ರಾಮ ಕೊಟ್ಟ ಭವನದೊಳಗೆ ನಾವಿರುವುದು. ಅದೇ ರೀತಿ ನಮ್ಮೊಳಗಿನ ಭವನದೊಳಗೆ ರಾಮನಿರಲಿ. ಶಿಷ್ಯಕೋಟಿಯು ಅತ್ಯಂತ ಪ್ರೀತಿಯಿಂದ ಶ್ರೀಮಠಕ್ಕರ್ಪಿಸಿದ ಸಭಾಭವನಕ್ಕೆ “ಜನಭವನ”ವೆಂದೇ ನಾಮಕರಣ ಮಾಡುತ್ತಿದ್ದು ಇದು ಸಾವಿರಾರು ಜನರ ಭಾವನೆಯ ಕೇಂದ್ರವಾಗಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವ್ಯಾಖ್ಯಾನಿಸಿದರು.

ಅವರು ಮಂಗಳವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ವಠಾರದಲ್ಲಿ 3.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಸಭಾಭವನ ಜನಭವನವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ಮಂಗಳೂರು ಹೋಬಳಿಯ ಸಕಲ ಶಿಷ್ಯರ ಹೃದಯ, ಸಮಯ, ಮನಸ್ಸು, ಹಣ ಎಲ್ಲವೂ ಸಮರ್ಪಣೆಗೊಂಡಿದೆ. ಆದುದರಿಂದ ಈ ಕಟ್ಟಡ ಜಡವಲ್ಲ, ಜೀವಂತ. ಇದರ ಮೂಲದ್ರವ್ಯ ರಾಮಚೈತನ್ಯ. ಈ ಜನಭವನದ ನೆಪದಲ್ಲಿ ಸಮಾಜದ ಸಂಘಟನೆಯಾಗಿದೆ. ಅನೇಕರಿಗೆ ಏಕಮನಸ್ಸಿನ ವಿಶ್ವಾಸ ಹೆಚ್ಚಾಗಿದೆ ಎಂದು ಉಲ್ಲೇಖೀಸಿದರು.
mani 1
ಅರಣ್ಯ, ಪರಿಸರ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ಸಚಿವನಾದ ಬಳಿಕ ಪ್ರಥಮ ಸಾರ್ವಜನಿಕ ಸಮಾರಂಭವಿದು. ಶ್ರೀಗಳ ಯೋಜನೆಗಳು ವ್ಯಾಪಕವಾದ ಸಮಾಜೋದ್ಧಾರಕ್ಕೆ ಎಂಬ ವಿಚಾರ ಸಂತಸ ತಂದಿದೆ. ಮಂಗಳೂರು – ಪುತ್ತೂರು ಮುಖ್ಯ ರಸ್ತೆಯಿಂದ ಮಾಣಿ ಮಠಕ್ಕೆ ಸಾಗುವ ರಸ್ತೆ ಅಭಿವೃದ್ಧಿ ಮಾಡಿಸುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಹೊರನಾಡು ಶ್ರೀ ಆದಿಶಕಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಷಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಶ್ರೀ ರಾಮಚಂದ್ರಾಪುರ ಮಠದ ಕೇಂದ್ರೀಯ ಆಡಳಿತ ಸಮಿತಿ ಅಧ್ಯಕ್ಷ ಎಂ.ಎನ್‌. ಭಟ್‌ ಮದ್ಗುಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಭಟ್‌, ಭಾರತ ಸರಕಾರ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ, ಪರಮಾಣು ಶಕ್ತಿ ಮತ್ತು ಭೂಮಿ ವಿಜ್ಞಾನ ಆಯೋಗಗಳ ಸದಸ್ಯ (ಹಣಕಾಸು) ವಿ.ವಿ. ಭಟ್‌, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್‌.ಎಸ್‌. ಹೆಗಡೆ, ಬೆಂಗಳೂರು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಎಸ್‌.ಜಿ. ಹೆಗಡೆ, ಶ್ರೀ ರಾಮಚಂದ್ರಾಪುರಮಠ ದಿಗ್ದರ್ಶಕ ಮಂಡಳಿ ಸದಸ್ಯ ಕೆ. ರಾಮ ಭಟ್‌ ಉರಿಮಜಲು, ಮುಂಬಯಿ ಉದ್ಯಮಿ ಎಂ.ಕೆ. ಜನಾರ್ದನ, ಹವ್ಯಕ ಮಹಾಮಂಡಲ ಮಾತೃ ವಿಭಾಗ ಪ್ರಧಾನರಾದ ಯಮುನಾ ಭಾಗ್ವತ್‌, ಕುಮಟಾ ಭಾಗವಹಿಸಿದ್ದರು.
mani 2
ಸಭಾಭವನ ನಿರ್ಮಾಣ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್‌ ಪೆರಿಯಾಪ್ಪು, ಕೋಶಾಧ್ಯಕ್ಷ ಬಂಗಾರಡ್ಕ ಜನಾರ್ದನ ಭಟ್‌, ಆಡಳಿತ ಸಮಿತಿ ಕೋಶಾಧಿಕಾರಿ ಮೈಕೆ ಗಣೇಶ್‌ ಭಟ್‌, ಮಾಸ್ಟರ್‌ ಪ್ಲಾನರಿಯ ಎಸ್‌.ಕೆ. ಆನಂದ್‌ ಮೊದಲಾದವರು ಉಪಸ್ಥಿತರಿದ್ದರು. ಜನಭವನ ನಿರ್ಮಾಣ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್‌ ಪ್ರಸ್ತಾವನೆಗೈದರು. ಉಪ್ಪಿನಂಗಡಿ ಹವ್ಯಕ ವಲಯಾಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ ಕಾರ್ಯಕ್ರಮ ನಿರ್ವಹಿಸಿದರು. ಹೊಸನಗರ ಮೇಳದ ವ್ಯವಸ್ಥಾಪಕ ಉಜಿರೆ ಅಶೋಕ ಭಟ್‌ 7ನೇ ವರ್ಷದ ತಿರುಗಾಟ ಕೊನೆಯ ಪ್ರದರ್ಶನದ ಬಗ್ಗೆ ವಿವರ ನೀಡಿದರು.

ವಿಶೇಷತೆಗಳು
ಶ್ರೀಗಳು ಎಲ್‌ಇಡಿ ಪರದೆಯಲ್ಲಿ ಜನಭವನದ ನಾಮಕರಣವನ್ನು ಪ್ರಕಟಿಸಿದರು.
ವಿಜಯ ನಾಮ ಸಂವತ್ಸರದ ಚಾತುರ್ಮಾಸ್ಯವನ್ನು ಮಾಣಿ ಮಠದಲ್ಲಿ ನಡೆಸಲಾಗುವುದು ಎಂದು ಶ್ರೀಗಳು ಆದೇಶಿಸಿದರು.
ಜನಭವನವನ್ನು ನಿರ್ಮಿಸಿದ ಮಾಸ್ಟರ್‌ ಪ್ಲಾನರಿಯ ಎಸ್‌.ಕೆ. ಆನಂದ್‌, ಎಂಜಿನಿಯರ್‌ ಪ್ರಭಾಕರ್‌, ಸೈಟ್‌ ಎಂಜಿನಿಯರ್‌ ರವಿಕುಮಾರ್‌ ಅವರನ್ನು ಶ್ರೀಗಳು ಶಾಲು ಹೊದೆಸಿ, ಉಂಗುರ ತೊಡಿಸಿ, ಸಮ್ಮಾನಿಸಿದರು.
ಇದೇ ವೇಳೆ ಜನಭವನದ ಮೇಲೆ ಸ್ಥಾಪಿಸಿದ ಬಿಎಸ್‌ಎನ್‌ಎಲ್‌ ಮೊಬೈಲ್‌ ಗೋಪುರವು ಚಾಲನೆಗೊಂಡಿತು. ಸಂಸ್ಥೆಯ ಜಿಎಂ ಎಸ್‌.ಎಂ. ಹೆಗಡೆ ಅವರನ್ನು ಶ್ರೀಗಳು ಗೌರವಿಸಿದರು. ಎಸ್‌.ಬಿ. ಹೇಟ್‌ ಅವರು ಜನಭವನದ ಬಗ್ಗೆ ಸ್ವರಚಿತ ಚುಟುಕಗಳನ್ನು ಹೇಳಿದರು.
ಮಂಗಳೂರು ಹೋಬಳಿ – ಶ್ರೀ ರಾಮಚಂದ್ರಾಪುರ ಮಠ, ಪೆರಾಜೆ, ಮಾಣಿ – ಶ್ರೀರಾಮ ಸಂಸ್ಕೃತ ವೇದಪಾಠ ಶಾಲೆಯ ವಾರ್ಷಿಕೋತ್ಸವ, ಬೆಳಗ್ಗೆ ಗಂಟೆ 8.51ರ ಮಿಥುನ ಲಗ್ನದಲ್ಲಿ ಸಾಮೂಹಿಕ ಉಪನಯನ, ಹೊಸನಗರ ಶ್ರೀ ರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿಯ 7ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ, ದೇವತಾ ಪೂಜೆ ಜರಗಿತು.

ವರದಿ ಕೃಪೆ: ಉದಯವಾಣಿ
ಚಿತ್ರಗಳು: ವೇಣು ಕೋನಡ್ಕ

Facebook Comments Box