(ವರದಿ: ಗೋವಿಂದ ಬಳ್ಳಮೂಲೆ,
ಪ್ರಸಾರ-ಮುಳ್ಳೇರಿಯ ಮಂಡಲ)

ಮುಳ್ಳೇರ್ಯ, 27.08.2014:

” ಸಮಾಜದ ಸರ್ವಾಂಗೀಣ ಉದ್ಧಾರಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿರಿಸಿದ ಯುಗಪುರುಷ ಯತಿ ಶ್ರೇಷ್ಥ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿರುದ್ಧ ಆರೋಪಿಗಳು ಮಾಡಿರುವ ಕುತಂತ್ರದ ಆರೋಪವನ್ನು ಮುಳ್ಳೇರ್ಯ ಹವ್ಯಕ ಮಂಡಲದ ಸಮಸ್ತ ಶಿಷ್ಯ ಬಾಂಧವರು ಶಕ್ತಿಯುತವಾಗಿ ಖಂಡಿಸುತ್ತೇವೆ. ಸತ್ಯಕ್ಕೆ ಎಂದೂ ಜಯವಾಗಲಿ. ಈ ಪ್ರಕರಣದ ಷಡ್ಯಂತರವನ್ನು ಅತಿ ಶೀಘ್ರದಲ್ಲಿ ಬಯಲಿಗೆಳೆದು ಅಪರಾಧಿಗಳಿಗೆ ಅರ್ಹ ಶಿಕ್ಷೆ ಲಭಿಸಲಿ ” ಎಂಬುದಾಗಿ ಶ್ರೀ ಬಿ. ಜಿ. ರಾಮ ಭಟ್ ಗೋಳಿತ್ತಡ್ಕ ಹೇಳಿದರು. ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳವರ ವಿರುದ್ಧ ಹೂಡಲಾದ ಕಪಟ ಆರೋಪದ ವಿರುದ್ಧವಾಗಿ ಮುಳ್ಳೇರ್ಯ ಮಂಡಲ ಕಾರ್ಯಾಲಯದಲ್ಲಿ ಜರಗಿದ ಖಂಡನಾ ಠರಾವು ಸಭೆಯಲ್ಲಿ ಅಧ್ಯಕ್ಷಸ್ಥಾನ ವಹಿಸಿಕೊಂಡು ಅವರು ಈ ಮಾತುಗಳನ್ನಾಡಿದರು. ಶಂಖನಾದ, ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಮಂಡಲ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಭಟ್ ಮೊಗ್ರ ಅವರು ಖಂಡನಾ ಠರಾವನ್ನು ಮಂಡಿಸಿದರು. ನಿರ್ಮಾಣ ಸಮಿತಿ ಕಾರ್ಯದರ್ಶಿ ಶ್ರೀ ಸಂಸ್ಥಾನ – ಶ್ರೀ ಕೆ. ಯನ್. ಭಟ್ ಬೆಳ್ಳಿಗೆ, ಸಮಾಜ ಸುಕ್ಷೇಮ ವಿಭಾಗ ಪ್ರತಿನಿಧಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಮಂಡಲ ಪ್ರಸಾರ ಪ್ರತಿನಿಧಿ ಗೋವಿಂದಬಳ್ಳಮೂಲೆ ಆರೋಪಗಳನ್ನು ಖಂಡಿಸಿ ಮಾತುಗಳನ್ನಾಡಿದರು. ಎಣ್ಮಕಜೆ, ಚಂದ್ರಗಿರಿ, ಗುಂಪೆ, ಗುತ್ತಿಗಾರು, ಈಶ್ವರ ಮಂಗಲ, ಕಾಸರಗೋಡು, ಕುಂಬಳೆ, ಕೊಡಗು, ಪಳ್ಳತ್ತಡ್ಕ, ಪೆರಡಾಲ, ನೀರ್ಚಾಲು, ಸುಳ್ಯ ವಲಯಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಖಂಡನಾ ಠರಾವಿಗೆ ತಮ್ಮ ಸಹಮತ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದರು. ಸರ್ವ ವಲಯಗಳ ಘಟಕಗಳ ಆಶ್ರಯದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ, ದೇವಾಲಯಗಳಲ್ಲಿ ಮನೆ ಮನೆಯಲ್ಲಿ ಚಾತುರ್ಮಾಸಾಂತ್ಯತನಕ ಕುಂಕುಮಾರ್ಚನೆ, ಸಾಮೂಹಿಕ ಜಪ, ಪ್ರಾರ್ಥನೆ ಮಾಡಲು ಮತ್ತು ಯಾವ ಬೆಲೆತೆತ್ತಾದರೂ ಶ್ರೀ ಸಂಸ್ಥಾನಕ್ಕಾಗಲ್ಲೀ ಪೀಠಕ್ಕಾಗಲ್ಲೀ ಚ್ಯುತಿ ಬಾರದಂತೆ ರಕ್ಷಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಾಂಘಿಕ ರಾಮತಾರಕಮಂತ್ರ, ಧ್ಯಾನ, ಶಾಂತಿಮಂತ್ರ , ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

MulleriyaMandala

ಮುಳ್ಳೇರ್ಯ ಮಂಡಲ ಠರಾವು ಸಭೆ

Facebook Comments Box