ಗೋಕರ್ಣ. ಜು. ೧೮: ವೈಕುಂಠ ವೆಂದರೆ ಗಮನದ ಕೊನೆ. ಅದನ್ನು ಸೇರಿದ  ಮೇಲೆ ಮುಂದೆ ಗತಿಯಿಲ್ಲ. ಸರ್ವಜೀವಿಗಳ ಶಾಶ್ವತಾನಂದದ ಚರಮಲಕ್ಷ್ಯವದು. ಜೀವರು ಸತತಸಾಧನೆಯ ಬಲದಿಂದ ತದೇಕಪ್ರವಣತೆಯಿಂದ ಪಡೆಯಬಹುದಾದ ಪರಮಪದ. ಸುಖದ ಪರ್ಯಾಯವಾದ ಆನಂದದ ಅನ್ವೇಷಣೆಯೇ ನಮ್ಮ ಬದುಕು. ನಮ್ಮ ಮೂಲನೆಲೆಯಾದ ಅದನ್ನು ಪಡೆಯುವವರೆಗೂ ನಮ್ಮ ಹುಡುಕಾಟ, ಚಡಪಡಿಕೆ ತಪ್ಪುವುದಿಲ್ಲ. ಯಾವಾಗ ಬಿಂದುರೂಪರಾದ ನಾವು ಮಹಾಸಿಂಧುಸದೃಶವಾದ ಆ ಭಗವಂತನ ಸಾನ್ನಿಧ್ಯವನ್ನು ಸೇರುತ್ತೇವೋ ಅದೇ ವೈಕುಂಠ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟರು. ಇಂದು ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿರುವ ಶ್ರೀರಾಮಕಥೆಯಲ್ಲಿ ಪ್ರವಚನ ನೀಡುತ್ತಿದ್ದ ಪೂಜ್ಯಶ್ರೀಗಳು ಅಲ್ಲಿ ಕ್ಷೀರಸಮುದ್ರವಿದೆ.  ಎಂದೂ ಹಾಳಾಗದ ಹುಳಿಯಾಗದ ಮಾತೃವಾತ್ಸಲ್ಯದ ಹಾಲಿನಂತಿರುವ ಪರಮಾತ್ಮನ ಪ್ರೇಮರೂಪವದು.ಆದಿಶೇಷನನ್ನೇ ಹಾಸಿಗೆಯಾಗಿಸಿ ಲೋಕನಿಯಾಮಕ ಪವಡಿಸಿದ್ದಾನೆ ಎನ್ನುತ್ತವೆ ಪುರಾಣಗಳು. ಹೆಡೆಯೆತ್ತಿದ ಆದಿಶೇಷ ಜಾಗೃತಮನಸ್ಸಿನ ಪ್ರತೀಕ. ಅಲ್ಲಿ ಹಾವಿನ ವಿಷದ ಬದಲಾಗಿ ಅಮೃತವಿದೆ. ಹಾವಿನ ಪರಮವೈರಿಯಾದ ಗರುಡನಿದ್ದರೂ ಅವರಲ್ಲಿ ವೈಮನಸ್ಯವೆಂಬುದಿಲ್ಲ.

ಏಕೆಂದರೆ ಅವರ ದೃಷ್ಟಿಯಿರುವುದು ಪರಮಾತ್ಮನ ಮೇಲೆ. ಭಗವತ್ಸಾನ್ನಿಧ್ಯದಲ್ಲಿ ವೈರಕ್ಕೆಡೆಯೇ ಇಲ್ಲ. ನಾವು ಸದಾ ಅರಸುವ ಸಂಪತ್ತಿ ಅಧಿದೇವತೆ ಲಕ್ಷ್ಮಿ ಆ ದೇವನ ರಾಣಿಯಾಗಿ ಸೇವೆಗೆ ಸಮರ್ಪಿಸಿಕೊಂಡಿದ್ದಾಳೆ. ನಾರಾಯಣನಿದ್ದಲ್ಲಿ ಮಾತ್ರ ಅವಳ ನಿತ್ಯವಾಸ. ಅವಳನ್ನು ಬೆನ್ನು ಹತ್ತಿದವರಿಗೆ ಅವಳು ಎಂದೂ ಸಿಗಲಾರಳು. ಆದರೆ ಪರಮಾತ್ಮನನ್ನು ನಮ್ಮೊಳಗೆ ಇಟ್ಟುಕೊಂಡಾಗ ಮಾತ್ರ ಆಕೆಯನ್ನು ಪಡೆಯಬಹುದು. ಇವೆಲ್ಲವೂ ವೈಕುಂಠವೆಂಬ ಲೋಕಕ್ಕೆ ಪ್ರತೀಕಗಳಾಗಿದ್ದರೂ ನಮ್ಮ ಜೀವನದಲ್ಲಿಯೂ ತಾತ್ವಿಕವಾಗಿ ಸಂಗಮಿಸುತ್ತವೆ. ಸತತಸಾಧನೆಯ ಪರಿಪಾಕದಿಂದ ಜಯವಿಜಯರು ವೈಕುಂಠವನ್ನು ಸೇರಿದರೂ ತಮ್ಮ ಪದವಿಯ ಅಹಂಕಾರದಿಂದಾಗಿ ಶಾಪಗ್ರಸ್ತರಾಗಿ ಭೂಮಿಗೆ ಬಂದರು. ಇದು ಅವರ ಜೀವಶುದ್ಧಿಗಾಗಿ ದೋಷಾಪನಯನಕ್ಕಾಗಿ ಮಾತ್ರವಲ್ಲ,ಅವತಾರದ ಮೂಲಕ  ಲೋಕೋದ್ಧಾರದ  ಸಂಕಲ್ಪವೂ ಹೌದು. ಪರಿಶ್ರಮದಿಂದ ಪಡೆದ ಸ್ಥಾನವನ್ನು ಉಳಿಸಿಕೊಳ್ಳಲೂ ಅರ್ಹತೆ, ಯೋಗ್ಯತೆ ಬೇಕು. ಬದುಕಿನಲ್ಲಿ ಅಹಂಕಾರಕ್ಕೆ ಮದಕ್ಕೆ ಅವಕಾಶ ಕೊಡಬಾರದೆಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದೂ ಶ್ರೀಗಳು ತಿಳಿಸಿದರು. ಡಾ.ಗಜಾನನ ಶರ್ಮಾ ಹಾಗೂ ವಿದ್ವಾನ್ ಜಗದೀಶ ಶರ್ಮಾ ಬಳಗದ ವೈಕುಂಠರೂಪಕ ಶ್ರೀಪಾದ ಭಟ್ಟ, ಶ್ರೀಮತಿ ಪ್ರೇಮಲತಾ ದಿವಾಕರ್, ಸಂಧ್ಯಾ ಭಟ್, ವಿಶ್ವೇಶ್ವರ ಭಟ್, ಇವರ ಗಾಯನದೊಂದಿಗೆ ಗೋಪಾಲಕೃಷ್ಣ ಹೆಗಡೆ, ಜಿ.ಕೆ.ಹೆಗಡೆ, ಶ್ರೀ ಪ್ರಕಾಶ ಇವರ ವಾದ್ಯವಾದನ ಸಂಯೋಜನೆ ಸಭ್ಯರನ್ನು ಮುದಗೊಳಿಸಿತು.

ಇಂದು ಹೊರನಾಡುಕ್ಷೇತ್ರದ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ದೇವಾಲಯದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿ ಕುಟುಂಬದಿಂದ ಶ್ರೀಗುರುದೇವತಾಸೇವೆಯು ಸಂಪನ್ನವಾಯಿತು. ಶ್ರೀಮಠದ ಗುರುಕುಲಕ್ಕೆ ಅನ್ನದಾನಕ್ಕಾಗಿ ವಿಶೇಷನಿಧಿಯನ್ನು ನೀಡಿದ ಶ್ರೀ ಭೀಮೇಶ್ವರ ಜೋಶಿಯವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಬೆಂಗಳೂರು ವಲಯಗಳಿಂದ ಇಂದಿನ ರಾಮಕಥಾ ಆಯೋಜಿತವಾಗಿತ್ತು.

Facebook Comments Box