ಗೋಕರ್ಣ.22: ಲೋಕದಲ್ಲಿ ಎತ್ತರಕ್ಕೆ ಪ್ರಸಿದ್ಧವಾದದ್ದು ಹಿಮಾಲಯ. ನಮ್ಮ ನಾಡಿನ ಹೆಮ್ಮೆಯ ಪ್ರದೇಶವಾದ ಅದು ನಮ್ಮೆಲ್ಲರ ಬದುಕಿನ ಔನ್ನತ್ಯಕ್ಕೆ ಸಂಕೇತವೂ ಹೌದು. ಜೀವನದ ಸಾರ್ಥಕತೆಗೆ ಪ್ರತೀಕವಾದ ಈ ಹಿಮಾಲಯ ಅಪಾರವಾದ ಅಂತಸ್ಸತ್ವ, ದೃಢತೆಗೆ ಆಧಾರವೂ ಸಹ. ವ್ಯಕ್ತಿಯೋರ್ವನ ಬಾಳಿಗೆ ಇದು ಮಾದರಿಯಾಗಬೇಕು ಎಂದು ಪೂಜ್ಯ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಗೋಕರ್ಣದ ಸಾಗರತೀರದಲ್ಲಿ ನಿರ್ಮಿತವಾದ ಮಹರ್ಷಿ ದೈವರಾತ ವೇದಿಕೆಯಲ್ಲಿ ಆಯೋಜಿತವಾಗಿ ಕಳೆದ ಎಂಟುದಿನಗಳಿಂದ ಸಂಪನ್ನಗೊಂಡ “ರಾಮಕಥಾ” ದಲ್ಲಿ ಪ್ರವಚನವನ್ನು ನೀಡುತ್ತಿದ್ದ ಪೂಜ್ಯ ಶ್ರೀಗಳು ನಮ್ಮ ಪ್ರಾಚೀನರೆಲ್ಲ ಬೆಳಕಿಗಾಗಿ ಪರಿತಪಿಸಿದವರು. ಸದಾ ಅದಕ್ಕಾಗಿಯೇ ತಪಸ್ಸು ಮಾಡಿದರು. ನಮಗೆ ಬೇಕಾದದ್ದನ್ನು ದೇವತೆಗಳಿಂದ ಪಡೆಯಲು ಸಾಧನವಾದ ತಪಸ್ಸು ಬಾಹ್ಯ ಹಾಗು ಆಂತರ್ಯದ ಶುದ್ಧಿಗೆ ಕಾರಣವೂ ಹೌದು. ಹೀಗಾಗಿಯೇ ಹಿಮವಂತ-ಮೇನಾ ದಂಪತಿಗಳು  ಮಗಳನ್ನು ಪಡೆಯಲೆಂದು ತಪಸ್ಸು ಮಾಡಿದರು. ಸರ್ವಮಂಗಳೆಯಾದ ಸತೀದೇವಿ ಅವರಿಗೆ ಪುತ್ರಿಯಾಗಿ ಹುಟ್ಟಿದಳು. ಬೆಳೆದ ಆಕೆ ಸಹಜವಾಗಿಯೇ ಶಿವನನ್ನು ವರಿಸುವ ಬಯಕೆ ಹೊಂದಿ ಮುಂದೆ ಆದೇ ಪ್ರದೇಶದಲ್ಲಿ ತಪಸ್ಸು ಮಾಡುತ್ತಿದ್ದ ಪರಶಿವನ ಸೇವೆಯಲ್ಲಿ ತೊಡಗಿಸಿಕೊಂಡಳು.

ತನ್ನ ರೂಪದ ಬಲದಿಂದ ಪರಶಿವನನ್ನು ಒಲಿಸಲು ಅಸಾಧ್ಯವಂಬುದನ್ನು  ಮನ್ಮಥನು  ಶಿವನ ಹಣೆಗಣ್ಣಿನಿಂದ ಸುಟ್ಟು ಹೋದುದರ ಮೂಲಕ ತಿಳಿದ ಪಾರ್ವತಿ ತೀವ್ರವಾದ ತಪಸ್ಸಿನಲ್ಲಿ ತನ್ನನ್ನುತೊಡಗಿಸಿಕೊಂಡಳು. ಹೀಗೆ ನಿರಂತರವಾದ ತಪೋಯೋಗದಿಂದ ಕೊನೆಗೂ ಶಿವನೊಲಿದ. ಆದರೆ ಅದಕ್ಕು ಮೊದಲು ಬ್ರಹ್ಮಚಾರಿ ವೇಷದಿಂದ ಪಾರ್ವತಿಯ ಆಶ್ರಮಕ್ಕೆ ಬಂದು ಅವಳನ್ನು ಪರೀಕ್ಷಿಸಿದ. ಅವಳ ಶಿವಪರವಾದ ಬಯಕೆಯ ತೀವ್ರತೆಯನ್ನು ಅರಿತ. ಆಮೇಲೆ ತನ್ನನ್ನೇ ಅವಳಿಗೆ ಸಮರ್ಪಿಸಿದ. ಇದು ಕೇವಲ ಪುರಾಣದ ಮಾತಷ್ಟೇ ಅಲ್ಲ. ನಮ್ಮ ಜೀವನದಲ್ಲಿಯೂ ನಡೆಯುವುದು ಹೀಗೆಯೇ. ಒಳ್ಳೆಯ ಕಾಮನೆ ತೀವ್ರವಾದಾಗ ಅದೇ ತಪಸ್ಸಾಗುತ್ತದೆ. ಅದೇ ಮತ್ತೆ ಘನೀಭೂತವಾದರೆ ಅದು ಸಿದ್ಧಿರೂಪದಲ್ಲಿ  ನಮಗೆ  ದೊರೆಯುತ್ತದೆ. ನಮ್ಮ ಅಹಂಕಾರ ದೂರವಾಗಿ ನಾನಲ್ಲ, ನೀನು ಎಂಬ ಭಾವ ತುಂಬಿ ಬರುವವರೆಗೂ ನೈಜ ದರ್ಶನ ಸಾಧ್ಯವಾಗುವುದಿಲ್ಲ, ಎಂದೂ ಹೇಳಿದ ಪೂಜ್ಯಶ್ರೀಗಳು ರಾಮಾಯಣದಲ್ಲಿ ಉಲ್ಲಿಖಿತವಾದ  ಇಂತಹ ಘಟನೆಗಳು ನಮ್ಮ ಬದುಕಿಗೆ ದಾರಿತೋರುವ ಮೂಲಕ ಜೀವನದಮೌಲ್ಯವನ್ನು ಪಡೆಯುವಲ್ಲಿ ಸಹಕಾರಿಗಳಾಗಲಿ ಎಂದು ಆಶಿಸಿದರು.

ಶ್ರೀಪಾದ ಭಟ್ಟ, ಶ್ರೀಮತಿ ಪ್ರೇಮಲತಾ ದಿವಾಕರ ಇವರ ಮನೋಜ್ಞವಾದ ಗಾಯನ, ಗೌರೀಶಯಾಜಿಯವರ ಹಾರ್ಮೋನಿಯಮ್ ಸಾಥ್ ಗೋಪಾಲಕೃಷ್ಣ ಹೆಗಡೆಯವರ ಮೈ ನವಿರೇಳಿಸುವ ತಬಲಾ ಹಾಗೂ ಪ್ರಕಾಶ ಕಲ್ಲಾರೆಮನೆ ಯವರ ಮೋಹಕ ಕೊಳಲುವಾದನ ಗಳು ಪ್ರೇಕ್ಷಕರನ್ನು ರಂಜಿಸಿದರೆ ಗಣಪತಿ ನೀರ್ನಳ್ಳಿಯವರ ಆಶುಚಿತ್ರ ಮತ್ತು ರಾಘವೇಂದ್ರ ಹೆಗಡೆಯವರ ಮರಳುಚಿತ್ರಗಳು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದವು .ಮಂಗಳೂರಿನ ಶ್ರೀಧರ ಹೊಳ್ಳ ಮತ್ತು ಬಳಗದಿಂದ “ಕಾಮದಹನ- ಪಾರ್ವತೀಕಲ್ಯಾಣ” ರೂಪಕವು ಆಯೋಜಿತವಾಗಿತ್ತು. ಎಮ್.ಜಿ.ಉಪಾಧ್ಯ ದಂಪತಿಗಳು ಹಾಗೂ ಶ್ರೀ ಮಹಾಬಲೇಶ್ವರ ದೇವಾಲಯದ ಪರವಾಗಿ ಜಿ.ಕೆ.ಹೆಗಡೆ ಪೂಜ್ಯಶ್ರೀಗಳಿಗೆ ಫಲಕಾಣಿಕೆಯನ್ನು ಸಮರ್ಪಿಸಿದರು.

Facebook Comments Box