ಗೋಕರ್ಣ.20. ನಮ್ಮ ಬದುಕಿನಲ್ಲಿ ಅನೇಕರಾತ್ರಿಗಳನ್ನು ನಾವು ಕಂಡಿದ್ದೇವೆ. ಆ ಎಲ್ಲ ರಾತ್ರಿಗಳಲ್ಲಿ ಪೂರ್ಣ ಕತ್ತಲೇ ತುಂಬಿದೆ. ಆದರೆ ಈ ಶಿವರಾತ್ರಿ ಮಾತ್ರ ಹಾಗಲ್ಲ. ಇದು ನಮ್ಮ ಜೀವನದಲ್ಲಿ ಮಂಗಳವನ್ನು ಶುಭವನ್ನು ಕೊಡುವ ರಾತ್ರಿ. ಇರುಳೆಲ್ಲ ಎಚ್ಚರವಾಗಿದ್ದು ಪರಶಿವನನ್ನು ಹೃದಯದಲ್ಲಿ ತುಂಬಿಕೊಂಡು ಅವನನ್ನು ಆರಾಧಿಸುವ ಪುಣ್ಯಪರ್ವವೇ ಶಿವರಾತ್ರಿ. ಲೋಕಹಿತಂಕರನಾದ ಶಂಕರ ಈ ಶಿವರಾತ್ರಿಯ ಸಂದರ್ಭದಲ್ಲಿ ಲೋಕದ ಎಲ್ಲ ಶೈವಸಂಕೇತಗಳಲ್ಲಿ ಸಂಪೂರ್ಣಸಾನ್ನಿಧ್ಯವನ್ನು ಕರುಣಿಸಿ ನಮಗೆ ಸಂತೋಷವನ್ನು ನೀಡುವ ಆತ ಬೇಗನೇ ಸಂತುಷ್ಟನಾಗುವ “ಆಶುತೋಷ”ನೂ ಹೌದು. ಎಲ್ಲ ಘೋರಗಳನ್ನು ದೂರ ಮಾಡುವ ಅಘೋರನೂ ಹೌದು. ಈ ಪುಣ್ಯಕಾಲದಲ್ಲಿ ಶಿವನಿಗೆ ಅತ್ಯಂತಪ್ರಿಯನಾದ ರಾಮನ ಕಥೆಯನ್ನು ಕೇಳಿ ನಮ್ಮನ್ನು ಸಂಸ್ಕರಿಸಿಕೊಳ್ಳುವುದೂ ಅವನ ಆರಾಧನೆಯ ಒಂದು ಭಾಗವೇ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಇಂದು ಗೋಕರ್ಣದ ಸಾಗರ ತೀರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಆಯೋಜಿತವಾದ “ರಾಮಕಥಾ” ದಲ್ಲಿ ಪ್ರವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ನಮ್ಮ ಬದುಕಿನಲ್ಲಿ ಸರ್ವದಾ ನಾವು ಸುಖಾಪೇಕ್ಷಿಗಳು. ಆದರೆ ಆ ಸುಖಕ್ಕೆ ಮೂಲ ಕಾರಣವೇನೆಂಬುದನ್ನು ತಿಳಿಯದೆ ಯಾವಯಾವುದೋ ವಸ್ತುಗಳನ್ನು ಸುಖಸಾಧನಗಳೆಂದು ಭ್ರಮಿಸಿ ಅದರತ್ತ ಓಡುತ್ತಿದ್ದೇವೆ. ವಾಸ್ತವವಾಗಿ ಎಲ್ಲ ರೀತಿಯ ಸುಖಗಳಿಗೆ ಮೂಲ ಕಾರಣ ಧರ್ಮ. ನಾವು ಧಾರ್ಮಿಕರಾಗಿ ವಿಹಿತವಾದ ಕರ್ಮಗಳಲ್ಲಿ ಆಸಕ್ತರಾಗಿ ಅಸೂಯಾ ಅಹಂಕಾರ, ದರ್ಪ ಮೊದಲಾದ ದುರ್ಗುಣಗಳನ್ನು ದೂರೀಕರಿಸಿದರೆ ಮಾತ್ರ ಅಂತಹ ಅಪೇಕ್ಷಿತ ಸುಖಲಾಭವಾಗುತ್ತದೆ. ಆದರೆ ಕೆಲವೊಮ್ಮೆ ಬದುಕಿನಲ್ಲಿ ಬಂದ ಅಧಿಕಾರ ಅಂತಸ್ತುಗಳು ನಮ್ಮ ನಿಜರೂಪವನ್ನು ಮರೆಸಿಬಿಡುತ್ತವೆ. ಪರರನ್ನು ನಿಕೃಷ್ಟವಾಗಿ ಕಾಣುವ ಪ್ರವೃತ್ತಿ ಬೆಳೆಯತೊಡಗುತ್ತದೆ. ಹಿಂದೆ ಪ್ರಜಾಪತಿಯಾದ ದಕ್ಷನಿಗಾದದ್ದು ಇದೇ ಸ್ಥಿತಿ. ಸತೀದೇವಿಯ ತಂದೆಯಾದ ಅವನು ಅಧಿಕಾರದ ಅಮಲಿನಲ್ಲಿ ಮರೆತ. ಲೋಕಾಧೀಶನಾದ ಸಕಲ ಐಶ್ವರ್ಯದ ಖನಿಯಾದ ಅಳಿಯನಾದ ಶಂಕರನನ್ನು ಅಪಮಾನಿಸಿದ.  ತಂದೆಯಿಂದ ನೊಂದ ಮಗಳು ಸತೀದೇವಿಯೂ ಸಹ ಅವನಿಂದ ಅಪಮಾನಿತಳಾದಳು. ಸ್ವತಹ ಸತೀದೇವಿಯಂತಹ ಮಗಳನ್ನು ತಪಸ್ಸನ್ನು ಮಾಡಿ ಪಡೆದವ ದಕ್ಷ. ಆದರೆ ಮುಂದೆ ಅಧಿಕಾರದ ಅಮಲಿನಲ್ಲಿ ಶಿವನ ಸ್ವರೂಪವನ್ನು ಮರೆತ. ಇದೇ ಮುಂದೆ  ಸತೀದೇವಿಯನ್ನು ಪಾರ್ವತಿಯ ರೂಪದಲ್ಲಿ ಪುನಹ ವರಿಸಲು ಕಾರಣವಾಯಿತು. ಭಗವದ್ವಿಷಯಕವಾದ ಅಪಚಾರ ಎಂತಹ ಎತ್ತರದಲ್ಲಿರುವ ವ್ಯಕ್ತಿಯನ್ನೂ ಕೂಡಲೇ ಅಧಃಪತನದತ್ತ ತಳ್ಳುತ್ತದೆ ಎಂಬುದಕ್ಕೆ ಜ್ವಲಂತ ದೃಷ್ಟಾಂತವಾಯಿತು ಎಂದು ನುಡಿದ ಪೂಜ್ಯಶ್ರೀಗಳು ನಮ್ಮ ಜೀವನದಲ್ಲಿ ಸುಖಬೇಕೆಂದಾದರೆ ಧರ್ಮವನ್ನು ಅನುಸರಿಸಬೇಕು.ಧರ್ಮಮಾರ್ಗಚ್ಯುತರಾದವರಿಗೆ ಸಂತೋಷವು ಎಂದೂ ದೊರೆಯಲಾರದು ಎಂದೂ ಹೇಳಿದರು.

ಶ್ರೀಪಾದ ಭಟ್ಟ,ಪ್ರೇಮಲತಾ ದಿವಾಕರ ಇವರ ಸುಶ್ರಾವ್ಯ ಗಾಯನ,ಗೋಪಾಲಕೃಷ್ಣ ಹೆಗಡೆ ಯವರ ಗಂಭೀರತಬಲಾವಾದನ ಪ್ರಕಾಶ ಕಲ್ಲಾರೆಮನೆಯವರ ಕೊಳಲು, ಗೌರೀಶ ಯಾಜಿಯವರ ಹಾರ್ಮೋನಿಯಂ ವಾದನ, ಗಣಪತಿ ನೀರ್ನಳ್ಲಿ ಯವರ ಚಿತ್ರ,ರಾಘವೇಂದ್ರ ಹೆಗಡೆಯವರ ಮರಳು ಚಿತ್ರಗಳು ಜನರನ್ನು ರಂಜಿಸಿದವು.ಇದೇ ಸಂದರ್ಭದಲ್ಲಿ ಶಿವರಾತ್ರಿಯ ನಿಮಿತ್ತ ಪ್ರಕಟಪಡಿಸಿದ “ಉದಯವಾಣಿ”ಯ ವಿಶೇಷಸಂಚಿಕೆಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಕೊನೆಯಲ್ಲಿ ಡಾ.ಜಿ.ಎಲ್.ಹೆಗಡೆ ಯವರ ನಿರ್ದೇಶನದಲ್ಲಿ ಪ್ರಸಿದ್ಧಕಲಾವಿದರಿಂದ  “ಸಭಾಸಂಘರ್ಷ” ಎಂಬ ರೂಪಕವು ಆಯೋಜಿತವಾಗಿತ್ತು.

Facebook Comments Box