ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ.
ರಾಮಕೃಷ್ಣ ಪರಮಹಂಸರ ಜೀವನದ ಪ್ರಸಿದ್ಧ ದೃಷ್ಟಾಂತ:
ರಾಮಕೃಷ್ಣ ಪರಮಹಂಸರು ಯಾವಾಗಲೂ ಹಣದಿಂದ ದೂರ ಇರುವವರು, ತಮಗೆ ಹಣವನ್ನು ಮುಟ್ಟಿದರೆ ಕೂಡ ಆಗುವುದಿಲ್ಲ ಎಂದು ಹೇಳುತ್ತಿದ್ದರು. ಇದನ್ನು ನರೇಂದ್ರ (ಈಗಿನ ವಿವೇಕಾನಂದರು) ಗಮನಿಸುತ್ತಿದ್ದ; ಆತನ ಒಂದು ಸ್ವಭಾವ ಏನೆಂದರೆ ಏನೇ ಇದ್ದರೂ ಅದನ್ನು ಪರೀಕ್ಷಿಸಿದ ನಂತರವೇ ಒಪ್ಪಿಕೊಳ್ಳುವುದು. ಹಾಗಾಗಿ ರಾಮಕೃಷ್ಣರ ಮಾತನ್ನು ಸತ್ಯವೇ ಎಂದು ತಿಳಿಯಲು ತನ್ನ ಗುರುಗಳನ್ನೇ ಪರೀಕ್ಷಿಸುತ್ತಾನೆ. ಒಂದು ದಿನ ಪರಮಹಂಸರು ಅವರ ಕೊಠಡಿಗೆ ಬಂದು ಹಾಸಿಗೆ ಮೇಲೆ ಕುಳಿತುಕೊಳ್ಳುವ ಮೊದಲು ಅವರಿಗೆ ತಿಳಿಯದ ಹಾಗೆ ಹಾಸಿಗೆಯ ಕೆಳಗೆ ನರೇಂದ್ರನು ನಾಣ್ಯವನ್ನು ಇಡುತ್ತಾನೆ. ಪರಮಹಂಸರು ಆ ಹಾಸಿಗೆಯ ಮೇಲೆ ಕುಳಿತುಕೊಂಡ ತಕ್ಷಣ ಉರಿ ಉರಿ ಎಂದು ಚೀರಿ ಹಾಸಿಗೆಯ ಅಡಿಯಲ್ಲಿ ಏನಿದೆ ಎಂದು ಹುಡುಕುತ್ತಾರೆ, ಆಗ ಆ ನಾಣ್ಯ ದೊರೆಯುತ್ತದೆ. ಆಗ ವಿಚಾರಣೆ ನಡೆದಾಗ, ಅದು ನರೇಂದ್ರನ ಕೆಲಸ ಎಂದು ತಿಳಿಯುತ್ತದೆ. ಅದಕ್ಕಾಗಿ ಪರಮಹಂಸರು ಅವನನ್ನು ಕೇಳಿದಾಗ ಅವನು ಸತ್ಯವನ್ನೇ ಅರುಹುತ್ತಾನೆ. ಪರಮಹಂಸರಿಗೆ ತುಂಬಾ ಸಂತೋಷವಾಯಿತು, ಯಾಕೆಂದರೆ ಮೂಢವಾಗಿ ಯಾವುದನ್ನೂ ಕೂಡ ನಂಬಬಾರದು. ಪ್ರತಿಯೊಂದನ್ನೂ ಕೂಡ ವಿಶ್ಲೇಷಣೆ ಮಾಡಿ ಪ್ರಯೋಗ ಮಾಡಿದ ಮೇಲೆ ಅದು ಅಹುದು ಅಂತಾದರೆ ಮಾತ್ರ ಒಪ್ಪಿಕೊಳ್ಳಬೇಕು. ಇದು ತುಂಬಾ ಒಳ್ಳೆಯ ಪ್ರವೃತ್ತಿ – ಎಂಬುದು ಕಥೆಯ ಸಾರಾಂಶ. ಸ್ಪರ್ಶಕ್ಕೆ ಕೇವಲ ಪ್ರತ್ಯಕ್ಷ ಅಷ್ಟೇ ಅಲ್ಲ ಪರೋಕ್ಷ ಪರಿಣಾಮವೂ ಉಂಟು ಎಂಬುದಕ್ಕೆ ಈ ಮೇಲಿನ ಕಥೆಯು ಉದಾಹರಣೆಯಾಗಿ ನಿಲ್ಲುತ್ತದೆ. ಬೇರೆಯವರ ಹಾಸಿಗೆ, ಬಟ್ಟೆ, ಆಸನ ಮುಂತಾದವುಗಳನ್ನು ಬಳಸಬಾರದು, ಇದರಿಂದ ನಮಗೂ ಮತ್ತು ಬೇರೆಯವರಿಗೂ ಒಳ್ಳೆಯದು. ಏಕೆಂದರೆ, ಈ ಪರೋಕ್ಷ ಸ್ಪರ್ಶದಿಂದ ನಮಗೆ ದೋಷಗಳು ಬರಬಹುದು. ಇದರಿಂದಲೇ ಭಾರತದಲ್ಲಿ ಸ್ಪರ್ಶಕ್ಕೆ ಅದರದೇ ಆದ ಮಹತ್ವವಿದೆ.
“ವಿದೇಶೀಯರ ಪ್ರಯೋಗ”
ಸ್ಪರ್ಶದ ಬಗ್ಗೆ ವಿದೇಶದಲ್ಲಿಯೂ ಬೇರೆ ಬೇರೆ ಪ್ರಯೋಗಗಳಾಗಿವೆ. ಲಾರೆನ್ಸ್ ವಿಲಿಯಮ್ಸ್ ಮತ್ತು ಜಾನ್ ಬಾರ್ಗ್ ಎಂಬುವವರು ಸ್ಪರ್ಶದಿಂದ ಮನಸ್ಸಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ಒಂದಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ಅವರು ಒಂದಿಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರನ್ನು ಲಿಫ್ಟಿನಲ್ಲಿ ನಾಲ್ಕನೇ ಮಹಡಿಗೆ ಕರೆದೊಯ್ಯುತ್ತಾರೆ. ಹಾಗೆ ಹೋಗುವಾಗ ನೆಪವೊಡ್ಡಿ ಕೆಲವರ ಕೈಗೆ ಬಿಸಿ ಕಾಫಿ ಮಗ್ ಮತ್ತು ಕೆಲವರ ಕೈಗೆ ತಣ್ಣನೆಯ ಕಾಫಿ ಮಗ್ ಅನ್ನು ಕೊಡುವುದು. ಬಿಸಿ ಕಾಫಿ ಹಿಡಿದವರಲ್ಲಿ ಸ್ನೇಹಪರತೆ, ಕರುಣೆ, ಪ್ರೀತಿ, ಸದ್ಭಾವ ಹೆಚ್ಚು ಕಂಡುಬರುತ್ತದೆ. ಹಾಗೆಯೇ ತಣ್ಣನೆಯ ಕಾಫಿ ಹಿಡಿದವರಲ್ಲಿ ಕಿರಿಕಿರಿ, ನಕಾರಾತ್ಮಕತೆ ಕಂಡುಬರುತ್ತದೆ ಎಂಬುದನ್ನು ಅವರು ಸಮೀಕ್ಷೆ ಮಾಡಿ ದಾಖಲಿಸಿದ್ದಾರೆ. ಇವರೇ ಇನ್ನೊಂದು ಪ್ರಯೋಗ ಮಾಡುತ್ತಾರೆ, ಅದೇನೆಂದರೆ ಕೆಲವರಿಗೆ ಬಿಸಿ ಶಾಖದ ಚೀಲವನ್ನು, ಕೆಲವರಿಗೆ ತಂಪು ಚೀಲವನ್ನು ಕೊಟ್ಟು ಅದನ್ನು ಸ್ಪರ್ಶಿಸಿ ಅದು ಹೇಗಿದೆ ಎಂದು ಹೇಳಬೇಕು ಮತ್ತು ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ದೊರೆಯುತ್ತದೆ; ಆದರೆ ಅವರಿಗೆ ಎರಡು ಆಯ್ಕೆಗಳನ್ನು ನೀಡುತ್ತಾರೆ. ಒಂದು – ಅವರು ಅದನ್ನು ಅವರೇ ಇಟ್ಟುಕೊಳ್ಳುವುದು, ಎರಡು – ಅದನ್ನು ಬೇರೆಯವರಿಗೆ ನೀಡಬಹುದು. ಬಿಸಿ ಶಾಖದ ಚೀಲವನ್ನು ಹಿಡಿದವರು ಅದನ್ನು ಬೇರೆಯವರಿಗೆ ನೀಡುತ್ತಾರೆ, ಆದರೆ ತಣ್ಣನೆಯ ಚೀಲವನ್ನು ಮುಟ್ಟಿದವರು ಅವರ ಬಳಿಯೇ ಇಟ್ಟುಕೊಳ್ಳುತ್ತಾರೆ ಅಂದರೆ ಸ್ವಾರ್ಥ ಭಾವ ಆಡಿತು ಅಲ್ಲಿ. ಆದರೆ ಬೆಚ್ಚಗಿನ ಚೀಲ ಹಿಡಿದುಕೊಂಡವರಲ್ಲಿ ಸ್ವಲ್ಪ ಪರಾರ್ಥ ಭಾವ ಆಡುತ್ತಿತ್ತು ಎಂಬುದನ್ನು ಅವರು ದಾಖಲೆ ಮಾಡಿದ್ದಾರೆ. ಸ್ಪರ್ಶದ ಪರಿಣಾಮ, ನಮ್ಮ ತನು-ಮನದ ಮೇಲಿದೆ ಎಂದು ಈ ಪ್ರಯೋಗಗಳಿಂದ ತಿಳಿಯುತ್ತದೆ.
“ಶ್ರೀರಂಗ ಮಹಾಗುರುಗಳ ನಾಡಿಶಾಸ್ತ್ರ”
ಮೈಸೂರಿನ ಸಮೀಪ ಹೆಡತರೆ ಎಂಬ ಹಳ್ಳಿಯಲ್ಲಿ ಶ್ರೀರಂಗ ಮಹಾಗುರುಗಳು ಎಂಬ ಒಬ್ಬರು ಮಹಾಪುರುಷರು ಆಗಿ ಹೋದರು. ಅವರು ನಾಡಿಶಾಸ್ತ್ರದ ಸಾರಸರ್ವಸ್ವವನ್ನು ಕೂಡ ಅರಿತಿದ್ದರು. ಅವರು ಮತ್ತು ಅವರ ದೊಡ್ಡ ಶಿಷ್ಯವರ್ಗ ನಾಡಿ ಶಾಸ್ತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಜಾತಕ ನೋಡದೆ, ಕೇವಲ ನಾಡಿ ಹಿಡಿದು ದೇಹದ, ಜೀವನದ ಮತ್ತು ಮನಸ್ಸಿನ ಹಲವು ವಿಚಾರಗಳನ್ನು ಅವರು ಹೇಳುತ್ತಿದ್ದರು. ಚಿನ್ನಕ್ಕೆ ಬಹಳ ಮಹತ್ವವಿದೆ, ಧರಿಸಿದ ಚಿನ್ನವು ದೇಹಕ್ಕೆ ಬರಿಯ ಸೌಂದರ್ಯವರ್ಧಕವಾಗಿರದೆ ಅದು ದೇಹಕ್ಕೆ ತಂಪನ್ನು, ಜೀವ ಧಾತುಗಳಿಗೆ ಬಲವನ್ನು, ದೇಹಕ್ಕೆ ಶುದ್ಧಿ, ಆಯುಸ್ಸಿಗೆ ವೃದ್ಧಿ, ಶರೀರಕ್ಕೆ ಕಾಂತಿ, ವಾಕ್ ಶುದ್ಧಿ, ಸ್ಮೃತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಧೈರ್ಯ ಮೊದಲಾದ ಗುಣಗಳನ್ನು ಕೊಡುತ್ತದೆ ಎಂದು ನಾಡಿ ಪ್ರಯೋಗದ ಮೂಲಕ ಸಾಬೀತು ಪಡಿಸಿದ್ದಾರೆ. ಹಾಗೆಯೇ ಉಣ್ಣೆ, ರೇಷ್ಮೆ, ಹತ್ತಿ ಬಟ್ಟೆಗಳು ಧಾರಣೆಗೆ ಯೋಗ್ಯ ಹಾಗೂ ಇನ್ನುಳಿದ ಬಟ್ಟೆಗಳು ಪಿತ್ತವನ್ನು ಕೆರಳಿಸುತ್ತವೆ. ಇದರಿಂದ ದೇಹ, ಮನಸ್ಸುಗಳು ಕೆಡುತ್ತವೆ. ಬಿಸಿ ಅನ್ನವನ್ನು ಹಸಿ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು, ಮುಡಿಗೆ ಹೂವು ಮುಡಿಯುವುದು ಪಿತ್ತ ಶಮನಕಾರಿ, ತೆಂಗಿನಕಾಯಿ ಧಾತು ಸಾಮ್ಯವನ್ನು ಉಂಟುಮಾಡುತ್ತದೆ, ಬಿಲ್ವ ಪತ್ರೆಯ ಸ್ಪರ್ಶದಿಂದ ನಮ್ಮ ದೇಹದ ಬ್ರಹ್ಮ, ವಿಷ್ಣು, ಶಿವ ನಾಡಿಗಳು ಜಾಗೃತವಾಗುತ್ತವೆ. ಸ್ಟೀಲ್ ಸ್ಪರ್ಶದಿಂದ ಕತ್ತೆಯ ನಾಡಿಯು ಜಾಗೃತವಾಗುತ್ತದೆ. ಗಾಜು ಇರುವ ಗುಣವನ್ನು ಉಳಿಸುತ್ತವೆ. ಅದಕ್ಕಾಗಿಯೇ ನಾವು ಬಹುಕಾಲ ತನ್ನ ಗುಣವನ್ನು ಉಳಿಸಿಕೊಳ್ಳಬೇಕಾದ ವಸ್ತುವನ್ನು ಗಾಜಿನ ಪಾತ್ರೆಯಲ್ಲಿ ಇರಿಸುತ್ತೇವೆ. ಊಟ ಮಾಡುವಾಗ ಅನ್ನವನ್ನು ಕೈಯಲ್ಲಿ ಕಲಸಿ ಊಟ ಮಾಡಬೇಕು. ಅಂಗೈಯ ಸ್ಪರ್ಶ ಅನ್ನಕ್ಕಾಗಬೇಕು. ಅದು ಅಮೃತ ಸ್ಪರ್ಶ; ಆ ಸ್ಪರ್ಶವು ನಾವು ಉಣ್ಣುವ ಅನ್ನವನ್ನು ಅಮೃತವನ್ನಾಗಿ ಮಾಡುತ್ತವೆ. ಗೋವಿನ ದರ್ಶನ ಮಾತ್ರದಿಂದಲೇ ನಮ್ಮಲ್ಲಿ ಸತ್ವಗುಣಗಳು ಜಾಗೃತವಾಗುತ್ತವೆ, ಗೋ ಸ್ಪರ್ಶದಿಂದ ಆ ಸತ್ವಗುಣ ನಮ್ಮೊಳಗೆ ಹರಿದು ನಮ್ಮ ಅಶುದ್ಧಿ ಪರಿಹಾರವಾಗಿ ಶುದ್ಧರಾಗುತ್ತೇವೆ. ಅದಕ್ಕಾಗಿಯೇ ಅವನ್ನು ಗೃಹಪ್ರವೇಶದಲ್ಲಿ ಮನೆಯನ್ನು ಶುದ್ಧ ಮಾಡಲು ಮನೆಯೊಳಗೆ ಕರೆದೊಯ್ಯುತ್ತಾರೆ. ನಾಯಿಯನ್ನು ಮುಟ್ಟಿದರೆ ರಜೋಗುಣ ಜಾಗೃತವಾಗುತ್ತವೆ. ಅದಕ್ಕೆ ಅವುಗಳು ಹೊಸ್ತಿಲ ಹೊರಗಿರಬೇಕು. ಯಾವುದು ಪವಿತ್ರ, ಯಾವುದು ಶುದ್ಧ, ಯಾವುದನ್ನು ಮುಟ್ಟಿದರೆ ನಮ್ಮ ದೋಷ ಪರಿಹಾರವಾಗುತ್ತದೆ, ಯಾವುದು ನಮ್ಮ ಪ್ರಕೃತಿಯನ್ನು ಹದಗೆಡಿಸುತ್ತದೆ ಎಂಬುವುದರ ಪರಿಕಲ್ಪನೆ ನಮಗಿರಬೇಕು. ಮುತ್ತನ್ನು ಧಾರಣೆ ಮಾಡಿದರೆ, ಅದು ಶ್ರೇಷ್ಠ ಮುತ್ತಾಗಿದ್ದರೆ ನಮ್ಮ ಸ್ಪರ್ಶ ದೋಷಗಳನ್ನು ನಿವಾರಣೆ ಮಾಡುತ್ತದೆ. ಹಾಗೆಯೇ ಜಾತ್ರೆಯ ರಥೋತ್ಸವ ಸಂದರ್ಭದಲ್ಲಿ, ಜನರು ಸೇರಿರುವಲ್ಲಿ ಸ್ಪರ್ಶ ದೋಷ ಇಲ್ಲ ಏಕೆಂದರೆ ಅಲ್ಲಿ ಎಲ್ಲರೂ ಭಗವಂತನಲ್ಲಿ ಮನಸ್ಸನ್ನು ಇಟ್ಟಿರುತ್ತಾರೆ ಆಗ ದೋಷಗಳು ಹರಡುವುದಿಲ್ಲ. ಇಂತಹ ಪ್ರದೇಶಗಳು, ಸಂದರ್ಭಗಳು ಇವುಗಳನ್ನು ಹೊರತುಪಡಿಸಿ ಉಳಿದಂತೆ ನಮ್ಮ ರಕ್ಷಣೆ ನಮ್ಮದೇ ಹೊಣೆ. ನಾವು ನಮ್ಮನ್ನು ಮುತುವರ್ಜಿಯಿಂದ ಕಾಪಾಡಿಕೊಳ್ಳಬೇಕು.
ಈ ವಿಷಯದ ಪ್ರಸ್ತಾಪ ಏಕೆಂದರೆ, ಮೂಲಭೂತವಾಗಿ ಒಂದು ಪ್ರಶ್ನೆ – ಭಾರತೀಯರು ಒಬ್ಬರನ್ನೊಬ್ಬರು ಪರಸ್ಪರ ಭೇಟಿ ಆದಾಗ ‘ನಮಸ್ತೇ’ ಎಂದು ಕೈ ಮುಗಿಯುತ್ತಾರೆ. ವಿದೇಶಿಯರು ‘ಹಲೋ – ಹಲೋ’ ಅಂತ ಹೇಳಿ ಕೈ ಕುಲುಕುತ್ತಾರೆ. ಇದಾ – ಅದಾ? ಯಾವುದು ಸೂಕ್ತ? ಎನ್ನುವುದರ ಬಗ್ಗೆ ಇಷ್ಟೆಲ್ಲಾ ವಿಚಾರಗಳು ಬಂದಿರುವಂತದ್ದು. ಎರಡರಲ್ಲೂ ದೊಡ್ಡ ವ್ಯತ್ಯಾಸ ಎಂದರೆ ವಿದೇಶಿಯರ ಪದ್ಧತಿಯಲ್ಲಿ ಸ್ಪರ್ಶವಿದೆ, ಪರಿಚಯ ಇಲ್ಲದಿರುವವರ ಸ್ಪರ್ಶವದು. ಹೊಸ ಪರಿಚಯವಿದ್ದಲ್ಲಿ ಕೈ ಕುಲುಕುವಂತದ್ದು; ಹಳೆಪರಿಚಯವಲ್ಲ ಅದು. ಅವನು ಯಾರು, ಏನು ಅಂತ ಗೊತ್ತಿಲ್ಲ, ಅವನು ಎಂತಹ ಪಾಪಿ, ಎಂತಹ ಪುಣ್ಯಾತ್ಮ ಅಂತ ಗೊತ್ತಿಲ್ಲ, ಆಗ ಸೀದಾ ಕೈ ಕುಲುಕುವಾಗ ಜಾಗ್ರತೆ ಬೇಕು. ಆ ಹಸ್ತ ಸ್ಪರ್ಶದಲ್ಲಿ ನಮಗೆ ಏನು ಬಂತು? ನಾವೇನು ಕೊಟ್ಟೆವು? ಎನ್ನುವ ಜಾಗ್ರತೆ ಬೇಕು. ಏಕೆಂದರೆ ನಮ್ಮೊಳಗಿರುವ ಕೆಲವಾರು ಗುಣ, ದೋಷ, ಚೈತನ್ಯಗಳನ್ನು ಹರಿಸುವ ಶಕ್ತಿ ನಮ್ಮ ಅಂಗೈಗಿದೆ. ಕೈಯಾಗಲಿ, ಕಾಲಾಗಲಿ ಅವು ದ್ವಾರ ಇದ್ದ ಹಾಗೆ. ಮನುಷ್ಯ ಎದ್ದು ನಿಂತರೆ ಇದೆಲ್ಲ ಒಂದೊಂದು ಕೊನೆಗಳು. ನಮ್ಮನ್ನು ನಾವು ಮರ ಎಂದು ಭಾವಿಸಿದರೆ ಕೈ- ಕಾಲುಗಳ ತುದಿಗಳೆಲ್ಲ ಒಂದೊಂದು ಕೊನೆಗಳು, ಎರಡು ಕಾಲುಗಳು ಒಂದೊಂದು ತುದಿಗಳು. ಅಲ್ಲಿಂದ ಹೊರಕ್ಕೆ ಶಕ್ತಿ ಪ್ರವಾಹ ಇರುತ್ತದೆ; ಅದು ಹೊರಕ್ಕೆ ಹರಿದು ಹೋಗುತ್ತದೆ. ಹಾಗಾಗಿ ಅಂಗೈ ತುಂಬಾ ಮುಖ್ಯವಾಗಿರುವಂತದ್ದು. ಅಂಗೈಗೆ – ಅಂಗೈಯನ್ನು ಕೊಟ್ಟರೆ ತುಂಬಾ ಸುಲಭವಾಗಿ ಒಬ್ಬರ ಪಾಪ – ಪುಣ್ಯಗಳು, ಗುಣ – ದೋಷಗಳು ಇನ್ನೊಬ್ಬರಿಗೆ ದಾಟುವಂತಹ ಅವಕಾಶಗಳಿವೆ. ಹಾಗಾಗಿ ಗೊತ್ತಿಲ್ಲದವರ ಜೊತೆಗೆ ಖಂಡಿತ ಇಂತಹ ಕೆಲಸಗಳನ್ನು ಮಾಡಬಾರದು. ಗೊತ್ತಾಗುವಂತೆ ಕೊರೋನ ಬರಬಹುದು, ಗೊತ್ತಾಗದಂತೆ ಇನ್ನೂ ಏನು ಬೇಕಾದರೂ ಬರಬಹುದು; ಬರುವ ಅವಕಾಶಗಳಿವೆ.
ಪಾಶ್ಚಾತ್ಯರ ‘ಹಲೋ’ ಎನ್ನುವ ಶಬ್ದ ಮೂಲತಃ ಭಾರತದ್ದು. ‘ಹಂಡೆ, ಹಂಜೆ, ಹಲಾಹ್ವಾನಂ ನೀಚಾಂ ಚೇಟೀಂ ಸಖೀಂಪ್ರತಿ’ ಅಮರಕೋಶವಿದು. ನೀಚಾಹ್ವಾನಂ ಅಂದರೆ ನಮಗಿಂತ ಕೆಳಗಿನ ಸ್ತರದವರನ್ನು ಕರೆಯಬೇಕಾದರೆ ಬಳಸುವಂತದ್ದು. ಮೂರು-ನಾಲ್ಕು ಶಬ್ದಗಳಿದ್ದವು, ಹಲಾ ಎನ್ನುವ ಶಬ್ದವಿತ್ತು, ಹಂಜೆ ಎನ್ನುವ ಶಬ್ದವಿತ್ತು, ಹಂಡೆ ಎನ್ನುವ ಶಬ್ದ ತಾಮ್ರದ್ದಲ್ಲ. ಈ ಶಬ್ದಗಳಿಂದ ಕರೆಯುತ್ತಿದ್ದರು. ಸಂಭೋದನೆಗಳಿವು. ಮೇಲಿನ ಸ್ತರದವರನ್ನು ಕರೆಯಲು ಬೇರೆ ಶಬ್ದಗಳಿದೆ ಅದು ‘ಭೋಃ’ ಎಂದು. ‘ಹೇ’ ಅಷ್ಟು ಮೇಲಿನ ಸ್ತರವಲ್ಲ, ಆದರೂ ಕೂಡ ಪರವಾಗಿಲ್ಲವದು, ‘ರೇ’ ಎಂದರೆ ನಮ್ಮ ಕೆಳಗಿನವರಿಗೆ ಕರೆಯುವಂತದ್ದು. ಆಗಿನ ಕಾಲದಲ್ಲಿ ಇಡೀ ಜಗತ್ತಿಗೆ ಭಾರತ ಗುರುವಾಗಿತ್ತು, ಈ ಜಗತ್ತಿನಲ್ಲಿ ಎಲ್ಲರೂ ಕೂಡ ಭಾರತದಿಂದ ಸಂಸ್ಕೃತಿಯನ್ನು, ಬದುಕನ್ನು ಕಲಿತಿದ್ದು. ಹಾಗೇ ಬಹುಶಃ ಅವರು ಈ ದೇಶಕ್ಕೆ ಬಂದಿರಬೇಕು, ನಮ್ಮವರು ಅವರನ್ನು ‘ಹಲಾ’ ಅಂತ ಕರೆದಿರಬೇಕು. ಪಾಶ್ಚಾತ್ಯರನ್ನು ನಮ್ಮ ದೇಶದ ಜನರು ‘ಹಲಾ’ ಅಂತ ಸಂಬೋಧಿಸಿದರು, ಕೆಳಗಿನವನು ಎನ್ನುವ ಕಾರಣಕ್ಕೆ ‘ಹಲಾ’ ಅಂತ ಸಂಭೋದನೆ ಮಾಡಿರಬೇಕು, ಕಾಲಾನು ಕಾಲದಲ್ಲಿ ಆ ಶಬ್ದವನ್ನು ಹಾಗೆ ತೆಗೆದುಕೊಂಡು ಹೋಗಿದ್ದಾರೆ. ‘ಹಲಾ’ ಎನ್ನುವಂತದ್ದು ‘ಹಲೋ’ ಆಗಿದೆ. ಹಾಗಾಗಿ ‘ಹಲೋ’ ಎಂದರೆ ನಮ್ಮ ಸಮಾನ ಮನಸ್ಕರಿಗೋ, ನಮಗಿಂತ ಮೇಲಿನ ಸ್ತರದವರಿಗೋ ಗೌರವ ಪೂರ್ವಕವಾಗಿ ಮಾಡುವಂತ ಸಂಭೋದನೆ ಅಲ್ಲ ಅದು. ಮನೆಯ ಆಳಿಗೆ ನಾವು ಕರೆಯಬಹುದು.
ಈಗ ಒಬ್ಬರಿಗೊಬ್ಬರಿಗೆ ಸಂಭೋದನೆ ಮಾಡುತ್ತಾ ಇರತಕ್ಕಂತದ್ದು ನಾವು. ಒಳ್ಳೆಯ ಅಭ್ಯಾಸ ಅಲ್ಲ ಅದು. ನಮ್ಮಲ್ಲಿ ಬೇರೆ ಬೇರೆ ಶಬ್ದಗಳಿವೆ ‘ಭದ್ರಂತೆ’ ಅಥವಾ ‘ಭದ್ರಂವಃ’. ಅದೇನು ಅಂದರೆ ನಿನಗೆ ಮಂಗಲವಾಗಲಿ, ನಿಮಗೆಲ್ಲ ಮಂಗಲವಾಗಲಿ. ಇಂತಹ ಶಬ್ದಗಳು ಬಳಕೆಯಲ್ಲಿ ಇದ್ದದ್ದು, ಮಾತು ಮಾತಿನ ವಾಡಿಕೆಯಲ್ಲಿ, ‘ತೇ ಪದ್ಮಾಕ್ಷೀರ ಪ್ರತಿಷ್ಠತಾಂ’, ಹಾಗೆಂದರೆ, ಕಮಲಧಾರಿಣಿಯಾದ ಲಕ್ಷ್ಮೀ ನಿನಗೆ ಒಲಿದು ಬರಲಿ. ಇಂತಹ ಶಬ್ದಗಳನ್ನು ನಾವು ಪರಸ್ಪರ ಭೇಟಿಯ ಸಮಯದಲ್ಲಿ ಹೇಳುತ್ತೇವೆ. ವಿನಿಮಯ ಸಮಯದಲ್ಲಿ ಇಂತಹ ಶಬ್ದಗಳು ಪರಸ್ಪರ ಬಳಕೆಯಲ್ಲಿದ್ದವು. ರಾಮಾಯಣದ ಶಬ್ದವಿದು. ಅದು ಬಿಟ್ಟು ‘ಹಲ ಹಲೋ’, ಇದು ಸರಿಯಲ್ಲ. ಹಾಗೆಂದು ನಮ್ಮಲ್ಲೂ ಎಲ್ಲವೂ ಸರಿಯಿದೆ ಎಂದಲ್ಲ; ಈಗ ಪರಸ್ಪರರನ್ನು ಭೇಟಿಯಾದಾಗ ಸಂಭೋದಿಸುವ ಪದ್ಧತಿ ಏನಂದರೆ, ನಮಸ್ಕಾರ ಎಂದು ಕೈ ಮುಗಿಯುವುದು.
ಆದರೆ ಇದೂ ಪೂರ್ತಿ ಸರಿಯಲ್ಲ. ಎಲ್ಲರೂ, ಎಲ್ಲರಿಗೂ ನಮಸ್ಕಾರ ಮಾಡಬಾರದು. ಒಬ್ಬರು ಇನ್ನೊಬ್ಬರನ್ನು ಭೇಟಿಯಾದಾಗ ಕಿರಿಯರು ಹಿರಿಯರಿಗೆ ನಮಸ್ಕಾರ ಮಾಡಬೇಕು, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು. ಇದು ಭಾರತದ ಶಿಷ್ಟಾಚಾರ. ಬರು ಬರುತ್ತಾ ಹೇಗಾಯಿತು! ಅಂದರೆ ಪಾಶ್ಚಿಮಾತ್ಯರ ಕೈ ಕುಲುಕುವ ಪದ್ಧತಿಗೆ ಪರ್ಯಾಯವಾಗಿ ನಮ್ಮದು ಇದು ಎಂಬಂತಾಗಿದೆ. ಆದರೆ ಇದೂ ಪೂರ್ತಿ ಸರಿಯಲ್ಲ. ಮೂಲಭೂತವಾಗಿ ಯಾವುದು ಅಂದರೆ ‘ಅಭಿವಾದನ!’; ಪರಸ್ಪರ ಭೇಟಿಯಾದಾಗ ಕಿರಿಯರು ಹಿರಿಯರಿಗೆ ಅಭಿವಾದನ ಮಾಡಬೇಕು. ಹಿರಿಯರು ಕಿರಿಯರಿಗೆ ನಮಸ್ಕಾರ ಮಾಡಿದಲ್ಲಿ ಕಿರಿಯರ ಆಯಸ್ಸಿನ ಹರಣವಾಗುತ್ತದೆ. ಇಲ್ಲೂ ಸಂದರ್ಭಾನುಸಾರ, ರಾಜರಿಗೆ ನಮಸ್ಕಾರ ಮಾಡಬಹುದು. ಕಾರಣ ಸ್ಥಾನ ಜ್ಯೇಷ್ಠತ್ವ. ಗುರುವಿಗೆ ಮಾಡಬಹುದು ಇಲ್ಲಿ ವಯಸ್ಸಿಗಿಂತ ಸ್ಥಾನಕ್ಕೆ ಮಹತ್ವ. ಕೇವಲ ವಯಸ್ಸಿನ ವಿಷಯಕ್ಕೆ ಬಂದರೆ ಎಂದೂ ಹಿರಿಯರು ಕಿರಿಯರಿಗೆ ನಮಸ್ಕರಿಸಬಾರದು.
ಇನ್ನೊಂದು ನಮ್ಮಲ್ಲಿ ಕೆಲವು ಶಬ್ದಗಳು, ಪತಿಗೆ ‘ರೀ’ ಎಂದು ಕರೆಯುವುದು ರೂಢಿ. ಇದು ಸಂಸ್ಕೃತದ ‘ರೇ’ ಶಬ್ದದಿಂದ ಬಂದಂತಹದ್ದು. ಅಷ್ಟು ಸಮಂಜಸವಲ್ಲ. ನಿಮ್ನ ಸ್ತರದ ಇಬ್ಬರು ಪರಸ್ಪರ ಸಂಭೋದಿಸುವಾಗ ಬಳಸುವ ಸಂಭೋದನೆ ಅದು. ಬರೀ ವಿದೇಶಗಳಲ್ಲಿ ಮಾತ್ರವಲ್ಲ ನಮ್ಮಲ್ಲೂ ಇಂತಹ ಕೆಲವು ವ್ಯತ್ಯಾಸಗಳು, ಕಾಲ ಕ್ರಮೇಣ ಪದ್ಧತಿ ಹಾಳಾಗಿರುವುದನ್ನು ನಾವು ಕಾಣುತ್ತೇವೆ.
ಹಾಗಾಗಿ ಪರಸ್ಪರರನ್ನು ಭೇಟಿಯಾದಾಗ ಒಳ್ಳೆಯ ಪದಗಳು, ಒಳ್ಳೆಯ ಶಬ್ದ, ಒಳ್ಳೆಯ ಭಾವ ಇಂಥವುಗಳನ್ನು ಬಳಸಬೇಕು; ಹಿರಿಯರ ಕಾಲಿಗೆ ಅಡ್ಡ ಬೀಳುವುದು. ನಮಗೆ ಮುಟ್ಟುವ ಯೋಗ್ಯತೆ ಇಲ್ಲದ ಸಂದರ್ಭದಲ್ಲಿ ದೀರ್ಘ ದಂಡ ನಮಸ್ಕಾರ ಮಾಡಬೇಕು, ದೂರದಿಂದ ನಮಸ್ಕಾರ ಮಾಡಬೇಕು. ಮುಟ್ಟುವ ಯೋಗ್ಯತೆ ಇರುವಲ್ಲಿ ಮುಟ್ಟಿ ನಮಸ್ಕಾರ ಮಾಡಬೇಕು. ಮಹಾತ್ಮರನ್ನು, ಗುರುವನ್ನು ಅಥವಾ ಸನ್ನಿಧಿಯಲ್ಲಿ ದೇವರನ್ನು ಕಂಡೊಡನೆ ದಂಡವತ್ ಪ್ರಣಾಮಗಳು, ಇವು ಯೋಗ್ಯ. ಸ್ತ್ರೀಯರಿಗೆ ಪಂಚಾಂಗ ಪ್ರಣಾಮ, ಪುರುಷರಿಗೆ ಸಾಷ್ಟಾಂಗ ಪ್ರಣಾಮ ಇವು ಯೋಗ್ಯ. ದೇಹದ ಹಣೆ, ಎದೆ, ಹಸ್ತ, ಮೊಣಕಾಲು, ಪಾದಗಳು ಸೇರಿ ಎಂಟು ಅಂಗಗಳು; ಇವು ಎಂಟು; ಹಣೆ ಮೊಣಕಾಲುಗಳು, ಮತ್ತು ಪಾದಗಳು ಇವು ಐದು ಅಂಗಗಳು. ಈ ಅಂಗಗಳು ನೆಲಕ್ಕೆ ತಗಲಬೇಕು ಎನ್ನುವುದು ಅರ್ಥ. ಬಾಕಿ ಅಂಗಗಳು ತಗಲಬಾರದು ಎಂದು.
ಹೀಗೆ ಎಲ್ಲಿ ದಂಡವತ್ ಪ್ರಣಾಮ, ಎಲ್ಲಿ ಸಾಷ್ಟಾಂಗ ಪ್ರಣಾಮ, ಎಲ್ಲಿ ‘ಪಾದೋಪಸಂಗ್ರಹಣ’ ಅಂದರೆ ಪಾದಮುಟ್ಟಿ ನಮಸ್ಕರಿಸುವುದು, ಅವರು ತಲೆ ಮುಟ್ಟಿ ಆಶೀರ್ವದಿಸುವುದು. ನಮಸ್ಕರಿಸಿದ ವ್ಯಕ್ತಿಗೆ ಆ ಮಹಾತ್ಮರ ಚೈತನ್ಯ, ಗುರುವಿನ ಅನುಗ್ರಹ ಹರಿಯಲಿರುವಂಥದ್ದು. ಅಂಥ ಸ್ಪರ್ಶವನ್ನು ಪಡೆದುಕೊಳ್ಳಲಿಕ್ಕೂ ಯೋಗ ಬೇಕು. ಪೂರ್ವ ಪುಣ್ಯ ಬೇಕು. ಹಾಗಾಗಿ ಪೂರ್ವಾಪರದ ಜ್ಞಾನವಿಲ್ಲದೇ ಕೆಲಸಗಳನ್ನು ಮಾಡುವುದು ಒಳ್ಳೆಯದಲ್ಲ. ಒಟ್ಟಿನಲ್ಲಿ ಶಬ್ದಗಳು ಹೇಗೆ ಬದಲಾಗುತ್ತವೆ ಎಂಬುದಕ್ಕೆ ಇದು ಉದಾಹರಣೆ. ‘ಹಲ’ ಹೋಗಿ ‘ಹೆಲೋ’ ಆದಂತೆ ಇನ್ನೊಂದು ಶಬ್ದವಿದೆ ವಿದೇಶೀಯರಲ್ಲಿ, ‘ಹಾಯ್!’ ಇದೂ ಸಂಸ್ಕೃತ ಶಬ್ದವೇ. ಹೇ! ಎಂಬುದು ಹೋಗಿ ‘ಹಾಯ್’ ಆಗಿದೆ. ಭೋಃ! ಎಂಬುವುದು ಅತ್ಯಂತ ಗೌರವ ಪೂರ್ಣ ಶಬ್ದ. ರೇ! ಎಂಬುವುದು ಅಷ್ಟು ಸಮಂಜಸದ ಶಬ್ದವಲ್ಲ, ‘ಹಲ’ ಎಂಬುವುದು ಅತ್ಯಂತ ನಿಕೃಷ್ಟವೆನ್ನುವುದನ್ನು ಸೂಚಿಸುತ್ತದೆ. ಹಾಗಾಗಿ ಇದನ್ನೆಲ್ಲ ತಿಳಿದುಕೊಂಡಿರಬೇಕು.
ನಮ್ಮ ದೇಶಕ್ಕೂ, ವಿದೇಶಕ್ಕೂ ಎಷ್ಟು ವ್ಯತ್ಯಾಸ!
ನಮ್ಮಲ್ಲಿ ‘ನಮಃ’ ಎಂಬ ಶಬ್ದ ಅತ್ಯಂತ ಶ್ರೇಷ್ಠವಾದದ್ದು. ಇದರ ಅರ್ಥ ಏನು? ಒಂದು – ಆ ಧಾತು ಬಾಗುವಿಕೆಯನ್ನು ಸೂಚಿಸುವಂಥದ್ದು; ‘ನಮೋಪ್ರಹ್ವತ್ವೇನ’ ಧಾತು ಬಾಗುವಿಕೆಯನ್ನು ಸೂಚಿಸುತ್ತದೆ. ಸ್ವಲ್ಪ ಮುಂದೆ ಹೋಗಿ ತಂತ್ರ ಶಾಸ್ತ್ರಗಳಲ್ಲಿ ”ನಮಸ್ತು ಐಕ್ಯಂ ಪ್ರಚಕ್ಷತೇ” ಅಂದರೆ, ನಮಸ್ಕಾರವು ಐಕ್ಯತೆಯನ್ನು ತೋರಿಸಿ ಕೊಡುವಂಥದ್ದು. ಅದ್ವೈತ-ಐಕ್ಯ ಅದರ ಅರ್ಥ. ನಮಸ್ಕಾರಕ್ಕೆ ಭಗವಂತ ಮಾತ್ರನೇ ಅರ್ಹ. ಯಾಕೆಂದರೆ ಬೇರೆಲ್ಲಿ ಐಕ್ಯವಾದರೂ ಅದು ಶಾಶ್ವತವಲ್ಲ. ಭಗವಂತನಲ್ಲಿ ಐಕ್ಯವಾದಾರೆ ಬೇರೆಯಾಗುವ ಭಯವಿಲ್ಲ. ಆದ್ದರಿಂದ ನಮಸ್ಕಾರವಿರುವುದು ದೇವರಿಗೆ ಮಾತ್ರ. ಆದರೆ ”ನಾವು ಗುರುಗಳಿಗೆ, ಹೆತ್ತವರಿಗೆ, ಹಿರಿಯರಿಗೆ, ಗಂಗೆ, ತುಳಸಿಕಟ್ಟೆಗೆ ನಮಸ್ಕರಿಸುತ್ತೇವಲ್ಲ..!? ಅದೇನು?” ಅದೆಲ್ಲ ಏನೆಂದರೆ ಅಲ್ಲೆಲ್ಲ ದೇವರ ಸಾನಿಧ್ಯವಿದೆ. ದೇವರ ಸಾನಿಧ್ಯ ಹೆಚ್ಚು ಹೆಚ್ಚಾಗಿ ಅಭಿವ್ಯಕ್ತ ಆಗುವಲ್ಲಿ ದೇವರಿದ್ದಾನೆ. ಗೋವಿನಲ್ಲಿ, ಸಾನಿಧ್ಯ ತುಂಬಿ ತುಳುಕುತ್ತಿದೆ ಹಾಗಾಗಿ ಅಲ್ಲಿ ನಮಸ್ಕಾರ. ತಂದೆ ತಾಯಿಯರು; ದೇವರ ಸಂಸರ್ಗ ಅಲ್ಲಿಂದಲೇ ಬಂದಿರುವಂಥದ್ದು, ಹಾಗಾಗಿ ನಮ್ಮ ಪಾಲಿಗೆ ಅವರೂ ದೇವರ ಸಮಾನರೇ. ನಮ್ಮ ತಂದೆ ತಾಯಿ, ಅವರ ತಂದೆ ತಾಯಿ ಹೀಗೆ ಹಿಂದೆ ಹೋದರೆ ತಲುಪುವುದು ಪುನಃ ಭಗವಂತನಲ್ಲೇ. ನಮಗೆ ಹತ್ತಿರದ ಕೊಂಡಿ ನಮ್ಮ ಹೆತ್ತವರು, ಆ ಕೊಂಡಿ ಇಲ್ಲವೆಂದರೆ ದೇವರೂ ಇಲ್ಲ. ಗುರುವು ದೇವರ ದ್ವಾರ, ಹಾಗಾಗಿ ಅಲ್ಲಿ ನಮಸ್ಕಾರ. ತುಳಸಿ ಅಶ್ವತ್ಥಗಳಲ್ಲಿ ವಿಶೇಷವಾಗಿ ಸಾನ್ನಿಧ್ಯವಿದೆ ಹಾಗಾಗಿ ಅಲ್ಲಿ ನಮಸ್ಕಾರ.
ನಮಸ್ಕಾರವೆಂದರೇನು! ಅಲ್ಲಿರುವ ಪರಮಾತ್ಮತೆ, ಚೈತನ್ಯದ ಜೊತೆಗೆ ನಾವು ಕರಗಿ ಒಂದಾಗುವಂಥದ್ದು. ಅದರ ಸೂಚಕವಾಗಿ ನಮಸ್ಕರಿಸುವಾಗ ಬೇರೆಬೇರೆಯಾಗಿದ್ದ ಕೈಗಳನ್ನು ಒಟ್ಟು ಸೇರಿಸುತ್ತೇವೆ. ”ನಮಸ್ತು ಐಕ್ಯಂ ಪ್ರಚಕ್ಷತೇ”, ಅದರೊಂದಿಗೆ ಬಾಗಿದರೆ ”ನಮೋ ಪ್ರಹ್ವತ್ವೇ” ಎರಡೂ ಅರ್ಥಗಳು ಬಂದವು. ಬಾಗುವುದು ಮತ್ತು ಒಂದಾಗುವುದು. ಜಗತ್ತಿನ ಬೇರೆಲ್ಲೂ ಇಲ್ಲದ ಇಷ್ಟು ಗಂಭೀರ, ಇಷ್ಟು ಆಳವಾದ ಅರ್ಥಗರ್ಭಿತ ಸಂಸ್ಕೃತಿ ನಮ್ಮಲ್ಲಿದೆ. ಅದರ ವಾರಸುದಾರರು ನಾವು. ಇದನ್ನು ಉಳಿಸಿಕೊಳ್ಳಬೇಕು, ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ ಅದರ ಸೂಕ್ಷ್ಮವನ್ನು, ಅದರ ಔಚಿತ್ಯವನ್ನು ತಿಳಿಯಬೇಕು. ನಮ್ಮ ಸಂಸ್ಕೃತಿಯ ಆಚರಣೆಗಳೆಲ್ಲವೂ ಹೀಗೇ ಅರ್ಥಗರ್ಭಿತವಾದುದು. ಅದರ ಸೂಕ್ಷ್ಮವನ್ನು ನಾವು ತಿಳಿಯಬೇಕು. ಇಷ್ಟಾದಲ್ಲಿ ನಮಗದರ ಪೂರ್ಣ ಫಲ ಸಿಗುವುದು. ನಾವು ಹೇಗೆ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಹೀಗೆ ನಮ್ಮ ಎಲ್ಲಾ ಸಂಸ್ಕೃತಿಗಳು ಹದಗೆಟ್ಟಿರುವಂತದ್ದು.
ನೀವೆಲ್ಲರೂ ಇನ್ನೊಬ್ಬರನ್ನು ಕಂಡೊಡನೆ ಹಲೋ, ಹಾಯ್, ಬಾಯ್ ಮಾಡದೆ ಇಂತಹ ರೂಢಿಗಳನ್ನು ಮೈಗೂಡಿಸಿಕೊಳ್ಳಬೇಕಾಗಿರುವಂತದ್ದು. ಒಂದು ಕೈಯಲ್ಲಿ ನಮಸ್ಕಾರ ಮಾಡುವಂತಹ ಪದ್ಧತಿಗಳಿವೆ, ಯುದ್ಧ ಮಾಡುವ ಸಮಯದಲ್ಲಿ ಕೈಯಲ್ಲಿ ಅನೇಕ ಆಯುಧಗಳಿರುತ್ತದೆ. ಅಂತಹ ಸಮಯದಲ್ಲಿ ಎರಡು ಕೈಯಿಂದ ನಮಸ್ಕಾರ ಮಾಡಲು ಸಾಧ್ಯವಾಗುವುದಿಲ್ಲ. ಆ ಸಮಯ ಒಂದು ಬಿಟ್ಟು ಬೇರಾವ ಸಮಯದಲ್ಲಾದರೂ ಒಂದು ಕೈಯಲ್ಲಿ ನಮಸ್ಕಾರ ಮಾಡಿದರೆ, ಮಾಡಿದ ಪುಣ್ಯ ಹೋಗಿಬಿಡುತ್ತದೆ. ಹಾಗೆಯೇ ಕೈ ಕುಲುಕುವುದು, ಮಲ್ಲ ಯುದ್ಧದಲ್ಲಿ ಮಾತ್ರ. ಅದರಲ್ಲಿ ದೇಹದ ಎಲ್ಲ ಅಂಗಗಳು ಉಪಯೋಗವಾಗುತ್ತದೆ. ಅಲ್ಲಿ ಬಿಟ್ಟು ಬೇರೆಲ್ಲಿಯೂ ಇಲ್ಲ. ಪ್ರಣಾಮದ ಶಿಷ್ಟಾಚಾರಗಳನ್ನು, ಕಿರಿಯರಾದರೆ ಹರಸುವ ಶಿಷ್ಟಾಚಾರಗಳನ್ನು ನಾವು ಇಟ್ಟುಕೊಳ್ಳಬೇಕು. ನಮ್ಮದಲ್ಲದ, ಅರ್ಥವೂ ಇಲ್ಲದ ಆ ಪದ್ಧತಿ ಬೇಡ. ಯಾವುದು ನಮ್ಮದಲ್ಲ ಅದು ನಮಗೆ ಬೇಡ. ಅದಕ್ಕೆ ಮತ್ತೆ ಅರ್ಥ ಇಲ್ಲ, ಅವು ಮೂಢನಂಬಿಕೆಗಳು, ಅಂಧಾನುಕರಣೆಗಳು. ಅದನ್ನು ಬಿಟ್ಟು ಅರ್ಥಪೂರ್ಣವಾದ ನಮ್ಮ ಪದ್ಧತಿಗಳನ್ನು ಆಚರಿಸಬೇಕು.
Leave a Reply