ಗೋಕರ್ಣ: ೮. ಪಕ್ವವಾಗದೆ ಹಣ್ಣು ಮರದಿಂದ ಬೀಳುವುದಿಲ್ಲ. ಇಳೆಯಲ್ಲಿ ಧಗೆಯಾಗದೆ ಮೋಡಗಟ್ಟಿ ಮಳೆ ಸುರಿಯುವುದಿಲ್ಲ. ಲೋಕದ ನಿಯಮವೇ ಹೀಗೆ. ಪ್ರತಿಯೊಂದಕ್ಕೂ ತನ್ನದೇ ಆದ ಕಾಲವಿದೆ. ನಮಗೆ ಬೇಕಾದಾಗ ಸೂಕ್ತವಾದ ಸಮಯವು ಒದಗಿ ಬರುವುದಿಲ್ಲ. ಅದಕ್ಕಾಗಿ ಕಾಯುವಿಕೆ ಅನಿವಾರ್ಯ. ಈ ನಿಯಮಕ್ಕೆ ಭಗವಂತನೂ ಅಪವಾದವಲ್ಲ. ವಿಶ್ವದಲ್ಲಿ ಲೋಕಪೀಡಕರ ಹಿಂಸೆ ಅತಿಯಾದಾಗ ಸಾಧು ಸತ್ಪುರುಷರು ಅತ್ಯಂತ ಸಂಕಟಕ್ಕೊಳಗಾದಾಗ ಜಗತ್ತೇ ರಾವಣನ ಭೀತಿಯಲ್ಲಿ ತೊಳಲಾಡಿದಾಗ ಮರ್ಯಾದಾಪುರುಷೋತ್ತಮನಾದ ಪ್ರಭು ಶ್ರೀರಾಮಚಂದ್ರ ಭುವಿಗಿಳಿದು ಬಂದ. ದಿವಿಭುವಿಗಳಿಗೆ ಧರ್ಮವೆಂಬ ಅತ್ಯಪರೂಪದ ಸೇತುವೆಯನ್ನು ನಿರ್ಮಿಸಿದ. ಆದರೆ ಶ್ರೀರಾಮನೂ ತನ್ನ ಜನನಕಾಲಕ್ಕಾಗಿ ಕೌಸಲ್ಯೆಯ ಪುಣ್ಯಗರ್ಭದಲ್ಲಿ ಕಾದ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ಶ್ರೀರಾಮಕಥಾದ ಮಂಗಳೋತ್ಸವದ ದಿನದಂದು ಶ್ರೀರಾಮ ಜನನದ ಪುಣ್ಯಕಾಲದಲ್ಲಿ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು, ಸರ್ವಶಕ್ತನಾದ ಭಗವಂತನಿಗೆ ತನಗನುಕೂಲವಾದ ಸಮಯವನ್ನು ಹೊಂದಿಸಿಕೊಳ್ಳಲು ಅಸಾಧ್ಯವೇ ಎಂಬ ಪ್ರಶ್ನೆಯೇ ಅಸಂಗತ. ಸಹಜತೆ ಪ್ರಕೃತಿಯ ಧರ್ಮ. ಅದಕ್ಕನುಗುಣವಾಗಿಯೇ ಪುರುಷೋತ್ತಮನ ನಡೆ. ಲೋಕಕ್ಕೆ ಜೀವನ ಶಿಕ್ಷಣವನ್ನು ನೀಡಲೆಂದೇ ಆದ ಅವತಾರದಲ್ಲಿ ಆತ ಎಂದೂ ಅಮಾನುಷತ್ವವನ್ನು, ದೈವಿಕತೆಯನ್ನು ತೋರ್ಪಡಿಸದೆ ಸಾಮಾನ್ಯ ಮಾನವನಂತೆಯೆ ನಡೆದುಕೊಂಡ. ಆತನ ಜನ್ಮಕಾಲವೇ ಅವನು ಲೋಕೋದ್ಧಾರಕ್ಕೆಂದು ದೇವಲೋಕದಿಂದ ಇಳಿದು ಬಂದ  ಅಸಾಮಾನ್ಯ ಶಕ್ತಿಯೆಂದು ತಿಳಿಸುತ್ತದೆ. ನಮ್ಮ ಬದುಕಿನ ಒಳಿತಿಗೆಂದು ಬಂದು ಅನಂತಫಲಗಳನ್ನು ನೀಡಿದ ಆ ಭಗವಂತನಿಗೆ ಈ ಲೋಕದಲ್ಲಿ ಸಿಕ್ಕಿದ್ದು ವನವಾಸ, ಅಪವಾದ, ಬಾಲ್ಯದ, ಯೌವ್ವನದ ಕೆಲವು ಸಮಯದ ಸಂತಸವನ್ನು ಬಿಟ್ಟರೆ ಶ್ರೀರಾಮನ ಜೀವನದಲ್ಲಿ  ತುಂಬಿದ್ದು ನೋವು ಮಾತ್ರ ಎಂದು ಹೇಳಿದ ಪೂಜ್ಯಶ್ರೀಗಳು, ರಾಮನ ಅವತಾರವಾದದ್ದು ಕೇವಲ ರಾಕ್ಷಸಸಂಹಾರಕ್ಕಾಗಿ ಮಾತ್ರವಲ್ಲ, ಮಾನವರಾಗಿ ನಾವು ಹೇಗೆ ಬಾಳಬೇಕೆಂದು ಮಾನವನೂ ಸಾಧನೆಯಿಂದ ಸಹ ಹೇಗೆ ಮಾಧವತ್ವದೆಡೆಗೆ ಸಾಗಬಹುದೆಂದು ತೋರಿಸಿಕೊಡುವುದೂ ಆತನ ಉದ್ದೇಶವಾಗಿತ್ತು ಎಂದು ಹೇಳಿ, ಶ್ರೀರಾಮನನ್ನು ನಮ್ಮ ಹೃದಯದಲ್ಲಿ ತುಂಬಿಕೊಂಡು ಆ ಆನಂದವನ್ನುಅನುಭವಿಸುವುದಕ್ಕಿಂತ ಬೇರೆ ಸುಖ ಈಲೋಕದಲ್ಲಿಲ್ಲ ಎಂದೂ ಅಭಿಪ್ರಾಯಪಟ್ಟರು.

ಶ್ರೀಪಾದ ಭಟ್,  ಪ್ರೇಮಲತಾ ದಿವಾಕರ್, ವಸುಧಾ ಶರ್ಮಾ, ಶ್ರೀಪಾದ ಭಟ್ ಇವರ ಗಾಯನ, ಪ್ರಕಾಶರ ವೇಣುವಾದನ, ನರಸಿಂಹ ಮೂರ್ತಿಯವರ ಮೃದಂಗ, ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು, ಶ್ರೀ ರಾಘವೇಂದ್ರ ಹೆಗಡೆಯವರ ಮರಳುಚಿತ್ರ, ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ರಾಮಕಥೆಗೆ ಮೆರುಗು ನೀಡಿದವು. ಹವ್ಯಕ ಮಹಾಮಂಡಲದ ಮಾತೃಶಾಖೆಯ ವತಿಯಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು.

ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆಯು ಸಂಪನ್ನಗೊಂಡಿತಲ್ಲದೆ, ಶ್ರೀಮತೀ ಗಾಯತ್ರೀಭಟ್ಟ  ಕರಿಕ್ಕಳ, ಭಾರತೀ ಭಟ್ಟಪುತ್ತೂರು, ವಿಜಯಲಕ್ಷ್ಮಿ ಭಟ್ ಕಾಂಚನ ಹಾಗೂ ಶ್ರಿಮತೀ ಸುಶೀಲಾ ಇವರನ್ನು ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಸಮ್ಮಾನಿಸಲಾಯಿತು. ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು..

 

ಅಯೋಧ್ಯೆಯಾದ ಅಶೋಕೆ.

 

ಅಲ್ಲಿ ಒಂದೆಡೆ ದೇವ ದುಂದುಬಿಯ ಮೊಳಗು, ಇನ್ನೊಂದೆಡೆ… ಸುಮನೋಹರ ಸಿತಾರವಾದನದ ಅನುರಣನ, ವೀಣಾವಾದನಗಳ ಝೇಂಕಾರ, ಗುಡುಗಿನ ಶಬ್ದಕ್ಕೆ ಸಂವಾದಿಯಾದ ಮೃದಂಗ, ತಬಲಾನಿನಾದ, ಮಂಗಳಕರ ಪಂಚವಾದ್ಯಗಳು, ಚಿತ್ತಾಕರ್ಷಕವಾದ ಗಾಯನ, ನೃತ್ಯ, ಕೋಲಾಟ, ಡಾಂಡಿಯಾನಾಟ್ಯ, ಐರಾವತದಲ್ಲಿ ಕುಳಿತು ಬಂದು ರಾಮ ಜನನಕ್ಕೆ ಪುಷ್ಪವೃಷ್ಟಿ ಮಾಡಿದ ದೇವೇಂದ್ರ, ಆಕಾಶದಿಂದ ನಿರಂತರ ಪುಷ್ಪವೃಷ್ಟಿ, ಎಲ್ಲೆಡೆ ಪಸರಿಸಿದ ಸುಗಂಧ ಭರಿತವಾಯು, ಪನ್ನೀರಿನ ಹೂಮಳೆ, ಅಯೋಧ್ಯೆಯ ಪ್ರಜೆಗಳಂತೆ ಕಂಡುಬರುವ ಜನರು, ಇವೆಲ್ಲಕ್ಕೂ  ಶಿಖರಪ್ರಾಯವಾಗಿ ಸಭೆಯಲ್ಲಿದ್ದವರೆಲ್ಲ ಸಂತೋಷಭರಿತರಾಗಿ ಹೆಜ್ಜೆ ಹಾಕುತ್ತ ಪರಸ್ಪರ ಹೂವೆರಚಿಕೊಳ್ಳುತ್ತ ಶ್ರೀರಾಮನ ಜನನಕಾಲದ ಸಂತಸವನ್ನು ಹಂಚಿಕೊಂಡ ಪರಿ. ಇದು ನಿನ್ನೆ ಇತಿಹಾಸವು ಮರುಕಳಿಸುವಂತೆ ಅಶೋಕೆಯು ಅಯೋಧ್ಯೆಯಾಗಿ ಪರಿವರ್ತಿತವಾದ ರೀತಿ. ಭಾವುಕತೆಯ ಚರಮಸೀಮೆಯನ್ನು ಮುಟ್ಟಿದ ಶ್ರೀರಾಮಕಥೆಯ ಮಂಗಳಮಹೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಶ್ರೀರಾಮಭಕ್ತರಲ್ಲಿಯೂ ಈ ಸಂದರ್ಭದಲ್ಲಿ ಧನ್ಯತೆಯ ಭಾವವು ತುಂಬಿ ತುಳುಕುತ್ತಿತ್ತು.

 

Facebook Comments Box