ಕಾಸರಗೋಡು – ಪೆರಿಯ, 24.08.2015.
ಶ್ರೀ ಸಂಸ್ಥಾನ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಪೆರಿಯ ಗೋಗಂಗಾ ಆಯುರ್ವೇದ ಪಂಚಗವ್ಯ ಚಿಕಿತ್ಸಾಲಯದ ವ್ಯವಸ್ಥಾಪಕರಾದ ಅಲಕ್ಕೋಡು ಶ್ರೀ ವಿಷ್ಣು ಹೆಬ್ಬಾರ್ ಅವರ ನಿವಾಸದಲ್ಲಿ ಜರಗಿದ ಸುಪ್ರಸಿದ್ಧ ವಯಲಿನ್ ಮಾಂತ್ರಿಕರಾದ ಲಾಲ್ಗುಡಿ ಜಯರಾಂ ಅವರ ಪುತ್ರ ಲಾಲ್ಗುಡಿ ಜಿ. ಜೆ. ಆರ್. ಕೃಷ್ಣ ಅವರ ವಯಲಿನ್ ಕಛೇರಿಯು ಸಂಗೀತಾಸ್ವಾದಕರಿಗೆ ನವಾನುಭೂತಿ ಉಂಟುಮಾಡಿತು.
ಲಾಲ್ಗುಡಿಯವರ ವರ್ಣದೊಂದಿಗೆ ಕಛೇರಿ ಪ್ರಾರಂಭವಾಯಿತು. ಸ್ವಾತಿತಿರುನಾಳ್ ಅವರ ಕಾನಡ ರಾಗದ ಮಾಮವಸದಾ ಹಾಡಿನಿಂದ ಆರಂಭಿಸಿ ದೀಕ್ಷಿತರ ವೃಂದಾವನ ಸಾರಂಗದ ಶ್ರೀ ರಂಗ ಪುರವಿಹಾರ, ಅಪೂರ್ವರಾಗವಾದ ನಾಸಾಮಣಿಯ ದೀಕ್ಷಿತರ ಶ್ರೀ ರಾಮ ಸರಸ್ವತಿ, ಶುದ್ಧ ದನ್ಯಾಸಿಯ ನಾರಾಯಣಾ ನಿನ್ನ ನಾಮ, ತ್ಯಾಗರಾಜ ಸ್ವಾಮಿಗಳ ರಘುಚಂದ್ರಿಕಾ ರಾಗದ ನಿರವದಿ ಸುಖದಾ, ಕಾಪಿ ರಾಗದ ಎನ್ನ ತಪಂ, ಕಾಲ್ಯಾಣಿಯ ಮುತ್ತುಸ್ವಾಮಿದೀಕ್ಷಿತರ ಕಮರಾಂಬಾಳ್ ಭಜರೆ ಎಂಬ ಹಾಡುಗಳು ಸಂಗೀತ ಪ್ರೇಮಿಗಳಿಗೆ ಹೊಸಾ ಅನುಭವ ನೀಡಿತು.
ಶುದ್ಧ ಧನ್ಯಾಸಿಯ ಜಾನಕೀ ರಮಣ, ಮಧ್ಯಮಾವತಿಯ ಭಾಗ್ಯಾದ ಲಕ್ಷ್ಮಿ ಬಾರಮ್ಮ, ಮಿಶ್ರ ಕಾಮಾಜಿಯ ವೈಷ್ಣವ ಜನತೋ, ರಘುಪತಿರಾಘವ ಎಂಬ ಜನಪ್ರಿಯ ಗಾಂಧೀ ಭಜನ್ಸ್ ಇವನ್ನು ಕಛೇರಿಯಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತ ಪದಿಸಿದರು. ಲಾಲ್ಗುಡಿ ಅವರ ಪ್ರಸಿದ್ಧ ದೇಶ್ ರಾಗದ ತಿಲ್ಲಾನದೊಂದಿಗೆ ಸಂಗೀತ ಮುಕ್ತಾಯವಾಯಿತು. ಮೃದಂಗದಲ್ಲಿ ಉಮಯಾಲ್ಪುರಮ್ ಮಾಲಿ, ಘಟಂನಲ್ಲಿ ತುಮಕೂರ್ ಶಶಿಶಂಕರ್ ಇವರು ಯಶಸ್ವಿಯಾಗಿ ಸಾಥಿ ನೀಡಿದರು.
ಉದುಮಾ ಯಮ್. ಯಲ್. ಎ. ಕೆ. ಕುಂಞಿರಾಮನ್ ಅವರು ಕಲಾವಿದರನ್ನು ಶಾಲು ಹೊದೆಸಿ ಸತ್ಕರಿಸಿದರು. ಯಮ್. ಯಲ್. ಎ. ಕೆ. ಕುಂಞಿರಾಮನ್ ಶುಭಾಶಂಸನಾ ಭಾಷಣ ಮಾಡುತ್ತಾ “ವಯಲಿನ್ ಲಾಲ್ಗುಡಿ ಬಾನಿ ಎಂಬ ವಿಶಿಷ್ಟ ಶೈಲಿಯನ್ನೇ ಸೃಷ್ಠಿ ಮಾಡಿದ ಲಾಲ್ ಗುಡಿ ಜಯರಾಮನ್ ಅವರ ಪುತ್ರ ಶ್ರೀ ಜಿ. ಜೆ. ಆರ್. ಕೃಷ್ಣ ಅವರ ನಾದಾರ್ಚನೆಯಿಂದ ಆಲಕ್ಕೋಡು ಧನ್ಯವಾಗುವುದರೊಂದಿಗೆ ಸಮಾರಂಭವು ಚರಿತ್ರೆಯ ಪುಟಗಳಲ್ಲಿ ಅಚ್ಚೊತ್ತಿದಂತಾಯಿತು” ಎಂಬುದಾಗಿ ನುಡಿದರು .
ಅಲಕ್ಕೋಡು ಶ್ರೀ ವಿಷ್ಣು ಹೆಬಾರ್ ಅವರ ನಿವಾಸದಲ್ಲಿ ಜರಗಿದ ಸಮಾರಂಭದಲ್ಲಿ ಕನ್ನಡ ಸಿನೆಮಾ ಕಲಾವಿದರಾದ ಮಾನಸಿ, ನಂದಿನಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದರು .
ಶ್ರೀ ವಿನೋದ ಕೃಷ್ಣ ಸ್ವಾಗತಿಸಿ ನಾಗರತ್ನ ಹೆಬ್ಬಾರ್ ಧನ್ಯವಾದವಿತ್ತರು .

Violin by Sri GJR Krishnan at Alakode
Leave a Reply