|| ಹರೇರಾಮ ||

ಮೊಟ್ಟಮೊದಲಬಾರಿಗೆ ಗಟ್ಟಿ ಗಟ್ಟಿ ಅಕ್ಕಿಯಿಂದ ಮೃದು – ಮೃದುವಾದ, ಮಧುರ – ಮಧುರವಾದ, ರುಚಿ – ರುಚಿಯಾದ ಅನ್ನವನ್ನು ಸಿದ್ಧಪಡಿಸಬಹುದೆಂಬುದನ್ನು ಯಾರು ಕಂಡುಹಿಡಿದರು..?

ಮನವನ್ನು ಮನಗಳೊಂದಿಗೆ ಬೆರೆಸಲು ನೆರವೀಯುವ ಅಕ್ಷರಗಳನ್ನು ಮೊಟ್ಟಮೊದಲು ಕಂಡುಹಿಡಿದವರಾರು..?

ಬೆಣ್ಣೆ- ಬೆಣ್ಣೆಯಂತಹ ಹತ್ತಿಯಿಂದ ಎಳೆ – ಎಳೆಯಾಗಿ ನೂಲೆಳೆದು ಹಾಗೊಂದು – ಹೀಗೊಂದು ನೇಯ್ದು, ಮೈಮರೆಸುವ – ಮೈಮೆರೆಸುವ ಉಡುಗೆ ತೊಡುಗೆಗಳನ್ನು ನಿರ್ಮಿಸಬಹುದೆಂಬುದು ಯಾರ ಅನ್ವೇಷಣೆ..?

ಬಾಯಾರಿದರೆ ಬಾವಿಗಿಳಿಯಬೇಕಾಗಿಲ್ಲ…!
ಕೊಡದ ಕೊರಳಿಗೆ ಕುಣಿಕೆ ತೊಡಿಸಿ ಬಾವಿಗಿಳಿಸಿದರೆ ಅದರೊಳಗೆ ಕುಳಿತು ನೀರೇ ಮೇಲೇರಿ ನಮ್ಮೆಡೆಗೆ ಬರಬಹುದೆಂಬುದನ್ನು ಕಂಡುಹಿಡಿದವನ ಹೆಸರೇನು..?

ಅಕ್ಕಿಯೊಳಗನ್ನವನು ಮೊದಲಾರು ಕಂಡವನು..?|
ಅಕ್ಕರದ ಬರಹಕ್ಕೆ ಮೊದಲಿಗನದಾರು..? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ.. |
ಸಿಕ್ಕುವುದೆ ನಿನಗೆ ಜಸ – ಮಂಕುತಿಮ್ಮ…||

ಬದುಕಿನ ಭವನದ ಮೂಲಾಧಾರಶಿಲೆಗಳನ್ನಿಟ್ಟವರ ಗುರುತೇ ಇಲ್ಲ…!
ಆದರೆ ಹೆಸರಿಗಾಗಿ ಓಟ ಮಾತ್ರ ನಿಂತಿಲ್ಲ..!

ಹೆಸರಿಗಾಗಿ ಉಸಿರುಗಟ್ಟಿ ಓಡುವವರೇ…….!!!!
ಈ ಬ್ರಹ್ಮಾಂಡದಲ್ಲಿ ಅದೆಲ್ಲಿ ಕೆತ್ತಿದರೂ ಶಾಶ್ವತವಾಗಿ ಉಳಿಯದು ನಿಮ್ಮ ಹೆಸರು..!!

ಸಂತಸಾಹಿತ್ಯದಲ್ಲಿ ಕಂಡುಬರುವ ಕಥೆಯೊಂದನ್ನು ಕೇಳಿ..

ಒಮ್ಮೆ….

ಭೂಮಿಯಲ್ಲೊಂದು ದೊಡ್ಡ ಸುದ್ದಿ ಯಾಯಿತು..
ಇಲ್ಲಿ ಅತಿದೊಡ್ಡ ಸಾಧನೆ ಮಾಡಿದವರಿಗೆ ಅಲ್ಲಿ ( ಸ್ವರ್ಗದಲ್ಲಿ) ತಮ್ಮ ಹೆಸರನ್ನು ಮಹಾಪರ್ವತವೊಂದರಲ್ಲಿ ಕೆತ್ತಿ ಕೊಳ್ಳಲು ಅವಕಾಶವಿದೆೆ ಎಂಬುದಾಗಿ..
ಅಂದಿನ ಭೂಮಿಯ ಅತಿದೊಡ್ಡ ರಾಜನ ಕಿವಿಗಳಿಗೆ ಈ ವಿಷಯ ತಲುಪುತ್ತಿದ್ದಂತೆಯೇ…
ಆತನಿಗೆ ಹುಚ್ಚು ಹಿಡಿಯಿತು..
ಹೆಸರಿನ ಹುಚ್ಚು..
ಅದು ಬೇರೆಲ್ಲ ಹುಚ್ಚಿಗಿಂತ ಹೆಚ್ಚು.. !!

ತನ್ನ ಹೆಸರು ಸ್ವರ್ಗದ ಪರ್ವತದಲ್ಲಿ ಕೆತ್ತಲ್ಪಡಬೇಕು ಎನ್ನುವ ದಾಹ ಧನದಾಹವನ್ನೂ ಮೀರಿದಾಗ…!
ಅಂದಿನವರೆಗೂ ಚಿಕ್ಕಾಸೂ ಬಿಚ್ಚದ ದೊರೆ, ಬೊಕ್ಕಸ ಬರಿದಾಗುವಂತೆ, ಜಗವೇ ಬೆಕ್ಕಸ ಬೆರಗಾಗುವಂತೆ ದಾನ – ಧರ್ಮಗಳನ್ನು ಮಾಡಿದ್ದೇನು..!?
ಕೆರೆ – ಬಾವಿಗಳನ್ನು ಕಟ್ಟಿದ್ದೇನು..!?
ಅನ್ನಛತ್ರ – ಅರವಟ್ಟಿಗೆಗಳ ನಿರ್ಮಾಣ ಮಾಡಿದ್ದೇನು..!?
ಮಠ – ಮಂದಿರಗಳಿಗೆ ಭೂಮಿಯನ್ನು ಉಂಬಳಿ ಬಿಟ್ಟಿದ್ದೇನು…….!

ಕೊನೆಗೂ ಆ ದಿನ ಬಂತು..!

ಇಲ್ಲಿಯ (ಭೂಮಿಯ) ಜೀವನ ಮುಗಿದು ಅಲ್ಲಿಯ (ಸ್ವರ್ಗದ) ಜೀವನ ಆರಂಭವಾಗುವ ದಿನ..
ಇಹಲೋಕದ ಯಾತ್ರೆಯನ್ನು ಮುಗಿಸಿ ಸ್ವರ್ಗವನ್ನು ಪ್ರವೇಶಿಸಿದ ರಾಜ ಅಲ್ಲಿ ಮೊದಲು ಹುಡುಕಿದ್ದೇ ಆ ಪರ್ವತವನ್ನು..!
ದೇವದೂತರು ರಾಜನನ್ನು ಪರ್ವತದ ಬಳಿ ಕರೆದೊಯ್ದರು..
ಯಾವುದಕ್ಕೆಂದೇ ಬದುಕೆಂಬ ಭಾಗ್ಯವನ್ನೇ ತೆತ್ತಿದ್ದನೋ ಅದು ಸಾಕಾರವಾಗುವ ಸಂಭ್ರಮದ ಕ್ಷಣ..!
ಎಲ್ಲಿಲ್ಲದ ಉತ್ಸಾಹದಲ್ಲಿ ರಾಜ ತನ್ನ ಹೆಸರನ್ನು ಕೆತ್ತಲು ಮುಂದಾದರೆ…….

ಅಲ್ಲಿ ಸ್ಥಳವೇ ಇಲ್ಲ..!!
ಪಾದಮೂಲದಿಂದ ಶಿಖರಾಗ್ರದವರೆಗೆ ಪರ್ವತದ ಅಂಗುಲ – ಅಂಗುಲವೂ ಹೆಸರುಗಳಿಂದ ತುಂಬಿಹೋಗಿತ್ತು..!!

ರಾಜನ ಮುಖದಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ..!

” ದೇವಲೋಕದಲ್ಲಿಯೂ ಸುಳ್ಳು ಭರವಸೆಗಳೇ..? ಇಲ್ಲಿ ಹೆಸರು ಬರೆಯಲು ಸ್ಥಳವಾದರೂ ಎಲ್ಲಿದೆ..? “

ರಾಜನ ಪ್ರಶ್ನೆಗೆ ದೇವದೂತ ಅತ್ಯಂತ ಸರಳವಾಗಿ ಉತ್ತರಿಸಿದ..

” ಅದಕ್ಕೇನು..? ಯಾವುದಾದರೂ ಒಂದು ಹೆಸರನ್ನು ಅಳಿಸಿದರಾಯಿತು, ಆ ಸ್ಥಳದಲ್ಲಿ ತಮ್ಮ ಹೆಸರನ್ನು ಕೆತ್ತಿದರಾಯಿತು..!! “

ಕ್ಷಣಕಾಲ ಜಡವಾಗಿಹೋಯಿತು ರಾಜನ ಮನಸ್ಸು…!
ಬೆಟ್ಟದ ತುಂಬೆಲ್ಲ ತುಂಬಿರುವ ಅನಂತ ಹೆಸರುಗಳ ಮಧ್ಯದಲ್ಲಿ ಎಲ್ಲೋ ಒಂದೆಡೆ ಇರಬಹುದಾದ ತನ್ನ ಹೆಸರನ್ನು ಎಷ್ಟುಜನ ಗಮನಿಸಿಯಾರು..?
ಎಷ್ಟು ಕಾಲ ತಾನೇ ಬೆಟ್ಟದಲ್ಲಿ ತನ್ನ ಹೆಸರು ಉಳಿದಿರಲು ಸಾಧ್ಯ..?
ಇನ್ನೊಬ್ಬ ಬಂದು ಅಳಿಸುವವರೆಗೆ ತಾನೆ..?
ರಾಜನ ಭ್ರಮೆ ಹರಿದಿತ್ತು…
ಆತನಿಗೆ ಬೆಟ್ಟದಲ್ಲಿ ತನ್ನ ಹೆಸರು ಬರೆಯಬೇಕೆಂದೆನಿಸಲೇ ಇಲ್ಲ…
ಆದುದರಿಂದ ಬೆಟ್ಟದಲ್ಲಿ ರಾಜನ ಹೆಸರಿರಲಿಲ್ಲ.. ಆದರೆ ರಾಜನ ಮನದಲ್ಲಿ ಬೆಟ್ಟದಷ್ಟು ತೃಪ್ತಿ ನೆಲೆಸಿತ್ತು..!!!!

ಹರಿವು ಜಗತ್ತಿನ ಸ್ವಭಾವ..!
” ಗಚ್ಛತಿ ಇತಿ ಜಗತ್ ”
ಜಗತ್ತು ಎಂಬ ಶಬ್ದದ ಅರ್ಥವೇ ಚಲನಶೀಲ ಎಂಬುದಾಗಿ..!
ನದೀಪ್ರವಾಹದಲ್ಲಿ ಪ್ರತಿಕ್ಷಣವೂ ಹೊಸನೀರು ಬರುತ್ತಲೇ ಇರುವಂತೆ…
ಪ್ರಕೃತಿಯೂ ಪ್ರತಿಕ್ಷಣವೂ ಹೊಸ ಹೊಸದಾಗುತ್ತಲೇ ಇರುತ್ತದೆ.
ಹೊಸ ನೀರು ಬಂದಾಗ ಹಳೆ ನೀರು ಮರೆಯಾಗುವಂತೆ.. ಜಗದಲ್ಲಿ ಹೊಸತನ ಬರುವಾಗ ಹಳತು ಮರೆಯಾಗಲೇಬೇಕು..
ಸೃಷ್ಟಿಯ ನಿಯಮವೇ ಹೀಗಿರುವಾಗ ನಿನ್ನ ಹೆಸರೊಂದು ಮಾತ್ರ ಹೇಗೆ ಶಾಶ್ವತವಾಗಿ ಉಳಿಯಲು ಸಾಧ್ಯ…?

ಹೆಸರು ಉಳಿದಿರುವಷ್ಟು ಕಾಲವಾದರೂ ಅದೆಷ್ಟು ಎಂದು ತೋರಬಹುದು..?
ಅನಂತಕೋಟಿ ಬ್ರಹ್ಮಾಂಡಗಳಲ್ಲಿ ನಮ್ಮ ಬ್ರಹ್ಮಾಂಡ ಒಂದು ಧೂಲೀಕಣ ಮಾತ್ರ..!
ಅದರೊಳಗೆ ನಮ್ಮ ಭೂಮಿ ಎಷ್ಟರದು?
ಭೂಮಿಯಲ್ಲಾದರೂ ಇರುವ, ಬರುವ, ಬಂದು ಹೋದ ಮಹನೀಯರಲ್ಲಿ ನೀನೆಷ್ಟರವನು..?
ಸಾಧಕರ ಸಾಗರದಲ್ಲಿ ನೀನೊಂದು ಬಿಂದು ಮಾತ್ರವೂ ಅಲ್ಲ..

ಹುಟ್ಟಿದವರೆಲ್ಲ ಸಾಯಲೇಬೇಕು..
ರಿಯಾಯಿತಿ ಇಲ್ಲದ ವಿಧಿ ಅದು..
ಒಮ್ಮೆ ಸತ್ತು ಹುಟ್ಟಿದರೆ ಆ ಹೆಸರಿಗೂ ನಿನಗೂ ಯಾವ ಸಂಬಂಧವೂ ಇಲ್ಲ.. !!
ನೀನೆಷ್ಟು ಶಾಶ್ವತವೊ ನಿನ್ನ ಹೆಸರು ಅಷ್ಟೇ ಶಾಶ್ವತ..

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |

ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ..?||

ಶಿಶುವಾಗು ನೀಂ ಮನದಿ, ಹಸುವಾಗು , ಸಸಿಯಾಗು |

ಕಸಬೊರಕೆಯಾಗಿಳೆಗೆ – ಮಂಕುತಿಮ್ಮ ||

ಲೋಕೋಪಕಾರದ ಕಾರ್ಯಗಳನ್ನು ಮಾಡಬಾರದೆಂಬುದು ಈ ಲೇಖನದ ತಾತ್ಪರ್ಯವಲ್ಲ..
ಆದರೆ ಉದ್ದೇಶಶುದ್ಧಿ ಬೇಕು..
ನಿರ್ಮಲ ಪ್ರೇಮದಿಂದ ಲೋಕಸೇವೆಯನ್ನು ಮಾಡು, ಹೆಸರಿಗಾಗಿ ಅಲ್ಲ…

ಹೆಸರಿನ ಹುಚ್ಚು ಸಹಜವಲ್ಲ ಎಂಬುದು ಮನಸ್ಸಿಗೆ ಬರಬೇಕಾದರೆ ನೀನೊಮ್ಮೆ ಹಿಂದಿರುಗಿ ನೋಡಬೇಕು..
ನೀನೀ ಭೂಮಿಗೆ ಬಂದ ಹೊಸತರಲ್ಲಿ….
ಶಿಶುವಾಗಿದ್ದ ಸಮಯದಲ್ಲಿ….
ಹೆಸರಿನ ಪರಿವೆ ನಿನಗಿತ್ತೇ…..?
ಇದು ಮತ್ತೆ ಸೇರಿದ ಕೃತ್ರಿಮ ರೋಗ..!

ಹೆಸರಿನ ಪರಿವೆಯೇ ಇಲ್ಲದೆ ಹಸು ಅದೆಷ್ಟು ಉಪಕಾರಗಳನ್ನು ಲೋಕಕ್ಕೆ ಮಾಡುವುದಿಲ್ಲ..?
ನಮ್ಮ ಉಸಿರಿನ ಕೆಸರನ್ನು ತೊಳೆಯುವ ಸಸಿಗಳಿಗೆ ಹೆಸರಿನ ಪರಿವೆಯಿದೆಯೇ..?
ಒಮ್ಮೆ ಗಮನಿಸಿ ನೋಡು ನಿನ್ನ ಮನೆಯ ಕಸಬೊರಕೆಯನ್ನು..
ಕಸಬೊರಕೆಯ ಕಾರ್ಯ ಪ್ರತ್ಯಕ್ಷ..
ಅದು ಮಾತ್ರ ಯಾವಗಲೂ ಪರೋಕ್ಷ..
ಶುದ್ಧಿಶೋಭೆಗಳು ಎದ್ದು ತೋರಿದರೂ ಅವುಗಳ ಮೂಲ ಕಾರಣವಾದ ಕಸಬೊರಕೆ..?
ಎಲ್ಲೋ ಮೂಲೆಯಲ್ಲಿ…..
ಬಾಗಿಲ ಹಿಂದೆ….
ಮರೆಯಾಗಿ…..!

ಸಂಪೂರ್ಣ ಸೌಧದ ಭಾರವನ್ನೇ ಹೊತ್ತ ಆಧಾರ ಶಿಲೆ ಎಲ್ಲಿಯಾದರೂ ಕಾಣುವುದುಂಟೇ..?
ಎಲ್ಲಿಯೋ ಭೂಗರ್ಭದಲ್ಲಿ ಮರೆಯಾಗಿರುತ್ತದೆ ಅದು..!
ಒಂದು ವೇಳೆ ನಮ್ಮ ಹಾಗೆ ನಾಲ್ಕು ಜನರ ಮಧ್ಯೆ ಮಿಂಚಿ ಕಾಣಿಸಿಕೊಳ್ಳಬೇಕೆಂಬ ಚಪಲದಿಂದ ಅದು ಎದ್ದು ಹೊರ ಬಂದರೆ….. ಊಹಿಸಿಕೊಳ್ಳಿ…. ಸೌಧದ ಗತಿ ಏನಾಗಬಹುದೆಂದು..!?

ರಾಮ ಬಾಣ :-

ಹೆಸರಿನ ಹುಚ್ಚು ಹಿಡಿದವನ ಅಂತರಂಗ ಸೌಧಕ್ಕಾಗುವುದು ಅದೇ ಗತಿ….!!!

                    || ಹರೇರಾಮ ||
Facebook Comments Box