ಪೆರಾಜೆ-ಮಾಣಿ ಮಠಃ 17.8.2013, ಶನಿವಾರ

ಇಂದು ಏಕಾದಶೀ. ಶ್ರೀಗುರುಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಶ್ರೀ ನಳಿನ್ ಕುಮಾರ್ ಕಟೀಲ್ ಎಂ ಪಿ ಮಂಗಳೂರು, ಶ್ರೀಮಠದ ಪದಾಧಿಕಾರಿಗಳು ಶ್ರೀಗುರುಗಳ ಅನುಗ್ರಹ ಪಡೆದರು.

~

ಯಾಗಶಾಲೆಯಿಂದಃ

ಗಣಪತಿ ಹವನ, ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಆಯುಷ್ಯ ಸೂಕ್ತ ಹವನ, ಶ್ರೀರಾಮತಾರಕ ಯಜ್ಞ, ಶ್ರೀರಾಮ ಪೂಜೆ ಹಾಗೂ ಸಂಜೆ ಶ್ರೀದುರ್ಗಾಪೂಜೆ ನಡೆಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಶ್ರೀರಾಮನಿಗೆ ಹಾಗೂ ಹನುಮನಿಗೆ ಪುಷ್ಪನಮನ ಸಲ್ಲಿಸಿ ಇಂದಿನ ದಿನದ ರಾಮಕಥೆಯನ್ನು ಶ್ರೀಗುರುಗಳು ಆರಂಭಿಸಿದರು. ಇಂದಿನ ರಾಮಕಥೆಯಲ್ಲಿ ಶ್ರೀಗುರುಗಳು ಜಾಂಬವಂತನ ಪೇರಣೆಯಂತೆ ರಾಮಕಾರ್ಯಕ್ಕೆ ಸಿದ್ಧನಾದ ಹನುಮಂತನ ಸಾಗರೋಲ್ಲಂಘನದ ಪೂರ್ವಕ್ಷಣಗಳನ್ನು ಸವಿವರವಾಗಿ ನೀಡಿದರು. ಹಿಂದೆ ಋಷಿಗಳ ಶಾಪದಿಂದ ತನ್ನ ಶಕ್ತಿಯನ್ನು ಮರೆತಿದ್ದ ಆಂಜನೇಯನಿಗೆ ಜಾಂಬವಂತನ ಮಾತುಗಳಿಂದ ಸುಪ್ತ ಶಕ್ತಿಗಳು ಪುನಃ ಚೇತನಗೊಂಡು ರಾಮನನ್ನು ತನ್ನೊಳಗೆ ತುಂಬಿ ವಿಶಾಲನಾಗಿ ಬೆಳೆದು ಮಹೇಂದ್ರಪರ್ವತವನ್ನು ಮೆಟ್ಟಿ ನಿಂತು ಹಾರಿದ ಕಥಾನಕವನ್ನು ಶಿಷ್ಯರಿಗೆ ವರ್ಣಿಸಿದರು. ಶ್ರೀ ರಾಮನ ಬಾಣದಂತೆ ಹೊರಟ ಹನುಮನ ಸಾಗರೋಲ್ಲಂಘನವನ್ನು ಕಂಡ ಕಪಿಗಳ ಸಂತೋಷವನ್ನು ರೂಪಕದಲ್ಲಿ ಅಭಿನಯಿಸಿದರು ನಮ್ಮ ರಾಮಕಥಾ ಕಲಾವಿದರು. ಜೈ ಜೈ ರಾಮಕಥಾದೊಂದಿಗೆ ಈ ವಾರದ ರಾಮಕಥೆಯ ಅಲ್ಪವಿರಾಮ ಪಡೆಯಿತು. ಇಂದಿನ ದಿನದ ರಾಮಕಥೆಯನ್ನು ಪ್ರಾಯೋಜಿಸಿದವರು ಬೆಟ್ಟಂಪಾಡಿ ವಲಯ ಹಾಗೂ ಪುತ್ತೂರು ವಲಯ. ಬೆಟ್ಟಂಪಾಡಿ ವಲಯದ ಪರವಾಗಿ ಶ್ರೀರಾಮಪ್ರಸನ್ನ ಹಾಗೂ ಪುತ್ತೂರು ವಲಯದ ಪರವಾಗಿ ಶ್ರೀ ಪತ್ತಡ್ಕ ರಾಮ ಭಟ್ ಶ್ರೀರಾಮಾಯಣ ಗ್ರಂಥಕ್ಕೆ ಫಲ ಸಮರ್ಪಣೆ ಮಾಡಿದರು. ಸಹಪ್ರಾಯೋಜಕರಾಗಿ ಶ್ರೀ ಗಿರೀಶ್ ಭಾರಧ್ವಾಜ್ ಹಾಗೂ ಶ್ರೀ ರವಿಶಂಕರ ಉಪ್ಪಂಗಳ ಶ್ರೀ ರಾಮಾನುಗ್ರಹ ಪಡೆದರು.

~

Facebook Comments Box