ಗೋಕರ್ಣ: ಅಮಾವಾಸ್ಯೆಯಂದು ಸೂರ್ಯಚಂದ್ರರ ಸಂಗಮವಾಗುತ್ತದೆ. ಅಂದು ಚಂದ್ರನು ಸೂರ್ಯನಿಂದ ತಾನು ಬೆಳಗಲು ಅಗತ್ಯವಾದ ಪ್ರಕಾಶವನ್ನು ಪಡೆಯುತ್ತಾನೆ. ಇಲ್ಲಿ ಸೂರ್ಯ ಪರಮಾತ್ಮನ ಸಂಕೇತವಾದರೆ ಚಂದ್ರ ಜೀವರ ಪ್ರತೀಕ. ಚಂದ್ರನನ್ನು ನಮ್ಮ ಪ್ರಾಚೀನರು ಮನಃಕಾರಕ ಎಂದೇ ಗುರುತಿಸಿದ್ದಾರೆ. ಸೂರ್ಯನೆಂದರೆ ಪೂರ್ಣಪ್ರಭೆ. ಲೋಕಕ್ಕೆ ಅಗತ್ಯವಾದ ಬಲವನ್ನು ನೀಡುವ ಶಕ್ತಿಕೇಂದ್ರ. ಜೀವ ಪರಮಾತ್ಮನ ಬಳಿ ಹೋಗಿ ಶರಣಾಗಿ ಅಲ್ಲಿಂದ ಬದುಕಿನ ಸಾಮರ್ಥ್ಯವನ್ನು ಸಾರ್ಥಕತೆಯನ್ನು ಗಳಿಸುವುದಕ್ಕೆ ಮಾರ್ಗದರ್ಶನವನ್ನು ಪಡೆಯುವುದಕ್ಕೆ ಅಮಾವಾಸ್ಯೆಯು ಸಂಕೇತವಾಗುತ್ತದೆ. ಅದರಂತೆಯೇ ಈ ಚಾತುರ್ಮಾಸ್ಯವೂ ಸಹ. ಸದಾ ಸಂಚಾರದಲ್ಲಿದ್ದು ಸಮಾಜಕ್ಕೆ ಧರ್ಮಮಾರ್ಗದ ಅರಿವನ್ನು ಬೋಧಿಸುತ್ತ ಲೋಕವನ್ನು ಸುತ್ತುವ ಪರಮಹಂಸರಾದ ಯತಿಗಳು ಮಳೆಗಾಲದ ಈ ದಿನಗಳಲ್ಲಿ ಒಂದೆಡೆ ನಿಂತು ಆತ್ಮೋನ್ನತಿಯನ್ನು, ಅಂತರ್ಮುಖಿಗಳಾಗಿ ಪರಮಾತ್ಮಾನುಸಂಧಾನವನ್ನು ಸಾಧಿಸುವ ಸಮಯ. ಉಳಿದ ಸಮಯದಲ್ಲಿ ಗುರುವನ್ನು ನೋಡಲಾಗದಿದ್ದರೂ ಚಾತುರ್ಮಾಸ್ಯಕಾಲದಲ್ಲಿಯಾದರೂ ಒಮ್ಮೆ ದರ್ಶನಮಾಡಿ ಅವರಿಂದ ಆಶೀರ್ಮಂತ್ರಾಕ್ಷತೆಗಳನ್ನು ಪಡೆಯುವುದು ರೂಢಿ. ಆದ್ದರಿಂದ ಚಾತುರ್ಮಾಸ್ಯದ ಈ ಕಾಲವು ಸೂರ್ಯ, ಚಂದ್ರರು ಸಂಗಮಿಸಿದಂತೆ ಗುರುಶಿಷ್ಯರು ಒಂದಾಗುವ ಕಾಲ ಎಂದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದ್ದಾರೆ.
ಇಂದು ಅಶೋಕೆಯಲ್ಲಿ ಆಯೋಜಿತವಾದ ಚಾತುರ್ಮಾಸ್ಯದ ನಿಮಿತ್ತವಾಗಿ ಸಾಗರಮಂಡಲದ ಕೋಗೋಡು, ಮರಬಿಡಿ, ಹಳೆಯಿಕ್ಕೇರಿ, ಗೋಳಗೋಡು ವಲಯಗಳ ಶಿಷ್ಯಸಮುದಾಯದ ಶ್ರೀಗುರುದೇವತಾಸೇವೆ ಹಾಗೂ ದೇಶಭಂಡಾರಿ ಸಮಾಜದ ಶಿಷ್ಯರ ಗುರುಪಾದುಕಾಪೂಜೆಗಳು ಸಮರ್ಪಿತವಾದ ಸಂದರ್ಭದಲ್ಲಿ ಧರ್ಮಸಭೆಯಲ್ಲಿ ಆಶೀರ್ವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ಈ ಕಾಲದಲ್ಲಿ ಭಿನ್ನಮನಗಳ, ಭಿನ್ನಹೃದಯಗಳ ಸಮಾವೇಶ ಇಲ್ಲಿ ನಡೆಯುತ್ತದೆ. ಗುರುಪೀಠದ ಸಾನ್ನಿಧ್ಯದಲ್ಲಿ ಉಳಿದೆಲ್ಲವನ್ನೂ ಮರೆತು ಪ್ರಭು ಶ್ರೀರಾಮಚಂದ್ರನ ಅನುಗ್ರಹವನ್ನು, ಶ್ರೀಗುರುಕೃಪೆಯನ್ನು ಪಡೆಯುವತ್ತ ಮನಸ್ಸು ಕೇಂದ್ರೀಕೃತವಾಗುತ್ತದೆ. ಎಂದು ಹೇಳಿ ದೇಶಭಂಡಾರಿ ಸಮಾಜವು ಶ್ರೀಪೀಠದಸೇವೆಯಲ್ಲಿ ತ್ರಿಕರಣಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡ ಸಮಾಜ. ಚಾತುರ್ಮಾಸ್ಯದ ಸಂದರ್ಭದಲ್ಲಿ ಈ ಸಮಾಜವೂ ಕೂಡಾ ತನ್ನ ಗುರುಸೇವೆಯನ್ನು ಸಲ್ಲಿಸಿದೆ. ಪ್ರಭುಶ್ರೀರಾಮಚಂದ್ರ, ಶ್ರೀಗುರುಪರಂಪರೆಯ ಎಲ್ಲ ಆಶೀರ್ವಾದ, ಅನುಗ್ರಹಗಳು ಈ ಶಿಷ್ಯಸಮುದಾಯಗಳ ಮೇಲಿರಲಿ ಎಂದೂ ಹಾರೈಸಿದರು. ಧರ್ಮಸಭೆಯಲ್ಲಿ ಶ್ರೀಮಠದ ವಿವಿಧ ಯೋಜನೆಗಳ ಕುರಿತಾಗಿ ಹವ್ಯಕಮಹಾಮಂಡಲದ ಪ್ರಸಾರವಿಭಾಗದ ಡಿ.ವಿ.ಶಿವರಾಮಯ್ಯ, ಸದಾಶಿವ ಮೋಂತಿಮಾರು ವಿವರಣೆ ನೀಡಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೂಜ್ಯಶ್ರೀಗಳು ಸಮ್ಮಾನಿಸಿ ಗೌರವಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.
August 9, 2011 at 9:31 AM
ಹರೇ ರಾಮ
ಚಿತ್ರ ಪುಟ ಗಳನ್ನು ನೋಡುತ್ತಿದ್ದರೆ ಆ ಅಯೋದ್ಯೆಯೇ ಅಶೋಕೆಗೆ ಬ೦ದ೦ತಿದೆ ,ಅದ ನೋಡುವ ಕಣ್ಣುಗಳ ಭಾಗ್ಯವೇ
ಭಾಗ್ಯ.ಸೂರ್ಯನ ಪ್ರಭೆ ನಮ್ಮ ಮೇಲು ಬೀಳಲೆ೦ದು ಆಶೀರ್ವಾದ ಬೇಡುತ್ತಾ
ನಮನಗಳು
August 10, 2011 at 10:50 AM
ಹರೇರಾಮ್,
ಅಮಾವಾಸ್ಯೆಗೆ ಬಯ ಪಡುವ ನಾವು ಆಗ ನಮ್ಮೊ೦ದಿಗೆ ಸೂರ್ಯ್ ನಿರುವ ಎ೦ದು ತಿಳಿದರೆ
ಸೂರ್ಯ ಬೇಕೆ೦ದು ಇಚ್ಚೆ ಪಡುವ ನಾವು ನಮ್ಮನೆಯಿ೦ದ ಸೂರ್ಯ ನೆಡೆಗೆ ಎ೦ದು ಇಳಿದರೆ
ಅ೦ದೇ ಬರುವುದು ಅಯೋದ್ಯೆ ಅಶೋಕೆಗೆ ಮಾತ್ರವಲ್ಲ ನಮ್ಮೆಲ್ಲರ ಮನೆ ಮನಗಳಿಗೆ
ಹರೇರಾಮ,
August 10, 2011 at 9:15 PM
ಹರೇ ರಾಮ…
August 16, 2011 at 11:36 PM
ಗುರುಗಳ ಮಾನಸದೊಳು ಸಹಸ್ರ ಸಾಸಿರ ಸೌ೦ದರ್ಯದ ಸರೋವರಗಳು, ಅದರೊಳು ಕರುಣಾರಸ ಬೆರೆತು ಚಲನೆ ದೊರೆಕಿರುವುದು, ಆತ್ಮಬ೦ಧುಗಳ ಮಾನಸವನು ತ೦ಪು ತ೦ಪಾಗಿರಿಸಿರಿವುದು (ಗಿರಿ ಸಿರಿ), ಜ್ಞಾನದ ಹಸಿರನು ಸೊ೦ಪು ಸೊ೦ಪಾಗಿ ಬೆಳೆಸುತಿಹುದು.
.
ಶ್ರೀ ಗುರುಭ್ಯೋ ನಮಃ