ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸನ್ನಿವೇಶ – ಭರತನು ಭಾರದ್ವಾಜ ಮುನಿಗಳ ಆಶ್ರಮವನ್ನು ತಲುಪಿದ್ದಾನೆ. ರಾಮನನ್ನು ಹುಡುಕುತ್ತಾ ಭಾರದ್ವಾಜ ಮುನಿಗಳ ಆಶ್ರಮಕ್ಕೆ ಬಂದಿರುವ; ಆದರೆ ಮುನಿಗಳು ಅಂದು ರಾತ್ರಿ ಅಲ್ಲಿಯೇ ತಂಗಲು ತಿಳಿಸಿದ್ದಾರೆ. ಆಗಮಿಸಿರುವ ಭರತ ಮತ್ತು ಆತನ ಸೈನ್ಯಕ್ಕೆ ಉಪಚಾರವನ್ನು ಮಾಡಿದರು. ಭಾರದ್ವಾಜರ ಕೃಪೆಯಿಂದ ನದಿಗಳು ಇಕ್ಕೆಲಗಳಲ್ಲಿ ಹರಿದು ಬರುವುದರ ಜೊತೆಗೆ ಸುಣ್ಣಗಳನು ಬಳಿದ ಸೌಧಗಳಿದ್ದವು ಮತ್ತು ಬ್ರಹ್ಮನು ಸೃಷ್ಟಿಸಿರುವ ಇಪ್ಪತ್ತು ಸಾವಿರ ಅಪ್ಸರೆಯರ ಆಗಮನವಾಯಿತು. ಭಾರದ್ವಾಜರ ಕರುಣೆಯಿಂದ ಪ್ರಯಾಗದಲ್ಲಿಯೆಲ್ಲವೂ ಸೃಷ್ಟಿಗೊಂಡವು.

ಕುಬೇರ ಕಳುಹಿಸಿದ ಇಪ್ಪತ್ತು ಸಾವಿರ ಅಪ್ಸರೆಯರು, ರಮಣೀಯ ಭವನಗಳು, ನಂತರ ಭರತನ ಮುಂದೆ ಹಾಡಲು ನಾರದ, ತುಂಬುರು, ಗೋಪ, ಗಂಧರ್ವ ರಾಜರುಗಳು ಮತ್ತು ಅವರು ಹಾಡಿದ ಹಾಡಿಗೆ ಅಪ್ಸರೆಯರು ನೃತ್ಯವನ್ನು ಮಾಡಿದರು.
ಹಾಗೆಯೇ ವೃಕ್ಷಗಳಾದ ಬಿಲ್ವ ಮರಗಳು ಮೃದಂಗವನ್ನು, ತಾರೆಯ ಮರಗಳು ತಾಳಗಳನ್ನು ಬಡಿದರು. ಅದಕ್ಕೆ ಅಶ್ವಥಗಳು ನರ್ತಿಸಿದವು. ಹೀಗಿರಲು ಕಾರಣವೇನೆಂದರೆ ಭಾರದ್ವಾಜರ ಶಾಸನವು ಹಾಗಿತ್ತು. ಹೀಗೆ ಆಗಮಿಸಿರುವ ಭರತನ ಸೈನ್ಯಕ್ಕೆ ಎಷ್ಟು ಬೇಕೋ ಅಷ್ಟು ತಿನ್ನಿ, ಅದರ ಮೊದಲು ಅಭ್ಯಂಗ ಸ್ನಾನವಿದೆ.

ಹೀಗೆ ಎಲ್ಲರಿಗೂ ಅಭ್ಯಂಗ ಸ್ನಾನವಾದ ಬಳಿಕ ಸೈನಿಕರನ್ನು ಮಾತ್ರವಲ್ಲದೇ ಬಂದಿರುವ ಪಶುಗಳಿಗೆ, ಆನೆ-ಕುದುರೆಗಳಿಗೆ, ಕಬ್ಬು, ಅರಳಿಗೆ ಜೇನನ್ನು ಬೆರೆಸಿ ತಿನ್ನಿಸಿದರು ಮತ್ತು ಎಲ್ಲರೂ ಸಂತೋಷಗೊಂಡರು. ಇದರಿಂದ ಯಾರಿಗೆ ಏನೆಂಬುದೇ ತಿಳಿಯದಾಯಿತು.
ಎಲ್ಲರೂ ಮೈಗೆ ಕೆಂಪು ಗಂಧವನ್ನು ಪೂಸಿದ್ದಾರೆ. ರಾಮನಿಗೂ, ಭರತನಿಗೂ ಒಳಿತಾಗಲಿ, ಎಂದು ಮನಸಿನಲಿ ಆಗಮಿಸಿದ ಭರತನ ಸೈನಿಕರು, ಜನರು ಹೇಳುವರು.

ಮುಂದುವರೆದು, ಸ್ವರ್ಗ ಎಂದು ಬೇರೆ ಇರದು, ಇದೇ ಸ್ವರ್ಗವೆಂದು ನುಡಿದರು. ಇತ್ತ ಜನರು ಸಂತೋಷದಿ ಅಮಲಿನಿಂದ ಅತ್ತಿಂದಿತ್ತ ಓಲಾಡುತ್ತಿದ್ದರು. ಜನರ ಮನದಲ್ಲಿ ಆ ಅಕ್ಷಯ ಭೋಜನವನ್ನು ನೋಡುವಾಗ ಮತ್ತೆ ಹಸಿವಾಗುವಂತಹ ಆಸೆಯುಂಟಾಗಿತ್ತು. ಎಲ್ಲರಿಗೂ ಸಂಪೂರ್ಣ ತೃಪ್ತಿ.

ಆಗ ಅಲ್ಲಿ ಯಾರೂ ಕೂಡ ಹಸಿದವ, ಕೊಳಕಾದವ ಇರಲಿಲ್ಲ. ಹೂವಿನ ಚಿತ್ತಾರವಿರುವ ಸ್ವರ್ಣ ಪಾತ್ರಗಳಲ್ಲಿ ಆಹಾರ, ಬಗೆ ಬಗೆಯ ಹಣ್ಣಿನ ರಸಗಳು, ತೋವೆ ಮುಂತಾದವುಗಳಲ್ಲದೇ, ಅಲಂಕೃತಗೊಂಡ ಪಾತ್ರಗಳಲ್ಲಿ ಅನ್ನ, ಮೈಯೇರ ಪೇಯ, ಸುಯೋಚಿತ ಆಹಾರ ಪದಾರ್ಥಗಳು, ಚಿನ್ನದ ಊಟದ ತಟ್ಟೆಗಳು, ಮಜ್ಜಿಗೆಯ ಕೆರೆಗಳು, ಕೆಲವು ಮೊಸರಿನ, ಪಾಯಸದ, ಸಕ್ಕರೆಯ ಕೆರೆಗಳು ಹಾಗೂ ಜವೆ ಗೋಧಿ ಮತ್ತು ಸಕ್ಕರೆಯಿಂದ ತಯಾರಾದ ಭಕ್ಷ್ಯಗಳು ಇದ್ದವು.

ಇತ್ತ ಸ್ನಾನಕ್ಕೆ ಬೇಕಾದ ನೆಲ್ಲಿ ಮತ್ತು ಮತ್ತಿತರ ಚೂರ್ಣಗಳು, ಬಿಸಿ ನೀರುತುಂಬಿದ ಪಾತ್ರೆಗಳು, ಸ್ನಾನದ ನಂತರ ಲೇಪಿಸಲು, ಶ್ರೀಗಂಧದ ಪುಡಿಗಳು, ಕನ್ನಡಿ, ಪಾದುಕೆ-ಪಾದರಕ್ಷೆಗಳು, ಕಾಡಿಗೆ ಭರಣಿಗಳು, ಬಾಚಣಿಗೆ ಹೀಗೆ ಅಲಂಕಾರಕ್ಕೆ ಬೇಕಾದವುಗಳಿದ್ದವು.

ಸ್ವಚ್ಛ ಸರೋವರ, ಪಶುಗಳಿಗೆ ಸೇವಿಸಲು ಮೃದುವಾದ ಹುಲ್ಲುಗಾವಲುಗಳನ್ನು ನೋಡಿ ದಿಗಿಲಾದರು. ಇಂತಹ ಆತಿಥ್ಯ ಸ್ವಪ್ನ ಹಾಗೂ ಅದ್ಭುತ. ಅವರುಗಳಿಗೆ ನಂದನವನದಲ್ಲಿ ಸೇರಿದ ದೇವತೆಗಳಂತೆ ಆಯಿತು.

ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಇದ್ಯಾವುದೂ ಇರಲಿಲ್ಲ, ಆದರೆ ಇವೆಲ್ಲವೂ ಸ್ವಪ್ನವೆಂದು ತೋರಿದಂತಾದರೂ ಅದು ಸ್ವಪ್ನವಾಗಿರಲಿಲ್ಲ. ಕಾರಣವೇನೆಂದರೆ : ಧರಿಸಿರುವ ಹೊಸ ಬಟ್ಟೆ, ಲೇಪಿಸಿದ ಗಂಧ ಹಾಗೇ ಇದ್ದವು, ಅದು ಸ್ವಪ್ನ ಅಲ್ಲ ನಡೆದದ್ದು ನಿಜವಾಗಿತ್ತು.

ಆದರೆ ಭರತನಿಗಿದಾವ ತೊಂದರೆ ಇರಲಿಲ್ಲ. ಎದ್ದು ಭಾರದ್ವಾಜರ ಬಳಿಗೆ ಹೋದಾಗ ಮುನಿಗಳು ರಾತ್ರಿ ಹೇಗಾಯಿತು? ಎಂದು ಕೇಳಿದಾಗ, ಸುಖವಾಗಿ ರಾತ್ರಿ ಕಳೆದೆ, ಎಲ್ಲರೂ ತೃಪ್ತ. ನನ್ನನ್ನು ಪ್ರೇಮ ದೃಷ್ಟಿಯಿಂದ ಕಾಣಿ.. ನಾನಿನ್ನು ಹೋಗಿ ಬರುವೆ… ಚಿತ್ರಕೂಟಕೆ ದಾರಿ ತೋರುವಿರಾ? ಎಂದು ಭರತನು ಭಾರದ್ವಾಜರಲಿ ಕೇಳುವನು.

ಆಗ ಮುನಿಗಳು ಇಲ್ಲಿಂದ ಮೂರುವರೆ ಯೋನ ದೂರ, ಮಂದಾಕಿನಿ ನದಿಯು ಹರಿಯುತ್ತಿದೆ, ಅಲ್ಲಿ ರಮಣೀಯ ಕಾನನವಿದೆ. ಚಿತ್ರಕೂಟವನೇರು. ಅಲ್ಲಿ ಪರ್ಣ ಕುಟೀರದಲ್ಲಿ ರಾಮ-ಸೀತೆ ಮತ್ತು ಲಕ್ಷ್ಮಣರು ಇರುವರು.
ದಕ್ಷಿಣದ ಯಮುನೆ ದಾಟಿ ಮತ್ತೆ ನೈರುತ್ಯ ದಿಕ್ಕಿಗೆ ಪ್ರಯಾಣವನ್ನು ಮಾಡು ಎಂದರು.
ಅನಂತರ ರಾಜಮಾತೆ, ರಾಣಿಯರು ಮುನಿಗಳಿಗೆ ಪ್ರದಕ್ಷಿಣೆಯನು ಮಾಡಿ ಆಶೀರ್ವಾದ ಪಡೆದರು. ಆದರೆ ಕೈಕೇಯಿಯು ಆಶೀರ್ವಾದವ ಪಡೆದು, ಭರತನಿಗೆ ತುಂಬಾ ಹತ್ತಿರವೂ ಅಲ್ಲ, ದೂರವೂ ಅಲ್ಲದ ಜಾಗದಲ್ಲಿ ನಿಂತಳು.

ಭಾರದ್ವಾಜರು ಯಾರು ಯಾರಿವರೆಲ್ಲ? ಎಂದು ಕೇಳಿದಾಗ ಭರತನು ಮೊದಲಾಗಿ ಉಪವಾಸ ವ್ರತಗಳಿಂದ ಕೃಶವಾಗಿರುವ ಈಕೆ, ದೇವತಾಕಾರ್ಯಗಳಿಂದ ಕಾಂತಿಯನ್ನು ಹೊಂದಿರುವ ದೈನ್ಯ, ದೀನ, ಹರಿ ದೇವರಿಗೆ ಜನ್ಮವನು ಕೊಟ್ಟು ಅದಿತಿಯಂತಿರುವ ಪುರುಷ – ಸಿಂಹನಂತಿರುವ ಶ್ರೀರಾಮನ ತಾಯಿ ಕೌಸಲ್ಯೆ.

ಈಕೆ ದುಃಖಾರ್ದೆ, ಕರ್ಣಾಕಾರ ಪುಷ್ಪದ ಶಾಖೆಯಂತಿರುವ ಮಧ್ಯಮಾಂಬೆ, ಲಕ್ಷ್ಮಣ-ಶತ್ರುಘ್ನರ ವೀರ ಪುರುಷರ ತಾಯಿ ಸುಮಿತ್ರೆ.

ಇವಳು ಸಿಡುಕಿ, ಇವಳಿಂದಾಗಿಯೇ ಇಷ್ಟೆಲ್ಲಾ ನಡೆದುದು, ಸಂಸ್ಕಾರ ಪೂರ್ಣವಿಲ್ಲದ, ಐಶ್ವರ್ಯ ಕಾಮಿನಿಯಾಗಿರುವ, ಪಾಪ ನಿಶ್ಚಯಿ ನನ್ನ ತಾಯಿ ಕೈಕೇಯಿ ಎಂದು ಬುಸುಗುಡುವ ಹಾವಿನಂತೆ ಹೇಳಿದಾಗ ಭಾರದ್ವಾಜರು ಭರತನನ್ನು ಸಮಾಧಾನ ಮಾಡಿದರು. ನಂತರ ಮುನಿಗೆ ಪ್ರದಕ್ಷಿಣೆಯನು ಮಾಡಿ ತೆರಳುವೆನೆಂದು ತಿಳಿಸಿದನು.

ನಂತರ ಹಲವಾರು ಜನರು ವೈವಿಧ್ಯಮಯವಾದ ವಾಹನಗಳನ್ನು ಏರಿದರು, ಪತಾಕೆಗಳನ್ನು ಏರಿಸಿದ ಆನೆಗಳು ಆಗಸದಲ್ಲಿ ಕಾಣುವ ಮೋಡಗಳಂತೆ ಕಾಣುತ್ತಿತ್ತು. ಸೇನೆಯು ವನ್ಯ ಮೃಗ – ಪಕ್ಷಿ ಮಯವಾದ ಕಾಡುಗಳನ್ನು ದಾಟುತ್ತಾ ವನದಲ್ಲಿ ದಕ್ಷಿಣ ದಿಕ್ಕಿನೆಡೆಗೆ ಪ್ರಯಾಣವನ್ನು ಮಾಡಿತು.

ಹೀಗೆ ಪ್ರಯಾಣದಲ್ಲಿ… ಸೇನೆಯು ಬಂದಾಗ ಕರಡಿ, ಜಿಂಕೆ, ಕಡವೆ, ನವಿಲು ಮುಂತಾದವುಗಳು ಹೆದರಿ ಪಲಾಯನ ಮಾಡಿದವು. ಆ ಸೇನೆಯು ಸಾಗುತ್ತಿರುವಾಗ ಭೂಮಿ ಕಾಣಿಸುತ್ತಿರಲಿಲ್ಲ. ಇತ್ತ ಪ್ರಯಾಣಿಸಿ ಸೇನೆಯು ಬಳಲಿತ್ತು.

ಆಗ ಭರತನು :ನಾವೀಗ ಚಿತ್ರಕೂಟದ ಬಳಿ ಬಂದಂತೆ ತೋರುತ್ತಿದೆ. ಇತ್ತ ಸಂಚರಿಸುವಾಗ ಆನೆಗಳ ನಡಿಗೆಯಿಂದ ಮರಗಳು ಹೂ ಬಿಟ್ಟಿದ್ದವು, ಆನೆಗಳ ಸಂಚಾರವು ಕಾಡಿನೊಳು ಫಲಕದ ಮೇಲೆ ಹೂವಿರಿಸಿದಂತೆ ತೋರುವುದೆಂದು ಭರತನು ವರ್ಣಿಸುವನು.

ನಿಶ್ಯಬ್ದವಾಗಿದ್ದ ಕಾಡು ಚಟುವಟಿಕೆಯಿಂದ ಅಯೋಧ್ಯೆಯಂತೆ ಆಗಿದೆ. ಇಲ್ಲಿ ಎಲ್ಲೋ ರಾಮ-ಲಕ್ಷ್ಮಣರು ಇದ್ದಾರೆಂದೆನಿಸುತ್ತಿದೆ. ನಮ್ಮವರು ಹುಡುಕಲಿ.

ಹೀಗೆ ಒಂದು ಕಡೆ ಸೈನಿಕರಿಗೆ ಹುಡುಕುವಾಗ ; ಧೂಮಾಗ್ರವು ಕಂಡಿತು. ವಿಷಯ ತಿಳಿದ ಭರತನು ಕೂಡಲೇ ಮುಂದೆ ಯಾರೂ ಹೋಗಕೂಡದೆಂದೂ ಮತ್ತು ನಾನು, ಮಂತ್ರಿ ಸುಮಂತ್ರ ಹಾಗೂ ಗುರುಗಳಾದ ವಸಿಷ್ಠರು ಮಾತ್ರ. ಆಗ ಎಲ್ಲರ ಕಣ್ಣು ಧೂಮಾಗ್ರದಲ್ಲಿ ಮತ್ತು ಮನವು ರಾಮನಾಗಮನದ ನಿರೀಕ್ಷೆಯಲಿ ಎಲ್ಲರೂ ಸಂತೋಷಗೊಂಡರು.

ಇತ್ತ ರಾಮನು ಗಿರಿ ಪ್ರಿಯ. ಸೀತೆಗೆ ವನನ್ನು ಪರಿಚಯಿಸುತ್ತಾ, ನೋಡು ಸೀತೆ; ನಾವು ರಾಜ್ಯವನ್ನು, ಇಷ್ಟಮಿತ್ರರನ್ನು ಕಳಕೊಂಡೆವು.
“ನೋಡು ಈ ಚಿತ್ರಕೂಟವನು, ರಮಣೀಯ, ಗಗನ ಚುಂಬಿ ಶಿಖರಗಳು, ಬಗೆಬಗೆಯ ಮರಗಳು, ನಾನಾ ಮೃಗಗಳು, ಹೂ-ಹಣ್ಣುಗಳು, ಚಿತ್ರಕೂಟದ ಶೋಭೆಯೋ ಶೋಭೆ, ತಪ್ಪಲಲಿ ವಿಹಾರಕ್ಕಾಗಿ ಬಂದ ಕಿನ್ನರ ಜೋಡಿಗಳು ಹೀಗೆ ಮದಗಜದಂತೆ ಇದ್ದ ಚಿತ್ರಕೂಟದಲ್ಲಿ ಜಲಪಾತಗಳು, ಹೀಗೆ ಸುಂದರವಾದ ಪ್ರಕೃತಿಯ ಮಡಿಲಲ್ಲಿ ರಾಮನು ಸೀತೆಯ ಬಳಿ ಇರುವುದಾದರೆ ಇಲ್ಲೇ ಇರುವ, ಇಲ್ಲಿ ಯಾವುದೇ ಶೋಕವಿಲ್ಲ , ಚಿತ್ರಕೂಟದಲ್ಲಿ ನನಗೆ ಎರಡು ತೃಪ್ತಿ ದೊರೆತಿದೆ. ಒಂದು ತಂದೆಯ ಋಣವನ್ನು ತೀರಿಸಿರುವುದು ಮತ್ತು ಇನ್ನೊಂದು ಭರತನಿಗೆ ಒಳಿತಾಗಿದೆ ಎಂಬ ತೃಪ್ತಿ.
ವೈದೇಹೀ ನಿನಗೆ ಖುಷಿಯಾಯಿತಾ?!!
ನಮ್ಮ ಪೂರ್ವಜರು ವನವಾಸವನ್ನು ಅಮೃತವೆಂದು ಕರೆದಿದ್ದಾರೆ. ವನವಾಸದಿಂದ ಮೋಕ್ಷದ ಫಲವಿದೆ. ಮುಂದುವರೆದು…. ನೀಲ, ಪೀತ, ಸಿತ, ಅರುಣ ಹೀಗೆ ಬಣ್ಣ ಬಣ್ಣದ ಶಿಲೆಗಳು ಹೀಗೆ ಚಿತ್ರಕೂಟವನು ನೋಡಿದರೆ ಮೇಲೆದ್ದನೋ ಪರ್ವತರಾಜ ಎನ್ನುವ ಭಾವ.
ಕುಬೇರನ ನಗರಿ, ಸರೋವರವನ್ನೇ ಅತಿಶಯಿಸಿರುವಂತಿಹ ಇಲ್ಲಿ ಸಂತೋಷಕ್ಕೆ, ನನ್ನ ಧರ್ಮಕ್ಕೆ, ಸತ್ಯದ ನಿಯಮ ಪಾಲನೆಗೆ ಯಾವುದೇ ಶೋಕವಿರದು, ಲಕ್ಷ್ಮಣನ ಜೊತೆಯಿರುವುದು ಸಂತೋಷವಿದೆ.

ಈ ಹೂವಿನ ರಾಶಿ, ಜಲಚರ ಪಕ್ಷಿಗಳು ಹೀಗೆ ಇವುಗಳೆಲ್ಲದವರೊಂದಿಗೆ, ಇದು ಅಯೋಧ್ಯೆಗಿಂತ ಚೆನ್ನಾಗಿದೆ, ನಿನ್ನ ದರ್ಶನಕ್ಕಿಂತ ಮಿಗಿಲು ಎಂದು ಸೀತೆಯ ಬಳಿ ಹೇಳುವನು.
ಮುಂದಿನ ಕಥಾಭಾಗವನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments Box