ಗೋಕರ್ಣ. ಗೋಕರ್ಣಪರಿಸರದಲ್ಲಿರುವ ಕುಡ್ಲೆ ಸಾಗರತೀರದ ಬಳಿಯಿರುವ ಆಂಜನೇಯಜನ್ಮಭೂಮಿಯಲ್ಲಿ ಶ್ರೀರಾಮ ಹಾಗು ಆಂಜನೇಯ ದೇವಾಲಯಗಳ ನೂತನನಿರ್ಮಾಣಕ್ಕೆ ಇಂದು ವಿಧ್ಯುಕ್ತವಾಗಿ ಶಿಲಾನ್ಯಾಸವು ನೆರವೇರಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ಇಂದು ಗುರುವಾರ ಮಧ್ಯಾಹ್ನ ಸಂಪನ್ನವಾದ ಈಕಾರ್ಯಕ್ರಮದಲ್ಲಿ ಕೊಲ್ಕತಾದ ಉದ್ಯಮಿ ಶ್ರೀ ರಾಧೇಶ್ಯಾಂ ಗೋಯೆಂಕಾ ದಂಪತಿಗಳು ಹಾಗೂ ಶ್ರೀಮತಿ ಉಷಾ ಅಗರವಾಲ್ ಉಪಸ್ಥಿತರಿದ್ದು ಪೂಜಾದಿಕೈಂಕರ್ಯಗಳನ್ನು ನೆರವೇರಿಸಿದರು. ಹನುಮನುದಿಸಿದ ಭೂಮಿಯೆಂದು ಹೇಳಲಾಗುವ ಕೇಸರೀತೀರ್ಥದ ಸಮೀಪದಲ್ಲಿರುವ ಈ ಪ್ರದೇಶದಲ್ಲಿ ಕಳೆದ ಎರಡುವರ್ಷಗಳಿಂದ ಮೂರೂರಿನ ಶ್ರೀರಾಜಾರಾಮ ಭಟ್ಟರ ನೇತೃತ್ವದಲ್ಲಿ ನಿರಂತರವಾಗಿ ಶ್ರೀರಾಮಸಂಕೀರ್ತನೆಯು ನಡೆಯುತ್ತಿದ್ದು ಪರಮಪೂಜ್ಯಶ್ರೀಗಳು ಇಲ್ಲಿ ಶ್ರೀರಾಮ ಹಾಗೂ ಆಂಜನೇಯನ ನೂತನದೇವಾಲಯಗಳ ನಿರ್ಮಾಣಕ್ಕೆ ಸಂಕಲ್ಪಿಸಿದ್ದರು. ರಾಷ್ಟ್ರಪ್ರಶಸ್ತಿಪುರಸ್ಕೃತರಾದ ತಮಿಳುನಾಡಿನ ಖ್ಯಾತ ಶಿಲ್ಪಿ ಶೀ ರಾಧಾಕೃಷ್ಣಸ್ಥಪತಿಯವರ ನೇತೃತ್ವದಲ್ಲಿ ಈ ನೂತನನಿರ್ಮಿತಿಯು ನಡೆಯಲಿದ್ದು ಇದೊಂದು ಪ್ರಸಿದ್ಧಯಾತ್ರಾಸ್ಥಳವಾಗುವ ಮೂಲಕ ಗೋಕರ್ಣಕ್ಕೆ ಇನ್ನೂ ಹೆಚ್ಚಿನ ಮಹತ್ವವನ್ನು ತಂದುಕೊಡಲಿದೆ. ಶಿಲಾನ್ಯಾಸದ ಸಂದರ್ಭದಲ್ಲಿ ಕೊಲ್ಕತಾದ ಇಮಾಮಿ ಸಮೂಹಸಂಸ್ಥೆಗಳ ಅನೇಕಪದಾಧಿಕಾರಿಗಳು ಶ್ರೀಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ.ಜಿ.ಭಟ್, ಹವ್ಯಕಮಹಾಮಂಡಲದ ಅಧ್ಯಕ್ಷ ಶ್ರೀ ಆರ.ಎಸ್,ಹೆಗಡೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ವಿನೋದ ಪ್ರಭು,ಆಂಜನೇಯಜನ್ಮಭೂಮಿಯ ಅಧ್ಯಕ್ಷ ಶ್ರೀ ಮುರಲೀಧರ ಪ್ರಭು,ಜಿಲ್ಲಾಪಂಚಾಯತ ಸದಸ್ಯ ಶ್ರೀ ಪ್ರದೀಪ ನಾಯಕ್, ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಮನಾ ಗೌಡ,ಸದಸ್ಯ ಮಹೇಶ ಶೆಟ್ಟಿ, ಶೇಖರ ನಾಯಕ್, ರಮೇಶ ಪ್ರಸಾದ ಮೊದಲಾದ ಗಣ್ಯರು ಹಾಗೂ ನೂರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ವೇ.ಶಿತಿಕಂಠ ಭಟ್ಟ ಹಿರೇ ಇವರ ನೇತೃತ್ವದಲ್ಲಿ ಹೋಮ-ಹವನಾದಿಗಳು ಆಯೋಜಿತವಾಗಿದ್ದವು.

Facebook Comments Box