ಶ್ರೀ ರಘೂತ್ತಮ ಮಠ ಕೆಕ್ಕಾರು : 06.08.2014, ಬುಧವಾರ
ಶ್ರೀಸುರೇಶ್ವರಾಚಾರ್ಯ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಲೇಖಕ ಎಸ್. ಜಿ. ಭಟ್ಟ, ಕಬ್ಬಿನಗದ್ದೆ ಲೇಖಕರ ನುಡಿಗಳನ್ನಾಡಿದರು. ಶ್ರೀ ಸುಬ್ರಾಯ ರಾಮಚಂದ್ರ ಹೆಗಡೆ ಮಾನ್ಯ ಅಪ್ಸರಕೊಂಡ ವಲಯ ಇವರು ಪ್ರಾಯೋಜಕತ್ವ ವಹಿಸಿದ್ದರು. ಲಲಿತಾ ಭಟ್ಟ ಸಿದ್ದಾಪುರ ರವರು ಬರೆದ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ಕೃತಿಯನ್ನು ಖಾರ್ವಿ ಸಮಾಜದ ಮುಖಂಡ ಚಂದ್ರು ಖಾರ್ವಿ ಬಿಡುಗಡೆಗೊಳಿಸಿದರು. ರವೀಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿ ನಿರೂಪಿಸಿದರು. ಸಿದ್ದಾಪುರ ಮಂಡಲದ ಉಸ್ತುವಾರಿ ಸುಬ್ರಾಯ ಎಸ್. ಭಟ್ಟ, ಮಂಡಲಾಧ್ಯಕ್ಷ ನರೇಂದ್ರ ಹೆಗಡೆ, ಕರ್ಯದರ್ಶಿ ಜಿ. ಎಸ್. ಭಟ್ಟ, ಮಹಾ ಮಂಡಲ ಪ್ರಸಾರ ಪ್ರಧಾನ ರಮೇಶ ಹೆಗಡೆ ಗುಂಡೂಮನೆ, ಮೂಲಮಠ ಕಾರ್ಯದರ್ಶಿ ಭಾಸ್ಕರ ಹೆಗಡೆ ವಲಯಗಳ ಸಭೆ ನಡೆಸಿಕೊಟ್ಟರು.
~
ಶ್ರೀ ಶ್ರೀಗಳ ಪ್ರವಚನ:
’ನಾವು ಕಲ್ಲಾಗುವದು ಬೇಡ, ಕಲ್ಲು ಸಕ್ಕರೆಯಾಗೋಣ’
ಬೆಣಚು, ಕಲ್ಲು-ಕಲ್ಲುಸಕ್ಕರೆ ನೋಡಲು ಒಂದೇ ರೀತಿ. ಬಣ್ಣದಲ್ಲಿ ವ್ಯತ್ಯಾಸವಿಲ್ಲ. ವ್ಯತ್ಯಾಸವಿರುವುದು ರಸದಲ್ಲಿ. ಸಾಮಾನ್ಯ ಮನುಷ್ಯ – ಮಹಾಪುರುಷ ನೋಡಲು ಒಂದೇ. ಆದರೆ ಮಹಾಪುರುಷರಲ್ಲಿ ಕರಗುವ ಶಕ್ತಿಯಿದೆ. ಯಾರು ಕರಗಬಲ್ಲರೋ ಅವರೇ ಮಹಾತ್ಮರು. ಕಲ್ಲುಸಕ್ಕರೆ ಬಾಯಲ್ಲಿಟ್ಟರೆ ಅದು ಕರಗಿ ಅದ್ವೈತವಾಗುತ್ತದೆ. ಸಂತರಲ್ಲಿ ಅಂತಹ ಸವಿ ಇದೆ ಎಂದು ರಾಘವೇಶ್ವರ ಶ್ರೀಗಳು ನುಡಿದರು. ಜಂiಚಾತುರ್ಮಾಸ್ಯದ ಇಪ್ಪತ್ತಾರನೇ ದಿನದ ಸಭೆಗೆ ಭಜಗೋವಿಂದಂ ಪ್ರವಚನ ಅನುಗ್ರಹಿಸಿದ ಶ್ರೀಗಳು ಯಾವ ದಿನವನ್ನು ನಾವು ಸಾರ್ಥಕವಾಗಿ ಕಳೆದಿದ್ದೇವೋ ಅದು ಕಳೆದದ್ದಲ್ಲ ಗಳಿಸಿದ್ದು ಎಂದು ಭಾವಿಸಬೇಕು. ಗುಡುಗು-ಸಿಡಿಲು, ಮಳೆ-ಮಿಂಚು ಎಲ್ಲವೂ ಆಕಾಶದಲ್ಲೇ ಆದರೂ ಅದಕ್ಕೆ ಏನೂ ಆಗುವುದಿಲ್ಲ. ನಾವೂ ಹಾಗೆಯೇ ಇರಬೇಕು. ನಮ್ಮೊಳಗೆ ಹೊರಗೆ ಏನೇ ಆಗುತ್ತಿದ್ದರೂ ನಿರ್ಲಿಪ್ತರಾಗಿರಬೇಕು. ಸಂತರು ಹಾಗಿರುತ್ತಾರೆ. ಜ್ಞಾನವಿಲ್ಲದೇ ಮುಕ್ತಿ ಇಲ್ಲ – ಗುರುವಿಲ್ಲದೇ ಜ್ಞಾನವಿಲ್ಲ ಪ್ರಾಪಂಚಿಕ ಸುಖದ ಹುಚ್ಚನ್ನು ಬೆಳೆಸಿಕೊಳ್ಳದೇ ಪರಮಾತ್ಮನ ಹುಚ್ಚನ್ನು ಬೆಳೆಸಿಕೊಳ್ಳಿ ಎಂದು ಅವರು ಕರೆ ನೀಡಿದರು. ಭೂಮಿ – ಕ್ಷಮೆ, ಜಲ – ಶುದ್ಧ, ಅಗ್ನಿ – ಪ್ರಕಾಶ, ವಾಯು – ಕ್ರಿಯಾಶೀಲ, ಆಕಾಶ – ನಿರ್ಲಿಪ್ತ, ಗುರು ಎಂದರೆ ಈ ಪಂಚ ಭೂತಗಳಂತಿರುತ್ತಾನೆ. ಕಿಸೆಯ ಮೇಲೆ ಗುರಿಇರುವವನು ನಿಜವಾದ ಗುರುವಲ್ಲ. ಒಳಗಿನ ಚೈತನ್ಯವನ್ನು ನೋಡುವವನು ನಿಜವಾದ ಗುರು. ಸಂತರ ಜೀವನದಲ್ಲಿ ಹಾಲಿಡೇ ಎಂಬುದಿಲ್ಲ, ಎಲ್ಲವೂ ಹೋಲಿಡೇಗಳೇ ಎಂದು ಮಾರ್ಮಿಕವಾಗಿ ನುಡಿದರು. ’ನಾವು ಕಲ್ಲಾಗುವದು ಬೇಡ, ಕಲ್ಲು ಸಕ್ಕರೆಯಾಗೋಣ’ ನಮ್ಮ ಮಕ್ಕಳೂ ಕಲ್ಲು ಸಕ್ಕರೆಯಾಗುವಂತೆ ಮಾಡೋಣ. ಮಗುವಿಗೆ ಗುಮ್ಮನನ್ನು ತೋರಿಸಬೇಡಿ ಅಮ್ಮನನ್ನು ತೋರಿಸಿ ಎಂಬ ಸಂದೇಶ ನೀಡಿದರು. ಸಿದ್ದಾಪುರ ಮಂಡಲದ ಬಾನ್ಕುಳಿ, ಹಾರ್ಸಿಕಟ್ಟಾ ತಾಳಗುಪ್ಪಾ-ಇಡವಾಣಿ ವಲಯಗಳು ಸರ್ವಸೇವೆ ನಡೆಸಿದರು. ಖಾರ್ವಿ ಸಮಾಜದವರು ಹೊರೆಗಾಣಿಕೆಯೊಂದಿಗೆ ವಿಶೇಷ ಸೇವೆ ಸಲ್ಲಿಸಿದರು.
Leave a Reply