ಗೋಕರ್ಣ. ಅಶೋಕೆಯಲ್ಲಿ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ತ್ರಯೋದಶಿಯ ಪ್ರದೋಷಪೂಜಾ ನಿಮಿತ್ತವಾಗಿ ಇಂದು ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸಂದರ್ಶಿಸಿ ಸಾರ್ವಭೌಮನನ್ನು ವಿಶೇಷಪೂಜೆಯನ್ನು ಸಲ್ಲಿಸಿದರು. ಲಭ್ಯವಿರುವ ಮಾಹಿತಿಯಂತೆ ಇತ್ತೀಚಿನ ಶತಮಾನಗಳಲ್ಲಿ ಇದೇ ಮೊದಲಬಾರಿಗೆ ಪೂಜ್ಯಶ್ರೀಗಳು ಕ್ಷೇತ್ರಾಧೀಶ ಮಹಾಬಲೇಶ್ವರನಿಗೆ ಅಷ್ಟೋತ್ತರಶತ ಸುವರ್ಣ ನಾಣ್ಯಗಳು ಹಾಗೂ ರಜತ ನಾಣ್ಯಗಳಿಂದ ಕನಕಾಭಿಷೇಕ ಮತ್ತು ರಜತಾಭಿಷೇಕ ಸೇವೆಗಳನ್ನು ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳು ಶ್ರೀ ಮಹಾಗಣಪತಿ ದೇವಾಲಯ ಹಾಗೂ ಶ್ರೀ ತಾಮ್ರಗೌರಿ ದೇವಸ್ಥಾನಗಳನ್ನೂ ಸಂದರ್ಶಿಸಿ ವಿಶೇಷವಾದ ಅರ್ಚನೆಯನ್ನು ಸಲ್ಲಿಸಿದರು. ಸಂಧ್ಯಾಕಾಲದಲ್ಲಿ ಸಮಾಗಮಿಸಿದ ಪೂಜ್ಯಶ್ರೀಗಳನ್ನು ದೇವಾಲಯದ ಪರವಾಗಿ ಶ್ರೀ ಜಿ.ಕೆ.ಹೆಗಡೆ ಗೋಳಗೋಡು ವೇ. ಶಿತಿಕಂಠ ಭಟ್ಟ ಹಿರೇ ಮೊದಲಾದ ಗಣ್ಯರು ಸ್ವಾಗತಿಸಿದರು. ಉಪಾಧಿವಂತಮಂಡಲದ ಪದಾಧಿಕಾರಿಗಳು ಸದಸ್ಯರು ಶ್ರೀಗಳ ಪೂಜಾಕೈಂಕರ್ಯದಲ್ಲಿ ಸಹಕರಿಸಿದರು. ಇಂದೇ ಪ್ರಾರಂಭಗೊಂಡ ಈ ಕನಕಾಭಿಷೇಕ ಹಾಗೂ ರಜತಾಭಿಷೇಕ ವಿಶೇಷಸೇವೆಗಳು ಇನ್ನು ಮುಂದೆ ಎಲ್ಲ ಆಸಕ್ತ ಆಸ್ತಿಕಭಕ್ತರಿಗೆ ಲಭ್ಯವಿರುತ್ತದೆಯೆಂದು ಶ್ರೀ ದೇವಾಲಯದ ಪ್ರಕಟಣೆಯು ತಿಳಿಸಿದೆ

Facebook Comments Box