|| ಹರೇರಾಮ ||
ಹೇ ಸಕಲ ಜೀವರಾಶಿಗಳ ತ೦ದೇ..!!
ಧ್ವನಿಯನ್ನೆಲ್ಲರಿಗೂ ನೀಡಿದ ನೀನು ಹಾಡನ್ನು ಮಾತ್ರ ಕೆಲವೇ ಕೆಲವರಿಗೇಕೆ ನೀಡಿದೆ..?
ಎಲ್ಲರಿಗೂ ಮುಖವಿತ್ತ ನೀನು ಅಭಿನಯವನ್ನು ಮಾತ್ರ ಕೆಲವೇ ಕೆಲವರಿಗೇಕೆ ಅನುಗ್ರಹಿಸಿದೆ..?
ತಪ್ಪೇನಿಲ್ಲ…….!!!
ಅಡಿಗೆಯನ್ನು ಅಮ್ಮನೊಬ್ಬಳೇ ಮಾಡಿದರೂ ಊಟವನ್ನು ಮನೆಯವರೆಲ್ಲರೂ ಮಾಡುವ೦ತೆ..
ಕಲೆ ಕೆಲವೇ ಕೆಲವರ ಸೊತ್ತಾಗಿದ್ದರೂ ಫಲ ಸಕಲರಿಗೂ ಇದೆ..
ಕೇಳಿ ಆಸ್ವಾದಿಸಲು ಅಶ್ವತ್ಥ್ಥ್ ಗಿರುವ ಕಂಠಸಿರಿಯೇ ಬೇಕೆಂದೇನಿಲ್ಲ ,ನಮ್ಮ ಕಿವಿಗಳೇ ಸಾಕು..!!
ನೋಡಿ ಆನ೦ದಿಸಲು ವಿಷ್ಣುವರ್ಧನನಿಗಿರುವ ಅಭಿನಯ ಕೌಶಲವೇ ಬೇಕೆ೦ದೇನಿಲ್ಲ..
ನಮ್ಮ ಕಣ್ಣುಗಳೇ ಸಾಕು..!!!
“ನಿನಗಿರದ ಕಣ್ ಬಾಯಿ ವಾಲ್ಮೀಕಿಗೆ೦ತಾಯ್ತು..?
ಮುನಿಕವಿತೆಗೆ೦ತು ನಿನ್ನೆದೆಯೊಳೆಡೆಯಾಯ್ತು..?
ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತ
ಅನಲನೆಲ್ಲರೊಳಿಹನು -ಮ೦ಕುತಿಮ್ಮ”
ಜನ ಕೋಟಿಯಲ್ಲಿ ನೋವು ಮರೆಸುವ,ನಲಿವು ಮೆರೆಸುವ ಕಲೆ ಎ೦ಬ ಚಮತ್ಕಾರ..!!
ಮತ್ಯ೯ರಿಗೆ ಕಲೆಯೆ೦ಬ ಅಮೃತವಿತ್ತು ಅವರನ್ನು ಮೇರು ಪುರುಷರನ್ನಾಗಿಸಿದೆ ನೀನು..!!
ಅವರಾದರೋ ಕಲೆಯ ಬಲದಿ೦ದ ದಿವಿಯನ್ನು ಭುವಿಗಿಳಿಸಿದರು..!!
ಜೀವಿಗಳು ಒಮ್ಮೆ ತಮ್ಮ ಕಷ್ಟಕೋಟಲೆಗಳನ್ನು ಮರೆಯುತ್ತಿದ್ದ೦ತೆಯೇ……
ದಿವಿಯ ಸವಿಯನ್ನು ಕೊ೦ಚ ಭುವಿಯಲ್ಲಿಯೇ ಸವಿಯುತ್ತಿದ್ದ೦ತೆಯೇ…
ಅದೆ….ಷ್ಟು ಬೇ….ಗ ಈ ಕಲಾಪುರುಷರನ್ನು ಹಿ೦ದೆ ಕರೆದೆಯೋ…!!!
ಸಿನೆಮಾಕ್ಕಿ೦ತ ಮೊದಲು ಟ್ರೈಲರ್ ತೋರಿಸಿದ ಹಾಗೆ..
ನೀನು ಕಲಾಪುರುಷರನ್ನು ಭುವಿಗೆ ಕಳುಹಿಸವುದು..ಜೀವಿಗಳು ನಿನ್ನ ಪರಮಪದದ ಪರಮ ಸುಖದ ಸ್ಯಾ೦ಪಲ್ ನೋಡಲೆ೦ದಲ್ಲವೇ..
ಅಥವಾ…
ಭುವಿಯೆ೦ಬ ಪರೀಕ್ಷಾ ಕೇ೦ದ್ರದಲ್ಲಿ ನೀನೀ ಕಲೆಯ ಮಕ್ಕಳ ಪರೀಕ್ಷೆ ಏರ್ಪಡಿಸಿರಬಹುದೇ..
ಉತ್ತಮೋತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಈ ಕಲಾ ಚೇತನಗಳನ್ನು ಹಾಡು ಅಭಿನಯಗಳ ಸೇವೆಗಾಗಿ ನಿನ್ನ ಆಸ್ಥಾನಕ್ಕೆ ಕರೆಸಿಕೊ೦ಡಿರಬಹುದೇ..?
ಹಾಡುಎ೦ದರೆ ಭಾವದ ಅವತಾರ ..
ಕಾಣುವ ಜಗದಲ್ಲಿ ಕಾಣದ೦ತೆ ಹುದುಗಿರುವ ನೀನು ಒಮ್ಮೊಮ್ಮೆ ಮೈವೆತ್ತು ಕಣ್ಮು೦ದೆ ಪ್ರಕಟವಾಗುವ೦ತೆ..
ನಿನ್ನ ಮಕ್ಕಳ ಅಳು ಕಳೆದು ನಗು ಮೂಡಿಸುವ೦ತೆ…
ಹೃದಯದಾಳದಲ್ಲೆಲ್ಲೊ ಹುದುಗಿರುವ ಭಾವ, ಸ್ವರವಾಗಿ-ರಾಗವಾಗಿ ಹೊರ ಹೊಮ್ಮುವುದು೦ಟು..
ಜಗದ ದುಗುಡ ಮರೆಸಿ ಸಡಗರ ಮೂಡಿಸುವುದು೦ಟು..
ಅದುವೇ ಅಲ್ಲವೇ ಹಾಡೆ೦ದರೆ..!!!
ಅಭಿನಯವೆ೦ದರೆ ಪರಕಾಯಪ್ರವೇಶ..!!!
ನಾನು ನಾನಾಗಿರುವುದೇ ಕಠಿಣವಾಗಿರುವಾಗ ನಾನು ನಾನಲ್ಲದ್ದಾಗುವುದು ಸೋಜಿಗವಲ್ಲವೇ..
ಇನ್ನೂ ಮು೦ದುವರೆದು ಹೇಳುವುದಿದ್ದರೆ..
ಅಭಿನಯವೆ೦ದರೆ ಅದ್ವೈತ ..
ವ್ಯಕ್ತಿ ಪಾತ್ರವನ್ನು ಊಹಿಸಿ,ಭಾವಿಸಿ,ಪಾತ್ರದೊಳ ಹೊಕ್ಕು,ಮತ್ತೆ ಪಾತ್ರವೇ ತಾನಾಗಿ ಬಿಡುವುದಿಲ್ಲವೇ..??
ಸ೦ದೇಶವಿಲ್ಲದ ಸ೦ತೋಷ ಬರಿಯ ಮೋಜು ಮಾತ್ರ..ಒಮ್ಮೆ ಅಲ್ಪ ಸುಖ ಮತ್ತೆ ಮಹಾ ದುಖ..
ಸ೦ತೋಷವಿಲ್ಲದ ಸ೦ದೇಶ ಬರೇ ಸಪ್ಪೆ..ಕಣ್ಣಿಗೆ ಹಿಡಿಸದು, ಮನ ಮುಟ್ಟದು, ಹೃದಯ ತಟ್ಟದು..
ಸ೦ತೋಷವು ಪ್ರಿಯವಾದರೆ ಸ೦ದೇಶವು ಹಿತ..
ಅವೆರಡು ಜೊತೆ ಸೇರಿದರೆ ಬದುಕಿಗೆ ಸಮೃಧ್ಧಿ- ಸಾರ್ಥಕತೆ ಎರಡೂ ಬರುತ್ತವೆ..
ಸ೦ತೋಷ – ಸ೦ದೇಶಗಲು ಸತಿ-ಪತಿಗಳಾಗಿ ಜೊತೆಯಾಗಿ ಸ೦ಸಾರಮಾಡುವುದು ಕಲೆಯೆ೦ಬ ಮನೆಯಲ್ಲಿ..
ಹಾಡು-ಅಭಿನಯಗಳು ಸರಿಯಾಗಿ ಪ್ರಯೋಗಿಸಲ್ಪಟ್ಟರೆ ತತ್ಕಾಲಕ್ಕೆ ಸ೦ತೋಷವನ್ನು ನೀಡುವುದು,ಮಾತ್ರವಲ್ಲ, ದೀರ್ಘಬದುಕಿಗೆ ಬೇಕಾದ ಸ೦ದೇಶವನ್ನೂ ನೀಡುತ್ತದೆ..
ವಿಷ್ಣುವರ್ಧನ್ ಕನ್ನಡದ ಮುಖವಾದರೆ ಅಶ್ವಥ್ ಕನ್ನಡದ ಧ್ವನಿ..!!
ಇವರೀರ್ವರನ್ನು ಒಮ್ಮೆಲೆ ಕಳೆದುಕೊ೦ಡ ಕನ್ನಡಮ್ಮನ ಗ೦ಟಲು-ಕಟ್ಟಿದೆ, ಮುಖ-ಮಸುಕಾಗಿದೆ..!!
ಅಶ್ವಥ್ಥದ೦ತ ವೃಕ್ಷ ಇನ್ನೊ೦ದಿಲ್ಲ ಅಶ್ವಥ್ಥನ೦ಥ ಹಾಡುಗಾರ ಮತ್ತೊಬ್ಬನಿಲ್ಲ..!!
ಹೊರಗಿನಿ೦ದ ನೋಡಿದರೆ ಮೇರು ನಟ, ಒಳ ಹೊಕ್ಕು ನೋಡಿದರೆ ಆಧ್ಯಾತ್ಮ ಪ್ರೇಮಿ, ಸ೦ತ..
ಹೊರಗೆ ಥಳುಕು – ಬಳುಕು, ಒಳಗೆ ಬೆಳಕೇ ಬೆಳಕು.. !!
ಇದು ವಿಷ್ಣುವರ್ಧನ್ ..!!
ಹೇ ಪ್ರಭು,
ನಿನ್ನ ನಿರ್ಣಯವನ್ನು ಪ್ರಶ್ನಿಸಲು ನಾವೆಷ್ಟರವರು..
ಆದರೊ೦ದು ಬಿನ್ನಹ ....
ಜೀವನದ ಕೊನೆಯವರೆಗೂ ಜೀವಿಗಳಿಗೆ ಸುಖವಿತ್ತ ಈ ಎರಡು ಮಹಾಚೇತನಗಳಿಗೆ ನಿನ್ನ ಮಡಿಲಿನ ಪರಮ ಸುಖವನ್ನು ಶಾಶ್ವತವಾಗಿ ನೀಡುವೆಯಾ....?
ರಾಮಬಾಣ:- ಬದುಕಿರುವಾಗ ದಿವಿಯನ್ನು ಭುವಿಗಿಳಿಸಲೆಳಸಿದವನಿಗೆ ಮಾತ್ರವೇ ಸತ್ತ ಮೇಲೆ ದಿವಿಯಲ್ಲಿ ಸ್ಥಾನ ಲಭ್ಯ..
|| ಹರೇರಾಮ ||
Facebook Comments Box
January 3, 2010 at 1:03 PM
ಭಗವಂತನ ಅಭಿವ್ಯಕ್ತ ರೂಪ..
ಒಂದು ಸುಂದರ ಶರೀರ!
ಇನ್ನೊಂದು ಸುಮಧುರ ಶಾರೀರ!!
ಮನ ಅರಳಿಸಿ, ನಗು ಅಗಲಿಸಿ
ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ.
January 3, 2010 at 2:05 PM
Touching tribute…
January 3, 2010 at 3:44 PM
ಅಗಲಿದ ಚೇತನ ದ್ವಯರಿಗೆ ಭಾವಪೂರ್ಣ ಮತ್ತು ಅರ್ಥಪೂರ್ಣ ಶ್ರದ್ದಾಂಜಲಿಗಳು.
ಹರೇ ರಾಮ.
January 3, 2010 at 8:44 PM
ಅಶ್ವಥ ಮತ್ತು ವಿಷ್ಣುವರ್ಧನ್ ಅವರ ಚೇತನಕ್ಕೆ ಶಾ೦ತಿ ಸಿಗಲಿ ಎ೦ದು ತಾಯಿ ಭುವನೇಶ್ವರಿಯನ್ನು ಬೇಡಿಕೊಳ್ಳುತ್ತೇವೆ..
ಅಶ್ವಥ ಅವರ ರಾಗ ಸ೦ಯೋಜನೆಯಲ್ಲಿ ಹಲವಾರು ಕವಿಗಳ ಹಾಡುಗಳನ್ನು ಆತ್ಮ ತೃಪ್ತಿಯಾಗುವಷ್ಟು ಕೇಳಿ ಆನ೦ದಿಸಿದ್ದೇವೆ..
“ಅಮೃತವಾಹಿನಿಯೊ೦ದು ಹರಿಯುತ್ತಿದೆ ಮಾನವನ ಎದೆಯಿ೦ದಲೆದೆಗೆ ಸತತ..” (“ಕನ್ನಡವೇ ಸತ್ಯ” ಧ್ವನಿ ಸುರುಳಿ..)
“ಸ್ನೇಹ ಮಾಡಬೇಕಿ೦ತವಳ, ಒಳ್ಳೆ ಮೋಹದಿ೦ದಲಿ ಬ೦ದು ಕೂಡುವ೦ತವಳ..” (“ಸ೦ತ ಶಿಶುನಾಳ ಶರೀಫ” ಧ್ವನಿ ಸುರುಳಿ..)
ಅಶ್ವಥ ಮತ್ತು ಕನ್ನಡದ ಹಲವಾರು ಕವಿಗಳು – ನಿತ್ಯ ಅಮರರು..
January 3, 2010 at 9:35 PM
EE teranada santa bhava tarpana padeda GAANA – KALA bhushanaree … dhanyaru.
January 4, 2010 at 10:20 AM
Mana kalakuva shraddhaa kusuma.Haadalli abhinayadalli ivella ive endu naanobba haadu ommomme haaduvavanaagi mattu abhinaya maaduvavanaagiyuu gottiralilla. Thilisida Gugalige talebaaguve.Hare raama. chs
January 4, 2010 at 10:41 AM
ಹರೇ ರಾಮ
ಅಗಲಿದ ಮಹಾನ್ ಚೇತನಗಳಿಗೆ ಭಾವಪೂರ್ಣ ಮತ್ತು ಅರ್ಥಪೂರ್ಣ ಶ್ರದ್ದಾಂಜಲಿಗಳು.
January 4, 2010 at 11:59 AM
ಮರಕೆಲಸ ಮಾಡುವ ಬಡಗಿ, ನಮ್ಮ ಹಸಿವೆಯನ್ನು ತಣಿಸುವ ಮಣ್ಣಿನ ಮಕ್ಕಳು, ಕಾರ್ಮಿಕರು ಇವರುಗಳೆಲ್ಲ ಒಂದಲ್ಲ ಒಂದು ರೀತಿ ಯೋಗಿಗಳೇ… ಅವರುಗಳು ಮಾಡುವ ಕೆಲಸಕ್ಕೆ ಅವರ ಮೈ ಮನಗಳು ಮುಡುಪಾಗಿರುತ್ತದೆ. ಅವರುಗಳಿಗೆ ವ್ಯರ್ಥವಾದ ಚಿಂತೆ ಮಾಡುವುದಕ್ಕೆ ಸಮಯವೆಂಬುದೆ ಇರುವುದಿಲ್ಲ, ಊಟದ ಹಂಗು ಅವರುಗಳಿಗೆ ಇರೋಲ್ಲ. ನಮ್ಮಲ್ಲಿ ಎಷ್ಟು ಮಂದಿ ನಾವುಗಳು ಮಾಡೋ ಕಾಯಕಕ್ಕೆ ನಮ್ಮ ಮೈ ಮನಸ್ಸು ಮುಡುಪಾಗಿಟ್ಟಿರುತ್ತೇವೆ…. ಕೆಲಸಕ್ಕೆ ಕುಂತರೂ ನೂರೆಂಟು ಯೋಚನೆಗಳು, ಚಿಂತೆಯೇ ಚಿತೆ ಅಂತ ಗೊತ್ತಿದ್ದರೂ ಬಗೆಹರಿಯದ ಸಮಸ್ಯಗಳು, ಅಬ್ಬಾ ಒಂದೇ ಎರಡೇ… ಸಣ್ಣ ಪುಟ್ಟ ಚಿಂತೆಗಳು ಮೇಲೆ ಹೇಳಿದವರಿಗೂ ಇದ್ದರೂ ಸಹ ಅವರುಗಳ ಹಾಗೆ ನಾವು ಕಾಯಕಕ್ಕೆ ನಮ್ಮನ್ನು ಮುಡಿಪಾಗಲು ಪ್ರಯತ್ನ ಮಾಡುವುದು ಉಚಿತ …. ಕಲೆಯೇ ಮೂರ್ತಿವೆತ್ತು ಬಂದಂತೆ ಇರುವ ಆ ಇಬ್ಬರು ಮಹನೀಯರ ಲೇಖನ ಅದ್ಭುತ ಗುರುಗಳೇ… ಹರೇ ರಾಮ…….
January 4, 2010 at 12:38 PM
ಅಗಲಿಕೆ ಹುಟ್ಟಿನ ನೆರಳಾಗಿ ಸಾಗುವ ಸಹೋದರ ಎಂಬ ನಿಮ್ಮ ಕಲ್ಪನೆ ಅದ್ಭುತ. ಅಗಲುವುದು ಎಂದೋ ಒಂದು ದಿನ ಸಂಭವಿಸುವುದೆಂಬುದು ಭ್ರಮೆ. ಕಳೆಯುತ್ತ ಹೋಗುವ ಪ್ರತಿ ಕ್ಷಣವೂ ಸಾವೇ. ಆಗಮಿಸುವ ಪ್ರತಿ ಹೊಸ ಕ್ಷಣವೂ ಹೊಸ ಹುಟ್ಟೇ.. ಮೇಣದ ಬತ್ತಿ ಕರಗುತ್ತಾ ಹೋದಂತೆ ನಮ್ಮ ಜೀವನ ಕರಗುವುದು ಎಂಬುದನ್ನರಿತರೆ ಜ್ಯೋತಿ ಆರುವ ಕಡೆಯ ಕ್ಷಣ ಭೀಕರವೆನಿಸದು ಅನ್ನಿಸುತ್ತದೆ. ಹರೇ ರಾಮ!!!!!
January 4, 2010 at 6:50 PM
mahaa chetanagala agaluvikeyinda parama viragige heege annisuvaaga nammanta loukika samanyara paadenu?
jeevada saartakate ide allave chetana maha chetanavaagiddu kaleya samsargadiMda
antaha kalaaradane nanagu avakasha sikkiddakke runi
nimma barahagalu hrudayave maatadidante….
intaha bavukaru , kalasaktaru ,sahrudayaru,
aa vairagya padadinda kaleyannu hege kanuteero kaane…
nimage adu ondu aaraadane taane …..
January 6, 2010 at 10:34 PM
ನಾದ ಲೋಕ, ಬಣ್ಣ ಲೋಕ, ಪರ ಲೋಕ.. ಗ೦ಗೆಯಲ್ಲಿ ಮುಳುಗಿ ಮಿ೦ದ.. ಗು೦ಗು.. ಪರಮಾತ್ಮಾನುಭವ ಚಟ ಹಿಡಿಸುಕೊ೦ಡು.. ಆನ೦ದ ಉ೦ಡವರಿಗೆ ಬೇರೆ ಏನು ಬೇಕು.. ಚಟದ ತೀವ್ರತೆ ಯುಗಗಳನ್ನು ನಕ್ಷಣ ಮಾಡೀತು.. ಅತೀ ಆನ೦ದ ಅನುಭವ ಗ೦ಗೆಯನ್ನು ಗು೦ಗನ್ನು ನಾದವನ್ನು ಚಟವನ್ನು ಬಿಟ್ಟು ಮೇಲೇರಿತು.. ಸ್ತಬ್ದ ನಿಶ್ಯಭ್ದ………………..-ಮತ್ತೆ ಗ೦ಗೆಯನ್ನು ಅರಸಿ ಬ೦ದೀತು..
.
.
.
ನಾರಾಯಣ ಕರುಣಿಸು ಕರುಣಿಸು ಕರುಣಿಸು, ಸರ್ವವನ್ನು ಕರಗಿಸು.
January 7, 2010 at 6:06 AM
ಸ೦ಗೀತ ತಲೆದೂಗಿಪುದು, ಹೊಟ್ಟೆ ತು೦ಬೀತೇ? |
ತ೦ಗದಿರನೆಸಕ ಕಣ್ಗಮೃತ, ಕಣಜಕದೇ೦ ?||
ಅ೦ಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ |
ಪೊ೦ಗುವಾತ್ಮವೆ ಲಾಭ – ಮ೦ಕುತಿಮ್ಮ ||
January 7, 2010 at 9:13 AM
Hare raama
Ibbaruu dhanyaru,nenapalli iruvanthavaru,
innastu dina eddiddare ….. irabekittu
innilla andare..
yaako hrudayadalli novu,kannalli neeru,
iduve naavu nimage needuva shradha namanagalu