಂದ ಹನುಮಂತನಿಗೆ ಚೆನ್ನಾಗಿ ಗೊತ್ತಿತ್ತು. ಮೊದಲು ಸೀತೆ ಎಂದು ಭಾವಿಸಿದ ತನ್ನ ಮನಸ್ಸನ್ನು ಸಹ ಹನುಮಂತನು ಕೊಡವಿದನು. ಹನುಮಂತನು ಅನ್ವೇಷಣೆಯನ್ನು ಮುಂದುವರಿಸಿದನು. ಹನುಮಂತನಿಗೆ ಒಂದೊಂದು ಶಾಲೆಯಲ್ಲಿ, ಒಂದೊಂದು ಪಾರ್ಶ್ವದಲ್ಲಿ ಸಾವಿರದ ಸಂಖ್ಯೆಯಲ್ಲಿ ಸ್ತ್ರೀಯರು ಕಾಣುತ್ತಾರೆ. ಆ ಸ್ತ್ರೀಯರೆಲ್ಲರೂ ಯಾವುದೋ ದೇಶದ ರಾಣಿಯರಂತೆ ಕಾಣುತ್ತಿದ್ದರು. ಸಾವಿರಾರು ಹೆಣ್ಣಾನೆಗಳ ಮಧ್ಯದಲ್ಲಿ ಮದಗಜದಂತೆ, ಗಂಡಾನೆಯಂತೆ ರಾಜನ ಶೋಭಿಸಿದನು. ಅಲ್ಲಿಂದ ಮುಂದಕ್ಕೆ ಹನುಮಂತನು ಪಾನ ಭೂಮಿಗೆ ಹೋಗುತ್ತಾನೆ. ಅಲ್ಲೊಂದು ಪಾನಶಾಲೆ ಇತ್ತು. ಅದು ಮಧ್ಯ–ಮಾಂಸಗಳ ದೊಡ್ಡ ಪ್ರಪಂಚವೇ ಆಗಿತ್ತು. ಎಲ್ಲ ಪ್ರಾಣಿಗಳ ಮಾಂಸ ಮತ್ತು ಬಗೆ ಬಗೆಯ ಮಧ್ಯಗಳು ಅಲ್ಲಲ್ಲಿ ಚೆಲ್ಲಿದ್ದವು. ಪರಿಮಳವು ಎಲ್ಲ ಕಡೆ ಹರಡಿತ್ತು. ಇಂತಹದ್ದೊಂದು ದೊಡ್ಡ ಮೈಲಿಗೆ, ಮಲಿನ ಪ್ರಪಂಚವನ್ನು ಹನುಮಂತನು ನೋಡಿದನು. ರಾವಣನ ಅಂತಃಪುರವನ್ನು ಪೂರ್ಣವಾಗಿ ಹನುಮಂತನು ಶೋಧಿಸಿದನು.
ನಂತರ ಹನುಮಂತನಿಗೆ ಭಯಂಕರವಾದ ಚಿಂತೆಯೊಂದು ಕಾಡಿತು. ತನ್ನಿಂದ ಧರ್ಮಕ್ಕೆ ಚ್ಯುತಿಯಾಯಿತೇ..? ಬದುಕಿಡೀ ಪಾಲಿಸಿದ ಪರಿಶುದ್ಧ ಭಾವಕ್ಕೆ ಚ್ಯುತಿಯಾಯಿತೇ ?? ಎಂದು ಹನುಮಂತನು ಅವನ ಬಗ್ಗೆ ಅವನಿಗೆ ಬೇರೆ ಭಾವ ಬರುವಷ್ಟು ಚಿಂತಿಸಿದನು. ಅಲ್ಲಿ ಎಲ್ಲ ಸ್ತ್ರೀಯರು ನಿಶ್ಚಿಂತೆಯಿಂದ ಮಲಗಿರುವಾಗ ನೋಡಿದೇನಲ್ಲ, ಇದು ನನಗೆ ದೊಡ್ಡ ಧರ್ಮಲೋಪವನ್ನುಂಟು ಮಾಡುತ್ತದೆ, ದೊಡ್ಡ ಪಾಪವು ಬರುತ್ತದೆ ಎಂದು ಭಯದಿಂದ ಹನುಮಂತನು ತುಂಬಾ ಬೇಸರಗೊಂಡನು. ಆಗ ಹನುಮಂತನಿಗೆ ಇದು ಸರಿಯೇ / ತಪ್ಪೇ ಎಂದು ಕೇಳಲು ಬೇರೆ ಯಾರು ಇರಲಿಲ್ಲ. ಹನುಮಂತನು ತನ್ನೊಡನೆ ತಾನೇ ಸಂವಾದವನ್ನು ಮಾಡಿದನು. ನಿಜವಾಗಿಯೂ ನನಗೆ ದೋಷ ಬರುವುದೇ ಎಂದು ವಿಶ್ಲೇಷಣೆ ಮಾಡಿದನು.
ನಾನು ಸಾವಿರ ಸಾವಿರ ಪರಸ್ತ್ರೀಯರನ್ನು ನೋಡಿದ್ದು ಹೌದು, ಆದರೆ ಯಾವ ಭಾವದಿಂದ ನೋಡಿದರೆ ದೋಷವೋ ಆ ಭಾವದಿಂದ ನೋಡಿಲ್ಲ ಎಂದು ತನ್ನ ಮನಸ್ಸಿನೊಳಗೇ ಹನುಮಂತನು ಯೋಚಿಸಿದನು. ನನ್ನ ಮನಸ್ಸಿನಲ್ಲಿ ಯಾವ ವಿಕಾರವೂ ಇಲ್ಲ ಮತ್ತು ಮನಸ್ಸಿನಿಂದ ಪಾಪ ಮಾಡಿಲ್ಲ ಎನ್ನುವ ತೀರ್ಮಾನಕ್ಕೆ ಬಂದನು.
ಮನವರಿಯದ ಪಾಪ ತಾನಿರದು ―ಶ್ರೀಸೂಕ್ತಿ.
ಮನಸ್ಸಿನಿಂದ ಮಾಡದ ಪಾಪಕ್ಕೆ ದೋಷವಿಲ್ಲ. ಮನಸ್ಸಿನಿಂದ ಮಾಡುವ ಪಾಪಕ್ಕೆ ದೋಷ ತಪ್ಪಿದ್ದಲ್ಲ. ಮನಸ್ಸು ಲಿಪ್ತವಾಗದಿದ್ದರೆ ಮೂಜಗವನ್ನು ಕೊಂದರೂ ಕೊಂದ ಪಾಪವಿಲ್ಲ ಎಂದು ಮುಂದೆ ಕೃಷ್ಣನು ಹೇಳಿದ್ದಾನೆ. ಲೇಪವಿದ್ದರೆ ಮಾತ್ರ ಪಾಪ. ಲೇಪವಿಲ್ಲದಿದ್ದರೆ ಪಾಪವಿಲ್ಲ. ಸೀತೆಯನ್ನು ನಾರಿಯರ ಮಧ್ಯೇ ಹುಡುಕದೆ ಬೇರೆಲ್ಲಿ ಹುಡುಕಬೇಕಿತ್ತು ಎಂದು ತನಗೆ ತಾನೇ ಪ್ರಶ್ನಿಸಿಕೊಳ್ಳುತ್ತಾನೆ. ಸ್ತ್ರೀಯರನ್ನು ಸ್ತ್ರೀಯರ ಮಧ್ಯೆದಲ್ಲೇ ಹುಡುಕಬೇಕು. ಯಾವುದು ಯಾವ ಜಾತಿಯದೋ ಆ ಜಾತಿಯ ಮಧ್ಯವೇ ಹುಡುಕಬೇಕು. ಕಳೆದು ಹೋದ ಸ್ತ್ರೀಯನ್ನು ಮೃಗಗಳ ಮಧ್ಯೆ ಹುಡುಕಲು ಸಾಧ್ಯವಿಲ್ಲ ಎಂದು ಅವನಿಗೆ ಅವನೇ ಉತ್ತರಿಸಿಕೊಳ್ಳುತ್ತಾನೆ. ಹನುಮಂತನು ಸಾವಿರ ಸಾವಿರ ಸ್ತ್ರೀಯರ ಮಧ್ಯೇ ಶುದ್ಧ ಮನಸ್ಸಿನಿಂದ ಹುಡುಕಿದ ಪರಿಣಾಮದಿಂದ ನಾಗ ಕನ್ಯೆಯರನ್ನು, ರಾಜ ಕನ್ಯೆಯರನ್ನು ಕಂಡರೂ ಸೀತೆ ಮಾತ್ರ ಕಾಣಲಿಲ್ಲ. ಸೀತೆಯನ್ನು ಕಾಣದ ಹನುಮಂತನು ಒಂದಿಷ್ಟು ಹೊತ್ತು ಬೆಪ್ಪಾಗಿ ಕುಳಿತು ಮುಂದೇನು ಮಾಡಲಿ ಎಂದು ಯೋಚಿಸಿದನು. ನಂತರ ಚಿಂತೆಯನ್ನು ಕೊಡವಿ, ಪಾನ ಭೂಮಿಯನ್ನು ಬಿಟ್ಟು ಬೇರೆ ಕಡೆಯಲ್ಲಿ ಹುಡುಕಲು ಆರಂಭಿಸಿದನು.
ಮುಂದೇನಾಯಿತು ..? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ…
ಪ್ರವಚನವನ್ನು ಇಲ್ಲಿ ಕೇಳಿರಿ:
ಪ್ರವಚನವನ್ನು ನೋಡಲು:
Leave a Reply