ಗೋಕರ್ಣ : ಗೋಕರ್ಣದ ಸಮೀಪದ ಅಶೋಕೆಯಲ್ಲಿ ಶ್ರೀಮದಾಚಾರ್ಯ ಶಂಕರ ಭಗವತ್ಪಾದರಿಂದ ಸಂಸ್ಥಾಪಿತವಾಗಿ ಶ್ರೀ ವಿದ್ಯಾನಂದಾಚಾರ್ಯರಿಂದ ಪ್ರವರ್ತಿತವಾದ ನಮ್ಮ ಈ ಅವಿಚ್ಛಿನ್ನ ರಾಜಗುರುಪರಂಪರೆಯ ಶ್ರೀಮಠದ ಆರಾಧ್ಯದೈವನಾದ ಪ್ರಭು ಶ್ರೀರಾಮಚಂದ್ರ ಈ ಪೀಠದ ಹನ್ನೆರಡನೆಯ ಧರ್ಮಾಚಾರ್ಯರಾದ ಶ್ರೀರಾಮಚಂದ್ರ ಭಾರತೀ ಶ್ರೀಗಳವರ ಕಾಲದಲ್ಲಿ ಇಲ್ಲಿಂದ ಹೊಸನಗರದ ಅಗಸ್ತ್ಯಾಶ್ರಮ ಪರಿಸರಕ್ಕೆ ಹೋಗಿ ಅಲ್ಲಿ ನೆಲೆನಿಂತ. ಅದೂ ಶ್ರೀರಾಮನ ಶರದಿಂದಲೇ ಜನ್ಮ ತಳೆದು ಶರಾವತೀ ಎಂಬ ಪಾವನ ಹೆಸರನ್ನು ಹೊತ್ತು ಹರಿಯುತ್ತಿರುವ ಶರಾವತೀ ತೀರದಲ್ಲಿಯೇ. ಪರಶಿವನ ಆತ್ಮಲಿಂಗವಿರುವ ಭೂಕೈಲಾಸವೆನಿಸಿದ ಈ ಗೋಕರ್ಣವನ್ನು ಕೆಲ ಸಮಯಕ್ಕಾದರೂ ಬಿಟ್ಟು ಹೊಸನಗರದ ಪ್ರದೇಶಕ್ಕೆ ಶ್ರೀರಾಮನು ಹೋದನೆಂದರೆ ಅದು ಅತ್ಯಂತ ಪುಣ್ಯಶಾಲಿ, ಪವಿತ್ರಪ್ರದೇಶವೆಂದೇ. ಈ ಅಶೋಕೆಯ ಮೂಲಸ್ಥಾನದಲ್ಲಿ ನೂತನಮಠವು ತಲೆಯೆತ್ತಿದರೂ ಹೊಸನಗರದ ಶ್ರೀಮಠವು ಮೊದಲಿನಂತೆಯೇ ತನ್ನ ಎಲ್ಲ ವೈಭವಗಳೊಂದಿಗೆ ಮುಂದುವರೆಯುತ್ತದೆ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.
ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಹೊಸನಗರ ಮಂಡಲದ ತೀರ್ಥರಾಜಪುರ, ಶಿವಮೊಗ್ಗ, ಹೊಸನಗರ ವಲಯಗಳ ಶಿಷ್ಯಸಮುದಾಯದ ಶ್ರೀಗುರುದೇವತಾ ಸೇವೆ ಮತ್ತು ಅಂಬಿಗ ಸಮಾಜದ ಶಿಷ್ಯರ ಶ್ರೀಗುರುಪಾದುಕಾಪೂಜೆಗಳು ಸಮರ್ಪಿತವಾದ ಸಂದರ್ಭದಲ್ಲಿ ನಡೆದ ಧರ್ಮಸಭೆಯಲ್ಲಿ ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು, ಸೂರ್ಯನು ಪ್ರತಿದಿನವೂ ಮೂಡುತ್ತಾನೆ. ಅದು ವಿಶೇಷವಲ್ಲ. ಆದರೆ ಮೂಡುವ ರವಿಯನ್ನು ನಾವು ಎಷ್ಟರ ಮಟ್ಟಿಗೆ ಕಂಡು ಅವನ ಪ್ರಕಾಶವನ್ನು ನಮ್ಮ ಬದುಕಿಗೆ ಸ್ವೀಕರಿಸಿದ್ದೇವೆ ಎಂಬುದು ಮುಖ್ಯ. ಹಾಗೆಯೇ ಚಾತುರ್ಮಾಸ್ಯವು ಪ್ರತಿವರ್ಷವೂ ಸಂಭವಿಸುವ ಕಾಲ. ಈ ಕಾಲದಲ್ಲಿಯಾದರೂ ಒಮ್ಮೆ ಶ್ರೀಗುರುದೇವತಾಸಾನ್ನಿಧ್ಯಕ್ಕೆ ಬಂದು ಆಶೀರ್ವಾದವನ್ನು ಅನುಗ್ರಹವನ್ನು ಪಡೆಯಬೇಕಾದದ್ದು ಶಿಷ್ಯರ ಕರ್ತವ್ಯ ಎಂದು ಹೇಳಿ, ಅಂಬಿಗ ಸಮಾಜದವರೂ ಸಹ ಇಂದು ತಮ್ಮ ಶ್ರದ್ಧಾಪೂರ್ವಕವಾದ ಸೇವೆಯನ್ನು ಸಲ್ಲಿಸಿದ್ದಾರೆ. ಸಂಸಾರಸಾಗರವನ್ನು ದಾಟಿಸುವ ಅಂಬಿಗ ಶ್ರೀರಾಮಚಂದ್ರನನ್ನು ನಂಬಿ ಬಂದ ಭಕ್ತರಿವರು. ಅಶೋಕೆ ಶ್ರೀ ರಾಮಚಂದ್ರನ ಪೂಜಾಸ್ಥಾನ. ಮಹರ್ಷಿ ದೈವರಾತರ ತಪೋಭೂಮಿ. ಶೋಕವೇ ಇಲ್ಲದ ಸ್ಥಿತಿಗೆ ಅಶೋಕವೆಂದು ಹೆಸರು. ಇಲ್ಲಿಗೆ ಬರುವಾಗ ಶಿಷ್ಯರಿಗಿದ್ದ ಶೋಕವೆಲ್ಲ ದೂರವಾಗಿ ಅಶೋಕರಾಗಿ ಮರಳುವಂತಾಗಲಿ ಎಂದೂ ಆಶಿಸಿದರು.
ಶ್ರೀಮಠದ ವಿವಿಧ ಯೋಜನೆಗಳಿಗೆ ದೇಣಿಗೆಯ ಸಮರ್ಪಣೆ, ಪ್ರತಿಭಾಪುರಸ್ಕಾರ ಮೊದಲಾದ ಕಾರ್ಯಕ್ರಮಗಳು ಎಂದಿನಂತೆ ಸಂಪನ್ನವಾದವು. ಮಾಜಿ ಶಾಸಕ ಪುತ್ತೂರಿನ ಶ್ರೀ ಉರಿಮಜಲು ರಾಮ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಗರಾಜ ಶೆಟ್ಟರ ಕಾರ್ಯದರ್ಶಿ ಶ್ರೀ ಪ್ರಭಾಕರ ಮೊದಲಾದ ಗಣ್ಯರು ಶ್ರೀಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆದರು. ಶಿಷ್ಯರ ಪರವಾಗಿ ಹೊಸನಗರ ಮಂಡಲದ ಶ್ರೀ ಜಟ್ಟಿಮನೆ ಗಣಪತಿಯವರು ನಿವೇದನೆಯನ್ನು ಸಲ್ಲಿಸಿದರು. ಶ್ರೀ ಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.
August 12, 2011 at 12:57 PM
ಹರೇ ರಾಮ…
August 28, 2011 at 11:00 PM
ಹರೇ ರಾಮ।
ಅಗಸ್ತ್ಯರು ಆರಾದಿಸುತ್ತಿದ್ದ ಶ್ರೀ ರಾಮ ಅಗಸ್ತ್ಯ ಶಿಷ್ಯ ಪರಂಪರೆಯ ವರದ ಮುನಿಗಳ ಮೂಲಕ ಶ್ರೀ ಶಂಕರಾಚಾರ್ಯ ರಿಗೆ ಹಸ್ತಾಂತರ ವಾಗಿ ಹನ್ನೆರಡು ಯತಿ ಶ್ರೇಷ್ಥರ ಪೂಜೆ, ಸೇವೆ ಸ್ವೀಕರಿಸಿ, ತನ್ನ ಶರಾಗಾತಕ್ಕೆ ಮಣಿದು ಪುಣ್ಯ ತೀರ್ಥ ಹರಿಸುತ್ತಿರುವ ಶರಾವತಿ ಉಗಮ ತೀರ, ಅಗಸ್ತ್ಯಾಶ್ರಮ ವಿದ್ದ ಪುಣ್ಯ ಭೂಮಿ ಅಗಸ್ತ್ಯ ತೀರ್ಥದ ಬಳಿ ಮತ್ತೆ ಇಪ್ಪತ್ತ ನಾಲ್ಕು ಯತಿ ಶ್ರೇಷ್ಥರ ಪೂಜೆ,ಸೇವೆ ಗಳನ್ನು ಸ್ವೀಕರಿಸಿ, ಈಗ ಪುನಃ ಮೂಲ ಕ್ಷೇತ್ರದ ಕಡೆ ನೆಡೆಯುವದನ್ನು ನೋಡುವ ಸೌಭಾಗ್ಯ ನಮ್ಮಲ್ಲೆರದು…
ಹರೇ ರಾಮ ।
September 3, 2011 at 6:32 PM
Hare raama,
November 6, 2011 at 12:23 PM
Jai sree ram ji ki jai……