ಧಾರವಾಡ, ಅಕ್ಟೋಬರ್ ೨೫:

ನೀವು ಅಸಹಾಯಕರಲ್ಲ, ಅನಾಥರಲ್ಲ, ಈ ಸಂಕಟದ ಸಮಯದಲ್ಲಿ ನಾಡು ನಿಮ್ಮೊಂದಿಗಿದೆ, ನಾವು ನಿಮ್ಮೊಂದಿಗಿದ್ಡೇವೆ ” ಇದು ನೆರೆಪೀಡಿತರನ್ನು ಕಂಡಾಗ ಶ್ರೀಗಳವರ ಮುಖದಿಂದ ಹೊರಹೊಮ್ಮಿದ ಉದ್ಗಾರ!
ಧಾರವಾಡದ ಸಮೀಪದ ನೆರೆಪೀಡಿತ ಕಬ್ಬಾನೂರಿಗೆ ಭೇಟಿಯಿತ್ತಿದ್ದ ಅವರು ಸಂತ್ರಸ್ತರನ್ನುದ್ಡೇಶಿಸಿ ಮಾತನಾಡುತ್ತಿದ್ದರು. ಜಿಲ್ಲೆಯೊಂದನ್ನು ದತ್ತು ತೆಗೆದುಕೊಳ್ಳುವ ಮತ್ತು ಸಂತ್ರಸ್ತರಿಗಾಗಿ ೫೦೦೦ ಮನೆಗಳನ್ನು ದಾನಿಗಳ ಮೂಲಕ ನಿರ್ಮಿಸಿಕೊಡುವ ಅಭಿಪ್ರಾಯವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತ ಪಡಿಸಿದರು.  ಪ್ರವಾಹ ಪೀಡಿತ ಪ್ರದೇಶವಾದ ಧಾರವಾಡದ ಕುಂಬರಹತ್ತಿಗೆ ಪೂಜ್ಯ ಶ್ರೀ ಸ್ವಾಮಿಗಳವರು ಭೇಟಿನೀಡಿ ಸಂತ್ರಸ್ತರಿಗೆ ಕಂಬಳಿ ವಿತರಿಸಿದರು.

ಅಭಯವಾಣಿ:
ನಮ್ಮ ಜೀವನಕ್ಕೆ ಸದಾ ನೆರವಾಗುವ ರೈತರು ಹಾಗು ಜಾನುವಾರುಗಳ ಸಂಕಟ ನಮ್ಮ ಸಂಕಟ ಎಂದು ತಾವು ಭಾವಿಸಿದ್ದೇವೆ, ಪ್ರಕೃತಿ ಮುನಿದಾಗ ಧೃತಿಗೆಡದೆ ತಲೆಬಾಗಿ ಧೈರ್ಯದಿಂದ ಎದುರಿಸೋಣ, ತಾಯಿ ಇಂದು ಕಸಿದರೆ ನಾಳೆ ಕೊಟ್ಟೇ ಕೊಡುತ್ತಾಳೆ ಎಂತು ಸಾಂತ್ವನ ಹೇಳಿದರು.
೫೦೦೦ ಮನೆಗಳ ನಿರ್ಮಾಣದ ಗುರಿ:
“ನಾವು ಗೋವು ಮತ್ತು ರೈತರನ್ನು ಒಂದೇ ಭಾವದಿಂದ ಕಾಣುತ್ತೇವೆ. ಹಾಗಾಗಿ ರೈತರಿಗಾಗಿ ೫೦೦೦ ಮನೆಗಳನ್ನು ಉದಾರ ಹೃದಯಿ ದಾನಿಗಳ ಮೂಲಕ ಕಟ್ಟಿಸಿ ಕೊಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. ಸೂಕ್ತ ಯೋಜನೆ ತಯಾರಿಸಲು ತಜ್ಞರಿಗೆ ಸೂಚಿಸಿದ್ದು ಸಂಪನ್ಮೂಲ ಕ್ರೋಡೀಕರಿಸಲು ಮಠದ ಸಂಪರ್ಕದಲ್ಲಿರುವ ಭಕ್ತರಿಗೆ ಕರೆ ನೀಡಿದ್ದೀವೆ’ಎಂದು ಶ್ರೀಗಳವರು ತಿಳಿಸಿದ್ದಾರೆ.

ಗೋವು- ಮೇವುಗಳ ಪೂರೈಕೆ:
ಎಂದೂ ತನ್ನ ಸಂಕಟ ಹೇಳಿಕೊಳ್ಳಲಾರದ ಗೋವಿಗೆ ಮೇವು ಪೂರೈಸುವುದು ಹಾಗೂ ರೈತರು ಬಯಸಿದರೆ ಗೋವುಗಳನ್ನು ನೀಡುವದು ನಮ್ಮ ಪ್ರಥಮ ಆದ್ಯತೆ. ಯಾವ ಸಂಕಟಕ್ಕೂ ಗೋವುಗಳನ್ನು ಕಸಾಯಿಖಾನೆಗೆ ಮಾರಬೇಡಿ, ಶ್ರೀಮಠದ ಗೋಶಾಲೆಯ ಇಂಥ ಗೋವುಗಳಿಗೆ ಸದಾ ತೆರೆದಿದೆ’ ಎಂದು ಶ್ರೀಶ್ರೀ ಸ್ವಾಮಿಗಳವರು ಕರೆ ನೀಡಿದರು.

Facebook Comments Box