ಗೋಕರ್ಣ: ಪರಮಾತ್ಮನ ಅನುಗ್ರಹದಿಂದ ಈ ಲೋಕದಲ್ಲಿ ಜನಿಸಿದ ಜೀವಿ ಕೇವಲ ತನಗಾಗಿ ಬದುಕದೆ ಅನ್ಯರ ನೋವು, ನಲಿವುಗಳಲ್ಲಿಯೂ ಪಾಲ್ಗೊಳ್ಳಬೇಕು. ಸಮಾಜದ ಋಣವನ್ನು ತೀರಿಸಬೇಕು. ಮರಗಿಡಗಳೂ. ನದಿ, ಗೋವುಗಳೂ ಇಂತಹ ಆದರ್ಶಕ್ಕೆ ಮಾದರಿಯಾಗಿವೆ. ಯಾವ ನದಿಯೂ ತನ್ನ ನೀರನ್ನು ತಾನೇ ಕುಡಿಯುವುದಿಲ್ಲ. ಲೋಕದಲ್ಲಿ ಯಾವ ಮರವೂ ತನ್ನ ಹಣ್ಣನ್ನು ತಾನೇ ತಿನ್ನುವುದಿಲ್ಲ.
ಇಂತಹ ಪರೋಪಕಾರಿ ಬದುಕು ನಮ್ಮದಾದರೆ ಜೀವನ ಸಾರ್ಥಕ. ಈ ಮಾತಿಗೆ ಪುಷ್ಟಿ ಸಿಗುವುದು ವೈಶ್ರವಣ ಎಂಬ ಹೆಸರಿನಿಂದಲೂ ಪ್ರಸಿದ್ಧನಾದ ಕುಬೇರನ ಬಾಳಿನಿಂದ. ಬ್ರಹ್ಮ ಅಪೇಕ್ಷಿತ ವರವನ್ನು ಯಾಚಿಸು ಎಂದಾಗ ಕುಬೇರ ಕೇಳಿದ್ದು ಲೋಕಪಾಲತ್ವವನ್ನು. ತಾನು ಪ್ರಕೃತಿಯಿಂದ ಪಡೆದದ್ದನ್ನು ಅಲ್ಲಿಗೇ ಹಿಂದಿರುಗಿಸುವ ವರವನ್ನು ವಿಶ್ವದ ಜನರಿಗೆ ಎಲ್ಲ ರೀತಿಯಲ್ಲಿ ಮಂಗಳವನ್ನು ಉಂಟುಮಾಡುವ ತನ್ಮೂಲಕ ಜನರಿಗೆ ಸಂತೋಷವನ್ನು ನೀಡುವ ಶಕ್ತಿಯನ್ನು ಕೇಳಿದ. ನಿಜವಾಗಿ ಲೋಕಕ್ಕೆ ಹೆಚ್ಚು ಸಂತೋಷವನ್ನು ನೀಡುವವ ಹೆಚ್ಚು ಶ್ರೇಷ್ಠ. ಈ ಹಿನ್ನೆಲೆಯಲ್ಲಿ ಕುಬೇರನ ವ್ಯಕ್ತಿತ್ವ ಅನಿತರಸಾಧಾರಣವಾದದ್ದು ಎಂದು ಪೂಜ್ಯಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ಧಾರೆ. ಅಶೋಕೆಯಲ್ಲಿ ಆಯೋಜಿತವಾಗಿರುವ ರಾಮಕಥಾ ಪ್ರವಚನದಲ್ಲಿ ರಾವಣಾದಿ ಜನ್ಮವೃತ್ತಾಂತವನ್ನು ವಿವರಿಸುತ್ತಿದ್ದ ಪೂಜ್ಯಶ್ರೀಗಳು ಕೇವಲ ವೇದಶ್ರವಣ ಮಾತ್ರದಿಂದಲೇ ಹುಟ್ಟಿದವನು ಕುಬೇರನ ತಂದೆ ವಿಶ್ರವಸ್ಸು. ಪುಲಸ್ತ್ಯ ಋಷಿಯ ಶಾಪವನ್ನು ತಿಳಿಯದೆ ಆಶ್ರಮದ ಪ್ರದೇಶವನ್ನು ಪ್ರವೇಶಿಸಿ ಆಘಾತಕ್ಕೊಳಗಾದ ತೃಣಬಿಂದು ರಾಜಪುತ್ರಿಯನ್ನು ಅವನೇ ವಿವಾಹವಾಗಿ ಅವಳ ಶುಶ್ರೂಷೆಯಿಂದ ಸಂತೃಪ್ತನಾಗಿ ಎಲ್ಲ ರೀತಿಯಲ್ಲಿ ತನ್ನಂತೆಯೇ ನಡೆನುಡಿ ಹೊಂದಿದ ಮಗನನ್ನು ವರದ ರೂಪವಾಗಿ ಆಕೆಗಿತ್ತ. ಕೆಲವೊಮ್ಮೆ ಶಾಪವೂ ವರವಾಗಬಹುದೆಂಬುದಕ್ಕೆ ಕುಬೇರನ ತಂದೆ ವಿಶ್ರವಸ್ಸಿನ ಜನನವೂ ಸಾಕ್ಷಿಯಾಗುತ್ತದೆಂದು ಹೇಳಿದ ಶ್ರೀಗಳು ಉಪನಯನದಿಂದ ಜ್ಞಾನಮಯ ಶರೀರ ದೊರೆಯುತ್ತದೆ. ತಂದೆಯ ಸ್ಥಾನದಲ್ಲಿ ಗುರುವಿದ್ದರೆ ವೇದಮಾತೆಯಾದ ದೇವಿ ಗಾಯತ್ರೀ ತಾಯಿಯಾಗಿ ಕೈಹಿಡಿದು ನಡೆಸುತ್ತಾಳೆ. ಸಾತ್ವಿಕಬದುಕಿನಲ್ಲಿ ಇದೊಂದು ತಿರುವು ಎಂದು ಹೇಳಿ ಸಾಮಾಜಿಕ ಋಣದ ವಿಷಯದಲ್ಲಿ ಕುಬೇರ ನಮಗೆ ಆದರ್ಶವಾಗಬೇಕೆಂದರು.
ಎಂದಿನಂತೆ ಶ್ರೀಪಾದ ಭಟ್ಟ, ಸಂಧ್ಯಾ ಭಟ್ಟ, ವಸುಧಾ ಶರ್ಮಾ, ಪ್ರೊ.ಶಂಭು ಭಟ್ಟ ಇವರ ಗಾಯನ, ಗೋಪಾಲಕೃಷ್ಣ ಹೆಗಡೆಯವರ ತಬಲಾ ಹಾಗೂ ನರಸಿಂಹ ಮೂರ್ತಿಯವರ ಮೃದಂಗ, ಕಲ್ಲರಮನೆ ಪ್ರಕಾಶವರ ವೇಣುವಾದನ ಸಭ್ಯರನ್ನು ರಂಜಿಸಿದವು. ತೀರ ಹೊಸದಾದ ಮರಳುಚಿತ್ರವಂತೂ ಅತ್ಯಾಕರ್ಷಕವಾಗಿತ್ತು. ಜೊತೆಗೆ ಗಣಪತಿ ನೀರ್ನಳ್ಳಿಯವರ ಆಶುಚಿತ್ರ ರಚನೆಯು ತುಂಬಾ ಸೊಗಸಾಗಿ ಮೂಡಿಬಂದಿತು. ಶ್ರೀ ತಿಮ್ಮಪ್ಪ ಗುಡ್ಡೇದಿಂಬ ಇವರ ನೇತೃತ್ವದ ತಂಡದಿಂದ ಸ್ವರ್ಣಲಂಕೆಯ ಪ್ರದರ್ಶನ ಸಂಪನ್ನಗೊಂಡಿತು.
ಇಂದು ಸಿದ್ಧಾಪುರಮಂಡಲದ ಇಟಗಿ, ಸಿದ್ಧಾಪುರ, ದೊಡ್ಮನೆ ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾ ಸೇವೆ ಹಾಗೂ ಹಾಲಕ್ಕಿ ಸಮಾಜದ ಬಂಧುಗಳಿಂದ ಶ್ರೀಗುರುಪಾದುಕಾಪೂಜೆ ಸಮರ್ಪಿತಗೊಂಡವು. ಪೂಜ್ಯಶ್ರೀಗಳು ಸೇವಾಕರ್ತ ಶಿಷ್ಯಸಮುದಾಯಕ್ಕೆ ಆಶೀರ್ವಚನ, ಮಂತ್ರಾಕ್ಷತೆಗಳನ್ನುಅನುಗ್ರಹಿಸಿದರು. ಪ್ರತಿಭಾಪುರಸ್ಕಾರ, ಮೂಲಮಠನಿರ್ಮಾಣ, ಸಾವಿರದೆಡೆ ಅಭಿಯಾನ, ವಿದ್ಯಾಬಂಧು, ಮೊದಲಾದ ಹಲವುಯೋಜನೆಗಳಿಗೆ ಶಿಷ್ಯರು ದೇಣಿಗೆಯನ್ನು ನೀಡಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.
August 4, 2011 at 8:16 AM
ಹರೇ ರಾಮ.
ಖುಶಿಯಾಯಿತು ಓದಿ..
ಕೋರಿಕೆಯನ್ನು ಮನ್ನಿಸಿದ, ಹರೇರಾಮ ತಂಡಕ್ಕೆ ಧನ್ಯವಾದಗಳು:):):)…
August 4, 2011 at 5:20 PM
ಹರೇರಾಮ.