ಮಾನವತೆಯ ಇತಿಹಾಸದಲ್ಲಿ ಆಗೊಮ್ಮೆ – ಈಗೊಮ್ಮೆ, ಅಲ್ಲೊಂದು – ಇಲ್ಲೊಂದು ಎಂಬಂತೆ ಕಾಣಸಿಗುವ
ಉತ್ತಮೋತ್ತಮವಾದ ಕೆಲವು ಗುಣಗಳನ್ನ ಉಲ್ಲೇಖಿಸಿ ವಾಲ್ಮೀಕಿಗಳು ನಾರದರಿಗೆ ಹೇಳಿದರು..
ಏತದಿಚ್ಛಾಮ್ಯಹಂ ಶ್ರೋತಮ್ ..|
“ಅನಂತ ಜೀವರಾಶಿಗಳ
ಅನಂತ ವಸ್ತುರಾಶಿಗಳ
ಅನಂತ ಘಟನಾವಳಿಗಳ ಈ ಜಗದಲ್ಲಿ ನಾನು ಕೇಳಬಯಸುವುದು ಇದೊಂದೇ ಒಂದು..!
ಪರಂ ಕೌತೂಹಲಂ ಹಿ ಮೇ…. ||
ಸಂಸಾರದಲ್ಲಿ ನಿರಾಸಕ್ತನಾದ, ನಿಸ್ಸಂಗನಾದ ನನಗೆ ಇದೊಂದು ವಿಷಯದಲ್ಲಿ ಮಾತ್ರ ಇನ್ನಿಲ್ಲದ ಕುತೂಹಲ..!
ಮಾನವ ಕೋಟಿಗೆ, ಮುಕುಟಪ್ರಾಯನಾದ, ಸಕಲಗುಣ ಪರಿಪೂರ್ಣನಾದ ಇಂತಹ ಮಹಾ ಮಾನವನ ಬಗ್ಗೆ ಯಾರಾದರೂ ತಿಳಿಯಬಲ್ಲವರಿದ್ದರೆ ಹೇ ಮಹರ್ಷೇ… ಅದು ನೀನು ಮಾತ್ರ..!
ಹೇಳುವೆಯಾ ದಯವಿರಿಸಿ..!?
ಹರಸುವೆಯಾ ಭುವಿಯನ್ನು..!?
ಹರಿಸುವೆಯಾ ಅರಿವನ್ನು..!? ”
ಕಡುಗತ್ತಲಿನ ಪಾತಾಳ…!
ಕತ್ತಲು – ಬೆಳಕಿನ ಭೂಲೋಕ….!
ಬೆಳಕೇ – ಬೆಳಕಾದ ಸ್ವರ್ಲೋಕ…!!
ತನ್ನೊಳಗಿನ ಬೆಳಕಿನ ನೆರವಿನಿಂದ
ಕತ್ತಲು – ಬೆಳಕಿನ ಸಕಲ ಲೋಕಗಳನ್ನು ನೋಡಬಲ್ಲ ನಾರದರ ಅಂತರಂಗ ಸಾಗರದಲ್ಲಿ ವಾಲ್ಮೀಕಿಗಳ ಈ ಪ್ರಶ್ನೆ
ಹರ್ಷದ ಅಲೆಗಳನ್ನೇ ಎಬ್ಬಿಸಿತು..!!
ಮಾನವತೆಯಲ್ಲಿ ದೇವತ್ವವನ್ನು ಮೆರೆಯುವ ವ್ಯಕ್ತಿತ್ವವೆಷ್ಟು ದುರ್ಲಬವೋ ಆ ಕುರಿತು ಕೇಳುವವರು – ಹೇಳುವವರೂ ಅಷ್ಟೇ ದುರ್ಲಭವಲ್ಲವೇ..?
ಸಿಹಿಯಾದ ವಸ್ತುವನ್ನು ಬಾಯಿಯಲ್ಲಿಟ್ಟುಕೊಂಡರೆ ಆ ಬಾಯಿಯೇ ಸಿಹಿಯಾಗುವುದಲ್ಲವೇ..?
ಹಾಗೆಯೇ ಆನಂದವೇ ತಾನಾದ ವ್ಯಕ್ತಿತ್ವವೊಂದರ ಬಗೆಗೆ ಭಾವಿಸುವ, ಭಾಷಿಸುವ ಪ್ರಸಂಗ ಬಂದರೆ
ಮೈ ಮಾತು ಮನಗಳಲ್ಲೆಲ್ಲಾ ಆನಂದವೇ ತುಂಬುವುದಲ್ಲವೇ..?
ನಾರದರಿಗಾದದ್ದು ಅದು..!
ಹಸಿರು ಪರ್ವತವನ್ನು ಕಂಡಾಗ ಕರಗಿ – ಹರಿಯುವ ಮೋಡದಂತೆ
ಕರಗಿ ಹರಿಯಿತು ನಾರದರ ಹೃದಯ..!
ಸುರಿಯಿತು ರಾಮವರ್ಣನೆಯ ಮಾತುಗಳ ಮಳೆ ವಾಲ್ಮೀಕಿ ಗಿರಿಯ ಮೇಲೆ..!
“ಹೇಳುವೆನು ಹೇಳುವೆನು,
ಮೈಯೆಲ್ಲ ಕಿವಿಯಾಗಿ ಕೇಳಿತ್ತ..!
ನೀನು ಉಲ್ಲೇಖಿಸಿದ ಗುಣಗಳಲ್ಲಿ ಹೆಚ್ಚಿನವು ಬಹು ದುರ್ಲಭವಾದವುಗಳು
ಆದರೆ ಸೃಷ್ಠಿಯ ಚರಿತ್ರೆಯಲ್ಲಿ ಅಂಥವನೊಬ್ಬನಿರುವುದುಂಟು..!”
ಹೀಗೆಂದ ನಾರದರು ಒಮ್ಮಿಂದೊಮ್ಮೆಲೆ ಅಂತರ್ಮುಖರಾಗಿ ಅಂತರಂಗದ ಆಳದಲ್ಲಿ ಮುಳುಗಿದರು..
ಅಲ್ಲಿ ಬೆಳಗುವ ಆ ದಿವ್ಯ ವ್ಯಕ್ತಿತ್ವವನ್ನು ಭಾವ ಚಕ್ಷುವಿನಿಂದ ಕಂಡು ಮತ್ತೆ ಬಹಿರ್ಮುಖರಾಗಿ ಹೇಳತೊಡಗಿದರು..
May 6, 2010 at 11:40 AM
ಸ೦ತೋಷ – ರಾಮನ ಆಯನ ಮು೦ದುವರಿಯುತ್ತಿರುವುದಕ್ಕೆ
May 6, 2010 at 11:57 AM
ನಿಜ, ಪ್ರಿಯವಾದುದರ ಬಗ್ಗೆ ಮಹತ್ತರವಾದುದರ ಬಗ್ಗೆ ವರ್ಣಿಸಲು ಹೊರಟಾಗ, ಅ೦ತರ೦ಗದ ಅನ೦ತ ಕಡಲ ಬೊರ್ಗರೆಯುವ ಎತ್ತರ ಅಲೆಗಳ ಶಬ್ದ ಕೂಡ ಕೇಳದು, ಉಕ್ಕಿ ಬರುವ ಭಾವ ಕಣ್ಣೆ೦ಬ ಅ೦ತರ೦ಗದ ಬಾಹ್ಯ ತೆರೆಯನು ಮ೦ಜು ಮಾಡೀತು, ಸಗುಣ ನಿರ್ಗುಣಗಳ ಬೆರೆಯಾದೀತು, ಮೋಕ್ಷಕೆ ಸಾಕ್ಷಿಯ ನೀಡೀತು
.
ಶ್ರೀ ಗುರುಭ್ಯೋ ನಮಃ – ಸರ್ವ೦ ಶಿವ೦, ಶಿವ೦ ಸರ್ವ೦..
May 6, 2010 at 12:00 PM
“ಸಗುಣ ನಿರ್ಗುಣಗಳ ಬೆರಕೆಯಾದೀತು”
May 6, 2010 at 12:26 PM
ರಾಮನ ವರ್ಣನೆ ಕೇಳಲು ಕಾತುರಳಗಿದ್ದೇನೆ
May 6, 2010 at 12:44 PM
ಬಿಡುವಿಲ್ಲದ ಕೆಲಸಗಳ ಮಧ್ಯದಲ್ಲಿಯೂ ರಾಮಯಾಣದಮೃತವನ್ನು ಮತ್ತೆ ಉಣಬಡಿಸಲು ಪ್ರಾರಂಭಿಸಿದ್ದಕ್ಕೆ ಅನಂತಾನಂತ ವಂದನೆಗಳು….
May 6, 2010 at 3:01 PM
Katheyondu kelluvenu guru narada…
May 9, 2010 at 5:20 PM
ಹರೇ ರಾಮ.
ಕಾಯುತ್ತಿದ್ದೇನೆ, ಮೈಯೆಲ್ಲ ಕಿವಿಯಾಗಿ, ನಾರದೋಕ್ತ ಕಥೆಯೊಂದನು.
February 20, 2011 at 12:35 PM
ಕಣ್ಣು ತುಂಬಿ ಬಂತು.
October 26, 2012 at 5:32 PM
“ಸೃಷ್ಠಿಯ ಚರಿತ್ರೆಯಲ್ಲಿ ಅಂಥವನೊಬ್ಬನಿರುವುದುಂಟು..!” – ಓದಿದಷ್ಟೂ ಸರ್ತಿ ಮೈ ರೋಮಾಂಚನ ಆಗುವಂತಹ ವಾಕ್ಯ..
ಹರೇ ರಾಮ..